ಪ್ರಧಾನ ಮಂತ್ರಿಯವರ ಕಛೇರಿ

ಬಾಂಗ್ಲಾದೇಶದ ಠಾಕೂರ್ ಬಾರಿಯ ಒರಾಕಂಡಿಯಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 27 MAR 2021 5:15PM by PIB Bengaluru

ಜೈ  ಹರಿ ಬೋಲ್!

ಜೈ  ಹರಿ ಬೋಲ್!

ಹರಿ ಬೋಲ್!

ಹರಿ ಬೋಲ್!

ಜೈ  ಹರಿ ಬೋಲ್!

ಬಾಂಗ್ಲಾದೇಶ ಸರಕಾರದ ಗೌರವಾನ್ವಿತ ಪ್ರತಿನಿಧಿಗಳೇ, ಕೃಷಿ ಸಚಿವರಾದ ಡಾ. ಮೊಹಮ್ಮದ್ ಅಬ್ದುರ್ ರಝಾಕಿ ಜೀ, ಶ್ರೀ ಶೇಖ್ ಸೆಲೀಂ ಜೀ, ಲೆಫ್ಟಿನೆಂಟ್ ಕರ್ನಲ್ ಮುಹಮ್ಮದ್ ಫಾರೂಕ್ ಖಾನ್ ಜೀ, ಶ್ರೀ ಶ್ರೀ ಹರಿಚಂದ್ ಠಾಕೂರ್ ಜೀ ಅವರ ಸಂಪ್ರದಾಯ ಮತ್ತು ಮೌಲ್ಯಗಳನ್ನು ಪ್ರತಿನಿಧಿಸುತ್ತಿರುವ, ಭಾರತೀಯ ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿಯಾಗಿರುವ ಮತ್ತು ನನ್ನ ಸ್ನೇಹಿತರಾಗಿರುವ ಶ್ರೀ ಶಂತನು ಠಾಕೂರ್ ಜೀ, ಅಖಿಲ ಭಾರತ ಮಟುವಾ ಒಕ್ಕೂಟದ ಭಾರತೀಯ ಪ್ರತಿನಿಧಿಗಳೇ, ನನ್ನ ಸಹೋದರಿಯರು ಮತ್ತು ಸಹೋದರರೇ ಮತ್ತು  ಎಲ್ಲಾ ಗೌರವಾನ್ವಿತ ಸಹೋದ್ಯೋಗಿಗಳೇಶ್ರೀ ಶ್ರೀ ಹರಿಚಂದ ಠಾಕೂರ್ ಜೀ ಅವರಲ್ಲಿ  ವಿಶೇಷ ಪೂಜ್ಯತಾಭಾವದೊಂದಿಗೆ ಬಂದಿರುವ ನಿಮ್ಮೆಲ್ಲರಿಗೂ ನಮಸ್ಕಾರಗಳು!.

ಇಂದು ಶ್ರೀ ಶ್ರೀ ಹರಿಚಂದ್ ಠಾಕೂರ್ ಜೀ ಅವರ ಆಶೀರ್ವಾದದೊಂದಿಗೆ ನನಗೆ ಠಾಕೂರ್ ಬಾರಿಯ ಒರಾಕಂಡಿಯ ಈ ಪವಿತ್ರ ಸ್ಥಳಕ್ಕೆ ಬಂದು ಗೌರವ ಅರ್ಪಿಸುವ  ಸದವಕಾಶ ದೊರೆತಿದೆ. ಶ್ರೀ ಶ್ರೀ ಹರಿಚಂದ ಠಾಕೂರ್ ಜೀ ಮತ್ತು ಶ್ರೀ ಶ್ರೀ ಗುರುಚಂದ್ ಠಾಕೂರ್ ಜೀ ಅವರ ಪಾದಕ್ಕೆ ಶಿರಬಾಗಿ ನಮಿಸುತ್ತೇನೆ.

