ಪ್ರಧಾನ ಮಂತ್ರಿಯವರ ಕಛೇರಿ

ಪುಣೆಯ ಸಿಂಬಯಾಸಿಸ್‌ ವಿಶ್ವವಿದ್ಯಾಲಯದ ಸುವರ್ಣ ಸಂಭ್ರಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆ


ಸಿಂಬಯಾಸಿಸ್‌ ಆರೋಗ್ಯ ಧಾಮ ಲೋಕಾರ್ಪಣೆ

ಜ್ಞಾನದ ಹರವು ವಿಸ್ತಾರವಾಗಬೇಕು. ವಿಶಾಲವಾಗಿ ಹರಡಬೇಕು. ಜ್ಞಾನದ ಬಲದಿಂದ ಜಗತ್ತನ್ನು ಒಂದು ಕುಟುಂಬದಂತೆ ಒಗ್ಗೂಡಿಸುವ ಮಾಧ್ಯಮವಾಗಬೇಕು. ಇದೇ ನಮ್ಮ ಸಂಸ್ಕೃತಿಯಾಗಿದೆ. ಮತ್ತು ಈಗಲೂ ಇದೇ ನಮ್ಮ ದೇಶದ ಸಂಸ್ಕೃತಿ ಜೀವಂತವಾಗಿರುವುದು ನನಗೆ ಹೆಮ್ಮೆ ತಂದಿದೆ

ಸ್ಟಾರ್ಟ್‌ಅಪ್‌ ಇಂಡಿಯಾ, ಸ್ಟ್ಯಾಂಡಪ್‌ ಇಂಡಿಯಾ, ಮೇಕ್ ಇನ್‌ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ ನಮ್ಮ ಮಹತ್ವಾಕಾಂಕ್ಷೆಗಳನ್ನು ಪ್ರತಿನಿಧಿಸುತ್ತವೆ. ಇಂದು ಭಾರತವು ನಾವೀನ್ಯದತ್ತ ಹೊರಳಿದೆ. ಸುಧಾರಣೆಯಾಗುತ್ತಿದೆ. ಇಡೀ ಜಗತ್ತಿಗೆ ಪ್ರಭಾವ ಬೀರುತ್ತಿದೆ

ನಿಮ್ಮದು ಅದೃಷ್ಟವಂತ ತಲೆಮಾರು. ಈ ಹಿಂದಿನ ಅಭದ್ರ ಅಥವಾ ಅವಲಂಬಿತ ಮನೋಭಾವದವರು ನೀವಲ್ಲ. ಅಂಥ ಯಾವ ಪ್ರಭಾವಗಳು ನಿಮ್ಮ ವ್ಯಕ್ತಿತ್ವವನ್ನು ಕಾಡಿಲ್ಲ. ಇದರ ಎಲ್ಲ ಮನ್ನಣೆಯೂ ನಿಮಗೆ ಸೇರಿದ್ದು, ನಮ್ಮ ಯುವಜನಾಂಗಕ್ಕೆ ಸೇರಿದ್ದು

ಈಗ ದೇಶದಲ್ಲಿರುವ ಸರ್ಕಾರವು ಯುವಜನಾಂಗದ ಸಾಮರ್ಥ್ಯವನ್ನು ನಂಬುತ್ತದೆ. ಈ ಕಾರಣಕ್ಕಾಗಿಯೇ ಯುವಜನತೆಗಾಗಿ ಒಂದೊಂದೇ ಕ್ಷೇತ್ರಗಳನ್ನು ಒಂದರ ನಂತರ ಒಂದನ್ನು ಮುಕ್ತವಾಗಿಸುತ್ತಿದ್ದೇವೆ

ಯುಕ್ರೇನ್‌ನಿಂದ ಸಾವಿರಾರು ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ತಂದಿರುವುದು, ನಾವು ಪ್ರಭಾವೀದೇಶವಾಗಿ ಬೆಳೆಯುತ್ತಿರುವುದರ ದ್ಯೋತಕವಾಗಿದೆ

