ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ನಿಗ್ರಹಕ್ಕೆ ರಾಜ್ಯಗಳು  ಕೈಗೊಂಡ ಕ್ರಮಗಳ ಕುರಿತು ಡಾ. ಹರ್ಷವರ್ಧನ್ ಅವರಿಂದ ವಿಡಿಯೋ ಕಾನ್ಫರೆನ್ಸ್

Posted On: 10 APR 2020 7:18PM by PIB Bengaluru

ಕೋವಿಡ್-19 ನಿಗ್ರಹಕ್ಕೆ ರಾಜ್ಯಗಳು  ಕೈಗೊಂಡ ಕ್ರಮಗಳ ಕುರಿತು ಡಾ. ಹರ್ಷವರ್ಧನ್ ಅವರಿಂದ ವಿಡಿಯೋ ಕಾನ್ಫರೆನ್ಸ್

ಕೋವಿಡ್-19 ವಿರುದ್ಧದ ದೃಢ ಹೋರಾಟದಲ್ಲಿ ಭಾರತದ ಜನರನ್ನು ಒಗ್ಗೂಡಿಸಲು ಆರೋಗ್ಯಸೇತು ಮೊಬೈಲ್ ಅಪ್ಲಿಕೇಶನ್ ಉತ್ತೇಜಿಸುವಂತೆ ರಾಜ್ಯಗಳಿಗೆ ಒತ್ತಾಯ

ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವಲ್ಲಿನ ಸಮರ್ಪಣೆಗೆ ನಿಮಗೆ ಅಭಿನಂದನೆ: ಡಾ. ಹರ್ಷವರ್ಧನ್

 

"ನಿಮ್ಮ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್-19 ವಿರುದ್ಧದ ನಮ್ಮ ಹೋರಾಟದಲ್ಲಿ ಪರಿಸ್ಥಿತಿಯನ್ನು ನಿರ್ವಹಿಸಿದ್ದಕ್ಕಾಗಿ ಮತ್ತು ನಿಯಂತ್ರಣದಲ್ಲಿಟ್ಟುಕೊಂಡಿದ್ದಕ್ಕಾಗಿ ನಾನು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ" ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಹೇಳಿದರು. ಅವರು ಇಂದು ಆರೋಗ್ಯ ಖಾತೆ ರಾಜ್ಯ ಸಚಿವ ಶ್ರೀ ಅಶ್ವಿನಿ ಕುಮಾರ್ ಚೌಬೆ ಜೊತೆಗೆ COVID-19 ಅನ್ನು ತಗ್ಗಿಸುವ ಕ್ರಮಗಳು ಮತ್ತು ಸನ್ನದ್ಧತೆಯನ್ನು ಪರಿಶೀಲಿಸಲು ಎಲ್ಲಾ ರಾಜ್ಯಗಳು ಮತ್ತು ಯುಟಿಗಳ ಆರೋಗ್ಯ ಸಚಿವರು, ಮುಖ್ಯ ಕಾರ್ಯದರ್ಶಿಗಳು / ಆರೋಗ್ಯ ಕಾರ್ಯದರ್ಶಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು.

ಮಹಾರಾಷ್ಟ್ರ, ದೆಹಲಿ, ರಾಜಸ್ಥಾನ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಕೇರಳ, ಆಂಧ್ರಪ್ರದೇಶ, ಮಧ್ಯಪ್ರದೇಶ, ಗುಜರಾತ್, ಕರ್ನಾಟಕ, ಪಂಜಾಬ್, ಬಿಹಾರ, ತೆಲಂಗಾಣ, ಹರಿಯಾಣ, ಒಡಿಶಾ, ಅಸ್ಸಾಂ, ಚಂಡೀಗಢ, ಝಾರ್ಖಂಡ್ , ಮಣಿಪುರ, ಅರುಣಾಚಲ ಪ್ರದೇಶ, ಗೋವಾ, ಮಿಜೋರಾಂ, ತ್ರಿಪುರ, ಸಿಕ್ಕಿಂ, ನಾಗಾಲ್ಯಾಂಡ್, ತಮಿಳುನಾಡು, ಮೇಘಾಲಯ ಮತ್ತು ದಾದ್ರಾ ಮತ್ತು ನಗರ ಹವೇಲಿಗಳು ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ್ದವು.

"ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟವು ಈಗ ಮೂರು ತಿಂಗಳಿಗಿಂತಲೂ ಹಳೆಯದಾಗಿದೆ ಮತ್ತು ದೇಶದಲ್ಲಿ ಕೋವಿಡ್-19 ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಯನ್ನು ರಾಜ್ಯಗಳ ಸಹಯೋಗದೊಂದಿಗೆ ಉನ್ನತ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿದೆ" ಎಂದು ಡಾ. ಹರ್ಷವರ್ಧನ್ ಹೇಳಿದರು. “ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ದೇಶವು ಹಲವಾರು ಪೂರ್ವಭಾವಿ ಮತ್ತು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿದೆ. ಸಮಯೋಚಿತ ಕ್ರಮಗಳು ಪರಿಸ್ಥಿತಿಯನ್ನು ನಿರ್ವಹಿಸಲು ಮತ್ತು ಯಾವುದೇ ಸಂಭವನೀಯತೆಗೆ ಸಿದ್ಧರಾಗಿರಲು ನಮಗೆ ಸಹಾಯ ಮಾಡಿದೆಎಂದು ಅವರು ಹೇಳಿದರು.

ರೋಗ ಹರಡುವ ಸರಪಳಿಯನ್ನು ಮುರಿಯಲು ಮುಂದಿನ ಕೆಲವು ವಾರಗಳು ನಿರ್ಣಾಯಕ ಎಂದ ಡಾ. ಹರ್ಷವರ್ಧನ್ ಎಲ್ಲರಿಗೂ ಸಾಮಾಜಿಕ ಅಂತರವನ್ನು ಖಚಿತಪಡಿಸಿಕೊಳ್ಳಲು ಮತ್ತು ವೈಯಕ್ತಿಕ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಲು ಕೋರಿದರು, ಇದು ಕೋವಿಡ್-19 ವಿರುದ್ಧದ ದೃಢ ಮತ್ತು ಸಾಮೂಹಿಕ ಹೋರಾಟಕ್ಕೆ ಸಹಾಯ ಮಾಡುತ್ತದೆ ಎಂದರು.

ಗರ್ಭಿಣಿಯರು, ಡಯಾಲಿಸಿಸ್ ರೋಗಿಗಳು ಮತ್ತು ಥಲಸ್ಸೆಮಿಯಾದಂತಹ ಕಾಯಿಲೆಗಳಿಂದ ಬಳಲುತ್ತಿರುವವರ ಚಿಕಿತ್ಸೆ ಹಾಗೂ ವೈದ್ಯಕೀಯ ಅಗತ್ಯತೆಗಳನ್ನು ರಾಜ್ಯಗಳು ಗಮನದಲ್ಲಿರಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಸ್ವಯಂಪ್ರೇರಿತ ರಕ್ತದಾನವನ್ನು ಉತ್ತೇಜಿಸಲು ಮತ್ತು ಯಾವುದೇ ಸಮಯದಲ್ಲಿ ರಕ್ತವನ್ನು ಸಮರ್ಪಕವಾಗಿ ಪೂರೈಸಲು ಸುರಕ್ಷಿತ ರಕ್ತದಾನಕ್ಕಾಗಿ ಮೊಬೈಲ್ ಘಟಕಗಳನ್ನು ವ್ಯವಸ್ಥೆ ಮಾಡುವಂತೆ ಅವರು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದರು.

ದೇಶದ ಕೋವಿಡ್-19 ಮೀಸಲು ಆಸ್ಪತ್ರೆಗಳ ಸ್ಥಿತಿಯನ್ನು ಡಾ.ಹರ್ಷವರ್ಧನ್ ಪರಿಶೀಲಿಸಿದರು. "ದೇಶದ ಪ್ರತಿ ಜಿಲ್ಲೆಯಲ್ಲೂ COVID-19 ಮೀಸಲು ಆಸ್ಪತ್ರೆಗಳನ್ನು ಸ್ಥಾಪಿಸುವ ಅವಶ್ಯಕತೆಯಿದೆ ಮತ್ತು ಸಾಧ್ಯವಾದಷ್ಟು ಬೇಗ ಅವುಗಳನ್ನು ಗುರುತಿಸಿದರೆ, ಜನರಿಗೆ ಅವುಗಳ ಬಗ್ಗೆ ಮಾಹಿತಿ ದೊರೆಯುತ್ತದೆ" ಎಂದು ಅವರು ಹೇಳಿದರು.

