ಪ್ರಧಾನ ಮಂತ್ರಿಯವರ ಕಛೇರಿ

ಗುಜರಾತ್‌ನಲ್ಲಿ ಪಿಎಂಜೆಎವೈ-ಎಂಎ ಯೋಜನೆ ಆಯುಷ್ಮಾನ್ ಕಾರ್ಡ್‌ಗಳ ವಿತರಣೆ ಸಮಾರಂಭದಲ್ಲಿ ಪ್ರಧಾನಮಂತ್ರಿ ಮಾಡಿದ ಭಾಷಣದ ಅನುವಾದ

Posted On: 17 OCT 2022 10:15PM by PIB Bengaluru

ನಮಸ್ಕಾರ..!

ಧನ್ತೇರಸ್ ಮತ್ತು ದೀಪಾವಳಿ ಹಬ್ಬಗಳು ಇನ್ನೇನು ಸನಿಹದಲ್ಲಿವೆ. ಆದರೆ ಇವುಗಳಿಗೂ ಮುನ್ನ ಗುಜರಾತ್ ನಲ್ಲಿ ಆರೋಗ್ಯದ ಮಹಾ ಹಬ್ಬವನ್ನು ಆಚರಿಸಲಾಗುತ್ತಿದೆ. ನಾವು ಇಲ್ಲಿ ಧನ್ವಂತರಿಯನ್ನು ಧನ್ತೇರಸ್‌ನಲ್ಲಿ ಪೂಜಿಸುತ್ತೇವೆ. ಭಗವಾನ್ ಧನ್ವಂತರಿಯನ್ನು ಆಯುರ್ವೇದದ ಪಿತಾಮಹ ಎಂದು ಹೇಳಲಾಗುತ್ತದೆ ಮತ್ತು ದೇವರುಗಳಿಗೆ ಭಗವಾನ್ ಧನ್ವಂತರಿ ಚಿಕಿತ್ಸೆ ನೀಡಿದ್ದರೆಂದು ನಂಬಲಾಗಿದೆ. ಆದ್ದರಿಂದ ಧ್ವನಂತರಿಯನ್ನು ಆರೋಗ್ಯದ ದೇವರೆಂದು ಹೇಳಬಹುದು. ಮತ್ತು ವ್ಯಕ್ತಿಯ ಆರೋಗ್ಯವು ಆತನ ಸಂಪತ್ತು ಮತ್ತು ಅದೃಷ್ಟಕ್ಕಿಂತ ದೊಡ್ಡದೆಂದು ಶಾಸ್ತ್ರಗಳಲ್ಲಿಯೂ ಹೇಳಲಾಗಿದೆ- ಆರೋಗ್ಯಮ್ ಪರಮಂ ಭಾಗ್ಯಂ ? ಅಂದರೆ ಆರೋಗ್ಯವೇ ಭಾಗ್ಯ, ಅಥವಾ ಆರೋಗ್ಯವೇ ಪರಮ ಭಾಗ್ಯ ಎಂದು.

