ಪ್ರಧಾನ ಮಂತ್ರಿಯವರ ಕಛೇರಿ
ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ವಿಜೇತರೊಂದಿಗೆ ಪ್ರಧಾನಮಂತ್ರಿ ಸಂವಾದ
ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗಳಿಗೆ 82 ಶಿಕ್ಷಕರು ಮತ್ತು ಶಿಕ್ಷಣ ತಜ್ಞರ ಆಯ್ಕೆ
ಯುವ ವಿದ್ಯಾರ್ಥಿಗಳ ಮಾದಕ ವ್ಯಸನದ ಬಗ್ಗೆ ಎಚ್ಚರ ವಹಿಸಿ; ವ್ಯಸನದಿಂದ ಹೊರಬರುವಂತೆ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ: ಶಿಕ್ಷಕರಿಗೆ ಪ್ರಧಾನಮಂತ್ರಿ ಸಲಹೆ
ಕ್ರೀಡೆ, ದೈಹಿಕ ಆಟಗಳು ಮತ್ತು ಸೃಜನಶೀಲ ಚಟುವಟಿಕೆಗಳ ಮೂಲಕ ಮಕ್ಕಳ ಮೊಬೈಲ್ ಗೀಳನ್ನು ನಿಯಂತ್ರಣಕ್ಕೆ ತನ್ನಿ: ಶಿಕ್ಷಕರಿಗೆ ಪ್ರಧಾನಮಂತ್ರಿ ಕರೆ
ಬಾಲ್ಯದ ಮುಗ್ಧತೆ ಕಾಪಾಡಲು ಮತ್ತು ಮಕ್ಕಳ ನೈಸರ್ಗಿಕ ಕುತೂಹಲ ಪೋಷಿಸಲು ನೆರವಾಗಿ: ಶಿಕ್ಷಕರಿಗೆ ಪ್ರಧಾನಮಂತ್ರಿ ಮೋದಿ ಸಲಹೆ
ತರಗತಿ ಕಲಿಕೆಯನ್ನು ಹೆಚ್ಚು ಆಕರ್ಷಕವಾಗಿಸಲು ಮತ್ತು ಪರಿಣಾಮಕಾರಿಯಾಗಿಸಲು ತಾವು ಅಳವಡಿಸಿಕೊಂಡ ಸೃಜನಶೀಲ ವಿಧಾನಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳಿ: ಶಿಕ್ಷಕರಿಗೆ ಮೋದಿ ಕರೆ
ಪ್ರಕಟಣಾ ದಿನಾಂಕ:
05 SEP 2026 10:39AM by PIB Bengaluru
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಿನ್ನೆ ದೆಹಲಿಯ ಲೋಕ ಕಲ್ಯಾಣ್ ಮಾರ್ಗದಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ವಿಜೇತರೊಂದಿಗೆ ಸಂವಾದ ನಡೆಸಿದರು.
ಈ ವರ್ಷ 3 ವಿಭಾಗಗಳಿಂದ ಒಟ್ಟು 82 ಶಿಕ್ಷಕರು ಮತ್ತು ಶಿಕ್ಷ ತಜ್ಞರನ್ನು ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ. ಇವರಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ 48 ಶಿಕ್ಷಕರು, ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಪಾಲಿಟೆಕ್ನಿಕ್ಗಳ 21 ಶಿಕ್ಷಕರು ಮತ್ತು ಅಧ್ಯಾಪಕರು, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ 13 ಕೌಶಲ್ಯ ತರಬೇತುದಾರರು ಸೇರಿದ್ದಾರೆ. ಪ್ರಶಸ್ತಿ ಪುರಸ್ಕೃತರು ತಮ್ಮ ಬೋಧನಾ ಪ್ರಯಾಣ ರೂಪಿಸಿದ ಅನುಭವಗಳು ಮತ್ತು ನಾವೀನ್ಯತೆಗಳನ್ನು ಪ್ರಸ್ತಾಪಿಸಿದರು. ತರಗತಿ ಕಲಿಕೆಯನ್ನು ಹೆಚ್ಚು ಆಕರ್ಷಕವಾಗಿಸಲು ಮತ್ತು ಪರಿಣಾಮಕಾರಿಯಾಗಿಸಲು ತಾವು ಅಳವಡಿಸಿಕೊಂಡ ಹಲವಾರು ಸೃಜನಶೀಲ ಬೋಧನಾ ವಿಧಾನಗಳನ್ನು ಶಿಕ್ಷಕರು ಹಂಚಿಕೊಂಡರು.
