ಪ್ರಧಾನ ಮಂತ್ರಿಯವರ ಕಛೇರಿ

ಅಸ್ಸಾಮಿನ ದಿಫುವಿನಲ್ಲಿ 'ಶಾಂತಿ, ಏಕತೆ ಮತ್ತು ಅಭಿವೃದ್ಧಿ ರ‍್ಯಾಲಿ' ಉದ್ದೇಶಿಸಿ ಪ್ರಧಾನಮಂತ್ರಿಗಳ ಭಾಷಣ


"ಲಚಿತ್ ಬೋರ್ಫುಕನ್ ಅವರ ಜೀವನವು ದೇಶಭಕ್ತಿ ಮತ್ತು ರಾಷ್ಟ್ರ ಶಕ್ತಿಯ ಸ್ಫೂರ್ತಿಯಾಗಿದೆ"

"ಸಬ್ ಕಾ ಸಾಥ್ ಸಬ್ ಕಾ ವಿಕಾಸ್ʼ, ʻಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ʼ ಎಂಬ ಸ್ಫೂರ್ತಿಯೊಂದಿಗೆ 'ಡಬಲ್ ಎಂಜಿನ್' ಸರಕಾರ ಕೆಲಸ ಮಾಡುತ್ತಿದೆ.

"ಅಮೃತ್ ಸರೋವರ್ ಯೋಜನೆಯು ಸಂಪೂರ್ಣವಾಗಿ ಜನರ ಭಾಗವಹಿಸುವಿಕೆಯನ್ನು ಆಧರಿಸಿದೆ"

"2014ರಿಂದ ಈಚೆಗೆ ಈಶಾನ್ಯದಲ್ಲಿ ತೊಂದರೆಗಳು ಕಡಿಮೆಯಾಗುತ್ತಿವೆ ಮತ್ತು ಅಭಿವೃದ್ಧಿ ಹೆಚ್ಚುತ್ತಿದೆ"

"2020ರಲ್ಲಿ ನಡೆದ ಬೋಡೋ ಒಪ್ಪಂದವು ಶಾಶ್ವತ ಶಾಂತಿಗೆ ಬಾಗಿಲು ತೆರೆದಿದೆ"

"ಕಳೆದ 8 ವರ್ಷಗಳಲ್ಲಿ ಶಾಂತಿ ಹಾಗೂ ಉತ್ತಮ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಗಳಿಂದಾಗಿ ನಾವು ಈಶಾನ್ಯದ ಅನೇಕ ಪ್ರದೇಶಗಳಿಂದ ʻಎಎಫ್ಎಸ್‌ಪಿಎʼ ಅನ್ನು ಹಿಂತೆಗೆದುಕೊಂಡಿದ್ದೇವೆ.”

"ಅಸ್ಸಾಂ ಮತ್ತು ಮೇಘಾಲಯ ನಡುವೆ ಏರ್ಪಟ್ಟಿರುವ ಒಪ್ಪಂದವು ಇತರ ವಿಷಯಗಳಿಗೂ ಉತ್ತೇಜನ ನೀಡುತ್ತದೆ. ಇದು ಇಡೀ ಪ್ರದೇಶದ ಅಭಿವೃದ್ಧಿಯ ಆಕಾಂಕ್ಷೆಗಳಿಗೆ ಪ್ರೋತ್ಸಾಹ ನೀಡುತ್ತದೆ"

"ಹಿಂದಿನ ದಶಕಗಳಲ್ಲಿ ನಾವು ಸಾಧಿಸಲು ಸಾಧ್ಯವಾಗದ ಅಭಿವೃದ್ಧಿಯನ್ನು ನಾವು ಸರಿದೂಗಿಸಬೇಕು"

