ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

29 ಮಕ್ಕಳಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ-2022 ಪ್ರದಾನ


ಪಿ.ಎಂ.ಆರ್. ಬಿ.ಪಿ. ಪ್ರಶಸ್ತಿ ವಿಜೇತರೊಂದಿಗೆ ಪ್ರಧಾನಮಂತ್ರಿ ಸಂವಾದ

ರಾಷ್ಟ್ರೀಯ ಹೆಣ್ಣು ಮಗುವಿನ ದಿನದ ಸಂದರ್ಭದಲ್ಲಿ ದೇಶದ ಪುತ್ರಿಯರಿಗೆ ಶುಭ ಕೋರಿದ ಪ್ರಧಾನಮಂತ್ರಿ

ಈ ಹಿಂದೆ ಅವಕಾಶವನ್ನೇ ನೀಡದಿದ್ದ ಕ್ಷೇತ್ರಗಳಲ್ಲೂ ಇಂದು ಹೆಣ್ಣುಮಕ್ಕಳು ಅದ್ಭುತಗಳನ್ನು ಮಾಡುತ್ತಿದ್ದಾರೆ: ಪ್ರಧಾನಮಂತ್ರಿ

ಇದು ನವ ಭಾರತ, ಇದು ಹೊಸತನದಿಂದ ಹಿಂದೆ ಸರಿಯುವುದಿಲ್ಲ. ಧೈರ್ಯ ಮತ್ತು ದೃಢ ಸಂಕಲ್ಪ ಇಂದು ಭಾರತದ ಹೆಗ್ಗುರುತಾಗಿದೆ: ಪ್ರಧಾನಮಂತ್ರಿ

Posted On: 24 JAN 2022 2:35PM by PIB Bengaluru

ಕರ್ನಾಟಕದ ಇಬ್ಬರು ಸೇರಿದಂತೆ 29 ಮಕ್ಕಳಿಗೆ ಈ ವರ್ಷ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ನೀಡಲಾಗಿದ್ದು, ನಾವಿನ್ಯತೆ (7), ಸಮಾಜ ಸೇವೆ (4), ಪಾಂಡಿತ್ಯ (1), ಕ್ರೀಡೆ (8), ಕಲೆ ಮತ್ತು ಸಂಸ್ಕೃತಿ (6) ಮತ್ತು ಶೌರ್ಯ (3) ಪ್ರವರ್ಗಗಳಲ್ಲಿ ಅಸಾಧಾರಣ ಸಾಧನೆಗಾಗಿ ದೇಶದ ಎಲ್ಲಾ ಪ್ರದೇಶಗಳಿಂದ ಆಯ್ಕೆ ಮಾಡಲಾಗಿದೆ. 21 ರಾಜ್ಯಗಳು ಮತ್ತು ಕೇಂದ್ರಾಡಳಿತ ರಾಜ್ಯಗಳಿಗೆ ಸೇರಿದ ಪ್ರಶಸ್ತಿ ವಿಜೇತರಲ್ಲಿ 15 ಬಾಲಕರು ಮತ್ತು 14 ಬಾಲಕಿಯರು ಸೇರಿದ್ದಾರೆ.

