ಪ್ರಧಾನ ಮಂತ್ರಿಯವರ ಕಛೇರಿ

ಕೆನಡಾದಲ್ಲಿ ಜರುಗಿದ ಇನ್ವೆಸ್ಟ್ ಇಂಡಿಯಾ ಸಮಾವೇಶ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಪ್ರಾಸ್ತಾವಿಕ ಭಾಷಣ

Posted On: 08 OCT 2020 8:00PM by PIB Bengaluru

ನನ್ನ ನೆಚ್ಚಿನ ಮಿತ್ರರೇ, ನಮಸ್ಕಾರ

ಮೊದಲಿಗೆ ನಾನು ವೇದಿಕೆಯನ್ನು ಸೃಷ್ಟಿಸಿದ್ದಕ್ಕಾಗಿ ಶ್ರೀ ಪ್ರೇಮ್ ವತ್ಸಾ ಅವರನ್ನು ಅಭಿನಂದಿಸುತ್ತೇನೆ. ಕೆನಡಾದ ಹಲವು ಹೂಡಿಕೆದಾರರು ಮತ್ತು ವಾಣಿಜ್ಯೋದ್ಯಮಿಗಳನ್ನು ನೋಡುತ್ತಿರುವುದಕ್ಕೆ ಇಲ್ಲಿ ಸಂತಸವಾಗುತ್ತಿದೆ. ಭಾರತದಲ್ಲಿ ಇರುವ ವಾಣಿಜ್ಯ ಮತ್ತು ಹೂಡಿಕೆಗೆ ವಿಫುಲ ಅವಕಾಶಗಳ ಬಗ್ಗೆ ತಿಳಿಯಲು ನೀವು ಇಲ್ಲಿ ಸೇರಿರುವುದನ್ನು ಕಂಡು ನನಗೆ ಹೆಮ್ಮೆಯಾಗುತ್ತಿದೆ.

ಮಿತ್ರರೇ, ಇಲ್ಲಿ ನೆರೆದಿರುವ ಜನರಿಗೆಲ್ಲಾ ಒಂದು ಸಾಮಾನ್ಯ ಸಂಗತಿ ತಿಳಿದಿರುತ್ತದೆ. ಇಲ್ಲಿರುವವರೆಲ್ಲಾ ಹೂಡಿಕೆ ನಿರ್ಧಾರಗಳನ್ನು ಕೈಗೊಳ್ಳವಂತಹವರು. ನಿರ್ಧಾರಗಳು ಕೆಲವೊಮ್ಮೆ ಸಂಕಷ್ಟಗಳನ್ನು ಅಂದಾಜು ಮಾಡಿ ಕೈಗೊಳ್ಳಲಾಗುವುದು. ನಿರ್ಧಾರಗಳನ್ನು ಕೈಗೊಳ್ಳುವಾಗ ಹೂಡಿಕೆಗೆ ಯಾವ ರೀತಿಯ ಲಾಭ ಬರುತ್ತದೆ ಎಂಬುದನ್ನು ಸಹ ಅಂದಾಜಿಸಲಾಗುವುದು.

ನಾನು ನಿಮ್ಮನ್ನು ಕೇಳಬಯಸುವುದೆಂದರೆ, ದೇಶದಲ್ಲಿ ಹೂಡಿಕೆಗೂ ಮುನ್ನ ನೀವು ಏನು ಯೋಚನೆ ಮಾಡುತ್ತಿದ್ದೀರಿ ? ದೇಶದಲ್ಲಿ ಕ್ರಿಯಾಶೀಲ ಪ್ರಜಾಪ್ರಭುತ್ವ ಇದೆಯೇ ? ದೇಶದಲ್ಲಿ ರಾಜಕೀಯ ಸ್ಥಿರತೆ ಇದೆಯೇ ? ದೇಶದಲ್ಲಿ ಹೂಡಿಕೆ ಮತ್ತು ವಾಣಿಜ್ಯಸ್ನೇಹಿ ನೀತಿಗಳಿವೆಯೇ ? ದೇಶದ ಆಡಳಿತದಲ್ಲಿ ಪಾರದರ್ಶಕತೆ ಇದೆಯೇ? ದೇಶದಲ್ಲಿ ಪ್ರತಿಭಾನ್ವಿತ ಕೌಶಲ್ಯಹೊಂದಿದ ಸಂಪನ್ಮೂಲವಿದೆಯೇ ? ದೇಶದಲ್ಲಿ ಬೃಹತ್ ಮಾರುಕಟ್ಟೆ ಇದೆಯೇ ? ಇಂತಹ ಹಲವು ಪ್ರಶ್ನೆಗಳನ್ನು ನೀವು ಕೇಳಬಹುದು.

