ಪ್ರಧಾನ ಮಂತ್ರಿಯವರ ಕಛೇರಿ

ರಾಷ್ಟ್ರಪತಿಯವರ ರಾಜ್ಯಸಭೆಯ ಭಾಷಣದ ವಂದನಾ ನಿರ್ಣಯಕ್ಕೆ ಪ್ರಧಾನ ಮಂತ್ರಿ ಅವರ ಉತ್ತರ

Posted On: 08 FEB 2021 8:33PM by PIB Bengaluru

ಗೌರವಾನ್ವಿತ ಸಭಾಪತಿಯವರೆ,

ಹಲವಾರು ಸವಾಲುಗಳ ನಡುವೆ ಇದೀಗ ಇಡೀ ವಿಶ್ವವೇ ಎಚ್ಚರಿಕೆಯಿಂದ ಕಾಲಿಡುತ್ತಿದೆ.  ಮನುಕುಲದ ಬದುಕಿನಲ್ಲಿ ಇಂತಹ ಕಠಿಣ ಸನ್ನಿವೇಶಗಳನ್ನು ಎದುರಿಸಲೇಬೇಕಾಗುತ್ತದೆ ಎಂಬುದನ್ನು ಯಾರೊಬ್ಬರೂ ಊಹಿಸಿರಲಿಲ್ಲ. ಅಂತಹ ಸವಾಲುಗಳ ನಡುವೆ, ನಮ್ಮ ಗೌರವಾನ್ವಿತ ರಾಷ್ಟ್ರಪತಿ ಅವರು ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾಡಿದ ಭಾಷಣವು ಸವಾಲಿನ ವಿಶ್ವದಲ್ಲಿ ಹೊಸ ಆಶಾವಾದ, ಆತ್ಮವಿಶ್ವಾಸ ಮತ್ತು ಹುರುಪು ಮೂಡಿಸಿದೆ. ದಶಕದಲ್ಲಿ ಆತ್ಮನಿರ್ಭರ್ ಭಾರತ ಕಟ್ಟಲು ರಾಷ್ಟ್ರಪತಿ ಅವರ ಭಾಷಣ ಸುಗಮವಾದ ದಾರಿ ಮಾಡಿಕೊಟ್ಟಿದೆ.

ಗೌರವಾನ್ವಿತ ಸಭಾಪತಿ ಅವರೆ,

ರಾಷ್ಟ್ರಪತಿ ಅವರಿಗೆ ತುಂಬು ಹೃದಯದ ಕೃತಜ್ಞತೆ ಮತ್ತು ಧನ್ಯವಾದ ಹೇಳಲು ನಾನಿಂದು ನಿಮ್ಮೆಲ್ಲರ ಮುಂದೆ ನಿಂತಿದ್ದೇನೆ. ಗೌರವಾನ್ವಿತ ಸದಸ್ಯರು ಹಲವಾರು ವಿಷಯಗಳ ಕುರಿತು ರಾಜ್ಯಸಭೆಯಲ್ಲಿ ಸುಮಾರು 13-14 ತಾಸುಗಳ ಕಾಲ ಅರ್ಥಪೂರ್ಣ ಚರ್ಚೆ ನಡೆಸಿ, ತಮ್ಮ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಆದ್ದರಿಂದ ಕಲಾಪ ಚರ್ಚೆಯನ್ನು ಶ್ರೀಮಂತಗೊಳಿಸಿದ ಗೌರವಾನ್ವಿತ ಎಲ್ಲಾ ಸದಸ್ಯರೆಲ್ಲರಿಗೂ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ರಾಷ್ಟ್ರಪತಿ ಅವರ ಭಾಷಣವನ್ನು ಪ್ರತಿಯೊಬ್ಬರೂ ಆಲಿಸಿದರೆ ಇನ್ನೂ ಚೆನ್ನಾಗಿರುತ್ತಿತ್ತು. ಇದರಿಂದ ದೇಶದ ಪ್ರಜಾಪ್ರಭುತ್ವದ ಘನತೆ, ಗೌರವ ಮತ್ತಷ್ಟು ಹೆಚ್ಚಾಗುತ್ತಿತ್ತು.  ರಾಷ್ಟ್ರಪತಿ ಅವರ ಭಾಷಣ ಆಲಿಸಲಿಲ್ಲ ಎಂಬುದಕ್ಕೆ ವಿಷಾದವೂ ಇಲ್ಲ. ಎಲ್ಲರೂ ಆಲಿಸದೆ ಇರಬಹುದು, ಆದರೆ, ರಾಷ್ಟ್ರಪತಿ ಅವರ ಭಾಷಣದ ಶಕ್ತಿ ಅಷ್ಟು ಅಗಾಧವಾಗಿತ್ತು. ಅವರ ಭಾಷಣದ ಬಲ, ಶಕ್ತಿ, ಆದರ್ಶ ನಾಡಿನ ಎಲ್ಲೆಡೆಗೆ ಪಸರಿಸಿದೆ. ಆದ್ದರಿಂದ, ಭಾಷಣದ ಮೌಲ್ಯ ಮತ್ತು ಘನತೆ ಅನೇಕ ಪಟ್ಟು ಹೆಚ್ಚಾಗಿದೆ ಎಂದು ನಾನು ನಂಬಿದ್ದೇನೆ.

ಗೌರವಾನ್ವಿತ ಸಭಾಪತಿಗಳೆ,

ನಾನು ಹೇಳಿರುವಂತೆ, ದಶಕದ ಆರಂಭದಲ್ಲಿ ಎದುರಾದ ಹಲವು ಸವಾಲುಗಳ ನಡುವೆ, ರಾಷ್ಟ್ರಪತಿ ಅವರ ಚೊಚ್ಚಲ ಭಾಷಣ ಇದಾಗಿದೆ. ಆದರೆ, ನಾವು ಇಡೀ ವಿಶ್ವವನ್ನೇ ನೋಡುತ್ತಿರುವಾಗ, ಭಾರತದ ಯುವಶಕ್ತಿಯನ್ನು ಸಹ ಕಣ್ಣಾರೆ ಕಾಣಬೇಕು. ವಾಸ್ತವ ನೆಲೆಗಟ್ಟಿನಲ್ಲಿ ಭಾರತ ಇದೀಗ ವಿಫುಲ ಅವಕಾಶಗಳ ಕಣಜವಾಗಿದೆ ಎಂಬುದು ಸತ್ಯ. ಹಲವಾರು ಅವಕಾಶಗಳು ನಮಗಾಗಿ ಕಾದು ಕುಳಿತಿವೆ. ಆದ್ದರಿಂದ ಯುವಶಕ್ತಿಯೇ ತುಂಬಿರುವ ನಮ್ಮ ದೇಶದಲ್ಲಿ ಕನಸುಗಳನ್ನು ದೃಢ ಸಂಕಲ್ಪದೊಂದಿಗೆ ಸಾಕಾರಗೊಳಿಸಲು ಪ್ರಯತ್ನಿಸಬೇಕೇ ಹೊರತು ಉತ್ತಮ ಅವಕಾಶಗಳನ್ನು ಎಂದಿಗೂ ಕೈಬಿಡಬಾರದು. ಸ್ವಾತಂತ್ರ್ಯ ಗಳಿಸಿದ 75ನೇ ವರ್ಷಾಚರಣೆಯೂ ನಮಗೆ ಬಂದೊದಗಿರುವ ಉತ್ತಮ ಅವಕಾಶವಾಗಿದೆ. ಇದೊಂದು ಸ್ಫೂರ್ತಿದಾಯಕ ಅವಕಾಶವೂ ಆಗಿದೆ. ನಾವು ಎಲ್ಲೇ ಇರಲಿ, ಭಾರತ ಮಾತೆಯ ಮಕ್ಕಳಾಗಿ, ಸ್ವಾತಂತ್ರ್ಯೋತ್ಸವವನ್ನು ಸ್ಫೂರ್ತಿಯ ಹಬ್ಬವಾಗಿ ಆಚರಿಸಬೇಕು. ಮುಂಬರುವ ಉಜ್ವಲ ಮತ್ತು ಸಮೃದ್ಧ ದಿನಗಳಿಗೆ ಸಿದ್ಧತೆ ನಡೆಸಲು ಈಗಿನಿಂದಲೇ ಉತ್ಸಾಹ ತೋರಬೇಕು ಮತ್ತು ಕನಸುಗಳನ್ನು ಸಾಕಾರಗೊಳಿಸುವುದನ್ನು ಮತ್ತೆ ಮತ್ತೆ ಮುಂದುವರೆಸಬೇಕು. 2047ರಲ್ಲಿ ಸ್ವಾತಂತ್ರ್ಯೋತ್ಸವದ ಶತಮಾನೋತ್ಸವ ಆಚರಿಸಲು ನಾವೆಲ್ಲಾ ದೇಶವನ್ನು ಮುನ್ನಡೆಸಬೇಕು. ಇದೀಗ ಇಡೀ ವಿಶ್ವವೇ ಭಾರತದತ್ತ ನೋಡುತ್ತಿದೆ. ಭಾರತದ ಬಗ್ಗೆ ಜಾಗತಿಕ ಸಮುದಾಯ ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ವಿಶ್ವದ ಮುಂದೆ ಎದುರಾಗಿರುವ ನಾನಾ ಸವಾಲುಗಳನ್ನು ಪರಿಹರಿಸಲು ಭಾರತ ಮುಂದಾದರೆ ಮಾತ್ರ, ನೂರಾರು ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂಬುದು ಪ್ರಜ್ಞಾವಂತ ಜನರ ನಂಬಿಕೆಯಾಗಿದೆ. ಭಾರತದ ಮೇಲೆ ಬಲವಾದ ನಂಬಿಕೆ ವಿಶ್ವಾದ್ಯಂತ ಇದೆ.

ಗೌರವಾನ್ವಿತ ಸಭಾಪತಿಗಳೆ,

ಅವಕಾಶಗಳ ಬಗ್ಗೆ ನಾನು ಪ್ರಸ್ತಾಪಿಸುವಾಗ, ಖ್ಯಾತ ಕವಿ ಮೈಥಿಲಿ ಶರಣ್ ಗುಪ್ತ ಅವರ ಕವನದ ಸಾಲುಗಳನ್ನು ಇಲ್ಲಿ ಉಲ್ಲೇಖಿಸಲು ಬಯಸುತ್ತೇನೆ.

अवसर तेरे लिए खड़ा है,

फिर भी तू चुपचाप पड़ा है।

तेरा कर्म क्षेत्र बड़ा है

पल-पल है अनमोल,

अरे भारत उठ, आखें खोल।।

ಅವಕಾಶಗಳು ನಿಮಗಾಗಿ ಕಾಯುತ್ತವೆ.

ಆದರೂ ನೀವು ಸುಮ್ಮನಿದ್ದೀರಿ

ನಿಮ್ಮ ಕಾರ್ಯಕ್ಷೇತ್ರ (ಕರ್ಮ) ವಿಸ್ತಾರವಾಗಿದೆ

ಪ್ರತಿ ಕ್ಷಣವೂ ಅತ್ಯಮೂಲ್ಯ.

ಭಾರತವೆ! ಎದ್ದೇಳು, ನಿನ್ನ ಕಣ್ಣುಗಳನ್ನು ತೆರೆ.

ಸುಂದರ ಸಾಲುಗಳನ್ನು ಮೈಥಿಲಿ ಶರಣ್ ಗುಪ್ತಜೀ ಅರ್ಥಗರ್ಭಿತವಾಗಿ ರಚಿಸಿದ್ದಾರೆ.

ಕಾಲಘಟ್ಟದಲ್ಲಿ ಅಂದರೆ 21ನೇ ಶತಮಾನದ ಆರಂಭದಲ್ಲೇ ಆಗಿದ್ದರೆ ಅವರು ಏನು ಬರೆಯುತ್ತಿದ್ದರು ಎಂದು ನಾನೇ ಆಶ್ಚರ್ಯಪಡುತ್ತಿದ್ದೇನೆ. ಅವರು ಕೆಳಗಿನಂತೆ ಬರೆಯುತ್ತಿದ್ದರೇನೊ ಎಂದು ನಾನು ಯೋಚಿಸುತ್ತಿದ್ದೇನೆ.

अवसर तेरे लिए खड़ा है,

तू आत्मविश्वास से भरा पड़ा है।

हर बाधा, हर बंदिश को तोड़,

अरे भारत, आत्मनिर्भरता के पथ पर दौड़।

ಅವಕಾಶ ನಿಮಗಾಗಿ ಕಾಯುತ್ತಿದೆ.

ನೀವು ಆತ್ಮವಿಶ್ವಾಸದಿಂದ ತುಂಬಿ ಹೋಗಿದ್ದೀರಿ

ಎಲ್ಲಾ ಅಡೆತಡೆಗಳನ್ನು ದಾಟಿ ಬನ್ನಿ.

ಭಾರತವೇ! ಸ್ವಾವಲಂಬನೆಯ ಹಾದಿಯಲ್ಲಿ ಸಾಗಿ.

ಗೌರವಾನ್ವಿತ ಸಭಾಪತಿಗಳೆ,

ಕೊರೊನಾ ಕಾಲಾವಧಿಯಲ್ಲಿ ವಿಶ್ವಾದ್ಯಂತ ಸೃಷ್ಟಿಯಾದ ಪರಿಸ್ಥಿತಿಗಳನ್ನು ನೋಡಿದರೆ, ಯಾರೊಬ್ಬರೂ ಯಾರೊಬ್ಬರಿಗೂ ಸಹಾಯ ಮಾಡುವುದು ಅಸಾಧ್ಯದ ಮಾತಾಗಿತ್ತು. ಯಾವುದೇ ದೇಶ ಮತ್ತೊಂದು ದೇಶಕ್ಕೆ ಸಹಾಯಹಸ್ತ ಚಾಚುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಯಾವುದೇ ರಾಜ್ಯ ಬೇರೊಂದು ರಾಜ್ಯಕ್ಕೆ ನೆರವಾಗುವ ಶಕ್ತಿ ಹೊಂದಿರಲಿಲ್ಲ. ಅದಿರಲಿ, ಯಾವುದೇ ಒಂದು ಕುಟುಂಬ ಮತ್ತೊಂದು ಕುಟುಂಬಕ್ಕೆ ಸಹಾಯ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಕೊರಾನಾದಿಂದ ಅಂತಹ ಸಂಕಷ್ಟ ಪರಿಸ್ಥಿತಿ ಎದುರಾಗಿತ್ತು. ಆಗ ಇಡೀ ವಿಶ್ವವೇ ಭಾರತದ ಬಗ್ಗೆ ಭಯ ಮತ್ತು ಆತಂಕಗಳನ್ನು ಹೊರಹಾಕಿತ್ತು. ಕೊರೊನಾ ಸಾಂಕ್ರಾಮಿಕ ರೋಗವನ್ನು ಭಾರತ ಪರಿಣಾಮಕಾರಿಯಾಗಿ ನಿಯಂತ್ರಣಕ್ಕೆ ತರದಿದ್ದರೆ, ಅದು ಭಾರತಕ್ಕೆ ಮಾತ್ರವಲ್ಲದೆ, ಇಡೀ ಮನುಕುಲಕ್ಕೆ ಬಹುದೊಡ್ಡ ಗಂಡಾಂತರ ಎದುರಾಗಲಿದೆ ಎಂಬುದು ಜಾಗತಿಕ ಸಮುದಾಯದ ಕಳವಳವಾಗಿತ್ತು. ಸಾಂಕ್ರಾಮಿಕ ಸೋಂಕಿನಿಂದ ಕೋಟ್ಯಂತರ ಜನರು ಮೂಲೆಗುಂಪಾದರು, ಸಂಕಷ್ಟಕ್ಕೆ ಒಳಗಾದರು. ಲಕ್ಷಾಂತರ ಜನರು ಅಸುನೀಗಿದರು. ನಾವು ಹೆದರಲು, ಭೀತಿಗೊಳಗಾಗಲು ಸಾಕಷ್ಟು ಸಂಗತಿಗಳು ಸೃಷ್ಟಿಯಾದವು. ಇದು ಏಕೆ ಆಯಿತು ಎಂಬುದು ನಮ್ಮ ಪ್ರಶ್ನೆಯಲ್ಲ. ಅಪರಿಚಿತ ಶತ್ರು ಅಥವಾ ಕಾಣದ ಕೈಗಳು ಏನು ಮಾಡಬಹುದು ಎಂದು ಯಾರಿಗೂ ಯಾವುದೇ ಮುನ್ಸೂಚನೆ ಇರಲಿಲ್ಲ. ಪ್ರತಿಯೊಬ್ಬರೂ ಅವರದೇ ಹಾದಿಯಲ್ಲಿ, ಯೋಚನಾಲಹರಿಯಲ್ಲಿ ಅಂದಾಜು ಮಾಡಿದರು. ಭಾರತ ಇಂತಹ ಪರಿಸ್ಥಿತಿಯನ್ನು ಎದುರಿಸಲು ಮತ್ತು ತನ್ನ ನಾಗರಿಕರನ್ನು ಅಪರಿಚಿತ ಶತ್ರುಗಳಿಂದ ಸಂರಕ್ಷಿಸಿಕೊಳ್ಳಲು ಯಾವುದೇ ಶಿಷ್ಟಾಚಾರಗಳ ಬಗ್ಗೆ ಜಾಗೃತವಾಗಿರಲಿಲ್ಲ. ಇಂತಹ ಪರಿಸ್ಥಿತಿ ಸೃಷ್ಟಿಯಾಗುತ್ತದೆ ಎಂಬ ಬಗ್ಗೆ ಒಂದಿನಿತೂ ವಿಚಾರ ಮಾಡಿರಲಿಲ್ಲ.

ಪ್ರತಿಯೊಬ್ಬರೂ ಹೊಸ ಮಾರ್ಗದಲ್ಲೇ ಹೋಗಬೇಕಿತ್ತು. ಹೊಸ ವಿಧಾನ ಅನುಸರಿಸಬೇಕಿತ್ತು. ಕೆಲವು ತಜ್ಞರು ಮತ್ತು ಸಮರ್ಥ ವ್ಯಕ್ತಿಗಳು ಹೆಚ್ಚಿನ ಪರಿಕಲ್ಪನೆಗಳನ್ನು ಹೊಂದಿದ್ದಿರಬಹುದು. ಆದರೆ, ವಾಸ್ತವ ಏನೆಂದರೆ, ಇದಕ್ಕೆಲ್ಲಾ ಕಾರಣ ಕಾಣದ ಶತ್ರುಗಳ ಕುಕೃತ್ಯ. ನಾವು ಸಹ ಹೊಸ ಮಾರ್ಗಗಳನ್ನು ಹುಡುಕಬೇಕಿತ್ತುಹೊಸ ದಾರಿಗಳನ್ನು ಹುಡುಕಿಕೊಂಡು, ನಮ್ಮ ಜನರನ್ನು ರಕ್ಷಿಸಿದೆವು. ಸಂದರ್ಭದಲ್ಲಿ ಏನೆಲ್ಲಾ ಬುದ್ಧಿವಂತಿಕೆ, ಅಧಿಕಾರ, ಬಲ ಮತ್ತು ದೇವರ ದಯೆಯಿಂದ ದೇಶವನ್ನು ಉಳಿಸಲು ಸಾಧ್ಯವಾಯಿತು. ಭಾರತ ನಿಜಕ್ಕೂ ಇಡೀ ಮನುಕುಲವನ್ನು ಉಳಿಸಲು ಅತಿ ಮುಖ್ಯವಾದ ಪಾತ್ರ ವಹಿಸಿತು ಎಂದು ಇಡೀ ಜಗತ್ತೇ ಈಗ ಬೀಗುತ್ತಿದೆ, ಮುಗುಳ್ನಗುತ್ತಿದೆ.

ಕೊರೊನಾ ಸೋಂಕು ನಿಯಂತ್ರಣಕ್ಕೆ ತರುವ ಹೋರಾಟದಲ್ಲಿ ಗಳಿಸಿರುವ ಯಶಸ್ಸಿನ ಕೀರ್ತಿ ಯಾವುದೇ ಸರ್ಕಾರ ಅಥವಾ ಯಾವುದೇ ಒಬ್ಬ ವ್ಯಕ್ತಿಗೆ ಹೋಗುವುದಿಲ್ಲ. ಆದರೆ, ಇದರ ಸಂಪೂರ್ಣ ಗೆಲುವು ಸಮಗ್ರ ಭಾರತಕ್ಕೆ ಸಲ್ಲುತ್ತದೆ. ಹೆಮ್ಮೆ ಪಡುವುದರಿಂದ ನಾವು ಏನನ್ನಾದರೂ ಕಳೆದುಕೊಳ್ಳುತ್ತೇವೆಯಾ? ಯಾರಾದರೂ ಏಕೆ ಆತ್ಮವಿಶ್ವಾಸದಿಂದ ವಿಶ್ವದ ಎದುರು ದನಿ ಎತ್ತಬಾರದು? ದೇಶ ಅದನ್ನು ಸಮರ್ಥವಾಗಿ ಮಾಡಿದೆ. ಬಡವರಲ್ಲಿ ಕಡುಬಡವ ಅದನ್ನು ಮಾಡಿದ್ದಾನೆ. ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾದಾಗ, ಸಣ್ಣ ಕೋಲು ಊರಿಕೊಂಡು ನಡೆದಾಡುವ ವೃದ್ಧ ತಾಯಿಯೊಬ್ಬಳು ಕೊರೊನಾ ತೊಲಗಲಿ, ದೇಶಕ್ಕೆ ಒಳಿತಾಗಲಿ ಎಂದು ಮನೆಯ ಮುಂದೆ ದೀಪ ಹಚ್ಚಿ ಒಳಿತು ಬಯಸಿದ್ದನ್ನು ನೀವೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ನೋಡಲೇಬೇಕು. ಆದರೆ ನೀವು ಅದನ್ನು ಗೇಲಿ ಮಾಡುತ್ತಿದ್ದೀರಾಆಕೆಯ ಭಾವನೆಗಳನ್ನು ಅಪಹಾಸ್ಯ ಮಾಡುತ್ತಿದ್ದೀರಾಎಂದೂ ಶಾಲೆಗೆ ಹೋಗದ ಅನಕ್ಷರಸ್ಥ, ದೇಶದಿಂದ ಕೊರಾನಾ ತೊಲಗಲಿ ಎಂದು ಪ್ರಾರ್ಥಿಸುತ್ತಾ, ಮನೆಯೆ ಮುಂದೆ ದೀಪ ಬೆಳಗಿದದೇಶದ ಬಗ್ಗೆ ಆತನಿಗಿರುವ ಚೈತನ್ಯವನ್ನು, ಕಾಳಜಿಯನ್ನು ಇದು ತೋರುತ್ತಿದೆ. ಆತ ದೇಶದ ಸಾಮೂಹಿಕ ಶಕ್ತಿಯನ್ನು ಜಾಗೃತಗೊಳಿಸಿದ. ತನ್ನ ನೈಜ ತಾಕತ್ತು ಮತ್ತು ಶಕ್ತಿಯನ್ನು ಪ್ರದರ್ಶಿಸಿದ. ಅವನನ್ನು ಸಹ ಅಪಹಾಸ್ಯ ಮಾಡಲಾಗುತ್ತಿದೆ. ವಿರೋಧ ವ್ಯಕ್ತಪಡಿಸಲು ಹಲವಾರು ವಿಷಯಗಳಿವೆ. ಪ್ರತಿರೋಧ ಮಾಡುವ ಗುಣ ಇರಬೇಕು. ಆದರೆ, ದೇಶದ ಸ್ಥೈರ್ಯ ಮತ್ತು ನೈತಿಕತೆಯನ್ನೇ ಹಾಳು ಮಾಡುವ ವಿಷಯಗಳಿಗೆ ವಿರೋಧ ವ್ಯಕ್ತಿಪಡಿಸುವುದು ಸಲ್ಲದು. ಇದು ದೇಶದ ಆತ್ಮಸ್ಥೈರ್ಯ ಮತ್ತು ಸಾಮರ್ಥ್ಯವನ್ನೆ ಕುಗ್ಗಿಸಿಬಿಡುತ್ತದೆ. ಇದರಿಂದ ದೇಶಕ್ಕೆ ಯಾವುದೇ ಪ್ರಯೋಜನವಾಗದು.

ನೀವು ಒಮ್ಮೆಯಾದರೂ ಯೋಚಿಸಿದ್ದೀರಾ? ಕೊರೊನಾ ಭೀತಿ ಮತ್ತು ಆತಂಕ ಎಲ್ಲೆಡೆ ಆವರಿಸಿದ್ದಾಗ, ಕೊರೊನಾ ಯೋಧರು ಮತ್ತು ಮುಂಚೂಣಿ ಕಾರ್ಯಕರ್ತರು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದರು. ಇದು ಸಣ್ಣ ವಿಷಯವೇನಲ್ಲ. ಅವರ ಕಾರ್ಯಕ್ಕೆ ನಾವೆಲ್ಲಾ ಹೆಮ್ಮೆ ಪಡಬೇಕು, ಅವರನ್ನು ಗೌರವಿಸಬೇಕು. ಅವರ ಶ್ರಮ ಮತ್ತು ಪ್ರಯತ್ನಗಳ ಫಲವಾಗಿ ದೇಶದಲ್ಲಿ ಸೋಂಕು ನಿಯಂತ್ರಣಕ್ಕೆ ಬರಲು ಸಾಧ್ಯವಾಗಿದೆ. ಇದು ಟೀಕೆಗಾಗಿ ಅಲ್ಲ. ನಾವು ಹಿಂದಿನ ಹಾದಿಯನ್ನು ನೆನಪಿಸಿಕೊಂಡರೆ, ನಾವು ಸಂಕಷ್ಟದ ದಿನಗಳನ್ನು ಸವೆಸಿರುವುದು, ಕ್ಲಿಷ್ಟ ಪರಿಸ್ಥಿಗಳನ್ನು ಎದುರಿಸಿರುವುದು ದಿಟ. ಕಟುಸತ್ಯ. ಒಮ್ಮೆ ನೆನಪಿಸಿಕೊಂಡರೆ, ಮರೆಯಲಾಗದ ದಿಗಳು ಸ್ಮೃತಿಪಟಲದಿಂದ ಬಂದೋಗುತ್ತವೆ

ದೇಶದಲ್ಲಿ ಸಿಡುಬು ಕಾಣಿಸಿಕೊಂಡಾಗ ಎಂತಹ ಭಯಾನಕ ಪರಿಸ್ಥಿತಿ, ಪೋಲಿಯೊ ರೋಗ ಕಾಣಿಸಿಕೊಂಡಾಗ ಅದೆಷ್ಟು ಹೆದರಿಕೆ, ಲಸಿಕೆಗಳನ್ನು ಕಂಡುಹಿಡಿಯಲು ಯಾವ ಪ್ರಯತ್ನಗಳನ್ನು ನಡೆಸಲಾಯಿತು? ಆಗ ಅದೆಷ್ಟು ಕಷ್ಟಗಳು ಎದುರಾದವು. ಲಸಿಕೆ ಯಾವಾಗ ಸಿಗುತ್ತದೆ, ಎಷ್ಟು ಸಿಗುತ್ತದೆ. ಅದು ಹೇಗೆ ಸಿಗುತ್ತದೆ, ಎಷ್ಟು ಡೋಸ್ ತೆಗೆದುಕೊಳ್ಳಬೇಕು. ಇಂತಹ ದಿನಗಳನ್ನೂ ನಾವು ಅನುಭವಿಸಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ನೀವು ದಿನಗಳನ್ನು ನೆನಪಿಸಿಕೊಂಡರೆ, ತೃತೀತ ರಾಷ್ಟ್ರಗಳ ಪಟ್ಟಿಯಲ್ಲಿದ್ದ ಭಾರತವೀಗ ಲಸಿಕೆ ಅಭಿವೃದ್ಧಿಯಲ್ಲಿ ಯಶಸ್ಸು ಕಂಡು ಇಡೀ ಮನುಕುಲವನ್ನು ಉಳಿಸುತ್ತಿದೆ. ಅಲ್ಪಾವಧಿಯಲ್ಲಿ ನಮ್ಮ ವಿಜ್ಞಾನಿಗಳು ಲಸಿಕೆ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು ಯಶಸ್ಸು ಕಂಡಿದ್ದಾರೆ. ಇದು ಮನುಕುಲದ ಇತಿಹಾಸದಲ್ಲಿ ಭಾರತದ ಕೊಡುಗೆಯ ಅದ್ಭುತ ಕಥಾನಕವಾಗಿದೆ. ಇದಕ್ಕೆ ನಾವು ಹೆಮ್ಮೆ ಪಡಲೇಬೇಕು ಮತ್ತು ಇದು ಹೊಸ ಆತ್ಮವಿಶ್ವಾಸಕ್ಕೆ ಸ್ಫೂರ್ತಿಯಾಗಬೇಕು. ದೇಶದಲ್ಲೇ ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನ ನಡೆಯುತ್ತಿರುವುದರಿಂದ ನಮ್ಮೆಲ್ಲಾ ಪ್ರಯತ್ನಗಳು ಮತ್ತು ಪ್ರೇರಣೆಗಳ ಬಗ್ಗೆ ಇಡೀ ದೇಶ ಹೆಮ್ಮೆ ಪಡಬಹುದು. ಇಡೀ ಜಗತ್ತಿನಲ್ಲಿ ತ್ವರಿತವಾಗಿ ಲಸಿಕಾ ಆಂದೋಲನ ನಡೆಯುತ್ತಿದೆ ಎಂದರೆ ಅದು ಭಾರತ ಮಾತೆಯ ಮಡಿಲಲ್ಲಿ ಮಾತ್ರ. ಭಾರತದ ಶಕ್ತಿ ಸಾಮರ್ಥ್ಯ ಎಲ್ಲಿಗೆ ತಲುಪಿಲ್ಲ ಹೇಳಿ?

ವಿಶ್ವದ ಜತೆ ಭಾರತ ಹೊಂದಿರುವ ಸಂಬಂಧಕ್ಕೆ ಕೊರೊನಾ ಹೊಸ ಅರ್ಥ ನೀಡಿದೆ. ಆರಂಭದಲ್ಲಿ ಕೊರೊನಾ ಸೋಂಕಿಗೆ ಯಾವ ಔಷಧ ಕೆಲಸ ಮಾಡುತ್ತದೆ ಎಂಬುದು ಗೊತ್ತಿಲ್ಲದಿದ್ದಾಗ, ಸೋಂಕಿಗೆ ಲಸಿಕೆಯೇ ಇಲ್ಲದಿದ್ದಾಗ, ಇಡೀ ವಿಶ್ವದ ಗಮನ ಭಾರತದ ಔಷಧ ಪದ್ಧತಿಯತ್ತ ಹೊರಳಿತು. ಔಷಧ (ಫಾರ್ಮಸಿ) ತಯಾರಿಕೆಯಲ್ಲಿ ಭಾರತವು ವಿಶ್ವದ ಗಮ್ಯತಾಣವಾಗಿ ಹೊರಹೊಮ್ಮಿದೆ. ಕೊರೊನಾ ಶುರುವಾದಾಗ ಭಾರತವು 150 ದೇಶಗಳಿಗೆ ನಾನಾ ಔಷಧಗಳನ್ನು ಪೂರೈಸುತ್ತಿತ್ತು. ಕೊರೊನಾ ನಂತರ ಮನುಕುಲ ಉಳಿಸುವ ಪ್ರಯತ್ನದಿಂದ ನಾವು ಹಿಂದೆ ಬೀಳಲಿಲ್ಲ. ಅಷ್ಟೇ ಅಲ್ಲ, ಭಾರತದಿಂದ ಲಸಿಕೆಗಳನ್ನು ಪಡೆಯಲಾಗುತ್ತಿದೆ ಎಂದು ಇಡೀ ವಿಶ್ವವೇ ಹೆಮ್ಮೆಯಿಂದ ಸಾರುತ್ತಿದೆ. ಉಳ್ಳವರು ಬೃಹತ್ ಶಸ್ತ್ರಚಿಕಿತ್ಸೆಗೆಂದು ವಿಶ್ವದ ಖ್ಯಾತ ಆಸ್ಪತ್ರೆಗಳನ್ನು ಹುಡುಕಿಕೊಂಡು ಹೋದರೆ, ಅಲ್ಲಿ ಅವರ ಕಣ್ಣುಗಳು ಭಾರತೀಯ ಮೂಲದ ತಜ್ಞವೈದ್ಯರನ್ನು ಹುಡುಕಾಡುತ್ತಿರುತ್ತವೆ. ಆಪರೇಷನ್ ಥಿಯೇಟರ್ನಲ್ಲಿ ಭಾರತೀಯ ವೈದ್ಯರಿಗಾಗಿ ಶೋಧ ನಡೆಸುತ್ತಿರುತ್ತಾರೆ.  ಇದು ಜಾಗತಿಕ ಮಟ್ಟದಲ್ಲಿ ಭಾರತ ಗಳಿಸಿರುವ ಜನಪ್ರಿಯತೆಗೊಂದು ಸಾಕ್ಷಿ. ಇದಕ್ಕೆ ನಾವೆಲ್ಲಾ ಹೆಮ್ಮೆ ಪಡಬೇಕು. ಆದ್ದರಿಂದ ನಾವೆಲ್ಲಾ ಯಶೋಗಾಥೆ ಮತ್ತು ವೈಭವದ ದಿಕ್ಕಿನಲ್ಲಿ ಮುನ್ನಡೆಯಬೇಕಿದೆ.

ಕೊರೊನಾ ಕಾಲಘಟ್ಟದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ರೀತಿ ಮತ್ತು ಪಡೆದಿರುವ ಖ್ಯಾತಿ ಅನನ್ಯವಾಗಿದೆ. ಒಕ್ಕೂಟ ವ್ಯವಸ್ಥೆಯ ಅದೇ ಸ್ಫೂರ್ತಿಯನ್ನು ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರದರ್ಶಿಸಿವೆ. ಬಿಕ್ಕಟ್ಟಿನ ಸಂದರ್ಭಗಳಲ್ಲಿ ನಾವೆಲ್ಲಾ ಹೇಗೆ ಜತೆಗೂಡಿ ಕೆಲಸ ಮಾಡಬೇಕು ಮತ್ತು ಎಲ್ಲಾ ಅಧಿಕಾರಗಳನ್ನು ಒಂದೇ ದಿಕ್ಕಿನಲ್ಲಿ ಹೇಗೆ ಸುಗಮಗೊಳಿಸಬೇಕು ಎಂಬುದೇ ನಮ್ಮೆಲ್ಲರ ಅಂತರ್ಬಲವಾಗಿದೆ. ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಲು ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ರಾಜ್ಯಗಳಿಗೆ ನಾನು ಸದನದಲ್ಲಿ ಅಭಿನಂದನೆ ಸಲ್ಲಿಸುತ್ತೇನೆ. ಏಕೆಂದರೆ, ರಾಜ್ಯಗಳು ತಮ್ಮ ಸದನಗಳಲ್ಲಿ ತಮ್ಮದೇ ಆದ ಕಂಪನ್ನು ಬೀರುತ್ತವೆ. ಕೊರೊನಾ ಸಂದರ್ಭದಲ್ಲಿ ಎಲ್ಲಾ ರಾಜ್ಯಗಳು ಸಮಸ್ಯೆ ಅಥವಾ ಬಿಕ್ಕಟ್ಟನ್ನು ಅವಕಾಶಗಳಾಗಿ ಪರಿವರ್ತಿಸಲು ಕೆಲಸ ಮಾಡಿವೆ. ಹಾಗಾಗಿ, ಪ್ರತಿಯೊಬ್ಬರೂ ಮೆಚ್ಚುಗೆಗೆ ಅರ್ಹರಾಗಿದ್ದಾರೆ.

ಗೌರವಾನ್ವಿತ ಸಭಾಪತಿಗಳೆ,

ಸದನದ ಮುಂದೆ ನಾನೊಂದು ಉಲ್ಲೇಖ ಪ್ರಸ್ತಾಪಿಸಲು ಬಯಸುತ್ತೇನೆ. ನಮ್ಮ ಪ್ರಜಾಸತ್ತೆ ಮತ್ತು ಮೂಲಭೂತ ಶಕ್ತಿಯ ಬಗ್ಗೆ ಅನುಮಾನ ಪಡುವ ಎಲ್ಲರಿಗೂ, ಪ್ರಜಾಪ್ರಭುತ್ವವನ್ನು ಅರ್ಥ ಮಾಡಿಕೊಳ್ಳುವಂತೆ ನಾನು ವಿಶೇಷ ಮನವಿ ಮಾಡಲು ಬಯಸುತ್ತೇನೆ. ನಮ್ಮ ಪ್ರಜಾಪ್ರಭುತ್ವ ಯಾವುದೇ ಕಾರಣಕ್ಕೂ ಪಾಶ್ಚಿಮಾತ್ಯ ಸಂಸ್ಥೆಯ ಪ್ರಜಾಪ್ರಭುತ್ವವಲ್ಲ. ಇದು ಮಾನವತಾ ಸಂಸ್ಥೆ. ಭಾರತದ ಇತಿಹಾಸವು ಪ್ರಜಾಪ್ರಭುತ್ವ ಸಂಸ್ಥೆಗಳ ಉದಾಹರಣೆಗಳಿಂದ ತುಂಬಿ ತುಳುಕುತ್ತಿದೆ, ವಿಜೃಂಭಿಸುತ್ತಿದೆ ಪ್ರಾಚೀನ ಭಾರತದಲ್ಲಿ 81 ಗಣರಾಜ್ಯಗಳಿದ್ದ ವಿವರ ಮತ್ತು ಪುರಾವೆ ನಮ್ಮಲ್ಲಿದೆ. ಹಾಗಾಗಿ, ಭಾರತದ ರಾಷ್ಟ್ರೀಯತಾವಾದದ ಮೇಲೆ ನಡೆಯುವ ದಾಳಿಗಳ ಬಗ್ಗೆ ದೇಶವಾಸಿಗಳನ್ನು ಎಚ್ಚರಿಸುವುದು ಇದಿನ ಅಗತ್ಯವಾಗಿದೆ. ಭಾರತದ ರಾಷ್ಟ್ರೀಯತಾವಾದವು ಸಂಕುಚಿತವೂ ಅಲ್ಲ, ಸ್ವಾರ್ಥವೂ ಅಲ್ಲ, ಆಕ್ರಮಣಕಾರಿಯೂ ಅಲ್ಲ. ಅದು ಸತ್ಯಂ, ಶಿವಂ ಮತ್ತು ಸುಂದರಂ ಮೌಲ್ಯಗಳಿಂದ ಸ್ಫೂರ್ತಿ ಪಡೆದಿದೆ.

