ಪ್ರಧಾನ ಮಂತ್ರಿಯವರ ಕಛೇರಿ

ದೇಶದಾದ್ಯಂತ ಕೋವಿಡ್-19, ಓಮೈಕ್ರಾನ್  ಸ್ಥಿತಿ ಮತ್ತು ಆರೋಗ್ಯ ವ್ಯವಸ್ಥೆಗಳ ಸನ್ನದ್ಧತೆಯನ್ನು ಪರಾಮರ್ಶಿಸಲು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ ಪ್ರಧಾನಮಂತ್ರಿ


ಹೊಸ ರೂಪಾಂತರಿಯ ಹಿನ್ನೆಲೆಯಲ್ಲಿ, ನಾವು ಜಾಗರೂಕರಾಗಿರಬೇಕು ಮತ್ತು ಎಚ್ಚರಿಕೆಯಿಂದಿರಬೇಕು: ಪ್ರಧಾನಮಂತ್ರಿ

ಜಿಲ್ಲಾ ಮಟ್ಟದಿಂದ ಮೊದಲ್ಗೊಂಡು ರಾಜ್ಯಗಳಲ್ಲಿನ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸಲಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಿ: ಪ್ರಧಾನಮಂತ್ರಿ

ಸರ್ಕಾರವು ಹೊರಹೊಮ್ಮುತ್ತಿರುವ ಸನ್ನಿವೇಶ ನಿಯಂತ್ರಿಸುತ್ತಿದ್ದು ಎಚ್ಚರದಿಂದಿದೆ; ‘ಸಂಪೂರ್ಣ ಸರ್ಕಾರದ’ ದೃಷ್ಟಿಕೋನದ ಅಡಿಯಲ್ಲಿ ರಾಜ್ಯಗಳ ನಿಯಂತ್ರಣ ಮತ್ತು ನಿರ್ವಹಣೆಯ ಪ್ರಯತ್ನಗಳಿಗೆ ಬೆಂಬಲ ಮತ್ತು  ಸಕ್ರಿಯ ಕ್ರಮಗಳನ್ನು ಮುಂದುವರಿಸಲಾಗಿದೆ: ಪ್ರಧಾನಮಂತ್ರಿ

ಪ್ರಾಮಾಣಿಕ ಮತ್ತು ಪರಿಣಾಮಕಾರಿಯಾಗಿ ಸಂಪರ್ಕ ಪತ್ತೆ ಹಚ್ಚುವಿಕೆ, ಪರೀಕ್ಷೆಯನ್ನು ಹೆಚ್ಚಿಸುವುದು, ಲಸಿಕೆಯನ್ನು ವೇಗಗೊಳಿಸುವುದು ಮತ್ತು ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವುದರ ಮೇಲೆ ಕೇಂದ್ರೀಕರಿಸಬೇಕು: ಪ್ರಧಾನಮಂತ್ರಿ

ಕಡಿಮೆ ಲಸಿಕೆ ನೀಡಿಕೆ ಹಾಗು ಸೋಂಕು ಪ್ರಕರಣ ಹೆಚ್ಚುತ್ತಿರುವ ರಾಜ್ಯಗಳಿಗೆ ನೆರವಾಗಲು ಸಾಕಷ್ಟು ಆರೋಗ್ಯ ಮೂಲಸೌಕರ್ಯ ಹೊಂದಿರದ ರಾಜ್ಯಗಳಿಗೆ ತಂಡಗಳನ್ನು ಕಳುಹಿಸಲಿರುವ ಕೇಂದ್ರ