ಎಲ್ಲ ಪ್ರಶ್ನೆಗಳಿಗೆ ನಿರ್ವಿವಾದಿತ ಉತ್ತರ ಒಂದೆ ಅದೆಂದರೆ, ಭಾರತದಲ್ಲಿ ಇವೆಲ್ಲವೂ ಇವೆ.

ಸಾಂಸ್ಥಿಕ ಹೂಡಿಕೆದಾರರು, ಉತ್ಪಾದಕರು, ನಾವಿನ್ಯ ಪೂರಕ ವ್ಯವಸ್ಥೆಗಳ ಬೆಂಬಲದಾರರು ಮತ್ತು ಮೂಲಸೌಕರ್ಯ ಕಂಪನಿಗಳು ಸೇರಿ ಪ್ರತಿಯೊಬ್ಬರಿಗೂ ಇಲ್ಲಿ ಅವಕಾಶಗಳು ಲಭ್ಯವಿದೆಇಲ್ಲಿ ಬಂಡವಾಳ ಹೂಡಿಕೆಗೆ ಅವಕಾಶವಿದೆ ಮತ್ತು ಘಟಕಗಳ ಸ್ಥಾಪನೆಗೆ ಹಾಗೂ ವಹಿವಾಟು ನಡೆಸಲು ಅವಕಾಶಗಳಿವೆ. ನಮ್ಮ ಖಾಸಗಿ ವಲಯ ಮತ್ತು ಸರ್ಕಾರದ ಜೊತೆ ಪಾಲುದಾರಿಕೆ ಮಾಡಿಕೊಳ್ಳಲು ಅವಕಾಶವಿದೆ. ಇಲ್ಲಿ ಕಲಿಯಲು ಮತ್ತು ಗಳಿಸಲು ಎರಡಕ್ಕೂ ಅವಕಾಶವಿದೆ. ಅಲ್ಲದೆ ಮುನ್ನಡೆಸಲು ಮಾತ್ರವಲ್ಲ ಪ್ರಗತಿ ಹೊಂದಲೂ ಸಹ ಅವಕಾಶಗಳಿವೆ.

ಮಿತ್ರರೇ, ಕೋವಿಡ್ ನಂತರದ ಜಗತ್ತಿನಲ್ಲಿ ನೀವು ಹಲವು ಬಗೆಯ ತೊಂದರೆಗಳ ಬಗ್ಗೆ ಕೇಳಿರಬಹುದು. ಅವುಗಳೆಂದರೆ ಉತ್ಪಾದನಾ ಸಮಸ್ಯೆಗಳು, ಪೂರೈಕೆ ಸರಣಿ ಸಮಸ್ಯೆಗಳು, ಪಿಪಿಇ ಸಮಸ್ಯೆಗಳು ಇತ್ಯಾದಿ. ಇವೆಲ್ಲಾ ಸ್ವಾಭಾವಿಕವಾದವುಗಳು.

ಆದರೆ ಭಾರತದಲ್ಲಿ ಸಮಸ್ಯೆಗಳನ್ನು ಹಾಗೆಯೇ ಬಿಟ್ಟಿಲ್ಲ. ನಾವು  ಸ್ಥಿತಿ ಸ್ಥಾಪಕತ್ವ ಪ್ರದರ್ಶಿಸಿದ್ದೇವೆ ಮತ್ತು ನಾವು ಪರಿಹಾರಗಳ ತಾಣವಾಗಿ ಬೆಳವಣಿಗೆ ಹೊಂದಿದ್ದೇವೆ.

ನಾವು ದೀರ್ಘಾವಧಿಯವರೆಗೆ ಸುಮಾರು 80 ಮಿಲಿಯನ್ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಮತ್ತು 800 ಮಿಲಿಯನ್ ಜನರಿಗೆ ಉಚಿತ ಆಹಾರಧಾನ್ಯಗಳನ್ನು ನೀಡಿದ್ದೇವೆ. ಸಾಗಾಣೆ ಅಡೆತಡೆಯ ನಡುವೆಯೂ ನಾವು 400 ಮಿಲಿಯನ್ ಗೂ ಅಧಿಕ ರೈತರು, ಮಹಿಳೆಯರು, ಬಡವರು ಮತ್ತು ಅಗತ್ಯವಿರುವವರಿಗೆ ಕೆಲವೇ ದಿನಗಳಲ್ಲಿ ಅವರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮಾಡಿದ್ದೇವೆ

ಇದು ಸರ್ಕಾರದ ವ್ಯವಸ್ಥೆಯ ಶಕ್ತಿಯನ್ನು ತೋರಿಸುತ್ತದೆ ಮತ್ತು ಕಳೆದ ಕೆಲವು ವರ್ಷಗಳಿಂದೀಚೆಗೆ ಅಚ್ಚುಕಟ್ಟಾದ ವ್ಯವಸ್ಥೆಯನ್ನು ರೂಪಿಸಲಾಗಿದೆ.

