ಪ್ರಧಾನ ಮಂತ್ರಿಯವರ ಕಛೇರಿ

ಮಧ್ಯಪ್ರದೇಶ ನವೋದ್ಯಮ ಸಮಾವೇಶದಲ್ಲಿ ಮಧ್ಯಪ್ರದೇಶ ನವೋದ್ಯಮ ನೀತಿಗೆ ಚಾಲನೆ ನೀಡಿದ ಪ್ರಧಾನಮಂತ್ರಿ


" ಯುವ ಶಕ್ತಿಯಿಂದ ದೇಶದ ಅಭಿವೃದ್ಧಿಯು ಹೊಸ ವೇಗವನ್ನು ಪಡೆಯುತ್ತಿದೆ "

" 8 ವರ್ಷಗಳ ಅಲ್ಪಾವಧಿಯಲ್ಲಿ, ದೇಶದ ನವೋದ್ಯಮ ಕಥೆಯು ಭಾರಿ ಪರಿವರ್ತನೆಗೆ ಒಳಗಾಗಿದೆ "

" 2014 ರ ನಂತರ, ಸರ್ಕಾರವು ಯುವಕರ ನಾವೀನ್ಯತೆಯ ಶಕ್ತಿಯಲ್ಲಿ ನಂಬಿಕೆಯನ್ನು ಪುನಃಸ್ಥಾಪಿಸಿತು ಮತ್ತು ಅನುಕೂಲಕರ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಿದೆ "

" 7 ವರ್ಷಗಳ ಹಿಂದೆ ನವೋದ್ಯಮ ಭಾರತವನ್ನು ಪ್ರಾರಂಭಿಸುವುದು ಆಲೋಚನೆಗಳನ್ನು ನಾವೀನ್ಯತೆಯಾಗಿ ಪರಿವರ್ತಿಸುವಲ್ಲಿ ಮತ್ತು ಅವುಗಳನ್ನು ಉದ್ಯಮಕ್ಕೆ ಕೊಂಡೊಯ್ಯುವಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ "

" ಭಾರತದಲ್ಲಿ ವ್ಯಾಪಾರವನ್ನು ಸುಲಭಗೊಳಿಸಲು ಮತ್ತು ಜೀವನವನ್ನು ಸುಗಮಗೊಳಿಸಲು ಅಭೂತಪೂರ್ವ ಒತ್ತು ನೀಡಲಾಗಿದೆ "

Posted On: 13 MAY 2022 8:39PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಇಂದೋರ್ ನಲ್ಲಿ ನಡೆಯುತ್ತಿರುವ ಮಧ್ಯಪ್ರದೇಶ ನವೋದ್ಯಮ ಸಮಾವೇಶದ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಧ್ಯಪ್ರದೇಶ ನವೋದ್ಯಮ ನೀತಿಗೆ ಚಾಲನೆ ನೀಡಿದರು. ಇದೇ ಸಂದರ್ಭಧಲ್ಲಿ ಅವರು ಮಧ್ಯಪ್ರದೇಶ ನವೋದ್ಯಮ ಪೋರ್ಟಲ್ ಅನ್ನು ಸಹ ಪ್ರಾರಂಭಿಸಿದರು. ಇದು ನವೋದ್ಯಮ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು ಅನುಕೂಲ ಮಾಡಿಕೊಡುತ್ತದೆ ಮತ್ತು ಸಹಾಯ ಮಾಡುತ್ತದೆ. ಪ್ರಧಾನಮಂತ್ರಿ ಅವರು ನವೋದ್ಯಮ ಉದ್ಯಮಿಗಳೊಂದಿಗೂ ಸಂವಾದ ನಡೆಸಿದರು.

