ಪ್ರಧಾನ ಮಂತ್ರಿಯವರ ಕಛೇರಿ

ಅಟಲ್ ಸುರಂಗವನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ


ರೈತರು, ತೋಟದ ಬೆಳೆಗಾರರು, ಯುವಜನರು, ಪ್ರವಾಸಿಗಳು, ಭದ್ರತಾ ಪಡೆಗಳಿಗೆ ಯೋಜನೆಯಿಂದ ಪ್ರಯೋಜನವಾಗಲಿದೆ: ಪ್ರಧಾನಮಂತ್ರಿ

ಹಿಮಾಚಲ ಪ್ರದೇಶದ ತೀವ್ರ ದುರ್ಗಮ ಪಿರ್ ಪಂಜಲ್ ಗಿರಿಶ್ರೇಣಿಯಲ್ಲಿ ಸುರಂಗ ನಿರ್ಮಿಸಿ ಅದ್ಭುತ ಸಾಧನೆ ಮಾಡಿದ ಭಾರತೀಯ ಎಂಜಿನಿಯರುಗಳು ಮತ್ತು ಬಿಆರ್.ಓ.ಗೆ ಅಭಿನಂದಿಸಿದ ಪ್ರಧಾನಿ

ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲೆಹ್ ಮತ್ತು ಲಡಾಖ್ ಗೆ ಶಕ್ತಿ ತುಂಬಲಿರುವ ಸುರಂಗ: ಪ್ರಧಾನಮಂತ್ರಿ

ತ್ವರಿತ ಆರ್ಥಿಕ ಪ್ರಗತಿಯು ವಿವಿಧ ಮೂಲಸೌಕರ್ಯ ಕಾಮಗಾರಿಗಳ ತ್ವರಿತಗತಿಯ ಅನುಷ್ಠಾನದ ಮೇಲೆ ನೇರ ಅವಲಂಬಿತವಾಗಿದೆ: ಪ್ರಧಾನಮಂತ್ರಿ

Posted On: 03 OCT 2020 1:05PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗವನ್ನು  -ಅದರ ದಕ್ಷಿಣ ತುದಿಯ ಮನಾಲಿಯಲ್ಲಿ ದೇಶಕ್ಕೆ ಸಮರ್ಪಿಸಿದರು. 
ದಕ್ಷಿಣದ ತುದಿಯಿಂದ ಉತ್ತರದ ತುದಿಗೆ ಸುರಂಗದ ಮೂಲಕ ಪ್ರಯಾಣಿಸಿದ ಪ್ರಧಾನಮಂತ್ರಿಯವರು, ತುರ್ತು ಸಂದರ್ಭದಲ್ಲಿ ಹೊರಬರಲು ಮುಖ್ಯ ಸುರಂಗದಲ್ಲಿ ನಿರ್ಮಿಸಿರುವ ಕಿರು ಸುರಂಗವನ್ನೂ ವೀಕ್ಷಿಸಿದರು. ಈ ಸಂದರ್ಭದಲ್ಲಿ “ಅಟಲ್ ಸುರಂಗದ ನಿರ್ಮಾಣ’’ ಕುರಿತ ಚಿತ್ರ ಪ್ರದರ್ಶನವನ್ನೂ ಅವರು ವೀಕ್ಷಿಸಿದರು. 
ನಂತರ ತಮ್ಮ ಭಾಷಣದಲ್ಲಿ ಪ್ರಧಾನಮಂತ್ರಿಯವರು, ಇದೊಂದು ಐತಿಹಾಸಿಕ ದಿನ, ಏಕೆಂದರೆ ಇದು ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ದೃಷ್ಟಿಕೋನವನ್ನು ಮಾತ್ರವೇ ಸಫಲಗೊಳಿಲ್ಲ ಜೊತೆಗೆ ಈ ಪ್ರದೇಶದ ಕೋಟ್ಯಂತರ ಜನರ ಆಶಯ ಮತ್ತು ಕನಸನ್ನು ಸಹ ಈಡೇರಿಸಿದೆ ಎಂದು ಬಣ್ಣಿಸಿದರು. 