Posted On: 23 DEC 2021 9:37PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೋವಿಡ್-19 ಮತ್ತು ಒಮೈಕ್ರಾನ್ ಸ್ಥಿತಿ ಗತಿಹೊಸ ರೂಪಾಂತರಿ (ವಿ..ಸಿ.)ಮತ್ತು ಅದರ ಸಮಸ್ಯೆ, ಕೋವಿಡ್ -19 ನಿಯಂತ್ರಣ ಮತ್ತು ನಿರ್ವಹಣೆಗಾಗಿ ಸಾರ್ವಜನಿಕ ಆರೋಗ್ಯ ಪ್ರತಿಕ್ರಿಯೆ ಕ್ರಮಗಳು, ಔಷಧಗಳ ಲಭ್ಯತೆ ಸೇರಿದಂತೆ ಆರೋಗ್ಯ ಮೂಲಸೌಕರ್ಯಗಳ ಬಲವರ್ಧನೆ, ಆಮ್ಲಜನಕ ಸಿಲಿಂಡರ್‌ ಗಳು ಮತ್ತು ಸಾಂದ್ರಕಗಳು, ವೆಂಟಿಲೇಟರ್‌ ಗಳು, ಪಿ.ಎಸ್.. ಘಟಕಗಳು, .ಸಿ.ಯು/ಆಮ್ಲಜನಕ ಸೌಲಭ್ಯದ ಹಾಸಿಗೆಗಳು, ಮಾನವ ಸಂಪನ್ಮೂಲಗಳು, ಐಟಿ ಮಧ್ಯಸ್ಥಿಕೆಗಳು ಮತ್ತು ಲಸಿಕೆ ಸ್ಥಿತಿಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಅಧಿಕಾರಿಗಳು ಪ್ರಧಾನಮಂತ್ರಿಯವರಿಗೆ, ಹೆಚ್ಚಿನ ಲಸಿಕೆ ವ್ಯಾಪ್ತಿ ಇದ್ದಾಗ್ಯೂ ಮತ್ತು ಓಮೈಕ್ರಾನ್ ರೂಪಾಂತರಿಯ ಕಾರಣದಿಂದ ಹಲವು ದೇಶಗಳಲ್ಲಿ ಪ್ರಕರಣಗಳು ಉಲ್ಬಣವಾಗುತ್ತಿರುವ ಅವಲೋಕನದೊಂದಿಗೆ, ಹೊಸ ರೂಪಾಂತರಿಯಿಂದ ಜಾಗತಿಕವಾಗಿ ಹೊರಹೊಮ್ಮುತ್ತಿರುವ ಸನ್ನಿವೇಶದ ಕುರಿತಂತೆ ವಿವರಿಸಿದರು. ಒಮೈಕ್ರಾನ್ ವಿಚಾರದಲ್ಲಿ ಡಬ್ಲ್ಯು.ಎಚ್.. ಶಿಫಾರಸು ಮಾಡಿದ ತಾಂತ್ರಿಕ ಸಂಕ್ಷಿಪ್ತ ಮತ್ತು ಆದ್ಯತೆಯ ಕ್ರಮಗಳ ಬಗ್ಗೆಯೂ ಪ್ರಧಾನಮಂತ್ರಿಯರಿಗೆ ವಿವರಿಸಲಾಯಿತು. ಹೆಚ್ಚಿನ ಸಂಖ್ಯೆಯ ಸೋಂಕು ಪ್ರಕರಣಗಳು ವರದಿಯಾಗುತ್ತಿರುವ ರಾಜ್ಯಗಳು, ಹೆಚ್ಚಿನ ಪಾಸಿಟಿವಿಟಿ  ಪ್ರಕರಣ ವರದಿಯಾಗುವ ಜಿಲ್ಲೆಗಳು ಮತ್ತು ಹೆಚ್ಚಿನ ಸಂಖ್ಯೆಯ ಕ್ಲಸ್ಟರ್‌ ಗಳನ್ನು ಒಳಗೊಂಡಂತೆ ದೇಶದಲ್ಲಿ ಕೋವಿಡ್ 19 ಮತ್ತು ಓಮೈಕ್ರಾನ್ ಸ್ಥಿತಿಯ ಕುರಿತಂತೆ ಪ್ರಧಾನಮಂತ್ರಿಯವರ ಮುಂದೆ ಪ್ರಸ್ತುತಪಡಿಸಲಾಯಿತು. ಅವರ ಪ್ರಯಾಣದ ಇತಿಹಾಸ, ಲಸಿಕೆ ಸ್ಥಿತಿ ಮತ್ತು ಚೇತರಿಕೆ ಸ್ಥಿತಿ ಸೇರಿದಂತೆ ದೇಶದಲ್ಲಿ ವರದಿಯಾದ ಓಮೈಕ್ರಾನ್ ಪ್ರಕರಣಗಳ ವಿವರಗಳನ್ನೂ ಸಹ ಪ್ರಸ್ತುತಪಡಿಸಲಾಯಿತು.