ಇಂದು ನನಗೆ ಸಂತಸವಾಗುತ್ತಿದೆ ಏಕೆಂದರೆ ಇಂದು ಭೂಪೇಂದ್ರ ಭಾಯಿ ಅವರ ನಾಯಕತ್ವದಲ್ಲಿ ಅದೂ ದೀಪಾವಳಿ ಹಬ್ಬದ ಸಮಯದಲ್ಲಿ ಇಂತಹುದೊಂದು ಕಾರ್ಯ ನಡೆಯುತ್ತದೆಂದು ನಾನು ಯೋಚಿಸಿರಲಿಲ್ಲ. ಎಲ್ಲರೂ ಸಾಮಾನ್ಯವಾಗಿ ಹಬ್ಬದ ಮೂಡ್(ಉತ್ಸಾಹ)ನಲ್ಲಿರುತ್ತಾರೆ. ಆದರೆ ಇಂದು, ಇಲ್ಲಿ ಈ ಕಾರ್ಯಕ್ರಮ ಮುಗಿದ ನಂತರ, ಇಂದು ರಾತ್ರಿಯ ವೇಳೆಗೆ ಸುಮಾರು 1.5 -2 ಲಕ್ಷ ಜನರಿಗೆ ಕಾರ್ಡ್‌ಗಳನ್ನು ತಲುಪಿಸುವ ಅಭಿಯಾನ ಆರಂಭವಾಗಲಿದೆ. ದೀಪಾವಳಿಯ ಸಂದರ್ಭದಲ್ಲಿ ಇಂತಹ ಮಹತ್ವದ ಕಾರ್ಯವನ್ನು ಕೈಗೊಂಡ ನನ್ನ ಎಲ್ಲಾ ಹಳೆಯ ಸಹೋದ್ಯೋಗಿಗಳು, ಸರ್ಕಾರದ ಸ್ನೇಹಿತರು ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಿಮ್ಮ ಈ ಕಠಿಣ ಪರಿಶ್ರಮ ನಮಗೆ ದೊಡ್ಡ ಯಶಸ್ಸನ್ನು ತಂದುಕೊಡುತ್ತದೆಂಬ ಖಾತ್ರಿ ನನಗಿದೆ. ನಮ್ಮಲ್ಲಿ ಒಂದು ಮಾತಿದೆ - "ಸರ್ವೇ ಸಂತು ನಿರಾಮಯ" ಅಂದರೆ ಪ್ರತಿಯೊಬ್ಬರೂ ರೋಗಗಳಿಂದ ಮುಕ್ತರಾಗಬೇಕು ಎಂದು. ಆಯುಷ್ಮಾನ್ ಭಾರತ್ ನಮ್ಮ ಪೂರ್ವಜರ ಈ ಕಲ್ಪನೆಯೊಂದಿಗೆ, ಪ್ರತಿ ವ್ಯಕ್ತಿ, ಪ್ರತಿ ಕುಟುಂಬ ಮತ್ತು ಸಮಾಜದ ರಕ್ಷಣಾ ಕವಚವಾಗಿ ಮುನ್ನಡೆಯುತ್ತಿದೆ. ಈ ಅಭಿಯಾನದ ಮೂಲಕ 50 ಲಕ್ಷ ಫಲಾನುಭವಿಗಳನ್ನು, ಅಂದರೆ ಗುಜರಾತ್‌ನ ಅರ್ಧದಷ್ಟು ಜನಸಂಖ್ಯೆಯನ್ನು ತಲುಪುವ ನಿಮ್ಮ ಉದ್ದೇಶ ನಿಜಕ್ಕೂ ಶ್ಲಾಘನೀಯ..! ಪ್ರತಿ ಜಿಲ್ಲೆ, ತಾಲೂಕು ಅಥವಾ ಗ್ರಾಮ ಪಂಚಾಯಿತಿಯಿಂದ ಕಾರ್ಡ್‌ಗಳನ್ನು ಪಡೆಯದ ಜನರನ್ನು ಪತ್ತೆ ಹಚ್ಚಲು ಮತ್ತು ಗುರುತಿಸಲು ನೀವು ಕೈಗೊಂಡಿರುವ ಪ್ರಯತ್ನವನ್ನು ನಾನು ನಿಜಕ್ಕೂ ಪ್ರಶಂಸಿಸುತ್ತೇನೆ. ಈ ಕಾರ್ಯಕ್ಕಾಗಿ ನೀವು ಹಿರಿಯರ ಆಶೀರ್ವಾದ ಪಡೆಯುತ್ತೀರಿ. ಜಗತ್ತಿನಾದ್ಯಂತ ಪ್ರಗತಿ ಶೀಲ ರಾಷ್ಟ್ರಗಳು ಅಥವಾ ಅಭಿವೃದ್ಧಿ ಹೊಂದಿದ ದೇಶಗಳ ವಿಮಾ ಯೋಜನೆಗಳ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ. ಆದರೆ ಆರೋಗ್ಯ ವಿಮೆ ಮಾತ್ರವಲ್ಲದೆ ಆರೋಗ್ಯ ಖಾತ್ರಿಯಲ್ಲೂ ನಾವು ಆ ದೇಶಗಳಿಗಿಂತ ಒಂದು ಹೆಜ್ಜೆ ಮುಂದಿದ್ದೇವೆ! ಮತ್ತು ಈ ಕನಸನ್ನು ನನಸಾಗಿಸಲು ನಿಮ್ಮ ಬೆಂಬಲ ಮತ್ತು ಸಹಕಾರ ನಮಗೆ ದೊರೆತಿದೆ.

ರಾಜಕೀಯವಾಗಿ ಸ್ಥಿರವಾದ ಸರ್ಕಾರ ಮತ್ತು ಅದರ ಕಾರ್ಯಶೈಲಿ ಸಂಪೂರ್ಣ ಸಂವೇದನಾಶೀಲವಾಗಿ ಮತ್ತು ಸಮಾಜಕ್ಕೆ ಬದ್ಧವಾಗಿದ್ದಾಗ ನಾವು ಹೇಗೆ ಅದ್ಭುತ ಫಲಿತಾಂಶಗಳನ್ನು ಪಡೆಯಬಹುದು ಎಂಬುದಕ್ಕೆ ಇಂದಿನ ಕಾರ್ಯಕ್ರಮ ಉದಾಹರಣೆಯಾಗಿದೆ. ಮತ್ತು ಇಂದು ದೇಶ ಮತ್ತು ಗುಜರಾತ್ ಅದಕ್ಕೆ ಸಾಕ್ಷಿಯಾಗಿದೆ. ಹಿಂದೆ ಸರ್ಕಾರ ಮತ್ತು ಎಲ್ಲವೂ ಇತ್ತು. ಆದಾಗ್ಯೂ, ಯೋಜನೆಯ ಅನುಷ್ಠಾನವು ಕೇವಲ ದೊಡ್ಡ ಸಭಾಂಗಣದೊಳಗೆ ದೀಪ ಬೆಳಗಿಸುವುದು ಅಥವಾ ಟೇಪ್ ಕತ್ತರಿಸುವುದು ಅಥವಾ ಉತ್ತಮ ಭಾಷಣ ಮಾಡುವುದಕ್ಕೆ ಸೀಮಿತವಾಗಿತ್ತು..! ಮತ್ತು ವಿಷಯವು ಅಲ್ಲಿಗೆ ಸಮಾಪ್ತಿಯಾಗುತ್ತಿತ್ತು. ಕೇವಲ ಬೆರಳೆಣಿಕೆಯಷ್ಟು ಜಾಗೃತ ಅಥವಾ ತಿಳುವಳಿಕೆಯುಳ್ಳ ಜನರು ಮಾತ್ರ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದರು. ನೈಜ ಫಲಾನುಭವಿಗಳು ಪಡೆಯಬೇಕಾದ ಪ್ರಯೋಜನಗಳು ಹೆಚ್ಚಾಗಿ ಕೆಲವೇ ಕೆಲವು ಮಧ್ಯವರ್ತಿಗಳ ಪಾಲಾಗುತ್ತಿತ್ತು ಮತ್ತು ಯೋಜನೆಯು ಹಾಗೆಯೇ ಮುಕ್ತಾಯವಾಗುತ್ತಿತ್ತು. ನಾವು ಈ ಹಿಂದಿನ ಪದ್ದತಿಯನ್ನು ಬದಲಾಯಿಸಿದ್ದೇವೆ. ಹಣ ವಿನಿಯೋಗಿಸಿದರೆ ಅದರಿಂದ ಜನರಿಗೂ ಅನುಕೂಲವಾಗಬೇಕು. ಅನುಷ್ಠಾನ ಎಂದರೆ ಉದ್ಘಾಟನಾ ಸಮಾರಂಭ ನಡೆಸುವುದು, ದೀಪ ಹಚ್ಚುವುದು ಅಥವಾ ಟೇಪ್ ಕತ್ತರಿಸುವುದಕ್ಕೆ ಮಾತ್ರವಲ್ಲ. ಬದಲಾಗಿ ಸರ್ಕಾರವು ಪ್ರತಿ ಮನೆಗೂ ತೆರಳಿ ನಿರ್ಗತಿಕರನ್ನು ಕಂಡು ಅವರನ್ನು ತಲುಪಿ ಅವರ ಸಮಸ್ಯೆ ಪರಿಹರಿಸಬೇಕು. ಆದ್ದರಿಂದ, ನಾವು ಅಂತಹ ದೊಡ್ಡ ಹೆಜ್ಜೆಯನ್ನು ಮುಂದಿಟ್ಟಿದ್ದೇವೆ ಮತ್ತು ಅದೇ ನಿಟ್ಟಿನಲ್ಲಿ ಮುನ್ನಡೆಯುತ್ತಿದ್ದೇವೆ.