ನಾನು ಇಲ್ಲಿಯ ಕೆಲವು ಗೌರವಾನ್ವಿತರ ಜೊತೆ ಮಾತನಾಡುತ್ತಿದ್ದಾಗ ಅವರು ಹೇಳಿದರು, “ ಭಾರತದ ಪ್ರಧಾನ ಮಂತ್ರಿ ಒರಾಕಂಡಿಗೆ ಬರುತ್ತಾರೆ ಎಂದು ಯಾರು ಅಂದುಕೊಂಡಿದ್ದರು“ ಎಂಬುದಾಗಿ. ಭಾರತದಲ್ಲಿ ವಾಸಿಸುವ ಮಟುವಾ ಪಂಥದ ಮಿಲಿಯಾಂತರ ಸಹೋದರರು ಮತ್ತು ಸಹೋದರಿಯರು ಒರಾಕಂಡಿಗೆ ಬಂದು ಏನು ಭಾವವನ್ನು ಅನುಭವಿಸುತ್ತಾರೋ, ನಾನೂ ಆ ಭಾವನೆಯನ್ನು ಅನುಭವಿಸುತ್ತಿದ್ದೇನೆ. ನಾನು ಇಂದು ಇಲ್ಲಿಗೆ ಬಂದಾಗ, ನಾನು ಅವರ ಪರವಾಗಿ ಕೂಡಾ ಈ ಪವಿತ್ರ, ಪುಣ್ಯಸ್ಥಳಕ್ಕೆ ನಮಿಸಿದ್ದೇನೆ.

ನಾನು ಈ ದಿನಕ್ಕಾಗಿ  ಕಾಯುತ್ತಿದ್ದೆ, ಈ ಪವಿತ್ರ ಸಂದರ್ಭಕ್ಕಾಗಿ ಬಹಳ ವರ್ಷಗಳಿಂದ ಕಾಯುತ್ತಿದ್ದೆ. 2015ರಲ್ಲಿ ನಾನು ಮೊದಲ ಬಾರಿಗೆ ಪ್ರಧಾನ ಮಂತ್ರಿಯಾಗಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದಾಗ, ನಾನು ಇಲ್ಲಿಗೆ ಬರುವ ಆಶಯ ವ್ಯಕ್ತಪಡಿಸಿದ್ದೆ. ಇಂದು ನನ್ನ ಆಶಯ, ಇಚ್ಛೆ ಈಡೇರಿದೆ.

ನಾನು ಶ್ರೀ ಶ್ರೀ ಹರಿಚಂದ ಠಾಕೂರ್ ಜೀ ಅವರ ಅನುಯಾಯಿಗಳಿಂದ ಸದಾ ಪ್ರೀತಿ ಮತ್ತು ವಾತ್ಸಲ್ಯವನ್ನು ಮತ್ತು ಅವರ ಕುಟುಂಬದವರಿಂದ  ಪ್ರೀತಿ ಗೌರವವನ್ನು ಪಡೆದಿದ್ದೇನೆ. ಇಂದು ಠಾಕೂರ್ ಬರಿಗೆ ನಾನು ಭೇಟಿ ನೀಡಿರುವುದರ ಹಿಂದೆ ಅವರ ಆಶೀರ್ವಾದದ ಫಲವಿದೆ ಎಂದು ನಾನು ಭಾವಿಸುತ್ತೇನೆ.

ಪಶ್ಚಿಮ ಬಂಗಾಳದ ಠಾಕೂರ್ ನಗರಕ್ಕೆ ನಾನು ಭೇಟಿ ನೀಡಿದಾಗ, ನನ್ನ ಮಟುವಾ ಸಹೋದರರು ಮತ್ತು ಸಹೋದರಿಯರು ನನಗೆ ಅವರ ಕುಟುಂಬದ ಸದಸ್ಯರಂತೆ ಪ್ರೀತಿ ನೀಡಿದರು. ಬೋರೋ ಮಾ (ಹಿರಿಯ ತಾಯಿ) ಅವರ ಆಶೀರ್ವಾದ ತಾಯಿಯ ಆಶೀರ್ವಾದದಂತಿತ್ತು, ಇದು ನನ್ನ ಬದುಕಿನ ಅತ್ಯಮೂಲ್ಯ ಕ್ಷಣ.

ಪಶ್ಚಿಮ ಬಂಗಾಳದ ಠಾಕೂರ್ ನಗರದಿಂದ ಬಾಂಗ್ಲಾದೇಶದ ಠಾಕೂರ್ ಬರೆಯವರೆಗೂ ಅದೇ ಪೂಜ್ಯತೆ, ಅದೇ ನಂಬಿಕೆ ಮತ್ತು ಅದೇ ಅನುಭವ.