ಕಲೆ ಮತ್ತು ಸಂಸ್ಕೃತಿಯ ವಿಭಾಗದಲ್ಲಿ ಕರ್ನಾಟಕದ ರೆಮೋನಾ ಎವೆಟ್ಟಿ ಪೆರೇರಾ ಮತ್ತು ಸಯ್ಯದ್ ಫತೇನ್ ಅಹ್ಮದ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ದೇಶದಲ್ಲಿ ಕೋವಿಡ್-19ರಿಂದಾಗಿ ಹಿಂದೆಂದೂ ಕಾಣದಂತಹ ಪರಿಸ್ಥಿತಿ ಉದ್ಭವಿಸಿರುವ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಭೌತಿಕ ಸಮಾರಂಭವನ್ನು ಆಯೋಜಿಸಲು ಸಾಧ್ಯವಾಗಿಲ್ಲ. ಮಕ್ಕಳ ಅಸಾಧಾರಣ ಕಾರ್ಯಗಳನ್ನು ಅಭಿನಂದಿಸಲು ಮತ್ತು ಪ್ರೇರೇಪಿಸಲು, ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಸಂದರ್ಭದಲ್ಲಿ ಮತ್ತು ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ಒಂದು ವರ್ಚುವಲ್ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಪಿ.ಎಂ.ಆರ್.ಬಿ.ಪಿ. 2021 ಮತ್ತು 2022ರ ಪ್ರಶಸ್ತಿ ವಿಜೇತರು, ಅವರ ಪೋಷಕರು ಮತ್ತು ಸಂಬಂಧಿತ ಜಿಲ್ಲಾಧಿಕಾರಿಗಳೊಂದಿಗೆ ತಮ್ಮ ಜಿಲ್ಲಾ ಕೇಂದ್ರದಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಸಮಾರಂಭದಲ್ಲಿ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರೀಯ ಬ್ಲಾಕ್ ಚೈನ್ ಯೋಜನೆ ಅಡಿಯಲ್ಲಿ ಐಐಟಿ ಕಾನ್ಪುರ ಅಭಿವೃದ್ಧಿಪಡಿಸಿರುವ ಬ್ಲಾಕ್ ಚೈನ್ ಚಾಲಿತ ತಂತ್ರಜ್ಞಾನವನ್ನು ಬಳಸಿಕೊಂಡು ಪಿ.ಎಂ.ಆರ್.ಬಿ.ಪಿ. 2021 ಮತ್ತು 2022ರ 61 ವಿಜೇತರಿಗೆ ಡಿಜಿಟಲ್ ಪ್ರಮಾಣಪತ್ರಗಳನ್ನು ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸುವವರ ಮೊಬೈಲ್ ಸಾಧನಗಳಲ್ಲಿ ಸ್ಥಾಪಿಸಲಾದ ಡಿಜಿಟಲ್ ವ್ಯಾಲೆಟ್ ಗಳಲ್ಲಿ ಡಿಜಿಟಲ್ ಪ್ರಮಾಣಪತ್ರಗಳನ್ನು ಸಂಗ್ರಹಿಸಿಡಲಾಗುತ್ತದೆ. ಬ್ಲಾಕ್ ಚೈನ್ ಚಾಲಿತ ತಂತ್ರಜ್ಞಾನವನ್ನು ಬಳಸಿಕೊಂಡು ನೀಡಲಾಗುವ ಡಿಜಿಟಲ್ ಪ್ರಮಾಣಪತ್ರಗಳು ನಕಲಿಮಾಡಲಾಗದ, ಜಾಗತಿಕವಾಗಿ ಪರಿಶೀಲಿಸಬಹುದಾದ, ಆಯ್ದ ಸಂದರ್ಭದಲ್ಲಿ ಬಹಿರಂಗಪಡಿಸಬಹುದಾದ ಮತ್ತು ಬಳಕೆದಾರರ ವಸ್ತುವಿಷಯಕ್ಕೆ ಸೂಕ್ಷ್ಮಸಂವೇದಿಯಾಗಿವೆ. ಪ್ರಶಸ್ತಿ ವಿಜೇತರಿಗೆ ಪ್ರಮಾಣಪತ್ರಗಳನ್ನು ನೀಡಲು ಬ್ಲಾಕ್ ಚೈನ್ ತಂತ್ರಜ್ಞಾನವನ್ನು ಮೊದಲ ಬಾರಿಗೆ ಬಳಸಲಾಗುತ್ತಿದೆ.

ಪಿ.ಎಂ.ಆರ್.ಬಿ.ಪಿ. 2022ರ ಪ್ರಶಸ್ತಿ ವಿಜೇತರಿಗೆ ರೂ.1,00,000/- ನಗದು ಬಹುಮಾನವನ್ನು ನೀಡಲಾಯಿತು, ಇದನ್ನು ಮಾನ್ಯ ಪ್ರಧಾನಮಂತ್ರಿಯವರು ಕಾರ್ಯಕ್ರಮದ ವೇಳೆ ವಿಜೇತರ ಖಾತೆಗಳಿಗೆ ಆನ್ ಲೈನ್ ನಲ್ಲಿ ವರ್ಗಾವಣೆ ಮಾಡಿದರು.

