ಪ್ರಧಾನ ಮಂತ್ರಿಯವರ ಕಛೇರಿ

ಪಾವಗಡ ಬೆಟ್ಟದಲ್ಲಿ ಮರುಅಭಿವೃದ್ಧಿ ಮಾಡಲಾದ ಶ್ರೀ ಕಾಳಿಕಾ ಮಾತಾ ದೇವಾಲಯ ಪ್ರಧಾನ ಮಂತ್ರಿ ಅವರಿಂದ ಉದ್ಘಾಟನೆ.


ಶತಮಾನಗಳು ಬದಲಾದರೂ, ಶಕೆಗಳು ಬದಲಾದರೂ ನಂಬಿಕೆ ಶಾಶ್ವತ ಎಂಬುದಕ್ಕೆ ಈ ’ಶಿಖರ ಧ್ವಜ’ ಒಂದು ಸಂಕೇತ”



“ಇಂದು ನವ ಭಾರತವು ಆಧುನಿಕ ಆಶೋತ್ತರಗಳ ಜೊತೆಯಲ್ಲಿ ತನ್ನ ಪ್ರಾಚೀನ ಗುರುತಿಸುವಿಕೆಯೊಂದಿಗೆ ಹೆಮ್ಮೆಯಿಂದ ಬದುಕುತ್ತಿದೆ”



“ ಹೆಚ್ಚು ಶಕ್ತಿ, ತ್ಯಾಗ ಮತ್ತು ಅರ್ಪಣಾ ಭಾವದೊಂದಿಗೆ ಜನಸೇವಕನಾಗಿ ದೇಶದ ಜನತೆಯ ಸೇವೆ ಮಾಡುವುದನ್ನು ಮುಂದುವರೆಸಲು ನನಗೆ ಆಶೀರ್ವಾದ ಮಾಡು ಮಾತೆ”

"ಗರ್ವಿ ಗುಜರಾತ್ ಎಂಬುದು ಭಾರತದ ಹೆಮ್ಮೆ ಮತ್ತು ವೈಭವಕ್ಕೆ ಸಮಾನಾರ್ಥಕವಾಗಿದೆ"

“ಪಾವಗಡವು ಭಾರತದ ಚಾರಿತ್ರಿಕ ವೈವಿಧ್ಯತೆಯೊಂದಿಗೆ ವಿಶ್ವ ಸೌಹಾರ್ದತೆಯ ಕೇಂದ್ರವಾಗಿದೆ”

Posted On: 18 JUN 2022 12:05PM by PIB Bengaluru

ಪಾವಗಡ ಬೆಟ್ಟದಲ್ಲಿರುವ ಶ್ರೀ ಕಾಳಿಕಾ ಮಾತೆಯ ಮರುಅಭಿವೃದ್ಧಿ ಮಾಡಲಾದ ಮಂದಿರವನ್ನು ಪ್ರಧಾನ ಮಂತ್ರಿ ಅವರು ಉದ್ಘಾಟಿಸಿದರು. ಇದು ಈ ಪ್ರದೇಶದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತಿದೆ. ದೇವಾಲಯದ ಮರುಅಭಿವೃದ್ಧಿಯನ್ನು 2 ಹಂತಗಳಲ್ಲಿ ಮಾಡಲಾಗಿದೆ. ಮೊದಲ ಹಂತದ ಮರುಅಭಿವೃದ್ಧಿಯ ಉದ್ಘಾಟನೆಯನ್ನು ಈ ವರ್ಷದ ಆರಂಭದಲ್ಲಿ, ಏಪ್ರಿಲ್‌ನಲ್ಲಿ ಪ್ರಧಾನ ಮಂತ್ರಿಯವರು ನೆರವೇರಿಸಿದ್ದರು. ಇಂದಿನ ಕಾರ್ಯಕ್ರಮದಲ್ಲಿ ಉದ್ಘಾಟನೆಗೊಂಡ ಎರಡನೇ ಹಂತದ ಮರುಅಭಿವೃದ್ಧಿಯ ಶಂಕುಸ್ಥಾಪನೆಯನ್ನು 2017 ರಲ್ಲಿ ಪ್ರಧಾನ ಮಂತ್ರಿಯವರು ನೆರವೇರಿಸಿದ್ದರು. ಇದರಲ್ಲಿ ದೇವಾಲಯದ ನೆಲೆಗಟ್ಟು ವಿಸ್ತರಣೆ ಮತ್ತು ಮೂರು ಹಂತಗಳಲ್ಲಿ 'ಪರಿಸರ' ಅಭಿವೃದ್ಧಿ, ಬೀದಿ ದೀಪಗಳು, ಸಿಸಿಟಿವಿ ಮುಂತಾದ ಸೌಕರ್ಯ ಹಾಗು ವ್ಯವಸ್ಥೆಗಳ ಅಳವಡಿಕೆ ಸೇರಿವೆ.

