ಪ್ರಧಾನ ಮಂತ್ರಿಯವರ ಕಛೇರಿ

ಪುಣೆಗೆ ಭೇಟಿ ನೀಡಿದ ಪ್ರಧಾನಿ ಅವರಿಂದ ಪುಣೆ ಮೆಟ್ರೋ ರೈಲು ಯೋಜನೆ ಉದ್ಘಾಟನೆ


ಪುಣೆ ಮುನ್ಸಿಪಲ್ ಕಾರ್ಪೊರೇಷನ್ ಆವರಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು

ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ,
ಆರ್.ಕೆ. ಲಕ್ಷ್ಮಣ್ ಕಲಾ ಗ್ಯಾಲರಿ-ಮ್ಯೂಸಿಯಂ ಉದ್ಘಾಟನೆ

"ನಮ್ಮೆಲ್ಲರ ಹೃದಯದಲ್ಲಿ ನೆಲೆಸಿರುವ ಶಿವಾಜಿ ಮಹಾರಾಜರ ಈ ಪ್ರತಿಮೆಯು ಯುವ ಪೀಳಿಗೆಯಲ್ಲಿ ದೇಶಭಕ್ತಿಯ ಮನೋಭಾವವನ್ನು ಜಾಗೃತಗೊಳಿಸುತ್ತದೆ" ಎಂದು ಪ್ರಧಾನಿ ಹೇಳಿದರು.

"ಪುಣೆಯು ಶಿಕ್ಷಣ, ಸಂಶೋಧನೆ ಮತ್ತು ಅಭಿವೃದ್ಧಿ, ಐಟಿ ಮತ್ತು ಆಟೋಮೊಬೈಲ್ ಕ್ಷೇತ್ರಗಳಲ್ಲಿ ತನ್ನ ಹೆಗ್ಗುರುತನ್ನು ನಿರಂತರವಾಗಿ ಬಲಪಡಿಸುತ್ತಾ ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಆಧುನಿಕ ಸೌಲಭ್ಯಗಳು ಪುಣೆಯ ಜನರ ಅಗತ್ಯವಾಗಿದ್ದು, ಪುಣೆಯ ಜನರ ಈ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ" ಎಂದು ಹೇಳಿದರು.

"ಈ ಮೆಟ್ರೋ ಯೋಜನೆಯು ಪುಣೆಯಲ್ಲಿ ಜನ ಸಂಚಾರವನ್ನು ಸರಾಗಗೊಳಿಸುತ್ತದೆ, ಮಾಲಿನ್ಯ ಮತ್ತು ವಾಹನ ದಟ್ಟಣೆಗಳಿಂದ ಪರಿಹಾರ ನೀಡುತ್ತದೆ, ಪುಣೆಯ ಜನರ ಜೀವನ ಸುಗಮತೆಯನ್ನು ಹೆಚ್ಚಿಸುತ್ತದೆ"

"ಕ್ಷಿಪ್ರವಾಗಿ ಬೆಳೆಯುತ್ತಿರುವ ಇಂದಿನ ಭಾರತದಲ್ಲಿ, ನಾವು ವೇಗ ಮತ್ತು ಪ್ರಮಾಣದತ್ತ ಗಮನ ಹರಿಸಬೇಕು. ಅದಕ್ಕಾಗಿಯೇ ನಮ್ಮ ಸರ್ಕಾರ ಪಿಎಂ-ಘತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದೆ."