ಮಾನ್ಯ ಪ್ರಧಾನಮಂತ್ರಿಯವರು ಪಿ.ಎಂ.ಆರ್.ಬಿ.ಪಿ. 2022ರ ವಿಜೇತರೊಂದಿಗೆ ವರ್ಚುವಲ್ ಮೂಲಕ ಸಂವಾದ ನಡೆಸಿದರು. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ ಮತ್ತು ರಾಜ್ಯ ಸಚಿವ ಡಾ. ಮುಂಜ್ಪಾರಾ ಮಹೇಂದ್ರಭಾಯಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಧ್ಯಪ್ರದೇಶದ ಇಂದೋರ್ ನ ಮಾಸ್ಟರ್ ಅವಿ ಶರ್ಮಾ ಜೊತೆಗೆ ಸಂವಾದ ನಡೆಸಿದ ಪ್ರಧಾನಮಂತ್ರಿಯವರು ರಾಮಾಯಣದ ವಿವಿಧ ಅಂಶಗಳಿಗೆ ಸಂಬಂಧಿಸಿದಂತೆ ಸಮೃದ್ಧ ವಿಚಾರಗಳ  ರಹಸ್ಯದ ಬಗ್ಗೆ ವಿಚಾರಿಸಿದರು. ಲಾಕ್ ಡೌನ್ ಸಮಯದಲ್ಲಿ ರಾಮಾಯಣ ಸರಣಿಯನ್ನು ಪ್ರಸಾರ ಮಾಡುವ ನಿರ್ಧಾರದಿಂದ ಸ್ಫೂರ್ತಿ ಸಿಕ್ಕಿತು ಎಂದು ಮಾಸ್ಟರ್ ಅವಿ ಶರ್ಮಾ ಹೇಳಿದರು. ಅವಿ ತನ್ನ ರಚನೆಯ ಕೆಲವು ದ್ವಿಪದಿಗಳನ್ನು ಪಠಿಸಿದರು. ಪ್ರಧಾನಮಂತ್ರಿಯವರು ಕುಮಾರಿ ಉಮಾ ಭಾರತಿ  ಅವರ ಮಾತುಗಳನ್ನು ಕೇಳಿದ ಒಂದು ಘಟನೆಯನ್ನು ವಿವರಿಸಿದರು, ಬಾಲ್ಯದಲ್ಲಿ ಅವರು ಕಾರ್ಯಕ್ರಮಗಳಲ್ಲಿ ಅಪಾರ ಆಧ್ಯಾತ್ಮಿಕ ಆಳ ಮತ್ತು ಜ್ಞಾನವನ್ನು ತೋರಿಸುತ್ತಿದ್ದರು. ಮಧ್ಯಪ್ರದೇಶದ ಮಣ್ಣಿನಲ್ಲಿ ಅಂತಹ ಅಪೂರ್ವ ಪ್ರತಿಭೆಗಳಿಗೆ ಕಾರಣವಾಗುವ ಏನೋ ಇದೆ ಎಂದು ಅವರು ಹೇಳಿದರು. ದೊಡ್ಡ ಕಾರ್ಯಗಳನ್ನು ಮಾಡಲು ನೀವು ತುಂಬಾ ಚಿಕ್ಕವರಲ್ಲ ಎಂಬ ಗಾದೆಗೆ ಅವಿ ಸ್ಫೂರ್ತಿ ಮತ್ತು ಉದಾಹರಣೆ ಎಂದು ಪ್ರಧಾನಮಂತ್ರಿ ಹೇಳಿದರು.

ಕರ್ನಾಟಕದ ಕುಮಾರಿ ರೆಮೋನಾ ಎವೆಟ್ಟೆ ಪೆರೇರಾ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿಯವರು ಭಾರತೀಯ ನೃತ್ಯದ ಬಗ್ಗೆ ಅವರಿಗಿರುವ ಉತ್ಸಾಹದ ಬಗ್ಗೆ ಚರ್ಚಿಸಿದರು. ಈ ಸ್ಫೂರ್ತಿಯನ್ನು ಮುಂದುವರಿಸಲು ಅವರು ಎದುರಿಸಿದ ತೊಡಕುಗಳ ಬಗ್ಗೆ ವಿಚಾರಿಸಿದರು. ಮಗಳ ಕನಸುಗಳನ್ನು ಸಾಕಾರಗೊಳಿಸಲು ತಮಗೆ ಎದುರಾದ ಪ್ರತಿಕೂಲ ಪರಿಸ್ಥಿತಿಗಳನ್ನುಮೆಟ್ಟಿ ನಿಂತಿದ್ದಕ್ಕಾಗಿ ಪ್ರಧಾನಮಂತ್ರಿಯವರು ಅವರ ತಾಯಿಯನ್ನು ಅಭಿನಂದಿಸಿದರು. ರೆಮೋನಾ ಅವರ ಸಾಧನೆಗಳು ಅವರ ವಯಸ್ಸಿಗಿಂತ ಬಹಳ ದೊಡ್ಡದಾಗಿದೆ ಎಂದು ಹೇಳಿದ ಪ್ರಧಾನಮಂತ್ರಿ, ಆಕೆಯ ಕಲೆ ಶ್ರೇಷ್ಠ ದೇಶದ ಶಕ್ತಿಯನ್ನು ವ್ಯಕ್ತಪಡಿಸುವ ಒಂದು ಮಾರ್ಗವಾಗಿದೆ ಎಂದು ಹೇಳಿದರು.