ಕಿರಾಣ ಸ್ಟೋರ್ಸ್ - ಶಾಪ್ ಕಿರಾಣವನ್ನು ಸಂಘಟಿಸುವ ಆನ್ ಲೈನ್ ಸ್ಟೋರ್ ನ ಸ್ಥಾಪಕರಾದ ಶ್ರೀ ತನು ತೇಜಸ್ ಸಾರಸ್ವತ್ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ ಅವರು, ಅವರ ಹಿನ್ನೆಲೆ ಮತ್ತು ಈ ಉದ್ಯಮವನ್ನು ಪ್ರಾರಂಭಿಸುವ ಆಲೋಚನೆ ತಮಗೆ ಹೇಗೆ ಸಿಕ್ಕಿತು ಎಂದು ವಿಚಾರಿಸಿದರು. ಈ ವ್ಯವಹಾರದಲ್ಲಿನ ಅವಕಾಶಗಳು ಮತ್ತು ಬೆಳವಣಿಗೆಯ ಬಗ್ಗೆಯೂ ಪ್ರಧಾನಮಂತ್ರಿ ಅವರು ಕೇಳಿದರು. ಅಲ್ಲದೆ, ತಮ್ಮ ನವೋದ್ಯಮಕ್ಕೆ ಎಷ್ಟು ಕಿರಾಣಿ ಅಂಗಡಿಗಳನ್ನು

ಸಂಪರ್ಕಿಸಲಾಗಿದೆ ಮತ್ತು ತಮ್ಮ ನವೋದ್ಯಮಕ್ಕಾಗಿ ಇಂದೋರ್ ಅನ್ನೇ ಏಕೆ ಆರಿಸಿಕೊಂಡಿದ್ದೀರಿ ಎಂದು ಅವರು ಕೇಳಿದರು. ಸ್ವನಿಧಿಯಿಂದ ಪ್ರಯೋಜನ ಪಡೆದ ಬೀದಿ ಬದಿ ವ್ಯಾಪಾರಿಗಳನ್ನು ಸಂಘಟಿಸಬಹುದೇ ಎಂದು ಪ್ರಧಾನಿ ಇದೇ ವೇಳೆ ಕೇಳಿದರು.

ಭೋಪಾಲ್ ನ ಉಮಂಗ್ ಶ್ರೀಧರ್ ಡಿಸೈನ್ಸ್ ಪ್ರೈವೇಟ್ ಲಿಮಿಟೆಡ್ ನ ಸ್ಥಾಪಕರಾದ ಶ್ರೀಮತಿ ಉಮಂಗ್ ಶ್ರೀಧರ್ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ ಅವರಿಗೆ, ಖಾದಿಯಲ್ಲಿ ತಮ್ಮ ಆವಿಷ್ಕಾರ ಮತ್ತು ದೊಡ್ಡ ಕಂಪನಿಗಳಿಗೆ ಉತ್ಪನ್ನಗಳನ್ನು ತಯಾರಿಸುವ ಬಗ್ಗೆ ಮಾಹಿತಿ ನೀಡಿದರು. 2014ರಲ್ಲಿ ಕಂಪನಿಯನ್ನು ಪ್ರಾರಂಭಿಸಿದಾಗ ನವೋದ್ಯಮದ ಪ್ರಯಾಣವು ಸರ್ಕಾರದೊಂದಿಗೆ ಸಂಯೋಜಿತವಾಗಿದೆ ಎಂದು ಪ್ರಧಾನ ಮಂತ್ರಿಯವರಿಗೆ ತಿಳಿಸಲಾಯಿತು.ಜತೆಗೆ ಅವರು ಮಹಿಳೆಯರೊಂದಿಗೆ ತನ್ನ ಕೆಲಸದ ಬಗ್ಗೆ ಪ್ರಧಾನಿ ಅವರಿಗೆ ತಿಳಿಸಿದರು. ತಮ್ಮ ಸ್ಟಾರ್ಟ್ಅಪ್ ಮೂಲಕ ಮಹಿಳೆಯರಲ್ಲಿ ತಂದ ಸುಧಾರಣೆ ಮತ್ತು ಮೌಲ್ಯವರ್ಧನೆಯ ಬಗ್ಗೆ ಪ್ರಧಾನಿ ಕೇಳಿದರು. ಮಹಿಳಾ ಕುಶಲಕರ್ಮಿಗಳ ಆದಾಯವು ಸುಮಾರು  ಶೇಕಡ 300 ರಷ್ಟು ಹೆಚ್ಚಾಗಿದೆ ಎಂದು ಅವರು ಮಾಹಿತಿ ನೀಡಿದರು. ಕುಶಲಕರ್ಮಿಯಿಂದ ಉದ್ಯಮಿಗಳಾಗಿ ಪದೋನ್ನತಿ ಪಡೆಯಲು ಮಹಿಳೆಯರಿಗೆ ತರಬೇತಿ ನೀಡುವ ಬಗ್ಗೆಯೂ ಅವರು ಮಾತನಾಡಿದರು. ಪ್ರಧಾನ ಮಂತ್ರಿ ಅವರು ಕಾಶಿಯಲ್ಲಿ ಅವರ ಕೆಲಸದ ಬಗ್ಗೆ ವಿಚಾರಿಸಿದರು ಮತ್ತು ಅವರು ಉದ್ಯೋಗ ಸೃಷ್ಟಿಕರ್ತ ಮತ್ತು ಸ್ಫೂರ್ತಿ ಎಂದು ಶ್ಲಾಘಿಸಿದರು.