"ಆಧುನಿಕತೆಯ ಜೊತೆಗೆ, ಪುಣೆಯ ಪ್ರಾಚೀನ ಸಂಪ್ರ

Posted On: 06 MAR 2022 2:20PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪುಣೆ ಮೆಟ್ರೋ ರೈಲು ಯೋಜನೆಯನ್ನು ಉದ್ಘಾಟಿಸಿದರು ಮತ್ತು ಪುಣೆಯಲ್ಲಿ ಇಂದು ಅನೇಕ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಮಹಾರಾಷ್ಟ್ರದ ರಾಜ್ಯಪಾಲ ಶ್ರೀ ಭಗತ್ ಸಿಂಗ್ ಕೋಶ್ಯಾರಿ, ಉಪ ಮುಖ್ಯಮಂತ್ರಿ ಶ್ರೀ ಅಜಿತ್ ಪವಾರ್, ಕೇಂದ್ರ ಸಚಿವ ಶ್ರೀ ರಾಮದಾಸ್ ಅಠಾವಳೆ, ಸಂಸದ ಶ್ರೀ ಪ್ರಕಾಶ್ ಜಾವಡೇಕರ್ ಈ ಸಂದರ್ಭದಲ್ಲಿ ಹಾಜರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಪುಣೆಯ ಕೊಡುಗೆಯನ್ನು ಸ್ಮರಿಸಿದರು ಮತ್ತು ಸ್ವಾತಂತ್ರ್ಯ ಹೋರಾಟಗಾರರಾದ ಲೋಕಮಾನ್ಯ ತಿಲಕ್, ಚಪೇಕರ್ ಸಹೋದರರು, ಗೋಪಾಲ್ ಗಣೇಶ್ ಅಗರ್ಕರ್, ಸೇನಾಪತಿ ಬಾಪಟ್, ಗೋಪಾಲ್ ಕೃಷ್ಣ ದೇಶಮುಖ್, ಆರ್.ಜಿ. ಭಂಡಾರಕರ್ ಮತ್ತು ಮಹಾದೇವ್ ಗೋವಿಂದ ರಾನಡೆ ಅವರಿಗೆ ಗೌರವ ಸಲ್ಲಿಸಿದರು. ರಾಮ್‌ಭಾವು ಮ್ಹಲಗಿ ಮತ್ತು ಬಾಬಾ ಸಾಹೇಬ್ ಪುರಂದರೆ ಅವರಿಗೂ ವಂದನೆ ಸಲ್ಲಿಸಿದರು.

ಇದಕ್ಕೂ ಮುನ್ನ ಪುಣೆ ಮುನ್ಸಿಪಲ್ ಕಾರ್ಪೊರೇಷನ್ ಆವರಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಅನಾವರಣಗೊಳಿಸಿದ ಪ್ರಧಾನಿ, ಮಹಾನ್ ಯೋಧ ರಾಜನಿಗೆ ಗೌರವ ಸಲ್ಲಿಸಿದರು. "ನಮ್ಮೆಲ್ಲರ ಹೃದಯದಲ್ಲಿ ನೆಲೆಸಿರುವ ಶಿವಾಜಿ ಮಹಾರಾಜರ ಈ ಪ್ರತಿಮೆಯು ಯುವ ಪೀಳಿಗೆಯಲ್ಲಿ ದೇಶಭಕ್ತಿಯ ಮನೋಭಾವವನ್ನು ಜಾಗೃತಗೊಳಿಸುತ್ತದೆ" ಎಂದು ಅವರು ಹೇಳಿದರು.

ಈ ಹಿಂದೆ ತಾವೇ ಪುಣೆ ಮೆಟ್ರೋ ಯೋಜನೆಗೆ ಚಾಲನೆ ನೀಡಿದ್ದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ”ಪುಣೆ ಮೆಟ್ರೋಗೆ ಶಂಕುಸ್ಥಾಪನೆ ನೆರವೇರಿಸಲು ನೀವು ನನ್ನನ್ನು ಆಹ್ವಾನಿಸಿದ್ದು ನನ್ನ ಸೌಭಾಗ್ಯ, ಈಗ ನೀವು ಅದನ್ನು ಉದ್ಘಾಟಿಸುವ ಅವಕಾಶವನ್ನು ನೀಡಿದ್ದೀರಿ. ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಬಹುದು ಎಂಬ ಸಂದೇಶವೂ ಇದರಲ್ಲಿದೆ,ʼʼ ಎಂದರು. “ಶಿಕ್ಷಣ, ಸಂಶೋಧನೆ ಮತ್ತು ಅಭಿವೃದ್ಧಿ, ಐಟಿ ಮತ್ತು ಆಟೋಮೊಬೈಲ್ ಕ್ಷೇತ್ರಗಳಲ್ಲಿ ಪುಣೆ ತನ್ನ ಹೆಗ್ಗುರುತನ್ನು ನಿರಂತರವಾಗಿ ಮೂಡಿಸುತ್ತಾ ಬಂದಿದೆ" ಎಂದು ಶ್ರೀ ಮೋದಿ ಬಣ್ಣಿಸಿದರು. ಇಂತಹ ಪರಿಸ್ಥಿತಿಯಲ್ಲಿ ಆಧುನಿಕ ಸೌಲಭ್ಯಗಳು ಪುಣೆಯ ಜನರ ಅಗತ್ಯವಾಗಿದ್ದು, ಪುಣೆಯ ಜನರ ಈ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಸರ್ಕಾರ ಕೆಲಸ ಮಾಡುತ್ತಿದೆ" ಎಂದು ಹೇಳಿದರು.

