ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಸ್ವಯಂ ಪ್ರೇರಿತ ರಕ್ತ ದಾನಿಗಳಿಂದ ರಕ್ತವನ್ನು ಪಡೆದು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿ, ಇದರಿಂದ ಅಗತ್ಯವಿರುವವರಿಗೆ ನೀಡಲು ಸಾಧ್ಯವಾಗುತ್ತದೆ. ಮೊಬೈಲ್‌ ರಕ್ತ ಸಂಗ್ರಹ ವ್ಯಾನ್‌ಗಳ ಸೌಲಭ್ಯ ಕಲ್ಪಿಸಬೇಕು. ರಕ್ತ ದಾನಿಗಳನ್ನು ಕರೆತರಬೇಕು ಮತ್ತು ಮನೆಗೆ ವಾಪಸ್‌ ಕಳುಹಿಸುವ ವ್ಯವಸ್ಥೆಯಾಗಬೇಕು

Posted On: 21 APR 2020 9:14PM by PIB Bengaluru

ಸ್ವಯಂ ಪ್ರೇರಿತ ರಕ್ತ ದಾನಿಗಳಿಂದ ರಕ್ತವನ್ನು ಪಡೆದು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿ, ಇದರಿಂದ ಅಗತ್ಯವಿರುವವರಿಗೆ ನೀಡಲು ಸಾಧ್ಯವಾಗುತ್ತದೆ. ಮೊಬೈಲ್‌ ರಕ್ತ ಸಂಗ್ರಹ ವ್ಯಾನ್‌ಗಳ ಸೌಲಭ್ಯ ಕಲ್ಪಿಸಬೇಕು. ರಕ್ತ ದಾನಿಗಳನ್ನು ಕರೆತರಬೇಕು ಮತ್ತು ಮನೆಗೆ ವಾಪಸ್‌ ಕಳುಹಿಸುವ ವ್ಯವಸ್ಥೆಯಾಗಬೇಕು

ಗುಣಮುಖರಾದ ಕೋವಿಡ್‌-19 ರೋಗಿಗಳನ್ನು ರಕ್ತ ದಾನ ಮಾಡುವಂತೆ ಪ್ರೇರಿಪಿಸಬೇಕು. ಅನಾರೋಗ್ಯದಿಂದ ಬಳಲುತ್ತಿದ್ದವರು ಈಗ ಗುಣಮುಖರಾಗಿರುವುದರಿಂದ ಅವರ ಪ್ಲಾಸ್ಮಾ ಬಳಸಿ ಕೊರೊನಾ ಪೀಡಿತ ರೋಗಿಗಳಿಗೆ ವರ್ಗಾವಣೆ ಮಾಡುವ ಮೂಲಕ ಶೀಘ್ರ ಗುಣಮುಖರಾಗುವಂತೆ ಮಾಡಲು ಪ್ರಯತ್ನಿಸಬಹುದು: ಡಾ. ಹರ್ಷವರ್ಧನ್

 