ಗೌರವಾನ್ವಿತ ಸಭಾಪತಿಗಳೆ,

ಉಲ್ಲೇಖವು ಆಜಾದ್ ಹಿಂದ್ ಫೌಜ್ ಚೊಚ್ಚಲ ಸರ್ಕಾರದ ಮೊದಲ ಪ್ರಧಾನ ಮಂತ್ರಿ ನೇತಾಜಿ ಸುಭಾಷ್ ಚಂದ್ರ ಭೋಸ್ ಅವರದ್ದಾಗಿದೆ. ಪ್ರಾಸಂಗಿಕವಾಗಿ, ನಾವು ಅವರ 125ನೇ ಜಯಂತಿಯನ್ನು ಆಚರಿಸುತ್ತಿದ್ದೇವೆ. ಆದರೆ, ದುರದೃಷ್ಟವಶಾತ್, ನಾವೆಲ್ಲಾ ಆಜಾಗರೂಕತೆಯಿಂದ ನೇತಾಜಿ ಅವರ ಸ್ಫೂರ್ತಿ, ದೃಷ್ಟಿಕೋನ ಮತ್ತು ಆದರ್ಶಗಳನ್ನು ಮರೆಯುತ್ತಿದ್ದೇವೆ. ಇದರ ಪರಿಣಾಮವಾಗಿ ನಾವಿಂದು ತಲ್ಲಣಕ್ಕೆ ಒಳಗಾಗುತ್ತಿದ್ದೇವೆ. ಭಾರತವು ವಿಶ್ವದ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಜನರು ಹೇಳುವುದನ್ನು ಕೇಳಲು ಸಂತೋಷವಾಗುತ್ತದೆ. ಹೌದು, ಭಾರತ ವಿಶ್ವದ ಅತಿದೊಡ್ಡ ಪ್ರಜಾಸತ್ತೆ ರಾಷ್ಟ್ರ. ಆದರೆ, ಭಾರತವು ಪ್ರಜಾಪ್ರಭುತ್ವದ ಮಾತೃ ರಾಷ್ಟ್ರ. ನಾವು ಇದನ್ನು ನಮ್ಮ ಯುವ ಪೀಳಿಗೆಗೆ ತಿಳಿಸುತ್ತಿಲ್ಲ. ನಾವು ಭವಿಷ್ಯದ ಪೀಳಿಗೆಗೆ ಇದನ್ನು ಬೋಧಿಸಬೇಕು. ಪ್ರಜಾಪ್ರಭುತ್ವದ ಮಾತೃ ರಾಷ್ಟ್ರ ಎಂಬುದನ್ನು ನಾವು ಹೆಮ್ಮೆಯಿಂದ ದೃಢೀಕರಿಸಬೇಕು. ಏಕೆಂದರೆ ನಮ್ಮ ಪೂರ್ವಜರು ನಮಗೆ ಪರಂಪರೆಯನ್ನು ನೀಡಿ ಹೋಗಿದ್ದಾರೆ. ಭಾರತ ಪ್ರಜಾಸತ್ತೆ ದೇಶ ಮಾತ್ರವಲ್ಲದೆ, ಭಾರತ ಸರಕಾರದ ಆಡಳಿತವೂ ಪ್ರಜಾಸತ್ತೆಯಾಗಿದೆ. ನಮ್ಮ ವ್ಯವಸ್ಥೆ ಪ್ರಜಾಪ್ರಭುತ್ವವಾಗಿದೆ. ಏಕೆಂದರೆ, ಇಲ್ಲಿನ ಸಂಸ್ಕೃತಿ, ಸಂಪ್ರದಾಯ ಮತ್ತು ಮನಸ್ಸುಗಳು ಸಹ ಪ್ರಜಾಪ್ರಭುತ್ವವಾಗಿವೆ. ಮೂಲತ: ನಾವು ಪ್ರಜಾಪ್ರಭುತ್ವವಾದಿಗಳಾಗಿದ್ದೇವೆ.

ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪಿಸಿಕೊಳ್ಳಿ. ನ್ಯಾಯಾಂಗ, ಮಾಧ್ಯಮ ಮತ್ತು ಆಡಳಿತ ವ್ಯವಸ್ಥೆ ಏನಾಗಿತ್ತು ಎಂಬುದನ್ನು. ಪ್ರತಿಯೊಂದನ್ನೂ ಜೈಲುಗಳಾಗಿ ಪರಿವರ್ತಿಸಲಾಗಿತ್ತು. ಆದರೆ, ಪ್ರಜಾಪ್ರಭುತ್ವದ ಬಣ್ಣದಿಂದ ಕಂಗೊಳಿಸುತ್ತಿದ್ದ ದೇಶದ ಜನರನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ. ನಾನು ಇದರ ಬಗ್ಗೆ ಹೆಚ್ಚಿಗೆ ಪ್ರಸ್ತಾಪಿಸಿ ಸಮಯ ವ್ಯರ್ಥ ಮಾಡಲು ಹೋಗುವುದಿಲ್ಲ. ಆದರೆ, ನಾವೆಲ್ಲಾ ಪ್ರಜಾಸತ್ತೆಯ ಮೌಲ್ಯಗಳನ್ನು ಸಮರ್ಥಿಸಿಕೊಂಡು ಮುಂದಡಿ ಇಡಬೇಕಿದೆ. ಆತ್ಮನಿರ್ಭರ್ ಭಾರತದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ನನ್ನ ಸಹೋದ್ಯೋಗಿ ಧರ್ಮೇಂದ್ರ ಪ್ರಧಾನ್ ಆವರು ಆತ್ಮನಿರ್ಭರ್ ಭಾರತದ ದಿಕ್ಕು ದಿಸೆ ಕುರಿತು ಸುದೀರ್ಘ ಹೇಳಿಕೆ ನೀಡಿದ್ದಾರೆ. ಆದರೆ, ಒಂದು ವಿಚಾರವಂತೂ ಸತ್ಯ. ಆರ್ಥಿಕ ರಂಗದಲ್ಲಿ ಭಾರತ ಇಂದು ಜಾಗತಿಕ ಮಟ್ಟದಲ್ಲಿ ಗಟ್ಟಿಯಾಗಿ ನೆಲೆ ನಿಂತಿದೆ, ಸದೃಢವಾಗಿದೆ. ಕೊರೊನಾ ಕಾಲಾವಧಿಯಲ್ಲೂ ವಿದೇಶಿ ಹೂಡಿಕೆದಾರರು ಭಾರತದಲ್ಲಿ ಬಂಡವಾಳ ತೊಡಗಿಸಿದ್ದಾರೆ. ಭಾರತಕ್ಕೆ ದಾಖಲೆ ಮೊತ್ತದ ಹೂಡಿಕೆ ಒಳಹರಿವಾಗುತ್ತಿದೆ.

ಹಲವಾರು ರಾಷ್ಟ್ರಗಳ ಅರ್ಥ ವ್ಯವಸ್ಥೆ ಚಂಚಲತೆ ಅನುಭವಿಸುತ್ತಿರುವ ವಾಸ್ತವ ಪರಿಸ್ಥಿತಿಯಲ್ಲಿ ಭಾರತದ ಆರ್ಥಿಕತೆ ಎರಡಂಕಿ ಹಾದಿಯಲ್ಲಿ ಪ್ರಗತಿ ಕಾಣುತ್ತದೆ ಎಂದು ಇಡೀ ವಿಶ್ವವೇ ಅಂದಾಜು ಮಾಡುತ್ತಿದೆ.

ಭಾರತದ ವಿದೇಶಿ ವಿನಿಮಯ ಸಂಗ್ರಹವೀಗ ದಾಖಲೆಯ ಮಟ್ಟಕ್ಕೆ ಏರಿಕೆ ಕಂಡಿದೆ. ದೇಶದಲ್ಲಿ ದಾಖಲೆ ಪ್ರಮಾಣದ ಆಹಾರ ಧಾನ್ಯಗಳ ಉತ್ಪಾದನೆಯಾಗಿದೆ. ಅಂತರ್ಜಾಲ ಬಳಕೆದಾರರಲ್ಲಿ ಭಾರತ, ವಿಶ್ವದ 2ನೇ ಅತಿದೊಡ್ಡ ರಾಷ್ಟ್ರ ಎಂಬ ಹೆಗ್ಗಳಿಕೆ ಹೊಂದಿದೆ. ಭಾರತದಲ್ಲಿ ಪ್ರತಿ ವರ್ಷ ಯುಪಿಐ ಮೂಲಕ 4 ಲಕ್ಷ ಕೋಟಿ ರೂ. ಡಿಜಿಟಲ್ ವಹಿವಾಟು ನಡೆಯುತ್ತಿದೆ. ಮೊಬೈಲ್ ಫೋನ್ ತಯಾರಿಕೆಯಲ್ಲಿ ಭಾರತ, ವಿಶದ್ಚ 2ನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ.

ದೇಶದಲ್ಲಿ ದಾಖಲೆ ಪ್ರಮಾಣದ ನವೋದ್ಯಮಗಳು ಮತ್ತು ಯೂನಿಕಾರ್ನ್ಗಳು ತಲೆಎತ್ತಿ ನಿಂತಿವೆ. ಅವೀಗ ಜಗತ್ತಿನಾದ್ಯಂತ ನಗೆ ಬೀರುತ್ತಿವೆ. ನಮ್ಮ ಯುವ ಸಮುದಾಯವೇ ಇವುಗಳನ್ನು ಮಾಡುತ್ತಿದ್ದಾರೆ. ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಭಾರತವೀಗ ವಿಶ್ವದ ಪ್ರಮುಖ 5 ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಮುಂಬರುವ ದಿನಗಳಲ್ಲಿ ಉತ್ಪಾದನೆ ಪ್ರಮಾಣ ಹೆಚ್ಚಿಸುವ ಗುರಿ ಹಾಕಿಕೊಂಡಿದ್ದೇವೆ. ನೀರಾಗಲಿ, ಭೂಮಿಯೇ ಆಗಲಿ, ಆಗಸವೇ ಆಗಲಿ ಅಥವಾ ಬಾಹ್ಯಾಕಾಶವೇ ಆಗಲಿ, ಭಾರತ ತನ್ನ ನೈಜ ಸಾಮರ್ಥ್ಯದೊಂದಿಗೆ ಸ್ಥಾನ ಭದ್ರಪಡಿಸಿಕೊಂಡಿದೆ. ಸರ್ಜಿಕಲ್ ಮತ್ತು ವೈಮಾನಿಕ ದಾಳಿಯಲ್ಲೂ ಭಾರತ ತನ್ನ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ.

ಗೌರವಾನ್ವಿತ ಸಭಾಪತಿಗಳೆ,

2014ರಲ್ಲಿ ನಾನು ಮೊದಲ ಬಾರಿಗೆ ಸದನದ ಆವರಣಕ್ಕೆ ಹೆಜ್ಜೆ ಇಟ್ಟಾಗ ಮತ್ತು ನಾನು ನಾಯಕನಾಗಿ ಆಯ್ಕೆಯಾದಾಗ, ನನ್ನ ನೇತೃತ್ವದ ಸರ್ಕಾರ ಬಡವರ ಏಳಿಗೆಗೆ ಸಮರ್ಪಿತವಾಗಿದೆ ಎಂದು ಮೊದಲ ಭಾಷಣದಲ್ಲೇ ಭರವಸೆ ನೀಡಿದ್ದೆ. 2ನೇ ಅವಧಿಗೆ ನಾಯಕನಾದ ಮೇಲೆ ಇಂದು ಸಹ ನಾನು ಅದೇ ಮಾತನ್ನು ಪುನರುಚ್ಚರಿಸುತ್ತಿದ್ದೇನೆ. ಬಡವರ ವಿಷಯದಲ್ಲಿ ನಾವು ಬದಲಾಗಿಲ್ಲ, ನಮ್ಮ ಮನಸ್ಸು ದುರ್ಬಲವಾಗಿಲ್ಲ ಮತ್ತು ನಮ್ಮ ದಿಕ್ಕು ಬೇರೆಡೆಗೆ ತಿರುಗಿಲ್ಲ. ಬಡವರ ಅಭ್ಯುದಯದ ಉದ್ದೇಶಕ್ಕೆ ನಮ್ಮ ಕೆಲಸವನ್ನು ಮುಂದುವರಿಸಿದ್ದೇವೆ. ಏಕೆಂದರೆ, ನಾವು ಮುಂದಡಿ ಇಡಬೇಕಾದರೆ, ದೇಶ ಬಡತನದಿಂದ ಮುಕ್ತವಾಗಬೇಕು. ಇದಕ್ಕಾಗಿ ನಮ್ಮ ಪ್ರಯತ್ನಗಳನ್ನು ಹೆಚ್ಚಿಸುತ್ತಾ ಹೋಗಬೇಕು. ಸುಲಭವಾಗಿ ಜೀವನ ನಡೆಸುವುದನ್ನು ಖಾತ್ರಿಪಡಿಸಲು ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿದರೆ, ಜನರ ಆತ್ಮವಿಶ್ವಾಸ ಹೆಚ್ಚುತ್ತದೆ. ಬಡವರಲ್ಲಿ ಆತ್ಮವಿಶ್ವಾಸ ಹೆಚ್ಚಾದಾಗ, ಅವನು ಬಲವಾಗಿ ನಿಂತು ಬಡತನದ ಸವಾಲನ್ನು ಧೈರ್ಯದಿಂದ ಎದುರಿಸುತ್ತಾನೆ. ಆಗ ಅವನು ಯಾರೊಬ್ಬರ ಸಹಾಯಕ್ಕೆ ಅವಲಂಬಿತನಾಗುವುದಿಲ್ಲ. ಇದು ನನ್ನ ವೈಯಕ್ತಿಕ ಅನುಭವವೂ ಆಗಿದೆ. ದೇಶಾದ್ಯಂತ 10 ಕೋಟಿಗಿಂತ ಹೆಚ್ಚಿನ ಶೌಚಾಲಯಗಳನ್ನು ನಿರ್ಮಿಸಿರುವುದಕ್ಕೆ ನಾನು ಸಂತಸಗೊಂಡಿದ್ದೇನೆ. 41 ಕೋಟಿಗಿಂತ ಹೆಚ್ಚಿನ ಜನರ ಬ್ಯಾಂಕ್ ಖಾತೆ ತೆರೆಯಲಾಗಿದೆ. ಬಡವರಿಗೆ 2 ಕೋಟಿಗಿಂತ ಹೆಚ್ಚಿನ ಸೂರುಗಳನ್ನು ನಿರ್ಮಿಸಲಾಗಿದೆ. 8 ಕೋಟಿಗಿಂತ ಹೆಚ್ಚಿನ ಅನಿಲ ಸಂಪರ್ಕಗಳನ್ನು ಒದಗಿಸಲಾಗಿದೆ. 5 ಲಕ್ಷ ರೂ,ವರೆಗೆ ನೀಡಲಾಗಿರುವ ಉಚಿತ ಚಿಕಿತ್ಸೆಗಳಿಂದ ಬಡವರ ಜೀವನದಲ್ಲಿ ಮಹತ್ವದ ಶಕ್ತಿಯೊಂದು ಸಂಚಲಿಸಿದೆ. ಬಡವರ ಜೀವನವನ್ನು ಪರಿವರ್ತಿಸಿ, ಅವರಲ್ಲಿ ಆತ್ಮವಿಶ್ವಾಸ ತುಂಬುವ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ.

ಗೌರವಾನ್ವಿತ ಸಭಾಪತಿಗಳೆ,

ಹಲವಾರು ಸವಾಲುಗಳು ನಮ್ಮ ಮುಂದಿವೆ. ವಿಶ್ವದ ಸಮೃದ್ಧ ರಾಷ್ಟ್ರಗಳು ಸಹ ಸವಾಲುಗಳನ್ನು ಎದುರಿಸುತ್ತಿವೆ. ಅವುಗಳ ಸವಾಲುಗಳ ಸ್ವರೂಪವೇ ಬೇರೆ, ನಮ್ಮವೇ ಬೇರೆ. ಆದರೆ, ನಾವು ಸಮಸ್ಯೆಗಳ ಭಾಗವಾಗಿರಬೇಕೆ ಅಥವಾ ಪರಿಹಾರದ ಭಾಗವಾಗಿರಬೇಕೆ ಎಂಬುದನ್ನು ನಾವೇ ನಿರ್ಧರಿಸಬೇಕಾಗಿದೆ. ಇದೊಂದು ತಿಳಿ ರೇಖೆಯಾಗಿದೆ. ನಾವು ಸಮಸ್ಯೆಯ ಭಾಗವಾದರೆ, ರಾಜಕೀಯ ನಡೆಯುತ್ತಾ ಹೋಗುತ್ತದೆ. ಅದೇ ನಾವು ಪರಿಹಾರದ ಭಾಗವಾದರೆ, ರಾಷ್ಟ್ರೀಯ ನೀತಿಯು ದೈತ್ಯ ದಾಪುಗಾಲು ಇಡುತ್ತದೆ. ಹಾಗಾಗಿ, ನಾವು ವರ್ತಮಾನ ಮತ್ತು ಭವಿಷ್ಯದ ಪೀಳಿಗೆಯತ್ತ ಆಲೋಚಿಸುವ ಜವಾಬ್ದಾರಿ ಹೊಂದಿದ್ದೇವೆ. ನಮ್ಮ ಮುಂದೆ ಹಲವಾರು ಸಮಸ್ಯೆಗಳಿವೆ. ಆದರೆ, ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ನಾವೆಲ್ಲಾ ಆತ್ಮವಿಶ್ವಾಸದಿಂದ ಜತೆಗೂಡಿ ಕೆಲಸ ಮಾಡುತ್ತೇವೆ ಎಂಬ ಆಶಾವಾದ ನನಗಿದೆ. ಅಲ್ಲದೆ, ನಾವು ಪರಿಸ್ಥಿತಿಗಳನ್ನು ಸಹ ಬದಲಿಸುತ್ತೇವೆ ಮತ್ತು ಇಚ್ಛಿತ ಫಲಿತಾಂಶಗಳನ್ನು ಪಡೆಯಲು, ಗುರಿ ಸಾಧಿಸಲು ಸಮರ್ಥರಿದ್ದೇವೆ. ಇದು ನನ್ನ ದೃಢವಾದ ನಂಬಿಕೆಯಾಗಿದೆ.

