ಪ್ರಧಾನ ಮಂತ್ರಿಯವರ ಕಛೇರಿ

ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಆಚರಣೆಯಲ್ಲಿ ಭಾಗವಹಿಸಲು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ ಪ್ರಧಾನಮಂತ್ರಿ


ಸಾಂಬಾ ಜಿಲ್ಲೆಯ ಪಲ್ಲಿ ಪಂಚಾಯತ್‌ನಿಂದ ದೇಶಾದ್ಯಂತದ ಎಲ್ಲಾ ಗ್ರಾಮ ಸಭೆಗಳನ್ನುದ್ದೇಶಿಸಿ ಪ್ರಧಾನಿ ಭಾಷಣ

20,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ

ಜಮ್ಮು ಮತ್ತು ಕಾಶ್ಮೀರದ ವಿವಿಧ ಪ್ರದೇಶಗಳ ಅಂತರವನ್ನು ಕಡಿಮೆ ಮಾಡುವ ಬನಿಹಾಲ್ ಖಾಜಿಗುಂಡ್ ರಸ್ತೆ ಸುರಂಗ ಉದ್ಘಾಟನೆ

ʻದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್‌ವೇʼನ ಮೂರು ರಸ್ತೆ ಯೋಜನೆಗಳು ಹಾಗೂ ರಾಟ್ಲೆ ಮತ್ತು ಕ್ವಾರ್ ಜಲವಿದ್ಯುತ್ ಯೋಜನೆಗಳ ಶಂಕುಸ್ಥಾಪನೆ

ದೇಶದ ಪ್ರತಿ ಜಿಲ್ಲೆಯ 75 ಜಲಮೂಲಗಳನ್ನು ಅಭಿವೃದ್ಧಿಪಡಿಸುವ ಮತ್ತು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿರುವ ಉಪಕ್ರಮ - ʻಅಮೃತ್ ಸರೋವರ್ʼಗೆ ಚಾಲನೆ

"ಜಮ್ಮು ಮತ್ತು ಕಾಶ್ಮೀರದಲ್ಲಿ ʻರಾಷ್ಟ್ರೀಯ ಪಂಚಾಯತ್ ರಾಜ್ ದಿನʼವನ್ನು ಆಚರಿಸುವುದು ಒಂದು ದೊಡ್ಡ ಬದಲಾವಣೆಯನ್ನು ಸೂಚಿಸುತ್ತದೆ"

"ಅದು ಪ್ರಜಾಪ್ರಭುತ್ವವಾಗಿರಲಿ ಅಥವಾ ಅಭಿವೃದ್ಧಿಯ ಸಂಕಲ್ಪವಾಗಿರಲಿ, ಇಂದು ಜಮ್ಮು ಮತ್ತು ಕಾಶ್ಮೀರವು ಹೊಸ ಉದಾಹರಣೆಯನ್ನು ಪ್ರಸ್ತುತಪಡಿಸುತ್ತಿದೆ. ಕಳೆದ 2-3 ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿಯ ಹೊಸ ಆಯಾಮಗಳನ್ನು ಸೃಷ್ಟಿಸಲಾಗಿದೆ.

"ಹಲವಾರು ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಮೀಸಲಾತಿಯ ಪ್ರಯೋಜನವನ್ನು ಪಡೆಯದಿದ್ದವರು ಈಗ ಮೀಸಲಾತಿಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ"

"ಅಂತರಗಳು ಯಾವುವೇ ಇರಲಿ, ಅವು ಹೃದಯಗಳ ನಡುವೆ ಇರಲಿ; ಭಾಷೆಗಳು, ಪದ್ಧತಿಗಳು ಅಥವಾ ಸಂಪನ್ಮೂಲಗಳ ನಡುವೆ ಇರಲಿ, ಅವುಗಳ ನಿರ್ಮೂಲನೆ ಇಂದು ನಮ್ಮ ಪ್ರಮುಖ ಆದ್ಯತೆಯಾಗಿದೆ"

"ಸ್ವಾತಂತ್ರ್ಯದ ಈ 'ಅಮೃತ್ ಕಾಲ' ಭಾರತದ ಸುವರ್ಣ ಯುಗವಾಗಲಿದೆ"

"ಕಣಿವೆಯ ಇಂದಿನ ಯುವಕರು ಅವರ ಹೆತ್ತವರು ಮತ್ತು ಅಜ್ಜ-ಅಜ್ಜಿಯರು ಎದುರಿಸಿದ ಸಮಸ್ಯೆಗಳನ್ನು ಎದುರಿಸುವುದಿಲ್ಲ"

"ನಮ್ಮ ಹಳ್ಳಿಗಳು ನೈಸರ್ಗಿಕ ಕೃಷಿಯತ್ತ ಸಾಗಿದರೆ ಅದು ಇಡೀ ಮನುಕುಲಕ್ಕೆ ಪ್ರಯೋಜನಕಾರಿಯಾಗಿದೆ"

'ಸಬ್ ಕಾ ಪ್ರಾಯಾಸ್‌' ಸಹಾಯದಿಂದ ಅಪೌಷ್ಟಿಕತೆಯನ್ನು ನಿವಾರಿಸುವಲ್ಲಿ ಗ್ರಾಮ ಪಂಚಾಯಿತಿಗಳು ಪ್ರಮುಖ ಪಾತ್ರ ವಹಿಸಲಿವೆ.

