ಪ್ರಧಾನ ಮಂತ್ರಿಯವರ ಕಛೇರಿ

ಅಹ್ಮದಾಬಾದ್ ನಲ್ಲಿ ನವರಾತ್ರಿ ಉತ್ಸವ ಆಚರಣೆಯಲ್ಲಿ ಪಾಲ್ಗೊಂಡ ಪ್ರಧಾನ ಮಂತ್ರಿ


ಲಕ್ಷಾಂತರ ಭಕ್ತರೊಂದಿಗೆ ಮಹಾ ಆರತಿ ಅರ್ಪಣೆ. 

Posted On: 29 SEP 2022 10:14PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾತ್ರಿ ಅಹ್ಮದಾಬಾದ್ ನ ಜಿಎಂಡಿಸಿ ಮೈದಾನದಲ್ಲಿ ನಡೆದ ನವರಾತ್ರಿ ಉತ್ಸವದಲ್ಲಿ ಭಾಗವಹಿಸಿದ್ದರು.

ಪ್ರಧಾನಮಂತ್ರಿಯವರು ಗುಜರಾತ್ ರಾಜ್ಯಪಾಲ ಶ್ರೀ ಆಚಾರ್ಯ ದೇವವ್ರತ್ ಮತ್ತು ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಅವರೊಂದಿಗೆ ಸ್ಥಳಕ್ಕೆ ಆಗಮಿಸಿದರು. ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಹಾಗು ಸ್ಥಳದಲ್ಲಿ ಸೇರಿದ್ದ ಲಕ್ಷಾಂತರ ಭಕ್ತರೊಂದಿಗೆ ಅಂಬಾ ಮಾತೆಗೆ  ಪ್ರಧಾನ ಮಂತ್ರಿ ಅವರು ಮಹಾ ಆರತಿಯನ್ನು ಅರ್ಪಿಸಿದರು. ಭಾರತೀಯ ಸಂಸ್ಕೃತಿಯ ಪ್ರತೀಕವಾದ ಮತ್ತು ಗುಜರಾತಿನ ನವರಾತ್ರಿಯ ಸ್ಥಳೀಯ ಸಂಭ್ರಮದ ಸುಗಂಧವನ್ನು  ಪಸರಿಸುವ  ಈ ಶುಭ ಸಂದರ್ಭದ ಆಚರಣೆಯಲ್ಲಿ ಪ್ರಧಾನ ಮಂತ್ರಿಯವರ ಭಾಗವಹಿಸುವಿಕೆಯು ಭಕ್ತರಲ್ಲಿ ಸಂತೋಷ ಮತ್ತು ಹರ್ಷವನ್ನು ತುಂಬಿತು. ಮುಖ್ಯಮಂತ್ರಿಯವರು ಮಾ ಅಂಬಾಜಿ ಶ್ರೀ ಯಂತ್ರವನ್ನು ಪ್ರಧಾನ ಮಂತ್ರಿಯವರಿಗೆ ಈ ಶುಭ ಸಂದರ್ಭದ ಸ್ಮರಣಿಕೆಯಾಗಿ ನೀಡಿದರು. ಪ್ರಧಾನಮಂತ್ರಿಯವರು ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಗರ್ಬಾಕ್ಕೂ ಸಾಕ್ಷಿಯಾದರು.

ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಮಂತ್ರಿಯವರು ಇಂದು ಸೂರತ್ ಮತ್ತು ಭಾವನಗರದಲ್ಲಿ ಸರಣಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸೂರತ್ ಮತ್ತು ಭಾವನಗರದಲ್ಲಿ ಉದ್ಘಾಟನೆ/ಸಮರ್ಪಣೆ/ಶಂಕುಸ್ಥಾಪನೆ ಕಾರ್ಯಕ್ರಮಗಳನ್ನು ನೆರವೇರಿಸಿದರು. ಅಹ್ಮದಾಬಾದಿನಲ್ಲಿ ರಾಷ್ಟ್ರೀಯ ಕ್ರೀಡಾಕೂಟ 2022ರ ಉದ್ಘಾಟನೆಯನ್ನು  ಅವರು ಘೋಷಿಸಿದರು. 