Posted On: 28 APR 2022 12:40PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕರ್ಬಿ ಆಂಗ್ಲಾಂಗ್ ಜಿಲ್ಲೆಯ ದಿಫು ಎಂಬಲ್ಲಿ ನಡೆದ 'ಶಾಂತಿ, ಏಕತೆ ಮತ್ತು ಅಭಿವೃದ್ಧಿ ರ‍್ಯಾಲಿʼಯನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಭಾಗವಾಗಿ ಅವರು ಅನೇಕ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಪ್ರಧಾನಮಂತ್ರಿಯವರು ಪಶುವೈದ್ಯಕೀಯ ಕಾಲೇಜು (ದಿಫು), ಪದವಿ ಕಾಲೇಜು (ಪಶ್ಚಿಮ ಕರ್ಬಿ ಆಂಗ್ಲಾಂಗ್) ಮತ್ತು ಕೃಷಿ ಕಾಲೇಜುಗಳಿಗೆ (ಕೊಲೊಂಗಾ, ಪಶ್ಚಿಮ ಕರ್ಬಿ ಆಂಗ್ಲಾಂಗ್) ಶಂಕುಸ್ಥಾಪನೆ ನೆರವೇರಿಸಿದರು. 500 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಈ ಯೋಜನೆಗಳು ಈ ಪ್ರದೇಶದಲ್ಲಿ ಕೌಶಲ್ಯ ಮತ್ತು ಉದ್ಯೋಗಕ್ಕೆ ಹೊಸ ಅವಕಾಶಗಳನ್ನು ತೆರೆಯಲಿವೆ. ಪ್ರಧಾನಮಂತ್ರಿಯವರು 2950ಕ್ಕೂ ಹೆಚ್ಚು ʻಅಮೃತ ಸರೋವರʼ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ರಾಜ್ಯವು ಈ ʻಅಮೃತ್ ಸರೋವರʼಗಳನ್ನು (ಕೊಳಗಳು) ಸುಮಾರು 1150 ಕೋಟಿ ರೂ.ಗಳ ಒಟ್ಟು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಿದೆ. ಅಸ್ಸಾಂ ರಾಜ್ಯಪಾಲ ಶ್ರೀ ಜಗದೀಶ್ ಮುಖಿ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಕರ್ಬಿ ಆಂಗ್ಲಾಂಗ್ ಜನತೆಗೆ ಅವರ ಆತ್ಮೀಯ ಸ್ವಾಗತಕ್ಕಾಗಿ ಧನ್ಯವಾದ ಅರ್ಪಿಸಿದರು. ʻಆಜಾದಿ ಕಾ ಅಮೃತ ಮಹೋತ್ಸವʼ ಮತ್ತು ಅಸ್ಸಾಂನ ಮಹಾನ್ ಪುತ್ರ ಲಚಿತ್ ಬೋರ್ಫುಕನ್ ಅವರ 400ನೇ ವಾರ್ಷಿಕೋತ್ಸವವು ಕಾಕತಾಳೀಯ ಎಂಬಂತೆ ಒಂದೇ ಸಮಯದಲ್ಲಿ ಬಂದಿರುವುದರ ಬಗ್ಗೆ ಅವರು ಗಮನ ಸೆಳೆದರು. "ಲಚಿತ್ ಬೋರ್ಫುಕನ್ ಅವರ ಜೀವನವು ದೇಶಭಕ್ತಿ ಮತ್ತು ರಾಷ್ಟ್ರ ಶಕ್ತಿಯ ಸ್ಫೂರ್ತಿಯಾಗಿದೆ. ಕರ್ಬಿ ಆಂಗ್ಲಾಂಗ್‌ ನೆಲದಿಂದ ದೇಶದ ಈ ಮಹಾನ್ ವೀರನಿಗೆ ನಾನು ನಮಸ್ಕರಿಸುತ್ತೇನೆ," ಎಂದು ಪ್ರಧಾನಿ ಹೇಳಿದರು.