Posted On: 24 APR 2022 2:56PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು `ರಾಷ್ಟ್ರೀಯ ಪಂಚಾಯತ್ ರಾಜ್ ದಿನ’ದ ಆಚರಣೆಯಲ್ಲಿ ಭಾಗವಹಿಸಲು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದರು. ಈ ವೇಳೆ ಅವರು ದೇಶಾದ್ಯಂತದ ಎಲ್ಲಾ ಗ್ರಾಮ ಸಭೆಗಳನ್ನುದ್ದೇಶಿಸಿ ಮಾತನಾಡಿದರು. ಸಾಂಬಾ ಜಿಲ್ಲೆಯ ಪಲ್ಲಿ ಪಂಚಾಯಿತಿಗೆ ಭೇಟಿ ಅವರು ನೀಡಿದರು. ಸುಮಾರು 20,000 ಕೋಟಿ ರೂ.ಗಳ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿಯವರು ನೆರವೇರಿಸಿದರು. ʻಅಮೃತ ಸರೋವರʼ ಯೋಜನೆಗೂ ಅವರು ಚಾಲನೆ ನೀಡಿದರು. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಶ್ರೀ ಮನೋಜ್ ಸಿನ್ಹಾ, ಕೇಂದ್ರ ಸಚಿವರಾದ ಶ್ರೀ ಗಿರಿರಾಜ್ ಸಿಂಗ್, ಡಾ. ಜಿತೇಂದ್ರ ಸಿಂಗ್ ಮತ್ತು ಶ್ರೀ ಕಪಿಲ್ ಮೊರೇಶ್ವರ್ ಪಾಟೀಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, “ಇಂದು ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಯ ಪಯಣದಲ್ಲಿ ಒಂದು ಮೈಲಿಗಲ್ಲಿನ ದಿನವಾಗಿದೆ,ʼʼ ಎಂದು ಹೇಳಿದರು. ಜಮ್ಮು ಮತ್ತು ಕಾಶ್ಮೀರದ ಜನರ ಅಮಿತ ಉತ್ಸಾಹಕ್ಕೆ ಅವರು ಧನ್ಯವಾದ ಅರ್ಪಿಸಿದರು. ರಾಜ್ಯದೊಂದಿಗಿನ ತಮ್ಮ ದೀರ್ಘಕಾಲದ ಒಡನಾಟದಿಂದಾಗಿ, ಕಣಿವೆಯ ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಂಡಿದ್ದೇನೆ ಎಂದ ಅವರು, ಇಂದು ಉದ್ಘಾಟನೆಗೊಂಡ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಯೋಜನೆಗಳು ರಸ್ತೆ ಸಂಪರ್ಕ ಸುಧಾರಣೆಗೆ ಗಮನ ಹರಿಸುವ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. "ಸಂಪರ್ಕ ಮತ್ತು ವಿದ್ಯುತ್‌ಗೆ ಸಂಬಂಧಿಸಿದ 20 ಸಾವಿರ ಕೋಟಿ ರೂ.ಗಳ ಯೋಜನೆಗಳನ್ನು ಉದ್ಘಾಟಿಸಲಾಗಿದೆ ಮತ್ತು ಶಂಕುಸ್ಥಾಪನೆ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಹೊಸ ಇಂಬು ನೀಡುವ ಕೆಲಸವು ವೇಗವಾಗಿ ನಡೆಯುತ್ತಿದೆ. ಈ ಪ್ರಯತ್ನಗಳು ಜಮ್ಮು ಮತ್ತು ಕಾಶ್ಮೀರದ ಹೆಚ್ಚಿನ ಸಂಖ್ಯೆಯ ಯುವಕರಿಗೆ ಉದ್ಯೋಗವನ್ನು ಒದಗಿಸುತ್ತವೆ," ಎಂದು ಅವರು ಹೇಳಿದರು. “ಇಂದು ಅನೇಕ ಕುಟುಂಬಗಳು ಹಳ್ಳಿಗಳಲ್ಲಿ ತಮ್ಮ ಮನೆಗಳ ʻಆಸ್ತಿ ಕಾರ್ಡ್ʼಗಳನ್ನು ಸಹ ಪಡೆದಿವೆ. ಈ ಮಾಲೀಕತ್ವದ ಕಾರ್ಡ್‌ಗಳು ಹಳ್ಳಿಗಳಲ್ಲಿ ಹೊಸ ಸಾಧ್ಯತೆಗಳನ್ನು ತೆರೆಯಲಿವೆ. 100 ಜನೌಷಧ ಕೇಂದ್ರಗಳು ಜಮ್ಮು ಮತ್ತು ಕಾಶ್ಮೀರದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ಔಷಧಗಳು ಮತ್ತು ಶಸ್ತ್ರಚಿಕಿತ್ಸಾ ಸಾಧನಗಳನ್ನು ಒದಗಿಸಲು ನೆರವಾಗಲಿವೆ ಎಂದು ಅವರು ಹೇಳಿದರು. ಕೇಂದ್ರ ಸರಕಾರದ ಎಲ್ಲಾ ಯೋಜನೆಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಮತ್ತು ಅವುಗಳಿಂದ ಜನರಿಗೆ ಪ್ರಯೋಜನವಾಗುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಎಲ್‌ಪಿಜಿ, ಶೌಚಾಲಯಗಳು, ವಿದ್ಯುತ್, ಭೂಮಿಯ ಹಕ್ಕುಗಳು ಮತ್ತು ನೀರಿನ ಸಂಪರ್ಕಗಳ ಯೋಜನೆಗಳ ಅತಿದೊಡ್ಡ ಫಲಾನುಭವಿಗಳು ಹಳ್ಳಿಗಳಲ್ಲಿದ್ದಾರೆ,ʼʼ ಎಂದರು.  ವೇದಿಕೆಗೆ ಆಗಮಿಸುವ ಮುನ್ನ ಪ್ರಧಾನಮಂತ್ರಿಯವರು ʻಯುಎಇʼ  ಬಂದ ನಿಯೋಗಗಳನ್ನು ಭೇಟಿಯಾದರು. ಅಭಿವೃದ್ಧಿಯ ಹೊಸ ಯಶೋಗಾಥೆಯನ್ನು ಬರೆಯಲಾಗುತ್ತಿದೆ ಮತ್ತು ಅನೇಕ ಖಾಸಗಿ ಹೂಡಿಕೆದಾರರು ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಆಸಕ್ತಿ ಹೊಂದಿದ್ದಾರೆ ಎಂದು ಪ್ರಧಾನಿ ಹೇಳಿದರು. ಸ್ವಾತಂತ್ರ್ಯದ 7 ದಶಕಗಳ ಕಾಲ ಜಮ್ಮು ಮತ್ತು ಕಾಶ್ಮೀರದಲ್ಲಿ ಕೇವಲ 17 ಸಾವಿರ ಕೋಟಿ ರೂ.ಗಳ ಖಾಸಗಿ ಹೂಡಿಕೆ ಮಾಡಲಾಗಿತ್ತು. ಆದರೆ ಈಗ ಅದು ಸುಮಾರು 38,000 ಕೋಟಿ ರೂ.ಗಳನ್ನು ತಲುಪುತ್ತಿದೆ. ಪ್ರವಾಸೋದ್ಯಮವೂ ಮತ್ತೊಮ್ಮೆ ಪುಟಿದೇಳುತ್ತಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. 

