ಗೃಹ ವ್ಯವಹಾರಗಳ ಸಚಿವಾಲಯ
ಪ್ರವಾಹ ಪೀಡಿತ ರಾಜ್ಯಗಳಿಗೆ ಎಸ್ ಡಿ ಆರ್ ಎಫ್ ಅಡಿಯಲ್ಲಿ ₹2,117.85 ಕೋಟಿ ಮುಂಗಡ ಬಿಡುಗಡೆಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅನುಮೋದನೆ ನೀಡಿದ್ದಾರೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಪರಿಣಾಮಕಾರಿ ಪರಿಹಾರ, ರಕ್ಷಣೆ ಮತ್ತು ಪುನರ್ವಸತಿ ಕ್ರಮಗಳಿಗಾಗಿ ರಾಜ್ಯಗಳಿಗೆ ಅಗತ್ಯವಿರುವ ಎಲ್ಲಾ ನೆರವು ನೀಡಲು ಸರ್ಕಾರ ಬದ್ಧವಾಗಿದೆ
ಅಗತ್ಯವಿರುವ ಕಡೆಗಳಲ್ಲಿ ಎನ್ ಡಿ ಆರ್ ಎಫ್ ತಂಡಗಳ ಪೂರ್ವ ನಿಯೋಜನೆ ಮತ್ತು ಲಾಜಿಸ್ಟಿಕಲ್ ಬೆಂಬಲ ಸೇರಿದಂತೆ ಎಲ್ಲಾ ಸಾಧ್ಯವಾದ ನೆರವನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ
ಹಾನಿಯನ್ನು ಅಂದಾಜಿಸಲು ಅರುಣಾಚಲ ಪ್ರದೇಶ ಮತ್ತು ಅಸ್ಸಾಂಗೆ ಅಂತರ-ಸಚಿವಾಲಯದ ಕೇಂದ್ರ ತಂಡಗಳನ್ನು (ಐಎಂಸಿಟಿ) ಈಗಾಗಲೇ ಕಳುಹಿಸಲಾಗಿದೆ
ಪ್ರವಾಹ ಪರಿಸ್ಥಿತಿಯ ತೀವ್ರತೆಯನ್ನು ಪರಿಗಣಿಸಿ ಅಸ್ಸಾಂಗೆ ಎರಡು ಬಾರಿ ಐಎಂಸಿಟಿ ಭೇಟಿ ನೀಡಿದ್ದರೆ, ನಾಗಾಲ್ಯಾಂಡ್ ಸರ್ಕಾರದ ಕೋರಿಕೆಯ ಮೇರೆಗೆ ರಾಜ್ಯಕ್ಕಾಗಿ ಐಎಂಸಿಟಿಯನ್ನು ಸಹ ರಚಿಸಲಾಗುತ್ತಿದೆ
ಸಂತ್ರಸ್ತ ಏಳು ರಾಜ್ಯಗಳ ಪೈಕಿ ಹಿಮಾಚಲ ಪ್ರದೇಶ, ಒಡಿಶಾ ಮತ್ತು ನಾಗಾಲ್ಯಾಂಡ್ ರಾಜ್ಯಗಳು 2026-27ನೇ ಹಣಕಾಸು ವರ್ಷಕ್ಕೆ ಎಸ್ ಡಿ ಆರ್ ಎಫ್ ನ ಮೊದಲ ಕಂತನ್ನು ಈಗಾಗಲೇ ಪಡೆದುಕೊಂಡಿವೆ
प्रविष्टि तिथि:
01 AUG 2026 5:46PM by PIB Bengaluru
ಪ್ರಸಕ್ತ 2026ರ ನೈಋತ್ಯ ಮುಂಗಾರಿನಲ್ಲಿ ಪ್ರವಾಹದಿಂದ ಬಾಧಿತವಾದ ರಾಜ್ಯಗಳಿಗೆ ಬೆಂಬಲವಾಗಿ ರಾಜ್ಯ ವಿಪತ್ತು ಸ್ಪಂದನೆ ನಿಧಿಯ (ಎಸ್ ಡಿ ಆರ್ ಎಫ್) ಕೇಂದ್ರ ಪಾಲಿನಿಂದ ₹2,117.85 ಕೋಟಿ ಮುಂಗಡ ಬಿಡುಗಡೆಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅನುಮೋದನೆ ನೀಡಿದ್ದಾರೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಪರಿಣಾಮಕಾರಿ ಪರಿಹಾರ, ರಕ್ಷಣೆ ಮತ್ತು ಪುನರ್ವಸತಿ ಕ್ರಮಗಳಿಗಾಗಿ ರಾಜ್ಯಗಳಿಗೆ ಅಗತ್ಯವಿರುವ ಎಲ್ಲಾ ನೆರವು ನೀಡಲು ಸರ್ಕಾರ ಬದ್ಧವಾಗಿದೆ ಮತ್ತು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸಿದೆ.
