ಪ್ರಧಾನ ಮಂತ್ರಿಯವರ ಕಛೇರಿ
ಜಂಟಿ ಪತ್ರಿಕಾಗೋಷ್ಠಿಯಲ್ಲಿ ನೇಪಾಳ ಪ್ರಧಾನ ಮಂತ್ರಿ ಅವರೊಂದಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿಕೆ
ಪ್ರಕಟಣಾ ದಿನಾಂಕ:
02 APR 2022 1:34PM by PIB Bengaluru
ಘನತೆವೆತ್ತ ನೇಪಾಳ ಪ್ರಧಾನ ಮಂತ್ರಿ ಶೇರ್ ಬಹದ್ದೂರ್ ದೇವುಬಾ ಜಿ,
ಗೌರವಾನ್ವಿತ ಪ್ರತಿನಿಧಿಗಳೆ ಮತ್ತು ಮಾಧ್ಯಮ ಸಹೋದ್ಯೋಗಿಗಳೆ,
ನೇಪಾಳ ಪ್ರಧಾನ ಮಂತ್ರಿ ಶ್ರೀ ದೇವುಬಾ ಜಿ ಅವರನ್ನು ಭಾರತಕ್ಕೆ ಸ್ವಾಗತಿಸಲು ನನಗೆ ತುಂಬಾ ಸಂತೋಷವಾಗಿದೆ. ಇಂದು ಭಾರತೀಯ ಹೊಸ ವರ್ಷ ಸಂಭ್ರಮ ಮತ್ತು ನವರಾತ್ರಿಯ ಶುಭ ಸಂದರ್ಭದಲ್ಲಿ, ದೇವುಬಾ ಜಿ ಇಂಡಿಯಾಕ್ಕೆ ಆಗಮಿಸಿದ್ದಾರೆ. ನಾನು ಅವರಿಗೆ ಭಾರತ ಮತ್ತು ನೇಪಾಳದ ಎಲ್ಲಾ ನಾಗರಿಕರ ಪರವಾಗಿ ನವರಾತ್ರಿಯ ಶುಭಾಶಯಗಳನ್ನು ಕೋರುತ್ತೇನೆ.
ದೇವುಬಾ ಜಿ ಭಾರತದ ಹಳೆಯ ಸ್ನೇಹಿತರು. ಪ್ರಧಾನಿಯಾಗಿ ಇದು ಅವರ ಐದನೇ ಭಾರತ ಭೇಟಿಯಾಗಿದೆ. ಭಾರತ-ನೇಪಾಳ ಸಂಬಂಧ ಹೆಚ್ಚಾಗಲು ದೇವುಬಾ ಜಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಸ್ನೇಹಿತರು,
ಭಾರತ ಮತ್ತು ನೇಪಾಳದ ಗಾಢ ಸ್ನೇಹ, ನಮ್ಮ ಜನರ ಸಂಬಂಧಗಳು, ಇಂತಹ ಉದಾಹರಣೆ ಜಗತ್ತಿನ ಬೇರೆಲ್ಲೂ ಕಾಣಿಸಿಗದು. ನಮ್ಮ ನಾಗರಿಕತೆ, ನಮ್ಮ ಸಂಸ್ಕೃತಿ, ನಮ್ಮ ವಿನಿಮಯದ ಎಳೆಗಳು ಪ್ರಾಚೀನ ಕಾಲದಿಂದಲೂ ಸಂಪರ್ಕ ಹೊಂದಿವೆ. ನಾವು ಅನಾದಿ ಕಾಲದಿಂದಲೂ ಪರಸ್ಪರ ಸುಖ-ದುಃಖಗಳ ಒಡನಾಡಿಗಳು. ನಮ್ಮ ಪಾಲುದಾರಿಕೆಯ ಆಧಾರವೆಂದರೆ ನಮ್ಮ ಜನರ ನಡುವಿನ ಪರಸ್ಪರ ಸಂಬಂಧಗಳು ಮತ್ತು ಅವರ ನಡುವಿನ ವಿಚಾರ ವಿನಿಮಯವಾಗಿದೆ. ಇವು ನಮ್ಮ ಸಂಬಂಧಗಳಿಗೆ ಶಕ್ತಿಯನ್ನು ನೀಡುತ್ತವೆ ಮತ್ತು ಆ ಸಂಬಂಧಗಳನ್ನು ನಿರ್ವಹಿಸುತ್ತಾ ಬಂದಿವೆ.