ಹಿಮಾಚಲ ಪ್ರದೇಶದ ದೊಡ್ಡ ಭಾಗಕ್ಕೆ ಮತ್ತು ನೂತನ ಕೇಂದ್ರಾಡಳಿತ ಪ್ರದೇಶದ ಲೆಹ್ – ಲಡಾಖ್ ಗೆ ಈ ಸುರಂಗ ಮಾರ್ಗ ಜೀವಸೆಲೆಯಾಗಲಿದೆ ಮತ್ತು ಮನಾಲಿ ಮತ್ತು ಕಿಲಾಂಗ್ ನಡುವಿನ ಅಂತರವನ್ನು ತಗ್ಗಿಸಿ, 3-4 ಗಂಟೆ ಸಮಯ ಉಳಿಸುತ್ತದೆ ಎಂದರು. 
ಈಗ ಹಿಮಾಚಲ ಪ್ರದೇಶ ಮತ್ತು ಲೆಹ್ – ಲಡಾಖ್ ದೇಶದ ಇತರ ಭಾಗಗಳೊಂದಿಗೆ ಸದಾ ಸಂಪರ್ಕಿತವಾಗಿರುತ್ತದೆ ಮತ್ತು ತ್ವರಿತವಾದ ಆರ್ಥಿಕ ಪ್ರಗತಿಯನ್ನು ಕಾಣುತ್ತದೆ ಎಂದೂ ಹೇಳಿದರು.
ರೈತರು, ತೋಟದ ಬೆಳೆಗಾರರು ಮತ್ತು ಯುವಜನರಿಗೆ ಈಗ ರಾಜಧಾನಿ ದೆಹಲಿ ಮತ್ತು ಇತರ ಮಾರುಕಟ್ಟೆ ಪ್ರದೇಶಗಳಿಗೆ ಸುಗಮ ಸಂಪರ್ಕ ಇರುತ್ತದೆ ಎಂದರು.
ಇಂಥ ಗಡಿ ಸಂಪರ್ಕ ಯೋಜನೆಗಳು ಭದ್ರತಾ ಪಡೆಗಳಿಗೆ ನಿರಂತರ ಪೂರೈಕೆ  ಮತ್ತು ಅವರ ಪಹರೆ ಖಚಿತಪಡಿಸುತ್ತದೆ ಎಂದೂ ಪ್ರಧಾನಮಂತ್ರಿ ಹೇಳಿದರು. 
ಈ ಸುರಂಗದ ಕನಸು ನನಸು ಮಾಡಲು ಅಪಾಯಕಾರಿ ಸನ್ನಿವೇಶದಲ್ಲಿ ಶ್ರಮಿಸಿದ ಕಾರ್ಮಿಕರು, ಎಂಜನಿಯರುಗಳು ಮತ್ತು ತಂತ್ರಜ್ಞರ ಪ್ರಯತ್ನವನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. 
ಅಟಲ್ ಸುರಂಗವು ಭಾರತೀಯ ಗಡಿ ಮೂಲಸೌಕರ್ಯಕ್ಕೆ ಹೊಸ ಬಲ ನೀಡಲಿದೆ ಮತ್ತು ವಿಶ್ವದರ್ಜೆಯ ಗಡಿ ಸಂಪರ್ಕಕ್ಕೆ ಜ್ವಲಂತ ಉದಾಹರಣೆಯಾಗಲಿದೆ ಎಂದರು. ಮೂಲಸೌಕರ್ಯ ಸುಧಾರಣೆ ಮತ್ತು ಸರ್ವಾಂಗೀಣ ಅಭಿವೃದ್ಧಿ ಮಾಡಬೇಕು ಎಂಬ ದೀರ್ಘಕಾಲೀನ ಬೇಡಿಕೆಯ ಹೊರತಾಗಿಯೂ ದಶಕಗಳವರೆಗೆ ಯಾವುದೇ ಪ್ರಗತಿಯನ್ನೇ ಕಾಣದ ಯೋಜನೆಗಳನ್ನು ರೂಪಿಸಲಾಗಿತ್ತು ಎಂದು ಅವರು ಹೇಳಿದರು. 