Posted On: 06 MAR 2022 3:22PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪುಣೆಯಲ್ಲಿರುವ ಸಿಂಬಾಯಸಿಸ್‌ ವಿಶ್ವವಿದ್ಯಾಲಯದ ಸುವರ್ಣ ಸಂಭ್ರಮವನ್ನು ಉದ್ಘಾಟಿಸಿದರು. ಸಿಂಬಾಯಸಿಸ್‌ ಆರೋಗ್ಯ ಧಾಮವನ್ನೂ ಅವರು ಉದ್ಘಾಟಿಸಿದರು. ಮಹಾರಾಷ್ಟ್ರದ ರಾಜ್ಯಪಾಲರಾದ ಶ್ರೀ ಭಗತ್‌ ಸಿಂಗ್‌ ಕೋಶಿಯಾರಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳನ್ನು, ಹಳೆಯ ವಿದ್ಯಾರ್ಥಿಗಳನ್ನು ಹಾಗೂ ಅಲ್ಲಿಯ ಸಿಬ್ಬಂದಿಯನ್ನು ಅಭಿನಂದಿಸುತ್ತ, ವಿಶ್ವವಿದ್ಯಾಲಯದ ಧ್ಯೇಯವಾಕ್ಯವಾಗಿರುವ ’ವಸುಧೈವ ಕುಟುಂಬಕ್ಕಮ್‌’ ಕುರಿತು ಗಮನ ಸೆಳೆದರು. ವಿಶ್ವದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಗೆ ತಂದಿರುವ ಈ ಆಧುನಿಕ ಸಂಸ್ಥೆಯು ಜಗತ್ತಿಗೆ ನಮ್ಮ ಪುರಾತನ ಪರಂಪರೆಯನ್ನು ಪರಿಚಯಿಸುತ್ತಿದೆ. ಜ್ಞಾನದ ಹರವು ವಿಸ್ತಾರವಾಗಬೇಕು. ಜಗತ್ತಿನಾದ್ಯಂತ ಹರಡಬೇಕು. ಜ್ಞಾನವು ಇಡೀ ಜಗತ್ತನ್ನು ಒಟ್ಟಿಗೆ ಕೂಡಿಡುವ ಮಾಧ್ಯಮವಾಗಬೇಕು. ಜಗವೆಲ್ಲ ಒಂದೇ ಕುಟುಂಬ ಎನ್ನುವ ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿಯಬೇಕು. ಇಂಥ ಪರಂಪರೆ ಮತ್ತು ಸಂಪ್ರದಾಯಗಳು ಈಗಲೂ ನಮ್ಮ ದೇಶದಲ್ಲಿ ಜೀವಂತವಾಗಿವೆ ಎನ್ನುವುದೇ ನಮ್ಮ ಹೆಮ್ಮೆಯಾಗಿದೆ’ ಎಂದರು.

ಪ್ರಧಾನ ಮಂತ್ರಿಗಳು ಭಾರತದ ನವ ಆತ್ಮವಿಶ್ವಾಸವನ್ನು ಎತ್ತಿ ತೋರಿ, ನವಭಾರತವು ವಿಶ್ವದ ಅತಿದೊಡ್ಡ ಆರ್ಥಿಕ ರಾಷ್ಟ್ರಗಳಲ್ಲಿ ಒಂದಾಗಿದೆ ಎಂಬುದಕ್ಕೆ ಒತ್ತು ನೀಡಿ ಹೇಳಿದರು. ಜಗತ್ತಿನ ಮೂರನೆಯ ಅತಿದೊಡ್ಡ ಸ್ಟಾರ್ಟಪ್‌ ಇಕೊಸಿಸ್ಟಮ್‌ ಇರುವ ದೇಶವಾಗಿ ಹೊರಹೊಮ್ಮಿದೆ. ‘ಸ್ಟಾರ್ಟಪ್‌ ಇಂಡಿಯಾ, ಸ್ಟ್ಯಾಂಡಪ್‌ ಇಂಡಿಯಾ, ಮೇಕ್ ಇನ್‌ ಇಂಡಿಯಾ ಮತ್ತು ಆತ್ಮನಿರ್ಭರ್‌ ಭಾರತ್‌ ನಿಮ್ಮೆಲ್ಲರ ಮಹತ್ವಾಕಾಂಕ್ಷೆಗಳನ್ನು ಪ್ರತಿನಿಧಿಸುತ್ತವೆ. ಇಂದಿನ ಭಾರತವು, ನಾವೀನ್ಯವನ್ನು ಉತ್ತೇಜಿಸುತ್ತದೆ. ಸುಧಾರಿಸುತ್ತಿದೆ. ಇಡೀ ಜಗತ್ತನ್ನೆ ಪ್ರಭಾವಿಸುತ್ತಿದೆ ಎಂದು ಹೇಳಿದರು. ಎಲ್ಲ ಪುಣೇಕರ್‌ಗಳಿಗೆ, ಪುಣೆಯವಾಸಿಗಳಿಗೆ ಕೊರೊನಾ ಲಸಿಕೆಗಳನ್ನು ನೀಡುವ ಸಂದರ್ಭದಲ್ಲಿ ಇಡೀ ದೇಶ ಒಗ್ಗೂಡಿದ ಬಗೆಯನ್ನು ವಿವರಿಸಿ ಹೇಳಬೇಕಾಗಿಲ್ಲ. ಭಾರತವು ತನ್ನ ಶಕ್ತಿಯನ್ನು ಎತ್ತಿ ತೋರಿಸಿದೆ ಎಂದರು.