ಮಿತ್ರರೇ, ಭಾರತ ಇಂದು ಜಗತ್ತಿನ ಫಾರ್ಮರ್ಸಿಯ ಪಾತ್ರವನ್ನು ನಿರ್ವಹಿಸುತ್ತಿದೆ. ಸಾಂಕ್ರಾಮಿಕದ ಸಂದರ್ಭದಲ್ಲಿ ನಾವು 150ಕ್ಕೂ ಅಧಿಕ ರಾಷ್ಟ್ರಗಳಿಗೆ ಔಷಧಗಳನ್ನು ಪೂರೈಕೆ ಮಾಡಿದ್ದೇವೆ.

ವರ್ಷದ ಮಾರ್ಚ್-ಜೂನ್ ಅವಧಿಯಲ್ಲಿ ನಮ್ಮ ಕೃಷಿ ಉತ್ಪನ್ನಗಳ ರಫ್ತು ಪ್ರಮಾಣ ಶೇ.23ರಷ್ಟು ಹೆಚ್ಚಾಗಿದೆ. ಇಡೀ ದೇಶ ಕಠಿಣ ಲಾಕ್ ಡೌನ್ ನಲ್ಲಿದ್ದಾಗಲೇ ಇದು ನಡೆದಿರುವುದು ಗಮನಿಸಲೇಬೇಕಾದ ಅಂಶ.

ಇಂದು ನಮ್ಮ ಉತ್ಪಾದನೆ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ. ಸಾಂಕ್ರಾಮಿಕಕ್ಕೂ ಮುನ್ನ ಭಾರತದಲ್ಲಿ ವೈಯಕ್ತಿಕಾ ರಕ್ಷಣಾ ಸಾಧನ(ಪಿಪಿಇ ಕಿಟ್)ಗಳನ್ನು ಬೆರಳೆಣಿಕೆಯಷ್ಟು ಉತ್ಪಾದಿಸಲಾಗುತ್ತಿತ್ತು. ಇದೀಗ ಪ್ರತಿ ತಿಂಗಳು ಮಿಲಿಯನ್ ಗಟ್ಟಲೆ ಪಿಪಿಇ ಕಿಟ್ ಗಳನ್ನು ಉತ್ಪಾದನೆ ಮಾಡಲಾಗುತ್ತಿದೆ ಮತ್ತು ರಫ್ತು ಮಾಡಲಾಗುತ್ತಿದೆ.

ಅಲ್ಲದೆ ನಾವು ಉತ್ಪಾದನೆಯನ್ನು ಇನ್ನಷ್ಟು ಚುರುಕುಗೊಳಿಸಲು ಬದ್ಧವಾಗಿದ್ದೇವೆ. ಕೋವಿಡ್-19ಗೆ ಲಸಿಕೆಗೆ ಸಂಬಂಧಿಸಿದಂತೆ ನಾವು ಇಡೀ ವಿಶ್ವಕ್ಕೆ ಸಹಾಯ ಮಾಡಲು ಬಯಸಿದ್ದೇವೆ.

ಮಿತ್ರರೇ, ಭಾರತದ ಪ್ರಗತಿಗಾಥೆ ಇಂದು ಬಲಿಷ್ಠವಾಗಿದೆ. ನಾಳೆ ಮತ್ತಷ್ಟು ಸದೃಢವಾಗಲಿದೆ. ಅದು ಹೇಗೆ ಎಂಬುದನ್ನು ನಾನು ವಿವರಿಸುತ್ತೇನೆ.

ದೇಶದಲ್ಲಿಂದು ವಿದೇಶಿ ನೇರ ಬಂಡವಾಳ (ಎಫ್ ಡಿಐ) ಪದ್ಧತಿ ಅತ್ಯಂತ ಸರಳೀಕರಣಗೊಳಿಸಲಾಗಿದೆ. ನಾವು ಸಂಪತ್ತು ಮತ್ತು ಪಿಂಚಣಿ ನಿಧಿಗಳಿಗೆ ತೆರಿಗೆ ಸ್ನೇಹಿ ಪದ್ಧತಿಗಳನ್ನು ರೂಪಿಸಿದ್ದೇವೆ.