ತ್ರಿಪುರಾದ ಕುಮಾರಿ ಪುಹಾಬಿ ಚಕ್ರವರ್ತಿ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿಯವರು, ಅವರ ಕೋವಿಡ್ ಸಂಬಂಧಿತ ಆವಿಷ್ಕಾರದ ಬಗ್ಗೆ ವಿಚಾರಿಸಿದರು. ಅವರು ಕ್ರೀಡಾಪಟುಗಳಿಗೆ ತಮ್ಮ ಫಿಟ್ನೆಸ್ ಆ್ಯಪ್ ಬಗ್ಗೆ ಪ್ರಧಾನಮಂತ್ರಿಯವರಿಗೆ ಮಾಹಿತಿ ನೀಡಿದರು. ಅವರ ಪ್ರಯತ್ನದಲ್ಲಿ ಶಾಲೆ, ಸ್ನೇಹಿತರು ಮತ್ತು ಪೋಷಕರಿಂದ ಅವರು ಪಡೆಯುತ್ತಿರುವ ಬೆಂಬಲದ ಬಗ್ಗೆ ಪ್ರಧಾನಮಂತ್ರಿಯವರು ಕೇಳಿದರು. ಕ್ರೀಡೆಗೆ ತನ್ನ ಸಮಯವನ್ನು ಮೀಸಲಿಡುವಲ್ಲಿ ಮತ್ತು ನಾವೀನ್ಯತೆಯ ಆನ್ವಯಿಕಗಳನ್ನು ಅಭಿವೃದ್ಧಿಪಡಿಸುವಲ್ಲಿ ಅವರ ಸಮತೋಲನದ ಬಗ್ಗೆ ಅವರು ಕೇಳಿದರು.

ಬಿಹಾರದ ಪಶ್ಚಿಮ ಚಂಪಾರಣ್ ನ ಮಾಸ್ಟರ್ ಧೀರಜ್ ಕುಮಾರ್ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿಯವರು, ಮೊಸಳೆ ದಾಳಿಯಿಂದ ತಮ್ಮ ಸೋದರನನ್ನು ರಕ್ಷಿಸಿದ ಘಟನೆಯ ಬಗ್ಗೆ ಕೇಳಿದರು. ತಮ್ಮ ಸೋದರನನ್ನು ಉಳಿಸುವಾಗ ಅವರ ಮಾನಸಿಕ ಸ್ಥಿತಿ ಮತ್ತು ಈಗ ಅವರು ಪಡೆದ ಖ್ಯಾತಿಯ ನಂತರ ಅವರು ಹೇಗೆ ಭಾವಿಸುತ್ತಾರೆ ಎಂದೂ ಪ್ರಧಾನಮಂತ್ರಿ ಕೇಳಿದರು. ಬಾಲಕನ ಧೈರ್ಯ ಮತ್ತು ಮನಸ್ಸಿನ ಸ್ಥಿತಿಯನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ಸೇನೆ ಸೇರಿ ಸೈನಿಕನಾಗಿ ದೇಶಕ್ಕೆ ಸೇವೆ ಸಲ್ಲಿಸಲು ಬಯಸುತ್ತೇನೆ ಎಂದು ಧಿರಾಜ್ ಪ್ರಧಾನಮಂತ್ರಿಯವರಿಗೆ ತಿಳಿಸಿದರು.

ಪಂಜಾಬ್ ನ ಮಾಸ್ಟರ್ ಮೇದಾಂಶ್ ಕುಮಾರ್ ಗುಪ್ತಾ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿಯವರು, ಕೋವಿಡ್ ಸಮಸ್ಯೆಗಳಿಗೆ ಸಂಬಂಧಿಸಿದ ಆ್ಯಪ್ ರಚಿಸಿದ ಅವರ ಸಾಧನೆಯ ಬಗ್ಗೆ ವಿಚಾರಿಸಿದರು. ಮೇದಾಂಶ್ ಅವರಂತಹ ಮಕ್ಕಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಸರ್ಕಾರದ ಪ್ರಯತ್ನಗಳು ಫಲ ನೀಡುತ್ತಿವೆ ಮತ್ತು ಉದ್ಯೋಗಾಕಾಂಕ್ಷಿಗಳಾಗುವ ಬದಲು ಉದ್ಯೋಗದಾತರಾಗುವ ಪ್ರವೃತ್ತಿ ಹೆಚ್ಚು ಸ್ಪಷ್ಟವಾಗುತ್ತಿದೆ ಎಂದು ತಾವು ಭಾವಿಸುವುದಾಗಿ ಪ್ರಧಾನಮಂತ್ರಿ ತಿಳಿಸಿದರು.