ಯುಕ್ರೇನ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಯುದ್ದರಂಗದಿಂದ ಭಾರತೀಯರನ್ನು ‘ಆಪರೇಷನ್‌ ಗಂಗಾ’ ಮೂಲಕ ಸುರಕ್ಷಿತವಾಗಿ ಕರೆತರುತ್ತಿದೆ ಎಂಬುದಕ್ಕೆ ಅತಿ ಹೆಚ್ಚು ಮಹತ್ವ ನೀಡಿ ತಿಳಿಸಿದರು. ಜಗತ್ತಿನ ಅತಿದೊಡ್ಡ ದೇಶಗಳಿಗೆ ತಮ್ಮ ನಾಗರಿಕರನ್ನು ರಕ್ಷಿಸುವುದು ಕಷ್ಟವಾಗುತ್ತಿದೆ. ಆದರೆ ನಾವಿಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಸುರಕ್ಷಿತವಾಗಿ ಕರೆತಂದಿರುವುದು, ಭಾರತದ ಪ್ರಭಾವ ಹೆಚ್ಚುತ್ತಿರುವುದರ ಪ್ರತೀಕವಾಗಿದೆ.

ಪ್ರಧಾನ ಮಂತ್ರಿಗಳು ಈ ತಲೆಮಾರಿನ ಯುವಜನಾಂಗವನ್ನು ಉದ್ದೇಶಿಸಿ ಮಾತನಾಡುತ್ತ, ನಿಮ್ಮ ತಲೆಮಾರು ಅತಿ ಅದೃಷ್ಟವಂತದ್ದು. ಯುದ್ಧ, ಅವಲಂಬಿತ ಮನೋಸ್ಥಿತಿಯ ದುಷ್ಪರಿಣಾಮಗಳನ್ನು ಈ ತಲೆಮಾರು ಎದುರಿಸಬೇಕಾಗಿಲ್ಲ. ಇಂಥ ಬದಲಾವಣೆ ಬಂದಿದೆಯೆಂದರೆ ಅದಕ್ಕೆ ಕಾರಣ ಈ ಕಾಲದ ಯುವಜನಾಂಗವೂ ಆಗಿದೆ. ಈ ಶ್ರೇಯದ ಪರಿಪೂರ್ಣ ಯಶಸ್ಸು ನಮ್ಮ ಯುವಜನಾಂಗಕ್ಕೆ ಸೇರಬೇಕಾಗಿದೆ ಎಂದು ಶ್ಲಾಘಿಸಿದರು.

ನಮ್ಮ ವ್ಯಾಪ್ತಿಯಿಂದಾಚೆ ಇದ್ದ ಕ್ಷೇತ್ರಗಳಲ್ಲಿಯೂ ಭಾರತವೀಗ ಜಾಗತಿಕ ನಾಯಕನಂತೆ ಹೊರಹೊಮ್ಮಿದೆ. ಭಾರತವು ಜಾಗತಿಕವಾಗಿ ಮೊಬೈಲ್‌ಫೋನುಗಳನ್ನು ಉತ್ಪಾದಿಸುವ ಎರಡನೆಯ ಅತಿ ದೊಡ್ಡ ರಾಷ್ಟ್ರವಾಗಿದೆ. ಏಳು ವರ್ಷಗಳ ಹಿಂದೆ ಕೇವಲ 2 ಕಂಪನಿಗಳು ಮೊಬೈಲ್‌ ಫೋನುಗಳನ್ನು ಉತ್ಪಾದಿಸುತ್ತಿದ್ದವು. ಇಂದು 200ಕ್ಕಿಂತಲೂ ಹೆಚ್ಚು ಘಟಕಗಳು ಮೊಬೈಲ್‌ ಫೋನ್‌ ಉತ್ಪಾದನೆಯಲ್ಲಿ ನಿರತವಾಗಿವೆ. ರಕ್ಷಣಾಪಡೆಯಲ್ಲಿಯೂ ಭಾರತವು ಅತಿದೊಡ್ಡ ಆಮದು ಮಾಡಿಕೊಳ್ಳುವ ರಾಷ್ಟ್ರವಾಗಿತ್ತು. ಈಗ ಸುರಕ್ಷೆಗೆ ಸಂಬಂಧಿಸಿದಂತೆ ರಫ್ತುಗೊಳಿಸುವ ರಾಷ್ಟ್ರವಾಗಿ ಬದಲಾಗಿದೆ. ಈಗ ಎರಡು ಬೃಹತ್‌ಪ್ರಮಾಣದ ಎರಡು ಸುರಕ್ಷಾ ಕಾರಿಡಾರ್‌ಗಳು ಬರಲಿವೆ. ಬೃಹತ್‌ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಘಟಕಗಳು ಆರಂಭವಾಗಲಿವೆ. ಭದ್ರತಾಪಡೆಯ ಎಲ್ಲ ಅಗತ್ಯಗಳನ್ನೂ ಪೂರೈಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಬಹುತೇಕ ವಿಶೇಷ ಕ್ಷೇತ್ರಗಳು ಮುಕ್ತವಾಗಿವೆ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆನೀಡಿದರು. ಜಿಯೊ ಸ್ಪಾಶಿಯಲ್‌ ಸಿಸ್ಟಮ್ಸ್‌, ಡ್ರೋನ್‌ಗಳು, ಸೆಮಿಕಂಡಕ್ಟರ್‌ಗಳು ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶಗಳಿವೆ. ದೇಶದಲ್ಲಿರುವ ಇಂದಿನ ಸರ್ಕಾರವು ಯುವಜನತೆಯ ಸಾಮರ್ಥ್ಯದ ಮೇಲೆ ನಂಬಿಕೆ ಇರಿಸಿದೆ. ಅದೇ ಕಾರಣದಿಂದಲೇ ಅನೇಕ ಕ್ಷೇತ್ರಗಳನ್ನು ಮುಕ್ತವಾಗಿರಿಸಲಾಗಿದೆ. ಒಂದಾದ ನಂತರ ಒಂದರಂತೆ ಎಲ್ಲ ಕ್ಷೇತ್ರಗಳನ್ನೂ ಯುವಜನತೆಗೆ ಮುಕ್ತವಾಗಿರಿಸಲಾಗುತ್ತಿದೆ.

