ಪರಿಸರ ಮತ್ತು ಅರಣ್ಯ ಸಚಿವಾಲಯ

ವಾಯುಮಾಲಿನ್ಯವನ್ನು ತಗ್ಗಿಸಲು ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಕೈಗಾರಿಕೆಗಳು ನಾಗರಿಕರ ಸಮನ್ವಯದಲ್ಲಿ ಕೆಲಸ ಮಾಡಬೇಕು: ಕೇಂದ್ರ ಸಚಿವ ಶ್ರೀ ಪ್ರಕಾಶ್ ಜಾವಡೇಕರ್



ಅಂತಾರಾಷ್ಟ್ರೀಯ ಶುದ್ಧ ಗಾಳಿ, ಸ್ವಚ್ಛ ಆಕಾಶ ದಿನದ ಅಂಗವಾಗಿ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳಿಂದ ಅಧಿಕ ಮಾಲಿನ್ಯದ 122 ನಗರಗಳಲ್ಲಿ ವಾಯುಮಾಲಿನ್ಯವನ್ನು ತಗ್ಗಿಸುವ ಮಾರ್ಗೋಪಾಯಗಳ ಬಗ್ಗೆ ಚರ್ಚೆ

Posted On: 07 SEP 2020 7:33PM by PIB Bengaluru

ಅಧಿಕ ಮಾಲಿನ್ಯದ 122 ನಗರಗಳಲ್ಲಿ ವಾಯುಮಾಲಿನ್ಯವನ್ನು ಕಡಿಮೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಪರಿಸರ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಮೊದಲ ಅಂತಾರಾಷ್ಟ್ರೀಯ ಶುದ್ಧ ಗಾಳಿ, ಸ್ವಚ್ಛ ಆಕಾಶ ದಿನದ ಅಂಗವಾಗಿ ಅವರು ವೆಬಿನಾರ್ ಮೂಲಕ ಮಾತನಾಡಿದರು. ವಾಯು ಮಾಲಿನ್ಯ ಸಮಸ್ಯೆಯ ಬಗ್ಗೆ ಒತ್ತಿಹೇಳಿದ ಪರಿಸರ ಸಚಿವರು, 2014 ರಲ್ಲಿ ಸರ್ಕಾರವು ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಮೇಲ್ವಿಚಾರಣೆಯನ್ನು ಪ್ರಾರಂಭಿಸಿದೆ ಮತ್ತು ಇಂದು ನಾವು ಎಂಟು ಮಾನದಂಡಗಳಲ್ಲಿ ಮಾಲಿನ್ಯದ ಮಟ್ಟವನ್ನು ಪತ್ತೆ ಮಾಡುತ್ತಿದ್ದೇವೆ ಎಂದು ಹೇಳಿದರು.
 

ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ವಾಯುಮಾಲಿನ್ಯದ ವಿಷಯವನ್ನು ಪ್ರಸ್ತಾಪಿಸಿದ್ದಕ್ಕಾಗಿ ಮತ್ತು 100 ನಗರಗಳಲ್ಲಿ ಗಾಳಿಯ ಗುಣಮಟ್ಟದಲ್ಲಿ ಸಮಗ್ರ ಸುಧಾರಣೆಯ ಗುರಿಯನ್ನು ಹೊಂದಿದ್ದಕ್ಕಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಸಚಿವರು ಧನ್ಯವಾದ ತಿಳಿಸಿದರು. ಈ ಬದಲಾವಣೆಯನ್ನು ತರಲು ಪ್ರಧಾನ ಮಂತ್ರಿಯವರೇ ತೀರ್ಮಾನಿಸಿದ್ದಾರೆ ಎಂದು ಸಚಿವರು ಹೇಳಿದರು.

ಶ್ರೀ ಜಾವಡೇಕರ್ ಅವರೊಂದಿಗೆ ರಾಜ್ಯ ಸಚಿವ ಶ್ರೀ ಬಾಬುಲ್ ಸುಪ್ರಿಯೋ ಮತ್ತು ಪರಿಸರ ಸಚಿವಾಲಯದ ಕಾರ್ಯದರ್ಶಿ ಶ್ರೀ ಆರ್ ಪಿ ಗುಪ್ತಾ ಅವರು ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದ (ಎನ್‌ಸಿಎಪಿ) ಅಡಿಯಲ್ಲಿ ವಾಯುಮಾಲಿನ್ಯವನ್ನು ಎದುರಿಸಲು ಸಮಗ್ರ ಕ್ರಮಗಳ ಕುರಿತು ಕರಪತ್ರವನ್ನು ಬಿಡುಗಡೆ ಮಾಡಿದರು. (Link)