ನಿರ್ಮಲ ಭವನದಲ್ಲಿ ಇಂದು ನಡೆದ ವಿಡಿಯೊ ಕಾನ್ಫೆರೆನ್ಸ್‌ನಲ್ಲಿ ದೇಶದ ಎಲ್ಲೆಡೆಯಿಂದ ಸಮರ್ಪಣಾ ಮನೋಭಾವ ಹೊಂದಿದ ರೆಡ್‌ಕ್ರಾಸ್‌ ಯೋಧರು ಪಾಲ್ಗೊಂಡಿದ್ದರು. ಇವರೆಲ್ಲರನ್ನೂ ಕೇಂದ್ರ ಸಚಿವ ಡಾ. ಹರ್ಷವರ್ಧನ್‌ ಸ್ವಾಗತಿಸಿ ಶುಭಾಶಯ ಕೋರಿದರು. ಇವರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಕೋವಿಡ್‌-19 ವಿರುದ್ಧ ಕೇಂದ್ರ ಸರ್ಕಾರ ಕೈಗೊಂಡಿರುವ ಪ್ರಯತ್ನಗಳನ್ನು ವಿವರಿಸಿದರು. ಭಾರತೀಯ ರೆಡ್‌ಕ್ರಾಸ್‌ ಸೊಸೈಟಿಯ (ಐಆರ್‌ಸಿಎಸ್‌) ಒಡಿಶಾ, ತಮಿಳುನಾಡು, ಹರಿಯಾಣ, ಆಂಧ್ರಪ್ರದೇಶ, ಅಸ್ಸಾಂ, ತೆಲಂಗಾಣ, ದೆಹಲಿ ಮತ್ತು ಕರ್ನಾಟಕದ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ತಮ್ಮ ಆಯಾ ಶಾಸಖೆಯಿಂದ ಕೈಗೊಂಡಿರುವ ಚಟುವಟಿಕೆಗಳನ್ನು ಸಚಿವರಿಗೆ ವಿವರಿಸಿದರು. ವಿಡಿಯೊ ಕಾನ್ಫೆರೆನ್ಸ್‌ನಲ್ಲಿ ಐಆರ್‌ಸಿಎಸ್‌ನ ಮಹಾಪ್ರಧಾನ ಕಾರ್ಯದರ್ಶಿ ಶ್ರೀ ಆರ್‌.ಕೆ. ಜೈನ್‌ ಅವರು ಸಹ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವರು, "ಸಮಯವನ್ನು ವ್ಯರ್ಥ ಮಾಡದೆ ಕೋವಿಡ್‌-19 ನಿಯಂತ್ರಿಸಲು ಕಠಿಣ ಕ್ರಮಗಳನ್ನು ಕೈಗೊಂಡಿದ್ದು ಜಗತ್ತಿನಲ್ಲಿಯೇ ಭಾರತ ಮಾತ್ರ. ಜಗತ್ತಿಗೆ ಕೊರೊನಾ ವೈರಸ್‌ ಬಗ್ಗೆ ಚೀನಾ ಮೊದಲು ಬಹಿರಂಗಪಡಿಸಿದ ಬಳಿಕ ಭಾರತ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ತ್ವರಿತಗತಿಯಲ್ಲಿ ಮುಂದಾಯಿತು. ಮರುದಿನವೇ ಪರಿಸ್ಥಿತಿಯನ್ನು ಅವಲೋಕಿಸಲು ಕ್ರಮಗಳನ್ನು ಕೈಗೊಳ್ಳಲಾಯಿತು. ಜತೆಗೆ, ಜಂಟಿ ನಿಗಾ ತಂಡದ ಸಭೆಯನ್ನು ನಡೆಸಲಾಯಿತು ಎಂದು ತಿಳಿಸಿದರು. ಪರಿಸ್ಥಿತಿಗೆ ತಕ್ಕಂತೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ನನ್ನ ಅಧ್ಯಕ್ಷತೆಯಲ್ಲಿ ಸಚಿವರ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಚಿಸಿದರು. ದೇಶದಾದ್ಯಂತ ವೈರಸ್‌ ವಿರುದ್ಧ ಹೋರಾಟ ನಡೆಸಲು ಇಂತಹ ತುರ್ತು ಕ್ರಮಗಳು ಅಗತ್ಯವಾಗಿದ್ದವು ಎಂದು ಸಚಿವರು ವಿವರಿಸಿದರು.

ಕೋವಿಡ್‌-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟ ನಡೆಸುವಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ಸಚಿವರು ತಿಳಿಸಿದರು.
ವಿಮಾನ ನಿಲ್ದಾಣಗಳಲ್ಲಿ ತಪಾಸಣೆ, ನೆರೆಯ ದೇಶಗಳ ಜತೆಗಿನ ಗಡಿಯನ್ನು ಸಂಪೂರ್ಣವಾಗಿ ಮುಚ್ಚುವುದು, ನಿಗಾವಹಿಸುವುದು ಮತ್ತು ಸೋಂಕು ಸಂಪರ್ಕಿತರನ್ನು ಪತ್ತೆ ಮಾಡುವುದು ಸೇರಿದಂತೆ ವಿವಿಧ ಮುಂಜಾಗ್ರತಾ ಕ್ರಮಗಳನ್ನುಕೈಗೊಳ್ಳಲಾಯಿತು. 2020ರ ಮಾರ್ಚ್‌ 23ರ ಬೆಳಿಗ್ಗೆಯಿಂದ ಎಲ್ಲ ಅಂತರರಾಷ್ಟ್ರೀಯ ವಿಮಾನಗಳು ಭಾರತದಲ್ಲಿನ ವಿಮಾನ ನಿಲ್ದಾಣಗಳಲ್ಲಿ ಇಳಿಯಬಾರದು ಎಂದು ಸೂಚನೆ ನೀಡಲಾಯಿತು ಎಂದು ಸಚಿವರು ವಿವರಿಸಿದರು.
"ಈ ಮೊದಲು ಕೋವಿಡ್‌-19 ಮಾದರಿಗಳನ್ನು ಅಮೆರಿಕಕ್ಕೆ ಪರೀಕ್ಷೆಗೆ ಕಳುಹಿಸಲಾಗುತ್ತಿತ್ತು. ಫಲಿತಾಂಶ ಪಡೆಯಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ, ಪ್ರಸ್ತುತ ಬಿಕ್ಕಟ್ಟಿನ ಸಂದರ್ಭದಲ್ಲಿ ಮಾದರಿಗಳನ್ನು ಪರೀಕ್ಷಿಸಲು ಭಾರತವೇ ಸುಮಾರು 200 ಪ್ರಯೋಗಾಲಯಗಳನ್ನು ಸ್ಥಾಪಿಸಿ ಅಭಿವೃದ್ಧಿಪಡಿಸಿದೆ’ ಎಂದು ಕೇಂದ್ರ ಸಚಿವರು ತಿಳಿಸಿದರು. ಜತೆಗೆ, ಭಾರತವು ವೈರಸ್‌ ಹಬ್ಬದಂತೆ ನಿಯಂತ್ರಿಸಲು ಸಕಾಲಕ್ಕೆ ಲಾಕ್‌ಡೌನ್‌ ಘೋಷಿಸಿತು. ಸದ್ಯ ದೇಶದಲ್ಲಿ ಕೋವಿಡ್‌–19ಗಾಗಿಯೇ ಚಿಕಿತ್ಸೆ ನೀಡಲು ಅಪಾರ ಸಂಖ್ಯೆಯಲ್ಲಿ ಆಸ್ಪತ್ರೆಗಳಿವೆ. ಪಿಪಿಇಗಳಿವೆ. ಎನ್‌95 ಮಾಸ್ಕ್‌ಗಳಿವೆ. ವೆಂಟಿಲೇಟರ್‌ಗಳ ಸೌಲಭ್ಯವಿದೆ ಮತ್ತು ಔಷಧವಿದೆ. ಜಗತ್ತಿನ ಇತರ ಭಾಗಗಳಿಗೆ ಹೋಲಿಸಿದ ಭಾರತವು ಉತ್ತಮ ಸ್ಥಿತಿಯಲ್ಲಿದೆ ಎಂದು ಸಚಿವರು ವಿವರಿಸಿದರು.

ಸ್ವಯಂ ಪ್ರೇರಿತ ರಕ್ತ ದಾನಿಗಳಿಂದ ರಕ್ತವನ್ನು ಪಡೆದು ಅಪಾರ ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಳ್ಳಿ. ಇದರಿಂದ ಅಗತ್ಯವಿರುವವರಿಗೆ ನೀಡಲು ಸಾಧ್ಯವಾಗುತ್ತದೆ. ಇದಕ್ಕಾಗಿ ಸ್ವಯಂ ಪ್ರೇರಿತ ರಕ್ತ ದಾನಿಗಳನ್ನು ಉತ್ತೇಜಿಸಬೇಕು. ಮೊಬೈಲ್‌ ರಕ್ತ ಸಂಗ್ರಹ ವ್ಯಾನ್‌ಗಳ ಸೌಲಭ್ಯ ಕಲ್ಪಿಸಬೇಕು. ರಕ್ತ ದಾನಿಗಳನ್ನು ಕರೆತರಬೇಕು ಮತ್ತು ಮನೆಗೆ ವಾಪಸ್‌ ಕಳುಹಿಸುವ ವ್ಯವಸ್ಥೆಯಾಗಬೇಕು. ನಿರಂತರವಾಗಿ ರಕ್ತ ದಾನ ಮಾಡುವವರ ಮನೆ ಬಾಗಿಲಿಗೆ ಮೊಬೈಲ್‌ ರಕ್ತ ಸಂಗ್ರಹ ವಾಹನಗಳನ್ನು ಭಾರತೀಯ ರೆಡ್‌ಕ್ರಾಸ್‌ ಸೊಸೈಟಿ ಕಳುಹಿಸಬೇಕು. ಇಂತಹ ಸಂಕಷ್ಟದ ಸಮಯದಲ್ಲಿ ಇಂತಹ ಕಾರ್ಯಗಳನ್ನು ಕೈಗೊಳ್ಳಬೇಕು. ಸ್ವಯಂ ಪ್ರೇರಿತ ರಕ್ತ ದಾನವನ್ನು ಉತ್ತೇಜಿಸುವಂತೆ ರಾಜ್ಯಗಳ ಆರೋಗ್ಯ ಸಚಿವರಿಗೂ ಪತ್ರ ಬರೆದಿರುವುದಾಗಿ ಸಚಿವರು ವಿವರಿಸಿದರು.