ಬಾಂಗ್ಲಾದೇಶದ ರಾಷ್ಟ್ರೀಯ ಹಬ್ಬದ ಈ ಸಂದರ್ಭದಲ್ಲಿ  ನಾನು ಭಾರತದ 130 ಕೋಟಿ ಸಹೋದರರು ಮತ್ತು ಸಹೋದರಿಯರ ಪ್ರೀತಿ ಮತ್ತು ಶುಭಾಶಯಗಳನ್ನು ತಂದಿದ್ದೇನೆ. ಬಾಂಗ್ಲಾದೇಶದ ಸ್ವಾತಂತ್ರ್ಯದ 50 ವರ್ಷಗಳನ್ನು ಪೂರ್ಣಗೊಳಿಸಿರುವ ಈ ಶುಭ ಸಂದರ್ಭದಲ್ಲಿ ನಿಮೆಲ್ಲರಿಗೂ ಅಭಿನಂದನೆಗಳು. ಶುಭ ಹಾರೈಕೆಗಳು.

ನಿನ್ನೆ ಢಾಕಾದಲ್ಲಿ ನಡೆದ ರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮದಲ್ಲಿ, ನಾನು ಬಾಂಗ್ಲಾದೇಶದ ಪರಾಕ್ರಮದ  ದ್ಯೋತಕವಾದ  ಅತ್ಯದ್ಭುತವಾದ ಸ್ತಬ್ದಚಿತ್ರವನ್ನು ನೋಡಿದೆ, ಈ ಸುಂದರ ದೇಶವು ಕಾಪಾಡಿಕೊಂಡು ಬಂದಿರುವ ಸಂಸ್ಕೃತಿಯನ್ನು ಅದು ಬಿಂಬಿಸುತ್ತಿತ್ತು ಮತ್ತು ಇದರಲ್ಲಿ ನೀವು ಪ್ರಮುಖ ಭಾಗವಾಗಿದ್ದೀರಿ.

ನಾನು ಇಲ್ಲಿಗೆ ಬರುವ ಮೋದಲು, ನಾನು ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರ  “ಶಮಾಧಿ ಶೋಧೋ”ಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದ್ದೆ. ಶೇಖ್ ಮುಜಿಬುರ್ ರೆಹಮಾನ್ ಅವರ ನಾಯಕತ್ವ, ದೂರದೃಷ್ಟಿ ಮತ್ತು ಬಾಂಗ್ಲಾದೇಶದ ಜನತೆಯಲ್ಲಿ ಅವರ ನಂಬಿಕೆ ಶ್ಲಾಘನೀಯ.

ಇಂದು, ಭಾರತ- ಬಾಂಗ್ಲಾದೇಶ ಸರಕಾರಗಳು ಈ ಎರಡು ರಾಷ್ಟ್ರಗಳ ನಡುವಿನ ನೈಸರ್ಗಿಕವಾದಂತಹ ಬಾಂಧವ್ಯವನ್ನು ಗಟ್ಟಿಗೊಳಿಸುತ್ತಿವೆ. ಸಾಂಸ್ಕೃತಿಕವಾಗಿ ದಶಕಗಳ ಹಿಂದೆ ಠಾಕೂರ್ ಬಾರಿ ಮತ್ತು ಶ್ರೀ ಹರಿಚಂದ್ ಠಾಕೂರ್ ಜೀ ಅವರು ಇದನ್ನು ಮಾಡಿದ್ದರು.

ಈ ರೀತಿಯಿಂದಾಗಿ ಈ ಸ್ಥಳ ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ಆಧ್ಯಾತ್ಮಿಕ ಬಾಂಧವ್ಯದ ಯಾತ್ರಾಸ್ಥಳವಾಗಿದೆ. ನಮ್ಮ ಬಾಂಧವ್ಯ ಜನತೆ ಮತ್ತು ಜನತೆಯ ನಡುವಣ ಬಾಂಧವ್ಯ, ಹೃದಯ ಮತ್ತು ಹೃದಯದ ನಡುವಣ ಬಾಂಧವ್ಯ.

ಭಾರತ ಮತ್ತು ಬಾಂಗ್ಲಾ ದೇಶಗಳು ತಮ್ಮ ಪ್ರಗತಿಯ ಜೊತೆ ಇಡೀ ಜಗತ್ತಿನ ಪ್ರಗತಿಯನ್ನು ಕಾಣಲು ಇಚ್ಛಿಸುತ್ತವೆ. ಉಭಯ ದೇಶಗಳೂ ಅಸ್ಥಿರತೆ, ಭಯೋತ್ಪಾದನೆ, ಮತ್ತು ಅಶಾಂತಿಗೆ ಬದಲು ಸ್ಥಿರತೆ, ಪ್ರೀತಿ ಮತ್ತು ಶಾಂತಿಯನ್ನು ಅಪೇಕ್ಷಿಸುತ್ತವೆ.