ಚಂಡೀಗಢದ ಕುಮಾರಿ ತರುಷಿ ಗೌರ್ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿಯವರು, ಕ್ರೀಡೆ ಮತ್ತು ಅಧ್ಯಯನದ ನಡುವಿನ ಸಮತೋಲನದ ಬಗ್ಗೆ ಅವರ ಅಭಿಪ್ರಾಯವನ್ನು ವಿಚಾರಿಸಿದರು. ತರೂಷಿ ಬಾಕ್ಸರ್ ಮೇರಿ ಕೋಮ್ ಅವರನ್ನು ಏಕೆ ಆರಾಧಿಸುತ್ತಾರೆ ಎಂದು ಪ್ರಧಾನಮಂತ್ರಿ ಕೇಳಿದರು. ಅದಕ್ಕೆ ಉತ್ತರಿಸಿದ ಆಕೆ, ಮೇರಿ ಕೋಂ ಅವರು ಕ್ರೀಡಾಪಟುವಾಗಿ ಮತ್ತು ಒಬ್ಬ ತಾಯಿಯಾಗಿ ಶ್ರೇಷ್ಠತೆ ಮತ್ತು ಸಮತೋಲನದ ಬದ್ಧತೆ ಹೊಂದಿದ್ದು, ಅವರನ್ನು ಇಷ್ಟಪಡುವುದಾಗಿ ಪ್ರಧಾನಮಂತ್ರಿಯವರಿಗೆ ಮಾಹಿತಿ ನೀಡಿದರು. ಕ್ರೀಡಾಪಟುಗಳಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಮತ್ತು ಪ್ರತಿ ಹಂತದಲ್ಲೂ ಗೆಲ್ಲುವ ಮನಃಸ್ಥಿತಿಯನ್ನು ಸೃಷ್ಟಿಸಲು ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ದೇಶವು ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಪ್ರಮುಖ ಸಮಯದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನಮಾಡಲಾಗಿದೆ ಎಂಬ ಅಂಶದ ಹಿನ್ನೆಲೆಯಲ್ಲಿ ಈ ಪ್ರಶಸ್ತಿಗಳು ಹೆಚ್ಚು ಮಹತ್ವದ್ದಾಗಿವೆ ಎಂದು ಹೇಳಿದರು. ಗತಿಸಿದಕಾಲದಿಂದ ಚೈತನ್ಯವನ್ನು ಸೆಳೆದು ಅಮೃತ ಕಾಲದ ಮುಂಬರುವ 25 ವರ್ಷಗಳಲ್ಲಿ ಉತ್ತಮ ಫಲಿತಾಂಶಗಳನ್ನು ಸಾಧಿಸಲು ಮತ್ತು ತಮ್ಮನ್ನು ಸಮರ್ಪಿಸಿಕೊಳ್ಳಲು ಇದು ಸಕಾಲ ಎಂದು ಅವರು ಹೇಳಿದರು. ರಾಷ್ಟ್ರೀಯ ಹೆಣ್ಣು ಮಗುವಿನ ದಿನದಂದು ಅವರು ದೇಶದ ಪುತ್ರಿಯರಿಗೆ ಶುಭ ಕೋರಿದರು. ಸ್ವಾತಂತ್ರ್ಯ ಹೋರಾಟದ ಭವ್ಯ ಇತಿಹಾಸ ಮತ್ತು ವೀರ ಬಾಲೆ ಕನಕಲತಾ ಬರುವಾ, ಖುದಿರಾಮ್ ಬೋಸ್ ಮತ್ತು ರಾಣಿ ಗೈದಿನಿಲು ಅವರ ಕೊಡುಗೆಯನ್ನು ಪ್ರಧಾನಮಂತ್ರಿ ಸ್ಮರಿಸಿದರು. "ಈ ಹೋರಾಟಗಾರರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ದೇಶದ ಸ್ವಾತಂತ್ರ್ಯವನ್ನು ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡಿದ್ದರು ಮತ್ತು ಅದಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು" ಎಂದು ಪ್ರಧಾನಮಂತ್ರಿ ಹೇಳಿದರು.

ಕಳೆದ ವರ್ಷ ದೀಪಾವಳಿಯಂದು ಜಮ್ಮು ಮತ್ತು ಕಾಶ್ಮೀರದ ನೌಶೇರಾ ವಲಯಕ್ಕೆ ಭೇಟಿ ನೀಡಿದ್ದಾಗ, ಸ್ವಾತಂತ್ರ್ಯಾನಂತರದ ಯುದ್ಧದಲ್ಲಿ ಬಾಲ ಸೈನಿಕರ ಪಾತ್ರ ವಹಿಸಿದ್ದ ಬಲದೇವ್ ಸಿಂಗ್ ಮತ್ತು ಬಸಂತ್ ಸಿಂಗ್ ಅವರನ್ನು ಭೇಟಿ ಮಾಡಿದ್ದನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು. ಅವರು ತಮ್ಮ ಜೀವನದ ಬಗ್ಗೆ ಕಾಳಜಿ ವಹಿಸದೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಸೈನ್ಯಕ್ಕೆ ಸಹಾಯ ಮಾಡಿದರು. ಆ ವೀರರ ಶೌರ್ಯಕ್ಕೆ ಪ್ರಧಾನಮಂತ್ರಿಯವರು ಗೌರವ ಸಲ್ಲಿಸಿದರು.

