ಪ್ರಧಾನ ಮಂತ್ರಿಯವರ ಕಛೇರಿ

ಅಲಿಗಢದಲ್ಲಿ ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ರಾಜ್ಯ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ

ಉತ್ತರ ಪ್ರದೇಶ ರಕ್ಷಣಾ ಕೈಗಾರಿಕಾ ಕಾರಿಡಾರ್‌ನ ಅಲಿಘರ್ ನೋಡ್‌ ಪ್ರದರ್ಶನ ಮಾದರಿಗಳ ವೀಕ್ಷಣೆಗೂ ಪ್ರಧಾನಿ ಭೇಟಿ

ರಾಷ್ಟ್ರೀಯ ನಾಯಕರು ಮತ್ತು ನಾಯಕಿಯರ ತ್ಯಾಗದ ಬಗ್ಗೆ ಹೊಸ ತಲೆಮಾರುಗಳಿಗೆ ಅರಿವು ಮೂಡಿಸಿರಲಿಲ್ಲ. 21ನೇ ಶತಮಾನದ ಭಾರತವು 20ನೇ ಶತಮಾನದ ಈ ತಪ್ಪುಗಳನ್ನು ಸರಿಪಡಿಸುತ್ತಿದೆ: ಪ್ರಧಾನಿ

ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ಅವರ ಜೀವನವು ನಮ್ಮ ಕನಸುಗಳನ್ನು ನನಸು ಮಾಡಲು ಯಾವುದೇ ಮಟ್ಟಕ್ಕೆ ಹೋಗುವಂತಹ ಅದಮ್ಯ ಇಚ್ಛೆ ಮತ್ತು ಇಚ್ಛಾಶಕ್ತಿಯನ್ನು ಕಲಿಸುತ್ತದೆ: ಪ್ರಧಾನಿ

ಭಾರತವು ವಿಶ್ವದ ಬೃಹತ್‌ ರಕ್ಷಣಾ ಆಮದುದಾರನ ಸ್ಥಾನದಿಂದ ಹೊರಬಂದು ವಿಶ್ವದ ಪ್ರಮುಖ ರಕ್ಷಣಾ ರಫ್ತುದಾರನಾಗಿ ಹೊಸ ಗುರುತನ್ನು ಪಡೆಯುತ್ತಿದೆ: ಪ್ರಧಾನಿ

ಉತ್ತರ ಪ್ರದೇಶವು ದೇಶ ಮತ್ತು ವಿಶ್ವದ ಪ್ರತಿಯೊಬ್ಬ ಸಣ್ಣ ಮತ್ತು ದೊಡ್ಡ ಹೂಡಿಕೆದಾರರಿಗೆ ಅತ್ಯಂತ ಆಕರ್ಷಕ ಸ್ಥಳವಾಗಿ ಹೊರಹೊಮ್ಮುತ್ತಿದೆ: ಪ್ರಧಾನಿ

ಇಂದು ಉತ್ತರ ಪ್ರದೇಶ ಅವಳಿ ಎಂಜಿನ್ ಸರಕಾರದ ಅವಳಿ ಪ್ರಯೋಜನಗಳಿಗೆ ಉತ್ತಮ ಉದಾಹರಣೆಯಾಗಿದೆ: ಪ್ರಧಾನಿ

Posted On: 14 SEP 2021 2:19PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಲಿಗಢದಲ್ಲಿ ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ರಾಜ್ಯ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಉತ್ತರ ಪ್ರದೇಶ  ರಕ್ಷಣಾ ಕೈಗಾರಿಕಾ ಕಾರಿಡಾರ್‌ನ ಅಲಿಗಢ ನೋಡ್‌ ಮತ್ತು ರಾಜಾ  ಮಹೇಂದ್ರ ಪ್ರತಾಪ್ ಸಿಂಗ್ ರಾಜ್ಯ ವಿಶ್ವವಿದ್ಯಾಲಯದ ಪ್ರದರ್ಶನ ಮಾದರಿಗಳನ್ನೂ ಅವರು ವೀಕ್ಷಿಸಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಕಲ್ಯಾಣ್ ಸಿಂಗ್ ಅವರು ಇದ್ದಿದ್ದರೆ ರಕ್ಷಣಾ ವಲಯದಲ್ಲಿ ಅಲಿಗಢದ ಬೆಳವಣಿಗೆಯನ್ನು ಮತ್ತು ಅಲಿಗಢದಲ್ಲಿ ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ರಾಜ್ಯ ವಿಶ್ವವಿದ್ಯಾಲಯದ ಸ್ಥಾಪನೆಯನ್ನು   ನೋಡಿ ತುಂಬಾ ಸಂತೋಷಪಡುತ್ತಿದ್ದರು ಎಂದು ಪ್ರಧಾನಿ ದಿವಂಗತ ಕಲ್ಯಾಣ್ ಸಿಂಗ್ ಅವರನ್ನು ಸ್ಮರಿಸಿದರು.