ಗುಣಮುಖರಾದ ಕೋವಿಡ್‌–19 ರೋಗಿಗಳು ರಕ್ತ ದಾನಕ್ಕೆ ಮುಂದಾಗುವಂತೆ ಐಆರ್‌ಸಿಎಸ್‌ ಪ್ರೇರೇಪಿಸಬೇಕು. ಇದರಿಂದ, ಅನಾರೋಗ್ಯದಿಂದ ಬಳಲುತ್ತಿದ್ದವರು ಈಗ ಗುಣಮುಖರಾಗಿರುವುದರಿಂದ ಅವರ ಪ್ಲಾಸ್ಮಾ ಬಳಸಿ ಕೊರೊನಾ ಪೀಡಿತ ರೋಗಿಗಳಿಗೆ ವರ್ಗಾವಣೆ ಮಾಡುವ ಮೂಲಕ ಶೀಘ್ರ ಗುಣಮುಖರಾಗುವಂತೆ ಮಾಡಲು ಪ್ರಯತ್ನಿಸಬಹುದು ಎಂದು ಸಚಿವ ಡಾ. ಹರ್ಷವರ್ಧನ್‌ ವಿವರಿಸಿದರು. ಐಆರ್‌ಸಿಎಸ್‌ ಈ ಕಾರ್ಯವನ್ನು ತ್ವರಿತಗತಿಯಲ್ಲಿ ಕೈಗೊಳ್ಳಬೇಕು. ಗುಣಮುಖರಾದ ರೋಗಿಗಳಿಂದ ರಕ್ತವನ್ನು ಸಂಗ್ರಹಿಸುವ ಮೂಲಕ ಕೊರೊನಾ ರೋಗಿಗಳಿಗೆ ವರ್ಗಾವಣೆ ಮಾಡಲು ಸಾಧ್ಯವಾಗುತ್ತದೆ ಎಂದು ಸಚಿವರು ತಿಳಿಸಿದರು.

‘ಭಾರತೀಯ ರೆಡ್‌ ಕ್ರಾಸ್‌ ಸಮುದಾಯವನ್ನು ನಾನು ಗೌರವಿಸುತ್ತೇನೆ. ಕೋವಿಡ್‌–19ರ ವಿರುದ್ಧದ ಹೋರಾಟದಲ್ಲಿ ರೆಡ್‌ಕ್ರಾಸ್‌ ಅಪಾರ ಕೊಡುಗೆ ನೀಡಿದೆ. ಉಪಕರಣಗಳು, ಸ್ಯಾನಿಟೈಜರ್‌ಗಳು, ಆಹಾರ, ಪಿಪಿಇ ಕಿಟ್‌ಗಳು, ಎನ್‌95 ಮಾಸ್ಕ್‌ಗಳು ಇತ್ಯಾದಿ ವಸ್ತುಗಳನ್ನು ಕೊಡುಗೆ ನೀಡಿರುವುದು ಶ್ಲಾಘನೀಯ ಎಂದು ಸಚಿವ ಡಾ. ಹರ್ಷವರ್ಧನ್‌ ತಿಳಿಸಿದರು. ರೆಡ್‌ಕ್ರಾಸ್‌ ಸದಸ್ಯರ ಜತೆ ವಿಡಿಯೊ ಕಾನ್ಫೆರೆನ್ಸ್‌ ನಡೆಸಿದ ಸಂದರ್ಭದಲ್ಲಿ ಸಚಿವರು ಈ ವಿಷಯ ತಿಳಿಸಿದರು. ಕೋವಿಡ್‌–19 ಹೋರಾಟದಲ್ಲಿ ಹೆಚ್ಚು ಜನರನ್ನು ಪಾಲ್ಗೊಳ್ಳುವಂತೆ ಮಾಡುವ ಉದ್ದೇಶದಿಂದ ಈ ವಿಡಿಯೊ ಕಾನ್ಫೆರೆನ್ಸ್‌ ಮಾಡಲಾಯಿತು.