2014ರವರೆಗೆ ಕೆಲವೇ ನಗರಗಳಲ್ಲಿ ಮೆಟ್ರೋ ಸೇವೆ ಲಭ್ಯವಿತ್ತು. ಆದರೆ ಇಂದು ಎರಡು ಡಜನ್‌ಗೂ ಹೆಚ್ಚು ನಗರಗಳು ಮೆಟ್ರೋ ಸೇವೆಗಳಿಂದ ಪ್ರಯೋಜನ ಪಡೆಯುತ್ತಿವೆ ಅಥವಾ ಈ ಸೇವೆಗಳನ್ನು ಪಡೆಯುವಲ್ಲಿ ಅಂತಿಮ ಘಟ್ಟದಲ್ಲಿವೆ ಎಂದು ಪ್ರಧಾನಿ ಹೇಳಿದರು. ಮುಂಬೈ, ಥಾಣೆ, ನಾಗ್ಪುರ, ಪಿಂಪ್ರಿ ಚಿಂಚ್ವಾಡ್ ಮತ್ತು ಪುಣೆಯನ್ನು ನೋಡಿದರೆ ಮಹಾರಾಷ್ಟ್ರವು ಈ ವಿಸ್ತರಣೆಯಲ್ಲಿ ಸಾಕಷ್ಟು ಗಮನಾರ್ಹ ಪಾಲನ್ನು ಹೊಂದಿದೆ ಎಂದು ಅವರು ಹೇಳಿದರು. "ಈ ಮೆಟ್ರೋ ಯೋಜನೆಯು ಪುಣೆಯಲ್ಲಿ ಸಾರಿಗೆ ಸಂಚಾರವನ್ನು ಸರಾಗಗೊಳಿಸುತ್ತದೆ, ಮಾಲಿನ್ಯ ಮತ್ತು ವಾಹನ ದಟ್ಟಣೆಗೆ ಪರಿಹಾರ ನೀಡುತ್ತದೆ, ಪುಣೆಯ ಜನರ ಜೀವನ ಸುಗಮತೆಯನ್ನು ಹೆಚ್ಚಿಸುತ್ತದೆ" ಎಂದು ಪ್ರಧಾನಿ ಹೇಳಿದರು. ಮೆಟ್ರೋ ಮತ್ತು ಇತರ ಸಾರ್ವಜನಿಕ ಸಾರಿಗೆಯನ್ನು ಬಳಸುವುದನ್ನು ಅಭ್ಯಾಸಮಾಡಿಕೊಳ್ಳುವಂತೆ ಪುಣೆಯ ಜನರಿಗೆ ವಿಶೇಷವಾಗಿ ಸುಶಿಕ್ಷಿತರಿಗೆ ಅವರು ಕರೆ ನೀಡಿದರು.

