ಹಣಕಾಸು ಸಚಿವಾಲಯ

163 ನೇ ಆದಾಯ ತೆರಿಗೆ ದಿನ: ರಾಷ್ಟ್ರ ನಿರ್ಮಾಣದ ಕಡೆಗೊಂದು ಪಯಣ

Posted On: 24 JUL 2022 4:53PM by PIB Bengaluru

ಆದಾಯ ತೆರಿಗೆ ದಿನದ 163 ನೇ ವಾರ್ಷಿಕೋತ್ಸವವನ್ನು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಮತ್ತು ಭಾರತದಾದ್ಯಂತ ಅದರ ಎಲ್ಲಾ ಕ್ಷೇತ್ರ ಕಚೇರಿಗಳು ಇಂದು ಆಚರಿಸಿದವು. ಆಚರಣೆಯ ಭಾಗವಾಗಿ, ಕ್ಷೇತ್ರ ಘಟಕಗಳು ಹಲವಾರು ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ನಡೆಸಿದವು. ರಾಷ್ಟ್ರಕ್ಕೆ ಅವರ ಕೊಡುಗೆಯನ್ನು ಗುರುತಿಸುವ ತೆರಿಗೆದಾರರಿಗೆ ಔಟ್ರೀಚ್‌(ಜನ ಸಂಪರ್ಕ) ಕಾರ್ಯಕ್ರಮಗಳು, ತೆರಿಗೆದಾರರಿಗೆ ಸನ್ಮಾನ ಕಾರ್ಯಕ್ರಮಗಳು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಕಂಪ್ಯೂಟರ್‌ಗಳಂತಹ ಸಂಪನ್ಮೂಲಗಳನ್ನು ಮೇಲ್ದರ್ಜೆಗೇರಿಸಲು ಕೊಡುಗೆ ನೀಡುವುದು, ಇಲಾಖಾ ನೌಕರರ ಕೊಡುಗೆಗಳಿಂದ ಅನಾಥಾಶ್ರಮಗಳು / ವೃದ್ಧಾಶ್ರಮಗಳಿಗೆ ಸ್ವಯಂಪ್ರೇರಿತ ಟೋಕನ್‌ ದೇಣಿಗೆ, ರಕ್ತದಾನ ಶಿಬಿರಗಳನ್ನು ಆಯೋಜಿಸುವುದು, ವೈದ್ಯಕೀಯ ಪರೀಕ್ಷೆ ಮತ್ತು ಕೋವಿಡ್‌-ಲಸಿಕಾ ಶಿಬಿರಗಳನ್ನು ಆಯೋಜಿಸುವುದು ಮುಂತಾದ ಕಾರ್ಯಕ್ರಮಗಳನ್ನು ಕ್ಷೇತ್ರ ಘಟಕಗಳು ನಡೆಸಿದವು. ಗಿಡಗಳನ್ನು ನೆಡುವುದು ಮತ್ತು ಸ್ವಚ್ಛತಾ ಅಭಿಯಾನಗಳು ಕೂಡ ಇವುಗಳಲ್ಲಿ ಸೇರಿವೆ. ಇದಲ್ಲದೆ, ಹಾಫ್‌ ಮ್ಯಾರಥಾನ್‌, ಸೈಕ್ಲೋಥಾನ್‌, ಮಕ್ಕಳು ಮತ್ತು ಯುವ ವಯಸ್ಕರಿಗೆ ತೆರಿಗೆ ಸಾಕ್ಷರತೆಯ ಬೋರ್ಡ್‌ ಆಟಗಳ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ವ್ಯಂಗ್ಯಚಿತ್ರ ಪ್ರದರ್ಶನಗಳ ಉದ್ಘಾಟನೆ ಮತ್ತು ಅಂತಹ ಇತರ ಕಾರ್ಯಕ್ರಮಗಳು ಸಹ ನಡೆದವು.

