ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

"ಆಪರೇಷನ್ ಗಂಗಾ" ಭಾಗವಾಗಿ ಉಕ್ರೇನ್‌ ನಿಂದ ದೆಹಲಿಗೆ ಆಗಮಿಸಿದ 200 ವಿದ್ಯಾರ್ಥಿಗಳು ಮತ್ತು ಭಾರತೀಯ ನಾಗರಿಕರು


ದೇಶಕ್ಕೆ ಮರಳಿದವರನ್ನು ಸ್ವಾಗತಿಸಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಶ್ರೀ ಭಗವಂತ ಖೂಬಾ

ಉಕ್ರೇನ್‌ ನಿಂದ ಎಲ್ಲಾ ಭಾರತೀಯರನ್ನು ವಾಪಸು ಕರೆಸಿಕೊಳ್ಳಲು ಭಾರತ ಸರ್ಕಾರ ಬದ್ಧವಾಗಿದೆ ಎಂದು ಅವರಿಗೆ ಭರವಸೆ

Posted On: 03 MAR 2022 12:07PM by PIB Bengaluru

ಭಾರತ ಸರ್ಕಾರದ ಆಪರೇಷನ್ ಗಂಗಾ ಭಾಗವಾಗಿ ಉಕ್ರೇನ್ ನಿಂದ ಸುಮಾರು 200 ವಿದ್ಯಾರ್ಥಿಗಳು ಮತ್ತು ಭಾರತೀಯ ನಾಗರಿಕರನ್ನು ಉಕ್ರೇನ್ ನಿಂದ ದೇಶಕ್ಕೆ ಮರಳಿ ಕರೆತರಲಾಗಿದೆ

ಉಕ್ರೇನ್ ನಿಂದ  ಇಂದು ಬೆಳಗ್ಗೆ ಇಂಡಿಗೋ ವಿಶೇಷ ವಿಮಾನದ ಮೂಲಕ ದೆಹಲಿಗೆ ಆಗಮಿಸಿದ ಭಾರತೀಯ ನಾಗರಿಕರು ಹೆಚ್ಚಾಗಿ ವಿದ್ಯಾರ್ಥಿಗಳನ್ನು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಶ್ರೀ ಭಗವಂತ ಖೂಬಾ ಅವರು ಇಂದಿರಾಗಾಂಧೀ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.

ಸ್ವದೇಶಕ್ಕೆ ಮರಳಿದ ಎಲ್ಲರನ್ನೂ ಸ್ವಾಗತಿಸಿದ ಕೇಂದ್ರ ಸಚಿವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದ ಕೇಂದ್ರ ಸರ್ಕಾರ ಉಕ್ರೇನ್ ನಿಂದ ಎಲ್ಲ ಭಾರತೀಯರನ್ನು ಮರಳಿ ದೇಶಕ್ಕೆ ಕರೆತರಲು ಬದ್ಧವಾಗಿದೆ ಎಂದು ತಿಳಿಸಿದರು. ನಿಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳನ್ನೂ ಶೀಘ್ರವೇ  ಕರೆತರಲಾಗುವುದು ಎಂಬ ಭರವಸೆಯನ್ನು ಅವರು ವಿದ್ಯಾರ್ಥಿಗಳಿಗೆ ನೀಡಿದರು.

ಭಾರತಕ್ಕೆ ಮರಳಿ ತಮ್ಮ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ ವಿದ್ಯಾರ್ಥಿಗಳು ಕೇಂದ್ರ ಸರ್ಕಾರಕ್ಕೆ ತಮ್ಮ ಕೃತಜ್ಞತೆ ಸಲ್ಲಿಸಿದರು. ಆನಂದದ ಕಣ್ಣೀರು ಸುರಿಸಿದ ಯುವ ವಿದ್ಯಾರ್ಥಿ, ಯುದ್ಧಪೀಡಿತ ದೇಶದಿಂದ ಸುರಕ್ಷಿತವಾಗಿ ಕರೆತಂದಿದ್ದು ಒಂದು ಪವಾಡ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅದನ್ನು ಮಾಡಿ ತೋರಿಸಿದರು ಎಂದು ಸಂತಸ ವ್ಯಕ್ತಪಡಿಸಿದರು.

ಇಸ್ತಾನ್ ಬುಲ್ ನಿಂದ ಬುಧವಾರ ರಾತ್ರಿ 10.35ಕ್ಕೆ (ಭಾರತೀಯ ಕಾಲಮಾನ) ನಭಕ್ಕೆ ಹಾರಿದ ಇಂಡಿಗೋ ವಿಮಾನ ಇಂದು ಬೆಳಗ್ಗೆ 8.31ಕ್ಕೆ ನವದೆಹಲಿಗೆ ಬಂದಿಳಿಯಿತು.

ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್ ಪ್ರೆಸ್, ಇಂಡಿಗೋ ಮತ್ತು ಸ್ಪೈಸ್ ಜೆಟ್ ಆಪರೇಷನ್ ಗಂಗಾ ಕಾರ್ಯಾಚರಣೆಯಲ್ಲಿ ಸೇರಿದ್ದು, ಉಕ್ರೇನ್ ನೆರೆಯ ರಾಷ್ಟ್ರಗಳಿಂದ ದೆಹಲಿ ಮತ್ತು ಮುಂಬೈಗೆ ಹಲವು ವಿಮಾನಗಳ ಕಾರ್ಯಾಚರಣೆ ನಡೆಸುತ್ತಿವೆ.

***



(Release ID: 1802631) Visitor Counter : 167