ಹೆಚ್ಚುತ್ತಿರುವ ನಗರ ಜನಸಂಖ್ಯೆಯು ಒಂದು ಅವಕಾಶ ಮತ್ತು ಸವಾಲಾಗಿದೆ ಎಂದು ಪ್ರಧಾನಿ ಹೇಳಿದರು. ನಮ್ಮ ನಗರಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಭಾಯಿಸಲು, ಸಮೂಹ ಸಾರಿಗೆ ವ್ಯವಸ್ಥೆಯ ಅಭಿವೃದ್ಧಿಯೇ ಮುಖ್ಯ ಪರಿಹಾರವಾಗಿದೆ. ದೇಶದ ಬೆಳೆಯುತ್ತಿರುವ ನಗರಗಳಿಗಾಗಿ ವಿಸ್ತೃತ ದೃಷ್ಟಿಕೋನವನ್ನು ಅವರು ಪಟ್ಟಿ ಮಾಡಿದರು. ಅಂತಹ ನಗರಗಳಲ್ಲಿ ಸರ್ಕಾರವು ಹೆಚ್ಚು ಹಸಿರು ಸಾರಿಗೆ, ಎಲೆಕ್ಟ್ರಿಕ್ ಬಸ್‌ಗಳು, ಎಲೆಕ್ಟ್ರಿಕ್ ಕಾರುಗಳು ಮತ್ತು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಒದಗಿಸಲು ಬದ್ಧವಾಗಿದೆ. ಜೊತೆಗೆ ಅಂತಹ ಪ್ರತಿ ನಗರದಲ್ಲಿ ಸ್ಮಾರ್ಟ್ ಸಾರಿಗೆ ವ್ಯವಸ್ಥೆ ಒದಗಿಸಲಾಗುವುದು. ಅಲ್ಲಿ ಜನರು ಎಲ್ಲಾ ಸಾರಿಗೆ ಸೌಲಭ್ಯಗಳಿಗೆ ಒಂದೇ ಕಾರ್ಡ್ ಬಳಸುತ್ತಾರೆ. ಈ ಸೌಲಭ್ಯವನ್ನು ʻಸ್ಮಾರ್ಟ್ʼ ಆಗಿಸಲು ಪ್ರತಿ ನಗರದಲ್ಲಿ ʻಇಂಟಿಗ್ರೇಟೆಡ್ ಕಮಾಂಡ್ & ಕಂಟ್ರೋಲ್ ಸೆಂಟರ್ʼ ಇರಬೇಕು. ಆವರ್ತನ ಆರ್ಥಿಕತೆಯನ್ನು ಬಲಪಡಿಸಲು ಪ್ರತಿಯೊಂದು ನಗರವು ಆಧುನಿಕ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಹೊಂದಿರಬೇಕು. ಪ್ರತಿ ನಗರದ ನೀರನ್ನು ಮತ್ತು ನೀರಿನ ಮೂಲಗಳನ್ನು ರಕ್ಷಿಸಲು ಉತ್ತಮ ವ್ಯವಸ್ಥೆಗಳನ್ನು ಮಾಡಲು ಸಾಕಷ್ಟು ಆಧುನಿಕ ಒಳಚರಂಡಿ ಸಂಸ್ಕರಣಾ ಘಟಕಗಳು ಇರಬೇಕು", ಎಂದು ಪ್ರಧಾನಿ ವಿವರಿಸಿದರು. ತ್ಯಾಜ್ಯದಿಂದ ಸಂಪತ್ತನ್ನು ಸೃಷ್ಟಿಸಲು ಅಂತಹ ನಗರಗಳು ʻಗೋಬರ್ ಧನ್ʼ ಮತ್ತು ಜೈವಿಕ ಅನಿಲ ಘಟಕಗಳನ್ನು ಹೊಂದಿರುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಎಲ್‌ಇಡಿ ಬಲ್ಬ್ ಬಳಕೆಯಂತಹ ಇಂಧನ ದಕ್ಷತೆ ಕ್ರಮಗಳು ಈ ನಗರಗಳ ಹೆಗ್ಗುರುತಾಗಿರಬೇಕು. ʻಅಮೃತ್ ಮಿಷನ್ʼ ಮತ್ತು ʻರೇರಾʼ ಕಾನೂನುಗಳಿಂದಾಗಿ ನಗರ ಭೂದೃಶ್ಯದಲ್ಲಿ ಹೊಸ ಅವಕಾಶಗಳು ದೊರೆಯುತ್ತವೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿಯವರು ನಗರಗಳ ಜೀವನದಲ್ಲಿ ನದಿಗಳ ಮಹತ್ವವನ್ನು ಪುನರುಚ್ಚರಿಸಿದರು. ಈ ಪ್ರಮುಖ ಜೀವನಾಡಿಗಳ ಪ್ರಾಮುಖ್ಯ ಮತ್ತು ಸಂರಕ್ಷಣೆಯ ಬಗ್ಗೆ ಜನರಲ್ಲಿ ಹೊಸ ಜಾಗೃತಿ ಮೂಡಿಸಲು ಅಂತಹ ನದಿ ದಡದ ನಗರಗಳಲ್ಲಿ ʻನದಿ ಉತ್ಸವʼಗಳನ್ನು ನಡೆಸುವಂತೆ ಸಲಹೆ ನೀಡಿದರು.