ಗೌರವಾನ್ವಿತ ಸಭಾಪತಿಗಳೆ,

ರೈತರ ಪ್ರತಿಭಟನೆಗಳ ಕುರಿತು ಉಭಯ ಸದನಗಳಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ. ಬಹುತೇಕ ಚರ್ಚೆಗಳು ಪ್ರತಿಭಟನೆಯನ್ನೇ ಕೇಂದ್ರೀಕರಿಸಿವೆ. ಆದರೆ, ಎಲ್ಲರೂ ಪ್ರತಿಭಟನೆಯ ಹಿಂದಿನ ಕಾರಣಗಳ ಬಗ್ಗೆ ಮೌನ ವಹಿಸಿದ್ದಾರೆ. ಪ್ರತಿಭಟನೆ ಯಾಕೆ? ಪ್ರತಿಭಟನೆಯಿಂದ ಏನಾಗುತ್ತಿದೆ? ಎಲ್ಲಾ ಅಂಶಗಳು ಅತಿ ಮುಖ್ಯವಾದವು. ಆದರೆ, ಪ್ರತಿಭಟನೆಯ ಮೂಲ ವಿವಾದಗಳ ಕುರಿತು ಚರ್ಚೆ ನಡೆಸುವುದು ಒಳ್ಳೆಯದು. ನಮ್ಮ ಗೌರವಾನ್ವಿತ ಕೃಷಿ ಸಚಿವರು ಹಲವಾರು ಒಳ್ಳೆಯ ಪ್ರಶ್ನೆಗಳನ್ನು ಎತ್ತಿದ್ದಾರೆ. ಎಲ್ಲಾ ಪ್ರಶ್ನೆಗಳಿಗೆ ನಮಗೆ ಉತ್ತರ ಸಿಗುತ್ತಿಲ್ಲ. ಆದರೂ, ಕೃಷಿ ಸಚಿವರು ಅದ್ಭುತ ರೀತಿಯಲ್ಲಿ ವಿವಾದದ ಚರ್ಚೆ ನಡೆಸಿದ್ದಾರೆ. ಗೌರವಾನ್ವಿತ ಮಾಜಿ ಪ್ರಧಾನ ಮಂತ್ರಿ ದೇವೇಗೌಡ ಜೀ ಅವರಿಗೆ ನಾನು ಆಭಾರಿಯಾಗಿದ್ದೇನೆ. ವಿವಾದದ ಸಂಪೂರ್ಣ ಚರ್ಚೆಗೆ ಅವರು ಗಾಂಭೀರ್ಯ ನೀಡಿದ್ದಾರೆ. ಜತೆಗೆ, ಸರ್ಕಾರದ ಎಲ್ಲಾ ಉತ್ತಮ ಪ್ರಯತ್ನಗಳನ್ನು ಅವರು ಶ್ಲಾಘಿಸಿದ್ದಾರೆ. ಏಕೆಂದರೆ ಅವರು ತಮ್ಮ ಇಡೀ ಜೀವನವನ್ನೇ ದೇಶದ ರೈತರಿಗಾಗಿ ಮುಡಿಪಾಗಿಟ್ಟಿದ್ದಾರೆ. ಸರ್ಕಾರದ ಪ್ರಯತ್ನಗಳನ್ನು ಶ್ಲಾಘಿಸಿರುವ ಅವರು, ಸರ್ಕಾರಕ್ಕೆ ಉತ್ತಮ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ನಾನು ದೇವೇಗೌಡ ಜೀ ಅವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಗೌರವಾನ್ವಿತ ಸಭಾಪತಿಗಳೆ,

ಕೃಷಿಯ ಮೂಲ ಸಮಸ್ಯೆಗಳೇನು? ಸಮಸ್ಯೆಯ ಬೇರುಗಳೇನು? ಮಾಜಿ ಪ್ರಧಾನ ಮಂತ್ರಿ ದಿವಂಗತ ಚೌಧರಿ ಚರಣ್ ಸಿಂಗ್ ಜೀ ಅವರು ನೀಡಿರುವ ವಿವರಣೆಗಳನ್ನು ಸದನದ ಮುಂದಿಡಲು ಬಯಸುತ್ತೇನೆ. ಚೌಧರಿ ಚರಣ್ ಸಿಂಗ್ ಜೀ ಅವರ ಪರಂಪರೆಯನ್ನು ಒಪ್ಪುವ, ಹೆಮ್ಮೆಪಡುವ ಅನೇಕ ಜನರಿದ್ದಾರೆ. ಅವರು ಇದನ್ನು ಖಂಡಿತಾ ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಾರೆ. 1971ರಲ್ಲೇ ಅವರು ಕೃಷಿ ಗಣತಿ ನಡೆಸಿದ್ದರು. ಗಣತಿಯನ್ನು ಉಲ್ಲೇಖಿಸಿ ಮಾತನಾಡಿದ್ದ ಚೌಧರಿ ಜೀ, ದೇಶದ 33% ರೈತರು ಅರ್ಧ ಹೆಕ್ಟೇರ್ ಅಥವಾ ಅರ್ಧ ಹೆಕ್ಟೆರ್ಗಿಂತ ಕಡಿಮೆ ಕೃಷಿ ಭೂಮಿ ಹೊಂದಿದ್ದಾರೆ. ಶೇಕಡ 18ರಷ್ಟು ಕೃಷಿಕರು ಅರ್ಧ ಹೆಕ್ಟೇರ್ ಮತ್ತು 1 ಹೆಕ್ಟೇರ್ ಭೂಮಿ ಹೊಂದಿದ್ದಾರೆ. 51% ರೈತರು ಎಷ್ಟೇ ಕಷ್ಟಪಟ್ಟು ದುಡಿದರೂ, ಇಷ್ಟೊಂದು ಸಣ್ಣ ಪ್ರಮಾಣದ ಭೂಮಿಯಲ್ಲಿ ನೆಮ್ಮದಿಯಿಂದ ಸಂತೃಪ್ತವಾಗಿ ಬದುಕಲು ಸಾಧ್ಯವೇ ಇಲ್ಲ ಎಂದಿದ್ದರು.

ಸಣ್ಣ ಹಿಡುವಳಿದಾರರ ಕರುಣಾಜನಕ ಪರಿಸ್ಥಿತಿ ಕಂಡು ಚೌಧರಿ ಚರಣ್ ಸಿಂಗ್ ಜೀ ಸದಾ ಮರುಗುತ್ತಿದ್ದರು. ಅವರು ಯಾವಾಗಲೂ ಕೃಷಿಕರ ಬಗ್ಗೆ ದು:ಖಿಸುತ್ತಿದ್ದರು, ಕಳವಳವನ್ನೂ ಹೊಂದಿದ್ದರು. ಈಗ ನೋಡಿ ಏನಾಗಿದೆ ಅಂತಾ. 1971ರಲ್ಲಿ 1 ಹೆಕ್ಟೇರ್ಗಿಂತ ಕಡಿಮೆ ಕೃಷಿ ಭೂಮಿ ಹೊಂದಿದ್ದ ಶೇಕಡ 51ರಷ್ಟಿದ್ದ ಕೃಷಿಕರ ಸಂಖ್ಯೆಯೀಗ 68%ಗೆ ಏರಿಕೆ ಆಗಿದೆ. ದೇಶದಲ್ಲಿ ಅತ್ಯಂತ ಕಡಿಮೆ ಕೃಷಿ ಭೂಮಿ ಹೊಂದಿರುವ ಕೃಷಿಕರ ಪ್ರಮಾಣ ಇದೀಗ ಹೆಚ್ಚಾಗಿದೆ. ಅತಿಸಣ್ಣ ಮತ್ತು ನಿರ್ಲಕ್ಷಿತ ರೈತರನ್ನೂ ಪರಿಗಣಿಸಿದರೆ, 2 ಹೆಕ್ಟೇರ್ಗಿಂತ ಕಡಿಮೆ ಭೂಮಿ ಹೊಂದಿರುವ ರೈತರ ಸಂಖ್ಯೆ 86%ಗೆ ಏರಿಕೆ ಆಗಿದೆ. ಅಂತಹ ರೈತರ ಸಂಖ್ಯೆ ದೇಶದಲ್ಲಿ 12 ಕೋಟಿ ಇದೆ. 12 ಕೋಟಿ ರೈತರ ಭವಿಷ್ಯದ ಬಗ್ಗೆ ನಮಗೆ ಜವಾಬ್ದಾರಿಗಳಿಲ್ಲವೇ? ದೇಶಕ್ಕೆ ಗುರುತರ ಜವಾಬ್ದಾರಿಗಳಿಲ್ಲವೇ? ಎಲ್ಲಾ ರೈತರನ್ನು ನಮ್ಮ ಮಹಾತ್ವಾಕಾಂಕ್ಷಿ ಕಾರ್ಯಕ್ರಮಗಳಿಗೆ ಸೇರಿಸಬೇಕೆ, ಬೇಡವೇ? ಸಮರ್ಪ ಉತ್ತರ ನೀಡುವಂತೆ ಚೌಧರಿ ಚರಣ್ ಸಿಂಗ್ ಜೀ ಅವರು ನಮಗೆ ಎಲ್ಲಾ ಪ್ರಶ್ನೆಗಳನ್ನು ಬಿಟ್ಟುಹೋಗಿದ್ದಾರೆ.

ಧೀಮಂತ ರೈತ ನಾಯಕ ಚೌಧರಿ ಚರಣ್ ಸಿಂಗ್ ಜೀ ಅವರಿಗೆ ನಾವುಗಳೆಲ್ಲಾ ನಿಜವಾದ ಗೌರವ ಸಲ್ಲಿಸಬೇಕಾದರೆ, ಅವರ ಪ್ರಶ್ನೆಗಳಿಗೆ ನಾವೆಲ್ಲಾ ಉತ್ತರ ಹುಡುಕಬೇಕಾಗಿದೆ. ಇದಕ್ಕೆ ದೇಶದ ಪ್ರತಿಯೊಬ್ಬರೂ ಕೊಡುಗೆ ನೀಡಬೇಕಿದೆ.

ಹಿಂದೆ ಇದ್ದ ಸರ್ಕಾರಗಳಿಗೆ ಇದು ಸಂಬಂಧಿಸಿದ್ದ ವಿಷಯವಾಗಿರಲಿಲ್ಲವೇ? ಟೀಕೆ ಮಾಡುವ ಕಾರಣಕ್ಕಾಗಿ ನಾನು ಇದನ್ನು ಪ್ರಸ್ತಾಪಿಸುತ್ತಿಲ್ಲ. ನಾವು ಇದರ ಬಗ್ಗೆ ಚಿಂತಿಸುವ ಅಗತ್ಯವಿದೆ. ಚುನಾವಣೆ ಸಮೀಪಿಸಿದಾಗ, ಕೃಷಿ ಸಾಲ ಯೋಜನೆಗಳ ಘೋಷಣೆಯಾಗುತ್ತವೆ. ಇವು ರೈತರ ಕಾರ್ಯಕ್ರಮಗಳು ನಿಜ. ಆದರೆ, ವಾಸ್ತವವಾಗಿ, ಇವು ವೋಟಿಗಾಗಿ ರೂಪಿಸಿದ ಕಾರ್ಯಕ್ರಮಗಳು. ಪ್ರತಿಯೊಬ್ಬರಿಗೂ ಇವು ಚೆನ್ನಾಗಿ ಗೊತ್ತು. ಇಂತಹ ಯೋಜನೆಗಳಿಂದ ಸಣ್ಣ ಮತ್ತು ನಿರ್ಲಕ್ಷಿತ ರೈತನಿಗೆ ಏನೂ ಸಿಗುವುದಿಲ್ಲ. ಏಕೆಂದರೆ, ಬ್ಯಾಂಕ್ಗಳಿಂದ ಸಾಲ ಪಡೆದವರಿಗೆ ಮಾತ್ರ ಸಾಲ ಮನ್ನಾ ಪ್ರಯೋಜನ ಸಿಗುತ್ತದೆ. ಕನಿಷ್ಠ ಬ್ಯಾಂಕ್ ಖಾತೆಯನ್ನೂ ಹೊಂದಿರದ ಸಣ್ಣ ರೈತರಿಗೆ ಎಲ್ಲಿ ಸಾಲಗಳು ಸಿಗುತ್ತಿವೆ? ನಾವುಗಳೆಲ್ಲಾ ರೈತನ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದೇವೆ ಅಷ್ಟೆ. ಆದರೆ ಸಣ್ಣ ರೈತರಿಗೆ ನಾವುಗಳು ಏನನ್ನೂ ಮಾಡಿಲ್ಲ. 1-2 ಎಕರೆ ಕೃಷಿ ಭೂಮಿ ಹೊಂದಿರುವ ರೈತರು ಬ್ಯಾಂಕ್ ಖಾತೆ ಹೊಂದಿಲ್ಲ. ಹಾಗಾಗಿ ಅವನಿಗೆ ಬ್ಯಾಂಕ್ ಸಾಲ ಸಿಗುತ್ತಿಲ್ಲ ಮತ್ತು ಸಾಲ ಮನ್ನಾ ಯೋಜನೆಗಳ ಪ್ರಯೋಜನಗಳು ಸಹ ಸಿಗುತ್ತಿಲ್ಲ. ಅಂತೆಯೇ, ಮೊದಲಿದ್ದ ಬೆಳೆ ವಿಮೆ ಯೋಜನೆ ಹೇಗಿತ್ತು? ಅದೊಂದು ರೀತಿಯ ಬ್ಯಾಂಕ್ ಖಾತ್ರಿ ರೂಪದಲ್ಲಿತ್ತು. ಅದು ಸಹ ಸಣ್ಣ ರೈತರಿಗೆ ಲಭ್ಯವಾಗುತ್ತಿರಲಿಲ್ಲ. ಬ್ಯಾಂಕ್ಗಳಿಂದ ಸಾಲ ಪಡೆದ ರೈತರಿಗೆ ಮಾತ್ರ ಅದು ಅನ್ವಯವಾಗುತ್ತಿತ್ತು. ಅವರನ್ನು ಕೇವಲ ವಿಮೆಗೆ ಒಳಪಡಿಸಲಾಗಿತ್ತು ಮತ್ತು ಬ್ಯಾಂಕ್ಗಳಿಗೆ ಅವರ ಹಣದ ಭರವಸೆ ಸಿಗುತ್ತಿತ್ತು.

ಆದರೆ, ಇಂದು 2 ಹೆಕ್ಟೇರ್ಗಿಂತ ಕಡಿಮೆ ಭೂಮಿ ಹೊಂದಿರುವ ಎಷ್ಟು ರೈತರು ದೇಶದಲ್ಲಿದ್ದಾರೆ? ಅವರಲ್ಲಿ ಎಷ್ಟು ಮಂದಿ ಬ್ಯಾಂಕ್ ಸಾಲ ಪಡೆದಿದ್ದಾರೆ? ಸಣ್ಣ ರೈತರಿಗೆ ನೀರಾವರಿ ಸೌಲಭ್ಯವೂ ಸಿಗುತ್ತಿಲ್ಲ. ದೊಡ್ಡ ರೈತರು ಬೃಹತ್ ಗಾತ್ರದ ಪಂಪ್ಗಳನ್ನು, ಕೊಳವೆಬಾವಿ(ಟ್ಯೂಬ್ವೆಲ್)ಗಳನ್ನು ಅಳವಡಿಸಿಕೊಳ್ಳುತ್ತಿ ದ್ದಾರೆ. ಅವರು ಸರ್ಕಾರದ ಉಚಿತ ವಿದ್ಯುತ್ ಸಹ ಪಡೆಯುತ್ತಿದ್ದಾರೆ. ಸಣ್ಣ ರೈತರಿಗೆ ನೀರಾವರಿ ಸಹ ಸಮಸ್ಯೆಯೇ. ಆತನಿಗೆ ಕೊಳವೆಬಾವಿ ಕೊರೆಸುವ ಶಕ್ತಿ ಇಲ್ಲದಾಗಿದೆ. ಅನಿವಾರ್ಯ ಸಂದರ್ಭಗಳಲ್ಲಿ ಸಣ್ಣ ರೈತರು ದೊಡ್ಡ ರೈತರಿಂದ ನೀರನ್ನು ಖರೀದಿಸುವ ದುಸ್ಥಿತಿ ಇದೆ. ಯೂರಿಯಾ ರಸಗೊಬ್ಬರ ಪಡೆಯಲು ದೊಡ್ಡ ರೈತರಿಗೆ ಯಾವುದೇ ಸಮಸ್ಯೆಗಳಾಗುತ್ತಿಲ್ಲ. ಆದರೆ, ಸಣ್ಣ ರೈತರು ರಾತ್ರಿಯಿಡೀ ಸಾಲುಗಟ್ಟಿ ನಿಂತು ಅಲ್ಪಸ್ವಲ್ಪ ಗೊಬ್ಬರ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಸಂಗರ್ಭಗಳಲ್ಲಿ ಅವರು ಲಾಠಿ ಪ್ರಹಾರಕ್ಕೆ ಒಳಗಾಗಿ, ಗೊಬ್ಬರ ಸಿಗದೆ ಮನೆಗಳಿಗೆ ಹಿಂದಿರುಗಿದ್ದಾರೆ. ಅವರ ಎಲ್ಲಾ ಪರಿಸ್ಥಿತಿ ಅರಿತು ನಾವು 2014 ನಂತರ ಕೆಲವು ಬದಲಾವಣೆಗಳನ್ನು ತಂದಿದ್ದೇವೆ. ಬೆಳೆ ವಿಮಾ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಿ, ಸಣ್ಣ ರೈತರಿಗೂ ಅದು ಸಿಗುವಂತೆ ವಿಮಾ ಉತ್ಪನ್ನವನ್ನು ರೂಪಿಸಿದ್ದೇವೆ. ಸಣ್ಣ ಮೊತ್ತದೊಂದಿಗೆ ವಿಮೆ ಆರಂಭಿಸಿ, 4-5 ವರ್ಷಗಳಲ್ಲಿ ದೇಶದ ರೈತರು 90,000 ಕೋಟಿ ರೂ. ಕ್ಲೇಮುಗಳನ್ನು ಪಡೆದಿದ್ದಾರೆ. ಇದು ಸಾಲ ಮನ್ನಾ ಯೋಜನೆಯ ಮೊತ್ತಕ್ಕಿಂತ ದೊಡ್ಡದಾಗಿದೆ.