ಗುರು ಗೋವಿಂದ ಸಿಂಗ್ ಜೀ ಅವರ ಪುತ್ರರ ಶೌರ್ಯ ಮತ್ತು ತ್ಯಾಗದ ಉದಾಹರಣೆಗಳನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು. ಸಾಹಿಬ್ ಜಾದಾಗಳು ಅಪಾರ ಶೌರ್ಯದಿಂದ ತ್ಯಾಗ ಮಾಡಿದಾಗ, ಅವರು ತುಂಬಾ ಚಿಕ್ಕವರು ಎಂದು ತಿಳಿಸಿದರು. ಭಾರತದ ನಾಗರಿಕತೆ, ಸಂಸ್ಕೃತಿ, ನಂಬಿಕೆ ಮತ್ತು ಧರ್ಮಕ್ಕಾಗಿ ಅವರ ತ್ಯಾಗವನ್ನು ಅನುಪಮವಾದ್ದು. ಸಾಹಿಬ್ ಜಾದರು ಮತ್ತು ಅವರ ತ್ಯಾಗದ ಬಗ್ಗೆ ಹೆಚ್ಚು ತಿಳಿದುಕೊಳ್ಳುವಂತೆ ಪ್ರಧಾನಮಂತ್ರಿ ಕಿರಿಯರಿಗೆ ತಿಳಿಸಿದರು.

ದೆಹಲಿಯ ಇಂಡಿಯಾ ಗೇಟ್ ಬಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಡಿಜಿಟಲ್ ಪ್ರತಿಮೆಯನ್ನು ಸಹ ಸ್ಥಾಪಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. "ನಾವು ನೇತಾಜಿ ಅವರಿಂದ - ಮೊದಲು ರಾಷ್ಟ್ರದ ಕರ್ತವ್ಯ- ಎಂಬ ಅತಿದೊಡ್ಡ ಸ್ಫೂರ್ತಿಯನ್ನು ಪಡೆಯುತ್ತೇವೆ. ನೇತಾಜಿ ಅವರಿಂದ ಸ್ಫೂರ್ತಿ ಪಡೆದು ನೀವೂ ದೇಶದ ಕರ್ತವ್ಯದ ಹಾದಿಯಲ್ಲಿ ಮುಂದುವರಿಯಬೇಕು" ಎಂದು ಶ್ರೀ ಮೋದಿ ಹೇಳಿದರು.

ಯಾವುದೇ ವಲಯದಲ್ಲಿ ನೀತಿಗಳು ಮತ್ತು ಉಪಕ್ರಮಗಳಲ್ಲಿ ಯುವಕರನ್ನು ಕೇಂದ್ರಬಿಂದುವಿನಲ್ಲಿ ಇರಿಸಲಾಗುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ನವೋದ್ಯಮ ಭಾರತ, ಸ್ಟ್ಯಾಂಡ್ ಅಪ್ ಇಂಡಿಯಾ, ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತದ ಜನಾಂದೋಲನ ಮತ್ತು ಆಧುನಿಕ ಮೂಲಸೌಕರ್ಯಗಳ ಸೃಷ್ಟಿಯಂತಹ ಉಪಕ್ರಮಗಳನ್ನು ಅವರು ಉಲ್ಲೇಖಿಸಿದರು. ಇದು ಭಾರತ ಮತ್ತು ಹೊರದೇಶಗಳಲ್ಲಿ ಈ ಹೊಸ ಯುಗವನ್ನು ಮುನ್ನಡೆಸುತ್ತಿರುವ ಭಾರತದ ಯುವಕರ ವೇಗಕ್ಕೆ ಹೊಂದಿಕೆಯಾಗಿದೆ ಎಂದು ಅವರು ಹೇಳಿದರು. ನಾವೀನ್ಯತೆ ಮತ್ತು ನವೋದ್ಯಮ ಕ್ಷೇತ್ರದಲ್ಲಿ ಭಾರತದ ಹೆಚ್ಚುತ್ತಿರುವ ಪರಾಕ್ರಮವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಭಾರತೀಯ ಯುವ ಸಿಇಓಗಳ ನೇತೃತ್ವದಲ್ಲಿ ಪ್ರಮುಖ ಜಾಗತಿಕ ಕಂಪನಿಗಳು ನಡೆಯುತ್ತಿರುವುದು ರಾಷ್ಟ್ರದ ಹೆಮ್ಮೆ ಎಂದು ಅವರು ತಿಳಿಸಿದರು. "ಇಂದು ಭಾರತದ ಯುವಕರು ನವೋದ್ಯಮಗಳ ಜಗತ್ತಿನಲ್ಲಿ ಉತ್ತಮ ಸಾಧನೆ ಮಾಡುವುದನ್ನು ನೋಡಿದಾಗ ನಾವು ಹೆಮ್ಮೆ ಪಡುತ್ತೇವೆ. ಇಂದು ಭಾರತದ ಯುವಕರು ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂಬುದನ್ನು ನೋಡಿದಾಗ ನಮಗೆ ಹೆಮ್ಮೆ ಎನಿಸುತ್ತದೆ", ಎಂದು ಪ್ರಧಾನಮಂತ್ರಿ ತಿಳಿಸಿದರು.