ಮೂಲಸೌಕರ್ಯದ ವಿಚಾರವಾಗಿ ಹೊಸ ಕಾರ್ಯವಿಧಾನದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, "ಯಾವುದೇ ದೇಶದಲ್ಲಿ ಆಧುನಿಕ ಮೂಲಸೌಕರ್ಯಗಳ ಅಭಿವೃದ್ಧಿಗೆ ವೇಗ ಮತ್ತು ಪ್ರಮಾಣ ಅತ್ಯಂತ ಪ್ರಮುಖ ವಿಷಯಗಳಾಗಿವೆ. ಆದರೆ ದಶಕಗಳಿಂದ, ಪ್ರಮುಖ ಯೋಜನೆಗಳ ಕಾಮಗಾರಿ ಪೂರ್ಣಗೊಳಿಸಲು ಸುದೀರ್ಘ ಸಮಯ ತೆಗೆದುಕೊಳ್ಳುವಂತಹ ವ್ಯವಸ್ಥೆಗಳನ್ನು ನಾವು ಹೊಂದಿದ್ದೇವೆ. ಈ ಮಂದಗತಿಯ ಮನೋಭಾವವು ದೇಶದ ಅಭಿವೃದ್ಧಿಯ ಮೇಲೂ ಪರಿಣಾಮ ಬೀರುತ್ತದೆ," ಎಂದರು. "ಇಂದಿನ ವೇಗವಾಗಿ ಬೆಳೆಯುತ್ತಿರುವ ಭಾರತದಲ್ಲಿ, ನಾವು ವೇಗ ಮತ್ತು ಪ್ರಮಾಣದತ್ತ ಗಮನ ಹರಿಸಬೇಕು. ಅದಕ್ಕಾಗಿಯೇ ನಮ್ಮ ಸರಕಾರ ಪಿಎಂ-ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದೆ,ʼʼ ಎಂದರು. ಎಲ್ಲಾ ಮಧ್ಯಸ್ಥಗಾರರು ಸಂಪೂರ್ಣ ಮಾಹಿತಿ ಮತ್ತು ಸರಿಯಾದ ಸಮನ್ವಯದೊಂದಿಗೆ ಕೆಲಸ ಮಾಡುವುದರಿಂದ ಗತಿಶಕ್ತಿ ಯೋಜನೆಯು ಸಮಗ್ರ ಗಮನವನ್ನು ಖಾತರಿಪಡಿಸುತ್ತದೆ ಎಂದು ಅವರು ಹೇಳಿದರು.

ಅಂತಿಮವಾಗಿ, "ಆಧುನಿಕತೆಯ ಜೊತೆಗೆ, ಪುಣೆಯ ಪ್ರಾಚೀನ ಸಂಪ್ರದಾಯ ಮತ್ತು ಮಹಾರಾಷ್ಟ್ರದ ಹೆಮ್ಮೆಗೆ ನಗರ ಯೋಜನೆಯಲ್ಲಿ ಸಮಾನ ಸ್ಥಾನ ನೀಡಲಾಗುತ್ತಿದೆ" ಎಂದು ಪ್ರಧಾನಿ ತೃಪ್ತಿ ವ್ಯಕ್ತಪಡಿಸಿದರು.

ಪುಣೆ ಮೆಟ್ರೋ ರೈಲು ಯೋಜನೆ ಯೋಜನೆಯು ಪುಣೆಯಲ್ಲಿ ನಗರ ಸಂಚಾರಕ್ಕಾಗಿ ವಿಶ್ವದರ್ಜೆಯ ಮೂಲಸೌಕರ್ಯವನ್ನು ಒದಗಿಸುವ ಪ್ರಯತ್ನವಾಗಿದೆ.

2016ರ ಡಿ.24ರಂದು ಪ್ರಧಾನಮಂತ್ರಿಯವರು ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಒಟ್ಟು 32.2 ಕಿ.ಮೀ ಪುಣೆ ಮೆಟ್ರೋ ರೈಲು ಯೋಜನೆಯ 12 ಕಿ.ಮೀ ಉದ್ದದ ಯೋಜನೆಯನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ. ಇಡೀ ಯೋಜನೆಯನ್ನು ಒಟ್ಟು 11,400 ಕೋಟಿ ರೂ.ಗಿಂತಲೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಗಾರ್ವೇರ್ ಮೆಟ್ರೋ ನಿಲ್ದಾಣದಲ್ಲಿ ಪ್ರದರ್ಶನವನ್ನು ಉದ್ಘಾಟಿಸಿದ ಪ್ರಧಾನಮಂತ್ರಿಯವರು ಅಲ್ಲಿಂದ ಆನಂದ್ ನಗರ ಮೆಟ್ರೋ ನಿಲ್ದಾಣಕ್ಕೆ ಮೆಟ್ರೋ ಪ್ರಯಾಣ ಕೈಗೊಂಡರು.