ಇಂದೋರ್ ನ ಶ್ರೀ ತೌಸಿಫ್ ಖಾನ್ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿಯವರಿಗೆ ತಮ್ಮ ಸಂಸ್ಥೆಯು ರೈತರ ಆದಾಯವನ್ನು ದ್ವಿಗುಣಗೊಳಿಸಲು ಕೆಲಸ ಮಾಡುತ್ತಿದೆ ಎಂದು ಮಾಹಿತಿ ನೀಡಲಾಯಿತು. ಅವರು ಡಿಜಿಟಲ್ ಮತ್ತು ಭೌತಿಕ ವಿಧಾನಗಳ ಮೂಲಕ ರೈತರಿಗೆ ಒದಗಿಸಲಾಗುತ್ತಿರುವ ತಾಂತ್ರಿಕ ಪರಿಹಾರಗಳನ್ನು ರೂಪಿಸಿದ್ದಾರೆ. ಅವರ ನವೋದ್ಯಮಕ್ಕೆ ಸಂಬಂಧಿಸಿದಂತೆ ರೈತರಿಗೆ ಮಣ್ಣು ಪರೀಕ್ಷಾ ಸೌಲಭ್ಯಗಳನ್ನು ಒದಗಿಸಬಹುದೇ ಎಂದು ಪ್ರಧಾನಮಂತ್ರಿ ಅವರು ಕೇಳಿದರು. ಮಣ್ಣಿನ ಪರೀಕ್ಷೆ ಮತ್ತು ವರದಿಯನ್ನು ರೈತರೊಂದಿಗೆ ಡಿಜಿಟಲ್ ರೂಪದಲ್ಲಿ ಹಂಚಿಕೊಳ್ಳುವ ವಿಧಾನಗಳ ಬಗ್ಗೆ ಪ್ರಧಾನ ಮಂತ್ರಿಯವರಿಗೆ ಮಾಹಿತಿ ನೀಡಲಾಯಿತು. ಅವರು ಸಾವಯವ ಮತ್ತು ಸೂಕ್ಷ್ಮಜೀವಿ ಗೊಬ್ಬರವನ್ನು ಸಹ ಉತ್ತೇಜಿಸುತ್ತಿದ್ದಾರೆ. ಪ್ರಧಾನಮಂತ್ರಿ ಅವರು ರೈತರಲ್ಲಿ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳುವ ಬಗ್ಗೆಯೂ ಕೇಳಿದರು. ಸ್ವಚ್ಛ ಸರ್ವೇಕ್ಷಣೆಯಲ್ಲಿ ಇಂದೋರ್ ಅತ್ಯುತ್ತಮ ಸಾಧನೆ ಮಾಡಿದಂತೆ, ಇಂದೋರ್ ಜಿಲ್ಲೆಯ ರೈತರು ಸಹ ರಾಸಾಯನಿಕ ಮುಕ್ತ ಕೃಷಿಗೆ ಮಾದರಿಯಾಗಬೇಕು ಎಂದು ಪ್ರಧಾನಿ ಹಾರೈಸಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಯುವ ಶಕ್ತಿಯಿಂದ ದೇಶದ ಅಭಿವೃದ್ಧಿಯು ಹೊಸ ವೇಗವನ್ನು ಪಡೆಯುತ್ತಿದೆ ಎಂದು ಹೇಳಿದರು. ಸಕ್ರಿಯ ನವೋದ್ಯಮ ನೀತಿ ಇರುವುದರಿಂದ, ದೇಶದಲ್ಲಿ ಅಷ್ಟೇ ಶ್ರದ್ಧೆಯ ನವೋದ್ಯಮ ನಾಯಕತ್ವವಿದೆ ಎಂಬ ಭಾವನೆ ಇದೆ. 8 ವರ್ಷಗಳ ಅಲ್ಪಾವಧಿಯಲ್ಲಿ, ದೇಶದ ನವೋದ್ಯಮ ಕಥನವು ಭಾರಿ ಪರಿವರ್ತನೆಗೆ ಒಳಗಾಗಿದೆ ಎಂದು ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು.