ಇಂದು ಒಂದು ಯೋಜನೆ ರೂಪಿಸಿದಾಗ, ಸರ್ಕಾರವು ಮೊದಲು ಸಾಮಾನ್ಯ ನಾಗರಿಕರ ಎಲ್ಲಾ ಅಗತ್ಯತೆ ಮತ್ತು ಅವಶ್ಯಕತೆಗಳನ್ನು ಪಟ್ಟಿ ಮಾಡುತ್ತದೆ ಮತ್ತು ದೀರ್ಘಾವಧಿಯಲ್ಲಿ ಮಾಡಬೇಕಾದ ಬದಲಾವಣೆ ವಿಷಯಗಳನ್ನು ಗುರುತಿಸುತ್ತದೆ. ಇದು ಬಡವರ, ಮಧ್ಯಮ ವರ್ಗದವರ ಜೀವನದಲ್ಲಿನ ಅಡೆತಡೆಗಳನ್ನು ಪರಿಗಣಿಸುತ್ತದೆ ಮತ್ತು ನಂತರ ಸರ್ಕಾರವು ಆ ಅಡೆತಡೆ ನಿವಾರಿಸಲು ಪರಿಹಾರಗಳನ್ನು ಕಂಡುಕೊಳ್ಳುತ್ತದೆ. ಅದರ ಪರಿಣಾಮವಾಗಿ, ಸರ್ಕಾರವು ಉತ್ತಮ ನೀತಿಯೊಂದಿಗೆ ಬರುತ್ತದೆ. ಈ ಪ್ರಕ್ರಿಯೆಗಳ ನಂತರ ನೀತಿಯನ್ನು ರೂಪಿಸಿದಾಗ, ಅದು ಪ್ರತಿಯೊಬ್ಬರ ಒಳಗೊಳ್ಳುವಿಕೆಯನ್ನು ಖಾತ್ರಿಪಡಿಸುತ್ತದೆ. ನಂತರ, ಕೆಲವು ಸೇರ್ಪಡೆಗಳನ್ನು ಮಾಡಲಾಗುತ್ತದೆ. ಉದಾಹರಣೆಗೆ ಭೂಪೇಂದ್ರ ಭಾಯಿ ಅವರ ಸರ್ಕಾರ ತನ್ನ ವ್ಯಾಪ್ತಿಯನ್ನು ಮತ್ತು ಫಲಾನುಭವಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಆದ್ದರಿಂದ, ಮಧ್ಯಮ ವರ್ಗದ ಅನೇಕ ಜನರು ಸಹ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು ಮತ್ತು ಸರ್ಕಾರವು ಈ ಎಲ್ಲಾ ಯೋಜನೆಗಳ ಲಾಭವನ್ನು ಪ್ರತಿಯೊಬ್ಬ ಫಲಾನುಭವಿಯ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಆದ್ದರಿಂದ, ನಾವು ಆ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದೇವೆ.

