ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ, ಇ-ಗೋಪಾಲ ಆ್ಯಪ್ ಮತ್ತು ಬಿಹಾರದಲ್ಲಿ ಹಲವು ಉಪಕ್ರಮಗಳಿಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ

ದೇಶದ ಮೀನುಗಾರಿಕೆ ಕ್ಷೇತ್ರದಲ್ಲಿ ಇದುವರೆಗೆ ಆರಂಭಿಸಲಾದ ಅತಿದೊಡ್ಡ ಕಾರ್ಯಕ್ರಮ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ

ಈ ಯೋಜನೆಯು ಮೀನುಗಾರರಿಗೆ ಹೊಸ ಮೂಲಸೌಕರ್ಯ, ಆಧುನಿಕ ಉಪಕರಣ ಮತ್ತು ಹೊಸ ಮಾರುಕಟ್ಟೆಗಳನ್ನು ಒದಗಿಸುತ್ತದೆ

ಮುಂದಿನ 3 ರಿಂದ 4 ವರ್ಷಗಳಲ್ಲಿ ಮೀನು ರಫ್ತು ದ್ವಿಗುಣಗೊಳಿಸುವ ಗುರಿ ಹೊಂದಲಾಗಿದೆ

Posted On: 10 SEP 2020 3:39PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ, ಇ-ಗೋಪಾಲ ಆ್ಯಪ್ ಮತ್ತು ಬಿಹಾರದಲ್ಲಿ ಮೀನುಗಾರಿಕೆ ಉತ್ಪಾದನೆ, ಡೈರಿ, ಪಶುಸಂಗೋಪನೆ ಮತ್ತು ಕೃಷಿಯಲ್ಲಿನ ಅಧ್ಯಯನಗಳು ಮತ್ತು ಸಂಶೋಧನೆಗಳಿಗೆ ಸಂಬಂಧಿಸಿದ ಹಲವಾರು ಉಪಕ್ರಮಗಳಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ಈ ಎಲ್ಲಾ ಯೋಜನೆಗಳ ಹಿಂದಿನ ಉದ್ದೇಶ ನಮ್ಮ ಹಳ್ಳಿಗಳನ್ನು ಸಬಲೀಕರಣಗೊಳಿಸುವುದು ಮತ್ತು 21 ನೇ ಶತಮಾನದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ (ಆತ್ಮನಿರ್ಭರ ಭಾರತ್) ಮಾಡುವುದಾಗಿದೆ ಎಂದರು.
ಮತ್ಸ್ಯ ಸಂಪದ ಯೋಜನೆಯನ್ನೂ ಸಹ ಇದೇ ಉದ್ದೇಶದಿಂದ ಪ್ರಾರಂಭಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ದೇಶದ 21 ರಾಜ್ಯಗಳಲ್ಲಿ 20,000 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಈ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ, ಈ ಹಣವನ್ನು ಮುಂದಿನ 4-5 ವರ್ಷಗಳಲ್ಲಿ ಖರ್ಚು ಮಾಡಲಾಗುವುದು. ಈ ಪೈಕಿ 1700 ಕೋಟಿ ರೂ.ಗಳ ಯೋಜನೆಗಳಿಗೆ ಇಂದು ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಈ ಯೋಜನೆಯಡಿ ಪಾಟ್ನಾ, ಪೂರ್ನಿಯಾ, ಸೀತಮಾರಿ, ಮಾಧೇಪುರ, ಕಿಶನ್ ಗಂಜ್ ಮತ್ತು ಸಮಸ್ತಿಪುರದಲ್ಲಿ ಅನೇಕ ಸೌಲಭ್ಯಗಳನ್ನು ಉದ್ಘಾಟಿಸಲಾಗಿದೆ ಎಂದು ಪ್ರಧಾನಿ ಹೇಳಿದರು.