'ಡಬಲ್ ಎಂಜಿನ್' ಸರಕಾರವು ʻಸಬ್ ಕಾ ಸಾಥ್ ಸಬ್ ಕಾ ವಿಕಾಸ್ʼ, ʻಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ʼ ಆಶಯದೊಂದಿಗೆ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು. "ಇಂದು ಕರ್ಬಿ ಆಂಗ್ಲಾಂಗ್‌ನ ಈ ನೆಲದಲ್ಲಿ ಈ ಸಂಕಲ್ಪವನ್ನು ಮತ್ತಷ್ಟು ಬಲಪಡಿಸಲಾಗಿದೆ. ಅಸ್ಸಾಂನ ಶಾಶ್ವತ ಶಾಂತಿ ಮತ್ತು ತ್ವರಿತ ಅಭಿವೃದ್ಧಿಗಾಗಿ ಸಹಿ ಹಾಕಲಾದ ಒಪ್ಪಂದವನ್ನು ಕಾರ್ಯಗತಗೊಳಿಸುವ ಕೆಲಸವು ಚುರುಕಾಗಿ ನಡೆಯುತ್ತಿದೆ,ʼʼ  ಎಂದು ಅವರು ಮಾಹಿತಿ ನೀಡಿದರು.
ಇಂದು 2600ಕ್ಕೂ ಹೆಚ್ಚು ಸರೋವರಗಳ (ಕೊಳಗಳ) ನಿರ್ಮಾಣ ಕಾರ್ಯ ಪ್ರಾರಂಭವಾಗುತ್ತಿದ್ದು, ಈ ಯೋಜನೆಯು ಸಂಪೂರ್ಣವಾಗಿ ಜನರ ಭಾಗವಹಿಸುವಿಕೆಯನ್ನು ಆಧರಿಸಿದೆ ಎಂದು ಅವರು ಒತ್ತಿ ಹೇಳಿದರು. ಬುಡಕಟ್ಟು ಸಮುದಾಯಗಳಲ್ಲಿನ ಅಂತಹ ಸರೋವರಗಳ ನಿರ್ಮಾಣದ ಶ್ರೀಮಂತ ಸಂಪ್ರದಾಯ ಮುಂದುವರಿದಿರುವುದನ್ನು ಅವರು ಉಲ್ಲೇಖಿಸಿದರು. ಈ ಕೊಳಗಳು ಹಳ್ಳಿಗಳಿಗೆ ನೀರಿನ ಸಂಗ್ರಹ ಮಾಡುವುದಲ್ಲದೆ, ಆದಾಯದ ಮೂಲವಾಗುತ್ತವೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು.
2014ರಿಂದೀಚೆಗೆ ಈಶಾನ್ಯ ರಾಜ್ಯಗಳಲ್ಲಿನ ತೊಂದರೆಗಳು ಕಡಿಮೆಯಾಗುತ್ತಿವೆ ಮತ್ತು ಅಭಿವೃದ್ಧಿ ಕಾರ್ಯಗಳು ಚುರುಕಾಗಿವೆ ಎಂಬ ಅಂಶವನ್ನು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. "ಇಂದು, ಯಾರಾದರೂ ಅಸ್ಸಾಂನ ಬುಡಕಟ್ಟು ಪ್ರದೇಶಗಳಿಗೆ ಬಂದಾಗ ಅಥವಾ ಈಶಾನ್ಯದ ಇತರ ರಾಜ್ಯಗಳಿಗೆ ಹೋದಾಗ, ಅವರು ಅಲ್ಲಿನ ಬದಲಾಗುತ್ತಿರುವ ಪರಿಸ್ಥಿತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ," ಎಂದು ಅವರು ಹೇಳಿದರು. ಕಳೆದ ವರ್ಷ ಶಾಂತಿ ಮತ್ತು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಕರ್ಬಿ ಆಂಗ್ಲಾಂಗ್‌ನಿಂದ ಅನೇಕ ಸಂಘ-ಸಂಸ್ಥೆಗಳ ಭಾಗವಹಿಸಿದ್ದನ್ನು  ಪ್ರಧಾನಮಂತ್ರಿಯವರು ಸ್ಮರಿಸಿದರು. 