ಮಿತ್ರರೇ,

ದೇಶದ ಪ್ರಜೆಯು ಸಬಲೀಕರಣಗೊಂಡಾಗ, ಆತನು ಶಕ್ತಿಶಾಲಿಯಾಗುತ್ತಾನೆ! ಮತ್ತು ನೀವು ಶಕ್ತಿಯುತವಾಗಿದ್ದಾಗ, ಯಾವುದೂ ನಿಮ್ಮನ್ನು ತಡೆಯಲಾಗದು.! ಅದಕ್ಕಾಗಿಯೇ ನಾವು ಭಾರತದ ಎಲ್ಲಾ ನಾಗರಿಕರನ್ನು, ವಿಶೇಷವಾಗಿ ಮಹಿಳೆಯರನ್ನು ಸಬಲೀಕರಣಗೊಳಿಸಲು ನಿರ್ಧರಿಸಿದ್ದೇವೆ. ಮೊದಲು ಬಡ ಮಹಿಳೆಯರು ಅಡುಗೆಮನೆಯಲ್ಲಿನ ಉರುವಲಿನ ಹೊಗೆ ಸಹಿಸಬೇಕಾಗಿತ್ತು, ಅದು ಹಲವು ರೋಗಗಳಿಗೆ ಕಾರಣವಾಗುತ್ತಿತ್ತು. ಇಂದು ಬಡವರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡಿರುವುದರಿಂದ ಅವರನ್ನು ಆ ಸಂಕಷ್ಟದಿಂದ ಪಾರು ಮಾಡಲಾಗಿದೆ. ಇಂದು ನಾವು ಬಡವರಿಗೆ ಪಕ್ಕಾ ಮನೆಗಳನ್ನು ನಿರ್ಮಿಸಿಕೊಡುವ ಮೂಲಕ ಜೀವನ ಗುಣಮಟ್ಟವನ್ನು ಉನ್ನತೀಕರಿಸಲು ಮತ್ತು ಪ್ರತಿಯೊಂದು ದೊಡ್ಡ ಅಥವಾ ಸಣ್ಣ ಸಮಸ್ಯೆಯಿಂದ ಅವರನ್ನು ಮುಕ್ತಗೊಳಿಸುತ್ತಿದ್ದೇವೆ. ಕುಡಿಯುವ ನೀರು ಮತ್ತು ನಿರ್ಮಾಣ ಕಾರ್ಯಕ್ಕೆ ಅಥವಾ ಶೌಚಾಲಯಗಳಿಗೆ ಪೂರೈಸುವ ಕೊಳಾಯಿ ನೀರು, ರೋಗಗಳು ಮನೆಗಳನ್ನು ಪ್ರವೇಶಿಸದಂತೆ ತಡೆಯುತ್ತದೆ. ಈ ಎಲ್ಲ ಮೂಲಭೂತ ಅಗತ್ಯತೆಗಳನ್ನು ಪೂರೈಸುವತ್ತ ಗಮನ ಹರಿಸುತ್ತಿದ್ದೇವೆ. ಸಾಂಕ್ರಾಮಿಕ ರೋಗವು ಇಡೀ ಜಗತ್ತಿಗೆ ಆವರಿಸಿದಾಗಲೂ ನಾವು ಯಾವುದೇ ಬಡ ಕುಟುಂಬವನ್ನು ಆಹಾರವಿಲ್ಲದೆ ಹಸಿವಿನಿಂದ ಇರಲು ಬಿಡಲಿಲ್ಲ. ಸುಮಾರು 80 ಕೋಟಿ ಜನರು ಸುಮಾರು 2 ರಿಂದ 2.5 ವರ್ಷಗಳವರೆಗೆ ಉಚಿತ ಆಹಾರ ದಾನ್ಯಗಳು ಪಡೆದುಕೊಳ್ಳುವುದುನ್ನು ನಾವು ಖಾತ್ರಿಪಡಿಸಿದ್ದೇವೆ.