ನಮಗೆ ಈ ಮೌಲ್ಯವನ್ನು  ನೀಡಿದ್ದು ಶ್ರೀ ಶ್ರೀ ಹರಿಚಂದ್ ಠಾಕೂರ್ ದೇವಿ ಜೀ. ಶ್ರೀ ಶ್ರೀ ಹರಿಚಂದ್ ಜೀ ಅವರು ತಮ್ಮ ಜೀವನವನ್ನು ಇಡೀ ವಿಶ್ವವೇ ಮಾತನಾಡುವಂತಹ ಮೌಲ್ಯಗಳಿಗೆ ಮುಡಿಪಾಗಿಟ್ಟರು. ಮತ್ತು ಈ ಮೌಲ್ಯಗಳು ಮಾನವ ಕುಲ ಕನಸು ಕಂಡಂತಹವು. ಶ್ರೇಷ್ಟ ಕವಿ ಶ್ರೀ ಮಹಾನಂದೋ ಹಲ್ದಾರ್ ಅವರು ಶ್ರೀ ಶ್ರೀ ಗುರುಚಂದ್ ಚರಿತೋದಲ್ಲಿ ಬರೆದಿದ್ದಾರೆ-

तपशील जाति माधुज्ज जा किछु होयचे।

हॉरीचन्द कल्पवृक्ष सॉकली फेलेछे॥

ಇದರರ್ಥ ಶೋಷಣೆಗೊಳಗಾದ, ತೊಳಲಾಟದಲ್ಲಿರುವಂತಹ, ದಲಿತರು, ಅವಕಾಶ ವಂಚಿತರು ಒಳಗೊಂಡಿರುವಂತಹ ಸಮಾಜ ಏನನ್ನೇ ಸಾಧಿಸಿರಲಿ, ಅದು ಏನೇ ಇರಲಿಅದು  ಶ್ರೀ ಶ್ರೀ ಹರಿಚಂದ ಜೀ ಅವರಂತಹ ಕಲ್ಪವೃಕ್ಷದ ಫಲ.

ಶ್ರೀ ಶ್ರೀ ಹರಿಚಂದ ಜೀ ಅವರು ತೋರಿದ ಹಾದಿಯಲ್ಲಿ ನಾವು ಸಮಾನ, ಸೌಹಾರ್ದ ಸಮಾಜದತ್ತ ಇಂದು ಸಾಗುತ್ತಿದ್ದೇವೆ. ಅವರು ಮಹಿಳಾ ಶಿಕ್ಷಣದ ನಿಟ್ಟಿನಲ್ಲಿ ಕೆಲಸ ಮಾಡಿದರು. ಮತ್ತು ಆ ಕಾಲದಲ್ಲಿ ಅವರ ಸಾಮಾಜಿಕ ಪಾಲ್ಗೊಳ್ಳುವಿಕೆಗೆ ಕಾರಣರಾದರು. ಇಂದು, ಮಹಿಳಾ ಸಶಕ್ತೀಕರಣ ಪ್ರಯತ್ನಗಳು ಜಗತ್ತಿನಾದ್ಯಂತ ವಿಸ್ತರಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.

ಶ್ರೀ ಶ್ರೀ ಹರಿಚಂದ ಠಾಕೂರ್ ಅವರ ಸಂದೇಶಗಳನ್ನು ನಾವು ಅರ್ಥ ಮಾಡಿಕೊಂಡಾಗ, “ಹೋರಿ-ಲೀಲಾ-ಅಮೃತ್ತೋ”  ವಾಚಿಸುವಾಗ, ಅವರು ಅದಾಗಲೇ ಬರಲಿರುವ ಶತಮಾನಗಳನ್ನು ಕಂಡಿದ್ದರೇನೋ ಎಂದೆನಿಸುತ್ತದೆ. ಅವರಲ್ಲಿ ದೈವಿಕ ಮುಂಗಾಣ್ಕೆ ಇತ್ತು, ಅಲೌಕಿಕವಾದ ಬುದ್ಧಿವಂತಿಕೆ ಇತ್ತು.