ದೇಶವು ಈಗ ಬಿಎಸ್-VI ಮಾನದಂಡಗಳಲ್ಲಿರುವುದರಿಂದ, ದೇಶದಲ್ಲಿ ಗುಣಮಟ್ಟದ ಪೆಟ್ರೋಲ್ ಮತ್ತು ಡೀಸೆಲ್ ಒದಗಿಸಲಾಗುತ್ತಿದ್ದು, ಇದು ಮಾಲಿನ್ಯದ ವಿರುದ್ಧ ಹೋರಾಡುವ ಪ್ರಮುಖ ಉದ್ದೇಶವಾಗಿದೆ ಎಂದು ಸಚಿವರು ಹೇಳಿದರು. ಕಳೆದ ಕೆಲವು ವರ್ಷಗಳಲ್ಲಿ, ರಸ್ತೆಗಳು ಮತ್ತು ಹೆದ್ದಾರಿಗಳನ್ನು ಸರ್ಕಾರವು ದಾಖಲೆಯ ವೇಗದಲ್ಲಿ ನಿರ್ಮಿಸುತ್ತಿದೆ. ಇದರಿಂದಾಗಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈಗ ಮಾಲಿನ್ಯ ಕಡಿಮೆಯಾಗಿದೆ ಎಂದು ಅವರು ಹೇಳಿದರು.
ಪ್ರತಿ ನಗರವು ವಿಭಿನ್ನ ಮಾಲಿನ್ಯದ ಮೂಲಗಳನ್ನು ಹೊಂದಿರುವುದರಿಂದ ರಾಜ್ಯಗಳು ಈಗ ನಗರ ನಿರ್ದಿಷ್ಟ ಯೋಜನೆಗಳೊಂದಿಗೆ ಕೆಲಸ ಮಾಡಬೇಕು. ಎಲೆಕ್ಟ್ರಿಕ್ ವಾಹನದ ಬಳಕೆಯನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು. ಇಟ್ಟಿಗೆ ಗೂಡುಗಳಿಂದ ಹೊರಬರುವ ಮಾಲಿನ್ಯವನ್ನು ಕಡಿಮೆ ಮಾಡಲು ರಾಜ್ಯಗಳು ಜಿಗ್ ಜಾಗ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಗಾಳಿಯನ್ನು ಸ್ವಚ್ಛಗೊಳಿಸಲು ಜನರ ಸಹಭಾಗಿತ್ವ ಅಗತ್ಯ ಎಂದ ಸಚಿವರು ಕಾರುಗಳ ಪೂಲಿಂಗ್ ಮತ್ತು ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಉತ್ತೇಜಿಸಬೇಕು ಎಂದು ಹೇಳಿದರು.
ಕಳೆದ ವರ್ಷದ ಜನವರಿಯಲ್ಲಿ, ಪರಿಸರ ಸಚಿವಾಲಯವು ವಾಯುಮಾಲಿನ್ಯದ ಸಮಸ್ಯೆಯನ್ನು ಸಮಗ್ರ ರೀತಿಯಲ್ಲಿ ನಿಭಾಯಿಸಲು ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮವನ್ನು (ಎನ್‌ಸಿಎಪಿ) ಪ್ರಾರಂಭಿಸಿದೆ. 2017ನ್ನು ಮೂಲ ವರ್ಷ್ವಾಗಿ ಮಾಡಿಕೊಂಡು 2024 ರ ವೇಳೆಗೆ ಪಿಎಂ 10 ಮತ್ತು ಪಿಎಂ 2.5 ಸಾಂದ್ರತೆಗಳಲ್ಲಿ 20 ರಿಂದ 30 ರಷ್ಟು ಕಡಿತವನ್ನು ಸಾಧಿಸುವ ಗುರಿಯನ್ನು ಹೊಂದಲಾಗಿದೆ. ಈ ಯೋಜನೆಯು ಮೊದಲು 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 102 ಅಧಿಕ ಮಾಲಿನ್ಯದ ನಗರಗಳನ್ನು ಗುರುತಿಸಿತ್ತು. ಗಾಳಿಯ ಗುಣಮಟ್ಟದ ಕುರಿತ ಇತ್ತೀಚಿನ ದತ್ತಾಂಶದ ಆಧಾರದ ಮೇಲೆ ಎನ್‌ಸಿಎಪಿ ಅಡಿಯಲ್ಲಿ ಇನ್ನೂ 20 ನಗರಗಳನ್ನು ಸೇರಿಸಲಾಗಿದೆ.
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಮೊದಲ ಬಾರಿಗೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಶುದ್ಧ ಗಾಳಿ, ಸ್ವಚ್ಛ ಆಕಾಶ ದಿನದಂದು ವೆಬಿನಾರ್‌ನಲ್ಲಿ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ನಗರಾಭಿವೃದ್ಧಿ ಇಲಾಖೆ ಮತ್ತು ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಭಾಗವಹಿಸಿದ್ದರು. ಎನ್‌ಸಿಎಪಿ ಕಾರ್ಯಕ್ರಮದಲ್ಲಿ ಗುರುತಿಸಲ್ಪಟ್ಟ 122 ನಗರಗಳ ಆಯುಕ್ತರು ಸಹ ಭಾಗವಹಿಸಿ ತಮ್ಮ ಅನುಭವಗಳು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಂಡರು.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2019 ರ ಡಿಸೆಂಬರ್ 19 ರಂದು, 2020 ರಿಂದ ಪ್ರತಿವರ್ಷ ಸೆಪ್ಟೆಂಬರ್ 07 ರಂದು ಅಂತಾರಾಷ್ಟ್ರೀಯ ಶುದ್ಧ ಗಾಳಿ, ಸ್ವಚ್ಛ ಆಕಾಶ ದಿನವನ್ನು ಆಚರಿಸುವ ನಿರ್ಣಯವನ್ನು ಅಂಗೀಕರಿಸಿತು.


***



(Release ID: 1652157) Visitor Counter : 296