ಪ್ರಧಾನ ಮಂತ್ರಿಯವರ ಕಛೇರಿ

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2022 ಗ್ರ್ಯಾಂಡ್ ಫಿನಾಲೆ ಉದ್ದೇಶಿಸಿ ಪ್ರಧಾನಿ ಭಾಷಣ




“ನೀವು ಅನ್ವೇಷಕರು, ಜೈ ಅನುಸಂಧಾನ್ ಘೋಷಣೆಯ ಧ್ವಜಧಾರಿಗಳು’’ 

“ನಿಮ್ಮ ಆವಿಷ್ಕಾರಿ ಮನೋಭಾವ ಮುಂದಿನ 25 ವರ್ಷಗಳಲ್ಲಿ ಭಾರತವನ್ನು ಅಗ್ರಸ್ಥಾನಕ್ಕೊಯ್ಯಲಿದೆ’’

“ಭಾರತದ ಮಹತ್ವಾಕಾಂಕ್ಷೆಯ ಸಮಾಜವು ಮುಂದಿನ 25 ವರ್ಷಗಳಲ್ಲಿ ನಾವೀನ್ಯತೆಗೆ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸಲಿದೆ’’

“ಭಾರತದಲ್ಲಿ ಇಂದು ಪ್ರತಿಭಾ ಕ್ರಾಂತಿ ನಡೆಯುತ್ತಿದೆ’’

“ಸಂಶೋಧನೆ ಮತ್ತು ನಾವೀನ್ಯತೆಯು ಕೆಲಸ ಮಾಡುವ ವಿಧಾನದಿಂದ ಜೀವನ ವಿಧಾನಕ್ಕೆ ಪರಿವರ್ತನೆಗೊಳ್ಳಬೇಕು’’

“ಭಾರತದ ನಾವೀನ್ಯತೆಗಳು ಸದಾ ಸ್ಪರ್ಧಾತ್ಮಕ, ಕಡಿಕೆ ಬೆಲೆಯಲ್ಲಿ, ಸುಸ್ಥಿರ ಮತ್ತು ಸುರಕ್ಷಿತ ಮತ್ತು ವ್ಯಾಪಕ ಪರಿಹಾರಗಳನ್ನು ಒದಗಿಸುತ್ತವೆ’’

“21ನೇ ಶತಮಾನದ ಭಾರತವು ತನ್ನ ಯುವಕರಲ್ಲಿನ ಸಂಪೂರ್ಣ ವಿಶ್ವಾಸದಿಂದ ಮುನ್ನಡೆಯುತ್ತಿದೆ’’ 

Posted On: 25 AUG 2022 9:34PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2022 ರ ಗ್ರ್ಯಾಂಡ್ ಫಿನಾಲೆಯನ್ನು ಉದ್ದೇಶಿಸಿ ಮಾತನಾಡಿದರು.


ಪ್ರಧಾನಮಂತ್ರಿ ಅವರು ಹ್ಯಾಕಥಾನ್ ನಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪ್ರಧಾನಮಂತ್ರಿ ಅವರು ಕೇರಳದ ಸಿಕ್ಸ್ ಪಿಕ್ಸೆಲ್ಸ್ ತಂಡದಿಂದ, ಪ್ರಾಚೀನ ದೇವಾಲಯಗಳಲ್ಲಿನ ಪಠ್ಯವನ್ನು ದೇವನಾಗರಿ ಭಾಷೆಗೆ ಅನುವಾದಿಸುವ ಯೋಜನೆಯ ಕುರಿತು ಮಾಹಿತಿ ಪಡೆದರು. ಎಲ್ಲಾ ಬಾಲಕಿಯರೇ ಒಳಗೊಂಡ ಆ ತಂಡವು ಯೋಜನೆಯ ಸಂಶೋಧನೆಗಳು, ಪ್ರಯೋಜನಗಳು ಮತ್ತು ಪ್ರಕ್ರಿಯೆಯನ್ನು ವಿವರಿಸಿತು, ಕೆಂಪು ಕೋಟೆಯಿಂದ ಪ್ರಧಾನಿ ಅವರು ನೀಡಿದ್ದ ಕರೆಗೆ ಸ್ಪಂದಿಸಿ ಈ ಕೆಲಸ ಮಾಡಲಾಗಿದೆ ಎಂದು ಅವರು ಹೇಳಿದರು.


ವಿಶೇಷಚೇತನರ ಕುರಿತು ತಮಿಳುನಾಡಿನ ಆಕ್ಚುವೇಟರ್ಸ್ ತಂಡಕ್ಕೆ ಸವಾಲನ್ನು ನೀಡಲಾಗಿತ್ತು. ಅವರು ಕಾಲು ಮಡಿಚಿರುವ ಅಥವಾ ಮೊಣಕಾಲಿನ ಸಮಸ್ಯೆ ಇರುವ ವ್ಯಕ್ತಿಗಳ ಮೇಲೆ ಕೆಲಸ ಮಾಡಿದರು. ಅವರ ಆಕ್ಚುವೇಟರ್ 'ಪ್ರೇರಕ್' ಅಂತಹವರಿಗೆ ಸಹಾಯ ಮಾಡುತ್ತದೆ. ವೈದ್ಯಕೀಯ ಸಾಧನಗಳ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಬೇಕಾದ ಅಗತ್ಯವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು.