ಗುಲಾಮಗಿರಿಯ ಕಾಲದಲ್ಲಿಯೂ ಅವರು ನಮ್ಮ ನೈಜ ಪ್ರಗತಿಯ ಹಾದಿ ಯಾವುದು ಎಂಬುದನ್ನು ಸಮಾಜಕ್ಕೆ ತಿಳಿಸಿಕೊಟ್ಟರು.ಇಂದು ಭಾರತದಲ್ಲಿರಲಿ ಅಥವಾ ಬಾಂಗ್ಲಾದೇಶದಲ್ಲಿರಲಿ, ನಾವು ನಮ್ಮ ಭವಿಷ್ಯವನ್ನು ಅದೇ ಸಾಮಾಜಿಕ ಏಕತೆ, ಸೌಹಾರ್ದದ ಮಂತ್ರದೊಂದಿಗೆ, ಅಭಿವೃದ್ಧಿಯ ಹೊಸ ಆಯಾಮಗಳು ತಲುಪುವಂತೆ ನಿರ್ಮಾಣ ಮಾಡುತ್ತಿದ್ದೇವೆ.

ಸ್ನೇಹಿತರೇ,

ಶ್ರೀ ಶ್ರೀ ಹರಿಚಂದ ದೇವ್ ಜೀ ಅವರ ಜೀವನ ನಮಗೆ ಇನ್ನೊಂದು ಪಾಠವನ್ನೂ ಕೊಟ್ಟಿದೆ. ದೈವಿಕ ಪ್ರೀತಿಯ ಸಂದೇಶವನ್ನು ನೀಡಿದ್ದು ಮಾತ್ರವಲ್ಲ ಅವರು ನಮ್ಮ ಕರ್ತವ್ಯಗಳ ಬಗ್ಗೆಯೂ ನಮ್ಮಲ್ಲಿ ಜಾಗೃತಿ ಮೂಡಿಸಿದರು. ದಮನ, ಶೋಷಣೆಯ ವಿರುದ್ಧ ಹೋರಾಟ ಕೂಡಾ ಆಧ್ಯಾತ್ಮ ಎಂದವರು ಹೇಳಿದರು.

ಇಂದು ಶ್ರೀ ಹರಿಚಂದ್ ದೇವ್ ಜೀ ಅವರ ಭಾರತದಲ್ಲಿರುವ, ಬಾಂಗ್ಲಾದೇಶದಲ್ಲಿರುವ ಅಥವಾ ಬೇರೆಲ್ಲಾದರೂ ಇರುವ ಲಕ್ಷಾಂತರ, ಕೋಟ್ಯಂತರ ಅನುಯಾಯಿಗಳು ಅವರು ತೋರಿದ ಹಾದಿಯಲ್ಲಿ ಸಾಗುತ್ತಿದ್ದಾರೆ, ಮಾನವತೆಯು ಎದುರಿಸುವ ಯಾವುದೇ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಸಹಕಾರ ನೀಡುತ್ತಿದ್ದಾರೆ.

ಶ್ರೀ ಶ್ರೀ ಹರಿಚಂದ್ ಠಾಕೂರ್ ಜೀ ಅವರ ತತ್ವಾದರ್ಶಗಳನ್ನು ಬೆಂಬಲಿಸುತ್ತಿರುವ ಶಂತನು ಠಾಕೂರ್ ಜೀ ಅವರನ್ನು ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿಯಾಗಿ ಹೊಂದಿರುವ ಅದೃಷ್ಟ ನನ್ನದು. ಅವರು ನನಗಿಂತ ಕಿರಿಯರು. ಆದರೆ ನಾನು ಅವರಿಂದ ಬಹಳಷ್ಟನ್ನು ಕಲಿಯುತ್ತಿರುತ್ತೇನೆ. ಇದಕ್ಕೆ ಕಾರಣ ಅವರು ಶ್ರೀ ಶ್ರೀ ಹರಿಚಂದ್ ಠಾಕೂರ್ ಜೀ ಅವರ ಬೋಧನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವುದು. ಅವರು ಬಹಳ ಶ್ರದ್ಧಾವಂತರು. ಅವರು ಸಮಾಜದಲ್ಲಿಯ ಜನತೆಯ ಸ್ಥಿತಿ ಸುಧಾರಣೆಗೆ ಹಗಲು ರಾತ್ರಿಯೂ ಶ್ರಮಿಸುತ್ತಿರುತ್ತಾರೆ.