ಈ ಯೋಜನೆಯು ಮೀನುಗಾಗರಿಗೆ ಹೊಸ ಮೂಲಸೌಕರ್ಯಗಳು, ಆಧುನಿಕ ಉಪಕರಣಗಳು ಮತ್ತು ಹೊಸ ಮಾರುಕಟ್ಟೆಗಳನ್ನು ಒದಗಿಸುತ್ತದೆ, ಜೊತೆಗೆ ಕೃಷಿ ಮತ್ತು ಇತರ ವಿಧಾನಗಳ ಮೂಲಕ ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತದೆ ಎಂದು ಪ್ರಧಾನಿ ಹೇಳಿದರು.
ಸ್ವಾತಂತ್ರ್ಯದ ನಂತರ ದೇಶದಲ್ಲಿ ಇದೇ ಮೊದಲ ಬಾರಿಗೆ ಮೀನುಗಾರಿಕೆ ಕ್ಷೇತ್ರಕ್ಕೆ ಇಂತಹ ಪ್ರಮುಖ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದರು.
ಮೀನುಗಾರಿಕೆ ಕ್ಷೇತ್ರದ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಮೀನುಗಾರಿಕೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ನಿಭಾಯಿಸುವ ಸಲುವಾಗಿ ಭಾರತ ಸರ್ಕಾರದಲ್ಲಿ ಪ್ರತ್ಯೇಕ ಸಚಿವಾಲಯವನ್ನು ಸೃಷ್ಟಿಸಲಾಗಿದೆ. ಇದು ಮೀನುಗಾರಿಕೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಮೀನುಗಾರರು ಮತ್ತು ಸಹವರ್ತಿಗಳಿಗೆ ಎಂದು ಶ್ರೀ ಮೋದಿ ಹೇಳಿದರು.
ಮುಂಬರುವ 3-4 ವರ್ಷಗಳಲ್ಲಿ ಮೀನಿನ ರಫ್ತು ದ್ವಿಗುಣಗೊಳಿಸುವ ಗುರಿ ಹೊಂದಲಾಗಿದೆ. ಇದು ಮೀನುಗಾರಿಕೆ ಕ್ಷೇತ್ರದಲ್ಲಿಯೇ ಲಕ್ಷಾಂತರ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಈ ವಲಯದ ನನ್ನ ಸ್ನೇಹಿತರೊಂದಿಗೆ ಸಂವಾದ ನಡೆಸಿದ ನಂತರ, ನನ್ನ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಯಿತು ಎಂದು ಅವರು ಹೇಳಿದರು.
ಬಹುತೇಕ ಮೀನು ಸಾಕಾಣಿಕೆಯು ಸ್ವಚ್ಛ ನೀರಿನ ಲಭ್ಯತೆಯ ಮೇಲೆ ಅವಲಂಬಿತವಾಗಿದೆ. ಇದಕ್ಕೆ ಮಿಷನ್ ಕ್ಲೀನ್ ಗಂಗಾ ಮತ್ತಷ್ಟು ಸಹಾಯ ಮಾಡುತ್ತದೆ ಎಂದು ಪ್ರಧಾನಿ ಹೇಳಿದರು. ಗಂಗಾ ನದಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನದಿಗಳಲ್ಲಿ ಸಾಗಣೆಗಾಗಿ ಕೈಗೆತ್ತಿಕೊಳ್ಳುವ ಕೆಲಸದಿಂದ ಮೀನುಗಾರಿಕಾ ವಲಯವೂ ಪ್ರಯೋಜನ ಪಡೆಯಲಿದೆ. ಈ ವರ್ಷ ಆಗಸ್ಟ್ 15 ರಂದು ಘೋಷಿಸಲಾದ ಮಿಷನ್ ಡಾಲ್ಫಿನ್ ಮೀನುಗಾರಿಕೆ ಕ್ಷೇತ್ರದ ಮೇಲೂ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.