ಗುಜರಾತ್‌ನ ವಿಜೇತರಾಗಿರುವ ಎಸ್‌ಐಎಚ್ ಜೂನಿಯರ್‌ನ ಮಾಸ್ಟರ್ ವಿರಾಜ್ ವಿಶ್ವನಾಥ್ ಮರಾಠೆ, ಬುದ್ದಿಮಾಂದ್ಯತೆ ಜಾಗತಿಕ ಆರೋಗ್ಯ ಸಮಸ್ಯೆ ಎಂಬುದನ್ನು ಅರಿತು, ಬುದ್ಧಿಮಾಂದ್ಯತೆಯಿಂದ ಬಳಲುತ್ತಿರುವ ಜನರಿಗಾಗಿ ಎಚ್‌ಕ್ಯಾಮ್ ಎಂಬ ಮೊಬೈಲ್ ಗೇಮ್ ಅಪ್ಲಿಕೇಷನ್ ಅನ್ನು ಸಿದ್ಧಪಡಿದ್ದಾರೆ. ಇದು ಹಿಂದಿನ ಘಟನೆಗಳ ಚರ್ಚೆ ಮತ್ತು ಛಾಯಾಚಿತ್ರಗಳು ಮತ್ತು ವೀಡಿಯೊಗಳಂತಹ ಪರಿಕರಗಳನ್ನು ಒಳಗೊಂಡಿರುತ್ತದೆ. ಈ ಅಪ್ಲಿಕೇಷನ್ ನಲ್ಲಿ ಆರ್ಟ್ ಥೆರಪಿ, ಆಟಗಳು, ಸಂಗೀತ ಮತ್ತು ವೀಡಿಯೊಗಳನ್ನು ಒಳಗೊಂಡಿರುತ್ತದೆ, ಇದು ಬುದ್ಧಿಮಾಂದ್ಯತೆಯ ರೋಗಿಗಳ ಅರಿವಿನ ಸುಧಾರಣೆಗೆ ಸಹಾಯ ಮಾಡುತ್ತದೆ ಮತ್ತು ಸ್ವಯಂ ಅಭಿವ್ಯಕ್ತಿಗೆ ವೇದಿಕೆಯನ್ನು ಒದಗಿಸುತ್ತದೆ. ಯೋಗ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿರುವ ಬಗ್ಗೆ ಪ್ರಧಾನಿಯವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿರಾಜ್, ವೃದ್ಧರಿಗಾಗಿ ಕೆಲವು ಆಸನಗಳನ್ನು ಸೂಚಿಸಿದ ಯೋಗ ತರಬೇತುದಾರರೊಂದಿಗೆ ಸಂಪರ್ಕದಲ್ಲಿರುವುದಾಗಿ ಹೇಳಿದರು.


ಬಿಐಟಿ ಮೆಸ್ರಾ ರಾಂಚಿಯ ಡಾಟಾಕ್ಲಾನ್‌ನ ಅನಿಮೇಶ್ ಮಿಶ್ರಾ ಅವರು ಚಂಡಮಾರುತಗಳನ್ನು (ಸೈಕ್ಲೋನ್‌ಗಳನ್ನು) ಅಂದಾಜಿಸಲು ಆಳವಾದ ಕಲಿಕೆಯ ಬಳಕೆಯನ್ನು ವಿವರಿಸಿದರು. ಅವರು ಇನ್ ಸ್ಯಾಟ್ ನಿಂದ ಉಪಗ್ರಹ ಚಿತ್ರಗಳನ್ನು ಆಧರಿಸಿ ಕೆಲಸ ಮಾಡುತ್ತಾರೆ. ಅವರ ಕೆಲಸವು ಚಂಡಮಾರುತಗಳ ವಿವಿಧ ಅಂಶಗಳನ್ನು ಉತ್ತಮವಾಗಿ ರೀತಿಯಲ್ಲಿ ಅಂದಾಜಿಸಲು ಸಹಾಯ ಮಾಡುತ್ತದೆ. ಯೋಜನೆಯ ದತ್ತಾಂಶ ಲಭ್ಯತೆಯ ಬಗ್ಗೆ ಪ್ರಧಾನಿ ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಅನಿಮೇಶ್ ಅವರು 2014 ರ ನಂತರ ಭಾರತದ ಕರಾವಳಿಗೆ ಅಪ್ಪಳಿಸಿದ ಚಂಡಮಾರುತಗಳನ್ನು ಪರಿಗಣಿಸಿದ್ದೇವೆ ಮತ್ತು ನಿಖರತೆ ಶೇ.89 ರ ಸನಿಹದಲ್ಲಿದೆ ಎಂದು ಹೇಳಿದರು. ಈವರೆಗೆ ಸಂಗ್ರಹಿಸಿದ ದತ್ತಾಂಶವು ಕಡಿಮೆಯಿದ್ದರೂ, ತಮ್ಮ ತಾಂತ್ರಿಕ ಸಾಮರ್ಥ್ಯದಿಂದ, ಗರಿಷ್ಠ ನಿಖರತೆ ಮತ್ತು ಫಲಿತಾಂಶವನ್ನು ಪಡೆಯಲು ಶ್ರಮಿಸಲಾಗುತ್ತಿದೆ ಎಂದು ಅವರು ಹೇಳಿದರು.