ಅದೆಷ್ಟೋ ಮಹಾನುಭಾವರು ಸ್ವಾತಂತ್ರ್ಯ ಚಳವಳಿಗೆ ತಮ್ಮ ಸರ್ವಸ್ವವನ್ನೂ ನೀಡಿದ್ದಾರೆ ಎಂಬ ಅಂಶವನ್ನು ಪ್ರಧಾನಿ ಒತ್ತಿ ಹೇಳಿದರು. ಆದರೆ ಸ್ವಾತಂತ್ರ್ಯಾನಂತರ ದೇಶದ ಮುಂದಿನ ಪೀಳಿಗೆಗೆ ಇಂತಹ ರಾಷ್ಟ್ರೀಯ ನಾಯಕರು ಮತ್ತು ನಾಯಕಿಯರ ತ್ಯಾಗದ ಬಗ್ಗೆ ಅರಿವು ಮೂಡಿಸದಿರುವುದು ದೇಶದ ದೌರ್ಭಾಗ್ಯ. ದೇಶದ ಅನೇಕ ತಲೆಮಾರುಗಳು ತಮ್ಮ ಹಿಂದಿನ ಕಥೆಗಳನ್ನು ತಿಳಿದುಕೊಳ್ಳುವ ಅವಕಾಶದಿಂದ ವಂಚಿತವಾಗಿವೆ ಎಂದು ಪ್ರಧಾನಿ ವಿಷಾದಿಸಿದರು.  ಇಂದು 21ನೇಶತಮಾನದ ಭಾರತವು 20ನೇ ಶತಮಾನದ ಈ ತಪ್ಪುಗಳನ್ನು ಸರಿಪಡಿಸುತ್ತಿದೆ ಎಂದು ಪ್ರಧಾನಿ ಹೇಳಿದರು.

ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ಅವರಿಗೆ ಗೌರವ ಸಲ್ಲಿಸಿದ ಪ್ರಧಾನಿ, ರಾಜಾ  ಮಹೇಂದ್ರ ಪ್ರತಾಪ್ ಸಿಂಗ್ ಅವರ ಜೀವನವು ನಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಯಾವುದೇ ಮಟ್ಟಕ್ಕೆ ಹೋಗುವ ಅದಮ್ಯ ಇಚ್ಛೆ ಮತ್ತು ಇಚ್ಛಾಶಕ್ತಿಯನ್ನು ನಮಗೆ ಕಲಿಸುತ್ತದೆ ಎಂದು ಹೇಳಿದರು. ರಾಜಾ  ಮಹೇಂದ್ರ ಪ್ರತಾಪ್ ಸಿಂಗ್ ಅವರು ಭಾರತದ ಸ್ವಾತಂತ್ರ್ಯವನ್ನು ಬಯಸಿದ್ದರು ಮತ್ತು ಅವರು ಇದಕ್ಕಾಗಿ ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನು ಮೀಸಲಿರಿಸಿದ್ದರು ಎಂದರು. ಇಂದು, ʻಆಜಾ಼ದಿ ಕಾ ಅಮೃತ್ ಮಹೋತ್ಸವʼದ ಸಮಯದಲ್ಲಿ ಭಾರತವು ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿರುವಾಗ, ಭಾರತ ಮಾತೆಯ ಈ ಸುಪುತ್ರನ ಹೆಸರಿನಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದು ಅವರಿಗೆ ಸಲ್ಲಿಸುವ ನಿಜವಾದ 'ಕಾರ್ಯಾಂಜಲಿ'ಎಂದು ಪ್ರಧಾನಿ ಬಣ್ಣಿಸಿದರು. ವಿಶ್ವವಿದ್ಯಾಲಯವು ಉನ್ನತ ಶಿಕ್ಷಣದ ದೊಡ್ಡ ಕೇಂದ್ರವಾಗುವುದಲ್ಲದೆ,  ಆಧುನಿಕ  ರಕ್ಷಣಾ  ಅಧ್ಯಯನ,  ರಕ್ಷಣಾ ಉತ್ಪಾದನಾ ಸಂಬಂಧಿತ ತಂತ್ರಜ್ಞಾನ ಮತ್ತು ಮಾನವ ಶಕ್ತಿ ಅಭಿವೃದ್ಧಿಯ ಕೇಂದ್ರವಾಗಿ  ಹೊರಹೊಮ್ಮಲಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಕೌಶಲ್ಯಗಳು ಮತ್ತು ಸ್ಥಳೀಯ ಭಾಷೆಯಲ್ಲಿ ಶಿಕ್ಷಣದ ವೈಶಿಷ್ಟ್ಯಗಳು ಈ ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತವೆ ಎಂದರು.