ಕೇಂದ್ರ ಆರೋಗ್ಯ ಸಚಿವಾಲಯ ಮೊದಲ ಸಲಹೆಯನ್ನು ರಾಜ್ಯಗಳೊಂದಿಗೆ ಹಂಚಿಕೊಂಡಾಗಿನಿಂದ ಅಂದರೆ 2021 ನವೆಂಬರ್ 25 ರಿಂದ ಕೈಗೊಳ್ಳಲಾದ ವಿವಿಧ ಕ್ರಮಗಳ ಕುರಿತು ಪ್ರಧಾನಮಂತ್ರಿಯವರಿಗೆ ವಿವರಿಸಲಾಯಿತು. ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಪರಿಷ್ಕೃತ ಪ್ರಯಾಣದ ಸಲಹೆ, ಕೋವಿಡ್-19 ಸಾರ್ವಜನಿಕ ಆರೋಗ್ಯ ಪ್ರತಿಕ್ರಿಯೆ ಕ್ರಮಗಳ ಕುರಿತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಪರಿಶೀಲನಾ ಸಭೆಗಳು, ಲಸಿಕೆಯನ್ನು ಹೆಚ್ಚಿಸುವುದು, ಆಮ್ಲಜನಕ ಪೂರೈಕೆ ಉಪಕರಣಗಳ ಸ್ಥಾಪನೆ ಇತ್ಯಾದಿಗಳ ಕುರಿತಂತೆ ಪ್ರಧಾನಮಂತ್ರಿಯವರಿಗೆ ವಿವರಿಸಲಾಯಿತು.

ಅಧಿಕಾರಿಗಳು ಪ್ರಾತ್ಯಕ್ಷಕೆ ನೀಡಿದ ನಂತರ, ಎಲ್ಲಾ ಹಂತಗಳಲ್ಲಿ ಉನ್ನತ ಮಟ್ಟದ ಎಚ್ಚರಿಕೆ ಮತ್ತು ಜಾಗರೂಕತೆಯನ್ನು ಕಾಪಾಡಿಕೊಳ್ಳಲು ಪ್ರಧಾನಮಂತ್ರಿಯವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. 'ಸಂಪೂರ್ಣ ಸರ್ಕಾರ' ದೃಷ್ಟಿಕೋನದ ಅಡಿಯಲ್ಲಿ ಸಾರ್ವಜನಿಕ ಆರೋಗ್ಯ ಕ್ರಮಗಳ ನಿಯಂತ್ರಣ ಮತ್ತು ನಿರ್ವಹಣೆಯ ಪ್ರಯತ್ನಗಳನ್ನು ಬೆಂಬಲಿಸಲು ರಾಜ್ಯಗಳೊಂದಿಗೆ ನಿಕಟ ಸಮನ್ವಯದಿಂದ ಕೆಲಸ ಮಾಡಲು ಅವರು ಕೇಂದ್ರಕ್ಕೆ ನಿರ್ದೇಶನ ನೀಡಿದರು. ಸಾಂಕ್ರಾಮಿಕ ರೋಗದ ವಿರುದ್ಧ ಸಕ್ರಿಯ, ಕೇಂದ್ರೀಕರಿಸಿದ, ಸಹಯೋಗಿ ಮತ್ತು ಸಹಕಾರದೊಂದಿಗೆ ಹೋರಾಟಕ್ಕಾಗಿ ಕೇಂದ್ರದ ಕಾರ್ಯತಂತ್ರವು ನಮ್ಮ ಎಲ್ಲಾ ಮುಂದಿನ ಕ್ರಮಗಳಿಗೆ ಮಾರ್ಗದರ್ಶನ ನೀಡಬೇಕು ಎಂದು ಪ್ರಧಾನಮಂತ್ರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಹೊಸ ರೂಪಾಂತರಿಯ ಹಿನ್ನೆಲೆಯಲ್ಲಿ, ನಾವು ಜಾಗರೂಕರಾಗಿರಬೇಕು ಮತ್ತು ಎಚ್ಚರದಿಂದ ಇರಬೇಕು ಎಂದು ಪ್ರಧಾನಮಂತ್ರಿ ನಿರ್ದೇಶಿಸಿದರು. ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟವು ಇನ್ನೂ ಮುಗಿದಿಲ್ಲ, ಮತ್ತು ಕೋವಿಡ್ ಸುರಕ್ಷಿತ ನಡವಳಿಕೆಯನ್ನು ನಿರಂತರವಾಗಿ ಅನುಸರಿಸುವ ಅಗತ್ಯ ಇಂದಿಗೂ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.