ಪ್ರತಿ ಮನೆಗೂ ಸುರಕ್ಷಿತ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ಬಿಹಾರ ಸರ್ಕಾರ ಮಾಡಿರುವ ಕಾರ್ಯವನ್ನು ಪ್ರಧಾನಿ ಶ್ಲಾಘಿಸಿದರು. 4-5 ವರ್ಷಗಳ ಹಿಂದೆ ಬಿಹಾರದಲ್ಲಿ ಕೇವಲ ಶೇ.2 ರಷ್ಟು ಮನೆಗಳಿಗೆ ಮಾತ್ರ ನೀರು ಸರಬರಾಜು ಇತ್ತು. ಈಗ ಬಿಹಾರದಲ್ಲಿ ಶೇ.70ಕ್ಕೂ ಹೆಚ್ಚು ಕುಟುಂಬಗಳು ಶುದ್ಧ ಕುಡಿಯುವ ನೀರಿನ ಪೂರೈಕೆಯ ಸಂಪರ್ಕ ಹೊಂದಿವೆ. ಬಿಹಾರ ಸರ್ಕಾರದ ಕೆಲಸಗಳಿಂದಾಗಿ  ಈಗ ಭಾರತ ಸರ್ಕಾರದ ಜಲ ಜೀವನ್ ಮಿಷನ್ಗೆ ಹೆಚ್ಚಿನ ಬೆಂಬಲ ದೊರೆತಿದೆ ಎಂದು ಪ್ರಧಾನಿ ಹೇಳಿದರು.
ಕೊರೊನಾದ ಈ ಸಮಯದಲ್ಲಿಯೂ ಸಹ, ಬಿಹಾರದ ಸುಮಾರು 60 ಲಕ್ಷ ಮನೆಗಳಿಗೆ ನಲ್ಲಿಯ ಮೂಲಕ ನೀರು ಬರುವಂತೆ ನೋಡಿಕೊಳ್ಳಲಾಗಿದೆ. ಇದು ನಿಜಕ್ಕೂ ದೊಡ್ಡ ಸಾಧನೆಯಾಗಿದೆ ಎಂದು ಅವರು ಹೇಳಿದರು. ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶದ ಬಹುತೇಕ ಎಲ್ಲವೂ ಸ್ಥಗಿತಗೊಂಡಿದ್ದಾಗ ನಮ್ಮ ಹಳ್ಳಿಗಳಲ್ಲಿನ ಕೆಲಸಗಳು ಹೇಗೆ ಮುಂದುವರೆದವು ಎಂಬುದಕ್ಕೆ ಉದಾಹರಣೆ ನೀಡಿದ ಅವರು, ಕೊರೊನಾ ನಡುವೆಯೂ ಧಾನ್ಯಗಳು, ಹಣ್ಣುಗಳು, ತರಕಾರಿಗಳು ಮತ್ತು ಹಾಲು ಯಾವುದೇ ಕೊರತೆಯಿಲ್ಲದೆ ಮಾರುಕಟ್ಟೆಗಳಿಗೆ ಹಾಗೂ ಡೈರಿಗಳಿಗೆ ಬರುತ್ತಿರುವುದು ನಮ್ಮ ಹಳ್ಳಿಗಳ ಶಕ್ತಿಯಾಗಿದೆ ಎಂದು ಹೇಳಿದರು.
ಇದಿಷ್ಟೇ ಅಲ್ಲ, ಈ ಸಂಕಷ್ಟದ ಪರಿಸ್ಥಿತಿಯ ನಡುವೆಯೂ ಡೈರಿ ಉದ್ಯಮವು ದಾಖಲೆಯ ಖರೀದಿಗಳನ್ನು ಮಾಡಿದೆ. ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿಯಿಂದ ದೇಶದ 10 ಕೋಟಿಗೂ ಹೆಚ್ಚು ರೈತರಿಗೆ, ವಿಶೇಷವಾಗಿ ಬಿಹಾರದ ಸುಮಾರು 75 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣವನ್ನು ವರ್ಗಾಯಿಸಲಾಗಿದೆ ಎಂದು ಅವರು ಹೇಳಿದರು.