ಮುಂಗಾರು ಪ್ರಾರಂಭವಾದಂದಿನಿಂದ, ಭಾರತ ಸರ್ಕಾರವು ರಾಜ್ಯ ಸರ್ಕಾರಗಳೊಂದಿಗೆ ನಿಕಟ ಸಮನ್ವಯದೊಂದಿಗೆ ಪ್ರವಾಹ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಕೇಂದ್ರ ಸರ್ಕಾರವು ಅಗತ್ಯವಿರುವ ಕಡೆಗಳಲ್ಲಿ ರಾಷ್ಟ್ರೀಯ ವಿಪತ್ತು ಸ್ಪಂದನೆ ಪಡೆ (ಎನ್ ಡಿ ಆರ್ ಎಫ್) ತಂಡಗಳ ಪೂರ್ವ ನಿಯೋಜನೆ ಮತ್ತು ರಕ್ಷಣಾ ಸಚಿವಾಲಯದಿಂದ ಲಾಜಿಸ್ಟಿಕಲ್ ಬೆಂಬಲ ಸೇರಿದಂತೆ ಎಲ್ಲಾ ಸಾಧ್ಯವಾದ ನೆರವನ್ನು ವಿಸ್ತರಿಸಿದೆ.
ಹಾನಿಯನ್ನು ಅಂದಾಜಿಸಲು ಅರುಣಾಚಲ ಪ್ರದೇಶ ಮತ್ತು ಅಸ್ಸಾಂಗೆ ಅಂತರ-ಸಚಿವಾಲಯದ ಕೇಂದ್ರ ತಂಡಗಳನ್ನು (ಐಎಂಸಿಟಿ) ಈಗಾಗಲೇ ಕಳುಹಿಸಲಾಗಿದೆ. ಪ್ರವಾಹ ಪರಿಸ್ಥಿತಿಯ ತೀವ್ರತೆಯನ್ನು ಪರಿಗಣಿಸಿ ಅಸ್ಸಾಂನಲ್ಲಿ ಎರಡು ಐಎಂಸಿಟಿ ಭೇಟಿಗಳನ್ನು ಕೈಗೊಳ್ಳಲಾಗಿದೆ. ನಾಗಾಲ್ಯಾಂಡ್ ಸರ್ಕಾರದ ಕೋರಿಕೆಯ ಮೇರೆಗೆ, ರಾಜ್ಯಕ್ಕಾಗಿ ಐಎಂಸಿಟಿಯನ್ನು ಸಹ ರಚಿಸಲಾಗುತ್ತಿದೆ.
ಸಂತ್ರಸ್ತ ಏಳು ರಾಜ್ಯಗಳ ಪೈಕಿ, ಹಿಮಾಚಲ ಪ್ರದೇಶ, ಒಡಿಶಾ ಮತ್ತು ನಾಗಾಲ್ಯಾಂಡ್ ರಾಜ್ಯಗಳು 2026-27ನೇ ಹಣಕಾಸು ವರ್ಷಕ್ಕೆ ಎಸ್ ಡಿ ಆರ್ ಎಫ್ ನ ಮೊದಲ ಕಂತನ್ನು ಈಗಾಗಲೇ ಪಡೆದುಕೊಂಡಿವೆ. ಪರಿಹಾರ ಕಾರ್ಯಾಚರಣೆಗಳಿಗೆ ಸಮಯಕ್ಕೆ ಸರಿಯಾಗಿ ಹಣ ಲಭ್ಯವಾಗುವಂತೆ ಮಾಡಲು, ಹಿಮಾಚಲ ಪ್ರದೇಶ ಮತ್ತು ಒಡಿಶಾಗೆ ಎಸ್ ಡಿ ಆರ್ ಎಫ್ ನ ಕೇಂದ್ರ ಪಾಲಿನ ಎರಡನೇ ಕಂತಿನ ಮುಂಗಡ ಬಿಡುಗಡೆಗೆ ಕೇಂದ್ರ ಗೃಹ ಸಚಿವರು ಅನುಮೋದನೆ ನೀಡಿದ್ದಾರೆ. ಇದಲ್ಲದೆ, ಪರಿಹಾರ ಕ್ರಮಗಳಿಗಾಗಿ ಸಂಪನ್ಮೂಲಗಳ ತುರ್ತು ಅಗತ್ಯವನ್ನು ಪರಿಗಣಿಸಿ, ಅನ್ವಯವಾಗುವ ಮಾರ್ಗಸೂಚಿಗಳ ಅಡಿಯಲ್ಲಿ ದಾಖಲೆಗಳ ಅಗತ್ಯತೆಗಳನ್ನು ಸಡಿಲಿಸುವ ಮೂಲಕ ಅರುಣಾಚಲ ಪ್ರದೇಶ, ಅಸ್ಸಾಂ, ಗುಜರಾತ್ ಮತ್ತು ಮಹಾರಾಷ್ಟ್ರಗಳಿಗೆ ಎಸ್ ಡಿ ಆರ್ ಎಫ್ ನ ಕೇಂದ್ರ ಪಾಲಿನ ಮೊದಲ ಕಂತಿನ ಮುಂಗಡ ಮೊತ್ತದ ಬಿಡುಗಡೆಗೂ ಅನುಮೋದನೆ ನೀಡಲಾಗಿದೆ.