ನೀವು ಯಾವುದೇ ಕ್ಷೇತ್ರದಲ್ಲಿರಲಿ, ನಿಮ್ಮ ಭವಿಷ್ಯದಲ್ಲಿ ಒಂದಷ್ಟು ಗುರಿಗಳನ್ನು ನಿರ್ಧರಿಸುವಂತೆಯೇ ದೇಶಕ್ಕಾಗಿಯೂ ಕೆಲವು ಗುರಿಗಳನ್ನು ನಿರ್ಧರಿಸಿ ಎಂದು ಪ್ರಧಾನಿ ಮೋದಿ ಅವರು ಕೋರಿಕೊಂಡರು. ಸ್ಥಳೀಯ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡು ಹಿಡಿಯುವಲ್ಲಿ ತೊಡಗಿಸಿಕೊಳ್ಳಿ. ನಿಮ್ಮ ಸ್ವಾಸ್ಥ್ಯವನ್ನು ನೋಡಿಕೊಳ್ಳಿ. ಸುದೃಢಕಾಯಗಳಾಗಿ. ಸಂತೋಷದಿಂದಿರಿ, ಉಜ್ವರ ಭವಿಷ್ಯ ಹೊಂದಿರಿ. ನಮ್ಮ ವೈಯಕ್ತಿಕ ಬೆಳವಣಿಗೆಯಿಂದ ದೇಶದ ಅಭಿವೃದ್ಧಿಯ ಗುರಿಯಾಗಿ ಬದಲಾದಾಗ ದೇಶ ನಿರ್ಮಿಸುವ ಕೆಲಸದಲ್ಲಿ ಸಹಭಾಗಿಯಾಗುವ ಭಾವ ಬರುತ್ತದೆ ಎಂದು ಯುವಜನಾಂಗಕ್ಕೆ ಉತ್ತೇಜನದ ಮಾತುಗಳನ್ನಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳಿಗೆ ಪ್ರತಿವರ್ಷವೂ ಒಂದು ಗುರಿಯನ್ನಿರಿಸಿಕೊಂಡು ಅದಕ್ಕೆ ತಕ್ಕನಾಗಿ ಶ್ರಮಿಸಬೇಕು. ರಾಷ್ಟ್ರೀಯ ಮತ್ತು ಜಾಗತಿಕ ಬೇಡಿಕೆಗಳು, ಬೇಕುಬೇಡಗಳನ್ನು ಗಮನದಲ್ಲಿರಿಸಿಕೊಂಡು ಇವನ್ನು ಮುಂದುವರಿಯಬೇಕು. ಅಂಥ ಯೋಚನೆಗಳು,  ಆಲೋಚನೆಗಳು ಮತ್ತು ಯೋಜನೆಗಳಿದ್ದರೆ ಅವುಗಳನ್ನು ಪ್ರಧಾನಮಂತ್ರಿ ಕಚೇರಿಯೊಂದಿಗೆ ನೇರವಾಗಿ ಹಂಚಿಕೊಳ್ಳಬಹುದು ಎಂದೂ ಕರೆ ನೀಡಿದರು.

 


***



(Release ID: 1803429) Visitor Counter : 215