 

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್‌ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್‌ ಅವರು ಆದಾಯ ತೆರಿಗೆ ಇಲಾಖೆಗೆ ನೀಡಿದ ಸಂದೇಶದಲ್ಲಿ, ಇತ್ತೀಚಿನ ವರ್ಷಗಳಲ್ಲಿ ಸರ್ಕಾರವು ಪರಿಚಯಿಸಿದ ಸುಧಾರಣೆಗಳು ವಿಶ್ವಾಸ-ಆಧಾರಿತ ತೆರಿಗೆ ವ್ಯವಸ್ಥೆಯನ್ನು ಖಚಿತಪಡಿಸಿವೆ ಎಂದು ಗಮನಿಸಿದರು. ಸುಧಾರಿತ ತೆರಿಗೆ ಸಂಗ್ರಹದ ಪ್ರವೃತ್ತಿ ಮತ್ತು ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಯ ಸಂಖ್ಯೆಯಲ್ಲಿನ ಹೆಚ್ಚಳದಿಂದ ತೆರಿಗೆದಾರರು ಈ ವಿಶ್ವಾಸ-ಆಧಾರಿತ ವಿಧಾನವನ್ನು ಸಮರ್ಥಿಸಿದ್ದಾರೆ ಎಂದು ಹಣಕಾಸು ಸಚಿವರು ಗುರುತಿಸಿದರು. ನೀತಿ ಸುಧಾರಣೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಕ್ಕಾಗಿ ಮತ್ತು ತೆರಿಗೆ-ಕೇಂದ್ರಿತ ಸಂಸ್ಥೆಯಾಗಿ ತನ್ನನ್ನು ತಾನು ಪರಿಣಾಮಕಾರಿಯಾಗಿ ಪುನರುಜ್ಜೀವನಗೊಳಿಸಿದ್ದಕ್ಕಾಗಿ ಶ್ರೀಮತಿ ನಿರ್ಮಲಾ ಸೀತಾರಾಮನ್‌ ಅವರು, ಆದಾಯ ತೆರಿಗೆ ಇಲಾಖೆಯನ್ನು ಶ್ಲಾಘಿಸಿದರು. ಕಳೆದ ಹಣಕಾಸು ವರ್ಷದಲ್ಲಿ 14 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಆದಾಯ ಸಂಗ್ರಹವನ್ನು ಸಾಧಿಸಿದ್ದಕ್ಕಾಗಿ ಹಣಕಾಸು ಸಚಿವರು ಇಲಾಖೆಯನ್ನು ಶ್ಲಾಘಿಸಿದರು ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲೂ ಇಲಾಖೆ ಈ ವೇಗವನ್ನು ಕಾಯ್ದುಕೊಳ್ಳುವುದನ್ನು ಮುಂದುವರಿಸುತ್ತದೆ ಎಂದು ಆಶಿಸಿದರು.

 

ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಶ್ರೀ ಪಂಕಜ್‌ ಚೌಧರಿ ಅವರು ತಮ್ಮ ಸಂದೇಶದಲ್ಲಿ, ತೆರಿಗೆ ಇಲಾಖೆಯ ಜವಾಬ್ದಾರಿಯು ಕೇವಲ ದಕ್ಷ ಮತ್ತು ಪರಿಣಾಮಕಾರಿ ತೆರಿಗೆ ಆಡಳಿತಕ್ಕೆ ಸೀಮಿತವಾಗಿರದೆ, ಪ್ರಾಮಾಣಿಕ ತೆರಿಗೆದಾರರನ್ನು ಗೌರವಿಸಲು ಮತ್ತು ಉತ್ತಮ ತೆರಿಗೆ ಪಾವತಿ ಸೌಲಭ್ಯವನ್ನು ಒದಗಿಸಲು ಸಹ ವಿಸ್ತಾರಗೊಂಡಿರುವುದನ್ನು ಗಮನಿಸಿದ್ದಾರೆ. ಇಂದಿನ ದಿನಗಳಲ್ಲಿ ಜನರ ಅಗತ್ಯಗಳು ಮತ್ತು ಆಕಾಂಕ್ಷೆಗಳಿಗೆ ಅನುಗುಣವಾಗಿ ಇಲಾಖೆ ತನ್ನನ್ನು ತಾನು ಅಳವಡಿಸಿಕೊಂಡಿದೆ ಮತ್ತು ಅದರ ಕಾರ್ಯನಿರ್ವಹಣೆಯಲ್ಲಿಪಾರದರ್ಶಕ, ಅತಿಕ್ರಮಣರಹಿತ ಮತ್ತು ತೆರಿಗೆದಾರ ಸ್ನೇಹಿಯಾಗಿದೆ ಎಂದು ಅವರು ಶ್ಲಾಘಿಸಿದರು.