ಬಾಧಿತ ರಾಜ್ಯಗಳಿಗೆ ಅನುಮೋದಿಸಲಾದ ನೆರವಿನಲ್ಲಿ 2026-27ನೇ ಹಣಕಾಸು ವರ್ಷದ ಎಸ್ ಡಿ ಆರ್ ಎಫ್ ನ ಕೇಂದ್ರ ಪಾಲಿನ ಮೊದಲ ಕಂತಿನ ಮುಂಗಡ ಬಿಡುಗಡೆಯಲ್ಲಿ ಅರುಣಾಚಲ ಪ್ರದೇಶಕ್ಕೆ ₹44.55 ಕೋಟಿ ಸೇರಿದೆ. ಅಸ್ಸಾಂಗೆ ಮೊದಲ ಕಂತಿನ ಮುಂಗಡ ಬಿಡುಗಡೆಯಾಗಿ ₹379.35 ಕೋಟಿ ಮಂಜೂರಾಗಿದ್ದರೆ, ಗುಜರಾತ್ ಗೆ ಮೊದಲ ಕಂತಿನ ಮುಂಗಡ ಬಿಡುಗಡೆಯಾಗಿ ₹500 ಕೋಟಿ ಅನುಮೋದಿಸಲಾಗಿದೆ. 2026-27ರ ಎಸ್ ಡಿ ಆರ್ ಎಫ್ ನ ಮೊದಲ ಕಂತನ್ನು ಈಗಾಗಲೇ ಪಡೆದಿರುವ ಹಿಮಾಚಲ ಪ್ರದೇಶಕ್ಕೆ, ಕೇಂದ್ರ ಪಾಲಿನ ಎರಡನೇ ಕಂತಿನ ಮುಂಗಡ ಬಿಡುಗಡೆಯಾಗಿ ₹193.95 ಕೋಟಿ ಮಂಜೂರು ಮಾಡಲಾಗಿದೆ. ಮಹಾರಾಷ್ಟ್ರಕ್ಕೆ ಮೊದಲ ಕಂತಿನ ಮುಂಗಡ ಬಿಡುಗಡೆಯಾಗಿ ₹₹500 ಕೋಟಿ ಅನುಮೋದಿಸಲಾಗಿದೆ. ಈಗಾಗಲೇ ಮೊದಲ ಕಂತನ್ನು ಪಡೆದಿದ್ದ ಒಡಿಶಾಗೆ ಎರಡನೇ ಕಂತಿನ ಮುಂಗಡ ಬಿಡುಗಡೆಯಾಗಿ ₹₹500 ಕೋಟಿ ಮಂಜೂರು ಮಾಡಲಾಗಿದೆ. ಈ ಅನುಮೋದನೆಯೊಂದಿಗೆ, ಪ್ರವಾಹ ಪೀಡಿತ ರಾಜ್ಯಗಳ ಪ್ರಸ್ತುತ ಪರಿಹಾರ ಮತ್ತು ಸ್ಪಂದನ ಕ್ರಮಗಳನ್ನು ಬಲಪಡಿಸಲು ಒಟ್ಟು ₹₹2,117.85 ಕೋಟಿ ಹಣವನ್ನು ಲಭ್ಯಗೊಳಿಸಲಾಗಿದೆ.
*****
(रिलीज़ आईडी: 2293068)
आगंतुक पटल : 18
इस विज्ञप्ति को इन भाषाओं में पढ़ें:
Khasi
,
English
,
Urdu
,
Marathi
,
हिन्दी
,
Assamese
,
Punjabi
,
Gujarati
,
Odia
,
Tamil
,
Telugu
,
Malayalam