 2014 ರಲ್ಲಿ ತಮ್ಮ ಸರ್ಕಾರ ರಚನೆಯಾದಾಗ, ದೇಶದಲ್ಲಿ ನವೋದ್ಯಮಗಳ ಸಂಖ್ಯೆ ಸುಮಾರು 300-400 ಆಗಿತ್ತು ಎಂದು ಅವರು ನೆನಪಿಸಿಕೊಂಡರು. ಇಂದು ಸುಮಾರು 70,000 ಮಾನ್ಯತೆ ಪಡೆದ ನವೋದ್ಯಮಗಳಿವೆ. ಈ ದೇಶದಲ್ಲಿ ಪ್ರತಿ 7-8 ದಿನಗಳಿಗೊಮ್ಮೆ ಹೊಸ ಯೂನಿಕಾರ್ನ್ ರೂಪುಗೊಳ್ಳುತ್ತದೆ ಎಂದು ಅವರು ಹೇಳಿದರು.

ನವೋದ್ಯಮಗಳ ವೈವಿಧ್ಯತೆಯನ್ನು ಪ್ರಧಾನಮಂತ್ರಿಯವರು ಗಮನಿಸಿದರು. ಸುಮಾರು ಶೇಕಡ 50 ರಷ್ಟು ನವೋದ್ಯಮಗಳು ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳಿಂದ ಬಂದಿವೆ ಮತ್ತು ಅವು ಅನೇಕ ರಾಜ್ಯಗಳು ಮತ್ತು ನಗರಗಳನ್ನು ಒಳಗೊಂಡಿವೆ ಎಂದು ಅವರು ಹೇಳಿದರು. ಅವುಗಳು 50ಕ್ಕೂ ಹೆಚ್ಚು ಕೈಗಾರಿಕೆಗಳೊಂದಿಗೆ ಸಂಬಂಧ ಹೊಂದಿವೆ. ನವೋದ್ಯಮಗಳು ನೈಜ ಪ್ರಪಂಚದ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡುತ್ತವೆ ಎಂದು ಅವರು ಹೇಳಿದರು. ಇಂದಿನ ನವೋದ್ಯಮಗಳು ಭವಿಷ್ಯದ ಬಹುರಾಷ್ಟ್ರೀಯ ಕಂಪನಿಗಳಾಗುತ್ತವೆ. ನವೋದ್ಯಮ ಪರಿಕಲ್ಪನೆಯನ್ನು 8 ವರ್ಷಗಳ ಹಿಂದೆ ಕೇವಲ ಕೆಲವೇ ಜನರಲ್ಲಿ ಚರ್ಚಿಸಲಾಗುತ್ತಿತ್ತು ಮತ್ತು ಈಗ ಸಾಮಾನ್ಯ ಜನರ ನಡುವೆ ಚರ್ಚೆಯ ಭಾಗವಾಗಿದೆ ಎಂದು ಅವರು ಹೇಳಿದರು. ಈ ಬದಲಾವಣೆಯು ಆಕಸ್ಮಿಕ ಸಾಧನೆ ಅಲ್ಲ, ಆದರೆ ಉತ್ತಮವಾಗಿ ಆಲೋಚಿಸಿದ ಕಾರ್ಯತಂತ್ರದ ಫಲಿತಾಂಶವಾಗಿದೆ ಎಂದು ಅವರು ಹೇಳಿದರು.

