ಪ್ರಧಾನ ಮಂತ್ರಿಯವರ ಕಛೇರಿ

ರಾಷ್ಟ್ರವ್ಯಾಪಿ ಕೋವಿಡ್-19 ಲಸಿಕಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ


ಕೊರೊನಾಗೆ ಭಾರತದ ಪ್ರತಿಕ್ರಿಯೆ ಆತ್ಮ ವಿಶ್ವಾಸ ಮತ್ತು ಸ್ವಾವಲಂಬನೆ

ಇಷ್ಟು ಪ್ರಮಾಣದ ಲಸಿಕಾ ಅಭಿಯಾನವನ್ನು ಜಗತ್ತು ಹಿಂದೆಂದೂ ನೋಡಿಲ್ಲ

ಕೊರೊನಾಗೆ ಭಾರತದ ಪ್ರತಿಕ್ರಿಯೆ ಜಾಗತಿಕವಾಗಿ ಮೆಚ್ಚುಗೆ ಪಡೆದಿದೆ: ಪ್ರಧಾನಿ

ಮುಂಚೂಣಿಯ ಕೊರೊನಾ ಯೋಧರಿಗೆ ಪ್ರಧಾನಿ ಗೌರವ ನಮನ

Posted On: 16 JAN 2021 12:19PM by PIB Bengaluru

ರಾಷ್ಟ್ರವ್ಯಾಪಿ ಕೋವಿಡ್-19 ಲಸಿಕಾ ಅಭಿಯಾನಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಇದು ದೇಶದ ಉದ್ದಗಲಕ್ಕೂ ನಡೆಯುತ್ತಿರುವ ವಿಶ್ವದ ಅತಿದೊಡ್ಡ ಲಸಿಕಾ ಕಾರ್ಯಕ್ರಮವಾಗಿದೆ. ಅಭಿಯಾನ ಚಾಲನೆಯ ಸಂದರ್ಭದಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 3006 ಲಸಿಕೆ ನೀಡುವ ಸ್ಥಳಗಳನ್ನು ವರ್ಚುವಲ್ ಆಗಿ ಸಂಪರ್ಕಿಸಲಾಯಿತು.

ಲಸಿಕೆಗಳ ಅಭಿವೃದ್ಧಿಗೆ ಸಂಬಂಧಿಸಿದ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುವ ಮೂಲಕ ಪ್ರಧಾನಿಯವರು ತಮ್ಮ ಭಾಷಣ ಪ್ರಾರಂಭಿಸಿದರು. ಸಾಮಾನ್ಯವಾಗಿ ಲಸಿಕೆ ತಯಾರಿಸಲು ವರ್ಷಗಟ್ಟಲೆ ಸಮಯ ಬೇಕಾಗುತ್ತದೆ ಆದರೆ ಇಷ್ಟು ಕಡಿಮೆ ಸಮಯದಲ್ಲಿ, ಭಾರತದಲ್ಲಿ ಎರಡು ಲಸಿಕೆಗಳನ್ನು ತಯಾರಿಸಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು. ಲಸಿಕೆಯ ಎರಡು ಡೋಸ್‌ ತೆಗೆದುಕೊಳ್ಳುವುದನ್ನು ತಪ್ಪಿಸದಂತೆ ಪ್ರಧಾನಿ ಜನರಿಗೆ ಎಚ್ಚರಿಕೆ ನೀಡಿದರು. ಡೋಸೇಜ್‌ಗಳ ನಡುವೆ ಒಂದು ತಿಂಗಳ ಅಂತರವಿರುತ್ತದೆ. ಲಸಿಕೆ ಪಡೆದ ನಂತರವೂ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಸಡಿಲಿಸಬಾರದು ಎಂದು ಜನರಿಗೆ ಮನವಿ ಮಾಡಿದ ಅವರು, ಎರಡನೇ ಡೋಸ್ ಲಸಿಕೆ ತೆಗೆದುಕೊಂಡ ಎರಡು ವಾರಗಳ ನಂತರ ಮಾನವ ದೇಹವು ಕೊರೊನಾ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸುತ್ತದೆ ಎಂದರು.

ಮೊದಲ ಸುತ್ತಿನಲ್ಲಿಯೇ ವಿಶ್ವದ ಕನಿಷ್ಠ 100 ದೇಶಗಳ ಜನಸಂಖ್ಯೆಗಿಂತ ಹೆಚ್ಚಿನ 3 ಕೋಟಿ ಜನರಿಗೆ ಲಸಿಕೆ ನೀಡಲಾಗುತ್ತಿದೆ ಎಂದು ತಿಳಿಸುವ ಮೂಲಕ ಪ್ರಧಾನ ಮಂತ್ರಿಯವರು ಲಸಿಕೆ ನೀಡಿಕೆಯ ಅಸಾಧಾರಣತೆಯನ್ನು ವಿವರಿಸಿದರು. ವೃದ್ಧರು ಮತ್ತು ಗಂಭೀರ ಸಹ-ಅಸ್ವಸ್ಥತೆ ಹೊಂದಿರುವ ಜನರಿಗೆ ಲಸಿಕೆ ಹಾಕುವ ಎರಡನೇ ಸುತ್ತಿನಲ್ಲಿ ಇದನ್ನು 30 ಕೋಟಿಯವರೆಗೆ ಹೆಚ್ಚಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ಭಾರತ, ಅಮೆರಿಕಾ ಮತ್ತು ಚೀನಾ ಮಾತ್ರ 30 ಕೋಟಿಗಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶಗಳಾಗಿವೆ ಎಂದು ಅವರು ಹೇಳಿದರು. 

ಜನರು ಲಸಿಕೆಗಳ ಬಗೆಗಿನ ವದಂತಿಗಳು ಮತ್ತು ಅಪಪ್ರಚಾರಕ್ಕೆ ಕಿವಿಗೊಡದಂತೆ ಪ್ರಧಾನಿ ಮನವಿ ಮಾಡಿದರು. ಭಾರತೀಯ ಲಸಿಕೆ ವಿಜ್ಞಾನಿಗಳು, ವೈದ್ಯಕೀಯ ವ್ಯವಸ್ಥೆ, ಭಾರತೀಯ ಪ್ರಕ್ರಿಯೆ ಮತ್ತು ಸಾಂಸ್ಥಿಕ ಕಾರ್ಯವಿಧಾನವು ಜಾಗತಿಕವಾಗಿ ವಿಶ್ವಾಸಾರ್ಹವಾಗಿದೆ ಮತ್ತು ಈ ವಿಶ್ವಾಸವನ್ನು ಸ್ಥಿರವಾದ ದಾಖಲೆಯೊಂದಿಗೆ ಗಳಿಸಲಾಗಿದೆ ಎಮದು ತಿಳಿಸಿದರು.

ಕೊರೊನಾಗೆ ಭಾರತೀಯ ಪ್ರತಿಕ್ರಿಯೆಯು ಆತ್ಮ ವಿಶ್ವಾಸ ಮತ್ತು ಸ್ವಾವಲಂಬನೆಯಾಗಿತ್ತು ಎಂದು ಶ್ರೀ ಮೋದಿ ಬಣ್ಣಿಸಿದರು. ಪ್ರತಿಯೊಬ್ಬ ಭಾರತೀಯನಲ್ಲೂ ವಿಶ್ವಾಸವು ಕುಂದಲಿಲ್ಲ ಎಂದು ಅವರು ಹೇಳಿದರು. ತಮ್ಮ ಪ್ರಾಣವನ್ನೂ ಲೆಕ್ಕಿಸದೇ ವೈದ್ಯರು, ದಾದಿಯರು, ಅರೆ ವೈದ್ಯಕೀಯ ಸಿಬ್ಬಂದಿ, ಆಂಬ್ಯುಲೆನ್ಸ್ ಚಾಲಕರು, ಆಶಾ ಕಾರ್ಯಕರ್ತರು, ಪೌರ ಕಾರ್ಮಿಕರು, ಪೊಲೀಸರು ಮತ್ತಿತರ ಮುಂಚೂಣಿ ಕಾರ್ಯಕರ್ತರ ಕೊಡುಗೆಯನ್ನು ಪ್ರಧಾನಿ ಶ್ಲಾಘಿಸಿದರು. ಅವರಲ್ಲಿ ಕೆಲವರು ವೈರಾಣು ವಿರುದ್ಧದ ಹೋರಾಟದಲ್ಲಿ ಪ್ರಾಣ ಕಳೆದುಕೊಂಡರು. ಮುಂಚೂಣಿಯ ಯೋಧರು ನಿರಾಶೆ ಮತ್ತು ಭಯದ ವಾತಾವರಣದಲ್ಲಿ ಭರವಸೆ ಮೂಡಿಸಿದರು. ಇಂದು ಅವರಿಗೆ ಮೊದಲು ಲಸಿಕೆ ಹಾಕುವ ಮೂಲಕ ದೇಶವು ಅವರ ಕೊಡುಗೆಯನ್ನು ಕೃತಜ್ಞತೆಯಿಂದ ಸ್ಮರಿಸುತ್ತಿದೆ ಎಂದು ಶ್ರೀ ಮೋದಿ ಹೇಳಿದರು.

ಕೊರೊನಾ ಬಿಕ್ಕಟ್ಟಿನ ಆರಂಭಿಕ ದಿನಗಳನ್ನು ನೆನಪಿಸಿಕೊಂಡ ಪ್ರಧಾನಿ, ಭಾರತವು ಜಾಗರೂಕತೆಯನ್ನು ತೋರಿಸಿತು ಮತ್ತು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಂಡಿತು. 2020 ರ ಜನವರಿ 30 ರಂದು ಪತ್ತೆಯಾದ ಮೊದಲ ಪ್ರಕರಣಕ್ಕೆ ಎರಡು ವಾರಗಳ ಮೊದಲೇ ಭಾರತ ಉನ್ನತ ಮಟ್ಟದ ಸಮಿತಿಯನ್ನು ರಚಿಸಿತ್ತು. ಇಂದಿನಿಂದ ನಿಖರವಾಗಿ ಒಂದು ವರ್ಷದ ಹಿಂದೆ ಭಾರತ ಸೂಕ್ತ ಕಣ್ಗಾವಲು ಪ್ರಾರಂಭಿಸಿತ್ತು. 17 ಜನವರಿ 2020 ರಂದು ಭಾರತವು ತನ್ನ ಮೊದಲ ಮಾರ್ಗಸೂಚಿಯನ್ನು ನೀಡಿತು ಮತ್ತು ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಪರೀಕ್ಷಿಸಲು ಪ್ರಾರಂಭಿಸಿದ ಮೊದಲ ರಾಷ್ಟ್ರಗಳಲ್ಲಿ ಭಾರತವೂ ಒಂದು ಎಂದು ಪ್ರಧಾನಿ ತಿಳಿಸಿದರು.
ಜನತಾ ಕರ್ಫ್ಯೂ ಸಮಯದಲ್ಲಿ ತೋರಿದ ಶಿಸ್ತು ಮತ್ತು ತಾಳ್ಮೆಯ ಬಗ್ಗೆ ಪ್ರಧಾನಮಂತ್ರಿ ದೇಶವಾಸಿಗಳನ್ನು ಅಭಿನಂದಿಸಿದರು. ಈ ಕ್ರಮವು ದೇಶವನ್ನು ಲಾಕ್ ಡೌನ್ ಮಾಡಲು ಮಾನಸಿಕವಾಗಿ ಸಿದ್ಧಪಡಿಸಿತು ಎಂದರು. ಚಪ್ಪಾಳೆ ಮತ್ತು ದೀಪ ಹಚ್ಚುವ ಅಭಿಯಾನಗಳೊಂದಿಗೆ ದೇಶದ ಮನೋಸ್ಥೈರ್ಯವನ್ನು ಹೆಚ್ಚಿಸಲಾಯಿತು ಎಂದು ಪ್ರಧಾನಿ ಹೇಳಿದರು.