ಐಆರ್‌ಸಿಎಸ್‌ ಮಹಾ ಪ್ರಧಾನ ಕಾರ್ಯದಶಿ ಆರ್‌.ಕೆ. ಜೈನ್‌ ಮಾತನಾಡಿ, ‘ ಕೋವಿಡ್‌–19 ಸೃಷ್ಟಿಸಿರುವ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಭಾರತ ಸರ್ಕಾರದ ಜತೆ ಕೈಜೋಡಿಸಿ ನಮ್ಮ ಬದ್ಧತೆಯನ್ನು ವ್ಯಕ್ತಪಡಿಸಲು ರೆಡ್‌ಕ್ರಾಸ್‌ಗೂ ಮತ್ತೊಂದು ಅವಕಾಶ ಒದಗಿ ಬಂದಿದೆ. 215 ದೇಶಗಳಲ್ಲಿ ವ್ಯಾಪಿಸಿರುವ ಕೋವಿಡ್‌–19 ನಿರ್ಮೂಲನೆ ಮಾಡಲು ನಾವೆಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕಾಗಿದೆ. ಭಾರತೀಯ ರೆಡ್ ಕ್ರಾಸ್‌ ಸ್ವಯಂ ಪ್ರೇರಿತ ಮಾನವೀಯತೆ ಸಂಘಟನೆಯಾಗಿದ್ದು, ದೇಶದಲ್ಲಿ 1100 ಶಾಖೆಗಳಿವೆ. ವಿಪತ್ತುಗಳು ಮತ್ತು ತುರ್ತುಸಂದರ್ಭದಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳುತ್ತದೆ. ಜತೆಗೆ, ಜನರ ಆರೋಗ್ಯ ಮತ್ತು ರಕ್ಷಣೆಯ ಕಾರ್ಯಗಳನ್ನು ಕೈಗೊಳ್ಳಲು ಆದ್ಯತೆ ನೀಡುತ್ತದೆ. ಸಂಕಷ್ಟಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು ಭಾರತೀಯ ರೆಡ್‌ ಕ್ರಾಸ್‌ ಆಶಯವಾಗಿದೆ ಎಂದು ವಿವರಿಸಿದರು.

ವಿಡಿಯೊ ಕಾನ್ಫೆರೆನ್ಸ್ ನಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಡಾ. ಹರ್ಷ ವರ್ಧನ್‌ ಅವರು ಧನ್ಯವಾದಗಳನ್ನು ಸಲ್ಲಿಸಿದರು. ಇದುವರೆಗೆ ಸಲ್ಲಿಸುತ್ತಾ ಬಂದಿರುವ ಉತ್ತಮ ಕಾರ್ಯವನ್ನು ಮುಂದುವರಿಸಬೇಕು ಮತ್ತು ಕೋವಿಡ್‌-೧೯ರ ವಿರುದ್ಧ ಹೋರಾಟವನ್ನು ಅವಿರತವಾಗಿ ಮುಂದುವರಿಸಿ ಗೆಲ್ಲಬೇಕು ಎಂದು ಕರೆ ನೀಡಿದರು.

***



(Release ID: 1617171) Visitor Counter : 328