 

ದೇವಾಲಯದ ಕಾರ್ಯಕ್ರಮದಲ್ಲಿ ಭಾಗವಹಿಸುವ ತಮ್ಮ ಅದೃಷ್ಟ ಮತ್ತು ಭಾಗ್ಯಕ್ಕಾಗಿ ಪ್ರಧಾನ ಮಂತ್ರಿ ಅವರು ಕೃತಜ್ಞತೆ ಸಲ್ಲಿಸಿದರು. 5 ಶತಮಾನಗಳ ನಂತರ ಮತ್ತು ಸ್ವಾತಂತ್ರ್ಯದ 75 ವರ್ಷಗಳ ನಂತರ ದೇವಾಲಯದ ಮೇಲೆ ಪವಿತ್ರ ಧ್ವಜವಾದ ‘ಧ್ವಜ’ ವನ್ನು ಹಾರಿಸಿದ ಕ್ಷಣಗಳ ಮಹತ್ವವನ್ನು ಅವರು ಒತ್ತಿ ಹೇಳಿದರು. “ಶತಮಾನಗಳ ನಂತರ ಇಂದು ಮತ್ತೊಮ್ಮೆ ಪಾವಗಡ ದೇವಸ್ಥಾನದ ಮೇಲ್ಭಾಗದಲ್ಲಿ ಧ್ವಜಾರೋಹಣ ಮಾಡಲಾಗಿದೆ. ಈ ‘ಶಿಖರ ಧ್ವಜ’ವು ನಮ್ಮ ನಂಬಿಕೆ ಮತ್ತು ಆಧ್ಯಾತ್ಮಿಕತೆಯ ಸಂಕೇತವಾಗಿರುವುದು ಮಾತ್ರವಲ್ಲದೆ ಶತಮಾನಗಳು ಬದಲಾದರೂ, ಯುಗಗಳು ಬದಲಾದರೂ, ನಂಬಿಕೆ ಶಾಶ್ವತವಾಗಿ ಉಳಿಯುತ್ತದೆ ಎಂಬುದಕ್ಕೂ ಸಂಕೇತವಾಗಿದೆ” ಎಂದವರು ನುಡಿದರು. . ಮುಂಬರುವ 'ಗುಪ್ತ ನವರಾತ್ರಿ'ಗೆ ಮುಂಚಿತವಾಗಿ ಈ ಮರುಅಭಿವೃದ್ಧಿ ಆಗಿರುವುದು 'ಶಕ್ತಿ' ಎಂದಿಗೂ ಮಸುಕಾಗುವುದಿಲ್ಲ ಅಥವಾ ಕಣ್ಮರೆಯಾಗುವುದಿಲ್ಲ ಎಂಬುದರ ಸೂಚನೆಯಾಗಿದೆ ಎಂದವರು ಅಭಿಪ್ರಾಯಪಟ್ಟರು.