ನಾವೀಗ ಕಿಸಾನ್ ಕ್ರೆಡಿಟ್ ಕಾರ್ಡ್ಗಳನ್ನು ನೋಡೋಣ. ಮೊದಲು ಸಹ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ಗಳು ಇದ್ದವು. ಆದರೆ ಅವು ಅತಿ ಕಡಿಮೆ ಬಡ್ಡಿ ದರಕ್ಕೆ ಬ್ಯಾಂಕ್ ಸಾಲ ಪಡೆಯುತ್ತಿದ್ದ ದೊಡ್ಡ ರೈತರಿಗೆ ಮಾತ್ರ ಸೀಮಿತವಾಗಿದ್ದವು. ಕೆಲವು ರಾಜ್ಯಗಳಲ್ಲಿ ಶ್ರೀಮಂತ ರೈತರು ಶೂನ್ಯ ಬಡ್ಡಿ ದರಕ್ಕೆ ಸಾಲ ಪಡೆದಿದ್ದಾರೆ. ಅವರು ಸಾಲದ ಹಣವನ್ನು ಬೇರೆ ವ್ಯವಹಾರಗಳಿಗೆ ತೊಡಗಿಸಿಕೊಳ್ಳುತ್ತಿದ್ದರು. ಕ್ರೆಡಿಟ್ ಕಾರ್ಡ್ ಸೌಲಭ್ಯ ಸಣ್ಣ ರೈತರ ಹಣೆಬರಹ ಬರೆಯಲು ಸಾಧ್ಯವಾಗಲಿಲ್ಲ. ಆನಂತರ ನಾವು ನಿರ್ಧಾರ ಮಾಡಿ, ದೇಶದ ಎಲ್ಲ ರೈತರಿಗೂ ಕಿಸಾನ್ ಕ್ರೆಡಿಟ್ ಸಿಗುವಂತೆ ಮಾಡಿದ್ದೇವೆ. ಇದರ ವ್ಯಾಪ್ತಿಯನ್ನು ಮೀನುಗಾರರಿಗೂ ವಿಸ್ತರಿಸಿದ್ದೇವೆ. ದೇಶಾದ್ಯಂತ 1.75 ಕೋಟಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಒದಗಿಸಲಾಗಿದೆ. ಯೋಜನೆಯನ್ನು ವಿಸ್ತರಿಸುವಂತೆ ರಾಜ್ಯಗಳಿಗೆ ಮನವಿ ಮಾಡಿದ್ದು, ಗರಿಷ್ಠ ಸಂಖ್ಯೆಯ ರೈತರಿಗೆ ಇದರ ಪ್ರಯೋಜನ ಒದಗಿಸಲು ಗಮನ ನೀಡಿದ್ದೇವೆ. ರಾಜ್ಯಗಳಿಂದ ಹೆಚ್ಚಿನ ಸಹಾಯ ದೊರೆತರೆ, ರೈತರಿಗೂ ಹೆಚ್ಚಿನ ಸಹಾಯ ಸಿಗಲಿದೆ. ಅಂತೆಯೇ, ನಾವು ಮತ್ತೊಂದು ಯೋಜನೆ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು ಜಾರಿಗೆ ತಂದಿದ್ದೇವೆ. ಇದರ ಅಡಿ, ಯೋಜನೆಯ ಹಣ ನೇರವಾಗಿ ರೈತನ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಲಿದೆ. ಯೋಜನೆಯಿಂದ 10 ಕೋಟಿ ರೈತ ಕುಟುಂಬಗಳಿಗೆ ಪ್ರಯೋಜನ ಲಭಿಸಿದೆ.

ಪಶ್ಚಿಮ ಬಂಗಾಳ ರೈತರ ವಿಚಾರದಲ್ಲಿ ರಾಜಕೀಯ ಬಾರದೆ ಇದ್ದಿದ್ದರೆ, ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅನುದಾನದ ಗಾತ್ರ ಇನ್ನೂ ಹೆಚ್ಚಿಗೆ ಇರುತ್ತಿತ್ತು. ಇಲ್ಲಿಯ ತನಕ ಯೋಜನೆಗೆ 1,15,000 ಕೋಟಿ ರೂ. ಸಣ್ಣ ರೈತರ ಖಾತೆಗಳಿಗೆ ವರ್ಗಾವಣೆ ಆಗಿದೆ. ನಮ್ಮೆಲ್ಲಾ ಕೃಷಿ ಯೋಜನೆಗಳಲ್ಲಿ ಮಣ್ಣಿನ ಆರೋಗ್ಯ ಕಾಪಾಡಲು ಗಮನ ಕೇಂದ್ರೀಕರಿಸಲಾಗಿದೆ. ನಿಟ್ಟಿನಲ್ಲಿ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ಗಳನ್ನು ವಿತರಿಸಲಾಗುತ್ತಿದೆ. ಅಂತೆಯೇ, ಬೇವು ಮಿಶ್ರಿತ ಯೂರಿಯಾ ರಸಗೊಬ್ಬರ ಪೂರೈಸಲಾಗುತ್ತಿದೆ. ಕಡುಬಡ ರೈತನಿಗೂ ಸುಲಭವಾಗಿ ಯೂರಿಯಾ ಸಿಗುವಂತೆ ಕ್ರಮ ಕೈಗೊಳ್ಳಲಾಗಿದೆ. ಅಂತೆಯೇ, ಸಣ್ಣ ಮತ್ತು ನಿರ್ಲಕ್ಷಿತ ರೈತರಿಗೆ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಅಂತೆಯೇ, ಪ್ರಧಾನ ಮಂತ್ರಿ ಸಡಕ್  ಯೋಜನೆಇದು ರಸ್ತೆಗಳಿಗೆ ಮಾತ್ರ ಸೀಮಿತವಾಗದೆ, ದೇಶದ ಕೃಷಿ ಸಮುದಾಯದ ಭವಿಷ್ಯ ಬದಲಾಯಿಸುವ ಬಹುಮುಖ್ಯ ಯೋಜನೆಯಾಗಿದ್ದು, ಇದರ ಪರಿಣಾಮಕಾರಿ ಅನುಷ್ಠಾನಕ್ಕೆ ನಾವು ಒತ್ತು ನೀಡಿದ್ದೇವೆ. ಇದೇ ಮೊದಲ ಬಾರಿಗೆ ನಾವು ಕಿಸಾನ್ ರೈಲು ಸಂಚಾರ ಆರಂಭಿಸಿದ್ದೇವೆ. ಇದರಿಂದ ಸಣ್ಣ ರೈತರು ಕೃಷಿ ಉತ್ಪನ್ನಗಳನ್ನು ಸರಾಗವಾಗಿ ಮಾರಾಟ ಮಾಡಲು ಸಹಾಯಕವಾಗುತ್ತಿದೆ. ಈಶಾನ್ಯ ರಾಜ್ಯಗಳಲ್ಲಿ ಕಿಸಾನ್ ಉಡಾನ್ ಯೋಜನೆ ಅಲ್ಲಿನ ರೈತರಿಗೆ ಹನ್ಣು, ತರಕಾರಿ ಸೇರಿದಂತೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಸಹಾಯಕವಾಗಲಿದೆ.

ನಮ್ಮ ಗೌರವಾನ್ವಿತ ಶರದ್ ಪವಾರ್ ಜೀ ಮತ್ತು ಕಾಂಗ್ರೆಸ್ ಪ್ರತಿ ಸದಸ್ಯರುಪ್ರತಿ ಸರ್ಕಾರವೂ ಕೃಷಿ ವಲಯದ ಸುಧಾರಣೆಗಳನ್ನು ಪ್ರತಿಪಾದಿಸುತ್ತಾ ಬಂದಿವೆ. ಕೃಷಿ ಕ್ಷೇತ್ರಕ್ಕೆ ಸುಧಾರಣೆಗಳನ್ನು ತರಬೇಕು ಎಂದು ಪ್ರತಿಯೊಬ್ಬರೂ ಒತ್ತಾಯಿಸುತ್ತಿದ್ದಾರೆ. ಇದು ಇವತ್ತಿನ ಒತ್ತಾಯವಲ್ಲ. ಹಿಂದಿನ ಸರ್ಕಾರಗಳಿಂದಲೂ ಕೇಳಿಬಂದಿದೆ. ಎರಡು ದಶಕಗಳಿಂದಲೂ ಕುರಿತು ಚರ್ಚೆಗಳು ನಡೆಯುತ್ತಾ ಬಂದಿವೆ. ಆದರೆ, ಸುಧಾರಣೆಯ ಯಾವುದೇ ಪ್ರಸ್ತಾವನೆ ಅಂತಿಮಗೊಂಡಿಲ್ಲ.

ಪ್ರಸ್ತುತ ಸನ್ನಿವೇಶದಲ್ಲಿ, ಕೃಷಿ ವಲಯಕ್ಕೆ ಹೊಸ ಚಿಂತನೆಗಳನ್ನು ತರಲು ನಾವು ನಿರ್ಧರಿಸಿದ್ದೇವೆ. ಈಗಿರುವ ಅಡೆತಡೆಗಳನ್ನು ನಿವಾರಿಸಿ, ಹೊಸ ವಿಚಾರಗಳನ್ನು ಸೇರ್ಪಡೆ ಮಾಡಿ ಪ್ರಗತಿಗೆ ನಾಂದಿ ಹಾಡುವುದು ನಮ್ಮ ಉದ್ದೇಶವಾಗಿದೆ. ಆದರೆ, ಅಡೆತಡೆಗಳನ್ನು ಹಾಕಿದರೆ ಪ್ರಗತಿ ಹೇಗೆ ಸಾಧ್ಯ. ಆದರೆ ಹಠಾತ್ತಾಗಿ ಕೆಲವರು ಯು-ಟರ್ನ್ ಪಡೆದು ಪ್ರತಿಭಟನೆಗೆ ಮುಂದಾಗಿ ಸರ್ಕಾರವನ್ನು ಮೂಲೆಗುಂಪು ಮಾಡುತ್ತಿರುವ ಪ್ರಯತ್ನಗಳಿಂದ ನನಗೆ ಆಶ್ಚರ್ಯವಾಗಿದೆ. ಕೃಷಿ ವಲಯದ ಸುಧಾರಣೆಗಳು ಅತಿಮುಖ್ಯ. ಹಲವಾರು ವರ್ಷಗಳು ಉರುಳಿವೆ. ಹೊಸ ಆಲೊಚನೆಗಳನ್ನು ಸೇರಿಸಬೇಕು. ರೀತಿಯಲ್ಲೇ ದೇಶ ಮುಂದೆ ಸಾಗಬೇಕು ಎಂದು ರೈತರಿಗೆ ಹೇಳಿದ್ದೇನೆ. ಆದರೆ, ಇದೀಗ ರಾಜಕೀಯವು  ಸ್ವಂತ ಭಾವನೆಗಳನ್ನು ಹತ್ತಿಕ್ಕುತ್ತಿದೆ. ಗೌರವಾನ್ವಿತ ಮಾಜಿ ಪ್ರಧಾನ ಮಂತ್ರಿ ಡಾ. ಮನಮೋಹನ್ ಸಿಂಗ್ ಜೀ ಅವರು ಸದನದಲ್ಲಿದ್ದಾರೆ. ಅವರ ಒಂದು ಉಲ್ಲೇಖವನ್ನು ನಾನಿಲ್ಲಿ ಓದಲು ಬಯಸುತ್ತೇನೆ. ಯು-ಟರ್ನ್ ತೆಗೆದುಕೊಂಡವರು ಬಹುಶ: ನನ್ನನ್ನು ಒಪ್ಪದಿರಬಹುದು, ಆದರೆ ಮನಮೋಹನ್ ಸಿಂಗ್ ಅವರನ್ನು ಖಂಡಿತಾ ಒಪ್ಪಿಕೊಳ್ಳುತ್ತಾರೆ ಎಂದು ಭಾವಿಸಿದ್ದೇನೆ. “1930ರಲ್ಲಿ ರೂಪಿಸಿರುವ ಕೃಷಿ ಮಾರುಕಟ್ಟೆ ವ್ಯವಸ್ಥೆಯು (ಕಾಯಿದೆ) ಗರಿಷ್ಠ ದರ ಸಿಗುವ ಕಡೆ ರೈತರ ಉತ್ಪನ್ನಗಳನ್ನು ಮಾರಾಟ ಮಾಡಲು ತಡೆ ಹಾಕುತ್ತಿದೆ. ಆದ್ದರಿಂದ ಕಾಯಿದೆಯನ್ನು ತೆಗೆದುಹಾಕುವುದು ನಮ್ಮ ಉದ್ದೇಶವಾಗಿದೆ. ಭಾರತವನ್ನು ಒಂದು ಬೃಹತ್ ಸಾಮಾನ್ಯ ಕೃಷಿ ಮಾರುಕಟ್ಟೆಯಾಗಿಸಲು ಎದುರಾಗಿರುವ ಎಲ್ಲಾ ನ್ಯೂನತೆಗಳನ್ನು ತೊಡೆದುಹಾಕುವುದು ನಮ್ಮ ಉದ್ದೇಶವಾಗಿದೆ ಎಂದು ಮನಮೋಹನ್ ಸಿಂಗ್ ಉಲ್ಲೇಖಿಸಿದ್ದರು. ಯುಪಿಎ ಸರ್ಕಾರ ಇದ್ದಾಗ ಅಂದಿನ ಗೌರವಾನ್ವಿತ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಜೀ ಅವರು, ಕೃಷಿ ಉತ್ಪನ್ನಗಳನ್ನು ಮುಕ್ತವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸುವ ಉದ್ದೇಶವನ್ನು ಹೊರಹಾಕಿದ್ದರು. ಭಾರತವು ಬೃಹತ್ ಕೃಷಿ ಮಾರುಕಟ್ಟೆ ಆಗಬೇಕೆಂಬುದು ಅವರ ಉದ್ದೇಶವಾಗಿತ್ತು. ಈಗ ನಾವು ಅದನ್ನೇ ಮಾಡುತ್ತಿದ್ದೇವೆ. ಇದಕ್ಕೆ ನೀವು ಹೆಮ್ಮೆ ಪಡಬೇಕು….. ನೋಡಬೇಕು. ನಾನು ಹೊಂದಿದ್ದ ಉದ್ದೇಶವನ್ನು ಮೋದಿ ಮಾಡುತ್ತಿದ್ದಾರೆ ಎಂದು ಗೌರವಾನ್ವಿತ ಮನಮೋಹನ್ ಸಿಂಗ್ ಜೀ ಅವರೇ ಸದನದಲ್ಲಿ ಹೇಳಬೇಕು…. ಇದಕ್ಕೆ ಎಲ್ಲರೂ ಹೆಮ್ಮೆ ಪಡಬೇಕು. ಕೃಷಿ ಕಾಯಿದೆಗಳ ಬಗ್ಗೆ ವಿವಾದ ಸೃಷ್ಟಿಸುತ್ತಿರುವ ಜನರು, ರಾಜಕೀಯ ಮಾಡುತ್ತಿರುವವರು ಉತ್ತಮ ಭಾಗವಾಗಿ, ತಮ್ಮ ರಾಜ್ಯಗಳಲ್ಲಿ ಏನಾದರೊಂದು ಒಳ್ಳೆಯದನ್ನು ಮಾಡಲಿ. ಇಲ್ಲಿರುವ ಎಲ್ಲಾ ಪ್ರತಿಪಕ್ಷಗಳು ಅಧಿಕಾರ ಹೊಂದಿರುವ ರಾಜ್ಯಗಳಲ್ಲಿ ರೈತರಿಗೆ ಬೇರೆ ಇನ್ನೇನಾದರೂ ಉತ್ತಮ ಕೆಲಸಗಳನ್ನು ಮಾಡಲಿ. ಇಡೀ ವಿವಾದದಲ್ಲಿ ಕಾಯಿದೆಯ ಉತ್ತಮ ಅಂಶಗಳ ಕುರಿತು ಯಾರೊಬ್ಬರೂ ಚರ್ಚಿಸದಿರುವುದನ್ನು ನಾನು ಗಮನಿಸಿದ್ದೇನೆ. ಪ್ರಕ್ರಿಯೆ ಸಮರ್ಪಕವಾಗಿಲ್ಲ. ತರಾತುರಿಯಲ್ಲಿ ಮಾಡಲಾಗಿದೆ  ಎಂಬುದೇ ಎಲ್ಲರ ದೂರಾಗಿದೆ.

ನಾವೀಗ ಬೇರೆ ವಿಷಯಗಳ, ವಿವಾದಗಳ ಕಡೆಗೆ ಗಮನ ನೀಡೋಣ. ಹಾಲು ಉತ್ಪಾದನೆ ಮತ್ತು ಪೂರೈಕೆ ಕ್ಷೇತ್ರವನ್ನೇ ನೋಡಿ. ದೇಶದ ಖಾಸಗಿ ಮತ್ತು ಸಹಕಾರಿ ವಲಯಗಳು ಜತೆಗೂಡಿ ಬಲಿಷ್ಠ ಪೂರೈಕೆ ಸರಪಣಿ ಜಾಲ ಸೃಷ್ಟಿಸಿಕೊಂಡಿವೆ. ನಮ್ಮ ದೇಶದಲ್ಲಿ ಉತ್ಕೃಷ್ಟ ಹಾಲು ಪೂರೈಕೆ ಸರಪಣಿ ಇದೆ. ಇದು ನನ್ನ ಆಡಳಿತಾವಧಿಯಲ್ಲಿ ಆಗಿದ್ದಲ್ಲ. ನಾನು ಬರುವ ಮುನ್ನವೇ ಇದು ಆಗಿತ್ತು. ಇದಕ್ಕೆ ನಾವೆಲ್ಲಾ ಹೆಮ್ಮೆ ಪಡಬೇಕು. ಕೃಷಿ ಆರ್ಥಿಕತೆಯ ೊಟ್ಟು ಮೌಲ್ಯದಲ್ಲಿ ಕ್ಷೀರೋದ್ಯಮ(ಡೇರಿ) ಪಾಲು 28% ಇದೆ. ಜತೆಗೆ, ಸುಮಾರು ವಾರ್ಷಿಕ 8 ಲಕ್ಷ ಕೋಟಿ ರೂ. ವಹಿವಾಟು ನಡೆಯುತ್ತಿದೆ.

