ಪ್ರಧಾನ ಮಂತ್ರಿಯವರ ಕಛೇರಿ

ಪ್ರಜಾಪ್ರಭುತ್ವದ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ರಾಷ್ಟ್ರೀಯ ಹೇಳಿಕೆ

Posted On: 10 DEC 2021 5:46PM by PIB Bengaluru

ಮಾನ್ಯರೇ,

ನಮಸ್ಕಾರ

ಈ ಶೃಂಗಸಭೆಯಲ್ಲಿ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವನ್ನು ಪ್ರತಿನಿಧಿಸಲು ನಾನು ಹೆಮ್ಮೆ ಪಡುತ್ತೇನೆ. ಪ್ರಜಾಪ್ರಭುತ್ವದ ಸ್ಫೂರ್ತಿ ನಮ್ಮ ನಾಗರಿಕತೆಯ ತತ್ವದ ಅವಿಭಾಜ್ಯ ಅಂಗವಾಗಿದೆ. ಚುನಾಯಿತ ಗಣರಾಜ್ಯ ನಗರ-ರಾಜ್ಯಗಳಾದ ಲಿಚಾವಿ ಮತ್ತು ಶಾಕ್ಯ 2500 ವರ್ಷಗಳ ಹಿಂದೆಯೇ ಭಾರತದಲ್ಲಿ ಪ್ರವರ್ಧಮಾನಕ್ಕೆ ಬಂದಿದ್ದವು. ಪ್ರಜಾಪ್ರಭುತ್ವದ ಪಾಲ್ಗೊಳ್ಳುವಿಕೆಯ ತತ್ವಗಳನ್ನು ಕ್ರೋಡೀಕರಿಸಿದ ಅದೇ ಪ್ರಜಾಸತ್ತಾತ್ಮಕ ಮನೋಭಾವವನ್ನು 10ನೇ ಶತಮಾನದ"ಉತ್ತರ ಮೇರು"ಶಾಸನಗಳಲ್ಲಿ ಕಾಣಬಹುದಾಗಿದೆ. ಈ ಪ್ರಜಾಸತ್ತಾತ್ಮಕ ಮನೋಭಾವ ಮತ್ತು ನೀತಿಗಳು ಸನಾತನ ಭಾರತವನ್ನು ಅತ್ಯಂತ ಸಮೃದ್ಧವಾದವುಗಳಲ್ಲಿ ಒಂದನ್ನಾಗಿ ಮಾಡಿದ್ದವು. ಶತಮಾನಗಳ ವಸಾಹತುಶಾಹಿ ಆಡಳಿತಕ್ಕೆ ಭಾರತೀಯ ಜನರ ಪ್ರಜಾಸತ್ತಾತ್ಮಕ ಮನೋಭಾವವನ್ನು ಹತ್ತಿಕ್ಕಲು ಸಾಧ್ಯವಾಗಲಿಲ್ಲ. ಇದು ಮತ್ತೆ ಭಾರತದ ಸ್ವಾತಂತ್ರ್ಯದೊಂದಿಗೆ ಸಂಪೂರ್ಣ ಅಭಿವ್ಯಕ್ತಿಯನ್ನು ಕಂಡುಕೊಂಡಿದ್ದು ಕಳೆದ 75 ವರ್ಷಗಳಲ್ಲಿ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣದಲ್ಲಿ ಸಾಟಿಯಿಲ್ಲದ ಗಾಥೆಗೆ ಕಾರಣವಾಗಿದೆ.

ಇದು ಎಲ್ಲಾ ಕ್ಷೇತ್ರಗಳಲ್ಲಿ ಅಭೂತಪೂರ್ವ ಸಾಮಾಜಿಕ-ಆರ್ಥಿಕ ಸೇರ್ಪಡೆಯ ಗಾಥೆಯಾಗಿದೆ. ಇದು ಆರೋಗ್ಯ, ಶಿಕ್ಷಣ ಮತ್ತು ಮಾನವ ಯೋಗಕ್ಷೇಮದಲ್ಲಿ ಅನೂಹ್ಯ ಪ್ರಮಾಣದಲ್ಲಿ ನಿರಂತರ ಸುಧಾರಣೆಗಳ ಗಾಥೆಯಾಗಿದೆ. ಭಾರತದ ಗಾಥೆಯು ಜಗತ್ತಿಗೆ ಒಂದು ಸ್ಪಷ್ಟ ಸಂದೇಶವನ್ನು ಸಾರುತ್ತದೆ. ಪ್ರಜಾಪ್ರಭುತ್ವವು ಏನನ್ನು ತಲುಪಿಸಬೇಕೋ, ಪ್ರಜಾಪ್ರಭುತ್ವವು ಅದನ್ನು ತಲುಪಿಸುತ್ತದೆ ಮತ್ತು ಪ್ರಜಾಪ್ರಭುತ್ವವು ಮುಂದೆಯೂ ತಲುಪಿಸುತ್ತದೆ.