ಸ್ನೇಹಿತರೇ,

ಭಾರತ ಮತ್ತು ಬಾಂಗ್ಲಾದೇಶಗಳು ಇಂದು ಎದುರಿಸುತ್ತಿರುವ ಸಮಾನ ಸವಾಲುಗಳನ್ನು ಪರಿಹರಿಸುವಲ್ಲಿ ಶ್ರೀ ಹರಿಚಂದ ದೇವ್ ಜೀ ಅವರ ಪ್ರೇರಣೆ ಬಹಳ ಮುಖ್ಯ. ಉಭಯ ದೇಶಗಳು ಎಲ್ಲಾ ಸವಾಲುಗಳನ್ನು ಎದುರಿಸಲೇ ಬೇಕಾಗಿದೆ. ಇದು ನಮ್ಮ ಕರ್ತವ್ಯ; ಇದು ಉಭಯ ದೇಶಗಳ ಕೋಟ್ಯಂತರ ಜನತೆಯ ಕಲ್ಯಾಣದ ಹಾದಿ.

ಕೊರೊನಾ ಜಾಗತಿಕ ಸಾಂಕ್ರಾಮಿಕದ ಕಾಲದಲ್ಲಿ ಭಾರತ ಮತ್ತು ಬಾಂಗ್ಲಾದೇಶಗಳು ತಮ್ಮ ಶಕ್ತಿ ಏನು ಎಂಬುದನ್ನು ತೋರಿಸಿಕೊಟ್ಟಿವೆ. ಇಂದು, ಉಭಯ ದೇಶಗಳೂ ಈ ಜಾಗತಿಕ ಸಾಂಕ್ರಾಮಿಕದ ವಿರುದ್ಧ ದೃಢವಾದ ಹೋರಾಟ ಮಾಡುತ್ತಿವೆ. ಕರ್ತವ್ಯ ಎಂಬಂತೆ ಭಾರತ “ಭಾರತದಲ್ಲಿ ತಯಾರಾದ ಲಸಿಕೆ”ಯು ಬಾಂಗ್ಲಾದೇಶದ ನಾಗರಿಕರಿಗೆ ತಲುಪುವಂತೆ ಮಾಡಲು ಇಚ್ಛಿಸುತ್ತಿದೆ.

ಶ್ರೀ ಶ್ರೀ ಹರಿಚಂದ ಜೀ ಅವರು ಸದಾ ಆಧುನಿಕತೆ ಮತ್ತು ಪರಿವರ್ತನೆಯನ್ನು ಬೆಂಬಲಿಸಿದವರು. ಜಾಗತಿಕ ಸಾಂಕ್ರಾಮಿಕ ಆರಂಭವಾದಾಗ, ಓರಾಕಾಂಡಿಯಲ್ಲಿರುವ ನೀವೆಲ್ಲರೂ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಆನ್ ಲೈನ್ ಮೂಲಕ ಕೀರ್ತನಗಳನ್ನು ಆಯೋಜಿಸಿ ಸಾಮಾಜಿಕ ವಿಶ್ವಾಸವನ್ನು ಹೆಚ್ಚಿಸಿದಿರಿ ಎಂದು ನನಗೆ ತಿಳಿಸಲಾಗಿದೆ. ಇದು ಶ್ರೀ ಶ್ರೀ ಹರಿಚಂದ ಅವರು ಪ್ರತೀ ಕಷ್ಟದ ಪರಿಸ್ಥಿತಿಯನ್ನೂ  ಎದುರಿಸಿ ಮುನ್ನುಗ್ಗು ಎಂದು ನಮಗೆ ನೀಡಿದ ಬೋಧನೆಯ ಪ್ರೇರಣೆಯನ್ನು ತೋರಿಸುತ್ತದೆ.