ಗೌರವಾನ್ವಿತ ಸಭಾಪತಿಗಳೆ,

ಇದು ಸತ್ಯ ಮತ್ತು ನಮ್ಮ ನಡವಳಿಕೆಗಳನ್ನು ಸಹ ಪ್ರತಿಫಲಿಸುತ್ತದೆ. ಕಾಯಿದೆ, ಕಾರ್ಯಕ್ರಮ ಅಥವಾ ಯೋಜನೆಗಳಿಗೆ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡುವಾಗೆಲ್ಲಾ ಒತ್ತಡ, ಉದ್ವೇಗ ಸೃಷ್ಟಿಯಾಗುತ್ತದೆ. ಏಕಾದರೂ ಇಲ್ಲಿ ಟೇಬಲ್ ಮತ್ತು ಖುರ್ಚಿಗಳನ್ನು ಇಡುತ್ತಾರೋ ಅನಿಸುತ್ತದೆ. ಭಾರತ ಬಹುದೊಡ್ಡ ರಾಷ್ಟ್ರವಾಗಿ ಹಾಗೂ ನಾವು ಬೆಳೆದುಬಂದ ಸಂಪ್ರದಾಯದ ಹಿನ್ನೆಲೆಯನ್ನು ಗಮನಿಸಿದಾಗ, ಏನಾದರೂ ಹೊಸದು ಬಂದಾಗ ನಾವು ಗೊಂದಲ ಪಡುವುದು ಸಾಮಾನ್ಯ. ಆದರೆ, ಹಸಿರು ಕ್ರಾಂತಿಯ ಮೇಲೆ ಚರ್ಚೆಗಳು ನಡೆಯುತ್ತಿದ್ದ ದಿನಗಳನ್ನು ನೆನಪಿಸಿಕೊಳ್ಳಿ. ಹಸಿರು ಕ್ರಾಂತಿಯ ಸಂದರ್ಭದಲ್ಲಿ ಕೃಷಿ ಸುಧಾರಣೆಗಳು ನಡೆಯಿತ್ತಿದ್ದವು. ಆಗಲೂ ಸುಧಾರಣೆಗಳ ಬಗ್ಗೆ ತಪ್ಪು ಗ್ರಹಿಕೆ, ಪ್ರತಿಭಟನೆಗಳು ನಡೆದಿದ್ದವು. ಪ್ರತಿಯೊಂದು ಸಹ  ನಿಖರವಾಗಿ ದಾಖಲಾಗಿವೆ. ಕೃಷಿ ಸುಧಾರಣೆಗೆ ಲಾಲ್ ಬಹದ್ದೂರ್ ಶಾಸ್ಟ್ರೀಜಿ ಅವರು ಕಠಿಣ ನಿರ್ಧಾರಗಳನ್ನು ತೆಗೆದದುಕೊಳ್ಳಬೇಕಾದ ಸಂದರ್ಭದಲ್ಲಿ, ಅವರ ಯಾರೊಬ್ಬ ಸಹೋದ್ಯೋಗಿಗಳು ಸಹ ಕೃಷಿ ಸಚಿವರಾಗಲು ಸಿದ್ಧರಿರಲಿಲ್ಲ. ಕೃಷಿ ಸಚಿವರಾದರೆ, ಅವರ ಕೈಗಳು ಸುಟ್ಟುಹೋಗುತ್ತವೆ, ರೈತರು ಕೋಪೋದ್ರಿಕ್ತರಾಗುತ್ತಾರೆ, ರಾಜಕೀಯ ಜೀವನವೇ ಮುಗಿದು ಹೋಗುತ್ತದೆ ಎಂಬುದು ಅವರ ಭಾವನೆ ಆಗಿತ್ತು. ಶಾಸ್ತ್ರಿ ಜೀ ಅವರ ಕೃಷಿ ಸುಧಾರಣೆ ಪ್ರಸ್ತಾವನೆಗಳಿಗೆ ಯೋಜನಾ ಆಯೋಗವು ವಿರೋಧ ವ್ಯಕ್ತಪಡಿಸಿತ್ತು. ಹಣಕಾಸು ಸಚಿವರು ಸೇರಿದಂತೆ ಇಡೀ ಸಂಪುಟದಲ್ಲಿ ಪ್ರತಿರೋಧದ ಗೊಣಗಾಟ ಶುರುವಾಗಿತ್ತು. ಆದರೆ, ಶಾಸ್ತ್ರಿ ಜೀ ದಿಟ್ಟತನದಿಂದ ದೇಶದ ಉತ್ತಮ ಭವಿಷ್ಯಕ್ಕಾಗಿ ಮುಂದಡಿ ಇಟ್ಟು ಕೃಷಿ ಸುಧಾರಣೆಗಳನ್ನು ಜಾರಿಗೆ ತಂದರು. ಇಂದು ಎಡಪಕ್ಷಗಳು ಆಡುತ್ತಿರುವ ಭಾಷೆಯನ್ನೇ ಅಂದು ಸಹ ಬಳಸುತ್ತಿದ್ದರು. ಕಾಂಗ್ರೆಸ್ ಪಕ್ಷ ಮತ್ತು ಶಾಸ್ತ್ರೀಜಿ ಅವರು ಅಮೆರಿಕದ ಅಣತಿಯಂತೆ ಕೃಷಿ ಸುಧಾರಣೆ ಜಾರಿಗೆ ತರುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು. ಕಾಂಗ್ರೆಸ್ ನಾಯಕರು ಅಮೆರಿಕದ ಏಜೆಂಟರು ಎಂದು ಪ್ರತಿಯೊಬ್ಬರು ಜರಿಯುತ್ತಿದ್ದರು. ಎಡಪಕ್ಷಗಳು ಇಂದು ಆಡುತ್ತಿರುವ ಭಾಷೆಯನ್ನೆ ಅಂದು ಸಹ ಬಳಸುತ್ತಿದ್ದರು. ಕೃಷಿ ಸುಧಾರಣೆಗಳು ದೇಶದ ಸಣ್ಣ ರೈತರನ್ನು ವಿನಾಶಕ್ಕೆ ಕೊಂಡೊಯ್ಯಲಿವೆ ಎಂದು ಆರೋಪಿಸಿದ್ದವು. ದೇಶಾದ್ಯಂತ ನೂರಾರು ಪ್ರತಿಭಟನೆಗಳನ್ನು ಆಯೋಜಿಸಿದ್ದವು. ಬೃಹತ್ ಆಂದೋಲನವನ್ನೇ ನಡೆಸಿದವು. ಇವೆಲ್ಲದರ ನಡುವೆ, ಲಾಲ್ ಬಹದ್ದೂರ್ ಶಾಸ್ತ್ರಿ ಜೀ ಮತ್ತು ಅವರ ನಂತರದ ಸರ್ಕಾರ ಸುಧಾರಣೆಗಳನ್ನು ಮುಂದುವರಿಸಿತು. ಸುಧಾರಣೆಗಳ ಫಲವಾಗಿ ಪಿಎಲ್-480 ಕಾರ್ಯಕ್ರಮದಡಿ ನಾವು ಏನನ್ನು ಆಮದು ಮಾಡಿಕೊಳ್ಳುತ್ತಿದ್ದೆವೋ ಅದನ್ನು ನಮ್ಮ ರೈತರು ಇಲ್ಲೇ ಬೆಳೆಯುತ್ತಿದ್ದಾರೆ. ದಾಖಲೆ ಪ್ರಮಾಣದ ಕೃಷಿ ಉತ್ಪನ್ನಗಳ ಉತ್ಪಾದನೆ ಹೊರತಾಗಿಯೂ, ಕೃಷಿ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿವೆ. ಯಾರೊಬ್ಬರೂ ಇದನ್ನು ನಿರಾಕರಿಸಲು ಸಾಧ್ಯವಿಲ್ಲ. ಆದರೆ, ನಾವೆಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಇದಕ್ಕೆ ಇನ್ನು ಸಮಯ ಕಾಯುವುದಿಲ್ಲ ಎಂಬುದು ನನ್ನ ನಂಬಿಕೆಯಾಗಿದೆ.

ರಾಮ್ಗೋಪಾಲ್ ಜೀ ಅವರು ಒಳ್ಳೆಯ ಮಾತನ್ನು ಆಡಿದ್ದಾರೆ. ಕೊರೊನಾ ಕಾಲಾವಧಿಯಲ್ಲೂ ನಮ್ಮ ರೈತರು ದಾಖಲೆ ಪ್ರಮಾಣದಲ್ಲಿ ಆಹಾರ ಧಾನ್ಯ ಬೆಳೆದಿದ್ದಾರೆ. ಜತೆಗೆ, ಸರ್ಕಾರಗಳು ಸಹ, ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ಸಮರ್ಪಕವಾಗಿ ಪೂರೈಕೆ ಮಾಡಿದೆ. ಸಂಘಟಿತ ಪ್ರಯತ್ನಗಳ ಫಲವಾಗಿ, ದೇಶದ ಉಗ್ರಾಣಗಳು ಆಹಾರ ಧಾನ್ಯಗಳಿಂದ ತುಂಬಿ ತುಳುಕುತ್ತಿವೆ. ಕೊರೊನಾ ಅವಧಿಯಲ್ಲಿ ದೇಶದ ಕೃಷಿಕರಿಂದ ಕನಿಷ್ಠ ಬೆಂಬಲ ಬೆಲೆಗೆ ದಾಖಲೆ ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನು ಖರೀದಿಸಲಾಯಿತು. ಹೊಸ ಪರಿಹಾರಗಳನ್ನು ಕಂಡುಕೊಂಡು ನಾವು ಮುಂದಡಿ ಇಡಬೇಕು ಎಂಬುದು ನನ್ನ ಬಲವಾದ ನಂಬಿಕೆಯಾಗಿದೆ. ಮುನ್ನ ನಾನು ಪ್ರಸ್ತಾಪಿಸಿದಂತೆ, 2ರಿಂದ 5 ವರ್ಷಗಳ ನಂತರ ಹಲವಾರು ಹಳೆಯ ಕಾಯಿದೆಗಳಿಗೆ ತಿದ್ದುಪಡಿ ತರಬೇಕಿದೆ. ಜಡವಾದ ಪರಿಸ್ಥಿತಿಯಲ್ಲಿ ನಾವು ಬದುಕಲು ಸಾಧ್ಯವಿಲ್ಲ. ಉತ್ತಮ ಸಲಹೆ ಸೂಚನೆಗಳು ಬಂದಾಗ, ಅವುಗಳನ್ನು ಅನುಸರಿಸಿ, ಉತ್ತಮ ಸುಧಾರಣೆಗಳನ್ನು ತರಲಾಗುವುದು. ನನ್ನ ಸರ್ಕಾರ ಮಾತ್ರವಲ್ಲ, ಹಿಂದಿನ ಸರ್ಕಾರಗಳು ಸಹ ಒಳ್ಳೆಯ ಸುಧಾರಣೆಗಳನ್ನು ಒಪ್ಪಿಕೊಂಡಿವೆ. ಇದು ಪ್ರಜಾಸತ್ತೆಯ ಸಂಪ್ರದಾಯ. ಆದ್ದರಿಂದ, ನಾವು ಉತ್ತಮ ಸಲಹೆ ಸೂಚನೆಗಳನ್ನು ಸ್ವೀಕರಿಸಿ, ಅವುಗಳ ಜಾರಿಗೆ ಮುಂದಡಿ ಇಡಬೇಕು. ನಾನು ಸದನದ ಮೂಲಕ ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇನೆ. ಕೃಷಿ ವಲಯದ ಸಕಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ದೇಶವನ್ನು ಮುನ್ನಡೆಸೋಣ, ಪ್ರತಿಭಟನಾಕಾರರ ಮನವೊಲಿಸೋಣ. ಇಂದು ಆಗದಿದ್ದರೆ, ಮುಂದೊಂದು ದಿನ ಯಾರಾದರೊಬ್ಬರು ಇಲ್ಲಿ ಕೆಲಸವನ್ನು ಮಾಡಲೇಬೇಕು. ಹಾಗಾಗಿ ನಾನು ಇಂದೇ ಮಾಡಿದ್ದೇನೆ. ನಮ್ಮ ಕೃಷಿ ಸಚಿವರು ಪ್ರತಿಭಟನಾನಿರತ ರೈತರೊಂದಿಗೆ ನಿರಂತರ ಮತ್ತು ನಿಯಮಿತವಾಗಿ ಮಾತುಕತೆ ನಡೆಸುತ್ತಿದ್ದಾರೆ. ಯಾವುದೇ ಒತ್ತಡ ಅಥವಾ ಉದ್ವಿಗ್ನ ಪರಿಸ್ಥಿತಿ ಇಲ್ಲ. ಪ್ರತಿಯೊಂದನ್ನೂ ಪರಸ್ಪರ ಅರ್ಥ ಮಾಡಿಕೊಳ್ಳುವ ಪ್ರಯತ್ನಗಳು ಸಾಗುತ್ತಿವೆ. ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬರ ಹಕ್ಕು. ಆದರೆ ಅನೇಕ ವೃದ್ಧ ಕೃಷಿಕರು, ಹಿರಿಯರು ಪ್ರತಿಭಟನೆಯಲ್ಲಿ ಕುಳಿತಿದ್ದಾರೆ. ಅದು ಸರಿಯಲ್ಲ. ಅವರನ್ನು ತಕ್ಷಣವೇ ಮನೆಗೆ ಕಳಿಸಿ ಎಂದು ನಾವು ಪ್ರತಿಭಟನಾಕಾರರನ್ನು ಒತ್ತಾಯಿಸುತ್ತಿದ್ದೇವೆ. ತಕ್ಷಣವೇ ಪ್ರತಿಭಟನೆ ನಿಲ್ಲಿಸಿ, ಮತ್ತಷ್ಟು ಸಂಧಾನಕ್ಕೆ ಬನ್ನಿ. ಬಾಗಿಲುಗಳು ಸದಾ ತೆರೆದಿರುತ್ತವೆ ಎಂದು ನಾವು ಪ್ರತಿಭಟನಾಕಾರರಿಗೆ ಮನವರಿಕೆ ಮಾಡುತ್ತಿದ್ದೇವೆ. ಪ್ರತಿಭಟನಾನಿರತ ರೈತರಿಗೆ ಮನವಿಯನ್ನು ಈಗಾಗಲೇ ಮಾಡಿದ್ದೇವೆ. ನಾನು ಸದನದ ಮೂಲಕ ಇಂದು ಸಹ ಅದೇ ಮನವಿ ಮಾಡುತ್ತಿದ್ದೇನೆ.

ಗೌರವಾನ್ವಿತ ಸಭಾಪತಿಗಳೆ,

ನಮ್ಮ ದೇಶದ ಕೃಷಿಯನ್ನು ಸಮೃದ್ಧಗೊಳಿಸಲು ಅಗತ್ಯವಾದ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಇದು ಸಕಾಲ. ಯಾವುದೇ ಸೂಕ್ತ ನಿರ್ಧಾರ ಕೈಗೊಳ್ಳುವ ವಿಷಯಕ್ಕೆ ಸಮಯ ಪೋಲು ಮಾಡುವುದು ತರವಲ್ಲ. ನಾವು ಮುಂದಡಿ ಇಡಬೇಕು. ದೇಶವನ್ನು ಹಿಂದಕ್ಕೆ ಕರೆದೊಯ್ಯಬಾರದು. ಆಡಳಿತ ಪಕ್ಷವೇ ಇರಬಹುದು ಅಥವಾ ಪ್ರತಿಪಕ್ಷವೇ ಇರಬಹುದು ಅಥವಾ ಪ್ರತಿಭಟನಾನಿರತ ಸಹೊದ್ಯೋಗಿಗಳೇ ಇರಬಹುದು, ಸುಧಾರಣೆಗಳಿಗೆ ನಾವು ಅವಕಾಶ ಕಲ್ಪಿಸಬೇಕು. ಸುಧಾರಣೆಗಳಿಂದ ಪ್ರಯೋಜನಗಳು ಲಭಿಸುತ್ತಿವೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ನೋಡಬೇಕು. ಯಾವುದೇ ಕುಂದುಕೊರತೆ ಅಥವಾ ನ್ಯೂನತೆಗಳಿದ್ದರೆ, ಅವುಗಳನ್ನು ಸರಿಪಡಿಸಬಹುದು. ಯಾವುದೇ ಅಸ್ಪಷ್ಟತೆಗಳಿದ್ದರೆ, ಅವುಗಳ ಬಗ್ಗೆ ಜಾಗರೂಕತೆ ವಹಿಸಲಾಗುವುದು. ಎಲ್ಲಾ ಬಾಗಿಲುಗಳು ಮುಚ್ಚಿವೆ ಎಂದು ಇದರ ಅರ್ಥವಲ್ಲ. ಆದ್ದರಿಂದ, ನಾನು ಭರವಸೆ ನೀಡುವುದೇನೆಂದರೆ, ಕೃಷಿ ಮಂಡಿಗಳನ್ನು ಆಧುನೀಕರಿಸಿದರೆ, ಹೆಚ್ಚಿನ ಸ್ಪರ್ಧೆ ಏರ್ಪಡಲಿದೆ. ನಾವು ಸಹ ಬಜೆಟ್ನಲ್ಲಿ ಹೆಚ್ಚಿನ ಅನುದಾನ ಹಂಚಿಕೆ ಮಾಡಿದ್ದೇವೆ. ಕನಿಷ್ಠ ಬೆಂಬಲ ಬೆಲೆ ಯೋಜನೆ ಇದೆ. ಹಿಂದೆಯೂ ಇತ್ತು, ಮುಂದೆಯೂ ಇರಲಿದೆ. ನಾವೆಲ್ಲಾ ಸದನದ ಪಾವಿತ್ರ್ಯ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ದೇಶದ 80 ಕೋಟಿಗಿಂತ ಹೆಚ್ಚಿನ ಜನರಿಗೆ ಅಗ್ಗದ ಬೆಲೆಗೆ ಪಡಿತರ ನೀಡಲಾಗುತ್ತಿದೆ. ಅದು ಮುಂದುವರಿಯಲಿದೆ. ಆದ್ದರಿಂದ ದಯವಿಟ್ಟು ಜನರಲ್ಲಿ ಗೊಂದಲ ಸೃಷ್ಟಿಸಬೇಡಿ. ಏಕೆಂದರೆ, ದೇಶದ ಜನತೆ ನಮಗೆ ವಿಶೇಷ ಜವಾಬ್ದಾರಿ ನೀಡಿದ್ದಾರೆ. ರೈತರ ಆದಾಯವನ್ನು ದುಪ್ಪಟ್ಟು ಮಾಡಲು ವಿಶೇಷ ಕ್ರಮಗಳಿಗೆ ನಾವು ಒತ್ತು ನೀಡಬೇಕಿದೆ. ದೇಶದ ಜನಸಂಖ್ಯೆ ಬೆಳೆಯುತ್ತಿದೆ. ಕುಟುಂಬದ ಒಳಗೆ ಸದಸ್ಯರ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಜತೆಗೆ ಕುಟುಂಬದ ಕೃಷಿ ಭೂಮಿ ಗಾತ್ರ ಚೂರಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ರೈತರಿಗೆ ಏನಾದರೊಂದು ಮಾಡಿ, ಅವರ ಹೊರೆಯನ್ನು ತಗ್ಗಿಸಬೇಕಾಗಿದೆ. ನಮ್ಮ ರೈತರಿಗೆ ವಿಫುಲ ಅವಕಾಶಗಳನ್ನು ಒದಗಿಸುವುದು ಸಾಧ್ಯವಿದೆ. ಅವರ ನರಳಾಟಗಳನ್ನು ನಿರ್ಮೂಲನೆ ಮಾಡಲು ನಾವು ಕೆಲಸ ಮಾಡಬೇಕಿದೆ. ರಾಜಕೀಯ ಸಮೀಕರಣ ಮತ್ತು ಮೇಲಾಟಗಳಲ್ಲಿ ಸುಧಾರಣೆಗಳನ್ನು ವಿಳಂಬ ಮಾಡುವ ಮೂಲಕ ನಾವು ರೈತ ಸಮುದಾಯವನ್ನು ಕಗ್ಗತ್ತಲಿಗೆ ತಳ್ಳುತ್ತೇವೆ ಎಂಬ ಭಾವನೆ ನನ್ನನ್ನು ಕಾಡುತ್ತಿದೆ. ಹಾಗಾಗಿ, ನಾವೆಲ್ಲಾ ರೈತರ ಉಜ್ವಲ ಭವಿಷ್ಯಕ್ಕಾಗಿ ನಮ್ಮೆಲ್ಲಾ ರಾಜಕೀಯ ಮೇಲಾಟಗಳನ್ನು ನಿಯಂತ್ರಿಸಬೇಕು. ದೇಶದ ಅನ್ನದಾತರ ಜ್ವಲಂತ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಚಿಂತಿಸಬೇಕು ಎಂದು ನಾನು ಎಲ್ಲರಿಗೂ ಪ್ರಾರ್ಥಿಸುತ್ತೇನೆ.