ನಾಳೆ ಪ್ರಧಾನಮಂತ್ರಿಯವರು 51 ಶಕ್ತಿ ಪೀಠಗಳಲ್ಲಿ ಒಂದಾದ ಅಂಬಾಜಿಯಲ್ಲಿರುವ ಮತ್ತೊಂದು ಧಾರ್ಮಿಕ ನಂಬಿಕೆಯ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.  ಪ್ರಧಾನಮಂತ್ರಿಯವರು ಅಂಬಾಜಿಯಲ್ಲಿ 7200 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾದ 45,000 ಕ್ಕೂ ಹೆಚ್ಚು ಮನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿಯವರು ನೆರವೇರಿಸುವರು. ಪ್ರಧಾನಮಂತ್ರಿಯವರು ತರಂಗ ಬೆಟ್ಟ - ಅಂಬಾಜಿ - ಅಬು ರಸ್ತೆ ಹೊಸ ಬ್ರಾಡ್ ಗೇಜ್ ಲೈನ್ ಮತ್ತು ಪ್ರಸಾದ ಯೋಜನೆಯಡಿ ಅಂಬಾಜಿ ದೇವಾಲಯದಲ್ಲಿ ಯಾತ್ರಾ ಸೌಲಭ್ಯಗಳ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸುವರು. ಹೊಸ ರೈಲು ಮಾರ್ಗವು 51 ಶಕ್ತಿ ಪೀಠಗಳಲ್ಲಿ ಒಂದಾದ ಅಂಬಾಜಿಗೆ ಭೇಟಿ ನೀಡುವ ಲಕ್ಷಾಂತರ ಭಕ್ತರಿಗೆ ಅನುಕೂಲತೆಗಳನ್ನು ಒದಗಿಸಲಿದೆ. ಮತ್ತು ಈ ಎಲ್ಲಾ ಯಾತ್ರಾ ಸ್ಥಳಗಳಲ್ಲಿ ಭಕ್ತರ ಪೂಜಾ ಅನುಭವವನ್ನು ಶ್ರೀಮಂತಗೊಳಿಸುತ್ತದೆ. ದೀಸಾದ ಏರ್ಫೋರ್ಸ್ ನಿಲ್ದಾಣದಲ್ಲಿ ರನ್ ವೇ ನಿರ್ಮಾಣ ಮತ್ತು ಸಂಬಂಧಿತ ಮೂಲಸೌಕರ್ಯಗಳ ನಿರ್ಮಾಣ,  ಅಂಬಾಜಿ ಬೈಪಾಸ್ ರಸ್ತೆ ನಿರ್ಮಾಣ ಸೇರಿದಂತೆ ಇತರ ಯೋಜನೆಗಳಿಗೆ ಶಂಕುಸ್ಥಾಪನೆಯೂ ಈ ಸಂದರ್ಭದಲ್ಲಿ ನೆರವೇರಿಸಲಾಗುವುದು.

ಸರಕು ಸಾಗಣೆಗಾಗಿ ಮೀಸಲಾದ ಪಶ್ಚಿಮ ಕಾರಿಡಾರ್ ನ 62 ಕಿ.ಮೀ ಉದ್ದದ ನ್ಯೂ ಪಾಲನ್ ಪುರ್-ನ್ಯೂ ಮಹೆಸಾನಾ ವಿಭಾಗ ಮತ್ತು 13 ಕಿ.ಮೀ ಉದ್ದದ ನವ ಪಾಲನ್ ಪುರ್-ನವ ಚಟೋದಾರ್ ವಿಭಾಗವನ್ನು (ಪಾಲನ್ ಪುರ್ ಬೈಪಾಸ್ ಮಾರ್ಗವನ್ನು) ಅವರು ಲೋಕಾರ್ಪಣೆ ಮಾಡಲಿದ್ದಾರೆ. ಇದು ಪಿಪವಾವ್, ದೀನ್ ದಯಾಳ್ ಬಂದರು ಪ್ರಾಧಿಕಾರ (ಕಾಂಡ್ಲಾ), ಮುಂದ್ರಾ ಮತ್ತು ಗುಜರಾತ್ ನ ಇತರ ಬಂದರುಗಳಿಗೆ ಸಂಪರ್ಕವನ್ನು ಹೆಚ್ಚಿಸುತ್ತದೆ. ಈ ವಿಭಾಗಗಳನ್ನು ತೆರೆಯುವುದರೊಂದಿಗೆ, ಸರಕು ಸಾಗಾಣಿಕೆಗಾಗಿರುವ 734 ಕಿ.ಮೀ. ಪಶ್ಚಿಮ ಕಾರಿಡಾರ್ (ವೆಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ) ಕಾರ್ಯಾರಂಭ ಮಾಡಿದಂತಾಗುತ್ತದೆ. ಈ ವಿಸ್ತರಣೆಯಿಂದಾಗಿ  ಗುಜರಾತಿನ ಮೆಹ್ಸಾನಾ-ಪಾಲನ್ಪುರದ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ; ರಾಜಸ್ತಾನದ ಸ್ವರೂಪ ಗಂಜ್, ಕೇಶವಗಂಜ್, ಕಿಶಾನ್ ಘರ್; ಹರ್ಯಾಣದ ರೆವಾರಿ-ಮನೇಸರ್ ಮತ್ತು ನರ್ನೌಲ್ ಗಳಲ್ಲಿಯ ಉದ್ಯಮಗಳಿಗೂ ಉಪಯೋಗವಾಗಲಿದೆ. ಪ್ರಧಾನಮಂತ್ರಿಯವರು ಮಿಥಾ - ತರಡ್ - ದೀಸಾ ರಸ್ತೆ ಅಗಲೀಕರಣ ಸೇರಿದಂತೆ ವಿವಿಧ ರಸ್ತೆ ಯೋಜನೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.

*****

*****



(Release ID: 1864107) Visitor Counter : 152