ಹರಿಚಂದ ದೇವ್ ಜೀ ಅವರ ಬೋಧನೆಗಳನ್ನು ಜನತೆಯತ್ತ ಕೊಂಡೊಯ್ಯುವಲ್ಲಿ, ದಲಿತರನ್ನು ಒಗ್ಗೂಡಿಸುವಲ್ಲಿ  ಅವರ ಉತ್ತರಾಧಿಕಾರಿ, ಶ್ರೀ ಶ್ರೀ ಗುರುಚಂದ್ ಠಾಕೂರ್ ಜೀ ಅವರು ಬಹಳ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಶ್ರೀ ಶ್ರೀ ಗುರುಚಂದ ದೇವ್ ಅವರು “ಭಕ್ತಿ, ಕ್ರಿಯಾ ಮತ್ತು ಜ್ಞಾನ”ದ ಸೂತ್ರವನ್ನು ನಮಗೆ ನೀಡಿದ್ದಾರೆ. ಶ್ರೀ ಶ್ರೀ ಗುರುಚಂದ್ ಚರಿತೋ ಹೇಳುತ್ತದೆ:

अनुनाता जाति माजे शिख्खा बिस्तारित।

आग्या करेन हॉरि चान्द तारे बीधिमॉते॥

ಅಂದರೆ, ಹರಿಚಂದ ಜೀ ಅವರು ಸಮಾಜದ ದುರ್ಬಲ ವರ್ಗದವರಿಗೆ ಶಿಕ್ಷಣಕ್ಕೆ ಅವಕಾಶ ಒದಗಿಸಲು ಆದೇಶ ಮಾಡಿದರು. ಶ್ರೀ ಗುರುಚಂದ ಜೀ ಅವರು ತಮ್ಮ ಜೀವನ ಪರ್ಯಂತ ಹರಿಚಂದ ಜೀ ಅವರ ಈ ಆದೇಶವನ್ನು ಪಾಲಿಸಿದರು.ಅವರು ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಅಹರ್ನಿಶಿ ಪ್ರಯತ್ನಗಳನ್ನು ಮಾಡಿದರು.

ಇಂದು ಪ್ರತಿಯೊಬ್ಬ ಭಾರತೀಯರೂ ಇಲ್ಲಿ ಬಾಂಗ್ಲಾದೇಶದಲ್ಲಿ ಶ್ರೀ ಗುರುಚಂದ ಜೀ ಅವರ ಪ್ರಯತ್ನಗಳ ಫಲವಾಗಿ ಸಂಪರ್ಕದ ಸವಲತ್ತು ಹೊಂದಿದ್ದಾರೆ. ಓರಾಕಾಂಡಿಯಲ್ಲಿಯ ಶಿಕ್ಷಣದ ಆಂದೋಲನ ಇನ್ನು ಭಾರತದ ಜನತೆಯ ಬೆಂಬಲವನ್ನು ಕೂಡಾ ಪಡೆಯಲಿದೆ.

ಭಾರತ ಸರಕಾರವು ಓರಾಕಾಂಡಿಯಲ್ಲಿರುವ ಬಾಲಕಿಯರ ಪ್ರೌಢ ಶಾಲೆಯನ್ನು ಉನ್ನತೀಕರಿಸಲಿದೆ. ಅಲ್ಲಿ ಹೊಸ ಸೌಲಭ್ಯಗಳನ್ನು ಒದಗಿಸಲಾಗುವುದು. ಇದಲ್ಲದೆ ಇಲ್ಲಿ ಭಾರತ ಸರಕಾರದ ವತಿಯಿಂದ ಪ್ರಾಥಮಿಕ ಶಾಲೆಯನ್ನು ತೆರೆಯಲಾಗುವುದು.

ಇದು ಶ್ರೀ ಶ್ರೀ ಹರಿಚಂದ ಠಾಕೂರ್ ಜೀ ಅವರಿಗೆ ಕೋಟ್ಯಂತರ ಭಾರತೀಯರ ಪರವಾಗಿ ಸಲ್ಲಿಸುವ ಗೌರವ. ಈ ಕೆಲಸದಲ್ಲಿ ನಮಗೆ ಸಹಕಾರ ನೀಡುತ್ತಿರುವ ಬಾಂಗ್ಲಾದೇಶದ ಸರಕಾರಕ್ಕೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ.