ಶಿಕ್ಷಕರು ಮಕ್ಕಳ ಶೈಕ್ಷಣಿಕ ಕಾರ್ಯಕ್ಷಮತೆ ದಾಟಿ ಅವರ ನಡವಳಿಕೆ ಮತ್ತು ದೈನಂದಿನ ಜೀವನದ ಬಗ್ಗೆ ಗಮನ ಹರಿಸಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ಸಾಂಪ್ರದಾಯಿಕ ಅವಿಭಕ್ತ ಕುಟುಂಬ ವ್ಯವಸ್ಥೆ ಕುಸಿಯುತ್ತಿರುವುದನ್ನು ಉಲ್ಲೇಖಿಸಿದ ಅವರು, ಮಕ್ಕಳ ಜೀವನದಲ್ಲಿ ಶಿಕ್ಷಕರೇ ಹೆಚ್ಚು ಹೆಚ್ಚಾಗಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಮಾದಕ ವಸ್ತುಗಳ ವ್ಯಸನವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ಮಕ್ಕಳಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಶಿಕ್ಷಕರು ಎಚ್ಚರದಿಂದಿರಬೇಕು, ಕಾರಣವನ್ನು ಗುರುತಿಸಬೇಕು, ಅಂತಹ ಮಕ್ಕಳು ಈ ದುಶ್ಚಟದಿಂದ ಹೊರಬರಲು ಸಹಾಯ ಮಾಡಬೇಕು ಎಂದು ಕರೆ ನೀಡಿದರು.
ಬಾಲ್ಯದ ಮುಗ್ಧತೆ ಕಾಪಾಡುವುದು ಶಿಕ್ಷಕರು ವಹಿಸಬಹುದಾದ ಪ್ರಮುಖ ಪಾತ್ರವಾಗಿದೆ. ಮಕ್ಕಳು ಒಂದೇ ರೀತಿಯ ಮೂಲಭೂತ ಸ್ವಭಾವ ಮತ್ತು ಕುತೂಹಲ ಹೊಂದಿರುತ್ತಾರೆ. ಶಿಕ್ಷಕರು ಈ ಕುತೂಹಲವನ್ನು ಪೋಷಿಸಿ ಪ್ರೋತ್ಸಾಹಿಸುತ್ತಾ ಬಂದರೆ, ಅವರ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಬಹುದು ಎಂದು ಪ್ರಧಾನಮಂತ್ರಿ ಹೇಳಿದರು.
ಮಕ್ಕಳು ಮೊಬೈಲ್ ಸೇರಿದಂತೆ ವಿದ್ಯುನ್ಮಾನ ಪರದೆಯ ಬಳಕೆಗೆ ಹೆಚ್ಚಿನ ಸಮಯ ಪೋಲು ಮಾಡುತ್ತಿದ್ದಾರೆ, ಇದನ್ನು ನಿವಾರಿಸುವುದು ಒಂದು ಪ್ರಮುಖ ಕಾಳಜಿಯಾಗಿದೆ. ಮಕ್ಕಳು ಮೊಬೈಲ್ ಬಳಕಿಗೆ ಎಷ್ಟು ಸಮಯ ಕಳೆಯುತ್ತಾರೆ? ಅವರು ತಡರಾತ್ರಿಯಲ್ಲಿ ಮೊಬೈಲ್ ಫೋನ್ ಬಳಸುವುದನ್ನು ಮುಂದುವರಿಸುತ್ತಾರೆಯೇ ಎಂಬುದರ ಕುರಿತು ಪೋಷಕರೊಂದಿಗೆ ಮಾತನಾಡಬೇಕು ಎಂದು ಪ್ರಧಾನಮಂತ್ರಿ ಶಿಕ್ಷಕರನ್ನು ಒತ್ತಾಯಿಸಿದರು. ಕ್ರೀಡೆ, ದೈಹಿಕ ಆಟಗಳು ಮತ್ತು ಸೃಜನಶೀಲ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸುವ ಮೂಲಕ ಮಕ್ಕಳನ್ನು ಕ್ರಮೇಣ ಅತಿಯಾದ ಪರದೆಯ ಬಳಕೆಯಿಂದ ಹೊರತರಬಹುದು ಎಂದು ಅವರು ಸಲಹೆ ನೀಡಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಉಲ್ಲೇಖಿಸಿದ ಪ್ರಧಾನಮಂತ್ರಿ, ಮಕ್ಕಳನ್ನು ತರಗತಿಯ ಹೊರಗೆ ಕರೆದುಕೊಂಡು ಹೋಗಿ ನೈಜ ಜಗತ್ತಿನ ಕೌಶಲ್ಯ ಮತ್ತು ಕೆಲಸದ ಪ್ರಕಾರಗಳೊಂದಿಗೆ ಸಂಪರ್ಕಿಸುವ ಮಹತ್ವವಿದೆ. ಪಠ್ಯಕ್ರಮದ ಬಗ್ಗೆ ಜ್ಞಾನ ನೀಡುವುದನ್ನು ದಾಟಿ, ಮಕ್ಕಳಲ್ಲಿ ಶ್ರಮದ ಘನತೆ, ಗೌರವದಂತಹ ಮೌಲ್ಯಗಳನ್ನು ಬೆಳೆಸಲು ಸಹಾಯ ಮಾಡಬೇಕೆಂದು ಅವರು ಶಿಕ್ಷಕರಿಗೆ ಸಲಹೆ ನೀಡಿದರು.
*****
(ಪ್ರಕಟಣೆ ಐ.ಡಿ.: 2306903)
ವಿಸಿಟರ್ ಕೌಂಟರ್ : 9