ಅವರು ಭಾರತದಲ್ಲಿನ ನವೀನ ಪರಿಹಾರಗಳ ಕಥೆಯ ಬಗ್ಗೆ ಚರ್ಚಿಸಿದರು ಮತ್ತು ಮಾಹಿತಿ ತಂತ್ರಜ್ಞಾನ ಕ್ರಾಂತಿಯ ಆವೇಗಕ್ಕೆ ಪ್ರೋತ್ಸಾಹದ ಕೊರತೆ ಮತ್ತು ಅವಕಾಶವನ್ನು ಬಳಸಿಕೊಳ್ಳುವಲ್ಲಿನ ವೈಫಲ್ಯದ ಬಗ್ಗೆ ವಿಷಾದಿಸಿದರು. ಆ ಕಾಲದ ಹಗರಣಗಳು ಮತ್ತು ಅವ್ಯವಸ್ಥೆಗಳಲ್ಲಿ ಇಡೀ ಒಂದು ದಶಕವು ವ್ಯರ್ಥವಾಯಿತು. 2014 ರ ನಂತರ, ಸರ್ಕಾರವು ಯುವಕರ ನಾವೀನ್ಯತೆಯ ಶಕ್ತಿಯಲ್ಲಿ ನಂಬಿಕೆಯನ್ನು ಪುನಃಸ್ಥಾಪಿಸಿತು ಮತ್ತು ಅನುಕೂಲಕರ ಪರಿಸರ ವ್ಯವಸ್ಥೆಯನ್ನು ರಚಿಸಿತು ಎಂದು ಅವರು ಹೇಳಿದರು. ಕಲ್ಪನೆಯಿಂದ, ನಾವಿನ್ಯತೆಯಿಂದ ಹಿಡಿದು ಉದ್ಯಮದವರೆಗೆ ಮಾರ್ಗಸೂಚಿಯನ್ನು ರಚಿಸುವ ಮೂಲಕ ಈ ವಲಯವನ್ನು ಉತ್ತೇಜಿಸುವ ಮೂರು ಆಯಾಮಗಳ ವಿಧಾನದ ಬಗ್ಗೆ ಅವರು ಮಾಹಿತಿ ನೀಡಿದರು. ಈ ಕಾರ್ಯತಂತ್ರದ ಮೊದಲ ಭಾಗವೆಂದರೆ, ಕಲ್ಪನೆ, ಆವಿಷ್ಕಾರ, ಇನ್ ಕ್ಯುಬೇಟ್ ಮತ್ತು ಉದ್ಯಮದ ಕಲ್ಪನೆಯಾಗಿದೆ ಎಂದು ಅವರು ಹೇಳಿದರು. ಈ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಸಂಸ್ಥೆಗಳನ್ನು ರಚಿಸಲಾಯಿತು ಮತ್ತು ಬಲಪಡಿಸಲಾಯಿತು. ಎರಡನೆಯದಾಗಿ, ಸರ್ಕಾರದ ನಿಬಂಧನೆಗಳನ್ನು ಸರಾಗಗೊಳಿಸುವುದು. ಮೂರನೆಯದಾಗಿ, ಹೊಸ ಪರಿಸರ ವ್ಯವಸ್ಥೆಯನ್ನು ರಚಿಸುವ ಮೂಲಕ ನಾವೀನ್ಯತೆಗಾಗಿ ಮನಸ್ಥಿತಿಯನ್ನು ಬದಲಾಯಿಸಿ. ಇದನ್ನು ಗಮನದಲ್ಲಿಟ್ಟುಕೊಂಡು, ಹ್ಯಾಕಥಾನ್ ಗಳಂತಹ ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಸ್ಟಾರ್ಟಪ್ ಗಳಿಗೆ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವ ಈ ಹ್ಯಾಕಥಾನ್ ಆಂದೋಲನದಲ್ಲಿ 15 ಲಕ್ಷ ಪ್ರತಿಭಾವಂತ ಯುವಕರು ಭಾಗಿಯಾಗಿದ್ದಾರೆ.