ಪಶ್ಚಿಮ ಬಂಗಾಳದ ಸರ್ವಜ್ಞ ತಂಡದ ಪ್ರಿಯಾಂಶ್ ದಿವಾನ್ ಅವರು ಇಂಟರ್‌ನೆಟ್ ಇಲ್ಲದೆಯೇ ರೇಡಿಯೊ ತರಂಗಗಳ ಮೂಲಕ ರೇಡಿಯೊ ಸೆಟ್‌ನಲ್ಲಿ ಮಲ್ಟಿಮೀಡಿಯಾ ದತ್ತಾಂಶವನ್ನು ಸುರಕ್ಷಿತವಾಗಿ ವರ್ಗಾಯಿಸಲು ತಮ್ಮ ತಂಡ ಕೈಗೊಂಡಿರುವ ಕಾರ್ಯದ ಬಗ್ಗೆ ಪ್ರಧಾನಿ ಅವರಿಗೆ ಮಾಹಿತಿ ನೀಡಿದರು. ಈ ವ್ಯವಸ್ಥೆ ಜಾರಿಯಲ್ಲಿದ್ದು, ಆ್ಯಪ್ ಅನ್ನು ಸ್ಥಳೀಯವಾಗಿ ತಯಾರಿಸಿರುವುದರಿಂದ ಮತ್ತು ಸರ್ವರ್‌ಗಳು ಸಹ ಭಾರತದಲ್ಲಿಯೇ ಇರುವುದರಿಂದ ಗೋಪ್ಯತೆ ಸಮಸ್ಯೆಗಳನ್ನು ಸಂಪೂರ್ಣವಾಗಿ ಪರಿಹರಿಸಬಹುದು ಎಂದು ಅವರು ಹೇಳಿದರು. ಸೇನೆಯು ಗಡಿ ಪ್ರದೇಶಗಳಲ್ಲಿ ಈ ವ್ಯವಸ್ಥೆಯನ್ನು ನಿಯೋಜಿಸಬಹುದೇ ಎಂದು ಪ್ರಧಾನಿ, ಪ್ರಿಯಾಂಶ್ ಅವರನ್ನು ಕೇಳಿದಾಗ, ಪ್ರಸರಣವು ಎನ್‌ಕ್ರಿಪ್ಟ್ ಆಗಿದ್ದು, ಸಿಗ್ನಲ್ ಪ್ರತಿಬಂಧಿಸುವ ಅಪಾಯ ಇರುವ ಪ್ರದೇಶಗಳಲ್ಲಿ ಅದನ್ನು ಬಳಸಲು ಅನುಮತಿಸಬಹುದು ಎಂದರು. ಈ ವ್ಯವಸ್ಥೆಯ ಮೂಲಕ ವೀಡಿಯೊ ಫೈಲ್‌ಗಳನ್ನು ರವಾನಿಸಲು ತಂಡವು ಕೆಲಸ ಮಾಡುತ್ತಿದೆಯೇ ಎಂದು ಪ್ರಧಾನಮಂತ್ರಿ, ಪ್ರಿಯಾಂಶ್ ಅವರನ್ನು ಕೇಳಿದರು. ಪ್ರಸರಣ ಮಾಧ್ಯಮವು ಒಂದೇ ಆಗಿರುವುದರಿಂದ ವೀಡಿಯೊಗಳನ್ನು ರವಾನಿಸಲು ಸಾಧ್ಯವಿದೆ ಮತ್ತು ನಾಳೆಯ ಹ್ಯಾಕಥಾನ್‌ನಲ್ಲಿ ವೀಡಿಯೊಗಳನ್ನು ರವಾನಿಸುವ ನಿಟ್ಟಿನಲ್ಲಿ ತಂಡವು ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಿಯಾಂಶ್ ಹೇಳಿದರು.