ಭಾರತದ ನೀತಿಗಳು ಮತ್ತು ಅದರ ಪ್ರಯತ್ನಗಳು ನೇಪಾಳದ ಅಭಿವೃದ್ಧಿ ಮನೋಭಾವದಿಂದಲೇ ಪ್ರೇರಿತವಾಗಿವೆ. ನೇಪಾಳದ ಶಾಂತಿ, ಪ್ರಗತಿ ಮತ್ತು ಅಭಿವೃದ್ಧಿಯ ಪಯಣದಲ್ಲಿ ಭಾರತವು ದೃಢವಾದ ಪಾಲುದಾರವಾಗಿದೆ ಮತ್ತು ಯಾವಾಗಲೂ ಹಾಗೆಯೇ ಇರುತ್ತದೆ.
ಸ್ನೇಹಿತರೆ,
ದೇವುಬಾ ಜಿ ಮತ್ತು ನಾನು ಇಂದು, ಈ ಎಲ್ಲಾ ವಿಷಯಗಳು ಮತ್ತು ಇತರ ಹಲವು ಪ್ರಮುಖ ವಿಷಯಗಳ ಕುರಿತು ಫಲಪ್ರದ ಸಂವಾದ ನಡೆಸಿದೆವು. ನಾವು ನಮ್ಮ ಸಹಕಾರದ ವಿವಿಧ ಅಂಶಗಳನ್ನು ಚರ್ಚಿಸಿದ್ದೇವೆ, ವಿವಿಧ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದ್ದೇವೆ ಮತ್ತು ಭವಿಷ್ಯದ ಮಾರ್ಗಸೂಚಿ ಕುರಿತು ಚರ್ಚೆ ನಡೆಸಿದ್ದೇವೆ.
ವಿದ್ಯುತ್ ವಲಯದಲ್ಲಿ ಸಹಕಾರಕ್ಕಾಗಿ ಇರುವ ವಿಪುಲ ಅವಕಾಶಗಳ ಸಂಪೂರ್ಣ ಪ್ರಯೋಜನವನ್ನು ಎರಡೂ ರಾಷ್ಟ್ರಗಳು ಪಡೆದುಕೊಳ್ಳಬೇಕು ಎಂದು ನಾವಿಬ್ಬರೂ ಒಪ್ಪಿಕೊಂಡಿದ್ದೇವೆ. ವಿದ್ಯುತ್ ನಿಗಮದ ನಮ್ಮ ಜಂಟಿ ಕಾರ್ಯಸೂಚಿಯ ಮುನ್ನೋಟ ಹೇಳಿಕೆಯು ಭವಿಷ್ಯದ ಸಹಯೋಗಕ್ಕಾಗಿ ಒಂದು ನೀಲನಕ್ಷೆ ರೂಪಿಸಲಿದೆ. ಪಂಚೇಶ್ವರ ಯೋಜನೆಯಲ್ಲಿ ತ್ವರಿತ ಗತಿಯಲ್ಲಿ ಪ್ರಗತಿ ಸಾಧಿಸುವ ಮಹತ್ವವನ್ನು ನಾವು ಒತ್ತಿ ಹೇಳಿದ್ದೇವೆ. ಈ ಯೋಜನೆಯು ವಿದ್ಯುತ್ ವಲಯದ ಅಭಿವೃದ್ಧಿಗೆ ನಿರ್ಣಾಯಕವಾಗಲಿದೆ. ನೇಪಾಳದ ಜಲವಿದ್ಯುತ್ ಅಭಿವೃದ್ಧಿ ಯೋಜನೆಗಳಲ್ಲಿ ಭಾರತೀಯ ಕಂಪನಿಗಳು ಹೆಚ್ಚು ಭಾಗವಹಿಸುವ ವಿಷಯದ ಬಗ್ಗೆ ನಾವು ಸಹ ಒಪ್ಪಿಕೊಂಡಿದ್ದೇವೆ. ನೇಪಾಳ ತನ್ನ ಹೆಚ್ಚುವರಿ ವಿದ್ಯುತ್ತನ್ನು ಭಾರತಕ್ಕೆ ರಫ್ತು ಮಾಡುತ್ತಿರುವುದು ಸಂತಸದ ವಿಷಯ. ಇದು ನೇಪಾಳದ ಆರ್ಥಿಕ ಪ್ರಗತಿಗೆ ಉತ್ತಮ ಕೊಡುಗೆ ನೀಡುತ್ತದೆ. ನೇಪಾಳದಿಂದ ವಿದ್ಯುತ್ ಆಮದು ಮಾಡಿಕೊಳ್ಳುವ ಇನ್ನೂ ಹಲವು ಪ್ರಸ್ತಾವನೆಗಳನ್ನು ಅನುಮೋದಿಸಲಾಗುತ್ತಿದೆ ಎಂದು ತಿಳಿಸಲು ನನಗೆ ಸಂತೋಷವಾಗಿದೆ.
ನೇಪಾಳವು ಅಂತಾರಾಷ್ಟ್ರೀಯ ಸೌರಶಕ್ತಿ ಮೈತ್ರಿಕೂಟದ ಸದಸ್ಯತ್ವ ಪಡೆದಿರುವುದು ನನಗೆ ಸಂತಸ ತಂದಿದೆ. ಇದು ನಮ್ಮ ಪ್ರದೇಶದಲ್ಲಿ ಸುಸ್ಥಿರ, ಕೈಗೆಟುಕುವ ಮತ್ತು ಸ್ವಚ್ಛ ಇಂಧನ ಉತ್ಪಾದನೆ ಮತ್ತು ಬಳಕೆಯನ್ನು ಉತ್ತೇಜಿಸುತ್ತದೆ.
ಸ್ನೇಹಿತರೆ,
ಪ್ರಧಾನಮಂತ್ರಿ ದೇವುಬಾ ಜಿ ಮತ್ತು ನಾನು ಎಲ್ಲ ರೀತಿಯಲ್ಲೂ ವ್ಯಾಪಾರ ಮತ್ತು ಗಡಿಯಾಚೆಗಿನ ಸಂಪರ್ಕ ಉಪಕ್ರಮಗಳಿಗೆ ಆದ್ಯತೆ ನೀಡಲು ಒಪ್ಪಿಕೊಂಡಿದ್ದೇವೆ. ಜಯನಗರ-ಕುರ್ತಾ ರೈಲು ಮಾರ್ಗದ ಪರಿಚಯವು ಇದರ ಒಂದು ಭಾಗವಾಗಿದೆ. ಇಂತಹ ಯೋಜನೆಗಳು ಉಭಯ ದೇಶಗಳ ಜನರ ನಡುವೆ ಸುಗಮ, ರಗಳೆ-ಮುಕ್ತ ವಿನಿಮಯಕ್ಕೆ ಉತ್ತಮ ಕೊಡುಗೆ ನೀಡುತ್ತವೆ.