 

ಅಯೋಧ್ಯೆಯ ರಾಮ ಮಂದಿರ, ಕಾಶಿ ವಿಶ್ವನಾಥ ಧಾಮ ಮತ್ತು ಕೇದಾರ್ ಧಾಮವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು “ಇಂದು ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ವೈಭವವನ್ನು ಮರುಸ್ಥಾಪಿಸಲಾಗುತ್ತಿದೆ. ಇಂದು ನವ ಭಾರತವು ತನ್ನ ಆಧುನಿಕ ಆಶಯಗಳೊಂದಿಗೆ ತನ್ನ ಪ್ರಾಚೀನ ಗುರುತಿಸುವಿಕೆಯೊಂದಿಗೆ ಹೆಮ್ಮೆಯಿಂದ ಬದುಕುತ್ತಿದೆ” ಎಂದು ನುಡಿದರು. ನಂಬಿಕೆಯ ಕೇಂದ್ರಗಳ ಜೊತೆಗೆ ನಮ್ಮ ಪ್ರಗತಿಯ ಹೊಸ ಸಾಧ್ಯತೆಗಳು ಮೂಡಿ ಬರುತ್ತಿವೆ ಮತ್ತು ಪಾವಗಡದ ಈ ಭವ್ಯ ದೇವಾಲಯವು ಆ ಪ್ರಯಾಣದ ಅಂಗವಾಗಿದೆ ಎಂದೂ ಅವರು ಹೇಳಿದರು. ಈ ದೇವಾಲಯವು ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್ ನ್ನು ಸಂಕೇತಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

 

ಸ್ವಾಮಿ ವಿವೇಕಾನಂದರು ಮಾ ಕಾಳಿ ಅವರ ಆಶೀರ್ವಾದ ಪಡೆದ ನಂತರ ಸಾರ್ವಜನಿಕ ಸೇವೆಗೆ ಹೇಗೆ ತಮ್ಮನ್ನು ತೊಡಗಿಸಿಕೊಂಡರು ಎಂಬುದನ್ನು ಪ್ರಧಾನ ಮಂತ್ರಿ ಸ್ಮರಿಸಿಕೊಂಡರು. ಜನಸೇವೆ ಮಾಡುವ ಶಕ್ತಿ ನೀಡಲಿ ಎಂದು ದೇವಿಯನ್ನು ತಾನು ಬೇಡಿಕೊಂಡಿರುವುದಾಗಿ ಪ್ರಧಾನ ಮಂತ್ರಿ ಹೇಳಿದರು. “ಮಾತೆಯೇ, ಹೆಚ್ಚು ಶಕ್ತಿ, ತ್ಯಾಗ ಮತ್ತು ಸಮರ್ಪಣೆಯೊಂದಿಗೆ ಜನರ ಸೇವಕನಾಗಿ ದೇಶದ ಜನರಿಗೆ ಸೇವೆ ಸಲ್ಲಿಸುವುದನ್ನು ಮುಂದುವರಿಸಲು ನನಗೆ ಆಶೀರ್ವದಿಸಿ. ನನ್ನ ಜೀವನದಲ್ಲಿ ಏನೇ ಶಕ್ತಿ ಇದ್ದರೂ, ನನ್ನ ಜೀವನದಲ್ಲಿ ಏನೇ ಮೌಲ್ಯಗಳು, ಸದ್ಗುಣಗಳು ಇದ್ದರೂ ಅದನ್ನು ದೇಶದ ತಾಯಂದಿರು ಮತ್ತು ಸಹೋದರಿಯರ ಕಲ್ಯಾಣಕ್ಕಾಗಿ ಮುಡಿಪಾಗಿಡುವುದನ್ನು ಮುಂದುವರೆಸುತ್ತೇನೆ” ಎಂದು ಪ್ರಧಾನ ಮಂತ್ರಿ ಅವರು ಪ್ರಾರ್ಥನೆ ಸಲ್ಲಿಸಿದರು.

 

ಆಜಾದಿ ಕಾ ಅಮೃತ್ ಮಹೋತ್ಸವದ ಸಂದರ್ಭದ ಹಿನ್ನೆಲೆಯನ್ನು ಪ್ರಸ್ತಾಪಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ರಾಷ್ಟ್ರದ ಸ್ವಾತಂತ್ರ್ಯ ಹೋರಾಟದಲ್ಲಿ ಹಾಗೂ ಅಭಿವೃದ್ಧಿ ಪಯಣದಲ್ಲಿ ಅತ್ಯದ್ಭುತ ಕೊಡುಗೆಗಳನ್ನು ಗುಜರಾತ್ ನೀಡಿದೆ ಎಂದರು. ಗರ್ವಿ ಗುಜರಾತ್ ಎಂಬುದು ಭಾರತದ ಹೆಮ್ಮೆ ಮತ್ತು ವೈಭವಕ್ಕೆ ಸಮಾನಾರ್ಥಕವಾಗಿದೆ ಎಂದು ಅವರು ಹೇಳಿದರು. ಸೋಮನಾಥ ದೇವಾಲಯ, ಪಂಚಮಹಲ್ ಮತ್ತು ಪಾವಗಡಗಳ ವೈಭವದ ಸಂಪ್ರದಾಯ ನಮ್ಮ ಪರಂಪರೆಯ ಹೆಗ್ಗಳಿಕೆ, ಮತ್ತು ಹೆಮ್ಮೆಯ ಹಿಂದೆ ಕೆಲಸ ಮಾಡುತ್ತಿದೆ. ಇಂದು ಕಾಳಿ ಮಾತೆ ಮರುಅಭಿವೃದ್ಧಿಯನ್ನು ಪೂರ್ಣಗೊಳಿಸಿ ಧ್ವಜವನ್ನು ಹಾರಿಸುವ ಮೂಲಕ ತನ್ನ ಭಕ್ತರಿಗೆ ಶ್ರೇಷ್ಠ ಕೊಡುಗೆಯ ಆಶೀರ್ವಾದವನ್ನು ನೀಡಿದ್ದಾರೆ ಎಂದು ಅವರು ಹೇಳಿದರು. ಜೀರ್ಣೋದ್ಧಾರದಲ್ಲಿ ದೇಗುಲದ ಪುರಾತನ ಸತ್ವದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ ಎಂದರು. ದೇವಾಲಯಕ್ಕೆ ಪ್ರವೇಶ ಸುಲಭ ಸಾಧ್ಯವಾಗಿರುವುದರತ್ತ ಗಮನ ಸೆಳೆದ ಪ್ರಧಾನ ಮಂತ್ರಿ ಅವರು “ಮೊದಲು ಪಾವಗಡಕ್ಕೆ ಪ್ರಯಾಣವು ಬಹಳ ಕಷ್ಟಕರವಾಗಿತ್ತು, ಜೀವನದಲ್ಲಿ ಒಮ್ಮೆಯಾದರೂ ತಾಯಿಯ ದರ್ಶನವನ್ನು ಪಡೆಯಬೇಕು ಎಂದು ಜನರು ಹೇಳುತ್ತಿದ್ದರು. ಇಂದು ಇಲ್ಲಿ ಹೆಚ್ಚುತ್ತಿರುವ ಸೌಲಭ್ಯಗಳಿಂದ ಹಿಂದೆ ಕಷ್ಟಕರವಾಗಿದ್ದ ದರ್ಶನ ಇಂದು ಸುಲಭ ಸಾಧ್ಯವಾಗಿದೆ” ಎಂದೂ ಹೇಳಿದರು. ಶಿಸ್ತು ಕಾಯ್ದುಕೊಳ್ಳುವಂತೆ ಭಕ್ತರನ್ನು ಅವರು ಕೋರಿದರು. “ಪಾವಗಡದಲ್ಲಿ ಅಧ್ಯಾತ್ಮವಿದೆ, ಇತಿಹಾಸ, ಪ್ರಕೃತಿ, ಕಲೆ ಮತ್ತು ಸಂಸ್ಕೃತಿಯೂ ಇದೆ. ಇಲ್ಲಿ ಒಂದು ಬದಿಯಲ್ಲಿ ಮಾ ಮಹಾಕಾಳಿಯ ಶಕ್ತಿಪೀಠವಿದೆ, ಮತ್ತು ಇನ್ನೊಂದು ಬದಿಯಲ್ಲಿ ಪಾರಂಪರಿಕ ಜೈನ ದೇವಾಲಯವೂ ಇದೆ. ಅಂದರೆ ಪಾವಗಡವು ಒಂದು ರೀತಿಯಲ್ಲಿ ಭಾರತದ ಐತಿಹಾಸಿಕ ವೈವಿಧ್ಯತೆಯೊಂದಿಗೆ ವಿಶ್ವ ಸಾಮರಸ್ಯದ ಕೇಂದ್ರವಾಗಿದೆ” ಎಂದು ಪ್ರಧಾನಮಂತ್ರಿ ಹೇಳಿದರು. ಮಾತೆಯ ವಿವಿಧ ದೇವಾಲಯಗಳನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿಯವರು, ಗುಜರಾತಿಗೆ ಮಾತೆಯ ಆಶೀರ್ವಾದಗಳ ಭದ್ರತಾ ವರ್ತುಲವಿದೆ ಎಂದೂ ಹೇಳಿದರು.