ಅಸ್ಸಾಂನ ಐಡಿಯಲ್-ಬಿಟ್ಸ್ ತಂಡದ ನಿತೇಶ್ ಪಾಂಡೆ ಅವರು ಐಪಿಆರ್ ಅರ್ಜಿಗಳನ್ನು ಸಲ್ಲಿಸಲು ತಳಮಟ್ಟದ ನಾವೀನ್ಯತೆಗಳಿಗಾಗಿ ತಮ್ಮ ಅಪ್ಲಿಕೇಷನ್ ಅಭಿವೃದ್ಧಿಪಡಿಸಲಾಗಿದೆ ಎಂದು ಪ್ರಧಾನಮಂತ್ರಿಗೆ ತಿಳಿಸಿದರು. ಪೇಟೆಂಟ್ ಅರ್ಜಿಗಳನ್ನು ಸಲ್ಲಿಸುವ ಪ್ರಕ್ರಿಯೆಯನ್ನು ಸರಳಗೊಳಿಸಲು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಅಪ್ಲಿಕೇಷನ್ ಮತ್ತು ಇತರ ತಂತ್ರಜ್ಞಾನಗಳನ್ನು ಬಳಸುತ್ತದೆ. ಆ್ಯಪ್ ನವೋದ್ಯಮಿಗಳಿಗೆ ಹೇಗೆ ಸಹಾಯ ಮಾಡುತ್ತದೆ ಎಂಬ ಪ್ರಧಾನಿಯವರ ಪ್ರಶ್ನೆಗೆ ನಿತೀಶ್, ಅಪ್ಲಿಕೇಷನ್ ಪೇಟೆಂಟ್‌ಗಳ ಬಗ್ಗೆ ಮತ್ತು ಅದನ್ನು ಹೇಗೆ ಸಂಪರ್ಕಿಸಬಹುದು ಎಂಬುದರ ಕುರಿತು ಆವಿಷ್ಕಾರಿಗಳಿಗೆ ಸಹಾಯ ಮಾಡುತ್ತದೆ ಎಂದು ಉತ್ತರಿಸಿದರು. ಪೇಟೆಂಟ್ ಸಲ್ಲಿಸಲು ಸಿದ್ಧರಿರುವ ನವೋದ್ಯಮಿಗಳಿಗೆ ಅಪ್ಲಿಕೇಷನ್ ಮೊದಲಿನಿಂದ ಕೊನೆಯವರೆಗೆ ಪರಿಹಾರವನ್ನು ಒದಗಿಸುತ್ತದೆ. ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುವ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಏಜೆಂಟ್‌ಗಳೊಂದಿಗೆ ಸಂಪರ್ಕದಲ್ಲಿರಲು ಅವಕಾಶ ನೀಡುವ ಮೂಲಕ ಇದು ನವೋದ್ಯಮಿಗಳಿಗೆ ಸಹಾಯ ಮಾಡುತ್ತದೆ ಎಂದು ವಿವರಿಸಿದರು. 


ಉತ್ತರ ಪ್ರದೇಶದ ಐರಿಸ್ ತಂಡದ ಅಂಶಿತ್ ಬನ್ಸಾಲ್ ಅವರು, ಕ್ರೈಮ್ ಹಾಟ್‌ಸ್ಪಾಟ್ ಸೃಷ್ಟಿಸುವ ಮತ್ತು ಮ್ಯಾಪಿಂಗ್ ಮಾಡುವ ಸಮಸ್ಯೆಯನ್ನು ವಿವರಿಸಿದರು. ಮಾದರಿಯ ಸರಳತೆ ಮತ್ತು ಅದರ ವ್ಯಾಪ್ತಿ ವಿಸ್ತರಿಸುವ ಬಗ್ಗೆ ಪ್ರಧಾನಿ ಕೇಳಿದರು. ಈ ಮಾದರಿಯಿಂದ ಮಾದಕ ದ್ರವ್ಯಗಳ ಹಾವಳಿಯನ್ನು ನಿಭಾಯಿಸಬಹುದೇ ಎಂದು ಪ್ರಧಾನಿ ಕೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ,  ಅಂಶಿತ್ ಮಾದರಿಯು ಭೌಗೋಳಿಕ ಸ್ಥಳವನ್ನು ಅವಲಂಬಿಸಿಲ್ಲದ ಕಾರಣ ಅದನ್ನು ವಿಸ್ತರಿಸಬಹುದು,  ಏಕೆಂದರೆ ಅದು ಮಾದರಿಗೆ ಒದಗಿಸಲಾದ ಕ್ರಿಮಿನಲ್ ದತ್ತಾಂಶವನ್ನು ಆಧರಿಸಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.  


ಪಂಜಾಬ್‌ನ ಎಸ್‌ಐಎಚ್ ಜೂನಿಯರ್ ವಿಜೇತ ಮಾಸ್ಟರ್ ಹರ್ಮನ್‌ಜೋತ್ ಸಿಂಗ್ ಅವರು ಆರೋಗ್ಯ ಮಾನದಂಡಗಳನ್ನು ಮೇಲ್ವಿಚಾರಣೆ ಮಾಡುವ ಸ್ಮಾರ್ಟ್ ಕೈಗವಸುಗಳ ಯೋಜನೆಯನ್ನು ಪ್ರದರ್ಶಿಸಿದರು. ಸ್ಮಾರ್ಟ್ ಗ್ಲೋವ್ ಇಂಟರ್‌ನೆಟ್ ಆಫ್ ಮೆಡಿಕಲ್ ಥಿಂಗ್ಸ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಇದು ಮಾನಸಿಕ ಆರೋಗ್ಯ, ಹೃದಯ ಬಡಿತ, ರಕ್ತದೊತ್ತಡ, ಆಮ್ಲಜನಕದ ಗರಿಷ್ಠ ಮಟ್ಟ, ಮನಸ್ಥಿತಿ ಪತ್ತೆ, ಕೈ ನಡುಕ ಮತ್ತು ದೇಹದ ಉಷ್ಣತೆಯಂತಹ ಆರೋಗ್ಯದ ಪ್ರಮುಖ ಅಂಶಗಳ ಮೇಲೆ ನಿಗಾವಹಿಸಲು ಸಹಾಯ ಮಾಡುತ್ತದೆ. ಅವರ ಎಲ್ಲಾ ಬೆಂಬಲಕ್ಕಾಗಿ ಅವರ ಪೋಷಕರನ್ನು ಪ್ರಧಾನಮಂತ್ರಿ ಶ್ಲಾಘಿಸಿದರು.