ಮುಲಾ-ಮುತ್ತ ನದಿ ಯೋಜನೆಗಳ ಪುನಶ್ಚೇತನ ಹಾಗೂ ಮಾಲಿನ್ಯ ಕಡಿತ ಯೋಜನೆಗೂ ಅವರು ಶಂಕುಸ್ಥಾಪನೆ ನೆರವೇರಿಸಿದರು. 1080 ಕೋಟಿ ರೂ.ಗೂ ಅಧಿಕ ಯೋಜನಾ ವೆಚ್ಚದಲ್ಲಿ ನದಿಯ 9 ಕಿ.ಮೀ.ಪ್ರದೇಶದಲ್ಲಿ ಪುನಶ್ಚೇತನ ಮಾಡಲಾಗುವುದು. ನದಿ ದಡದ ರಕ್ಷಣೆ, ಇಂಟರ್‌ಸೆಪ್ಟರ್ ಒಳಚರಂಡಿ ಜಾಲ, ಸಾರ್ವಜನಿಕ ಸೌಕರ್ಯಗಳು, ದೋಣಿ ವಿಹಾರ ಮುಂತಾದವು ಇದರಲ್ಲಿ ಸೇರಿವೆ. ಮುಲಾ-ಮುತ್ತ ನದಿ ಮಾಲಿನ್ಯ ತಗ್ಗಿಸುವ ಯೋಜನೆಯನ್ನು "ಒಂದು ನಗರ ಒಂದು ನಿರ್ವಾಹಕʼ ಪರಿಕಲ್ಪನೆಯ ಆಧಾರದಡಿ 1470 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಜಾರಿಗೆ ತರಲಾಗುವುದು. ಈ ಯೋಜನೆಯಡಿ ಒಟ್ಟು 11 ಒಳಚರಂಡಿ ಸಂಸ್ಕರಣಾ ಘಟಕಗಳನ್ನು ನಿರ್ಮಿಸಲಾಗುವುದು. ಇದು ಸುಮಾರು 400 ಎಂಎಲ್‌ಡಿ ಒಟ್ಟು ಸಾಮರ್ಥ್ಯವನ್ನು ಹೊಂದಿದೆ. ಬಾನರ್‌ನಲ್ಲಿ ನಿರ್ಮಿಸಲಾದ 140 ಇ-ಬಸ್‌ಗಳು ಮತ್ತು ಇ-ಬಸ್ ಡಿಪೋಗೆ ಪ್ರಧಾನಮಂತ್ರಿಯವರು ಚಾಲನೆ ನಡೆಸಿದರು.

ಪುಣೆಯ ಬಾಲೇವಾಡಿಯಲ್ಲಿ ನಿರ್ಮಿಸಲಾದ ಆರ್.ಕೆ. ಲಕ್ಷ್ಮಣ್ ಕಲಾ ಗ್ಯಾಲರಿ-ಮ್ಯೂಸಿಯಂ ಅನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು. ಮಾಲ್ಗುಡಿ ಗ್ರಾಮವನ್ನು ಆಧರಿಸಿದ ಕಿರು ಮಾದರಿಯು ಮ್ಯೂಸಿಯಂನ ಪ್ರಮುಖ ಆಕರ್ಷಣೆಯಾಗಿದ್ದು, ಆಡಿಯೋ-ವಿಶುವಲ್ ಎಫೆಕ್ಟ್‌ಗಳ ಮೂಲಕ ಇದಕ್ಕೆ ಜೀವ ತುಂಬಲಾಗಿದೆ. ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ ಅವರು ರಚಿಸಿದ ವ್ಯಂಗ್ಯಚಿತ್ರಗಳನ್ನು ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗಿದೆ.

ಈ ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಮಂತ್ರಿಯವರು ಪುಣೆ ಮುನ್ಸಿಪಲ್ ಕಾರ್ಪೊರೇಷನ್ ಆವರಣದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಸುಮಾರು 9.5 ಅಡಿ ಎತ್ತರದ ಈ ಪ್ರತಿಮೆಯನ್ನು 1850 ಕೆಜಿ ತೂಕದ ಗನ್ ಲೋಹದಿಂದ ತಯಾರಿಸಲಾಗಿದೆ.

​​​​​​

***



(Release ID: 1803379) Visitor Counter : 383