ಗೌರವಾನ್ವಿತ ಸಭಾಪತಿಗಳೆ,

ಕೃಷಿ ವಲಯದ ಜತೆಗೆ, ಡೇರಿ ಮತ್ತು ಪಶುಸಂಗೋಪನೆ ಕ್ಷೇತ್ರಗಳಿಗೆ ಉತ್ತೇಜನ ನೀಡುವ ಅಗತ್ಯವಿದೆ. ಇದರಿಂದ ನಮ್ಮ ರೈತರು ಸ್ವಾವಲಂಬಿಗಳಾಗುತ್ತಾರೆ. ಅಂತೆಯೇ, ಜಾನುವಾರಿಗೆ ಬರುವ ಕಾಲುಬಾಯಿ ರೋಗಗಳಿಗೆ ಚಿಕಿತ್ಸೆ ನೀಡುವ ಬೃಹತ್ ಆಂದೋಲನ ಅನಾವರಣಗೊಳಿಸಲಾಗಿದೆ. ಇದು ಹೈನುಗಾರರು ಮತ್ತು ಕೃಷಿಕರಿಗೆ ಪ್ರಯೋಜನ ಒದಗಿಸಿದೆ. ಮೀನುಗಾರರ ಕಲ್ಯಾಣಕ್ಕಾಗಿ ಪ್ರತ್ಯೇಕ ಮೀನುಗಾರಿಕೆ ಸಚಿವಾಲಯ ಆರಂಭಿಸಲಾಗಿದೆ. ಮತ್ಸ್ಯ ಸಂಪದ ಯೋಜನೆಗೆ 20 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಇದರಿಂದ ವಲಯದ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ. ಸಿಹಿ ಕ್ರಾಂತಿಗೆ ವಿಶ್ವಾದ್ಯಂತ ಉಜ್ವಲ ಭವಿಷ್ಯವಿದೆ. ಇದಕ್ಕೆ ಹೆಚ್ಚಿನ ಭೂಮಿಯ ಅವಶ್ಯಕತೆ ಇಲ್ಲ. ಕೃಷಿಕರು ವಾರ್ಷಿಕ 40 ಸಾವಿರದಿಂದ 2 ಲಕ್ಷ ರೂ.ವರೆಗೆ ಆದಾಯ ಗಳಿಸಬಹುದು. ಜೇನುತುಪ್ಪ ಮತ್ತು ಮೇಣಕ್ಕೆ ವಿಶ್ವಾದ್ಯಂತ ಭಾರಿ ಬೇಡಿಕೆ ಇದ್ದು, ಭಾರತವು ಮೇಣವನ್ನು ರಫ್ತು ಮಾಡಲು ವಿಫುಲ ಅವಕಾಶಗಳಿವೆ. ಜೇನುಹುಳು ಸಾಕಣೆಗೆ ಹೆಚ್ಚಿನ ಭೂಮಿಯ ಅಗತ್ಯವಿಲ್ಲ. ನಮ್ಮ ರೈತರು ಸೌರಶಕ್ತಿ ಉತ್ಪಾದಕರಾಗಬೇಕು. ಸೌರಶಕ್ತಿ ವ್ಯವಸ್ಥೆ ಮೂಲಕ ರೈತರು ನೀರಿನ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು. ಇದರಿಂದ ವಿದ್ಯುತ್ ವೆಚ್ಚ ನಿಯಂತ್ರಿಸಬಹುದು. ಜತೆಗೆ, ಬೆಳೆ ಪ್ರಮಾಣ ಹೆಚ್ಚಿಸಿಕೊಳ್ಳಬಹುದು. ಒಂದು ಬೆಳೆಯ ಬದಲು 2 ಬೆಳೆ ತೆಗೆಯಬಹುದು. ರೈತ ಬೆಳೆ ಬೆಳೆಯುವ ಪದ್ಧತಿ ಬದಲಿಸಿಕೊಳ್ಳಬೇಕು. ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಭಾರತದ ಸಾಮರ್ಥ್ಯ ಎಲ್ಲಿ ಅಡಗಿದೆ ಅಂದರೆ, ಇಂತಹ ಸಮಸ್ಯೆಗಳನ್ನು ಪರಿಹರಿಸಿ, ಹೊಸ ದಾರಿಗಳನ್ನು ಕಂಡುಕೊಳ್ಳುವುದರಲ್ಲಿ ಮತ್ತು ದಾರಿಗಳನ್ನು ಮುಕ್ತಗೊಳಿಸುವುದರಲ್ಲಿ. ಆದರೆ ಕೆಲವು ಜನರು ದೇಶವನ್ನು ಅಸ್ಥಿರತೆಯಲ್ಲಿ ಮತ್ತು ಗೊಂದಲದಲ್ಲಿ ಇಡಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಇಂತಹ ಜನರನ್ನು ನಾವು ಗುರುತಿಸುವ ಕೆಲಸ ಮಾಡಬೇಕಿದೆ.

ಪಂಜಾಬ್ ರಾಜ್ಯಕ್ಕೆ ಏನಾಯಿತು ಎಂಬುದನ್ನು ನಾವು ಮರೆಯಲು ಸಾಧ್ಯವೇ ಇಲ್ಲ. ದೇಶ ವಿಭಜನೆ ಸಂದರ್ಭದಲ್ಲಿ ಅದು ತೀರಾ ನಲುಗಿತು. 1984 ಗಲಭೆ ನಡೆದಾಗ, ಹೆಚ್ಚಿನ ಕಣ್ಣೀರು ಪಂಜಾಬ್ನಲ್ಲಿ ಹರಿಯಿತು. ಹೆಚ್ಚಿನ ದುರಂತ ಘಟನೆಗಳಿಗೆ ಅದು ಬಲಿಯಾಯಿತು. ಜಮ್ಮು-ಕಾಶ್ಮೀರದಲ್ಲಿ ಏನಾಯಿತು. ಅಮಾಯಕರ ಹತ್ಯೆಗಳು ನಡೆದವು. ಈಶಾನ್ಯ ರಾಜ್ಯಗಳಲ್ಲಿ ಗುಂಡು, ಬಂದೂಕು ಫಿರಂಗಿಗಳು ಸದ್ದು ಮಾಡಿದವು. ಎಲ್ಲಾ ಬೆಳವಣಿಗೆಗಳು ದೇಶಕ್ಕೆ ಅಪಾರ ಹಾನಿ ಮತ್ತು ನಷ್ಟ ಉಂಟು ಮಾಡಿದವು. ಎಲ್ಲಾ ಬೆಳವಣಿಗೆಗಳ ಹಿಂದೆ ಯಾವ ಶಕ್ತಿಗಳ ಕೈಚಳಕ ನಡೆಯಿತು? ಪ್ರತಿಯೊಂದು ಸರ್ಕಾರವು ಇವುಗಳನ್ನು ಕಣ್ಣಾರೆ ನೋಡಿವೆ, ಅರ್ಥ ಮಾಡಿಕೊಂಡಿವೆ, ತನಿಖೆಯನ್ನೂ  ನಡೆಸಿವೆ.  ಆದರೆ ನಾವು ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ತ್ವರಿತವಾಗಿ ಮುಂದಡಿ ಇಟ್ಟಿದ್ದೇವೆ. ಕೆಲವು ಜನರು ನಮ್ಮ ಸಿಖ್ ಸಹೋದರರ ಮನಸ್ಸುಗಳಿಗೆ ವಿಷಬೀಜ ತುಂಬುತ್ತಿರುವುದನ್ನು ನಾವು ಮರೆಯುವಂತಿಲ್ಲ. ದೇಶ ಪ್ರತಿಯೊಬ್ಬ ಸಿಖ್ ವ್ಯಕ್ತಿಯ ಬಗ್ಗೆ ಹೆಮ್ಮೆ ಹೊಂದಿದೆ. ಅವರು ದೇಶಕ್ಕಾಗಿ ಏನು ಮಾಡಿಲ್ಲ? ಅವರನ್ನು ನಾವೆಲ್ಲಾ ಹೆಚ್ಚಾಗಿ ಗೌರವಿಸಿದ್ದೇವೆ. ಪಂಜಾಬ್ ಅನ್ನ ತಿನ್ನುವ ಅವಕಾಶ ನನ್ನ ಪಾಲಿಗೆ ಬಂದಿತ್ತು. ನನ್ನ ಜೀವನದ ಪ್ರಮುಖ ಕಾಲವನ್ನು ಪಂಜಾಬ್ನಲ್ಲೇ ಕಳೆದಿದ್ದೇನೆ. ಹಾಗಾಗಿ, ಕೆಲವು ಜನರು ಅವರ ಬಗ್ಗೆ ಬಳಸುವ ಪದಗಳನ್ನು ನಾನು ಕೇಳಿದ್ದೇನೆ. ಅವರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅಂಥವರಿಂದ ದೇಶಕ್ಕೆ ಏನೂ ಒಳ್ಳೆಯದಾಗುವುದಿಲ್ಲ. ಆದ್ದರಿಂದ ನಾವು ಪರಿಸ್ಥಿಯ ಬಗ್ಗೆ ಕಾಳಜಿ ವಹಿಸಬೇಕಿದೆ.

ಗೌರವಾನ್ವಿತ ಸಭಾಪತಿಗಳೆ,

ಕೆಲವು ಪದಗಳಿಗೆ ನಾವೆಲ್ಲಾ ಪರಿಚಿತರಾಗಿದ್ದೀವಿ. ಶ್ರಮಜೀವಿಗಳು (ಕಾರ್ಮಿಕರು), ಬುದ್ಧಿಜೀವಿಗಳು (ಚಿಂತಕರು). ಆದರೆ ನಾನು ಕೆಲವು ದಿನಗಳಿಂದ ಗಮನಿಸುತ್ತಿದ್ದೇನೆ. ಇದೀಗ ಹೊಸ ವರ್ಗ (ಸಮುದಾಯ)ವೊಂದು ಉದಯಿಸಿದೆ. ಅದೀಗ ಮುಂದಡಿ ಇಟ್ಟಿದೆ. ಅವರೇ ಆಂದೋಲನ ಜೀವಿಗಳು (ಪ್ರತಿಭಟನೆಯಿಂದಲೇ ಜೀವಿಸುವವರು). ವಕೀಲರ ಪ್ರತಿಭಟನೆ ಇರಲಿ, ಆಂದೋಲನ ಜೀವಿಗಳು ಅಲ್ಲಿರುತ್ತಾರೆ; ವಿದ್ಯಾರ್ಥಿಗಳ ಪ್ರತಿಭಟನೆ ನಡೆದರೆ, ಅಲ್ಲೂ ಇರುತ್ತಾರೆ. ಕಾರ್ಮಿಕ ಪ್ರತಿಭಟನೆಗೂ ಬರುತ್ತಾರೆ. ಕೆಲವು ವೇಳೆ ಅವರು ತೆರೆಯ ಹಿಂದಿರುತ್ತಾರೆ. ಮತ್ತೆ ಕೆಲವು ಸಮಯದಲ್ಲಿ ತೆರೆಯ ಮುಂದಕ್ಕೆ ಬರುತ್ತಾರೆ. ಬಹುಮುಖ್ಯ ವಿಷಯವೆಂದರೆ, ಆಂದೋಲನ ಜೀವಿಗಳ ದೊಡ್ಡ ಸಂತತಿಯೇ ದೇಶಾದ್ಯಂತ ವ್ಯಾಪಿಸಿದೆ. ಪ್ರತಿಭಟನೆ ನಡೆಸದೆ ಅವರು ಬದುಕಲಾರರು. ಪ್ರತಿಭಟನೆಗಳಿಂದಲೇ ಅವರು ತಮ್ಮ ನೆಲೆ ಕಂಡುಕೊಂಡಿದ್ದಾರೆ, ಜೀವಿಸುತ್ತಿದ್ದಾರೆ. ಅಂಥವರನ್ನು ನಾವು ಪತ್ತೆ ಮಾಡಲೇಬೇಕಾಗಿದೆ. ಪ್ರತಿಯೊಬ್ಬರನ್ನು ತಲುಪುವುದು, ಜನರನ್ನು ದಾರಿ ತಪ್ಪಿಸುವುದು, ಸೈದ್ಧಾಂತಿಕ ವಿಚಾರಗಳನ್ನು ಬಿತ್ತುವುದು, ಪ್ರತಿಭಟನೆಯ ಹೊಸ ರೂಪ, ಮಾರ್ಗ ಮತ್ತು ಆಯಾಮಗಳನ್ನು ತಿಳಿಸುವುದೇ ಇವರ ದೈನಂದಿನ ಕಾಯಕವಾಗಿದೆ. ದೇಶವು ಇಂತಹ ಆಂದೋಲನ ಜೀವಿಗಳ ಬಗ್ಗೆ ಎಚ್ಚರದಿಂದಿರಬೇಕು. ಪ್ರತಿಭಟನೆ ನಡೆಸುವುದೇ ಅವರ ಬಲ ಮತ್ತು ಅಸ್ತ್ರ. ಅವರು ಅವರಿಗಾಗಿ ಏನನ್ನೂ ಮಾಡಿಕೊಳ್ಳುತ್ತಿಲ್ಲ. ಆದರೆ, ಕ್ರೆಡಿಟ್ ಪಡೆಯುವುದರಲ್ಲಿ ಅವರು ಸದಾ ಮುಂದಿರುತ್ತಾರೆ. ಅವರು ಒಂದು ರೀತಿಯಲ್ಲಿ ಪರೋಪಕಾರಿ ಜೀವಿಗಳು. ಇಲ್ಲಿ ಪ್ರತಿಯೊಬ್ಬರೂ ನನ್ನ ಹೇಳಿಕೆಗಳನ್ನು ಆನಂದಿಸುತ್ತಿದ್ದಾರೆ. ಇಂತಹ ಪರೋಪಕಾರಿ ಜೀವಿಗಳ ಚಳುವಳಿಗಳನ್ನು ನೀವು ರಾಜ್ಯಗಳಲ್ಲಿ ಆಡಳಿತ ನಡೆಸುವಾಗ ಅನುಭವಿಸಿದ್ದೀರಿ. ಅದೇ ರೀತಿ ನನಗೂ ಹೊಸ ಅನುಭವವಾಯಿತು. ದೇಶ ಪ್ರಗತಿಯತ್ತ ಸಾಗುತ್ತಿದೆ. ವಿದೇಶಿ ನೇರ ಹೂಡಿಕೆಯ ಒಳಹರಿವು ಹೆಚ್ಚಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಬಂದಿರುವ ಹೊಸ ಎಫ್'ಡಿಐನಿಂದ ದೇಶವನ್ನು ಸಂರಕ್ಷಿಸಬೇಕಿದೆ. ಹೊಸ ಎಫ್ಡಿಐ ಫಾರಿನ್ ಡಿಸ್ಟ್ರಕ್ಟಿವ್ ಐಡಿಯಾಲಜಿ (ವಿದೇಶಿ ವಿನಾಶಕಾರಿ ಪರಿಕಲ್ಪನೆ) ಯಂತಿದೆ. ಆದ್ದರಿಂದ ದೇಶವನ್ನು ರಕ್ಷಿಸಲು ನಾವು ಹೆಚ್ಚು ಜಾಗೃತರಾಗಬೇಕಿದೆ.

ಗೌರವಾನ್ವಿತ ಸಭಾಪತಿಗಳೆ,

ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಗ್ರಾಮೀಣ ಆರ್ಥಿಕತೆಯ ಪಾತ್ರ ನಿರ್ಣಾಯಕ. ಅದು ತನ್ನದೇ ಆದ ಸ್ವಂತ ಮೌಲ್ಯ ಹೊಂದಿದೆ. ಆತ್ಮನಿರ್ಭರ್ ಭಾರತ ಕಟ್ಟಲು ಗ್ರಾಮೀಣ ಆರ್ಥಿಕತೆ ಮಹತ್ವದ ಭಾಗವಾಗಿದೆ. ಆತ್ಮನಿರ್ಭರ್ ಭಾರತ್ ಯಾವುದೇ ಸರ್ಕಾರದ ಕಾರ್ಯಕ್ರಮವಲ್ಲ, ಅದು ಆಗಲೂ ಬಾರದು. ಅದು 130 ಕೋಟಿ ಜನರ ನಿರ್ಣಯವಾಗಬೇಕು. ಇದಕ್ಕೆ ನಾವು ಹೆಮ್ಮೆ ಪಡಬೇಕು. ಆದರೆ ಸಂದಿಗ್ಧತೆ ಇರಬಾರದು. ದೇಶದ ಪಿತಾಮಹಾ ಮಹಾತ್ಮ ಗಾಂಧೀಜಿ ಅವರು ಮಾರ್ಗವನ್ನು ನಮಗೆ ತೋರಿಸಿಕೊಟ್ಟಿದ್ದಾರೆ. ಗ್ರಾಮಗಳು ಮತ್ತು ನಗರಗಳ ನಡುವೆ ಇರುವ ಕಂದಕಗಳನ್ನು ಮುಚ್ಚಬೇಕಾದರೆ, ಆತ್ಮನಿರ್ಭರ್ ಕಡೆಗೆ ಮುಂದಡಿ ಇಡಬೇಕು. ನಿಟ್ಟಿನಲ್ಲಿ ನಾವು ಸಾಗಿದರೆ, ದೇಶದ ಸಾಮಾನ್ಯ ಮನುಷ್ಯನೂ ಬೆಳೆಯುತ್ತಾನೆ. ಆತನ ನಂಬಿಕೆಯೂ ಬೆಳೆಯುತ್ತದೆ ಎಂದು ನಾನು ಖಚಿತವಾಗಿ ಹೇಳುತ್ತೇನೆ. ನಾನು ಅದನ್ನು ದೃಢವಾಗಿ ನಂಬಿದ್ದೇನೆ.

ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಜಲ್ ಜೀವನ್ ಮಿಷನ್ ಯೋಜನೆ ಕುರಿತು ಚರ್ಚೆ ನಡೆದಿದೆ. ಅಲ್ಪಾವಧಿಯಲ್ಲಿ ದೇಶದ 3 ಕೋಟಿ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕ ನೀಡಲಾಗಿದೆ. ದೇಶದ ಆರ್ಥಿಕತೆಯಲ್ಲಿ ಪ್ರತಿಯೊಬ್ಬರೂ ಪಾಲುದಾರರಾದರೆ ಮಾತ್ರ ಸ್ವಾವಲಂಬನೆ ಸಾಧ್ಯ. ನನ್ನ ಸಹೋದರಿ ಸೋನಾಲ್ ತಮ್ಮ ಭಾಷಣದಲ್ಲಿ, ಸಹೋದರಿಯರು ಮತ್ತು ಹೆಣ್ಣು ಮಕ್ಕಳು ಸರಕಾರದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಪ್ರಸ್ತಾಪಿಸಿದ್ದಾರೆ.