7 ವರ್ಷಗಳ ಹಿಂದೆ ನವೋದ್ಯಮ ಭಾರತವನ್ನು ಆರಂಭಿಸಿರುವುದು ವಿಚಾರಗಳನ್ನು ನಾವಿನ್ಯತೆಯಾಗಿ ಪರಿವರ್ತಿಸುವಲ್ಲಿ ಮತ್ತು ಅವುಗಳನ್ನು ಉದ್ಯಮಕ್ಕೆ ಕೊಂಡೊಯ್ಯುವಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ ಎಂದು ಪ್ರಧಾನಿ ಹೇಳಿದರು. ಒಂದು ವರ್ಷದ ನಂತರ, ಅಟಲ್ ನಾವೀನ್ಯತೆ ಮಿಷನ್ ಅನ್ನು ಶಾಲೆಗಳಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಗಳನ್ನು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇನ್ ಕ್ಯುಬೇಶನ್ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಪ್ರಾರಂಭಿಸಲಾಯಿತು. 10 ಸಾವಿರಕ್ಕೂ ಹೆಚ್ಚು ಶಾಲೆಗಳು ಟಿಂಕರಿಂಗ್ ಲ್ಯಾಬ್ ಗಳನ್ನು ಹೊಂದಿವೆ ಮತ್ತು 75 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನಾವೀನ್ಯತೆಯ ವಾತಾವರಣಕ್ಕೆ ಒಡ್ಡಿಕೊಳ್ಳುತ್ತಿದ್ದಾರೆ. ಅದೇ ರೀತಿ ರಾಷ್ಟ್ರೀಯ ಶಿಕ್ಷಣ ನೀತಿಯು ನಾವಿನ್ಯತೆಯನ್ನು ಉತ್ತೇಜಿಸುತ್ತದೆ. ನಾವಿನ್ಯತೆ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆ ಹೆಚ್ಚುತ್ತಿದೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಕೈಗೊಂಡ ಸುಧಾರಣೆಗಳು, ಮ್ಯಾಪಿಂಗ್, ಡ್ರೋನ್ ಗಳು ಇತ್ಯಾದಿಗಳು ನವೋದ್ಯಮಗಳಿಗೆ ಹೊಸ ಅವಕಾಶಗಳನ್ನು ತೆರೆಯುತ್ತಿವೆ ಎಂದು ಅವರು ಹೇಳಿದರು. ನವೋದ್ಯಮಗಳ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವ ಸುಲಭತೆಯನ್ನು ಸುಧಾರಿಸಲು, ಜಿಇಎಂ ಪೋರ್ಟಲ್ ಅನ್ನು ಸ್ಥಾಪಿಸಲಾಯಿತು. ಜಿಇಎಂ ಪೋರ್ಟಲ್ ನಲ್ಲಿ 13000 ಕ್ಕೂ ಹೆಚ್ಚು ನವೋದ್ಯಮಗಳು ನೋಂದಾಯಿಸಿಕೊಂಡಿವೆ ಮತ್ತು ಪೋರ್ಟಲ್ ನಲ್ಲಿ 6500 ಕೋಟಿ ರೂ.ಗಳ ವ್ಯವಹಾರವನ್ನು ಮಾಡಿವೆ. ಡಿಜಿಟಲ್ ಇಂಡಿಯಾ ನವೋದ್ಯಮಗಳ ಅಭಿವೃದ್ಧಿ ಮತ್ತು ಹೊಸ ಮಾರುಕಟ್ಟೆಗಳನ್ನು ತೆರೆಯಲು ಪ್ರಮುಖ ಉತ್ತೇಜನ ನೀಡಿತು. ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಪಡಿಸುವಲ್ಲಿ ನವೋದ್ಯಮಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ಹೇಳಿದರು. ವೋಕಲ್ ಫಾರ್ ಲೋಕಲ್ ಗೆ ಉತ್ತೇಜನ ನೀಡಲು ನವೋದ್ಯಮಗಳು ಸಹ ಸಹಾಯ ಮಾಡುತ್ತವೆ. ನವೋದ್ಯಮಗಳು ಬುಡಕಟ್ಟು ಜನರಿಗೆ ತಮ್ಮ ಕರಕುಶಲ ವಸ್ತುಗಳು ಮತ್ತು ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು ಸಹಾಯ ಮಾಡಬಹುದು.ಆಟದ ಉದ್ಯಮ ಮತ್ತು ಆಟಿಕೆ ಉದ್ಯಮಕ್ಕೆ ಸರ್ಕಾರ ದೊಡ್ಡ ಉತ್ತೇಜನ ನೀಡುತ್ತಿದೆ ಎಂದು ಅವರು ಹೇಳಿದರು. ನವೋದ್ಯಮಗಳಿಗೆ ಗಡಿನಾಡಿನ ತಂತ್ರಜ್ಞಾನಗಳಲ್ಲಿನ ಸಾಮರ್ಥ್ಯವನ್ನು ಅವರು ಗಮನಿಸಿದರು. 800ಕ್ಕೂ ಹೆಚ್ಚು ಭಾರತೀಯ ನವೋದ್ಯಮಗಳು ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿವೆ ಎಂದು ಅವರು ಮಾಹಿತಿ ನೀಡಿದರು.