ಮೂರು ವಾರಗಳಲ್ಲಿ ಸ್ಥಾಪನೆಯಾಗುತ್ತಿರುವ 500 ಕಿಲೋವ್ಯಾಟ್ ಸೌರ ಸ್ಥಾವರದ ಉದಾಹರಣೆ ನೀಡುವ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲಸದ ವಿಧಾನ ಬದಲಾಗಿರುವುದನ್ನು ಪ್ರಧಾನಿ ಒತ್ತಿ ಹೇಳಿದರು. ಏಕೆಂದರೆ, ಈ ಹಿಂದೆ ಹಿಂದೆ ದೆಹಲಿಯಿಂದ ಕಡತಗಳ ಮುಂದಕ್ಕೆ ಚಲಿಸಲು 2-3 ವಾರಗಳು ಬೇಕಾಗುತ್ತಿದ್ದವು. ಆದರೆ ಈಗ ಮೂರು ವಾರಗಳಲ್ಲಿ ಸೌರ ವಿದ್ಯುತ್‌ ಸ್ಥಾವರವೇ ಸ್ಥಾಪನೆಯಾಗುತ್ತಿದೆ ಎಂದರು. ಪಲ್ಲಿ ಪಂಚಾಯತ್‌ನ ಎಲ್ಲಾ ಮನೆಗಳು ಸೌರವಿದ್ಯುತ್ ಪಡೆಯುವುದು ʻಗ್ರಾಮ ಉರ್ಜಾ ಸ್ವರಾಜ್ಯʼಕ್ಕೆ ಒಂದು ಪರಿಪೂರ್ಣ ಉದಾಹರಣೆಯಾಗಿದೆ ಮತ್ತು ಬದಲಾದ ಕಾರ್ಯವಿಧಾನವು ಜಮ್ಮು ಮತ್ತು ಕಾಶ್ಮೀರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುಲಿದೆ ಎಂದು ಅವರು ಹೇಳಿದರು.

ಜಮ್ಮುವಿನ ಯುವಕರಿಗೆ ಭರವಸೆ ನೀಡಿದ ಪ್ರಧಾನಮಂತ್ರಿಯವರು, "ಸ್ನೇಹಿತರೇ, ನನ್ನ ಮಾತುಗಳನ್ನು ನಂಬಿ, ಕಣಿವೆಯ ಯುವಕರೇ ನನ್ನ ಮಾತುಗಳನ್ನು ನೆನಪಿಟ್ಟುಕೊಳ್ಳಿ, ನಿಮ್ಮ ಹೆತ್ತವರು ಮತ್ತು ಅಜ್ಜ-ಅಜ್ಜಿಯರು ಎದುರಿಸುತ್ತಿರುವ ಕಷ್ಟಗಳನ್ನು ನೀವು ಆ ಸಮಸ್ಯೆಗಳನ್ನು ಎದುರಿಸುವುದಿಲ್ಲ. ಇದನ್ನು ನಾನು ಸಾಧಿಸುತ್ತೇನೆ ಮತ್ತು ಅದರ ಬಗ್ಗೆ ನಿಮಗೆ ಭರವಸೆ ನೀಡಲು ಇಲ್ಲಿಗೆ ಬಂದಿದ್ದೇನೆ," ಎಂದರು.