2020ರಲ್ಲಿ ಬೋಡೋ ಒಪ್ಪಂದವು ಶಾಶ್ವತ ಶಾಂತಿಗೆ ಬಾಗಿಲುಗಳನ್ನು ತೆರೆಯಿತು. ಅದೇ ರೀತಿ ತ್ರಿಪುರಾದಲ್ಲಿಯೂ `ಎನ್‌ಐಎಫ್‌ಟಿʼ ಶಾಂತಿಯತ್ತ ಹೆಜ್ಜೆ ಇಟ್ಟಿದೆ ಎಂದು ಪ್ರಧಾನಿ ಹೇಳಿದರು. ಎರಡೂವರೆ ದಶಕಗಳಷ್ಟು ಹಳೆಯದಾದ ʻಬ್ರು-ರಿಯಾಂಗ್ʼ ಸಮುದಾಯದ ವಿವಾದವನ್ನೂ ಪರಿಹರಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ದೀರ್ಘಕಾಲದಿಂದ ಈಶಾನ್ಯದ ಅನೇಕ ರಾಜ್ಯಗಳ ಮೇಲೆ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು (ಎಎಫ್ ಎಸ್‌ಪಿಎ) ಹೇರಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. "ಆದಾಗ್ಯೂ, ಕಳೆದ 8 ವರ್ಷಗಳಲ್ಲಿ ಶಾಶ್ವತ ಶಾಂತಿ ಹಾಗೂ ಉತ್ತಮ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಗಳ ಆಗಮನದಿಂದಾಗಿ ನಾವು ಈಶಾನ್ಯದ ಅನೇಕ ಪ್ರದೇಶಗಳಿಂದ ʻಎಎಫ್ಎಸ್‌ಪಿಎʼ ಅನ್ನು ತೆಗೆದುಹಾಕಿದ್ದೇವೆ," ಎಂದು ಪ್ರಧಾನಿ ಹೇಳಿದರು. ʻಸಬ್ ಕಾ ಸಾಥ್ ಸಬ್ ಕಾ ವಿಕಾಸ್ʼನ ಆಶಯದೊಂದಿಗೆ ಗಡಿ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. "ಅಸ್ಸಾಂ ಮತ್ತು ಮೇಘಾಲಯ ನಡುವೆ ಏರ್ಪಟ್ಟಿರುವ ಒಪ್ಪಂದವು ಇತರ ವಿಷಯಗಳಿಗೂ ಉತ್ತೇಜನ ನೀಡುತ್ತದೆ. ಇದು ಇಡೀ ಪ್ರದೇಶದ ಅಭಿವೃದ್ಧಿಯ ಆಕಾಂಕ್ಷೆಗಳಿಗೆ ಉತ್ತೇಜನ ನೀಡುತ್ತದೆ", ಎಂದು ಪ್ರಧಾನಿ ಒತ್ತಿ ಹೇಳಿದರು.
ಬುಡಕಟ್ಟು ಸಮುದಾಯಗಳ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, "ಬುಡಕಟ್ಟು ಸಮಾಜದ ಸಂಸ್ಕೃತಿ, ಅದರ ಭಾಷೆ, ಆಹಾರ, ಕಲೆ, ಕರಕುಶಲ ವಸ್ತುಗಳು, ಇವೆಲ್ಲವೂ ಭಾರತದ ಶ್ರೀಮಂತ ಪರಂಪರೆಯ ಭಾಗವಾಗಿದೆ. ಈ ವಿಷಯದಲ್ಲಿ ಅಸ್ಸಾಂ ಇನ್ನೂ ಹೆಚ್ಚು ಸಮೃದ್ಧವಾಗಿದೆ. ಈ ಸಾಂಸ್ಕೃತಿಕ ಪರಂಪರೆಯು ಭಾರತವನ್ನು ಬೆಸೆಯುತ್ತದೆ, ʻಏಕ ಭಾರತ-ಶ್ರೇಷ್ಠ ಭಾರತದʼ ಮನೋಭಾವವನ್ನು ಬಲಪಡಿಸುತ್ತದೆ,ʼʼ ಎಂದರು.