ಬಿಹಾರವು ಕೊರೊನಾದ ಜೊತೆಗೆ ಪ್ರವಾಹವನ್ನೂ ಕೂಡ ಧೈರ್ಯದಿಂದ ಎದುರಿಸಿದೆ ಎಂಬುದು ಪ್ರಶಂಸನೀಯವಾದುದು. ಪರಿಹಾರ ಕಾರ್ಯಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಎರಡೂ ಪ್ರಯತ್ನಗಳನ್ನು ಕೈಗೊಂಡಿವೆ ಎಂದು ಅವರು ಹೇಳಿದರು.
ಉಚಿತ ಪಡಿತರ ಯೋಜನೆ ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ರೋಜ್ಗಾರ್ ಅಭಿಯಾನ್ ಪ್ರಯೋಜನಗಳು ಬಿಹಾರದಲ್ಲಿ ಅಗತ್ಯವಿರುವ ಪ್ರತಿಯೊಬ್ಬರಿಗೂ ಮತ್ತು ಹೊರ ರಾಜ್ಯಗಳಿಂದ ಹಿಂದಿರುಗಿರುವ ಪ್ರತಿ ವಲಸೆ ಕುಟುಂಬವನ್ನು ತಲುಪಿವೆ. ಉಚಿತ ಪಡಿತರ ಯೋಜನೆಯನ್ನು ದೀಪಾವಳಿ ಮತ್ತು ಛಾತ್ ಪೂಜೆಯವರೆಗೆ ವಿಸ್ತರಿಸಲಾಗಿದೆ ಎಂದು ಅವರು ಹೇಳಿದರು.
ಕೊರೊನಾ ಬಿಕ್ಕಟ್ಟಿನಿಂದಾಗಿ ನಗರಗಳಿಂದ ಮರಳಿರುವ ಅನೇಕ ಕಾರ್ಮಿಕರು ಪಶುಸಂಗೋಪನೆ ಕಡೆಗೆ ಮುಖ ಮಾಡಿದ್ದಾರೆ. ಅವರಿಗೆ ಕೇಂದ್ರ ಸರ್ಕಾರ ಮತ್ತು ಬಿಹಾರ ಸರ್ಕಾರದ ಅನೇಕ ಯೋಜನೆಗಳಿಂದ ಬೆಂಬಲ ಸಿಗುತ್ತಿದೆ ಎಂದು ಪ್ರಧಾನಿ ಹೇಳಿದರು. ರೈತರು ಮತ್ತು ಜಾನುವಾರು ಸಾಕಣೆದಾರರಿಗೆ ಹೆಚ್ಚಿನ ಆದಾಯ ದೊರೆಯುವಂತೆ ಮಾಡಲು ಹೊಸ ಉತ್ಪನ್ನಗಳ ತಯಾರಿಕೆ, ಹೊಸ ಆವಿಷ್ಕಾರಗಳಿಂದ ದೇಶದ ಡೈರಿ ಕ್ಷೇತ್ರವನ್ನು ವಿಸ್ತರಿಸಲು ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು. ಇದರೊಂದಿಗೆ, ದೇಶದ ಜಾನುವಾರುಗಳ ಗುಣಮಟ್ಟವನ್ನು ಸುಧಾರಿಸುವುದು, ಅವುಗಳ ಸ್ವಚ್ಛತೆ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮತ್ತು ಪೌಷ್ಠಿಕ ಆಹಾರದ ಲಭ್ಯತೆಯ ಬಗ್ಗೆ ಗಮನ ಕೇಂದ್ರೀಕರಿಸಲಾಗುವುದು. ಈ ಗುರಿಯೊಂದಿಗೆ, 50 ಕೋಟಿಗೂ ಹೆಚ್ಚು ಜಾನುವಾರುಗಳಿಗೆ ಕಾಲು ಮತ್ತು ಬಾಯಿ ರೋಗ ಮತ್ತು ಬ್ರೂಸೆಲೋಸಿಸ್ ನಿಂದ ರಕ್ಷಣೆ ನೀಡಲು ಉಚಿತ ಲಸಿಕಾ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಜಾನುವಾರುಗಳಿಗೆ ಉತ್ತಮ ಮೇವು ಒದಗಿಸಲು ವಿವಿಧ ಯೋಜನೆಗಳ ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಧಾನಿ ಹೇಳಿದರು. 