ಅಂತಾರಾಷ್ಟ್ರೀಯ ಪರಿಸರ ಮತ್ತು ಹವಾಮಾನ ಬದಲಾವಣೆ ವೇದಿಕೆಗಳಲ್ಲಿ ಭಾರತದ ನಾಯಕತ್ವವನ್ನು ಉಲ್ಲೇಖಿಸಿದ ಶ್ರೀ ಮೋದಿ ಅವರು, ಪಲ್ಲಿ ಪಂಚಾಯತ್ ದೇಶದ ಮೊದಲ ʻಇಂಗಾಲ ಶೂನ್ಯ ಪಂಚಾಯತ್ʼ (ಕಾರ್ಬನ್‌ ನ್ಯೂಟ್ರಲ್‌ ಪಂಚಾಯತ್‌) ಆಗುವತ್ತ ದಾಪುಗಾಲು ಹಾಕುತ್ತಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. "ಪಲ್ಲಿ ಪಂಚಾಯತ್ ದೇಶದ ಮೊದಲ `ಇಂಗಾಲ ಶೂನ್ಯ ಪಂಚಾಯತ್’ ಆಗುವತ್ತ ಸಾಗುತ್ತಿದೆ. ಇಂದು, ಪಲ್ಲಿ ಎಂಬ ಹಳ್ಳಿಯಿಂದ ದೇಶದ ಎಲ್ಲಾ ಹಳ್ಳಿಗಳ ಜನ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸುವ ಅವಕಾಶವೂ ನನಗೆ ದೊರೆತಿದೆ. ಈ ದೊಡ್ಡ ಸಾಧನೆ ಮತ್ತು ಅಭಿವೃದ್ಧಿ ಕಾರ್ಯಗಳಿಗಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಅನೇಕ ಅಭಿನಂದನೆಗಳು" ಎಂದು ಅವರು ಹೇಳಿದರು. 

"ಜಮ್ಮು ಮತ್ತು ಕಾಶ್ಮೀರದಲ್ಲಿ ʻರಾಷ್ಟ್ರೀಯ ಪಂಚಾಯತ್ ರಾಜ್ ದಿನʼವನ್ನು ಆಚರಿಸುವುದು ಒಂದು ದೊಡ್ಡ ಬದಲಾವಣೆಯನ್ನು ಸೂಚಿಸುತ್ತದೆ" ಎಂದು ಪ್ರಧಾನಿ ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವು ತಳಮಟ್ಟದವರೆಗೂ ವ್ಯಾಪಿಸಿ ಬೇರು ಬಿಟ್ಟಿದೆ ಎಂದು ಶ್ರೀ ಮೋದಿ ಅವರು ಅಪಾರ ಸಂತೃಪ್ತಿ ಮತ್ತು ಹೆಮ್ಮೆ ವ್ಯಕ್ತಪಡಿಸಿದರು. "ಅದು ಪ್ರಜಾಪ್ರಭುತ್ವವಾಗಿರಲೀ ಅಥವಾ ಅಭಿವೃದ್ಧಿಯ ಸಂಕಲ್ಪವಾಗಿರಲೀ, ಇಂದು ಜಮ್ಮು ಮತ್ತು ಕಾಶ್ಮೀರವು ಹೊಸ ಉದಾಹರಣೆಯನ್ನು ಪ್ರಸ್ತುತಪಡಿಸುತ್ತಿದೆ. ಕಳೆದ 2-3 ವರ್ಷಗಳಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿಯ ಹೊಸ ಆಯಾಮಗಳನ್ನು ಸೃಷ್ಟಿಸಲಾಗಿದೆ", ಎಂದು ಪ್ರಧಾನಿ ಒತ್ತಿ ಹೇಳಿದರು. ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ʻಗ್ರಾಮ ಪಂಚಾಯತ್ʼ, ʻಪಂಚಾಯತ್ ಸಮಿತಿʼ ಮತ್ತು ʻಡಿಡಿಸಿʼ ಎಂಬ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಗೆ ಚುನಾವಣೆಗಳು ನಡೆದಿವೆ. 

ರಾಷ್ಟ್ರದ ಅಭಿವೃದ್ಧಿಯ ಪಯಣದಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಸೇರಿಸುವ ಪ್ರಕ್ರಿಯೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಜಮ್ಮು ಮತ್ತು ಕಾಶ್ಮೀರದಲ್ಲಿ 175ಕ್ಕೂ ಹೆಚ್ಚು ಕೇಂದ್ರ ಕಾನೂನುಗಳು ಅನ್ವಯವಾಗುತ್ತವೆ ಎಂದು ಮಾಹಿತಿ ನೀಡಿದರು. ಈ ಪ್ರದೇಶದ ಮಹಿಳೆಯರು, ಬಡವರು ಮತ್ತು ಅವಕಾಸ ವಂಚಿತ ವರ್ಗವು ಇದರ ಅತಿದೊಡ್ಡ ಫಲಾನುಭವಿಗಳಾಗಿದ್ದಾರೆ ಎಂದ ಅವರು ಮೀಸಲಾತಿ ನಿಯಮಗಳಲ್ಲಿನ ವೈಪರೀತ್ಯಗಳನ್ನು ನಿರ್ಮೂಲನೆ ಮಾಡುವ ಬಗ್ಗೆಯೂ ಮಾತನಾಡಿದರು. "ವಾಲ್ಮೀಕಿ ಸಮಾಜವು ದಶಕಗಳಿಂದ ಅದರ ಕಾಲಿಗೆ ಹಾಕಲಾಗಿದ್ದ ಸಂಕೋಲೆಗಳಿಂದ ಮುಕ್ತವಾಗಿದೆ. ಇಂದು ಪ್ರತಿಯೊಂದು ಸಮುದಾಯದ ಪುತ್ರರು ಮತ್ತು ಹೆಣ್ಣುಮಕ್ಕಳು ತಮ್ಮ ಕನಸುಗಳನ್ನು ನನಸಾಗಿಸಲು ಸಮರ್ಥರಾಗಿದ್ದಾರೆ. ಹಲವು ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಮೀಸಲಾತಿಯ ಪ್ರಯೋಜನವನ್ನು ಪಡೆಯದವರಿಗೆ ಈಗ ಮೀಸಲಾತಿಯ ಲಾಭವೂ ಸಿಗುತ್ತಿದೆ" ಎಂದು ಅವರು ಹೇಳಿದರು. 