ಹೊಸ ರೂಪಾಂತರಿಯಿಂದ ಎದುರಾಗುವ ಯಾವುದೇ ಸವಾಲನ್ನು ಎದುರಿಸಲು ಜಿಲ್ಲಾ ಮಟ್ಟದಿಂದ ಮೊದಲ್ಗೊಂಡು ರಾಜ್ಯಗಳಲ್ಲಿನ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಧಾನಮಂತ್ರಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಆಮ್ಲಜನಕ ಪೂರೈಕೆ ಉಪಕರಣಗಳನ್ನು ಅಳವಡಿಸಲಾಗಿದೆ ಮತ್ತು ಸಂಪೂರ್ಣವಾಗಿ ಅವು ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ರಾಜ್ಯಗಳಿಗೆ ಅತಿ ಮುಖ್ಯವಾಗಿದೆ ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಿಯಮಿತ ಆಧಾರದ ಮೇಲೆ ರಾಜ್ಯಗಳೊಂದಿಗೆ ಶ್ರಮಿಸಿ, ತರಬೇತಿ ಮತ್ತು ಮಾನವ ಸಂಪನ್ಮೂಲಗಳ ಸಾಮರ್ಥ್ಯ ವರ್ಧನೆ, ಆಂಬ್ಯುಲೆನ್ಸ್‌ ಗಳ ಸಕಾಲಿಕ ಲಭ್ಯತೆ, ಸಾಂಸ್ಥಿಕ ಕ್ವಾರಂಟೈನ್‌ ಗಾಗಿ ಕೋವಿಡ್ ಸೌಲಭ್ಯಗಳನ್ನು ಕಾರ್ಯಗತಗೊಳಿಸಲು ಮತ್ತು  ಮನೆಯಲ್ಲಿ ಪ್ರತ್ಯೇಕವಾಗಿರುವವರ, ಪರಿಣಾಮಕಾರಿ ಮತ್ತು ನಿಗಾಕ್ಕಾಗಿ ರಾಜ್ಯಗಳ ಸನ್ನದ್ಧತೆ ಸೇರಿದಂತೆ ಆರೋಗ್ಯ ಮೂಲಸೌಕರ್ಯದ ವಿವಿಧ ಘಟಕಗಳ ಸನ್ನದ್ಧತೆಯ ಸ್ಥಿತಿಯನ್ನು ಪರಿಶೀಲಿಸಲು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಟೆಲಿ ಮೆಡಿಸಿನ್ ಮತ್ತು ಟೆಲಿ ಸಮಾಲೋಚನೆಗಾಗಿ ಐಟಿ ಉಪಕರಣಗಳ ಪರಿಣಾಮಕಾರಿ ಬಳಕೆಗೂ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಹೊರಹೊಮ್ಮುವ ಕ್ಲಸ್ಟರ್‌ ಗಳು ಮತ್ತು ಹೆಚ್ಚಿನ ಪ್ರಕರಣಗಳ ಪ್ರದೇಶಗಳಲ್ಲಿ ಉನ್ನತ ಮತ್ತು ನಿಕಟ ಮೇಲ್ವಿಚಾರಣೆ ಮತ್ತು ಸಕ್ರಿಯ, ತ್ವರಿತ ಮತ್ತು ಪರಿಣಾಮಕಾರಿ ಕಣ್ಗಾವಲು ಮುಂದುವರಿಯಬೇಕು ಎಂದು ಅವರು ಹೇಳಿದರು. ಜೀನೋಮ್ ಅನುಕ್ರಮಣಿಕೆಗಾಗಿ ಹೆಚ್ಚಿನ ಸಂಖ್ಯೆಯ ಸೋಂಕು ದೃಢಪಟ್ಟ ಮಾದರಿಗಳನ್ನು ಇನ್ಸಾಕಾಗ್ (INSACOG) ಪ್ರಯೋಗಾಲಯಗಳಿಗೆ ತ್ವರಿತವಾಗಿ ಕಳುಹಿಸಲೂ ಅವರು ನಿರ್ದೇಶಿಸಿದರು. ಸಕಾಲಿಕ ನಿಯಂತ್ರಣ ಮತ್ತು ಚಿಕಿತ್ಸೆಗಾಗಿ ಪ್ರಕರಣಗಳನ್ನು ತ್ವರಿತವಾಗಿ ಗುರುತಿಸುವುದನ್ನು ಖಾತ್ರಿಪಡಿಸಿಕೊಳ್ಳಲು ಪರೀಕ್ಷೆಯನ್ನು ವೇಗಗೊಳಿಸಲು ಪ್ರಧಾನಮಂತ್ರಿ ನಿರ್ದೇಶನ ನೀಡಿದರು. ಸೋಂಕು ಹರಡುವಿಕೆಯನ್ನು ನಿಗ್ರಹಿಸಲು ಪರಿಣಾಮಕಾರಿ ಸಂಪರ್ಕ ಪತ್ತೆಹಚ್ಚುವಿಕೆಯ ಮೇಲೆ ಕೇಂದ್ರೀಕರಿಸಬೇಕು ಎಂದು ಅವರು ತಿಳಿಸಿದರು. ಕಡಿಮೆ ಲಸಿಕೆ, ಪ್ರಕರಣಗಳು ಹೆಚ್ಚುತ್ತಿರುವ, ಸಾಕಷ್ಟು ಆರೋಗ್ಯ ಮೂಲಸೌಕರ್ಯ ಹೊಂದಿರದ ರಾಜ್ಯಗಳಿಗೆ ಪರಿಸ್ಥಿತಿಯನ್ನು ನಿರ್ವಹಿಸಲು ಸಹಾಯ ಮಾಡಲು ಕೇಂದ್ರ ಸರ್ಕಾರ ತಂಡಗಳನ್ನು ಕಳುಹಿಸಬೇಕು ಎಂದು ಪ್ರಧಾನಮಂತ್ರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ದೇಶಾದ್ಯಂತ ಲಸಿಕೀಕರಣದಲ್ಲಿ ಆಗಿರುವ ಪ್ರಗತಿಯ ಬಗ್ಗೆ ಪ್ರಧಾನಮಂತ್ರಿಯವರಿಗೆ ಮಾಹಿತಿ ನೀಡಲಾಯಿತು. ಅರ್ಹ ಜನಸಂಖ್ಯೆಯ ಶೇ.88ಕ್ಕಿಂತ ಹೆಚ್ಚು ಜನರು ಕೋವಿಡ್ 19 ಲಸಿಕೆಯ ಮೊದಲ ಡೋಸ್ ಅನ್ನು ಪಡೆದುಕೊಂಡಿದ್ದಾರೆ ಮತ್ತು ಅರ್ಹ ಜನಸಂಖ್ಯೆಯ ಶೇ.60ಕ್ಕಿಂತ ಹೆಚ್ಚು ಜನರು ಎರಡನೇ ಡೋಸ್ ಅನ್ನು ಸ್ವೀಕರಿಸಿದ್ದಾರೆ ಎಂದು ಪ್ರಧಾನಮಂತ್ರಿಯವರಿಗೆ ವಿವರಿಸಲಾಯಿತು. ಜನರನ್ನು ಲಸಿಕೆ ಪಡೆಯುವಂತೆ ಮನವೊಲಿಸಲು, ಸಜ್ಜುಗೊಳಿಸಲು ಮತ್ತು ಲಸಿಕೆ ಹಾಕಲು ಮನೆ-ಮನೆಗೆ ತೆರಳುತ್ತಿರುವ ಹರ್ ಘರ್ ದಸ್ತಕ್ ಲಸಿಕೆ ಅಭಿಯಾನವು ಜನರನ್ನು ಪ್ರೇರೇಪಿಸಲು ಸಮರ್ಥವಾಗಿದೆ ಮತ್ತು ಲಸಿಕೆ ವ್ಯಾಪ್ತಿಯನ್ನು ಹೆಚ್ಚಿಸುವಲ್ಲಿ ಉತ್ತೇಜನಕಾರಿ ಫಲಿತಾಂಶಗಳನ್ನು ನೀಡಿದೆ ಎಂದು ಅಧಿಕಾರಿಗಳು ಪ್ರಧಾನಮಂತ್ರಿಯವರಿಗೆ ವಿವರಿಸಿದರು. ಕೋವಿಡ್ 19 ವಿರುದ್ಧ ಅರ್ಹ ಜನಸಂಖ್ಯೆಯು ಸಂಪೂರ್ಣವಾಗಿ ಲಸಿಕೆಯನ್ನು ಪಡೆದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಗರಿಷ್ಠ ಮಿತಿ ಮಾದರಿಯಲ್ಲಿ ಗುರಿಯನ್ನು ಪೂರೈಸಲು ಮುಂದುವರಿಯಬೇಕು ಎಂದು ಪ್ರಧಾನಮಂತ್ರಿ ನಿರ್ದೇಶಿಸಿದರು.