ನೇಪಾಳದಲ್ಲಿ ರುಪೇ ಕಾರ್ಡ್ ಪರಿಚಯವು ನಮ್ಮ ಆರ್ಥಿಕ ಸಂಪರ್ಕಕ್ಕೆ ಹೊಸ ಅಧ್ಯಾಯ ಬರೆಯಲಿದೆ. ನೇಪಾಳ ಪೊಲೀಸ್ ಅಕಾಡೆಮಿ, ನೇಪಾಳ್ ಗಂಜ್ ಮತ್ತು ರಾಮಾಯಣ ಸರ್ಕ್ಯೂಟ್ ನಲ್ಲಿ ವ್ಯವಸ್ಥಿತ ಗಡಿ ಠಾಣಾ(ಇಂಟಿಗ್ರೇಟೆಡ್ ಚೆಕ್ ಪೋಸ್ಟ್) ಮತ್ತಿತರ ಯೋಜನೆಗಳು ಎರಡೂ ದೇಶಗಳನ್ನು ಮತ್ತಷ್ಟು ಹತ್ತಿರಕ್ಕೆ ತರಲಿವೆ.
ಸ್ನೇಹಿತರೆ,
ಭಾರತ ಮತ್ತು ನೇಪಾಳದ ಮುಕ್ತ ಗಡಿಗಳನ್ನು ಅಸಂಗತ(ವಿಚ್ಛಿದ್ರಕಾರಕ) ಶಕ್ತಿಗಳು ದುರುಪಯೋಗಪಡಿಸಿಕೊಳ್ಳುತ್ತಿರುವ ವಿಷಯವನ್ನು ನಾವು ಇಂದು ಚರ್ಚಿಸಿದ್ದೇವೆ. ನಮ್ಮ ರಕ್ಷಣಾ ಮತ್ತು ಭದ್ರತಾ ಸಂಸ್ಥೆಗಳ ನಡುವೆ ನಿಕಟ ಸಹಕಾರ ಕಾಪಾಡಿಕೊಳ್ಳಲು ನಾವು ಒತ್ತು ನೀಡಿದ್ದೇವೆ. ಭಾರತ-ನೇಪಾಳ ಸಂಬಂಧಗಳ ಭವಿಷ್ಯಕ್ಕಾಗಿ ಮಹತ್ವಾಕಾಂಕ್ಷೆಯ ಗುರಿಗಳನ್ನು ಹೊಂದಿಸುವಲ್ಲಿ ನಮ್ಮ ಇಂದಿನ ಮಾತುಕತೆಗಳು ಪರಿಣಾಮಕಾರಿ ಆಗುತ್ತವೆ ಎಂಬುದು ನನಗೆ ಖಾತ್ರಿಯಿದೆ.
ದೇವುಬಾಜಿ,
ನೀವು ನಾಳೆ ಕಾಶಿಗೆ ಭೇಟಿ ನೀಡುತ್ತಿದ್ದೀರಿ. ನೇಪಾಳ ಮತ್ತು ಬನಾರಸ್ ಶತಮಾನಗಳಷ್ಟು ಹಳೆಯ ಸಂಬಂಧ ಹೊಂದಿವೆ. ಕಾಶಿಯ ಹೊಸ ರೂಪವನ್ನು ನೋಡಿ ನೀವು ಖಂಡಿತವಾಗಿಯೂ ಪ್ರಭಾವಿತರಾಗುತ್ತೀರಿ ಎಂದು ನನಗೆ ಖಾತ್ರಿಯಿದೆ. ಮತ್ತೊಮ್ಮೆ, ನಾನು ನಿಮ್ಮನ್ನು ಮತ್ತು ನಿಮ್ಮ ನಿಯೋಗವನ್ನು ಭಾರತಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.
ತುಂಬು ಧನ್ಯವಾದಗಳು!
ಹಕ್ಕು ನಿರಾಕರಣೆ: ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀಡಿರುವ ಹೇಳಿಕೆಗಳ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರ ಮೂಲ ಹಿಂದಿ ಭಾಷೆಯಲ್ಲಿದೆ.
***
(ಪ್ರಕಟಣೆ ಐ.ಡಿ.: 1812966)
ವಿಸಿಟರ್ ಕೌಂಟರ್ : 186
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam