ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ನರೇಂದ್ರ ಮೋದಿ ಅವರಿಂದ “ಪಾರದರ್ಶಕ ತೆರಿಗೆ ವ್ಯವಸ್ಥೆ - ಪ್ರಾಮಾಣಿಕತೆಗೆ ಗೌರವ” ವೇದಿಕೆಗೆ ಚಾಲನೆ


ತಡೆರಹಿತ, ಕಷ್ಟರಹಿತ, ಭಯರಹಿತ ತೆರಿಗೆ ವ್ಯವಸ್ಥೆಯ ಗುರಿ: ಪ್ರಧಾನಿ

130 ಕೋಟಿ ಜನರಿರುವ ದೇಶದಲ್ಲಿ ಕೇವಲ 1.5 ಕೋಟಿ ಜನರು ಮಾತ್ರವೇ ತೆರಿಗೆ ಪಾವತಿಸುತ್ತಿದ್ದು, ತೆರಿಗೆದಾರರ ಸಂಖ್ಯೆ ಗಣನೀಯವಾಗಿ ಕಡಿಮೆ ಇದೆ

ಆತ್ಮನಿರ್ಭರ ಭಾರತ: ಬಾಕಿ ಇರುವ ಆದಾಯ ತೆರಿಗೆ ಪಾವತಿ ಆತ್ಮಾವಲೋಕನಕ್ಕೆ ಪ್ರಧಾನಿ ಮನವಿ

ತೆರಿಗೆ ಸನ್ನದು ಆರಂಭದೊಂದಿಗೆ, ತೆರಿಗೆದಾರರಿಗೆ ನ್ಯಾಯಯುತ, ಸೌಜನ್ಯಯುತ ಮತ್ತು ತರ್ಕಬದ್ಧ ನಡವಳಿಕೆಯ ಖಾತ್ರಿ ಇರುತ್ತದೆ: ಪ್ರಧಾನಿ

ಮುಖಾಮುಖಿ ರಹಿತ ಮೇಲ್ಮನವಿ ಸೌಲಭ್ಯ ದೀನ್ ದಯಾಳ್ ಉಪಾಧ್ಯಾಯ ಜನ್ಮ ದಿನ ಸೆಪ್ಟೆಂಬರ್ 25 ರಿಂದ ದೇಶದಾದ್ಯಂತ ಲಭ್ಯ: ಪ್ರಧಾನಿ

“ಬ್ಯಾಂಕಿಂಗ್ ಸೌಲಭ್ಯವಿಲ್ಲದವರಿಗೆ ಬ್ಯಾಂಕಿಂಗ್, ಅಸುರಕ್ಷಿತರಿಗೆ ಸುರಕ್ಷತೆ, ಸಾಲ ಸೌಲಭ್ಯ ವಂಚಿತರಿಗೆ ಸಾಲ ಮತ್ತು ಪ್ರಾಮಾಣಿಕತೆಯನ್ನು ಗೌರವಿಸಲು” - ಸರ್ಕಾರದ ಗಮನ: ಪ್ರಧಾನಿ

ಎಲ್ಲ ಕಾನೂನು ಮತ್ತು ನೀತಿಗಳನ್ನು ಆಡಳಿತ ಕೇಂದ್ರಿತವಾಗುವುದರ ಬದಲು ಜನ ಕೇಂದ್ರಿತ ಮತ್ತು ಸಾರ್ವಜನಿಕ ಸ್ನೇಹಿ ಮಾಡಲು ಒತ್ತು: ಪ್ರಧಾನಿ

Posted On: 13 AUG 2020 1:59PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು “ಪಾರದರ್ಶಕ ತೆರಿಗೆ ವ್ಯವಸ್ಥೆ – ಪ್ರಾಮಾಣಿಕತೆಗೆ ಗೌರವ’ ವೇದಿಕೆಗೆ ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ರಚನಾತ್ಮಕ ಸುಧಾರಣೆ ಇಂದು ಹೊಸ ಮಜಲು ತಲುಪಿದೆ ಎಂದು ಹೇಳಿದರು. “ಪಾರದರ್ಶಕ ತೆರಿಗೆ ವ್ಯವಸ್ಥೆ – ಪ್ರಾಮಾಣಿಕತೆಗೆ ಗೌರವ’ ವೇದಿಕೆಯನ್ನು 21ನೇ ಶತಮಾನದ ತೆರಿಗೆ ಪದ್ಧತಿಯ ಅಗತ್ಯಗಳನ್ನು ಪೂರೈಸಲು ಆರಂಭಿಸಲಾಗಿದೆ ಎಂದು ತಿಳಿಸಿದರು. ಈ ವೇದಿಕೆಯು ಮುಖಾಮುಖಿ ರಹಿತ ನಿರ್ಧರಣೆ, ಮುಖಾಮುಖಿ ರಹಿತ ಮೇಲ್ಮನವಿ ಮತ್ತು ತೆರಿಗೆದಾರರ ಸನ್ನದಿನಂತಹ ಪ್ರಮುಖ ಸುಧಾರಣೆ ಹೊಂದಿದೆ ಎಂದು ವಿವರಿಸಿದರು.

ಮುಖಾಮುಖಿರಹಿತ ನಿರ್ಧರಣೆ ಮತ್ತು ತೆರಿಗಾದಾರರ ಸನ್ನದು ಇಂದಿನಿಂದ ಜಾರಿಗೆ ಬಂದಿದ್ದು, ಮುಖಾಮುಖಿ ರಹಿತ ಮೇಲ್ಮನವಿ ಸೌಲಭ್ಯವು ದೇಶದಾದ್ಯಂತ ಜನತೆಗೆ 25ನೇ ಸೆಪ್ಟೆಂಬರ್ ನಿಂದ ಅಂದರೆ ದೀನ್ ದಯಾಳ್ ಉಪಾಧ್ಯಾಯ ಜಯಂತಿಯ ದಿನದಿಂದ ಲಭ್ಯವಾಗಲಿದೆ ಎಂದರು. ಹೊಸ ವೇದಿಕೆ ಮುಖಾಮುಖಿರಹಿತವಾಗಿರುವುದಷ್ಟೇ ಅಲ್ಲದೆ, ತೆರಿಗೆದಾರರ ವಿಶ್ವಾಸವನ್ನೂ ಹೆಚ್ಚಿಸುತ್ತದೆ ಮತ್ತು ಆಕೆ/ಆತನನ್ನು ಭಯರಹಿತಗೊಳಿಸುತ್ತದೆ.

ಕಳೆದ ಆರು ವರ್ಷಗಳಲ್ಲಿ ಸರ್ಕಾರ ಬ್ಯಾಂಕ್ ಸೌಲಭ್ಯ ರಹಿತರಿಗೆ ಬ್ಯಾಂಕಿಂಗ್, ಅಸುರಕ್ಷಿತರಿಗೆ ಸುರಕ್ಷತೆ, ಸಾಲ ಸೌಲಭ್ಯ ವಂಚಿತರಿಗೆ ಸಾಲ ಒದಗಿಸಲು ಗಮನ ಹರಿಸಿದೆ, ಮತ್ತು ಈ ಪ್ರಾಮಾಣಿಕತೆಗೆ ಗೌರವ ನೀಡುವ ವೇದಿಕೆ ಅದೇ ನಿಟ್ಟಿನಲ್ಲಿದೆ ಎಂದು ಹೇಳಿದರು.

ದೇಶ ನಿರ್ಮಾಣದಲ್ಲಿ ಪ್ರಾಮಾಣಿಕ ತೆರಿಗೆದಾರರ ಪಾತ್ರವನ್ನು ಪ್ರಶಂಸಿಸಿದ ಪ್ರಧಾನಿ, ಅಂತ ತೆರಿಗೆದಾರರ ಬದುಕು ಸುಗಮಗೊಳಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು. “ಯಾವಾಗ ದೇಶದ ಪ್ರಾಮಾಣಿಕ ತೆರಿಗೆ ಪಾವತಿದಾರರ ಬದುಕು ಸುಗಮವಾಗುತ್ತದೋ, ಆಗ ದೇಶವೂ ಅಭಿವೃದ್ಧಿ ಸಾಧಿಸುತ್ತದೆ ಮತ್ತು ಪ್ರಗತಿಯ ದಾಪುಗಾಲಿಡುತ್ತದೆ,” ಎಂದು ಹೇಳಿದರು.