 

ನಂಬಿಕೆಯ ಸ್ಥಳಗಳ ಅಭಿವೃದ್ಧಿಯೊಂದಿಗೆ ಆ ಪ್ರದೇಶಗಳಲ್ಲಿ ಪ್ರವಾಸೋದ್ಯಮ, ಉದ್ಯೋಗ ಮತ್ತು ಅಲ್ಲಿಯ ಕಲೆ ಮತ್ತು ಕರಕುಶಲತೆಯ ಬಗ್ಗೆ ಅರಿವು ಹೆಚ್ಚಾಗಿ ಹೊಸ ಅವಕಾಶಗಳು ಉದಯಿಸುತ್ತವೆ ಎಂಬುದರತ್ತ ಪ್ರಧಾನ ಮಂತ್ರಿ ಗಮನ ಸೆಳೆದರು. ದಂತಕಥೆಯಾಗಿರುವ ಸಂಗೀತ ಮಾಂತ್ರಿಕ ಬೈಜು ಬಾವಾರ ಅವರ ನಾಡು ಪಂಚಮಹಲ್ ಎಂಬುದನ್ನು ನೆನಪಿಸಿಕೊಂಡ ಪ್ರಧಾನ ಮಂತ್ರಿ ಅವರು ಎಲ್ಲೆಲ್ಲಿ ಪರಂಪರೆ ಮತ್ತು ಸಂಸ್ಕೃತಿ ಬಲಿಷ್ಟಗೊಳ್ಳುತ್ತದೆಯೋ, ಅಲ್ಲಿ ಕಲೆ ಮತ್ತು ಪ್ರತಿಭೆಯೂ ಅರಳುತ್ತದೆ ಎಂದು ಹೇಳಿದರು. ‘ಜ್ಯೋತಿರ್‌ಗ್ರಾಮ್’ ಯೋಜನೆಯನ್ನು 2006 ರಲ್ಲಿ ಚಂಪಾನೇರ್‌ನಿಂದ ಆರಂಭ ಮಾಡಿದುದನ್ನು ಪ್ರಧಾನ ಮಂತ್ರಿ ಅವರು ನೆನಪಿಸಿಕೊಂಡರು. 

 

 

*****



(Release ID: 1835143) Visitor Counter : 130