ಹೆಣ್ಣು ಮಕ್ಕಳಿಗೆ ಮೊದಲು ಅನುಮತಿಯೇ ಇಲ್ಲದಿದ್ದ ಕ್ಷೇತ್ರಗಳಲ್ಲಿ ಇಂದು, ಹೆಣ್ಣುಮಕ್ಕಳು ಅದ್ಭುತಗಳನ್ನು ಮಾಡುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಹೊಸತನದಿಂದ ಹಿಂದೆ ಸರಿಯದ ನವ ಭಾರತ ಇದು, ಧೈರ್ಯ ಮತ್ತು ದೃಢನಿಶ್ಚಯ ಇಂದು ಭಾರತದ ಹೆಗ್ಗುರುತುಗಳಾಗಿವೆ ಎಂದರು.

ಲಸಿಕೆ ಕಾರ್ಯಕ್ರಮದಲ್ಲೂ ಭಾರತದ ಮಕ್ಕಳು ತಮ್ಮ ಆಧುನಿಕ ಮತ್ತು ವೈಜ್ಞಾನಿಕ ಚಿಂತನೆಯನ್ನು ತೋರಿಸಿದ್ದಾರೆ ಎಂದು ಪ್ರಧಾನಮಂತ್ರಿ ಶ್ಲಾಘಿಸಿದರು. ಜನವರಿ 3 ರಿಂದ, ಕೇವಲ 20 ದಿನಗಳಲ್ಲಿ, 40 ದಶಲಕ್ಷಕ್ಕೂ ಹೆಚ್ಚು ಮಕ್ಕಳು ಕೊರೊನಾ ಲಸಿಕೆಯನ್ನು ಪಡೆದಿದ್ದಾರೆ. ಸ್ವಚ್ಛ ಭಾರತ ಅಭಿಯಾನದಲ್ಲಿ ಅವರ ನಾಯಕತ್ವವನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ಸ್ಥಳೀಯತೆಗೆ ಧ್ವನಿಯಾಗುವ ರಾಯಭಾರಿಗಳಾಗಿ ಮತ್ತು ಆತ್ಮನಿರ್ಭರ ಭಾರತ ಅಭಿಯಾನದ ನೇತೃತ್ವ ವಹಿಸುವಂತೆ ಪ್ರಧಾನಮಂತ್ರಿ ಮನವಿ ಮಾಡಿದರು.

ಪಿಎಂಆರ್.ಬಿಪಿ, 2022 ಪ್ರಶಸ್ತಿ ವಿಜೇತರ ಪಟ್ಟಿ ಈ ಕೆಳಗಿನಂತಿದೆ:

ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ-2022ರ ಪ್ರಶಸ್ತಿ ವಿಜೇತರು

ಕ್ರ.ಸಂ

ಹೆಸರು

ಪ್ರವರ್ಗ

ರಾಜ್ಯ

1.

ಗೌರಿ ಮಹೇಶ್ವರಿ

ಕಲೆ ಮತ್ತು ಸಂಸ್ಕೃತಿ

ರಾಜಾಸ್ಥಾನ

  1.  

ರೆಮೋನಾ ಎವೆಟ್ಟೆ ಪೆರೇರಾ

ಕಲೆ ಮತ್ತು ಸಂಸ್ಕೃತಿ

ಕರ್ನಾಟಕ

  1.  

ದೇವಿಪ್ರಸಾದ್

ಕಲೆ ಮತ್ತು ಸಂಸ್ಕೃತಿ

ಕೇರಳ

  1.  

ಸಯ್ಯದ್ ಫತೇನ್ ಅಹ್ಮದ್

ಕಲೆ ಮತ್ತು ಸಂಸ್ಕೃತಿ

ಕರ್ನಾಟಕ

  1.  

ದೌಲ್ಸ್ ಲಂಬಾಮಯುಮ್

ಕಲೆ ಮತ್ತು ಸಂಸ್ಕೃತಿ

ಮಣಿಪುರ

  1.  