ಇಂದು ಆರಂಭಿಸಲಾದ ಹೊಸ ವ್ಯವಸ್ಥೆ ಕನಿಷ್ಠ ಸಿಬ್ಬಂದಿ ಗರಿಷ್ಠ ಆಡಳಿತ ನೀಡುವ ಸರ್ಕಾರದ ಬದ್ಧತೆಯ ಭಾಗವಾಗಿದೆ ಎಂದು ಪ್ರಧಾನಿ ಹೇಳಿದರು. ಪ್ರತಿಯೊಂದು ಕಾನೂನು, ನಿಯಮ ಮತ್ತು ನೀತಿಯನ್ನು ಆಡಳಿತ ಕೇಂದ್ರಿತವಾಗುವ ಬದಲು ಜನ ಕೇಂದ್ರಿತ, ಸಾರ್ವಜನಿಕ ಸ್ನೇಹಿಯಾಗಿ ಮಾಡಬೇಕು ಎಂದು ಹೇಳಿದರು. ಹೊಸ ಆಡಳಿತ ಮಾದರಿಯ ಬಳಕೆ ಉತ್ತಮ ಫಲಶ್ರುತಿ ನೀಡುತ್ತಿದೆ ಎಂದರು.  

ಎಲ್ಲಾ ಕಾರ್ಯಗಳನ್ನು ನಿರ್ವಹಿಸಲು ಕರ್ತವ್ಯಕ್ಕೆ ಆದ್ಯತೆ ನೀಡುವಂತಹ ವಾತಾವರಣವನ್ನು ನಿರ್ಮಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಇದು ಬಲ ಮತ್ತು ಶಿಕ್ಷೆಯ ಭಯದ ಫಲಿತಾಂಶವಲ್ಲ, ಬದಲಿಗೆ ಅಳವಡಿಸಿಕೊಳ್ಳುತ್ತಿರುವ ಸಮಗ್ರ ವಿಧಾನದ ತಿಳಿವಳಿಕೆಯ ಫಲಶ್ರುತಿ ಎಂದರು. ಸರ್ಕಾರವು ಮಾಡುತ್ತಿರುವ ಸುಧಾರಣೆಗಳು ತುಂಡು ತುಂಡಲ್ಲ ಬದಲಾಗಿ ಸಮಗ್ರ ದೃಷ್ಟಿಕೋನದಿಂದ ಫಲಶ್ರುತಿಯ ಗುರಿಯನ್ನು ಹೊಂದಿವೆ ಎಂದು ಅವರು ಹೇಳಿದರು.

ಹಿಂದಿನ ತೆರಿಗೆ ಸ್ವರೂಪವನ್ನು ಸ್ವಾತಂತ್ರ್ಯಾಪೂರ್ವದ ಸಮಯದಲ್ಲಿ ರೂಪಿಸಲಾಗಿದ್ದು, ದೇಶದ ತೆರಿಗೆ ಸ್ವರೂಪಕ್ಕೆ ಮೂಲಭೂತ ಸುಧಾರಣೆಯ ಅಗತ್ಯವಿದೆ ಎಂದು ಪ್ರಧಾನಿ ಹೇಳಿದರು. ಸ್ವಾತಂತ್ರ್ಯಾನಂತರ ಹಲವು ಬದಲಾವಣೆಗಳನ್ನು ಮಾಡಲಾಗಿದೆಯಾದರೂ ಅದು ಅದರ ಮೂಲಭೂತ ಸ್ವಭಾವವನ್ನು ಬದಲಿಸಿಲ್ಲ ಎಂದೂ ಅವರು ಹೇಳಿದರು.

ಹಿಂದಿನ ವ್ಯವಸ್ಥೆಯಲ್ಲಿನ ಸಂಕೀರ್ಣತೆ ಅನುಸರಣೆ ಕಷ್ಟಸಾಧ್ಯವಾಗಿತ್ತು ಎಂದು ಪ್ರಧಾನಿ ತಿಳಿಸಿದರು.

ಸರಳೀಕೃತ ಕಾನೂನುಗಳು ಮತ್ತು ಪ್ರಕ್ರಿಯೆಗಳು ಅದರ ಅನುಸರಣೆಯನ್ನು ಸುಗಮಗೊಳಿಸಿವೆ ಎಂದು ಅವರು ಹೇಳಿದರು. ಇದಕ್ಕೆ ಒಂದು ಉದಾಹರಣೆ ಎಂದರೆ 12ಕ್ಕೂ ಹೆಚ್ಚು ತೆರಿಗೆಗಳನ್ನು ಬದಲಾಯಿಸಿದ ಜಿಎಸ್ಟಿ ಎಂದೂ ಅವರು ಹೇಳಿದರು.

ತೆರಿಗೆ ವ್ಯವಸ್ಥೆಯಲ್ಲಿ ಇತ್ತೀಚಿನ ಕಾನೂನುಗಳು ಕಾನೂನು ಹೊರೆಯನ್ನು ತಗ್ಗಿಸಿವೆ ಎಂದ ಪ್ರಧಾನಿ, ಈಗ ಹೈಕೋರ್ಟ್‌ ನಲ್ಲಿ ಪ್ರಕರಣಗಳನ್ನು ದಾಖಲಿಸುವ ಮಿತಿಯನ್ನು 1 ಕೋಟಿ ರೂಪಾಯಿ ಮತ್ತು ಸುಪ್ರೀಂ ಕೋರ್ಟ್‌ ನಲ್ಲಿ ಸಲ್ಲಿಸಲು ಮಿತಿಯನ್ನು 2 ಕೋಟಿ ರೂ.ಗಳವರೆಗೆ ನಿಗದಿಪಡಿಸಲಾಗಿದೆ ಎಂದರು. “ವಿವಾದದಿಂದ ವಿಕಾಸದ ಕಡೆಗೆ’ಯಂಥ ಉಪಕ್ರಮಗಳು ನ್ಯಾಯಾಲಯದ ಹೊರಗೆ ಬಹುತೇಕ ಪ್ರಕರಣಗಳ ಇತ್ಯರ್ಥಕ್ಕೆ ದಾರಿ ಮಾಡಿಕೊಟ್ಟಿದೆ ಎಂದರು.

5 ಲಕ್ಷ ರೂಪಾಯಿಗಳ ಆದಾಯದವರೆಗೆ ಶೂನ್ಯ ತೆರಿಗೆ ಇರುವ ಚಾಲ್ತಿಯಲ್ಲಿರುವ ಸುಧಾರಣೆಗಳ ಭಾಗವಾಗಿ ತೆರಿಗೆ ಹಂತಗಳನ್ನು ಸಹ ತರ್ಕಬದ್ಧಗೊಳಿಸಲಾಗಿದ್ದು, ಉಳಿದ ಹಂತಗಳಲ್ಲಿಯೂ ತೆರಿಗೆ ದರ ಕಡಿಮೆಯಾಗಿದೆ ಎಂದು ಪ್ರಧಾನಿ ಹೇಳಿದರು. ವಿಶ್ವದಲ್ಲೇ ಅತಿ ಕಡಿಮೆ ಸಾಂಸ್ಥಿಕ ತೆರಿಗೆ ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು ಎಂದು ಅವರು ಹೇಳಿದರು.

ಪ್ರಗತಿಯಲ್ಲಿರುವ ಸುಧಾರಣೆಗಳು ತೆರಿಗೆ ವ್ಯವಸ್ಥೆಯನ್ನು ತಡೆರಹಿತ, ಕಷ್ಟರಹಿತ, ಭಯರಹಿತಗೊಳಿಸುತ್ತಿವೆ ಎಂದು ಪ್ರಧಾನಿ ಹೇಳಿದರು. ತೆರಿಗೆದಾರನ ಸಮಸ್ಯೆಗಳನ್ನು ಮತ್ತಷ್ಟು ಜಟಿತಗೊಳಿಸುವ ಬದಲು ಪರಿಹರಿಸಲು ತಡೆಹರಿತ ವ್ಯವಸ್ಥೆಯು ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು. ಕಷ್ಟರಹಿತವಾಗಿಸುವ ಜೊತೆಗೆ, ತಂತ್ರಜ್ಞಾನದಿಂದ ನಿಯಮಗಳವರೆಗೆ ಎಲ್ಲವೂ ಸರಳವಾಗಿರಬೇಕು ಎಂದು ಅವರು ಹೇಳಿದರು. ಮುಖಾಮುಖಿ ರಹಿತ ವ್ಯವಸ್ಥೆಯ ಬಗ್ಗೆ ಉಲ್ಲೇಖಿಸಿದ ಅವರು ಪರಿಶೀಲನೆ, ನೋಟಿಸ್, ಸಮೀಕ್ಷೆ ಅಥವಾ ನಿರ್ಧರಣೆ ಎಲ್ಲ ವಿಷಯಗಳಲ್ಲಿಯೂ ತೆರಿಗೆದಾರ ಮತ್ತು ಆದಾಯ ತೆರಿಗೆ ಅಧಿಕಾರಿಗಳ ನಡುವೆ ನೇರ ಸಂಪರ್ಕದ ಅಗತ್ಯವಿರುವುದಿಲ್ಲ ಎಂದು ಹೇಳಿದರು.