ಇದಲ್ಲದೆ, ಮಗು ಆರೋಗ್ಯಕರವಾಗಿರದಿದ್ದರೆ, ನಂತರ ದೇಶವು ಆರೋಗ್ಯಕರವಾಗಿರುವುದಿಲ್ಲ. ನಾವು ಅಪೌಷ್ಟಿಕತೆಯಿಂದ ಹೊರಬರಬೇಕು. ಇದೀಗ ಗುಜರಾತ್ ಭಾರೀ ಪ್ರಚಾರಾಂದೋಲನ ಆರಂಭಿಸಿದೆ. ಸಿ.ಆರ್.ಪಾಟೀಲ್ ಜೀ ಅವರು ಎಲ್ಲರೂ ಅಪೌಷ್ಟಿಕತೆಯಿಂದ ಹೊರಬರಬೇಕೆಂಬ ಪ್ರಮುಖ ಉದ್ದೇಶದಿಂದ ಕಾರ್ಯ ಆರಂಭಿಸಿದ್ದಾರೆ. ಅವರ ಸರ್ಕಾರದ ಪ್ರಯತ್ನದಿಂದಾಗಿ ಆಯುಷ್ಮಾನ್ ಭಾರತ್ ಯೋಜನೆ ಮತ್ತು ಪಿಎಂಜೆಎವೈ ನಂತಹ ಯೋಜನೆಗಳು ಉತ್ತಮ ಉದಾಹರಣೆಗಳಾಗಿವೆ. ವಿಶ್ವದಾದ್ಯಂತ ಜನರು ಈ ಯೋಜನೆಗಳ ಬಗ್ಗೆ ಚರ್ಚಿಸುತ್ತಿದ್ದಾರೆ ಮತ್ತು ನಾನು ಹೇಳಿದಂತೆ, ದೀಪಾವಳಿ ಸಮಯದಲ್ಲಿ 50 ಲಕ್ಷ ಆಯುಷ್ಮಾನ್ ಕಾರ್ಡ್‌ಗಳನ್ನು ನೀಡುವ ಈ ಬೃಹತ್ ಕಾರ್ಯವನ್ನು ನಾವು ಕೈಗೆತ್ತಿಕೊಂಡಿದ್ದೇವೆ. ಒಂದು ಕಾಲವೊಂದಿತ್ತು, ಆಗ ಮನೆಯಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ, ವಿಶೇಷವಾಗಿ ನಮ್ಮ ತಾಯಿ ಮತ್ತು ಸಹೋದರಿಯರು ಮಂಗಳಸೂತ್ರವನ್ನು ಅಡವಿಟ್ಟು ಚಿಕಿತ್ಸೆಗಾಗಿ 5000 - 10000 ರೂಪಾಯಿಗಳನ್ನು ಹೊಂದಿಸುತ್ತಿದ್ದರು. ಅಂತಹ ದಿನಗಳನ್ನು ನಾವು ನೋಡಿದ್ದೇವೆ. ಇಂದು ಅಂತಹ ನಿವಾರ್ಯದ ಸಂದರ್ಭಗಳು ದೂರವಾಗಿದೆ. ಇಂದು ಆಯುಷ್ಮಾನ್ ಕಾರ್ಡ್‌ಗಳು ನಿಮಗೆ ಚಿನ್ನದಂತೆ. ಇದು ಆ ಗೋಲ್ಡನ್ ಕಾರ್ಡ್ ನಿಮಗೆ ಮಧ್ಯರಾತ್ರಿಯಲ್ಲಿ ಬೇಕಾಗಬಹುದು. ಕಾರ್ಡ್ ತೆಗೆದುಕೊಂಡು ಮಧ್ಯರಾತ್ರಿಯಲ್ಲಿ ಆಸ್ಪತ್ರೆ ತಲುಪಿದರೂ ತಕ್ಷಣ ಚಿಕಿತ್ಸೆ ಶುರುವಾಗುತ್ತದೆ. ಅದು ಚಿನ್ನದಂತೆ ಕೆಲಸ ಮಾಡುತ್ತದೆಯಲ್ಲವೇ? ಅದಕ್ಕಾಗಿಯೇ ನಾನು ಇದನ್ನು 5 ಲಕ್ಷ ರೂಪಾಯಿಗಳ ಎಟಿಎಂ ಎಂದು ಕರೆಯುತ್ತೇನೆ. ನಾವು ಎಟಿಎಂಗಳಿಂದ ಅಗತ್ಯವಿದ್ದಾಗ ಹಣ ಡ್ರಾ ಮಾಡುವಂತೆಯೇ, ಕಾರ್ಡ್ ಕೂಡ ನಿಮ್ಮ ಸಹಾಯಕ್ಕೆ ಬರುತ್ತದೆ. ಈ ಯೋಜನೆಯ ಲಾಭವನ್ನು ಸಮಾಜದ ಹೆಚ್ಚು ಹೆಚ್ಚು ಜನರು ಪಡೆಯಬೇಕೆಂದು ನಾವು ಬಯಸುತ್ತೇವೆ. ಎಲ್ಲರೂ ಹೆಚ್ಚು ಕಾಲ ಬದುಕಬೇಕೆಂದು ನಮ್ಮ ಅಶಯವಾಗಿದೆ. ಕುಟುಂಬದ 30 ವರ್ಷದ ವ್ಯಕ್ತಿಯೊಬ್ಬರು ಆಯುಷ್ಮಾನ್ ಕಾರ್ಡ್ ಪಡೆದಿದ್ದಾರೆ ಮತ್ತು ಅವರು 70 ವರ್ಷಗಳ ಕಾಲ ಬದುಕುತ್ತಾರೆ ಎಂದು ಭಾವಿಸೋಣ. ಅಂದರೆ ಅವರು ಪ್ರತಿ ವರ್ಷ ಈ ಯೋಜನೆಯನ್ನು ಪಡೆದುಕೊಂಡು ಸಂಪೂರ್ಣ 5 ಲಕ್ಷ ರೂ.ಗಳನ್ನು ಬಳಸಿದರೆ, ಅವರ ಕುಟುಂಬಕ್ಕೆ ಅವರ ಜೀವಿತಾವಧಿಯವರೆಗೆ ಸರ್ಕಾರದಿಂದ /*ಸುಮಾರು 1.5 ಕೋಟಿ ಯಿಂದ 2 ಕೋಟಿ ಸಿಗುತ್ತದೆ. ಅವರು ಬದುಕುವವರೆಗೂ ಸರ್ಕಾರದಿಂದ ವಾರ್ಷಿಕ 5 ಲಕ್ಷ ರೂ. ದೊರಕುತ್ತದೆ. ಇಂದು ಒಬ್ಬ ಸಾಮಾನ್ಯ ಮನುಷ್ಯ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾದರೆ ಅಥವಾ ನಾನಾ ಕಾಯಿಲೆಗಳಿಂದ ಬಳಲುತ್ತಿದ್ದರೆ, ಅವನು ತನ್ನ ಕೆಲಸ ಕಳೆದುಕೊಳ್ಳುತ್ತಾನೆ. ಆದರೆ ಇಂದು ಈ ಯೋಜನೆಯಿಂದಾಗಿ ಅವರು ಆರೋಗ್ಯವಾಗಿರಲು ಸಾಧ್ಯವಾಗಿದೆ. ಸ್ವಲ್ಪ ಸಮಯದ ಹಿಂದೆ, ನಾನು ಪಿಯೂಷ್ ಭಾಯ್ ಅವರನ್ನು ಭೇಟಿಯಾದೆ. ಅವನು ತುಂಬಾ ದುರ್ಬಲರಾಗಿದ್ದರು. ಸುಮ್ಮನೆ ಊಹಿಸಿಕೊಳ್ಳಿ ! ಈ ಆಯುಷ್ಮಾನ್ ಕಾರ್ಡ್ ಇಲ್ಲದಿದ್ದರೆ ಪಿಯೂಷ್ ಭಾಯ್ ಜೀವನದಲ್ಲಿ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತಿತ್ತು. ಆದ್ದರಿಂದ ಎಲ್ಲ ಯೋಜನೆಗಳ ಪ್ರಯೋಜನವು ಸಮಾಜಕ್ಕೆ ಶಕ್ತಿಯನ್ನು ನೀಡುತ್ತದೆ. ಆದ್ದರಿಂದ ಆಯುಷ್ಮಾನ್ ನಿಜವಾಗಿಯೂ ನಿಮ್ಮ ಕುಟುಂಬಕ್ಕೆ ದೊಡ್ಡ ರಕ್ಷಕ!

ಸಹೋದರ ಸಹೋದರಿಯರೇ,

ಇದುವರೆಗೆ ದೇಶಾದ್ಯಂತ 4 ಕೋಟಿ ಜನರು ಈ ಯೋಜನೆಗಳ ಲಾಭ ಪಡೆದಿದ್ದಾರೆ. ಗುಜರಾತ್‌ನಲ್ಲಿ ಸುಮಾರು 50 ಲಕ್ಷ ಜನರು ಇದರ ಲಾಭ ಪಡೆದಿದ್ದಾರೆ. ಮತ್ತು ಎಲ್ಲ ಚಿಕಿತ್ಸೆಗಳಿಂದಾಗಿ ಆ ಫಲಾನುಭವಿಗಳು ಇಂದು ಸಂತೋಷದ ಜೀವನ ನಡೆಸುತ್ತಿದ್ದಾರೆ! ಅವರ ಬಹಳಷ್ಟು ಹಣ ಉಳಿತಾಯವಾಗಿದೆ. ನೀವು ಒಬ್ಬೊಬ್ಬರನ್ನೂ ವಿಚಾರಿಸಿದರೆ ಕೆಲವರು 5 ಲಕ್ಷ ರೂ. ಉಳಿಸಿದ್ದೇವೆ ಎನ್ನುತ್ತಾರೆ, ಇನ್ನು ಕೆಲವರು 8 ಲಕ್ಷ ರೂ. ಉಳಿಸಿದ್ದೇವೆ ಎನ್ನುತ್ತಾರೆ, ತಮ್ಮ ಜೇಬಿನಿಂದ ಒಂದು ಪೈಸೆಯೂ ಖರ್ಚು ಮಾಡಿಲ್ಲ ಎನ್ನುತ್ತಾರೆ. ಈ ಜನರು ಈಗ ತಮ್ಮ ಮಕ್ಕಳನ್ನು ಆರೋಗ್ಯವಂತರನ್ನಾಗಿ ಬೆಳೆಸುತ್ತಿದ್ದಾರೆ. ಇಂದು ಹೆಚ್ಚು ಹೆಚ್ಚು ಜನರು ಆಯುಷ್ಮಾನ್ ಭಾರತ್ ಯೋಜನೆಯ ಪ್ರಯೋಜನಗಳನ್ನು ಪಡೆಯುತ್ತಿರುವುದು ನನಗೆ ಖುಷಿ ತಂದಿದೆ. ಯಾರೂ ಅನಾರೋಗ್ಯಕ್ಕೆ ಒಳಗಾಗದಂತೆ ನಾವು ಖಾತ್ರಿಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ ಮತ್ತು ಯಾರಾದರೂ ಅನಾರೋಗ್ಯಕ್ಕೆ ಒಳಗಾದರೂ, ಅವರು ಅದರೊಂದಿಗೆ ಬದುಕುವಂತಾಗಬಾರದು ಮತ್ತು ಬದಲಿಗೆ ರೋಗಕ್ಕೆ ಚಿಕಿತ್ಸೆ ಪಡೆಯಬೇಕು. ಮತ್ತು ಈ ಕುರಿತು ನಾವು ತಾಯಂದಿರು ಮತ್ತು ಸಹೋದರಿಯರಲ್ಲಿ ಜಾಗೃತಿ ಮೂಡಿಸಿದ್ದೇವೆ ಎಂದು ನಾನು ಹೇಳಬಯಸುತ್ತೇನೆ. ಮನೆಯ ಹೆಂಗಸರು ತಮ್ಮನ್ನು ತಾವೇ ನಿರ್ಲಕ್ಷಿಸುತ್ತಾರೆ ಎಂಬುದು ನಿಮಗೆ ಚೆನ್ನಾಗಿ ತಿಳಿದಿದೆ. ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರೆ, ಅದನ್ನು ತನ್ನ ಮನೆಯವರಿಗೆ ತಿಳಿಸುವುದಿಲ್ಲ. ಅವಳ ಮನಸ್ಸಿನಲ್ಲಿ ಒಂದೇ ಒಂದು ಆಲೋಚನೆ ಇರುವುದರಿಂದ ಅನಾರೋಗ್ಯದ ನಡುವೆಯೂ ಅವಳು ಕೆಲಸ ಮಾಡುತ್ತಾಳೆ - ಕುಟುಂಬದವರಿಗೆ ಕಾಯಿಲೆಯ ಬಗ್ಗೆ ತಿಳಿದರೆ, ಅವರು ಅವಳ ಔಷಧಿಗಳಿಗೆ ಖರ್ಚು ಮಾಡುತ್ತಾರೆ. ಮತ್ತು ಅದು ಕುಟುಂಬದ ಸಾಲವನ್ನು ಹೆಚ್ಚಿಸುತ್ತದೆ. ಆದ್ದರಿಂದ ಆಕೆ ಅದನ್ನು ಮುಚ್ಚಿಡುತ್ತಾಳೆ ಮತ್ತು ಎಲ್ಲವನ್ನೂ ಸಹಿಸಿಕೊಳ್ಳುತ್ತಾಳೆ. ಈಗ ಹೇಳಿ, ಈ ತಾಯಂದಿರು ಅದನ್ನು ಎಷ್ಟು ದಿನ ಸಹಿಸಿಕೊಳ್ಳುತ್ತಾರೆ? ಮತ್ತು ಈ ಮಗನಲ್ಲದೆ ಬೇರೆ ಯಾರು ಆ ತಾಯಂದಿರನ್ನು ಈ ಸಮಸ್ಯೆಯಿಂದ ಹೊರತರುತ್ತಾರೆ? ಅದಕ್ಕಾಗಿಯೇ ತಾಯಂದಿರು ಇನ್ನು ಮುಂದೆ ತಮ್ಮ ಅನಾರೋಗ್ಯವನ್ನು ಮುಚ್ಚಿಡಬಾರದು ಅಥವಾ ಮಕ್ಕಳ ಸಲುವಾಗಿ ಔಷಧಿಗಳನ್ನು ತಪ್ಪಿಸಬಾರದು ಎಂದು ನಾವು ಈಗ ಈ ಯೋಜನೆಗೆ ಮುಂದಾಗಿದ್ದೇವೆ. ಮತ್ತು ಸರ್ಕಾರವು ಹಣವನ್ನು ನೀಡುತ್ತದೆ ಮತ್ತು ನಿಮ್ಮ ಕಾಯಿಲೆಗಳನ್ನು ನೋಡಿಕೊಳ್ಳುತ್ತದೆ.