ಮಾನ್ಯರೇ,

ಬಹುಪಕ್ಷೀಯ ಚುನಾವಣೆಗಳು, ಸ್ವತಂತ್ರ ನ್ಯಾಯಾಂಗ ಮತ್ತು ಮುಕ್ತ ಮಾಧ್ಯಮದಂತಹ ವಿನ್ಯಾಸಿತ ಲಕ್ಷಣಗಳು ಪ್ರಜಾಪ್ರಭುತ್ವದ ಪ್ರಮುಖ ಸಾಧನಗಳಾಗಿವೆ. ಆದಾಗ್ಯೂ, ಪ್ರಜಾಪ್ರಭುತ್ವದ ಮೂಲ ಶಕ್ತಿ ನಮ್ಮ ನಾಗರಿಕರು ಮತ್ತು ನಮ್ಮ ಸಮಾಜಗಳಲ್ಲಿ ಅಡಗಿರುವ ಮನೋಭಾವ ಮತ್ತು ನೀತಿಯೇ ಆಗಿದೆ. ಪ್ರಜಾಪ್ರಭುತ್ವವು ಜನರಿಂದ, ಜನರಿಗಾಗಿ, ಜನರಿಗೋಸ್ಕರ ಮಾತ್ರವಲ್ಲ, ಜನರೊಂದಿಗೆ, ಜನರೊಳಗೆಯೂ ಇರುವುದಾಗಿದೆ.

ಮಾನ್ಯರೇ,

ವಿಶ್ವದ ವಿವಿಧ ಭಾಗಗಳು ಪ್ರಜಾಪ್ರಭುತ್ವದ ಅಭಿವೃದ್ಧಿಯ ವಿಭಿನ್ನ ಮಾರ್ಗಗಳನ್ನು ಅನುಸರಿಸಿವೆ. ನಾವು ಪರಸ್ಪರರಿಂದ ಕಲಿಯಬೇಕಾದದ್ದು ಬಹಳಷ್ಟಿದೆ. ನಾವೆಲ್ಲರೂ ನಮ್ಮ ಪ್ರಜಾಸತ್ತಾತ್ಮಕ ಪದ್ಧತಿಗಳು ಮತ್ತು ವ್ಯವಸ್ಥೆಗಳನ್ನು ನಿರಂತರವಾಗಿ ಸುಧಾರಿಸಬೇಕಾಗಿದೆ. ಮತ್ತು, ನಾವೆಲ್ಲರೂ ಪೂರಣ, ಪಾರದರ್ಶಕತೆ, ಮಾನವ ಘನತೆ, ಸ್ಪಂದನಾತ್ಮಕ ಕುಂದುಕೊರತೆ ಪರಿಹಾರ ಮತ್ತು ಅಧಿಕಾರ ವಿಕೇಂದ್ರೀಕರಣವನ್ನು ನಿರಂತರವಾಗಿ ಹೆಚ್ಚಿಸಬೇಕಾಗಿದೆ.

ಈ ನಿಟ್ಟಿನಲ್ಲಿ, ಇಂದಿನ ಸಭೆಯು ಪ್ರಜಾಪ್ರಭುತ್ವಗಳ ನಡುವಿನ ಸಹಕಾರವನ್ನು ಮುಂದುವರಿಸಲು ಸಮಯೋಚಿತ ವೇದಿಕೆಯನ್ನು ಒದಗಿಸುತ್ತದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವಲ್ಲಿ ಮತ್ತು ನವೀನ ಡಿಜಿಟಲ್ ಪರಿಹಾರಗಳ ಮೂಲಕ ಆಡಳಿತದ ಎಲ್ಲಾ ಕ್ಷೇತ್ರಗಳಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವಲ್ಲಿ ಭಾರತವು ತನ್ನ ಪರಿಣತಿಯನ್ನು ಹಂಚಿಕೊಳ್ಳಲು ಸಂತೋಷಪಡುತ್ತದೆ. ಸಾಮಾಜಿಕ ಮಾಧ್ಯಮ ಮತ್ತು ಕ್ರಿಪ್ಟೋ ಕರೆನ್ಸಿಗಳಂತಹ ಉದಯೋನ್ಮುಖ ತಂತ್ರಜ್ಞಾನಗಳಿಗೆ ನಾವು ಜಂಟಿಯಾಗಿ ಜಾಗತಿಕ ನಿಯಮಗಳನ್ನು ರೂಪಿಸಬೇಕಿದೆ, ಇದರಿಂದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವುದರ ಬದಲಾಗಿ ಸಶಕ್ತಗೊಳಿಸಲು ಅವುಗಳನ್ನು ಬಳಸಬಹುದಾಗಿರುತ್ತದೆ.

ಮಾನ್ಯರೇ,

ಒಟ್ಟಾಗಿ ಕೆಲಸ ಮಾಡುವ ಮೂಲಕ, ಪ್ರಜಾಪ್ರಭುತ್ವರಾಷ್ಟ್ರಗಳು ತಮ್ಮ ನಾಗರಿಕರ ಆಶೋತ್ತರಗಳನ್ನು ಪೂರೈಸಬಹುದು ಮತ್ತು ಮಾನವೀಯತೆಯ ಪ್ರಜಾಪ್ರಭುತ್ವ ಮನೋಭಾವವನ್ನು ಸಂಭ್ರಮಿಸಬಹುದು. ಈ ಉದಾತ್ತ ಪ್ರಯತ್ನದಲ್ಲಿ ಸಹ ಪ್ರಜಾಪ್ರಭುತ್ವಗಳನ್ನು ಸೇರಲು ಭಾರತ ಸಿದ್ಧವಾಗಿದೆ.

ಧನ್ಯವಾದಗಳು. ತುಂಬ ಧನ್ಯವಾದಗಳು.

***



(Release ID: 1780286) Visitor Counter : 264