'ಏಕ್ ಭಾರತ್-ಶ್ರೇಷ್ಠ ಭಾರತ್‌' ಎಂಬ ತಮ್ಮ ದೃಷ್ಟಿಕೋನವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಈ ದೃಷ್ಟಿಕೋನವು ಸಂಪರ್ಕ ಸಾಧನೆ ಮತ್ತು ಅಂತರ ಅಥವಾ ದೂರಗಳ ನಿರ್ಮೂಲನೆಯ ಮೇಲೆ ಗಮನ ಕೇಂದ್ರೀಕರಿಸುತ್ತದೆ ಎಂದು ವಿವರಿಸಿದರು. "ಅಂತರಗಳು ಯಾವುವೇ ಇರಲಿ, ಅದು ಹೃದಯಗಳ ನಡುವೆಯಿರಲಿ, ಭಾಷೆಗಳ ನಡುವೆಯಿರಲಿ, ಸಂಪ್ರದಾಯಗಳು ಅಥವಾ ಸಂಪನ್ಮೂಲಗಳ ನಡುವೆಯಿರಲಿ, ಅವುಗಳ ನಿರ್ಮೂಲನೆ ಇಂದು ನಮ್ಮ ದೊಡ್ಡ ಆದ್ಯತೆಯಾಗಿದೆ," ಎಂದು ಅವರು ಹೇಳಿದರು. 

ದೇಶದ ಅಭಿವೃದ್ಧಿಯಲ್ಲಿ ಪಂಚಾಯತ್‌ಗಳ ಪಾತ್ರದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, "ಸ್ವಾತಂತ್ರ್ಯದ ಈ 'ಅಮೃತ ಕಾಲ'ವು ಭಾರತದ ಸುವರ್ಣ ಯುಗವಾಗಲಿದೆ. ಈ ಸಂಕಲ್ಪವು ʻಸಬ್‌ ಕಾ ಪ್ರಾಯಾಸ್‌ʼ ಮೂಲಕ ಸಾಕಾರಗೊಳ್ಳಲಿದೆ. ಇದರಲ್ಲಿ ಪ್ರಜಾಪ್ರಭುತ್ವದ ಅತ್ಯಂತ ತಳಮಟ್ಟದ ಘಟಕವಾದ ಗ್ರಾಮ ಪಂಚಾಯತ್‌ ಹಾಗೂ ಸಹೋದ್ಯೋಗಿಗಳಾದ ನಿಮ್ಮೆಲ್ಲರ ಪಾತ್ರ  ಬಹಳ ಮುಖ್ಯ",  ಅವರು ಹೇಳಿದರು. ಗ್ರಾಮದ ಅಭಿವೃದ್ಧಿಗೆ ಸಂಬಂಧಿಸಿದ ಪ್ರತಿಯೊಂದು ಉಪಕ್ರಮದ ಯೋಜನೆ ರೂಪಿಸುವಿಕೆ ಮತ್ತು ಅನುಷ್ಠಾನದಲ್ಲಿ ಪಂಚಾಯತ್‌ನ ಪಾತ್ರವು ವಿಸ್ತೃತವಾಗಿರುವಂತೆ ನೋಡುವುದು ಸರಕಾರದ ಪ್ರಯತ್ನವಾಗಿದೆ ಎಂದು ಅವರು ಒತ್ತಿ ಹೇಳಿದರು. "ಈ ಮೂಲಕ, ರಾಷ್ಟ್ರೀಯ ನಿರ್ಣಯಗಳ ಸಾಧನೆಯಲ್ಲಿ ಪಂಚಾಯತ್‌ ಒಂದು ಪ್ರಮುಖ ಕೊಂಡಿಯಾಗಿ ಹೊರಹೊಮ್ಮುತ್ತದೆ," ಎಂದು ಅವರು ಹೇಳಿದರು. 2023ರ ಆಗಸ್ಟ್ 15ರೊಳಗೆ ಪ್ರತಿ ಜಿಲ್ಲೆಯಲ್ಲಿ 75 ಸರೋವರಗಳು ಇರಲಿವೆ ಎಂದು ಪ್ರಧಾನಿ ಹೇಳಿದರು. ಈ ಸರೋವರಗಳ ಸುತ್ತಲೂ ಹುತಾತ್ಮರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಹೆಸರಿನಲ್ಲಿರುವ ಮರಗಳು ಇರುವಂತಾಗಬೇಕು ಎಂದು ಅವರು ಒತ್ತಾಯಿಸಿದರು. ಗ್ರಾಮ ಪಂಚಾಯಿತಿಗಳ ಪಾರದರ್ಶಕತೆ ಮತ್ತು ಸಬಲೀಕರಣಕ್ಕೆ ಒತ್ತು ನೀಡುವ ಬಗ್ಗೆಯೂ ಶ್ರೀ ಮೋದಿ ವಿವರಿಸಿದರು. ʻಇ-ಗ್ರಾಮ ಸ್ವರಾಜ್ʼನಂತಹ ಕ್ರಮಗಳು ಪ್ರಕ್ರಿಯೆಗಳು ಯೋಜನೆ ರೂಪಿಸುವುದರಿಂದ ಹಿಡಿದು ಪಾವತಿಯವರೆಗೆ ಎಲ್ಲ ಹಂತಗಳನ್ನೂ ಜೋಡಿಸುತ್ತವೆ. ಪಂಚಾಯತ್‌ಗಳನ್ನು ಆನ್‌ಲೈನ್ ನಲ್ಲಿ ಆಡಿಟ್ ಮಾಡಲಾಗುತ್ತದೆ. ಜೊತೆಗೆ ಎಲ್ಲಾ ಗ್ರಾಮಸಭೆಗಳಲ್ಲಿರುವ ʻನಾಗರಿಕ ಸನ್ನದುʼ ವ್ಯವಸ್ಥೆಯು ಅನೇಕ ರೀತಿಯ ಪಾತ್ರಗಳನ್ನು ವಹಿಸುವಂತೆ ಅನೇಕ ಈ ಸಭೆಗಳನ್ನು ಉತ್ತೇಜಿಸುತ್ತಿದೆ. ಈ ಸಂಸ್ಥೆಗಳು ಹಾಗೂ ಗ್ರಾಮ ಆಡಳಿತದಲ್ಲಿ ವಿಶೇಷವಾಗಿ ನೀರಿನ ವಿಚಾರದಲ್ಲಿ ಮಹಿಳೆಯರ ಪಾತ್ರವನ್ನು ಅವರು ಒತ್ತಿ ಹೇಳಿದರು. 