ಕೊರೊನಾ ಕಾಲಾವಧಿಯಲ್ಲಿ ಪಡಿತರ ವಿತರಣೆಯೇ ಇರಲಿ, ಆರ್ಥಿಕ ನೆರವೇ ಇರಲಿ, ಉಚಿತ ಅನಿಲ ವಿತರಣೆಯೇ ಇರಲಿ, ಸರ್ಕಾರ ನಮ್ಮ ತಾಯಂದಿರು ಮತ್ತು ಸಹೋದರಿಯರ ಅಗತ್ಯಗಳನ್ನು ಪೂರೈಸಲು ಪ್ರತಿ ಹಂತದಲ್ಲೂ ಸಕಲ ಕ್ರಮಗಳನ್ನು ಕೈಗೊಂಡಿದೆ. ಸರ್ಕಾರದ ಜತೆ ಅವರು ಸಹ ಕೈಜೋಡಿಸಿದ್ದಾರೆ. ತಾಯಂದಿರು ಪ್ರತಿ ಕುಟುಂಬದಲ್ಲಿ ಹೆಚ್ಚಿನ ಕಾಳಜಿ ವಹಿಸಿ ಸಂಸಾರ ತೂಗಿಸಿದ್ದಾರೆ. ಕೊರೊನಾ ವಿರುದ್ಧ ಹೋರಾಟದಲ್ಲಿ ಅವರು ವಹಿಸಿದ ಪಾತ್ರ ಮಹತ್ವಪೂರ್ಣ. ಅವರಿಗೆ ನಾನು ಎಷ್ಟು ಧನ್ಯವಾದ ಸಲ್ಲಿಸಿದರೂ ಅದು ಕಡಿಮೆಯೇ. ಆತ್ಮನಿರ್ಭರ್ ಭಾರತ ನಿರ್ಮಾಣಕ್ಕೆ ಅವರು ಮಹತ್ವದ ಪಾತ್ರ ವಹಿಸುತ್ತಾರೆ ಎಂದು ನಾನು ನಂಬಿದ್ದೇನೆ. ಯುದ್ಧ ರಂಗದಲ್ಲಿ ನಮ್ಮ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಪ್ರತಿ ಕ್ಷೇತ್ರದಲ್ಲಿ ಕೆಲಸ ಮಾಡುವ ನಮ್ಮ ಹೆಣ್ಣು ಮಕ್ಕಳಿಗೆ ಸಮಾನ ವೇತನ ದೊರಕಿಸಲು ಮತ್ತು ಯಾವುದೇ ವಿವಾದಗಳನ್ನು ಪರಿಹರಿಸಲು ಹೊಸ ಕಾರ್ಮಿಕ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಮುದ್ರಾ ಯೋಜನೆ ಅಡಿ, ಉದ್ದಿಮೆ ಸ್ಥಾಪಿಸಬಯಸುವ ಹೆಣ್ಣು ಮಕ್ಕಳಿಗೆ 70% ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಜತೆಗೆ, ದೇಶದ 60 ಲಕ್ಷಕ್ಕಿಂತ ಹೆಚ್ಚಿನ ಸ್ವಸಹಾಯ ಗುಂಪುಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 7 ಕೋಟಿ ಮಹಿಳೆಯರಿಗೆ ಸ್ವಾವಲಂಬಿ ಭಾರತ ನಿರ್ಮಾಣ ಆಂದೋಲನ ಅಡಿ ಹೊಸ ಬಲ ನೀಡಲಾಗುತ್ತಿದೆ.

ಭಾರತದ ಯುವ ಶಕ್ತಿಯ ಉದ್ಧಾರಕ್ಕೆ ಸರ್ಕಾರ ವಿಶೇಷ ಒತ್ತು ನೀಡಿದೆ. ಅವರಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಲಾಗಿದೆ. ಅವರೇ ನಮ್ಮ ದೇಶದ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ ಆಗಿದ್ದಾರೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ನಮ್ಮ ಯುವ ಸಮುದಾಯಕ್ಕೆ ಹೊಸ ಅವಕಾಶಗಳನ್ನು ನೀಡಲು ಪ್ರಯತ್ನಿಸಿದೆ. ಹೊಸ ಶಿಕ್ಷಣ ನೀತಿಯ ಚರ್ಚೆಗೆ ಸಾಕಷ್ಟು ಸಮಯ ವಿನಿಯೋಗಿಸಿರುವುದು ನನಗೆ ಸಂತಸ ತಂದಿದೆ. ಹೊಸ ಶಿಕ್ಷಣ ನೀತಿಯಿಂದ ನಮ್ಮ ದೇಶದಲ್ಲಿ ಹೊಸ ಶಿಕ್ಷಣ ಪರಿಕಲ್ಪನೆಯ ಆಗಮನವಾಗಿದೆ ಎಂದು ನಾನು ನಂಬಿದ್ದೇನೆ ಮತ್ತು ಖಾತ್ರಿಪಡಿಸುತ್ತಿದ್ದೇನೆ. ಎಂಎಸ್ಎಂಇ (ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ) ವಲಯವು ಉದ್ಯೋಗ ಸೃಷ್ಟಿಗೆ ಅತ್ಯಧಿಕ ಅವಕಾಶಗಳನ್ನು ಪಡೆಯುತ್ತಿದೆ. ಕೊರೊನಾ ಕಾಲಾವಧಿಯಲ್ಲಿ ಪ್ರಕಟಿಸಲಾದ ಉತ್ತೇಜನಾ ಪ್ಯಾಕೇಜ್ನಲ್ಲಿ ಎಂಎಸ್ಎಂಇ ವಲಯಕ್ಕೆ ಪೂರ್ಣ ಗಮನ ನೀಡಲಾಗಿದೆ. ಇದರ ಫಲವಾಗಿ ನಮ್ಮ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ಆರ್ಥಿಕ ಚೇತರಿಕೆಯಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತಿವೆ. ಎಂಎಸ್ಎಂಇ ವಲಯವನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯಲಾಗುವುದು.

ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮಂತ್ರದೊಂದಿಗೆ ಆರಂಭವಾಗಿ ನಾವು ಮುಂದಡಿ ಇಡುತ್ತಿದ್ದೇವೆ. ಈಶಾನ್ಯ ರಾಜ್ಯಗಳು ಅಥವಾ ನಕ್ಸಲ್ಪೀಡಿತ ಪ್ರದೇಶಗಳಲ್ಲಿ ಸಮಸ್ಯೆಗಳು ಹಂತ ಹಂತವಾಗಿ ತಗ್ಗುತ್ತಿರುವ ಪರಿಣಾಮ ಅವಕಾಶಗಳು ಹೆಚ್ಚಾಗುತ್ತಿವೆ. ಭವ್ಯ ಭಾರತದ ಭವಿಷ್ಯದಲ್ಲಿ ಈಶಾನ್ಯ ರಾಜ್ಯಗಳು ಬಹುದೊಡ್ಡ ಪಾತ್ರ ವಹಿಸಲಿವೆ.

ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರ ಮಾತುಗಳನ್ನು ಆಲಿಸಿದ್ದೇನೆ. ಸೌಮ್ಯವಾಗಿ, ಮೃದುವಾಗಿ ಮಾತನಾಡುವುದು ಅವರ ವಿಶಿಷ್ಟ ಲಕ್ಷಣ. ಒರಟು ಮತ್ತು ಕೆಟ್ಟ ಪದಗಳು ಅವರ ಬಳಿ ಸುಳಿದಾಡುವುದೇ ಇಲ್ಲ. ಎಲ್ಲಾ ಸಂಸದರು ಅವರಿಂದ ಇದನ್ನು ಕಲಿಯುವ ಅಗತ್ಯವಿದೆ. ನಾನು ಅವರನ್ನು ತುಂಬಾ ಗೌರವಿಸುತ್ತೇನೆ. ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗೆ ಚುನಾವಣೆ ಶಾಂತಿಯುತವಾಗಿ ಜರುಗಿದ್ದಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ನನ್ನ ಹೃದಯದಲ್ಲಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನವಿದೆ ಎಂದು ಅವರು ನನಗೆ ಹೇಳಿದ್ದಾರೆ. ಅದು ಸ್ವಾಭಾವಿಕವೂ ಹೌದು. ಇಡೀ ದೇಶದ ಹೃದಯಗಳಲ್ಲಿ ಅದೇ ಚೈತನ್ಯ ಮನೆಮಾಡಿದೆ. ಶಾಂತಿಯುತ ಚುನಾವಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಆಜಾದ್ ಅವರ ಅಭಿನಂದನೆಗೆ ನಾನು ಕೃತಜ್ಞನಾಗಿದ್ದೇನೆ. ಆದರೆ ನೀವು ನನ್ನನ್ನು ಹೊಗಳಿದ್ದೀರಿ ಎಂದು ಭಯವಾಗುತ್ತಿದೆ. ಆದರೆ ನಿಮ್ಮ ಪಕ್ಷವೂ ಇದನ್ನು ಸಕಾರಾತ್ಮಕ ಸ್ಫೂರ್ತಿಯಿಂದ ಸ್ವೀಕರಿಸಿದೆ ಎಂದು ನಂಬಿದ್ದೇನೆ.

ಗೌರವಾನ್ವಿತ ಸಭಾಪತಿಗಳೆ,

ಕೊರೊನಾ ಕಾಲಾವಧಿಯಲ್ಲಿ ಗಡಿ ಪ್ರದೇಶದಲ್ಲಿ ಸವಾಲಾಕುವ ಪ್ರಯತ್ನಗಳು ನಡೆದವು. ನಮ್ಮ ಕೆಚ್ಚೆದೆಯ ಸೈನಿಕರು ತಮ್ಮ ಧೈರ್ಯ ಪ್ರದರ್ಶಿಸಿ, ಎದುರಾಳಿಗಳಿಗೆ ತಕ್ಕ ಪ್ರತ್ಯುತ್ತರ ನೀಡಿದರು. ಇದಕ್ಕೆ ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುತ್ತಾನೆ. ಸಂಕಷ್ಟ ಸನ್ನಿವೇಶದಲ್ಲೂ ನಮ್ಮ ಯೋಧರು ಗಡಿಯನ್ನು ಸಂರಕ್ಷಿಸಿದ್ದಾರೆ. ನಮ್ಮ ಯೋಧರ ಹೋರಾಟಗಳನ್ನು ಶ್ಲಾಘಿಸಿದ ನನ್ನ ಹಲವಾರು ಸಹೋದ್ಯೋಗಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ವಾಸ್ತವ ಗಡಿ ರೇಖೆಯ ಪರಿಸ್ಥಿಗಳ ಬಗ್ಗೆ ದೃಢ ನಿಲುವು ಹೊಂದಿದ್ದೇವೆ.  ಎಲ್ಎಸಿ ಮೇಲೆ ಸದಾ ನಿಗಾ ಇಟ್ಟಿದ್ದೇವೆ. ಗಡಿ ಮೂಲಸೌಕರ್ಯ ಮತ್ತು ಗಡಿ ಭದ್ರತೆ ವಿಚಾರದಲ್ಲಿ ನಾವು ಹೋಂದಿರುವ ಬದ್ಧತೆಯಲ್ಲಿ ಸಡಿಲಿಕೆ ಮಾಡುವ ಯಾವುದೇ ಪ್ರಶ್ನೆ ಇಲ್ಲ. ನಮ್ಮ ಪರಿಕಲ್ಪನೆಗಳು ಮತ್ತು ಉದ್ದೇಶಗಳ ಅರಿವಿರುವವರು ಎಂದಿಗೂ ನಮ್ಮನ್ನು ಪ್ರಶ್ನೆ ಮಾಡಬಾರದು. ನಾವು ಬದ್ಧತೆಯುಳ್ಳ ಜನರು ಎಂಬುದು ಅವರಿಗೂ ಗೊತ್ತಿದೆ.

ಗೌರವಾನ್ವಿತ ಸಭಾಪತಿಗಳೆ,

ಸದನದಲ್ಲಿ ಪ್ರಶಂಸನೀಯ ಚರ್ಚೆಗೆ ಅವಕಾಶ ಕಲ್ಪಿಸಿಕೊಟ್ಟ ಎಲ್ಲ ಸದಸ್ಯರಿಗೂ ನಾನು ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇನೆ. ಅಂತಿಮವಾಗಿ, ಮಂತ್ರವೊಂದನ್ನು ಉಲ್ಲೇಖಿಸುವ ಮೂಲಕ ನನ್ನ ಭಾಷಣವನ್ನು ಮುಗಿಸುತ್ತೇನೆ. ವೇದಗಳಿಂದ ನಾವು ಬಹುದೊಡ್ಡ ವಿಚಾರಗಳನ್ನು ಪಡೆದಿದ್ದೇವೆ. ಮಂತ್ರವು 130 ಕೋಟಿ ದೇಶವಾಸಿಗಳಿಗೆ ಸ್ಫೂರ್ತಿಯಾಗಲಿದೆ. ವೇದದ ಮಂತ್ರವು ಹೀಗಿದೆ….

"अयुतो अहं अयुतो मे आत्मा अयुतं मे, अयुतं चक्षु, अयुतं श्रोत्रम|"

ಇಲ್ಲಿ ನಾನೊಬ್ಬನೇ ಅಲ್ಲ, ನಾನು ಏಕಾಂಗಿ ಅಲ್ಲ, ಕೋಟ್ಯಂತರ ಜನರ ಅನುಭವವನ್ನು ನಾನು ಕಾಣುತ್ತಿದ್ದೇನೆ. ಹಾಗಾಗಿ ನನ್ನ ಆಧ್ಯಾತ್ಮಿಕ ಶಕ್ತಿ ಕೋಟ್ಯಂತರ ಜನರದ್ದಾಗಿದೆ. ಲಕ್ಷಾಂತರ ಜನರ ದೃಷ್ಟಿಕೋನ (ಮುನ್ನೋಟ) ನನ್ನಲ್ಲಿದೆ. ಅದನ್ನು ನಾನು ಆಲಿಸುವ ಕರ್ಮ (ಕಾರ್ಯಶಕ್ತಿಯನ್ನು ಸಹ ಹೊಂದಿದ್ದೇನೆ.

ಗೌರವಾನ್ವಿತ ಸಭಾಪತಿಗಳೆ,

ವೇದದ ಸ್ಫೂರ್ತಿ ಮತ್ತು ಪ್ರಜ್ಞೆಯೊಂದಿಗೆ 130 ಕೋಟಿ ಭಾರತೀಯರು ಎಲ್ಲರೊಂದಿಗೆ ಮುಂದಡಿ ಇಡುತ್ತಿದ್ದಾರೆ. ಇಂದಿನ 130 ಕೋಟಿ ದೇಶವಾಸಿಗಳ ಕನಸೇ ಭಾರತದ ನಿಜವಾದ ಕನಸಾಗಿದೆ. 130 ಕೋಟಿ ಭಾರತೀಯರ ಆಕಾಂಕ್ಷೆಗಳೇ ದೇಶದ ಆಕಾಂಕ್ಷೆಯಾಗಿದೆ. ಇಂದಿನ 130 ಕೋಟಿ ಜನರ ಭವಿಷ್ಯವೇ ಭಾರತದ ಉಜ್ವಲ ಭವಿಷ್ಯಕ್ಕೆ ಬುನಾದಿಯಾಗಿದೆ. ಆದ್ದರಿಂದ ದೇಶವು ನೀತಿಗಳನ್ನು ರೂಪಿಸುವುದು, ಪ್ರಯತ್ನಗಳನ್ನು ನಡೆಸುವುದು ತಕ್ಷಣದ ಲಾಭನಷ್ಟಗಳಿಗೆ ಅಲ್ಲ, ಭವಿಷ್ಯದ ದಿನಗಳಿಗಾಗಿ. ದೇಶವು 2047ರಲ್ಲಿ ಸ್ವಾತಂತ್ರ್ಯೋತ್ಸವದ ಶತಮಾನ ಸಂಭ್ರಮ ಆಚರಿಸುವ ವೇಳೆಗೆ, ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಕನಸುಗಳಿಗೆ ಭದ್ರ ಬುನಾದಿ ಹಾಕಲಾಗುತ್ತಿದೆ. ಕೆಲಸವನ್ನು ಮಾಡೇ ತೀರುತ್ತೇವೆ ಎಂಬ ವಿಶ್ವಾಸ ತಮಗಿದೆ ಎಂದರು.

ಗೌರವಾನ್ವಿತ ರಾಷ್ಟ್ರಪತಿ ಅವರ ಅದ್ಭುತ ಭಾಷಣಕ್ಕೆ ನಾನು ಮತ್ತೊಮ್ಮೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅವರ ಭಾಷಣದ ಮೇಲೆ ನಡೆದ ಚರ್ಚೆ ಉತ್ತಮವಾಗಿತ್ತು. ಕಲಾಪದ ಪರಿಸರವೂ ಪೂರಕವಾಗಿತ್ತು ಎಂಬ ಸತ್ಯವನ್ನು ಹೇಳಲು ನಾನು ಇಷ್ಟಪಡುತ್ತೇನೆ. ಸದನದಲ್ಲಿ ಚರ್ಚೆಯ ವೇಳೆ ನಡೆದ ಎಲ್ಲಾ ವಿದ್ಯಮಾನಗಳನ್ನು ನಾನು ಆನಂದಿಸಿದ್ದೇನೆ. ಅದು ಎಷ್ಟರಮಟ್ಟಿಗೆ ಅಂದರೆ, ನೀವು ಸಹ ಆನಂದಿಸಿದ್ದೀರಿ. ಕೊರೊನಾದಿಂದಾಗಿ ನೀವು ಎಲ್ಲಿಗೂ ಭೇಟಿ ನೀಡಲಾಗದೆ, ಮನೆಯಲ್ಲೇ ಬಂಧಿಯಾಗಿದ್ದಿರಿ. ಇದರಿಂದಾಗಿ ನೀವು ಹಲವು ಒತ್ತಡದ ಸನ್ನಿವೇಶಗಳನ್ನು ಎದುರಿಸಿದ್ದಿರಿ. ಇದರಿಂದ ನೀವಿಲ್ಲಿ ನಿಮ್ಮ ಮಾತುಗಳಿಂದ ಕೋಪವನ್ನು ಹೊರಹಾಕಿದ್ದೀರಿ. ಹಾಗಾಗಿ ಮನಸ್ಸು ಹಗುರವಾಗಿದೆ. ಈಗ ಮನೆಯಲ್ಲಿ ನೀವು ಎಲ್ಲರೊಡನೆ ಸಂತಸದಿಂದ ಕಾಲ ಕಳೆಯಬಹುದು. ನಿಮಗಿಲ್ಲಿ ಸಿಕ್ಕ ಆನಂದಕ್ಕೆ ನಾನೂ ಕಾರಣನಾದೆ ಎನ್ನುವುದೇ ನನ್ನ ಭಾಗ್ಯ ಎಂದುಕೊಳ್ಳುತ್ತೇನೆ. ಇದೇ ಸಂತೋಷವನ್ನು ಸದಾ ಅನುಭವಿಸಿ ಎಂದು ಹಾರೈಸುತ್ತೇನೆ. ಚರ್ಚೆ ಮುಂದುವರಿಸಿ, ಸದನವನ್ನು ಜೀವಂತವಾಗಿಡಿ. ಮೋದಿ ಇದ್ದಾರೆ, ಹಾಗಾಗಿ, ಅವಕಾಶವನ್ನು ಆನಂದಿಸುತ್ತಿರಿ.

ಧನ್ಯವಾದಗಳು.

***



(Release ID: 1698054) Visitor Counter : 289