ಆಧುನಿಕ ಗ್ರೆನೇಡ್‌ಗಳು ಮತ್ತು ರೈಫಲ್‌ಗಳಿಂದ ಹಿಡಿದು ಯುದ್ಧ ವಿಮಾನಗಳು, ಡ್ರೋನ್‌ಗಳು, ಯುದ್ಧ ನೌಕೆಗಳವರೆಗೆ ಭಾರತ ರಕ್ಷಣಾ ಉಪಕರಣಗಳನ್ನು ತಾನೆ ತಯಾರಿಸುತ್ತಿದೆ. ಕೇವಲ ನಮ್ಮ ದೇಶ ಮಾತ್ರವಲ್ಲ, ಇಡೀ ವಿಶ್ವವೇ ಇಂದು ಇದನ್ನು ನೋಡುತ್ತಿದೆ ಎಂದು ಪ್ರಧಾನಿ ಹೇಳಿದರು. ಭಾರತವು ವಿಶ್ವದ ದೊಡ್ಡ ರಕ್ಷಣಾ ಆಮದುದಾರನ ಸ್ಥಾನದಿಂದ ಹೊರಬಂದು  ವಿಶ್ವದ ಪ್ರಮುಖ ರಕ್ಷಣಾ  ರಫ್ತುದಾರನಾಗಿ ಹೊಸ ಗುರುತನ್ನು ಪಡೆಯುವತ್ತ ಸಾಗುತ್ತಿದೆ ಎಂದು ಅವರು ಹೇಳಿದರು. ಉತ್ತರ ಪ್ರದೇಶ ಈ ಪರಿವರ್ತನೆಯ ದೊಡ್ಡ ಕೇಂದ್ರವಾಗುತ್ತಿದೆ ಎಂದರು. ಅಲ್ಲದೆ, ಪ್ರಧಾನಮಂತ್ರಿಯವರು ತಾವು ಉತ್ತರ ಪ್ರದೇಶದ ಸಂಸದರಾಗಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಸುಮಾರು ಹದಿನೆಂಟು ರಕ್ಷಣಾ ಉತ್ಪಾದನಾ ಕಂಪನಿಗಳು ನೂರಾರು ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಲಿವೆ ಎಂದು ಅವರು ಮಾಹಿತಿ ನೀಡಿದರು. ರಕ್ಷಣಾ ಕಾರಿಡಾರ್‌ನ ಅಲಿಘರ್ ನೋಡ್‌ನಲ್ಲಿ ಶಸ್ತ್ರಾಸ್ತ್ರಗಳು,  ಡ್ರೋನ್‌ಗಳು ಮತ್ತು ವೈಮಾನಿಕ ತಂತ್ರಜ್ಞಾನ ಸಂಬಂಧಿತ ಉತ್ಪನ್ನಗಳ ತಯಾರಿಕೆಗೆ ಬೆಂಬಲ ನೀಡಲು ಹೊಸ ಕೈಗಾರಿಕೆಗಳು  ತಲೆ ಎತ್ತಲಿವೆ. ಇದು ಅಲಿಗಢ ಮತ್ತು ಹತ್ತಿರದ ಪ್ರದೇಶಗಳಿಗೆ ಹೊಸ ಗುರುತುಗಳನ್ನು ತಂಡು ಕೊಡಲಿದೆ. ತನ್ನ ಪ್ರಸಿದ್ಧ ʻಪ್ಯಾಡ್‌ಲಾಕ್ʼಗಳಿಂದ ಮನೆಗಳು ಮತ್ತು ಅಂಗಡಿಗಳನ್ನು ರಕ್ಷಿಸುವಲ್ಲಿ ಪ್ರಸಿದ್ಧವಾಗಿದ್ದ ಅಲಿಗಢ ಈಗ ರಾಷ್ಟ್ರದ ಗಡಿಗಳನ್ನು ರಕ್ಷಿಸುವ ಉತ್ಪನ್ನಗಳನ್ನು ತಯಾರಿಕೆಯಲ್ಲಿ ಪ್ರಸಿದ್ಧವಾಗಲಿದೆ ಎಂದು ಪ್ರಧಾನಿ ಗಮನ ಸೆಳೆದರು. ಇದು ಯುವಕರಿಗೆ ಮತ್ತು ಸಣ್ಣ ಮತ್ತು ಅತಿಸಣ್ಣ ಉದ್ಯಮಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಅವರು ಹೇಳಿದರು.