ವಿಶೇಷವಾಗಿ ನಾನು ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ ಆಯುಷ್ಮಾನ್ ಕಾರ್ಡ್‌ಗಳನ್ನು ಪಡೆದುಕೊಳ್ಳಬೇಕೆಂದು ವಿನಂತಿಸುತ್ತೇನೆ. ಮತ್ತು ನೀವು ಅನಾರೋಗ್ಯಕ್ಕೆ ಒಳಗಾಗಿದ್ದರೆ, ನೀವೇ ಆಸ್ಪತ್ರೆಗೆ ಸೇರಿಕೊಳ್ಳಬೇಕು. ನೀವು ಆಸ್ಪತ್ರೆಯಲ್ಲಿ ಒಂದೆರಡು ದಿನ ಕಳೆಯಬೇಕಾದರೆ, ಬಹುಶಃ ಮನೆಗೆ ಮರಳಿದ ಮಕ್ಕಳು ಕೆಲವು ಸಮಸ್ಯೆಗಳನ್ನು ಎದುರಿಸಬಹುದು, ಆದರೆ ನಂತರ ನಿಮ್ಮ ಮನಸ್ಸಿಗೆ ಶಾಂತಿ ಸಿಗುತ್ತದೆ. ಮನೆಯಲ್ಲಿ ಮಕ್ಕಳು ತಾತ್ಕಾಲಿಕವಾಗಿ ಕೆಲವು ಕಷ್ಟಗಳನ್ನು ಎದುರಿಸುತ್ತಿದ್ದರೂ ಸಹ, ನೀವು ಒಮ್ಮೆಯಾದರೂ ನಿಮ್ಮ ತಪಾಸಣೆ ಮಾಡಿಸಿಕೊಳ್ಳಬೇಕು. ನನಗೆ ನೆನಪಾಗುತ್ತಿದೆ, ನಾನು ಗುಜರಾತ್‌ನಲ್ಲಿದ್ದಾಗ ‘ಚಿರಂಜೀವಿ ಯೋಜನೆ’ ಪರಿಚಯಿಸಿದ್ದೆ. ಹಿಂದೆ, ಹೆರಿಗೆಯ ಸಮಯದಲ್ಲಿ ತಾಯಿ ಅಥವಾ ಮಗು ಅಥವಾ ಇಬ್ಬರೂ ಸಾಯುತ್ತಿದ್ದರು. ಅವರನ್ನು ಉಳಿಸಲು ನಾನು ಚಿರಂಜೀವಿ ಯೋಜನೆಯನ್ನು ಆರಂಭಿಸಿದ್ದೆ ಮತ್ತು ಆಸ್ಪತ್ರೆಗಳು ಅವರನ್ನು ನೋಡಿಕೊಳ್ಳಲು ಪ್ರಾರಂಭಿಸಿದವು. ಈಗ ಹೆಚ್ಚಿನ ಸಂಖ್ಯೆಯ ಗರ್ಭಿಣಿಯರು ಗುಜರಾತ್‌ನ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ, ಅವರು ಮೊದಲು ಮನೆಯಲ್ಲಿಯೇ ಹೆರಿಗೆ ಮಾಡಲು ಆದ್ಯತೆ ನೀಡಿದರು. ಅಷ್ಟೇ ಅಲ್ಲ, ನವಜಾತ ಶಿಶುಗಳ ಆರೈಕೆಗಾಗಿ ನಾವು ‘ಬಾಲಭೋಗ್ ಯೋಜನೆ’, ‘ಖಿಲ್ಖಿಲಾಹತ್ ಯೋಜನೆ’ ಮತ್ತು ‘ಬಾಲಮಿತ್ರಾ ಯೋಜನೆ’ಯಂತಹ ಕಾರ್ಯಕ್ರಮಗಳನ್ನು ಪರಿಚಯಿಸಿದ್ದೇವು. ಈ ಯೋಜನೆಗಳಿಂದಾಗಿ ಅವರ ಜೀವನದಲ್ಲಿ ಮಹತ್ವದ ಬದಲಾವಣೆಗಳಾದವು. ಆ ಅವಧಿಯಲ್ಲಿ ನಾನು ಮುಖ್ಯಮಂತ್ರಿ ಅಮೃತಂ ಯೋಜನೆ-ಎಂಎಎ ಯೋಜನೆ ಮತ್ತು ಈಗ ಪಿಎಂಜೆಎವೈ-ಎಂಎ ಯೋಜನೆ ಆರಂಭಿಸಲಾಗಿದೆ. ಇಡೀ ಯೋಜನೆಯು ಹೊಸದಾಗಿದೆ. ಪಿಎಂಜೆಎವೈ-ಎಂಎ ಯೋಜನೆ ಮತ್ತು ಎಂಎ ಯೋಜನೆಗಳನ್ನು ಸಂಯೋಜಿಸಿ