ʻಆಜಾದಿ ಅಮೃತ್ ಕಾಲ್ʼನಲ್ಲಿ ಕರ್ಬಿ ಆಂಗ್ಲಾಂಗ್ ಕೂಡ ಶಾಂತಿ ಮತ್ತು ಅಭಿವೃದ್ಧಿಯ ಹೊಸ ಭವಿಷ್ಯದತ್ತ ಸಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಈಗ ಇಲ್ಲಿಂದ ನಾವು ಹಿಂತಿರುಗಿ ನೋಡಬೇಕಾಗಿಲ್ಲ. ಮುಂಬರುವ ಕೆಲವು ವರ್ಷಗಳಲ್ಲಿ, ಹಿಂದಿನ ದಶಕಗಳಲ್ಲಿ ನಾವು ಸಾಧಿಸಲು ಸಾಧ್ಯವಾಗದ ಅಭಿವೃದ್ಧಿಯನ್ನು ನಾವು ಒಟ್ಟಾಗಿ ಸರಿದೂಗಿಸಬೇಕಾಗಿದೆ ಎಂದು ಅವರು ಹೇಳಿದರು. ಸೇವಾ ಮನೋಭಾವ ಮತ್ತು ಸಮರ್ಪಣಾ ಭಾವದಿಂದ ಕೇಂದ್ರದ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಕ್ಕಾಗಿ ಅಸ್ಸಾಂ ಮತ್ತು ಈ ಪ್ರದೇಶದ ಇತರ ರಾಜ್ಯ ಸರ್ಕಾರಗಳನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ಮಹಿಳೆಯರಿಗೆ ಅವರು ಧನ್ಯವಾದ ಅರ್ಪಿಸಿದರು. ಸರಕಾರದ ಎಲ್ಲಾ ಕ್ರಮಗಳಲ್ಲಿ ಮಹಿಳೆಯರ ಸ್ಥಾನಮಾನದ ಉನ್ನತಿ, ಸುಲಭ ಜೀವನ ಮತ್ತು ಮಹಿಳೆಯರ ಘನತೆಯ ಬಗ್ಗೆ ನಿರಂತರ ಗಮನ ಹರಿಸುವುದಾಗಿ ಪುನರುಚ್ಚರಿಸಿದರು.
ಅಸ್ಸಾಮಿನ ಜನತೆಯ ಪ್ರೀತಿ ಮತ್ತು ವಾತ್ಸಲ್ಯವನ್ನು ಬಡ್ಡಿ ಸಮೇತ ಮರುಪಾವತಿಸುವುದಾಗಿ ಭರವಸೆ ನೀಡುವ ಮೂಲಕ ಪ್ರಧಾನಮಂತ್ರಿಯವರು ಮಾತು ಮುಗಿಸಿದರು. ಇದೇ ವೇಳೆ ಈ ಪ್ರದೇಶದ ನಿರಂತರ ಅಭಿವೃದ್ಧಿಗಾಗಿ ತಮ್ಮನ್ನು ತಾವು ಮರು ಸಮರ್ಪಿಸಿಕೊಂಡರು. 
ಭಾರತ ಸರಕಾರ ಮತ್ತು ಅಸ್ಸಾಂ ಸರಕಾರಗಳು ಆರು ಕರ್ಬಿ ಉಗ್ರಗಾಮಿ ಸಂಘಟನೆಗಳೊಂದಿಗೆ ಇತ್ತೀಚೆಗೆ ಒಡಂಬಡಿಕೆಗೆ (ಎಂಒಎಸ್) ಅಂಕಿತ ಹಾಕಿವೆ. ಈ ಒಪ್ಪಂದವು ಈ ಪ್ರದೇಶದ ಶಾಂತಿ ಮತ್ತು ಅಭಿವೃದ್ಧಿಯ ಬಗ್ಗೆ ಪ್ರಧಾನಮಂತ್ರಿಯವರ ಅಚಲ ಬದ್ಧತೆಗೆ ಉದಾಹರಣೆಯಾಗಿದೆ. ಒಪ್ಪಂದದ ಒಡಂಬಡಿಕೆಯು ಈ ಪ್ರದೇಶದಲ್ಲಿ ಶಾಂತಿಯ ಹೊಸ ಶಕೆಗೆ ನಾಂದಿ ಹಾಡಿದೆ.

 

*******



(Release ID: 1820937) Visitor Counter : 178