ಪ್ರತಿ ರಾಜ್ಯಗಳ ಪಿಪಿಇಗಳು, ಎನ್ 95 ಮುಖಗವಸುಗಳು, ಪರೀಕ್ಷಾ ಕಿಟ್ಗಳು, ಔಷಧಗಳು ಮತ್ತು ವೆಂಟಿಲೇಟರ್ಗಳ ಅವಶ್ಯಕತೆ ಮತ್ತು ಸಮರ್ಪಕತೆಯನ್ನು ಡಾ. ಹರ್ಷವರ್ಧನ್ ಪರಿಶೀಲಿಸಿದರು. ನಿರ್ಣಾಯಕ ವಸ್ತುಗಳ ಸರಬರಾಜಿನಲ್ಲಿ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲು ಭಾರತ ಸರ್ಕಾರ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತದೆ ಎಂದು ಭರವಸೆ ನೀಡಿದರು. ವಿವಿಧ ಅವಶ್ಯಕತೆಗಳ ಸರಬರಾಜಿಗೆ ಈಗಾಗಲೇ ಆದೇಶಗಳನ್ನು ಮಾಡಲಾಗಿದೆ ಎಂದರು. ರಾಜ್ಯಗಳು ಕೇಳಿರುವ ಅಗತ್ಯಕ್ಕೆ ತಕ್ಕಂತೆ ಅವರ ಭಾಗಶಃ ಅವಶ್ಯಕತೆಗಳನ್ನು ಪೂರೈಸಲಾಗಿದೆ ಎಂದು ಅವರು ಹೇಳಿದರು. ಯಾವ ವರ್ಗದ ಆರೋಗ್ಯ ಕಾರ್ಯಕರ್ತರು / ವೃತ್ತಿಪರರು ಯಾವ ವರ್ಗದ ಪಿಪಿಇಗಳನ್ನು ಬಳಸಬೇಕು ಎಂಬ ವಿವರವಾದ ಮಾರ್ಗಸೂಚಿಗಳು ಸಚಿವಾಲಯದ ವೆಬ್ಸೈಟ್ನಲ್ಲಿ (www.mohfw.gov.in) ಲಭ್ಯವಿದೆ ಮತ್ತು ರಾಜ್ಯಗಳು ಇವುಗಳ ಸೂಕ್ತ ಬಳಕೆಯ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದು ಅವರು ಹೇಳಿದರು. ಮುಖದ ಹೊದಿಕೆ ಬಳಕೆಯ ಮಾರ್ಗಸೂಚಿಗಳು ಸಚಿವಾಲಯದ ವೆಬ್ಸೈಟ್ನಲ್ಲಿ ಲಭ್ಯವಿದೆ ಮತ್ತು ಇವುಗಳನ್ನು ಸಮುದಾಯಗಳಲ್ಲಿ ಪರಿಣಾಮಕಾರಿಯಾಗಿ ಬಳಸಬಹುದು ಎಂದು ಅವರು ಹೇಳಿದರು. ರಾಜ್ಯಗಳ ವಿವಿಧ ಪ್ರಯತ್ನಗಳನ್ನು ಶ್ಲಾಘಿಸಿದ ಅವರು, ಪರಸ್ಪರರ ಉತ್ತಮ ಅಭ್ಯಾಸಗಳನ್ನು ಅನುಕರಿಸಬಹುದು ಎಂದರು.

ಕೊರೊನಾವೈರಸ್ ಸೋಂಕಿನ ಅಪಾಯವನ್ನು ತಿಳಿಯಲು ಆರೋಗ್ಯ ಸೇತು ಆ್ಯಪ್ ಡೌನ್ಲೋಡ್ ಮಾಡಲು ಮತ್ತು ಬಳಸಲು ಅವರು ಎಲ್ಲರಿಗೂ ಕೋರಿದರು. ”ಸ್ಮಾರ್ಟ್ ಫೋನ್ನಲ್ಲಿ ಒಮ್ಮೆ ಡೌನ್ಲೋಡ್ ಮಾಡಿದ ನಂತರ, ಅತ್ಯಾಧುನಿಕ ನಿಯತಾಂಕಗಳನ್ನು ಆಧರಿಸಿ ಅಪ್ಲಿಕೇಶನ್ ಸೋಂಕಿನ ಅಪಾಯವನ್ನು ಲೆಕ್ಕಹಾಕುತ್ತದೆಎಂದು ಅವರು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯದರ್ಶಿ ಶ್ರೀಮತಿ ಪ್ರೀತಿ ಸುದಾನ್, ವಿಶೇಷ ಕಾರ್ಯದರ್ಶಿ ಶ್ರೀ ಸಂಜೀವ ಕುಮಾರ್ ಮತ್ತು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ಐಸಿಎಂಆರ್ ಪ್ರತಿನಿಧಿಗಳು ಪರಿಶೀಲನಾ ಸಭೆಯಲ್ಲಿ ಉಪಸ್ಥಿತರಿದ್ದರು.

***



(Release ID: 1613140) Visitor Counter : 298