ಪಂಜಾಬ್‌ನ ಸಮಿದಾದ ಭಾಗ್ಯಶ್ರೀ ಸಂಪಾಲಾ ಅವರು ಮೆಶೀನ್ ಲರ್ನಿಂಗ್ ಮತ್ತು ಉಪಗ್ರಹ ತಂತ್ರಜ್ಞಾನದ ಮೂಲಕ ಹಡಗುಗಳ ರಿಯಲ್ ಟೈಮ್ ಇಂಧನ ಮೇಲ್ವಿಚಾರಣೆ ಕುರಿತು ತಮ್ಮ ಸಮಸ್ಯೆ ಹೇಳಿಕೆ ಕುರಿತು ಮಾತನಾಡಿದರು. ಸಮಿಧಾ ಅವರು ಮಾನವರಹಿತ ಕಡಲ ಮೇಲ್ವಿಚಾರಣಾ ವ್ಯವಸ್ಥೆಯನ್ನು ಸಾಧಿಸುವ ಗುರಿ ಹೊಂದಿದ್ದಾರೆ. ಈ ವ್ಯವಸ್ಥೆಯನ್ನು ಇತರ ಪ್ರದೇಶಗಳಿಗೂ ಅನ್ವಯಿಸಬಹುದೇ ಎಂದು ಪ್ರಧಾನಮಂತ್ರಿ, ಭಾಗ್ಯಶ್ರೀ ಅವರನ್ನು ಕೇಳಿದರು. ಅದಕ್ಕೆ ಭಾಗ್ಯಶ್ರೀ ಅವರು ಹೌದು ಸಾಧ್ಯವಿದೆ ಎಂದು ಹೇಳಿದರು.


ಈ ವೇಳೆ ಮಾತನಾಡಿದ ಪ್ರಧಾನಮಂತ್ರಿ, ಎಸ್‌ಐಎಚ್ ಸಾರ್ವಜನಿಕ ಸಹಭಾಗಿತ್ವದ ಪ್ರಮುಖ ಮಾರ್ಗವಾಗಿದೆ ಎಂದು ಹೇಳಿದರು. ಯುವ ಪೀಳಿಗೆ ಬಗ್ಗೆ ತಮಗೆ ಸಂಪೂರ್ಣ ಆತ್ಮವಿಶ್ವಾಸವಿದೆ ಎಂದರು. “ಸ್ವಾತಂತ್ರ್ಯ ಪಡೆದ 100 ವರ್ಷಗಳ ನಂತರ ನಮ್ಮ ದೇಶವು ಹೇಗೆ ಇರುತ್ತದೆ ಎಂಬುದರ ಕುರಿತು ದೇಶವು ದೊಡ್ಡ ಸಂಕಲ್ಪಗಳನ್ನು ಮಾಡುತ್ತಿದೆ. ಈ ಸಂಕಲ್ಪಗಳ ಈಡೇರಿಕೆಗೆ ನವೋದ್ಯಮಿಗಳಾದ ನೀವೇ ‘ಜೈ ಅನುಸಂಧಾನ’ ಘೋಷವಾಕ್ಯದ ಧ್ವಜಧಾರಿಗಳು” ಎಂದು ಹೇಳಿದರು. ಯುವ ನವೋದ್ಯಮಿಗಳ ಯಶಸ್ಸು ಮತ್ತು ಮುಂದಿನ 25 ವರ್ಷಗಳಲ್ಲಿ ದೇಶದ ಯಶೋಗಾಥೆಯ ಪಥವನ್ನು ಶ್ರೀ ನರೇಂದ್ರ ಮೋದಿ ಬಲವಾಗಿ ಪ್ರತಿಪಾದಿಸಿದರು. "ನಿಮ್ಮ ನವೀನ ಮನಸ್ಥಿತಿಯು ಮುಂದಿನ 25 ವರ್ಷಗಳಲ್ಲಿ ಭಾರತವನ್ನು ಅಗ್ರ ಸ್ಥಾನದತ್ತ ಕೊಂಡೊಯ್ಯುತ್ತದೆ" ಎಂದು ಅವರು ಹೇಳಿದರು.