ಇಂದು, ಉತ್ತರ ಪ್ರದೇಶವು ದೇಶ ಮತ್ತು ವಿಶ್ವದ ಪ್ರತಿಯೊಬ್ಬ ಸಣ್ಣ ಮತ್ತು ದೊಡ್ಡ ಹೂಡಿಕೆದಾರರಿಗೆ ಅತ್ಯಂತ ಆಕರ್ಷಕ ಸ್ಥಳವಾಗಿ ಹೊರಹೊಮ್ಮುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಹೂಡಿಕೆಗೆ ಅಗತ್ಯವಾದ ವಾತಾವರಣವನ್ನು ಸೃಷ್ಟಿಸಿದಾಗ, ಅಗತ್ಯ ಸೌಲಭ್ಯಗಳನ್ನು ಒದಗಿಸಿದಾಗ ಇದು ಸುಲಭಸಾಧ್ಯವಾಗುತ್ತದೆ ಎಂದು ಶ್ರೀ ಮೋದಿ ಹೇಳಿದರು. ಇಂದು ಉತ್ತರ ಪ್ರದೇಶವು ಅವಳಿ ಎಂಜಿನ್ ಸರಕಾರದ ಅವಳಿ ಪ್ರಯೋಜನಕ್ಕೆ ಉತ್ತಮ ಉದಾಹರಣೆಯಾಗುತ್ತಿದೆ ಎಂದರು.

ದೇಶದ ಅಭಿವೃದ್ಧಿಯಲ್ಲಿ ಒಂದು ಎಡವಟ್ಟಾಗಿ ಪರಿಗಣಿಸಲ್ಪಟ್ಟಿದ್ದ ಅದೇ ಉತ್ತರ ಪ್ರದೇಶವು ಇಂದು ದೇಶದ ದೊಡ್ಡ ಅಭಿಯಾನಗಳನ್ನು ಮುನ್ನಡೆಸುತ್ತಿರುವುದನ್ನು ನೋಡಿ ಪ್ರಧಾನಿ ಸಂತೋಷ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿಯವರು 2017ರ ಮೊದಲು ಉತ್ತರ ಪ್ರದೇಶದ ಪರಿಸ್ಥಿತಿಯ ಬಗ್ಗೆ ವಿವರಿಸಿದರು. ಹಿಂದೆ ಯಾವ ರೀತಿಯ ಹಗರಣಗಳು ನಡೆಯುತ್ತಿದ್ದವು ಮತ್ತು ಆಡಳಿತವನ್ನು ಹೇಗೆ ಭ್ರಷ್ಟರ ಕೈಗೆ ನೀಡಲಾಗುತ್ತಿತ್ತು ಎಂಬುದನ್ನು ಉತ್ತರ ಪ್ರದೇಶ ಜನರು ಮರೆಯಲು ಸಾಧ್ಯವಿಲ್ಲ. ಇಂದು, ಯೋಗಿ ಆದಿತ್ಯನಾಥ್‌ ಅವರ ಸರಕಾರ ಉತ್ತರ ಪ್ರದೇಶದ ಅಭಿವೃದ್ಧಿಯಲ್ಲಿ ಪ್ರಾಮಾಣಿಕವಾಗಿ ತೊಡಗಿದೆ ಎಂದು ಪ್ರಧಾನಿ ಹೇಳಿದರು.  ಒಂದು ಕಾಲದಲ್ಲಿ ಗೂಂಡಾಗಳು ಮತ್ತು ಮಾಫಿಯಾಗಳಿಂದ ಇಲ್ಲಿ ನಿರಂಕುಶ ಆಡಳಿತ ನಡೆಯುತ್ತಿತ್ತು. ಆದರೆ ಈಗ ಸುಲಿಗೆಕೋರರು ಮತ್ತು ಮಾಫಿಯಾ ರಾಜ್ ನಡೆಸುತ್ತಿರುವವರು ಜೈಲು ಸೇರಿದ್ದಾರೆ ಎಂದು ಪ್ರಧಾನಿ ಹೇಳಿದರು.