ನೈಸರ್ಗಿಕ ಕೃಷಿಗೆ ತಮ್ಮ ಒತ್ತನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, ಭೂಮಿ ಮತ್ತು ಅಂತರ್ಜಲಕ್ಕೆ ಹಾನಿಯುಂಟುಮಾಡಲಾಗುತ್ತಿದೆ.  ಭೂಮಿ ತಾಯಿಯನ್ನು ರಾಸಾಯನಿಕಗಳಿಂದ ಮುಕ್ತಗೊಳಿಸುವುದು ನಿರ್ಣಾಯಕವಾಗಿದೆ ಎಂದು ಹೇಳಿದರು. ನಮ್ಮ ಗ್ರಾಮಗಳು ನೈಸರ್ಗಿಕ ಕೃಷಿಯತ್ತ ಸಾಗಿದರೆ ಅದು ಇಡೀ ಮನುಕುಲಕ್ಕೆ ಪ್ರಯೋಜನಕಾರಿಯಾಗುತ್ತದೆ ಎಂದು ಅವರು ಹೇಳಿದರು. ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲು ಕೈಗೊಳ್ಳಬಹುದಾದ ಹೊಸ ಮಾರ್ಗಗಳನ್ನು ಅನ್ವೇಷಿಸುವಂತೆ ಕರೆ ನೀಡಿದರು. ಇದಕ್ಕಾಗಿ ಸಾಮೂಹಿಕ ಪ್ರಯತ್ನಗಳ ಅಗತ್ಯವಿದೆ ಎಂದರು. ಹಾಗೆಯೇ, 'ಸಬ್ ಕಾ ಪ್ರಯಾಸ್‌ʼಗಳ ಸಹಾಯದಿಂದ ಅಪೌಷ್ಟಿಕತೆಯನ್ನು ಎದುರಿಸುವಲ್ಲಿ ಗ್ರಾಮ ಪಂಚಾಯಿತಿಗಳು ಪ್ರಮುಖ ಪಾತ್ರ ವಹಿಸುತ್ತವೆ. "ಅಪೌಷ್ಟಿಕತೆ ಮತ್ತು ರಕ್ತಹೀನತೆಯಿಂದ ದೇಶವನ್ನು ರಕ್ಷಿಸಲು ಕೇಂದ್ರ ಸರಕಾರ ಕೈಗೊಂಡಿರುವ ಉಪಕ್ರಮದ ಬಗ್ಗೆ ತಳಮಟ್ಟದ ಜನರಿಗೆ ಅರಿವು ಮೂಡಿಸಬೇಕು. ಈಗ ಸರಕಾರದ ಯೋಜನೆಗಳ ಅಡಿಯಲ್ಲಿ ನೀಡಲಾಗುವ ಅಕ್ಕಿಯನ್ನು ಸಾರವರ್ಧಿತಗೊಳಿಸಲಾಗುತ್ತಿದೆ," ಎಂದು ಅವರು ಮಾಹಿತಿ ನೀಡಿದರು. 

ಆಗಸ್ಟ್ 2019ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಸಾಂವಿಧಾನಿಕ ಸುಧಾರಣೆಗಳನ್ನು ಪರಿಚಯಿಸಿದಾಗಿನಿಂದ, ವ್ಯಾಪಕ ಶ್ರೇಣಿಯ ಸುಧಾರಣೆಗಳ ಮೂಲಕ ಆಡಳಿತವನ್ನು ಗಣನೀಯವಾಗಿ ಸುಧಾರಿಸಲು ಹಾಗೂ ಅಭೂತಪೂರ್ವ ವೇಗದಲ್ಲಿ ಈ ಭಾಗದ ಜನರ ಜೀವನವನ್ನು ಸುಲಭಗೊಳಿಸಲು ಸರಕಾರವು ಗಮನ ಹರಿಸಿದೆ. ಉದ್ಘಾಟನೆಗೊಂಡ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಈ ಯೋಜನೆಗಳು ಮೂಲ ಸೌಕರ್ಯಗಳನ್ನು ಒದಗಿಸಲು, ಸುಗಮ ಸಂಚಾರವನ್ನು ಖಾತರಿಪಡಿಸಲು ಮತ್ತು ಈ ಪ್ರದೇಶದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಅನುಕೂಲ ಮಾಡಿಕೊಡಲು ಬಹಳ ಸಹಾಯ ಮಾಡಲಿವೆ ಎಂದರು. 