ತೆರಿಗೆ ಪಾವತಿದಾರರ ವೇದಿಕೆ ಉದ್ಘಾಟನೆಯ ಕುರಿತಂತೆ ಪ್ರಧಾನಿಯವರು, ಇದು ಒಂದು ಮಹತ್ವದ ಹೆಜ್ಜೆಯಾಗಿದ್ದು, ಇಲ್ಲಿ ತೆರಿಗೆದಾರರಿಗೆ ನ್ಯಾಯಯುತ, ಸೌಜನ್ಯಯುತ ಮತ್ತು ತರ್ಕಬದ್ಧ ನಡವಳಿಕೆಯ ಖಾತ್ರಿ ನೀಡುತ್ತದೆ ಎಂದು ಹೇಳಿದರು. ತೆರಿಗೆದಾರರ ಘನತೆ ಮತ್ತು ಸೂಕ್ಷ್ಮತೆಯನ್ನು ಕಾಪಾಡಿಕೊಳ್ಳಲು ಸನ್ನದು ಕಾಳಜಿ ವಹಿಸುತ್ತದೆ ಮತ್ತು ಅದು ವಿಶ್ವಾಸಾರ್ಹ ಅಂಶವನ್ನು ಆಧರಿಸಿದ್ದು, ಕರ ನಿರ್ಧರಣೆ ಸಲ್ಲಿಸುವವರನ್ನು ಆಧಾರವಿಲ್ಲದೆ ಅನುಮಾನಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಪ್ರಕರಣಗಳ ಪರಿಶೀಲನೆಯ ಕುರಿತಂತೆ ಉಲ್ಲೇಖಿಸಿದ ಅವರು, ಕಳೆದ ಆರು ವರ್ಷಗಳಲ್ಲಿ ಕನಿಷ್ಠ ನಾಲ್ಕು ಬಾರಿ 2012-13ರಲ್ಲಿ ಶೇ.0.94 ರಿಂದ 2018-19ರಲ್ಲಿ ಶೇ.0.26 ಕ್ಕೆ ಇಳಿಸಲಾಗಿದೆ,  ಇದು ಸರ್ಕಾರ ರಿಟರ್ನಿಗಳ ಮೇಲೆ ಇಟ್ಟಿರುವ ನಂಬಿಕೆಯ ಪ್ರತಿಬಿಂಬವಾಗಿದೆ ಎಂದು ಹೇಳಿದರು. ಕಳೆದ 6 ವರ್ಷಗಳಲ್ಲಿ, ಭಾರತದ ತೆರಿಗೆ ಆಡಳಿತದಲ್ಲಿ ಹೊಸ ಮಾದರಿಯ ಆಡಳಿತದ ವಿಕಸನವಾಗುತ್ತಿದೆ ಎಂದು ಅವರು ಹೇಳಿದರು. ಈ ಎಲ್ಲ ಪ್ರಯತ್ನಗಳ ಮಧ್ಯೆ, ಕಳೆದ 6-7 ವರ್ಷಗಳಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರ ಸಂಖ್ಯೆ ಸುಮಾರು 2.5 ಕೋಟಿ ಹೆಚ್ಚಾಗಿದೆ ಎಂದು ಅವರು ಹೇಳಿದರು.

130 ಕೋಟಿ ಜನರಿರುವ ದೇಶದಲ್ಲಿ ಕೇವಲ 1.5 ಕೋಟಿ ಜನರು ಮಾತ್ರವೇ ತೆರಿಗೆ ಪಾವತಿಸುತ್ತಾರೆ ಎಂಬುದನ್ನೂ ನಿರಾಕರಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳಿದರು. ಆತ್ಮಾವಲೋಕನ ಮಾಡಿಕೊಳ್ಳುವಂತೆ ಮತ್ತು ಬಾಕಿ ತೆರಿಗೆ ಪಾವತಿಸಲು ಮುಂದೆ ಬರುವಂತೆ ಜನರಿಗೆ ಶ್ರೀ ಮೋದಿ ಮನವಿ ಮಾಡಿದರು.

ಇದು ಸ್ವಾವಲಂಬಿ ಅಂದರೆ ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ನೆರವಾಗಲಿದೆ ಎಂದು ಪ್ರಧಾನಿ ತಿಳಿಸಿದರು.

***



(Release ID: 1645491) Visitor Counter : 261