ಅಟಲ್ ಜೀ ಅವರು 2002ರಲ್ಲಿ ಈ ಸುರಂಗದ ಸಂಪರ್ಕ ರಸ್ತೆಗೆ ಶಿಲಾನ್ಯಾಸ ಮಾಡಿದ್ದರು ಎಂದು ಪ್ರಧಾನಮಂತ್ರಿ ತಿಳಿಸಿದರು. ಅಟಲ್ ಜೀ ಅವರ ಸರ್ಕಾರದ ತರುವಾಯ, ಈ ಕಾಮಗಾರಿಯನ್ನು ಎಷ್ಟು ನಿರ್ಲಕ್ಷಿಸಲಾಯಿತೆಂದರೆ, 2013-14ರವರೆಗೆ ಕೇವಲ 1500 ಮೀಟರ್ ಗೂ ಕಡಿಮೆ ಅಂದರೆ 1.5 ಕಿ.ಮೀ ಸುರಂಗ ಮಾತ್ರ ನಿರ್ಮಾಣವಾಗಿತ್ತು ಅಂದರೆ ಪ್ರತಿ ವರ್ಷ 300 ಮೀಟರ್ ಅಷ್ಟೇ ಆಗಿತ್ತು ಎಂದರು. 
, ಇದು ಇದೇ ಗತಿಯಲ್ಲಿ ಮುಂದುವರಿದರೆ, ಸುರಂಗ 2040ಕ್ಕೆ ಪೂರ್ಣವಾಗುತ್ತದೆ ಎಂದು ಆಗ ತಜ್ಞರು ವಿವರಿಸಿದ್ದರು ಎಂದರು. 
ಆಗ ಸರ್ಕಾರ ಯೋಜನೆಯನ್ನು ತ್ವರಿತಗತಿಯಲ್ಲಿ ಮುನ್ನಡೆಸಿತು ಮತ್ತು ನಿರ್ಮಾಣ ಕಾಮಗಾರಿ ಪ್ರತಿ ವರ್ಷ 1400 ಮೀಟರ್ ವೇಗದಲ್ಲಿ ಸಾಗಿತು ಎಂದು ತಿಳಿಸಿದರು. 26 ವರ್ಷ ಅಂದಾಜು ಮಾಡಲಾಗಿದ್ದ ಯೋಜನೆಯನ್ನು 6 ವರ್ಷದಲ್ಲಿ ಪೂರ್ಣಗೊಳಿಸಲಾಯಿತು ಎಂದರು. 
ಮೂಲಸೌಕರ್ಯವನ್ನು ತ್ವರಿತ ಗತಿಯಲ್ಲಿ ಅಭಿವೃದ್ಧಿಪಡಿಸಬೇಕು ಆಗ ಮಾತ್ರ ದೇಶ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಪ್ರಗತಿ ಸಾಧಿಸುತ್ತದೆ ಎಂದರು. ಇದಕ್ಕೆ ದೇಶದ ಪ್ರಗತಿಯ ಬಗ್ಗೆ ಬದ್ಧತೆ ಮತ್ತು ಹಿಂಜರಿಕೆಯಿಲ್ಲದ ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿರುತ್ತದೆ ಎಂದೂ ಹೇಳಿದರು. 
ಇಂಥ ಮಹತ್ವದ ಮತ್ತು ಪ್ರಮುಖ ಮೂಲಸೌಕರ್ಯ ಯೋಜನೆ ಪೂರ್ಣಗೊಳಿಸುವಲ್ಲಿನ ವಿಳಂಬದಿಂದ ಆರ್ಥಿಕ ನಷ್ಟ ಸಂಭವಿಸುತ್ತದೆ ಮತ್ತು ಜನರನ್ನು ಆರ್ಥಿಕ ಮತ್ತು ಸಾಮಾಜಿಕ ಪ್ರಯೋಜನಗಳಿಂದ ವಂಚಿತರನ್ನಾಗಿ ಮಾಡುತ್ತದೆ ಎಂದರು.
2005ರಲ್ಲಿ ಸುರಂಗದ ನಿರ್ಮಾಣಕ್ಕೆ ಅಂದಾಜು ಮಾಡಿದ್ದ ಮೊತ್ತ 900 ಕೋಟಿ ರೂ. ಆದರೆ, ನಿರಂತರ ವಿಳಂಬದಿಂದಾಗಿಗ ಇಂದು 3200 ಕೋಟಿ ರೂಪಾಯಿ ಅಂದರೆ ಮೂರು ಪಟ್ಟು  ಹೆಚ್ಚು ವೆಚ್ಚ ಮಾಡಿ ನಿರ್ಮಿಸಬೇಕಾಯಿತು ಎಂದರು. 
ಅಟಲ್ ಸುರಂಗದಂತೆಯೇ ಹಲವು ಮಹತ್ವದ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. 
ವಾಯುಪಡೆಯು ವಾಯು ನೆಲೆ ಬೇಕು ಎಂದು ಕೇಳಿದರೂ ಲೌಡಾಕ್‌ ನಲ್ಲಿ ದೌಲತ್ ಬೇಗ್ ಓಲ್ಡಿ ವ್ಯೂಹಾತ್ಮಕ ವಾಯು ನೆಲೆ 40–45 ವರ್ಷಗಳವರೆಗೆ ಅಪೂರ್ಣವಾಗಿತ್ತು.
ಬೊಗಿಬೀಲ್ ಸೇತುವೆಯ ಕಾಮಗಾರಿಗಳು ಅಟಲ್ ಜಿ ಸರ್ಕಾರದ ಅವಧಿಯಲ್ಲಿ ಪ್ರಾರಂಭವಾದವು ಆದರೆ ಅದರ ಕಾಮಗಾರಿ ನಂತರ ಕ್ಷೀಣಿಸಿತು ಎಂದು ಅವರು ಹೇಳಿದರು. ಈ ಸೇತುವೆ ಅರುಣಾಚಲ ಮತ್ತು ಈಶಾನ್ಯ ಭಾಗದ ನಡುವೆ ಪ್ರಮುಖ ಸಂಪರ್ಕವನ್ನು ಒದಗಿಸುತ್ತದೆ. 2014ರ ನಂತರ ಈ ಕಾಮಗಾರಿ ಅಭೂತಪೂರ್ವ ವೇಗವನ್ನು ಪಡೆದುಕೊಂಡಿದೆ ಮತ್ತು ಅಟಲ್ ಜಿ ಅವರ ಜನ್ಮದಿನದಂದು ಸುಮಾರು ಎರಡು ವರ್ಷಗಳ ಹಿಂದೆ ಅದನ್ನು ಉದ್ಘಾಟಿಸಲಾಯಿತು ಎಂದು ಅವರು ಹೇಳಿದರು.
ಬಿಹಾರದ ಮಿಥಿಲಾಂಛಲದ ಎರಡು ಪ್ರಮುಖ ಪ್ರದೇಶಗಳನ್ನು ಜೋಡಿಸುವ ಕೋಸಿ ಮಹಾಸೇತುವೆಗೂ ಅಟಲ್ ಜೀ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು ಎಂದ ಪ್ರಧಾನಮಂತ್ರಿಯವರು, 2014ರ ನಂತರ ಸರ್ಕಾರ ಕೋಸಿ ಮಹಾಸೇತುವೆಯ ಕಾಮಗಾರಿಗೆ ವೇಗ ನೀಡಲಾಯಿತು. ಕೆಲವೇ ವಾರಗಳ ಹಿಂದೆ ಇದನ್ನು ಉದ್ಘಾಟಿಸಲಾಯಿತು ಎಂದರು. 
ಗಡಿ ಮೂಲಸೌಕರ್ಯ ಅಂದರೆ ಅದು ರಸ್ತೆಯೇ ಇರಲಿ, ಸೇತುವೆ ಅಥವಾ ಸುರಂಗವೇ ಆಗಿರಲಿ ಕಳೆದ ಆರು ವರ್ಷಗಳಲ್ಲಿ ಪರಿಸ್ಥಿತಿ ಬದಲಾವಣೆಯಾಗಿದೆ, ಅದು ತ್ವರಿತ ವೇಗ ಮತ್ತು ಪೂರ್ಣ ಶ್ರಮದೊಂದಿಗೆ ಅಭಿವೃದ್ಧಿಕಾಣುತ್ತಿದೆ ಎಂದರು. 
ದೇಶದ ಭದ್ರತಾ ಪಡೆಗಳ ಅಗತ್ಯವನ್ನು ಸರ್ಕಾರದ ಅತ್ಯುನ್ನತ ಆದ್ಯತೆಯಾಗಿ ಸರ್ಕಾರ ಕಾಳಜಿ ವಹಿಸಿದೆ. ಹಿಂದೆ ಇದರಲ್ಲೂ ರಾಜೀ ಮಾಡಿಕೊಳ್ಳಲಾಗುತ್ತಿತ್ತು ಮತ್ತು ದೇಶದ ರಕ್ಷಣಾ ಪಡೆಗಳ ಹಿತಾಸಕ್ತಿಯೊಂದಿಗೂ ರಾಜೀ ಆಗುತ್ತಿತ್ತು ಎಂದರು.
ಒಂದು ಶ್ರೇಣಿ ಒಂದು ಪಿಂಚಣಿ ಯೋಜನೆ ಅನುಷ್ಠಾನ, ಆಧುನಿಕ ಯುದ್ಧ ವಿಮಾನಗಳ ಖರೀದಿ, ಯುದ್ಧೋಪಕರಣ ಸಾಮಗ್ರಿಗಳ ಸಂಗ್ರಹ, ಆಧುನಿಕ ರೈಫಲ್‌ ಗಳು, ಗುಂಡು ನಿರೋಧಕ ಜಾಕೆಟ್‌ ಗಳು, ರಕ್ಷಣಾ ಪಡೆಗಳಿಗೆ ಚಳಿಗಾಲದಲ್ಲಿ  ಅಗತ್ಯವಾದ ಸಾಧನಗಳು ಇತ್ಯಾದಿ ಪಟ್ಟಿ ಮಾಡಿದ ಪ್ರಧಾನಮಂತ್ರಿ, ಇದೆಲ್ಲಾ ಹಿಂದಿನ ಸರ್ಕಾರದಲ್ಲಿ ಈಡೇರದೆ ಹಾಗೆ ಉಳಿದಿತ್ತು ಎಂದರು. ಈ ಹಿಂದಿನ ಸರ್ಕಾರಗಳಿಗೆ ರಾಜಕೀಯ ಇಚ್ಛಾಶಕ್ತಿ ಇರಲಿಲ್ಲ ಮತ್ತು ದೇಶದಲ್ಲಿ ಇಂದು ಈ ಪರಿಸ್ಥಿತಿ ಬದಲಾಗುತ್ತಿದೆ ಎಂದು ಹೇಳಿದರು.
ಪ್ರಮುಖ ಸುಧಾರಣೆಗಳು ಅಂದರೆ,ದೇಶದಲ್ಲಿಯೇ ಅತ್ಯಾಧುನಿಕ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ಉತ್ಪಾದಿಸಲು ರಕ್ಷಣಾ ಉತ್ಪಾದನೆಯಲ್ಲಿ ವಿದೇಶೀ ನೇರ ಬಂಡವಾಳದ ವಿನಾಯಿತಿ ನೀಡಲಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. 
ರಕ್ಷಣಾ ಪಡೆಗಳ ಮುಖ್ಯಸ್ಥರ ಹುದ್ದೆಯನ್ನು ಸೃಷ್ಟಿಸುವ ಮೂಲಕ ಸುಧಾರಣೆಗೆ ನಾಂದಿ ಹಾಡಲಾಯಿತು ಮತ್ತು ರಕ್ಷಣಾ ಪಡೆಗಳ ಅಗತ್ಯಕ್ಕೆ ಅನುಗುಣವಾಗಿ ದಾಸ್ತಾನು ಮತ್ತು ಉತ್ಪಾದನೆಯ ನಡುವೆ ಉತ್ತಮ ಸಮನ್ವಯ ಸಾಧಿಸಲಾಗುತ್ತಿದೆ ಎಂದರು. 