 

ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಡಾ. ಭಗವತ್‌ ಕಿಶನ್‌ ರಾವ್‌ ಕರಾಡ್‌ ಅವರು, ತಮ್ಮ ಸಂದೇಶದಲ್ಲಿ, ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಆದಾಯ ತೆರಿಗೆ ಇಲಾಖೆ ಪ್ರಮುಖ ಪಾತ್ರ ವಹಿಸಿದೆ ಎಂದು ಗಮನಿಸಿದ್ದಾರೆ. ತೆರಿಗೆದಾರರು ಮತ್ತು ಇತರ ಪಾಲುದಾರರೊಂದಿಗಿನ ತನ್ನ ಸಂಬಂಧವನ್ನು ಮರುವ್ಯಾಖ್ಯಾನಿಸುವ ಸಾಮರ್ಥ್ಯ‌ವನ್ನು ಹೊಂದಿರುವ ಹಲವಾರು ದೂರಗಾಮಿ ಸುಧಾರಣೆಗಳನ್ನು ಜಾರಿಗೆ ತಂದಿದ್ದಕ್ಕಾಗಿ ಅವರು ಇಲಾಖೆಯನ್ನು ಶ್ಲಾಘಿಸಿದರು.

 

ಕಂದಾಯ ಕಾರ್ಯದರ್ಶಿ ಶ್ರೀ ತರುಣ್‌ ಬಜಾಜ್‌ ಅವರು, ತಮ್ಮ ಸಂದೇಶದಲ್ಲಿ, ಸಕಾರಾತ್ಮಕ ಬದಲಾವಣೆಯನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ತೆರಿಗೆದಾರರಿಗೆ ಕಾಲಮಿತಿಯೊಳಗೆ ಸೇವೆಗಳನ್ನು ತಲುಪಿಸುವಲ್ಲಿ ತನ್ನನ್ನು ತಾನು ಬದ್ಧವಾಗಿಟ್ಟುಕೊಳ್ಳುವ ಮೂಲಕ ತನ್ನನ್ನು ಸಮರ್ಥ ಸಂಸ್ಥೆ ಎಂದು ಸಾಬೀತುಪಡಿಸಿದ್ದಕ್ಕಾಗಿ ಇಲಾಖೆಯನ್ನು ಶ್ಲಾಘಿಸಿದರು. ಇತ್ತೀಚಿನ ಬೆಳವಣಿಗೆಗಳೊಂದಿಗೆ ತನ್ನನ್ನು ತಾನು ನವೀಕರಿಸಿ ಕೊಂಡಿರುವುದಕ್ಕೆ ಮತ್ತು ಅಕ್ರಮ ಆದಾಯ ಗಳಿಸಲು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮತ್ತು ದತ್ತಾಂಶ ವಿಶ್ಲೇಷಣಾ ಸಾಧನಗಳಂತಹ ಇತ್ತೀಚಿನ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದಕ್ಕಾಗಿ ಅವರು ಇಲಾಖೆಯನ್ನು ಹೊಗಳಿದರು. ಇಲಾಖೆಯು ಆಯೋಜಿಸುವ ವಿವಿಧ ತೆರಿಗೆದಾರರ ಔಟ್ರೀಚ್‌ (ಜನ ಸಂಪರ್ಕ) ಕಾರ್ಯಕ್ರಮಗಳು ತೆರಿಗೆದಾರರು ಮತ್ತು ಇಲಾಖೆಯ ನಡುವೆ ಪರಸ್ಪರ ನಂಬಿಕೆ ಮತ್ತು ಗೌರವದ ವಾತಾವರಣವನ್ನು ಸೃಷ್ಟಿಸುವಲ್ಲಿ ಬಹಳ ದೂರ ಹೋಗುತ್ತವೆ ಎಂದು ತಿಳಿಸಿದ್ದಾರೆ.