ಮಟುವಾ ಸಮುದಾಯದ ಜನತೆ ’ಬರೋನಿ ಸ್ನಾನ ಉತ್ಸವ” ವನ್ನು ಪ್ರತೀ ವರ್ಷ ಶ್ರೀ ಶ್ರೀ ಹರಿಚಂದ ಠಾಕೂರ್ ಜೀ ಅವರ ಜನ್ಮ ವಾರ್ಷಿಕೋತ್ಸವದಂದು ಆಚರಿಸುತ್ತಾರೆ. ಭಾರತದಿಂದ ಬೃಹತ್ ಸಂಖ್ಯೆಯ ಭಕ್ತರು ಓರಾಕಾಂಡಿಗೆ ಬಂದು ಈ ಉತ್ಸವದಲ್ಲಿ ಭಾಗವಹಿಸುತ್ತಾರೆ. ನನ್ನ ಸಹೋದರರು ಮತ್ತು ಸಹೋದರಿಯರಿಗೆ ಈ ಯಾತ್ರೆ ಸುಲಭವಾಗುವಂತೆ ಮಾಡಲು ಭಾರತ ಸರಕಾರದಿಂದ ಪ್ರಯತ್ನಗಳು ನಡೆಯುತ್ತಿವೆ. ಠಾಕೂರ್ ನಗರದಲ್ಲಿ ಮಟುವಾ ಸಮುದಾಯದ ವರ್ಣರಂಜಿತ ಚರಿತ್ರೆಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳನ್ನು ಮತ್ತು ಅದ್ದೂರಿ ಸಮಾರಂಭಗಳನ್ನು ಆಯೋಜಿಸಲು ನಾವು ಬದ್ಧರಾಗಿದ್ದೇವೆ.

ಸ್ನೇಹಿತರೇ,

ಭಾರತವು ಇಂದು “ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್” ಎಂಬ ಮಂತ್ರದೊಂದಿಗೆ ಮುನ್ನಡೆಯುತ್ತಿದೆ ಮತ್ತು ಬಾಂಗ್ಲಾದೇಶವು ಅದರ “ಶೋಹೋ ಜತ್ರಿ”ಯಾಗಿದೆ. ಇದೇ ವೇಳೆ, ಬಾಂಗ್ಲಾದೇಶವು ಇಂದು ಜಗತ್ತಿಗೆ ಅಭಿವೃದ್ಧಿ ಮತ್ತು ಬದಲಾವಣೆಯ ಬಲಿಷ್ಠ ಉದಾಹರಣೆಯಾಗಿ ಮೂಡಿ ಬಂದಿದೆ  ಭಾರತವು ನಿಮ್ಮ ಈ ಪ್ರಯತ್ನಗಳಲ್ಲಿ  “ಶೋಹೋ ಜತ್ರಿ”ಯಾಗಿರುತ್ತದೆ.

ಶ್ರೀ ಹರಿಚಂದ ದೇವ್ ಜೀ ಅವರ ಆಶೀರ್ವಾದದೊಂದಿಗೆ, ಶ್ರೀ ಶ್ರೀ ಗುರುಚೋಂದ್  ದೇವ್ ಜೀ ಅವರ ಪ್ರೇರಣೆಯೊಂದಿಗೆ ನಮ್ಮೆರಡೂ ದೇಶಗಳು 21ನೇ ಶತಮಾನದ ಸಮಾನ ಗುರಿಗಳನ್ನು ಸಮಯಮಿತಿಯೊಳಗೆ ಸಾಧಿಸಲಿವೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ.ಭಾರತ ಮತ್ತು ಬಾಂಗ್ಲಾದೇಶಗಳು ಪ್ರಗತಿ ಮತ್ತು ಪ್ರೀತಿಯ ಪಥದಲ್ಲಿ ಜಗತ್ತಿಗೆ ಮಾರ್ಗದರ್ಶನ ಮಾಡುತ್ತಿರುತ್ತವೆ.ಈ ಶುಭ ಹಾರೈಕೆಗಳೊಂದಿಗೆ, ನಿಮಗೆಲ್ಲರಿಗೂ ಹೃದಯ ತುಂಬಿದ  ಕೃತಜ್ಞತೆಗಳು

ಜೈ ಬಾಂಗ್ಲಾ, ಜೈ ಹಿಂದ್,

ಭಾರತ-ಬಾಂಗ್ಲಾದೇಶದ ಗೆಳೆತನ ಚಿರಾಯುವಾಗಲಿ!

ಜೈ ಹರಿ ಬೋಲ್!, ಜೈ ಹರಿ ಬೋಲ್!.ಹರಿ –ಬೋಲ್!, ಹರಿ ಬೋಲ್! ಜೈ ಹರಿ-ಬೋಲ್!

ಘೋಷಣೆ: ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ ಇದು. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***



(Release ID: 1708864) Visitor Counter : 245