ಉತ್ತಮ ದೇಶೀ ತಳಿಗಳನ್ನು ಅಭಿವೃದ್ಧಿಪಡಿಸಲು ಮಿಷನ್ ಗೋಕುಲ್ ನಡೆಯುತ್ತಿದೆ ಎಂದ ಅವರು, ವರ್ಷದ ಹಿಂದೆ ದೇಶಾದ್ಯಂತ ಕೃತಕ ಗರ್ಭಧಾರಣೆಯ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು, ಇಂದಿಗೆ ಮೊದಲ ಹಂತ ಪೂರ್ಣಗೊಂಡಿದೆ ಎಂದು ಅವರು ಹೇಳಿದರು.
ಗುಣಮಟ್ಟದ ದೇಶೀ ತಳಿಗಳ ಅಭಿವೃದ್ಧಿಗೆ ಬಿಹಾರ ಈಗ ಪ್ರಮುಖ ಕೇಂದ್ರವಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ರಾಷ್ಟ್ರೀಯ ಗೋಕುಲ್ ಮಿಷನ್ ಅಡಿಯಲ್ಲಿ ಇಂದು ಪೂರ್ನಿಯಾ, ಪಾಟ್ನಾ ಮತ್ತು ಬಾರೌನಿಗಳಲ್ಲಿ ನಿರ್ಮಿಸಲಾದ ಆಧುನಿಕ ಸೌಲಭ್ಯಗಳಿಂದಾಗಿ ಬಿಹಾರ ಡೈರಿ ಕ್ಷೇತ್ರದಲ್ಲಿ ಬಲಗೊಳ್ಳಲಿದೆ. ಪೂರ್ನಿಯಾದಲ್ಲಿ ನಿರ್ಮಿಸಲಾಗಿರುವ ಕೇಂದ್ರವು ಭಾರತದ ಅತಿದೊಡ್ಡ ಕೇಂದ್ರಗಳಲ್ಲಿ ಒಂದಾಗಿದೆ. ಇದು ಬಿಹಾರಕ್ಕೆ ಮಾತ್ರವಲ್ಲದೆ ಪೂರ್ವ ಭಾರತದ ಬಹುತೇಕ ಭಾಗಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಈ ಕೇಂದ್ರವು ಬಿಹಾರದ ದೇಶೀ ತಳಿಗಳಾದ 'ಬಚೌರ್' ಮತ್ತು 'ರೆಡ್ ಪೂರ್ನಿಯಾ'ಗಳ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ಮತ್ತಷ್ಟು ಉತ್ತೇಜನ ನೀಡುತ್ತದೆ ಎಂದು ಅವರು ಹೇಳಿದರು.
ಸಾಮಾನ್ಯವಾಗಿ ಒಂದು ಹಸು ಒಂದು ವರ್ಷದಲ್ಲಿ ಒಂದು ಕರುವಿಗೆ ಜನ್ಮ ನೀಡುತ್ತದೆ. ಆದರೆ ಐವಿಎಫ್ ತಂತ್ರಜ್ಞಾನದ ಸಹಾಯದಿಂದ, ಒಂದು ವರ್ಷದಲ್ಲಿ ಅನೇಕ ಕರುಗಳನ್ನು ಪಡೆಯಲು ಸಾಧ್ಯವಿದೆ ಎಂದು ಪ್ರಧಾನಿ ಹೇಳಿದರು. ಈ ತಂತ್ರಜ್ಞಾನವನ್ನು ಪ್ರತಿ ಹಳ್ಳಿಗೂ ತಲುಪಿಸುವುದು ನಮ್ಮ ಗುರಿ. ಜಾನುವಾರುಗಳ ಉತ್ತಮ ತಳಿಯ ಜೊತೆಗೆ, ಅವುಗಳ ಆರೈಕೆಯ ಬಗ್ಗೆ ಸರಿಯಾದ ವೈಜ್ಞಾನಿಕ ಮಾಹಿತಿಯೂ ಅಷ್ಟೇ ಮುಖ್ಯವಾಗಿದೆ ಎಂದು ಅವರು ಹೇಳಿದರು. ಇಂದು ಆರಂಭಿಸಲಾದ ಇ-ಗೋಪಾಲ ಅಪ್ಲಿಕೇಶನ್ ಆನ್ಲೈನ್ ಡಿಜಿಟಲ್ ಮಾಧ್ಯಮವಾಗಿದ್ದು, ಉತ್ತಮ ಗುಣಮಟ್ಟದ ಜಾನುವಾರುಗಳನ್ನು ಆಯ್ಕೆ ಮಾಡಲು ಮತ್ತು ಮಧ್ಯವರ್ತಿಗಳಿಂದ ಮುಕ್ತಿ ಪಡೆಯಲು ರೈತರಿಗೆ ಸಹಾಯ ಮಾಡುತ್ತದೆ. ಈ ಅಪ್ಲಿಕೇಶನ್ ಜಾನುವಾರುಗಳ ಆರೈಕೆಗೆ ಸಂಬಂಧಿಸಿದಂತೆ ಉತ್ಪಾದಕತೆಯಿಂದ ಹಿಡಿದು ಅದರ ಆರೋಗ್ಯ ಮತ್ತು ಆಹಾರಕ್ರಮದವರೆಗೆ ಎಲ್ಲಾ ಮಾಹಿತಿಯನ್ನು ನೀಡುತ್ತದೆ. ಈ ಕೆಲಸ ಪೂರ್ಣಗೊಂಡಾಗ, ಇ-ಗೋಪಾಲ ಅಪ್ಲಿಕೇಶನ್ನಲ್ಲಿ ಪ್ರಾಣಿ ಆಧಾರ್ ಸಂಖ್ಯೆಯನ್ನು ಸೇರಿಸುವುದರಿಂದ ಆ ಪ್ರಾಣಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಸುಲಭವಾಗಿ ನೀಡಲಾಗುತ್ತದೆ. ಇದು ಜಾನುವಾರು ಮಾಲೀಕರಿಗೆ ಅವುಗಳ ಖರೀದಿ ಮತ್ತು ಮಾರಾಟ ಸುಲಭವಾಗಿಸುತ್ತದೆ ಎಂದು ಪ್ರಧಾನಿ ತಿಳಿಸಿದರು.
ಕೃಷಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಮುಂತಾದ ಕ್ಷೇತ್ರಗಳನ್ನು ವೇಗವಾಗಿ ಅಭಿವೃದ್ಧಿಪಡಿಸಲು ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಮತ್ತು ಹಳ್ಳಿಗಳಲ್ಲಿ ಆಧುನಿಕ ಮೂಲಸೌಕರ್ಯಗಳನ್ನು ನಿರ್ಮಿಸುವುದು ಅಗತ್ಯವಾಗಿದೆ. ಕೃಷಿಗೆ ಸಂಬಂಧಿಸಿದ ಶಿಕ್ಷಣ ಮತ್ತು ಸಂಶೋಧನೆಗೆ ಬಿಹಾರ ಪ್ರಮುಖ ಕೇಂದ್ರವಾಗಿದೆ ಎಂದು ಪ್ರಧಾನಿ ಹೇಳಿದರು.
ದೆಹಲಿಯ ಪೂಸಾ ಇನ್ಸ್ಟಿಟ್ಯೂಟ್ ಬಿಹಾರದ ಸಮಸ್ತಿಪುರ ಬಳಿಯಿರುವ ಪೂಸಾ ಪಟ್ಟಣವನ್ನು ಉಲ್ಲೇಖಿಸುತ್ತದೆ ಎಂದು ಕೆಲವೇ ಜನರಿಗೆ ಮಾತ್ರ ತಿಳಿದಿದೆ. ವಸಾಹತುಶಾಹಿ ಆಳ್ವಿಕೆಯ ಕಾಲದಲ್ಲಿಯೇ ಸಮಸ್ತಿಪುರದ ಪೂಸಾದಲ್ಲಿ ರಾಷ್ಟ್ರಮಟ್ಟದ ಕೃಷಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಯಿತು ಎಂದು ಅವರು ಹೇಳಿದರು. ಡಾ.ರಾಜೇಂದ್ರ ಪ್ರಸಾದ್ ಮತ್ತು ಜನನಾಯಕ ಕರ್ಪೂರಿ ಠಾಕೂರ್ ಅವರಂತಹ ದೂರದೃಷ್ಟಿಯ ನಾಯಕರು ಸ್ವಾತಂತ್ರ್ಯಾನಂತರ ಈ ಸಂಪ್ರದಾಯವನ್ನು ಮುಂದುವರಿಸಿದರು ಎಂದು ಅವರು ಹೇಳಿದರು. 
ಈ ಪ್ರಯತ್ನಗಳಿಂದ ಸ್ಫೂರ್ತಿ ಪಡೆದು 2016 ರಲ್ಲಿ ಡಾ.ರಾಜೇಂದ್ರ ಪ್ರಸಾದ್ ಕೃಷಿ ವಿಶ್ವವಿದ್ಯಾಲಯವನ್ನು ಕೇಂದ್ರೀಯ ವಿಶ್ವವಿದ್ಯಾಲಯವೆಂದು ಘೋಷಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಇದರ ನಂತರ, ವಿಶ್ವವಿದ್ಯಾನಿಲಯದಲ್ಲಿ ಮತ್ತು ಅದಕ್ಕೆ ಸಂಬಂಧಿಸಿದ ಕಾಲೇಜುಗಳಲ್ಲಿ ಕೋರ್ಸ್ಗಳನ್ನು ವ್ಯಾಪಕವಾಗಿ ವಿಸ್ತರಿಸಲಾಯಿತು. ಕೃಷಿ-ವ್ಯವಹಾರ ಮತ್ತು ಗ್ರಾಮೀಣ ನಿರ್ವಹಣೆಯ ಶಾಲೆಯ ಹೊಸ ಕಟ್ಟಡವನ್ನು ಉದ್ಘಾಟಿಸಲಾಗಿದೆ. ಇದಲ್ಲದೆ, ಹೊಸ ಹಾಸ್ಟೆಲ್ಗಳು, ಕ್ರೀಡಾಂಗಣಗಳು ಮತ್ತು ಅತಿಥಿ ಗೃಹಗಳನ್ನು ಸಹ ನಿರ್ಮಿಸಲಾಗಿದೆ ಎಂದು ಅವರು ಹೇಳಿದರು.
ಕೃಷಿ ಕ್ಷೇತ್ರದ ಆಧುನಿಕ ಅಗತ್ಯಗಳನ್ನು ಗಮನಿಸಿ ದೇಶದಲ್ಲಿ 3 ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ, 5-6 ವರ್ಷಗಳ ಹಿಂದೆ ಕೇವಲ ಒಂದು ವಿಶ್ವವಿದ್ಯಾಲಯ ಇತ್ತು. ಬಿಹಾರದಲ್ಲಿ ಪ್ರತಿವರ್ಷ ಬರುವ ಪ್ರವಾಹದಿಂದ ಕೃಷಿಯನ್ನು ರಕ್ಷಿಸಲು ಮಹಾತ್ಮ ಗಾಂಧಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಯಿತು. ಅಂತೆಯೇ, ಮೋತಿಪುರದಲ್ಲಿ ಮೀನುಗಳ ಪ್ರಾದೇಶಿಕ ಸಂಶೋಧನೆ ಮತ್ತು ತರಬೇತಿ ಕೇಂದ್ರ, ಮೋತಿಹರಿಯಲ್ಲಿ ಪಶುಸಂಗೋಪನೆ ಮತ್ತು ಡೈರಿ ಅಭಿವೃದ್ಧಿ ಕೇಂದ್ರ ಮತ್ತು ಅಂತಹ ಅನೇಕ ಸಂಸ್ಥೆಗಳನ್ನು ಕೃಷಿಯನ್ನು ವಿಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ಬೆಸೆಯಲು ಪ್ರಾರಂಭಿಸಲಾಗಿದೆ ಎಂದು ಪ್ರಧಾನಿ ಹೇಳಿದರು.
ಹಳ್ಳಿಗಳಿಗೆ ಹತ್ತಿರದಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳು ಮತ್ತು ಸಂಶೋಧನಾ ಕೇಂದ್ರಗಳ ಸಮೂಹಗಳನ್ನು ಸ್ಥಾಪಿಸಬೇಕು ಮತ್ತು ಅದರೊಂದಿಗೆ ನಾವು ಜೈ ಕಿಸಾನ್, ಜೈ ವಿಜ್ಞಾನ್ ಮತ್ತು ಜೈ ಅನುಸಂಧಾನ್ ಧ್ಯೇಯವಾಕ್ಯವನ್ನು ಸಾಧಿಸಬಹುದು ಎಂದು ಪ್ರಧಾನಿ ಹೇಳಿದರು.
ವಿಶೇಷ ಮೂಲಸೌಕರ್ಯಗಳನ್ನು ಸೃಷ್ಟಿಸಲು ಮತ್ತು ಶೇಖರಣೆ, ಶೈತ್ಯಾಗಾರಗಳು ಮತ್ತು ಇತರ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಎಫ್ಪಿಒಗಳು, ಸಹಕಾರಿ ಗುಂಪುಗಳಿಗೆ ನೆರವು ನೀಡಲು ಕೇಂದ್ರ ಸರ್ಕಾರವು 1 ಲಕ್ಷ ಕೋಟಿ ರೂ. ಕೃಷಿ ಮೂಲಸೌಕರ್ಯ ಅಭಿವೃದ್ಧಿ ನಿಧಿಯನ್ನು ಸ್ಥಾಪಿಸಿದೆ ಎಂದು ಪ್ರಧಾನಿ ಹೇಳಿದರು.
ಮಹಿಳೆಯರ ಸ್ವಸಹಾಯ ಸಂಘಗಳಿಗೆ ಸಹ ಉತ್ತಮ ಬೆಂಬಲ ನೀಡಲಾಗುತ್ತಿದೆ. ಕಳೆದ 6 ವರ್ಷಗಳಲ್ಲಿ ಈ ಬೆಂಬಲವು 32 ಪಟ್ಟು ಹೆಚ್ಚಾಗಿದೆ ಎಂದರು.
ದೇಶದ ಎಲ್ಲಾ ಹಳ್ಳಿಗಳನ್ನು ಪ್ರಗತಿಯ ಎಂಜಿನ್ಗಳಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ. ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಅವುಗಳಿಗೆ ನೆರವು ನೀಡಲಾಗುತ್ತಿದೆ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಹೇಳಿದರು.

****

 



(Release ID: 1653040) Visitor Counter : 176