"ನಾವು ಭಾರತದ ಯಶಸ್ಸಿಗೆ ಹೊಸ ಆವೇಗ ಮತ್ತು ಎತ್ತರವನ್ನು ಒದಗಿಸಬೇಕಾಗಿದೆ" ಎಂದು ಪ್ರಧಾನಿ ಪ್ರತಿಪಾದಿಸಿದರು. ಇಂದು ಭಾರತವು ಜಿ-20 ಆರ್ಥಿಕತೆಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ಅವರು ಹೇಳಿದರು. ಸ್ಮಾರ್ಟ್ ಫೋನ್, ಡೇಟಾ ಬಳಕೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದರೆ, ಇಂಟರ್ನೆಟ್ ಬಳಕೆದಾರರ ವಿಷಯದಲ್ಲಿ ಎರಡನೇ ಸ್ಥಾನದಲ್ಲಿದೆ. ಜಾಗತಿಕ ಚಿಲ್ಲರೆ ಸೂಚ್ಯಂಕದಲ್ಲಿ ಭಾರತವು ಎರಡನೇ ಸ್ಥಾನದಲ್ಲಿದೆ, ಭಾರತವು ವಿಶ್ವದ ಮೂರನೇ ಅತಿದೊಡ್ಡ ಇಂಧನ ಗ್ರಾಹಕ ದೇಶವಾಗಿದೆ ಮತ್ತು ವಿಶ್ವದ ಮೂರನೇ ಅತಿದೊಡ್ಡ ಗ್ರಾಹಕ ಮಾರುಕಟ್ಟೆ ಭಾರತದಲ್ಲಿದೆ. ಭಾರತವು ಈ ವರ್ಷ 470 ಶತಕೋಟಿ ಡಾಲರ್ ಮೌಲ್ಯದ ಸರಕು ರಫ್ತು ಮಾಡುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಮೂಲಸೌಕರ್ಯದಲ್ಲಿ ಅಭೂತಪೂರ್ವ ಹೂಡಿಕೆ ಇದೆ. ಭಾರತದಲ್ಲಿ ವ್ಯಾಪಾರ ಮಾಡಲು ಸುಲಭ ಮತ್ತು ಸುಲಭ ಜೀವನಕ್ಕೆ ಅಭೂತಪೂರ್ವ ಒತ್ತು ನೀಡಲಾಗಿದೆ.

ಈ ಸಂಗತಿಗಳು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರುತ್ತವೆ ಮತ್ತು ಈ ದಶಕದಲ್ಲಿ ಭಾರತದ ಬೆಳವಣಿಗೆಯ ಕಥೆಯು ಹೊಸ ಶಕ್ತಿಯೊಂದಿಗೆ ಮುಂದುವರಿಯುತ್ತದೆ ಎಂಬ ನಂಬಿಕೆಯನ್ನು ಸೃಷ್ಟಿಸುತ್ತದೆ. ಅಮೃತ್ ಕಾಲ್ ನಲ್ಲಿನ ನಮ್ಮ ಪ್ರಯತ್ನಗಳು ದೇಶದ ದಿಕ್ಕನ್ನು ನಿರ್ಧರಿಸುತ್ತವೆ ಮತ್ತು ನಮ್ಮ ಸಾಮೂಹಿಕ ಪ್ರಯತ್ನದಿಂದ ನಾವು ದೇಶದ ಆಶೋತ್ತರಗಳನ್ನು ಈಡೇರಿಸುತ್ತೇವೆ ಎಂದು ಪ್ರಧಾನಿ ಹೇಳಿದರು.

***



(Release ID: 1825554) Visitor Counter : 174