ವಿದೇಶದಲ್ಲಿ ಸಿಲುಕಿದ್ದ ಭಾರತೀಯರ ಸ್ಥಳಾಂತರದ ಬಗ್ಗೆಯೂ ಶ್ರೀ ಮೋದಿ ಮಾತನಾಡಿದರು. ಪ್ರಪಂಚದ ಅನೇಕ ದೇಶಗಳು ಚೀನಾದಲ್ಲಿ ಸಿಲುಕಿಕೊಂಡಿದ್ದ ತಮ್ಮ ನಾಗರಿಕರನ್ನು ಅಲ್ಲಿಯೇ ಬಿಟ್ಟಿದ್ದ ಸಂದರ್ಭದಲ್ಲಿ, ಭಾರತವು ಭಾರತೀಯರು ಮಾತ್ರವಲ್ಲದೆ ಇತರ ದೇಶಗಳ ನಾಗರಿಕರನ್ನು ಸಹ ಸ್ಥಳಾಂತರಿಸಿತು. ಸ್ಥಳಾಂತರಗೊಳ್ಳುವ ಭಾರತೀಯರನ್ನು ಪರೀಕ್ಷಿಸಲು ಕಷ್ಟಪಡುತ್ತಿದ್ದ ದೇಶಕ್ಕೆ ಸಂಪೂರ್ಣ ಪ್ರಯೋಗಾಲಯವನ್ನೇ ಕಳುಹಿಸಿದ್ದನ್ನು ಅವರು ನೆನಪಿಸಿಕೊಂಡರು.

ಬಿಕ್ಕಟ್ಟಿಗೆ ಭಾರತ ತೋರಿದ ಪ್ರತಿಕ್ರಿಯೆಗೆ ಜಾಗತಿಕವಾಗಿ ಮೆಚ್ಚುಗೆ ಸಿಕ್ಕಿದೆ ಎಂದು ಪ್ರಧಾನಿ ಹೇಳಿದರು. ಕೇಂದ್ರ, ರಾಜ್ಯಗಳು, ಸ್ಥಳೀಯ ಸರ್ಕಾರಗಳು, ಸರ್ಕಾರಿ ಕಚೇರಿಗಳು, ಸಾಮಾಜಿಕ ಸಂಘಟನೆಗಳ ಸಮಗ್ರ ಮತ್ತು ಏಕೀಕೃತ ಪ್ರತಿಕ್ರಿಯೆಗೆ ಇದೊಂದು ಉದಾಹರಣೆಯಾಗಿದೆ ಎಂದು ಪ್ರಧಾನಿ ತಿಳಿಸಿದರು.

“ಭಾರತವು ವಿಶ್ವದ ಅತಿ ದೊಡ್ಡ ಲಸಿಕಾ ಅಭಿಯಾನವನ್ನು ಪ್ರಾರಂಭಿಸಿದೆ. ಇದೊಂದು ಹೆಮ್ಮೆಯ ದಿನ, ನಮ್ಮ ವಿಜ್ಞಾನಿಗಳ ಪರಿಣತಿ ಮತ್ತು ನಮ್ಮ ವೈದ್ಯಕೀಯ ಸಮುದಾಯ, ಶುಶ್ರೂಷಾ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಮತ್ತು ಪೌರ ಕಾರ್ಮಿಕರ ಕಠಿಣ ಪರಿಶ್ರಮದ ಆಚರಣೆಯಾಗಿದೆ. 

सर्वेभवन्तुसुखिनःसर्वेसन्तुनिरामया।
सर्वेभद्राणिपश्यन्तुमाकश्चित्दुःखभाग्भवेत्।। 

ಎಂಬ ಪ್ರಾರ್ಥನೆಯಂತೆ, ಎಲ್ಲರೂ ಆರೋಗ್ಯವಾಗಿರಲಿ, ಅನಾರೋಗ್ಯದಿಂದ ಮುಕ್ತರಾಗಲಿ. ಆರೋಗ್ಯ, ಸಂತೋಷ ಲಭಿಸಲಿ ಮತ್ತು ದುಃಖದಿಂದ ಮುಕ್ತಿ ಪಡೆಯಲಿ” ಎಂದು ಭಾಷಣದ ನಂತರ ಪ್ರಧಾನಿಯವರು ಟ್ವೀಟ್ ಮಾಡಿದ್ದಾರೆ.

***



(Release ID: 1689121) Visitor Counter : 363