ಸಭೆಯಲ್ಲಿ ಸಂಪುಟ ಕಾರ್ಯದರ್ಶಿಗಳು, ನೀತಿ ಆಯೋಗದ (ಆರೋಗ್ಯ) ಸದಸ್ಯ ಡಾ. ವಿ.ಕೆ. ಪಾಲ್, ಗೃಹ ಕಾರ್ಯದರ್ಶಿ ಶ್ರೀ .ಕೆ. ಭಲ್ಲಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಮತ್ತು ಔಷಧಗಳ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್, ಜೈವಿಕ ತಂತ್ರಜ್ಞಾನದ ಕಾರ್ಯದರ್ಶಿ ಡಾ. ರಾಜೇಶ್ ಗೋಖಲೆ, .ಸಿ.ಎಂ.ಆರ್. ಡಿಜಿ ಡಾ. ಬಲರಾಮ್ ಭಾರ್ಗವ್, ಆಯುಷ್ ಕಾರ್ಯದರ್ಶಿ ಶ್ರೀ ವೈದ್ಯ ರಾಜೇಶ್ ಕೋಟೇಚಾ, ನಗರಾಭಿವೃದ್ಧಿ ಕಾರ್ಯದರ್ಶಿ ಶ್ರೀ ದುರ್ಗಾ ಶಂಕರ್ ಮಿಶ್ರಾ, ಎನ್.ಎಚ್.. ಸಿಇಓ ಶ್ರೀ ಆರ್.ಎಸ್. ಶರ್ಮಾ, ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ. ಕೆ. ವಿಜಯ್ ರಾಘವನ್ ಮತ್ತು ಇತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.  

***

DS/SH



(Release ID: 1784761) Visitor Counter : 221