ಮತ್ತೆ ಮಹತ್ವಾಕಾಂಕ್ಷೆಯ ಸಮಾಜದ ಬಗ್ಗೆ ತಮ್ಮ ಸ್ವಾತಂತ್ರ್ಯ ದಿನದ ಘೋಷಣೆಯನ್ನು ಉಲ್ಲೇಖಿಸಿದ ಪ್ರಧಾನಿ, ಈ ಮಹತ್ವಾಕಾಂಕ್ಷೆಯ ಸಮಾಜವು ಮುಂಬರುವ 25 ವರ್ಷಗಳಲ್ಲಿ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು. ಈ ಸಮಾಜದ ಆಕಾಂಕ್ಷೆಗಳು, ಕನಸುಗಳು ಮತ್ತು ಸವಾಲುಗಳು ನವೋದ್ಯಮಿಗಳಿಗೆ ಅನೇಕ ಅವಕಾಶಗಳನ್ನು ತಂದುಕೊಡುತ್ತವೆ ಎಂದರು. 


ಕಳೆದ 7-8 ವರ್ಷಗಳಲ್ಲಿ ದೇಶವು ಒಂದರ ನಂತರ ಒಂದು ಕ್ರಾಂತಿಯ ಮೂಲಕ ವೇಗವಾಗಿ ಪ್ರಗತಿ ಸಾಧಿಸುತ್ತಿದೆ ಎಂದು ಪ್ರಧಾನಿ ಹೇಳಿದರು. “ಇಂದು ಭಾರತದಲ್ಲಿ ಮೂಲಸೌಕರ್ಯ ಕ್ರಾಂತಿ ನಡೆಯುತ್ತಿದೆ. ಭಾರತದಲ್ಲಿಂದು ಆರೋಗ್ಯ ಕ್ಷೇತ್ರದ ಕ್ರಾಂತಿ ನಡೆಯುತ್ತಿದೆ. ಭಾರತದಲ್ಲಿ ಇಂದು ಡಿಜಿಟಲ್ ಕ್ರಾಂತಿ ನಡೆಯುತ್ತಿದೆ. ಭಾರತದಲ್ಲಿ ಇಂದು ತಂತ್ರಜ್ಞಾನ ಕ್ರಾಂತಿಯಾಗುತ್ತಿದೆ. ಭಾರತದಲ್ಲಿಂದು ಪ್ರತಿಭಾ ಕ್ರಾಂತಿ ನಡೆಯುತ್ತಿದೆ” ಎಂದು ಶ್ರೀ ನರೇಂದ್ರ ಮೋದಿ ತಿಳಿಸಿದರು. ಇಂದು ಪ್ರತಿಯೊಂದು ಕ್ಷೇತ್ರವನ್ನು ಆಧುನಿಕರಣಗೊಳಿಸುವತ್ತ ಗಮನ ಹರಿಸಲಾಗಿದೆ ಎಂದರು.


ಪ್ರತಿದಿನ ಹೊಸ ಕ್ಷೇತ್ರಗಳು ಮತ್ತು ಸವಾಲುಗಳು ನವೀನ ಪರಿಹಾರಗಳನ್ನು ಕೇಳುತ್ತಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಕೃಷಿ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ನವೋದ್ಯಮಿಗಳಿಗೆ ಕರೆ ನೀಡಿದರು. ಪ್ರತಿ ಹಳ್ಳಿಯಲ್ಲಿ ಆಪ್ಟಿಕಲ್ ಫೈಬರ್ ಮತ್ತು 5ಜಿ ಬಿಡುಗಡೆ, ದಶಕದ ಅಂತ್ಯದ ವೇಳೆಗೆ 6ಜಿ ಗೆ ತಯಾರಿ ಮತ್ತು ಗೇಮಿಂಗ್ ಪರಿಸರ ವ್ಯವಸ್ಥೆಯ ಪ್ರಚಾರದಂತಹ ಉಪಕ್ರಮಗಳ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಅವರು ಯುವ ನವೋದ್ಯಮಿಗಳಿಗೆ ಕರೆ ನೀಡಿದರು. ಭಾರತೀಯ ಆವಿಷ್ಕಾರಗಳು ಯಾವಾಗಲೂ ಅತ್ಯಂತ ಸ್ಪರ್ಧಾತ್ಮಕ, ಕೈಗೆಟುಕುವ, ಸುಸ್ಥಿರ, ಸುರಕ್ಷಿತ ಮತ್ತು ವಿಸ್ತೃತ ಪರಿಹಾರಗಳನ್ನು ಒದಗಿಸುತ್ತವೆ ಎಂದು ಅವರು ಹೇಳಿದರು. ಹಾಗಾಗಿಯೇ ಇಡೀ ವಿಶ್ವ ಭಾರತದತ್ತ ಭರವಸೆಯಿಂದ ನೋಡುತ್ತಿದೆ ಎಂದರು.  