ಪಿಎಂಜೆಎವೈ-ಎಂಎ ಯೋಜನೆ ಮಾಡಲಾಗಿದೆ. ಗುಜರಾತ್ ಸರ್ಕಾರವು ಪಿಎಂಜೆಎವೈ-ಎಂಎ ಯೋಜನೆಯನ್ನು ಮತ್ತಷ್ಟು ವಿಸ್ತರಿಸಿದೆ. ನೀವು ಈಗಾಗಲೇ ಈ ಯೋಜನೆಗಳ ಲಾಭವನ್ನು ಪಡೆದುಕೊಳ್ಳುತ್ತಿದ್ದೀರಿ ಎಂದು ನಾನು ನಂಬಿದ್ದೇನೆ. ಇದೀಗ ಯೋಜನೆಯ ಪ್ರಯೋಜನಗಳ ಮತ್ತಷ್ಟು ವಿಸ್ತರಣೆಯೊಂದಿಗೆ, ಇದು ನಿಮಗೆ ಕಷ್ಟದ ಸಮಯದಲ್ಲಿ ಹೆಚ್ಚು ಸಹಾಯ ಮಾಡುತ್ತದೆ. ಗುಜರಾತಿಗಳು ಇತ್ತೀಚಿನ ದಿನಗಳಲ್ಲಿ ಗುಜರಾತಿಗೆ ಮಾತ್ರ ಸೀಮಿತವಾಗಿಲ್ಲ. ಅವರು ಬೇರೆ ರಾಜ್ಯಗಳಿಗೂ ಭೇಟಿ ನೀಡುತ್ತಾರೆ. ಈಗ ನೀವು ಬೇರೆ ಸ್ಥಿತಿಯಲ್ಲಿದ್ದರೆ, ಆಗ ಏನಾಗುತ್ತದೆ? ನಾನು ಹೇಳಿದಂತೆ, ನೀವು ಮುಂಬೈ, ಅಥವಾ ಕೋಲ್ಕತ್ತಾಗೆ ಹೋದರೆ ಮತ್ತು ನೀವು ಅನಾರೋಗ್ಯಕ್ಕೆ ಒಳಗಾದರೆ ಅಲ್ಲಿಯೇ ನಿಮ್ಮ ಚಿಕಿತ್ಸೆಯನ್ನು ಮಾಡಿಸಿಕೊಳ್ಳಬಹುದು ಎಂದು ಅದಕ್ಕೆ ನಾನು ಹೇಳಿದ್ದು ಗೋಲ್ಡನ್ ಕಾರ್ಡ್ ಆಗಿದೆ ಎಂದು. ಎಲ್ಲಿ ಸಾಧ್ಯವೋ ಅಲ್ಲಲ್ಲೆ ಜನರು ಚಿಕಿತ್ಸೆ ಪಡೆಯುವಂತೆ ನಾವು ಯೋಚಿಸಿದ್ದೇವೆ. ಕುಟುಂಬದ ಸದಸ್ಯರು ಎಲ್ಲಿಯೇ ಉಳಿದುಕೊಳ್ಳಲಿ, ಇಡೀ ಕುಟುಂಬವು ಅದರ ಪ್ರಯೋಜನವನ್ನು ಪಡೆಯಬಹುದು. ಅಷ್ಟೇ ಅಲ್ಲ, ಹೊರಗಿನಿಂದ ಈ ರಾಜ್ಯಕ್ಕೆ ಬಂದವರೂ ಈ ಯೋಜನೆಯ ಲಾಭ ಪಡೆಯಬಹುದು. ಬೇರೆ ರೀತಿಯಲ್ಲಿ ಹೇಳುವುದಾದರೆ, ಭಾರತದ ನಾಗರಿಕರು ಭಾರತದ ಯಾವುದೇ ಮೂಲೆಯಲ್ಲಿ ಈ ಯೋಜನೆಯ ಪ್ರಯೋಜನ ಪಡೆಯಬಹುದು. ಈ ಗೋಲ್ಡನ್ ಕಾರ್ಡ್ ಇದ್ದಾಗ ಜನರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ.

ನಿಮ್ಮನ್ನು ಭೇಟಿಯಾಗುವ ಅವಕಾಶ ಸಿಕ್ಕಿದ್ದಕ್ಕೆ ನನಗೆ ಖುಷಿಯಾಗಿದೆ. ನೀವು ಇನ್ನು ಮುಂದೆ ಆರೋಗ್ಯದ ವೆಚ್ಚದ ಬಗ್ಗೆ ಚಿಂತಿಸಬೇಕಾಗಿಲ್ಲ. ಎಲ್ಲರಿಗೂ ಶುಭ ಹಾರೈಕೆಗಳು! ತುಂಬಾ ಧನ್ಯವಾದಗಳು!

ಘೋಷಣೆ: ಇದು ಪ್ರಧಾನಿ ಭಾಷಣದ ಯಥಾವತ್ ಅನುವಾದವಲ್ಲ, ಅವರು ಮೂಲತಃ ಹಿಂದಿಯಲ್ಲಿ ಭಾಷಣ ಮಾಡಿದರು.

******

 

 

 



(Release ID: 1869553) Visitor Counter : 120