ಉತ್ಕೃಷ್ಟ ಷೇರು ಮಾರುಕಟ್ಟೆ ಅಭಿವೃದ್ಧಿಗೆ ನಾವು ಮಹತ್ವದ ಸುಧಾರಣೆಗಳನ್ನು ಕೈಗೊಂಡಿದ್ದೇವೆ. ಅಲ್ಲದೆ ಹಲವು ಮಹತ್ವದ ವಲಯಗಳಿಗೆ ಪ್ರೋತ್ಸಾಹಕರ ಯೋಜನೆಗಳನ್ನೂ ಸಹ ಜಾರಿಗೊಳಿಸಲಾಗಿದೆ.

ಫಾರ್ಮ, ವೈದ್ಯಕೀಯ ಸಾಧನಗಳು, ವಿದ್ಯುನ್ಮಾನ ಉಪಕರಣಗಳ ಉತ್ಪಾದನೆ ಮತ್ತಿತರ ವಲಯಗಳಲ್ಲಿ ಈಗಾಗಲೆ ಅಂತಹ ಪ್ರೋತ್ಸಾಹಕರ ಯೋಜನೆಗಳು ಜಾರಿಯಾಗಿವೆ. ನಾವು ಹೂಡಿಕೆದಾರರಿಗೆ ಪರಿಣಾಮಕಾರಿಯಾಗಿ ಬೆಂಬಲಿಸಲು ಮತ್ತು ಹೆಚ್ಚಿನ ಗಮನಹರಿಸುವ ಉದ್ದೇಶಕ್ಕಾಗಿ ಕಾರ್ಯದರ್ಶಿಗಳನ್ನೊಳಗೊಂಡ ನಿರ್ದಿಷ್ಟ ಉನ್ನತಾಧಿಕಾರ ಸಮಿತಿಯನ್ನು ರಚಿಸಿದ್ದೇವೆ.

ವಿಮಾನ ನಿಲ್ದಾಣ, ರೈಲ್ವೆ, ಹೆದ್ದಾರಿ, ವಿದ್ಯುತ್ ಪ್ರಸರಣಾ ಮಾರ್ಗಗಳು ಇತ್ಯಾದಿ ವಲಯಗಳಲ್ಲಿ ಕ್ರಿಯಾಶೀಲವಾಗಿ ಆಸ್ತಿಗಳ ನಗದೀಕರಣಕ್ಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಗಳ ನಗದೀಕರಣಕ್ಕಾಗಿ ರಿಯಲ್ ಎಸ್ಟೇಟ್ ಹೂಡಿಕೆ ಟ್ರಸ್ಟ್ ಮತ್ತು ಮೂಲಸೌಕರ್ಯ ಹೂಡಿಕೆ ಟ್ರಸ್ಟ್ ಗಳನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ.

ಮಿತ್ರರೇ, ಭಾರತದಲ್ಲಿ ಇಂದು ಕೇವಲ ಮನೋಭಾವ ಮಾತ್ರವಲ್ಲ ಮಾರುಕಟ್ಟೆಗಳೂ ಸಹ ಕ್ಷಿಪ್ರವಾಗಿ ಬದಲಾಗುತ್ತಿವೆ. ಭಾರತದಲ್ಲಿ ಇಂದು ಕೆಲವು ನಿಯಂತ್ರಣಗಳನ್ನು ತೆಗೆದು ಹಾಕಲಾಗುತ್ತಿದೆ ಮತ್ತು ಕಂಪನಿ ಕಾಯ್ದೆ ಅಡಿ ಕೆಲವು ಅಪರಾಧಗಳನ್ನು ಅಪರಾಧಮುಕ್ತ(ಡಿ ಕ್ರಿಮಿನಲೈಜೇಷನ್) ಗೊಳಿಸಲಾಗಿದೆ.

ಕಳೆದ ಐದು ವರ್ಷಗಳಿಂದೀಚೆಗೆ ಜಾಗತಿಕ ಆವಿಷ್ಕಾರಿ ಸೂಚ್ಯಂಕದಲ್ಲಿ ಭಾರತ, 81ನೇ ಸ್ಥಾನದಿಂದ 48ಕ್ಕೆ ಏರಿಕೆಯಾಗಿದೆ. ಅಂತೆಯೇ ವಿಶ್ವ ಬ್ಯಾಂಕ್ ಉದ್ದಿಮೆಗೆ ಪೂರಕ ವಾತಾವರಣ ಶ್ರೇಯಾಂಕದಲ್ಲಿ ಕಳೆದ ಐದು ವರ್ಷಗಳಿಂದೀಚೆಗೆ 142ನೇ ಸ್ಥಾನದಿಂದ 63ನೇ ಸ್ಥಾನಕ್ಕೆ ಏರಿಕೆಯಾಗಿದೆ. ಸುಧಾರಣೆಗಳ ಪರಿಣಾಮವನ್ನು ಪ್ರತಿಯೊಬ್ಬರೂ ನೋಡಬಹುದಾಗಿದೆ. ಜನವರಿ 2019 ರಿಂದ ಜುಲೈ 2020 ನಡುವಿನ ಒಂದೂವರೆ ವರ್ಷಗಳ ಅವಧಿಯಲ್ಲಿ ಭಾರತ ಸಾಂಸ್ಥಿಕ ಹೂಡಿಕೆದಾರರಿಂದ ಸುಮಾರು 70 ಬಿಲಿಯನ್ ಅಮೆರಿಕನ್ ಡಾಲರ್ ಸ್ವೀಕರಿಸಿದೆ. ಇದು 2013ರಿಂದ 2017 ನಡುವಿನ ನಾಲ್ಕು ವರ್ಷಗಳ ಅವಧಿಗೆ ಸಮನಾದುದು. ಭಾರತದಲ್ಲಿ ಜಾಗತಿಕ ಹೂಡಿಕೆದಾರ ಸಮುದಾಯಕ್ಕೆ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ನಿರಂತರ ಕ್ರಮಗಳನ್ನು ಕೈಗೊಂಡಿರುವ ಕಾರಣ ಜಾಗತಿಕ ಮಟ್ಟದಲ್ಲಿ ಎಫ್ ಡಿ ಒಳಹರಿವಿನ ಪ್ರಮಾಣ ಶೇ.1 ರಷ್ಟು ಕುಸಿತದ ನಡುವೆಯೂ ಭಾರತಕ್ಕೆ 2019ರಲ್ಲಿ ಎಫ್ ಡಿ ಹರಿವಿನ ಪ್ರಮಾಣ ಶೇ.20ರಷ್ಟು ಹೆಚ್ಚಳವಾಗಿದೆ.

ಭಾರತ ವರ್ಷ ಮೊದಲ ಆರು ತಿಂಗಳಲ್ಲಿ 20 ಬಿಲಿಯನ್ ಅಮೆರಿಕನ್ ಡಾಲರ್ ವಿದೇಶಿ ಬಂಡವಾಳವನ್ನು ಸ್ವೀಕರಿಸಿದೆ. ಕೋವಿಡ್-19 ಸಾಂಕ್ರಾಮಿಕ ಅತ್ಯಂತ ವ್ಯಾಪಕವಾಗಿರುವ ಸಂದರ್ಭದಲ್ಲೇ ಬಂಡವಾಳ ಹರಿದುಬಂದಿರುವುದು ಗಮನಾರ್ಹ.

ಗಿಫ್ಟ್ (ಜಿಐಎಫ್ ಟಿ) ಸಿಟಿಯಲ್ಲಿ ಅಂತಾರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರ(ಐಎಫ್ಎಸ್ ಸಿ) ಸ್ಥಾಪನೆ ಒಂದು ಪ್ರಮುಖ ಉಪಕ್ರಮವಾಗಿದೆ. ಹೂಡಿಕೆದಾರರು ವೇದಿಕೆಯನ್ನು ಆಯ್ಕೆ ಮಾಡಿಕೊಂಡು ಜಾಗತಿಕವಾಗಿ ವಹಿವಾಟುಗಳನ್ನು ನಡೆಸಬಹುದು. ನಾವು ಇತ್ತೀಚೆಗೆ ಸಂಪೂರ್ಣ ಅಧಿಕಾರವಿರುವ ಸಮಗ್ರ ನಿಯಂತ್ರಣವನ್ನು ರಚನೆ ಮಾಡಿದ್ದೇವೆ.

ಮಿತ್ರರೇ, ಕೋವಿಡ್-19 ಒಡ್ಡಿರುವ ಸವಾಲುಗಳನ್ನು ಎದುರಿಸಲು ಭಾರತ ವಿಭಿನ್ನ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದೆ.

ನಾವು ಬಡವರು ಮತ್ತು ಸಣ್ಣ ವ್ಯಾಪಾರಿಗಳಿಗೆ ಪರಿಹಾರ ಮತ್ತು ಸಂಕಷ್ಟ ಪ್ಯಾಕೇಜ್ ಗಳನ್ನು ನೀಡಿದ್ದೇವೆ. ಅಲ್ಲದೆ ನಾವು ಅವಕಾಶಗಳನ್ನು ಬಳಸಿಕೊಂಡು ವ್ಯವಸ್ಥೆಯಲ್ಲಿ ಹಲವು ಸುಧಾರಣೆಗಳನ್ನು ತಂದಿದ್ದೇವೆ. ಸುಧಾರಣೆಗಳು ಹೆಚ್ಚಿನ ಉತ್ಪಾದಕತೆ ಮತ್ತು ಏಳಿಗೆಯನ್ನು ಖಾತ್ರಿಪಡಿಸಲಿವೆ.

ಭಾರತ ಶಿಕ್ಷಣ, ಕಾರ್ಮಿಕ ಮತ್ತು ಉದ್ಯೋಗ ವಲಯಗಳಲ್ಲಿ ಮಹತ್ವದ ಸುಧಾರಣೆಗಳನ್ನು ಕೈಗೊಂಡಿದೆ. ಇವೆಲ್ಲವೂ ಪ್ರತಿಯೊಬ್ಬ ಭಾರತೀಯನ ಮೇಲೆ ಪರಿಣಾಮ ಬೀರಲಿವೆ.

ಕಾರ್ಮಿಕ ಮತ್ತು ಕೃಷಿ ವಲಯಗಳಲ್ಲಿನ ಹಳೆಯ ಕಾಯ್ದೆಗಳಿಗೆ ತಿದ್ದುಪಡಿ ಮಾಡಿ, ಸುಧಾರಣೆಗಳನ್ನು ಭಾರತ ಖಾತ್ರಿಪಡಿಸಿದೆ. ಇದರಿಂದಾಗಿ ಖಾಸಗಿ ವಲಯದ ಸಹಭಾಗಿತ್ವಕ್ಕೆ ಹೆಚ್ಚಿನ ಅವಕಾಶ ಸಿಗುವುದಲ್ಲದೆ, ಸರ್ಕಾರದ ಸುರಕ್ಷತಾ ಕ್ರಮಗಳ ಬಲವರ್ಧನೆಗೂ ಸಹಕಾರಿಯಾಗಲಿದೆ.

ಸುಧಾರಣೆಗಳ ಪರಿಣಾಮ ಉದ್ದಿಮೆದಾರರು ಮಾತ್ರವಲ್ಲದೆ, ನಮ್ಮ ಶ್ರಮಜೀವಿಗಳೂ ಸಹ ಪರಸ್ಪರ ಲಾಭ ಪಡೆಯುವಂತಹ ವಾತಾವರಣ ಸೃಷ್ಟಿಯಾಗಲಿದೆ. ಶಿಕ್ಷಣ ವಲಯದಲ್ಲಿ ಕೈಗೊಂಡಿರುವ ಸುಧಾರಣೆಗಳಿಂದಾಗಿ ನಮ್ಮ ಯುವಕರಲ್ಲಿನ ಪ್ರತಿಭೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗಲಿದೆ. ಅಲ್ಲದೆ ಸುಧಾರಣೆಗಳಿಂದಾಗಿ ಹೆಚ್ಚಿನ ವಿದೇಶಿ ವಿಶ್ವವಿದ್ಯಾಲಯಗಳು ಭಾರತಕ್ಕೆ ಆಗಮಿಸಲು ಇಲ್ಲಿ ವೇದಿಕೆ ನಿರ್ಮಾಣವಾಗಲಿದೆ.

ಕಾರ್ಮಿಕ ಕಾಯ್ದೆಗಳಲ್ಲಿನ ಸುಧಾರಣೆಗಳಿಂದಾಗಿ ಕಾರ್ಮಿಕ ಸಂಹಿತೆಗಳ ಸಂಖ್ಯೆ ಗಣನೀಯವಾಗಿ ತಗ್ಗಲಿವೆ. ಸುಧಾರಣೆಗಳು ಉದ್ಯೋಗದಾತ ಮತ್ತು ಉದ್ಯೋಗಿಗಳ ಇಬ್ಬರ ಸ್ನೇಹಿಯಾಗಿದೆ ಮತ್ತು ವಾಣಿಜ್ಯ ಚಟುವಟಿಕೆ ಹೆಚ್ಚಳಕ್ಕೆ ಪೂರಕವಾಗಿದೆ.

ಕೃಷಿ ವಲಯದಲ್ಲಿ ಕೈಗೊಂಡಿರುವ ಸುಧಾರಣೆಗಳು ದೂರಗಾಮಿ ಪರಿಣಾಮಗಳನ್ನು ಬೀರಲಿದೆ. ಇವು ರೈತರಿಗೆ ಹೆಚ್ಚಿನ ಆಯ್ಕೆ ನೀಡುವುದು ಮಾತ್ರವಲ್ಲದೆ, ರಫ್ತಿಗೆ ಉತ್ತೇಜನ ನೀಡುತ್ತದೆ.

ಎಲ್ಲ ಸುಧಾರಣೆಗಳು ಆತ್ಮನಿರ್ಭರ ಭಾರತ ಅಥವಾ ಸ್ವಾವಲಂಬಿ ಭಾರತ ನಿರ್ಮಾಣ ನಿಟ್ಟಿನಲ್ಲಿ ಕೈಗೊಂಡಿರುವ ನಮ್ಮ ಪ್ರಯತ್ನಗಳನ್ನು ಬೆಂಬಲಿಸಲಿದೆ. ಸ್ವಾವಲಂಬಿ ಭಾರತ ನಿರ್ಮಾಣ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿ ಜೊತೆ ಜೊತೆಗೆ ನಾವು ಜಾಗತಿಕ ಒಳಿತು ಮತ್ತು ಏಳಿಗೆಗೆ ಕೊಡುಗೆ ನೀಡಲು ಬಯಸುತ್ತಿದ್ದೇವೆ.

ಮಿತ್ರರೇ,

ಶಿಕ್ಷಣ ವಲಯದಲ್ಲಿ ನೀವು ಪಾಲುದಾರಿಕೆಗೆ ಎದುರು ನೋಡುತ್ತಿದ್ದರೆ ಭಾರತದಲ್ಲಿ ಅದಕ್ಕೆ ಅವಕಾಶವಿದೆ.

ನೀವು ಉತ್ಪಾದನಾ ಅಥವಾ ಸೇವಾ ವಲಯದಲ್ಲಿ ಹೂಡಿಕೆಯ ಇಚ್ಛೆ ಹೊಂದಿದ್ದರೆ ಅದಕ್ಕೂ ಭಾರತದಲ್ಲಿ ಒಳ್ಳೆಯ ಅವಕಾಶವಿದೆ.

 

ಕೃಷಿ ವಲಯದಲ್ಲಿ ನೀವು ಸಹಭಾಗಿತ್ವ ಬಯಸಲು ಎದುರು ನೋಡುತ್ತಿದ್ದರೆ ಅದಕ್ಕೂ ಸಹ ಭಾರತದಲ್ಲಿ ಉತ್ತಮ ಅವಕಾಶವಿದೆ.

ಮಿತ್ರರೇ,

ಭಾರತ-ಕೆನಡಾ ನಡುವಿನ ದ್ವಿಪಕ್ಷೀಯ ಸಂಬಂಧಗಳು ಪರಸ್ಪರ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಹಲವು ಸಮಾನ ಆಸಕ್ತಿಗಳ ವಿನಿಮಯ ಆಧರಿಸಿವೆ. ನಮ್ಮ ನಡುವಿನ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳು ನಮ್ಮ ಬಹು ಆಯಾಮದ ಸಂಬಂಧಗಳ ಆಂತರಿಕ ಭಾಗವಾಗಿದೆ.

ಭಾರತದಲ್ಲಿನ ವಿದೇಶಿ ಹೂಡಿಕೆದಾರರ ಪೈಕಿ ಕೆನಡಾ 20ನೇ ಅತಿದೊಡ್ಡ ಹೂಡಿಕೆ ರಾಷ್ಟ್ರವಾಗಿದೆ. ಭಾರತದಲ್ಲಿ 600ಕ್ಕೂ ಅಧಿಕ ಕೆನಡಾದ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಈವರೆಗೆ ಭಾರತದಲ್ಲಿ ಸುಮಾರು 50 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲು ಕೆನಡಾದ ಪಿಂಚಣಿ ನಿಧಿಗಳು ಸಂಕಲ್ಪ ಮಾಡಿವೆ ಎಂದು ನಾನು ಕೇಳಿ ತಿಳಿದಿದ್ದೇನೆ.

ನಮ್ಮ ಸಂಬಂಧಗಳು ಸಂಖ್ಯೆ ಸೂಚಿಸುವುದಕ್ಕಿಂತ ಅತ್ಯಂತ ಹೆಚ್ಚು ಬಲಿಷ್ಠವಾಗಿವೆ. ಆದರೆ ಇನ್ನೂ ಹಲವು ಅವಕಾಶಗಳಿದ್ದು, ನಾವು ಮತ್ತಷ್ಟು ಪ್ರಗತಿ ಸಾಧಿಸುವ ಸಾಧ್ಯತೆಗಳಿವೆ.

ಕೆನಡಾ ಕೆಲವು ಬೃಹತ್ ಮತ್ತು ಹೆಚ್ಚಿನ ಅನುಭವ ಹೊಂದಿರುವ ಮೂಲಸೌಕರ್ಯ ಹೂಡಿಕೆದಾರರ ತವರೂರಾಗಿದೆ. ಕೆನಡಾದ ಪಿಂಚಣಿ ನಿಧಿಗಳು ಭಾರತದಲ್ಲಿ ಮೊದಲಿಗೆ ನೇರವಾಗಿ ಹೂಡಿಕೆಯಲ್ಲಿ ತೊಡಗಿದ್ದವು. ಪೈಕಿ ಹಲವರು ಹೆದ್ದಾರಿ, ವಿಮಾನ ನಿಲ್ದಾಣ, ಸಾರಿಗೆ, ದೂರಸಂಪರ್ಕ ಮತ್ತು ರಿಯಲ್ ಎಸ್ಟೇಟ್ ಸೇರಿದಂತೆ ಹಲವು ವಲಯಗಳಲ್ಲಿ ಹೆಚ್ಚಿನ ಅವಕಾಶಗಳನ್ನು ಈಗಾಗಲೇ ಕಂಡುಕೊಂಡಿದ್ದಾರೆ. ಅವರು ತಮ್ಮ ಉಪಸ್ಥಿತಿಯನ್ನು ವಿಸ್ತರಿಸಿಕೊಳ್ಳಲು ಹೂಡಿಕೆಗೆ ಹೊಸ ಅವಕಾಶಗಳನ್ನು ಹುಡುಕುತ್ತಿದ್ದಾರೆ.

ಹಲವು ವರ್ಷಗಳಿಂದ ಭಾರತದಲ್ಲಿರುವ ಕೆನಡಾದ ಪ್ರಬುದ್ಧ ಹೂಡಿಕೆದಾರರು ಇದೀಗ ನಮ್ಮ ಅತ್ಯುತ್ತಮ ಬ್ರ್ಯಾಂಡ್ ರಾಯಭಾರಿಗಳಾಗಿದ್ದಾರೆ.

ಅವರ ಅನುಭವ, ಅವರ ವಿಸ್ತರಣಾ ಯೋಜನೆ ಮತ್ತು ವೈವಿಧ್ಯತೆ ಕೆನಡಾದ ಹೂಡಿಕೆದಾರರು ಇಲ್ಲಿಗೆ ಆಗಮಿಸಲು ಅತ್ಯಂತ ವಿಶ್ವಾಸಾರ್ಹ ಸಾಕ್ಷಿಯಾಗಿದೆ. ಅಲ್ಲದೆ ನೀವು ಭಾರತವನ್ನು ಚೆನ್ನಾಗಿ ತಿಳಿದುಕೊಳ್ಳುವ ಲಾಭವಿದೆ. ಕೆನಡಾದಲ್ಲಿ ಹೆಚ್ಚಿನ ಸಂಖ್ಯೆಯ ಅನಿವಾಸಿ ಭಾರತೀಯರು ನೆಲೆಸಿದ್ದಾರೆ. ಭಾರತದಲ್ಲಿ ಕೆನಡಾದ ಹೂಡಿಕೆದಾರರಿಗೆ ಯಾವುದೇ ಅಡೆತಡೆ ಇರುವುದಿಲ್ಲ. ನೀವು ನಿಮ್ಮ ದೇಶದಂತೆಯೇ ಎಂದು ಭಾವಿಸಿಕೊಂಡು  ಇಲ್ಲಿಗೆ ಬರಲು ಸ್ವಾಗತವಿದೆ.

ಕಾರ್ಯಕ್ರಮದಲ್ಲಿ ಭಾಷಣ ಮಾಡಲು ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಧನ್ಯವಾದಗಳು, ತುಂಬಾ ತುಂಬಾ ಧನ್ಯವಾದಗಳು.

***



(Release ID: 1663034) Visitor Counter : 216