ಭಾರತದಲ್ಲಿ ನಾವೀನ್ಯತೆಯ ಸಂಸ್ಕೃತಿಯನ್ನು ವೃದ್ಧಿಸಲು, ನಾವು ಸಾಮಾಜಿಕ ಬೆಂಬಲ ಮತ್ತು ಸಾಂಸ್ಥಿಕ ಬೆಂಬಲ ಎಂಬ ಎರಡು ವಿಷಯಗಳತ್ತ ನಿರಂತರ ಗಮನ ಹರಿಸಬೇಕು ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು. ಸಮಾಜದಲ್ಲಿ ಆವಿಷ್ಕಾರವನ್ನು ವೃತ್ತಿಯಾಗಿ ಸ್ವೀಕರಿಸುವುದು ಹೆಚ್ಚಿದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ನಾವು ಹೊಸ ಆಲೋಚನೆಗಳು ಮತ್ತು ಮೂಲ ಚಿಂತನೆಯನ್ನು ಒಪ್ಪಿಕೊಳ್ಳಬೇಕು ಎಂದು ಪ್ರಧಾನಿ ಪ್ರಮುಖವಾಗಿ ಒತ್ತಿ ಹೇಳಿದರು. "ಸಂಶೋಧನೆ ಮತ್ತು ನಾವೀನ್ಯತೆಯು ಕೆಲಸ ಮಾಡುವ ವಿಧಾನದಿಂದ ಜೀವನ ವಿಧಾನಕ್ಕೆ ಪರಿವರ್ತನೆಯಾಗಬೇಕು" ಎಂದು ಪ್ರಧಾನಮಂತ್ರಿ ಹೇಳಿದರು.


ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ನಾವೀನ್ಯತೆಗೆ ಭದ್ರ ಬುನಾದಿಯನ್ನು ಸೃಷ್ಟಿಸುವ ನೀಲನಕ್ಷೆ ಇದೆ ಎಂದು ಪ್ರಧಾನಮಂತ್ರಿ ಹೇಳಿದರು. ಅಟಲ್ ಚಿಂತನಾ ಪ್ರಯೋಗಾಲಯಗಳು ಮತ್ತು ಐ-ಕ್ರಿಯೇಟ್ ಪ್ರತಿ ಹಂತದಲ್ಲೂ ಹೊಸತನವನ್ನು ಉತ್ತೇಜಿಸುತ್ತಿವೆ. 21ನೇ ಶತಮಾನದ ಇಂದಿನ ಭಾರತ ತನ್ನ ಯುವಶಕ್ತಿಯಲ್ಲಿ ಸಂಪೂರ್ಣ ವಿಶ್ವಾಸವರಿಸಿ ಮುನ್ನಡೆಯುತ್ತಿದೆ ಎಂದು ಪ್ರಧಾನಮಂತ್ರಿ ಪ್ರಸ್ತಾಪಿಸಿದರು. ಅದರ ಪರಿಣಾಮವಾಗಿ ಇಂದು ನಾವೀನ್ಯತೆ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕ ಹೆಚ್ಚಾಗಿದೆ ಎಂದು ಅವರು ಪ್ರಮುಖವಾಗಿ ಪ್ರಸ್ತಾಪ ಮಾಡಿದರು. ಕಳೆದ 8 ವರ್ಷಗಳಲ್ಲಿ ಪೇಟೆಂಟ್‌ಗಳ ಸಂಖ್ಯೆ 7 ಪಟ್ಟು ಹೆಚ್ಚಾಗಿದೆ. ಯುನಿಕಾರ್ನ್ ಗಳ ಸಂಖ್ಯೆ ಕೂಡ 100 ದಾಟಿದೆ ಎಂದು ಪ್ರಧಾನಮಂತ್ರಿ ಹೇಳಿದರು.  
ಇಂದಿನ ಯುವ ಪೀಳಿಗೆಗಳು ಸಮಸ್ಯೆಗೆ ತ್ವರಿತ ಮತ್ತು ಸ್ಮಾರ್ಟ್ ಪರಿಹಾರಗಳೊಂದಿಗೆ ಮುಂದೆ ಬರುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಇಂತಹ ಹ್ಯಾಕಥಾನ್‌ಗಳ ಬಳಸಿಕೊಂಡು ಯುವ ಪೀಳಿಗೆಯು ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಮತ್ತು ಯುವಕರು, ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳ ಸಹಯೋಗದ ಮನೋಭಾವವು ‘ಸಬ್ ಕಾ ಪ್ರಯಾಸ್’ಗೆ ಉತ್ತಮ ಉದಾಹರಣೆಯಾಗಿದೆ ಎಂದು ಅವರು ಹೇಳಿದರು.
 