ಸಾಂಕ್ರಾಮಿಕ ರೋಗದ ಸಮಯದಲ್ಲಿ ಅತ್ಯಂತ ದುರ್ಬಲ ವರ್ಗಗಳ ಭದ್ರತೆಯನ್ನು ಖಾತರಿಪಡಿಸುವಲ್ಲಿ ಉತ್ತರ ಪ್ರದೇಶ ಸರಕಾರದ ಪ್ರಯತ್ನಗಳನ್ನು ಪ್ರಧಾನಿ ವಿಶೇಷವಾಗಿ ಹೇಳಿದರು. ಜೊತೆಗೆ ಸಾಂಕ್ರಾಮಿಕದ ಸಮಯದಲ್ಲಿ ದುರ್ಬಲ ಮತ್ತು ಬಡ ವರ್ಗಗಳಿಗೆ ಆಹಾರ ಧಾನ್ಯವನ್ನು  ಲಭ್ಯವಾಗುವಂತೆ ಮಾಡಿದ ರೀತಿಯನ್ನು ಶ್ಲಾಘಿಸಿದರು. ಸಣ್ಣ ಭೂಹಿಡುವಳಿ ಹೊಂದಿರುವ ರೈತರಿಗೆ ಶಕ್ತಿ ನೀಡಲು ಕೇಂದ್ರ ಸರಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದರು.  ಕನಿಷ್ಠ ಬೆಂಬಲ ಬೆಲೆಯನ್ನು 1.5 ಪಟ್ಟು ಹೆಚ್ಚಿಸುವುದು, ಕಿಸಾನ್ ಕ್ರೆಡಿಟ್ ಕಾರ್ಡ್ ವಿಸ್ತರಣೆ, ವಿಮಾ ಯೋಜನೆಯಲ್ಲಿ ಸುಧಾರಣೆ, 3 ಸಾವಿರ ರೂ.ಗಳ ಪಿಂಚಣಿ ಒದಗಿಸುವುದು ಮುಂತಾದ ಅನೇಕ ಉಪಕ್ರಮಗಳು ಸಣ್ಣ ರೈತರನ್ನು ಸಶಕ್ತಗೊಳಿಸುತ್ತಿವೆ. ರಾಜ್ಯದ ಕಬ್ಬು ಬೆಳೆಗಾರರಿಗೆ 1 ಲಕ್ಷ 40 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಪಾವತಿಸಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಪೆಟ್ರೋಲ್‌ನಲ್ಲಿ ಎಥೆನಾಲ್ ಅಂಶವನ್ನು ಹೆಚ್ಚಿಸುವುದರಿಂದ ಪಶ್ಚಿಮ ಉತ್ತರ ಪ್ರದೇಶದ ಕಬ್ಬು ಬೆಳೆಗಾರರು ಲಾಭ ಪಡೆಯಲಿದ್ದಾರೆ ಎಂದು ಪ್ರಧಾನಿ ಹೇಳಿದರು.

 

***



(Release ID: 1754786) Visitor Counter : 248