3,100 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾದ ಬನಿಹಾಲ್ ಖಾಜಿಗುಂಡ್ ರಸ್ತೆ ಸುರಂಗ ಮಾರ್ಗವನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು. 8.45 ಕಿ.ಮೀ ಉದ್ದದ ಈ ಸುರಂಗವು ಬನಿಹಾಲ್ ಮತ್ತು ಖಾಜಿಗುಂಡ್ ನಡುವಿನ ರಸ್ತೆ ದೂರವನ್ನು 16 ಕಿ.ಮೀ ಕಡಿಮೆ ಮಾಡುತ್ತದೆ ಮತ್ತು ಪ್ರಯಾಣದ ಸಮಯವನ್ನು ಸುಮಾರು ಒಂದೂವರೆ ಗಂಟೆಗಳಷ್ಟು ಕಡಿಮೆ ಮಾಡುತ್ತದೆ. ಇದು ಅವಳಿ ಕೊಳವೆ ಸುರಂಗವಾಗಿದ್ದು, ಎರಡೂ ದಿಕ್ಕಿನ ಪ್ರಯಾಣಕ್ಕೆ ಪ್ರತ್ಯೇಕ ಮಾರ್ಗವಿದೆ. ನಿರ್ವಹಣೆ ಮತ್ತು ತುರ್ತು ಸ್ಥಳಾಂತರಕ್ಕಾಗಿ ಪ್ರತಿ 500 ಮೀಟರ್‌ಗೆ ಒಂದು ಕ್ರಾಸ್ ಪ್ಯಾಸೇಜ್ ಮೂಲಕ ಈ ಅವಳಿ ಸುರಂಗಗಳನ್ನು ಪರಸ್ಪರ ಸಂಪರ್ಕಿಸಲಾಗಿದೆ. ಈ ಸುರಂಗವು ಜಮ್ಮು ಮತ್ತು ಕಾಶ್ಮೀರದ ನಡುವೆ ಸರ್ವಋತು ಸಂಪರ್ಕವನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ ಮತ್ತು ಎರಡೂ ಪ್ರದೇಶಗಳ ಅಂತರವನ್ನು ಕಡಿಮೆ ಮಾಡಲಿದೆ ಎಂದರು. 

ಪ್ರಧಾನಮಂತ್ರಿಯವರು 7500 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ʻದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್ ವೇʼ ಹೆದ್ದಾರಿಯ ಮೂರು ರಸ್ತೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಇವು 4/6 ಪಥಗಳ ಪ್ರವೇಶ ನಿಯಂತ್ರಿತ ದೆಹಲಿ-ಕತ್ರಾ-ಅಮೃತಸರ ಎಕ್ಸ್‌ಪ್ರೆಸ್ ವೇ ಯೋಜನೆಯ ಭಾಗವಾಗಿದ್ದು, ಇವುಗಳೆಂದರೆ: ಹಿರಾನಗರ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಬಾಲ್ಸುವಾದಿಂದ ಹಿಡಿದು ಗುರ್ಹಾಬೈಲ್ದಾರನ್ವರೆಗೆ; ವಿಜಾಪುರ ವ್ಯಾಪ್ತಿಯಲ್ಲಿ ಗುರ್ಹಾಬೈಲ್ದಾರನ್, ಹಿರಾನಗರದಿಂದ ಜಖ್ವರೆಗೆ; ಮತ್ತು ಜಖ್, ವಿಜಾಪುರದಿಂದ ಜಮ್ಮುವಿನ ಕುಂಜ್ವಾನಿವರೆಗ, ಇದು ಜಮ್ಮು ವಿಮಾನ ನಿಲ್ದಾಣಕ್ಕೆ ಸನಿಹದ ಸಂಪರ್ಕ ಮಾರ್ಗವನ್ನೂ ಒಳಗೊಂಡಿದೆ. 
ಪ್ರಧಾನಮಂತ್ರಿಯವರು ರಾಟ್ಲೆ ಮತ್ತು ಕ್ವಾರ್ ಜಲವಿದ್ಯುತ್ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಕಿಶ್ತ್ವಾರ್ ಜಿಲ್ಲೆಯಲ್ಲಿ ಚೆನಾಬ್ ನದಿಗೆ ಅಡ್ಡಲಾಗಿ ಸುಮಾರು 5,300 ಕೋಟಿ ರೂ.ಗಳ ವೆಚ್ಚದಲ್ಲಿ 850 ಮೆಗಾವ್ಯಾಟ್ ಸಾಮರ್ಥ್ಯದ ರಾಟ್ಲೆ ಜಲವಿದ್ಯುತ್ ಯೋಜನೆಯನ್ನು ನಿರ್ಮಿಸಲಾಗುವುದು. ಕಿಶ್ತ್ವಾರ್ ಜಿಲ್ಲೆಯಲ್ಲಿ ಚೆನಾಬ್ ನದಿಗೆ ಅಡ್ಡಲಾಗಿ 4500 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ 540 ಮೆಗಾವ್ಯಾಟ್ ಸಾಮರ್ಥ್ಯದ ಕ್ವಾರ್ ಜಲವಿದ್ಯುತ್ ಯೋಜನೆಯನ್ನು ನಿರ್ಮಿಸಲಾಗುವುದು. ಈ ಎರಡೂ ಯೋಜನೆಗಳು ಈ ಪ್ರದೇಶದ ವಿದ್ಯುತ್ ಅವಶ್ಯಕತೆಗಳನ್ನು ಪೂರೈಸಲು ನೆರವಾಗಲಿವೆ. 