ಜಾಗತಿಕ ಮಟ್ಟಕ್ಕೆ ಸರಿಹೊಂದುವಂತೆ ಹೆಚ್ಚುತ್ತಿರುವ ಭಾರತದ ಸ್ವರೂಪದಲ್ಲಿ, ತನ್ನ ಮೂಲಸೌಕರ್ಯಗಳನ್ನು, ಅದರ ಆರ್ಥಿಕ ಮತ್ತು ವ್ಯೂಹಾತ್ಮಕ ಸಾಮರ್ಥ್ಯವನ್ನು ಅದೇ ವೇಗದಲ್ಲಿ ಸುಧಾರಿಸಬೇಕಾಗಿದೆ ಎಂದು ಅವರು ಹೇಳಿದರು.
ಅಟಲ್ ಸುರಂಗವು ಆತ್ಮನಿರ್ಭರ (ಸ್ವಾವಲಂಬಿ) ಆಗುವ ದೇಶದ ಸಂಕಲ್ಪಕ್ಕೆ ಒಂದು ಜ್ವಲಂತ ಉದಾಹರಣೆಯಾಗಿದೆ ಎಂದು ಪ್ರಧಾನಿ ಹೇಳಿದರು.
9.02 ಕಿ.ಮೀ ಉದ್ದದ ಈ ಸುರಂಗ ಮನಾಲಿಯಿಂದ ಲಹೌಲ್ –ಸ್ಪಿತಿ ಕಣಿಯನ್ನು ವರ್ಷವಿಡೀ ಸಂಪರ್ಕಿಸಲಿದೆ. ಈ ಮುನ್ನ ಭಾರೀ ಹಿಮವರ್ಷದ ಕಾರಣ 6 ತಿಂಗಳುಗಳ ಕಾಲ ಕಣಿವೆಯ ಸಂಪರ್ಕ ಕಡಿತವಾಗುತ್ತಿತ್ತು.  
ಈ ಸುರಂಗವನ್ನು ಹಿಮಾಲಯದ ಪಿರ್ ಪಂಜಾಲ್ ಶ್ರೇಣಿಯಲ್ಲಿ ಅತ್ಯಾಧುನಿಕ ವಿಶೇಷಣ (ultra-modern specifications) ಗಳೊಂದಿಗೆ ನಿರ್ಮಿಸಲಾಗಿದ್ದು, ಇದನ್ನು ಸಮುದ್ರ ಮಟ್ಟದಿಂದ ಸರಾಸರಿ (ಎಂಎಸ್ಎಲ್) 3000 ಮೀಟರ್ (10,000 ಅಡಿ) ಎತ್ತರದಲ್ಲಿ ನಿರ್ಮಿಸಲಾಗಿದೆ.
ಈ ಸುರಂಗಮಾರ್ಗವು ಮನಾಲಿ ಮತ್ತು ಲೆಹ್ ನಡುವಿನ ಅಂತರವನ್ನು 46 ಕಿ.ಮೀ. ತಗ್ಗಿಸಲಿದ್ದು, 4ರಿಂದ 5 ಗಂಟೆಗಳ ಸಮಯ ಉಳಿತಾಯವಾಗಲಿದೆ. 
ಇದು ಸುಸಜ್ಜಿತ ಎಲೆಕ್ಟ್ರೋ ಮೆಕ್ಯಾನಿಕಲ್ ವ್ಯವಸ್ಥೆ ಹೊಂದಿದ್ದು, ಇದರಲ್ಲಿ ಸೆಮಿ ಟ್ರಾನ್ಸ್ ವರ್ಸ್ ವಾತಾಯನ ವ್ಯವಸ್ಥೆ, ಎಸ್.ಸಿ.ಎ.ಡಿ.ಎ. ನಿಯಂತ್ರಿತ ಅಗ್ನಿಶಾಮಕ ಹೋರಾಟ ವ್ಯವಸ್ಥೆ, ಪ್ರಕಾಶಮಾನ ಬೆಳಕು ಮತ್ತು ನಿಗಾ ವ್ಯವಸ್ಥೆಯೂ ಸೇರಿದೆ.


***



(Release ID: 1661322) Visitor Counter : 268