 

ಸಿಬಿಡಿಟಿಯ ಅಧ್ಯಕ್ಷ ರಾದ ಶ್ರೀ ನಿತಿನ್‌ ಗುಪ್ತಾ ಅವರು, ತಮ್ಮ ಸಂದೇಶದಲ್ಲಿ, 2021-22ನೇ ಹಣಕಾಸು ವರ್ಷದಲ್ಲಿ14.09 ಲಕ್ಷ ಕೋಟಿ ರೂ.ಗಳ ಅತಿ ಹೆಚ್ಚು ನಿವ್ವಳ ಸಂಗ್ರಹವನ್ನು ದಾಖಲಿಸಿದ್ದಕ್ಕಾಗಿ ಇಲಾಖೆಯನ್ನು ಶ್ಲಾಘಿಸುತ್ತಾ, ಇಲಾಖಾ ಸಿಬ್ಬಂದಿಗೆ ಸಾಧನೆಗಳು, ಗೌರವಗಳನ್ನು ನೆನೆಯುತ್ತಾ ಸುಮ್ಮನಾಗಿ ಬಿಡಬೇಡಿ. ಕಷ್ಟ ಪಟ್ಟು ಕೆಲಸ ಮಾಡುವುದನ್ನು ಮುಂದುವರಿಸುವಂತೆ ಪ್ರೇರೇಪಿಸಿದರು. ತೆರಿಗೆದಾರರ ಸನ್ನದಿನ ನಿಜವಾದ ಸ್ಫೂರ್ತಿಯಲ್ಲಿ ತೆರಿಗೆದಾರರ ಕುಂದುಕೊರತೆಗಳನ್ನು ತ್ವರಿತವಾಗಿ ಪರಿಹರಿಸುವುದು ಮೊದಲ ಆದ್ಯತೆಯ ಕ್ಷೇತ್ರವಾಗಿ ಉಳಿಯುತ್ತದೆ ಎಂದು ಅವರು ಹೇಳಿದರು. ಇಲಾಖೆಯು ಈ ಹಿಂದೆ ಮಾಡಿದಂತೆ, ಸರಿಯಾದ ಮೌಲ್ಯಗಳು ಮತ್ತು ನೈತಿಕತೆಯಿಂದ ಬಲಪಡಿಸಲ್ಪಟ್ಟ ಅದೇ ಸೇವಾ ಆಧಾರಿತ ವಿಧಾನದೊಂದಿಗೆ ಮುಂದುವರಿಯುತ್ತದೆ ಎಂದು ಅವರು ಆಶಿಸಿದರು. ಸಿಬಿಡಿಟಿ ಅಧ್ಯಕ್ಷರು ಇಲಾಖೆಯ ಯೂಟ್ಯೂಬ್‌ ಚಾನೆಲ್‌ನಲ್ಲಿ ಪ್ರಸಾರವಾದ ‘ಸಂವಾದ್‌’ ಮೂಲಕ ತೆರಿಗೆದಾರರು ಮತ್ತು ಮಧ್ಯಸ್ಥಗಾರರನ್ನು ಉದ್ದೇಶಿಸಿ ಮಾತನಾಡಿದರು.

 

ಆದಾಯ ತೆರಿಗೆ ದಿನದ ಆಚರಣೆಯು ಇಲಾಖಾ ಸಿಬ್ಬಂದಿಗೆ ರಾಷ್ಟ್ರದ ಸೇವೆಗಾಗಿ ಇಲ್ಲಿಯವರೆಗೆ ನಡೆದ ಪ್ರಯಾಣವನ್ನು ಹಿಂತಿರುಗಿ ನೋಡುವ ಮತ್ತು ರಾಷ್ಟ್ರದ ಬೆಳವಣಿಗೆಗೆ ಕೊಡುಗೆ ನೀಡಲು ತಮ್ಮನ್ನು ತಾವು ಸಮರ್ಪಿಸಿಕೊಳ್ಳಲು ಒಂದು ಸಂದರ್ಭವಾಗಿ ಕಾರ್ಯನಿರ್ವಹಿಸಿತು.

 

***********



(Release ID: 1844470) Visitor Counter : 161