ಜಮ್ಮು ಮತ್ತು ಕಾಶ್ಮೀರದಲ್ಲಿ ಜನೌಷಧ ಕೇಂದ್ರಗಳ ಜಾಲವನ್ನು ಮತ್ತಷ್ಟು ವಿಸ್ತರಿಸಲು ಮತ್ತು ಕೈಗೆಟುಕುವ ದರದಲ್ಲಿ ಜನರಿಗೆ ಉತ್ತಮ ಗುಣಮಟ್ಟದ ಜನೆರಿಕ್ ಔಷಧಗಳು ಲಭ್ಯವಾಗುವಂತೆ ಮಾಡಲು, ಇಂತಹ 100 ಕೇಂದ್ರಗಳನ್ನು ಪ್ರಧಾನಮಂತ್ರಿಯವರು ಕಾರ್ಯೋನ್ಮುಖಗೊಳಿಸಿ ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ಈ ಕೇಂದ್ರಗಳು ಕೇಂದ್ರಾಡಳಿತ ಪ್ರದೇಶದ ಗುಡ್ಡಗಾಡು ಪ್ರದೇಶಗಳ ಮೂಲೆಗಳಲ್ಲಿವೆ.  ಪ್ರಧಾನಿ ಅವರು ಪಲ್ಲಿ ಗ್ರಾಮದಲ್ಲಿ 500 ಕಿಲೋವ್ಯಾಟ್ ಸೌರ ವಿದ್ಯುತ್ ಸ್ಥಾವರವನ್ನು ಉದ್ಘಾಟಿಸಿದ್ದು, ಇದು ದೇಶದ ಮೊದಲ ʻಇಂಗಾಲ ಶೂನ್ಯ ಪಂಚಾಯತ್ʼ  ಆಗಲಿದೆ. 

ಪ್ರಧಾನಮಂತ್ರಿಯವರು ʻಸ್ವಾಮಿತ್ವ ಕಾರ್ಡ್ʼಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು. ʻರಾಷ್ಟ್ರೀಯ ಪಂಚಾಯತ್ ರಾಜ್ ದಿನʼದಂದು ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ಪಂಚಾಯತ್‌ಗಳಿಗೆ ನೀಡಲಾಗುವ ಪ್ರಶಸ್ತಿಗಳ ಭಾಗವಾಗಿ, ವಿಜೇತ ಪಂಚಾಯತ್‌ಗಳಿಗೆ ಅವರು ಪ್ರಶಸ್ತಿಯ ಹಣವನ್ನು ವರ್ಗಾಯಿಸಿದರು. ಈ ಭಾಗದ ಗ್ರಾಮೀಣ ಪರಂಪರೆಯನ್ನು ಬಿಂಬಿಸುವ ʻಇಂಟ್ಯಾಕ್ (INTACH) ಫೋಟೋ ಗ್ಯಾಲರಿʼ ಮತ್ತು ಭಾರತದಲ್ಲಿ ಆದರ್ಶ ʻಸ್ಮಾರ್ಟ್ ಗ್ರಾಮʼಗಳನ್ನು ರಚಿಸಲು ವಿನ್ಯಾಸಗೊಳಿಸಲಾದ ಗ್ರಾಮೀಣ ಉದ್ಯಮಶೀಲತೆ ಆಧಾರಿತ ಮಾದರಿ - ʻನೋಕಿಯಾ ಸ್ಮಾರ್ಟ್‌ಪುರ್‌ʼಗೆ ಪ್ರಧಾನಮಂತ್ರಿ ಅವರು ಭೇಟಿ ನೀಡಿದರು. 

ಜಲಮೂಲಗಳ ಪುನರುಜ್ಜೀವವನ್ನು ಖಾತರಿಪಡಿಸುವ ದೃಷ್ಟಿಯಿಂದ ʻಅಮೃತ ಸರೋವರʼ ಎಂಬ ಹೊಸ ಉಪಕ್ರಮಕ್ಕೂ ಪ್ರಧಾನಮಂತ್ರಿಯವರು ಚಾಲನೆ ನೀಡಿದರು. ʻಆಜಾದಿ ಕಾ ಅಮೃತ ಮಹೋತ್ಸವʼದ ಅಂಗವಾಗಿ ದೇಶದ ಪ್ರತಿ ಜಿಲ್ಲೆಯಲ್ಲಿ 75 ಜಲಮೂಲಗಳನ್ನು ಅಭಿವೃದ್ಧಿಪಡಿಸಿ ಪುನರುಜ್ಜೀವಗೊಳಿಸುವ ಗುರಿಯನ್ನು ಇದು ಹೊಂದಿದೆ. 

 

*******



(Release ID: 1819649) Visitor Counter : 152