ದ್ರಿತೀಶ್ ಮಾನ್ ಚಕ್ರವರ್ತಿ

ಕಲೆ ಮತ್ತು ಸಂಸ್ಕೃತಿ

ಅಸ್ಸಾಂ

  1.  

ಗುರುಗು ಹಿಮಪ್ರಿಯ

ಶೌರ್ಯ

ಆಂಧ್ರಪ್ರದೇಶ

  1.  

ಶಿವಾಂಗಿ ಕಾಳೆ

ಶೌರ್ಯ

ಮಹಾರಾಷ್ಟ್ರ

  1.  

ಧೀರಜ್ ಕುಮಾರ್

ಶೌರ್ಯ

ಬಿಹಾರ

  1.  

ಶಿವಂ ರಾವತ್

ನಾವೀನ್ಯತೆ

ಉತ್ತರಾಖಂಡ

  1.  

ವಿಶಾಲಿನಿ ಎನ್.ಸಿ.

ನಾವೀನ್ಯತೆ

ತಮಿಳುನಾಡು

  1.  

ಜುಯಿ ಅಭಿಜಿತ್ ಕೇಸ್ಕರ್

ನಾವೀನ್ಯತೆ

ಮಹಾರಾಷ್ಟ್ರ

  1.  

ಪುಹಬಿ ಚಕ್ರವರ್ತಿ

ನಾವೀನ್ಯತೆ

ತ್ರಿಪುರ

  1.  

ಅಶ್ವತ್ಥ ಬಿಜು

ನಾವೀನ್ಯತೆ

ತಮಿಳುನಾಡು

  1.  

ಬನಿತಾ ಡ್ಯಾಶ್

ನಾವೀನ್ಯತೆ

ಒಡಿಶಾ

  1.  

ತನೀಶ್ ಸೇಥಿ

ನಾವೀನ್ಯತೆ

ಹರಿಯಾಣ

  1.  

ಅವಿ ಶರ್ಮಾ

ಪಾಂಡಿತ್ಯ

ಮಧ್ಯಪ್ರದೇಶ

  1.  

ಮೇದಾಂಶ್ ಕುಮಾರ್ ಗುಪ್ತಾ

ಸಮಾಜ ಸೇವೆ

ಪಂಜಾಬ್

  1.  

ಅಭಿನವ್ ಕುಮಾರ್ ಚೌಧರಿ

ಸಮಾಜ ಸೇವೆ

ಉತ್ತರಪ್ರದೇಶ

  1.  

ಪಾಲ್ ಸಾಕ್ಷಿ

ಸಮಾಜ ಸೇವೆ

ಬಿಹಾರ

  1.  

ಆಕರ್ಷ್ ಕೌಶಲ್

ಸಮಾಜ ಸೇವೆ

ಹರಿಯಾಣ

  1.  

ಅರುಶಿ ಕೊತ್ವಾಲ್

ಕ್ರೀಡೆ

ಜಮ್ಮು ಮತ್ತು ಕಾಶ್ಮೀರ

  1.  

ಶ್ರೇಯಾ ಲೋಹಿಯಾ

ಕ್ರೀಡೆ

ಹಿಮಾಚಲ ಪ್ರದೇಶ

  1.  

ತೆಲುಕುಂಟಾ ವಿರಾಟ್ ಚಂದ್ರ

ಕ್ರೀಡೆ

ತೆಲಂಗಾಣ

  1.  

ಚೌಧರಿ ಸಿಂಗ್ ಚೌಧರಿ

ಕ್ರೀಡೆ

ಉತ್ತರ ಪ್ರದೇಶ

  1.  

ಜಿಯಾ ರಾಯ್

ಕ್ರೀಡೆ

ಉತ್ತರ ಪ್ರದೇಶ

  1.  

ಸ್ವಯಂ ಪಾಟೀಲ್

ಕ್ರೀಡೆ

ಮಹಾರಾಷ್ಟ್ರ

  1.  

ತೃಷಿ ಗೌರ್

ಕ್ರೀಡೆ

ಚಂಡೀಗಢ

  1.  

ಅನ್ವಿ ವಿಜಯ್ ಜನ್ಜರುಕಿಯಾ

ಕ್ರೀಡೆ

ಗುಜರಾತ್

ಪಿಎಂಆರ್.ಬಿ.ಪಿ. -2022 ಪ್ರಶಸ್ತಿಯ ವಿವರ ಈ ಕೆಳಗಿನ ಲಿಂಕ್ ನಲ್ಲಿ ಲಭ್ಯ:

Pradhan Mantri Rashtriya Bal Puraskar 2022 - Awardees - YouTube

***



(Release ID: 1792219) Visitor Counter : 453