ಹಿನ್ನೆಲೆ: 


ದೇಶದಲ್ಲಿ ವಿಶೇಷವಾಗಿ ಯುವಜನರಲ್ಲಿ ನಾವೀನ್ಯತೆಯ ಮನೋಭಾವ ಉತ್ತೇಜಿಸಲು ಪ್ರಧಾನಿ ಅವರು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಆ ದೂರದೃಷ್ಟಿಯನ್ನು ಮುಂದಿಟ್ಟುಕೊಂಡು, ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ (ಎಸ್ ಐಎಚ್ ) ಅನ್ನು 2017 ರಲ್ಲಿ ಆರಂಭಿಸಲಾಯಿತು. ಸಮಾಜ, ಸಂಘ ಸಂಸ್ಥೆಗಳು ಮತ್ತು ಸರ್ಕಾರದ ಗಂಭೀರ ಸಮಸ್ಯೆಗಳನ್ನು ಪರಿಹರಿಸಲು ವಿದ್ಯಾರ್ಥಿಗಳಿಗೆ ವೇದಿಕೆಯನ್ನು ಒದಗಿಸಲು ಎಸ್ಐಎಚ್ ರಾಷ್ಟ್ರವ್ಯಾಪಿ ನಡೆಯುವ ಉಪಕ್ರಮವಾಗಿದೆ. ಇದು ವಿದ್ಯಾರ್ಥಿಗಳಲ್ಲಿ ಉತ್ಪನ್ನ ನಾವೀನ್ಯತೆ, ಸಮಸ್ಯೆ-ಪರಿಹರಿಸುವ ಮತ್ತು ಚೌಕಟ್ಟಿನ ಹೊರಗೆ ಚಿಂತನೆ ನಡೆಸುವ ಸಂಸ್ಕೃತಿಯನ್ನು ಬೆಳೆಸುವ ಗುರಿಯನ್ನು ಹೊಂದಿದೆ.
ಎಸ್ ಐಎಚ್ ಗಾಗಿ ನೋಂದಾಯಿಸಲಾದ ತಂಡಗಳ ಸಂಖ್ಯೆಯು ಮೊದಲ ಆವೃತ್ತಿಯಲ್ಲಿ ಸುಮಾರು 7500ರಷ್ಟಿತ್ತು, ಇದೀಗ ನಡೆಯುತ್ತಿರುವ ಐದನೇ ಆವೃತ್ತಿಯಲ್ಲಿ ಸುಮಾರು 29,600ಕ್ಕೆ ಅಂದರೆ ನಾಲ್ಕು ಪಟ್ಟು ಏರಿಕೆ ಕಂಡಿರುವುದು ಎಸ್ಐಎಚ್ ನ ಬೆಳೆಯುತ್ತಿರುವ ಜನಪ್ರಿಯತೆ ತೋರುತ್ತದೆ. ಈ ವರ್ಷ 15,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಮಾರ್ಗದರ್ಶಕರು ಎಸ್ಐಎಚ್ 2022 ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸಲು 75 ನೋಡಲ್ ಕೇಂದ್ರಗಳಿಗೆ ಪ್ರಯಾಣಿಸುತ್ತಿದ್ದಾರೆ. 2900 ಶಾಲೆಗಳು ಮತ್ತು 2200 ಉನ್ನತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಅಂತಿಮ ಹಂತದಲ್ಲಿ 53 ಕೇಂದ್ರ ಸಚಿವಾಲಯಗಳ 476 ಸಮಸ್ಯೆಗಳಿಗೆ ಪರಿಹಾರವನ್ನು ನಿರ್ವಹಿಸುತ್ತಾರೆ. ಇದರಲ್ಲಿ ದೇವಾಲಯದ ಶಾಸನಗಳ ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ (ಒಸಿಆರ್) ಮತ್ತು ದೇವನಾಗರಿ ಲಿಪಿಗಳಲ್ಲಿನ ಅನುವಾದಗಳು, ಕೋಲ್ಡ್ ಸಪ್ಲೈ ಚೈನ್‌ನಲ್ಲಿ ಹಾಳಾಗುವ ಆಹಾರ ಪದಾರ್ಥಗಳಿಗಾಗಿ ಐಒಟಿ-ಆಧರಿಸಿದ ಅಪಾಯದ ಮೇಲ್ವಿಚಾರಣಾ ವ್ಯವಸ್ಥೆ, ಹೆಚ್ಚಿನ ರೆಸಲ್ಯೂಶನ್ 3ಡಿ ಮಾದರಿಯ ಭೂಪ್ರದೇಶ, ಮೂಲಸೌಕರ್ಯ ಮತ್ತು ವಿಪತ್ತು ಸಂಭವಿಸಿದ ಪ್ರದೇಶಗಳಲ್ಲಿ ರಸ್ತೆಗಳ ಸ್ಥಿತಿಗತಿ  ಇತ್ಯಾದಿ ಸಮಸ್ಯೆಗಳು ಸೇರಿವೆ. 
ಶಾಲಾ ವಿದ್ಯಾರ್ಥಿಗಳಲ್ಲಿ ಹೊಸತನದ ಸಂಸ್ಕೃತಿಯನ್ನು ನಿರ್ಮಿಸಲು ಮತ್ತು ಶಾಲಾ ಹಂತದಲ್ಲಿ ಸಮಸ್ಯೆಗಳನ್ನು ಪರಿಹರಿಸುವ ಮನೋಭಾವ ಬೆಳೆಸಲು ಈ ವರ್ಷ, ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್-ಜೂನಿಯರ್ ಅನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ.

 

 

******



(Release ID: 1854634) Visitor Counter : 184