ರೈಲ್ವೇ ಸಚಿವಾಲಯ
azadi ka amrit mahotsav

ಭಾರತೀಯ ರೈಲ್ವೆಯಿಂದ ದೇಶದ ಮೊದಲ ಸಜೀವ ದಾನಿ ಹೃದಯ ರೈಲಿನ ಮೂಲಕ ಯಶಸ್ವಿಯಾಗಿ ರವಾನೆ; ಸೂರತ್‌ನಿಂದ ಅಹಮದಾಬಾದ್‌ಗೆ ಜೀವ ರಕ್ಷಕ ಮಿಷನ್ ಯಶಸ್ವಿಗೊಳಿಸಿದ ವಂದೇ ಭಾರತ್ ಎಕ್ಸ್‌ಪ್ರೆಸ್


ಭಾರತೀಯ ರೈಲ್ವೆ, ಆರ್‌ಪಿಎಫ್ (RPF), ಗುಜರಾತ್ ಪೊಲೀಸ್ ಮತ್ತು ವೈದ್ಯಕೀಯ ತಂಡಗಳ ನಡುವಿನ ಮಾದರಿ ಸಂಯೋಜನೆಯು ಜೀವ ರಕ್ಷಕ ಆರೋಗ್ಯ ಸೇವೆಗಳಲ್ಲಿ ರೈಲ್ವೆಯ ವಿಸ್ತರಿಸುತ್ತಿರುವ ಪಾತ್ರವನ್ನು ಪ್ರದರ್ಶಿಸುತ್ತದೆ

प्रविष्टि तिथि: 31 JUL 2026 5:20PM by PIB Bengaluru

ಭಾರತದಲ್ಲಿ ಇದೇ ಮೊದಲ ಬಾರಿಗೆ, ಸಜೀವ ದಾನಿ ಹೃದಯವನ್ನು ರೈಲಿನ ಮೂಲಕ ಯಶಸ್ವಿಯಾಗಿ ರವಾನಿಸುವ ಮೂಲಕ, ಭಾರತೀಯ ರೈಲ್ವೆಯು ಆರೋಗ್ಯ ಕ್ಷೇತ್ರದಲ್ಲಿ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ. ಸೂರತ್‌ನಿಂದ ಅಹಮದಾಬಾದ್‌ಗೆ ರೈಲು ಸಂಖ್ಯೆ 20901 ಮುಂಬೈ ಸೆಂಟ್ರಲ್-ಗಾಂಧಿನಗರ ಕ್ಯಾಪಿಟಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ಮೂಲಕ ಈ ಜೀವ ರಕ್ಷಕ ಅಂಗಾಂಗವನ್ನು ರವಾನಿಸಲಾಯಿತು ಮತ್ತು ಅಹಮದಾಬಾದ್‌ನ ಯು.ಎನ್. ಮೆಹ್ತಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಆಂಡ್ ರಿಸರ್ಚ್ ಸೆಂಟರ್‌ನಲ್ಲಿ ಅಂಗಾಂಗ ಕಸಿ ಮಾಡಲು ಅದರ ಸುರಕ್ಷಿತ ಮತ್ತು ಸಮಯೋಚಿತ ಆಗಮನವನ್ನು ಖಚಿತಪಡಿಸಲಾಯಿತು.

ಈ ಐತಿಹಾಸಿಕ ಮಿಷನ್, ವಂದೇ ಭಾರತ್ ಎಕ್ಸ್‌ಪ್ರೆಸ್‌ನ ವೇಗ, ಸಮಯಪಾಲನೆ ಮತ್ತು ವಿಶ್ವಾಸಾರ್ಹತೆಯನ್ನು ಪ್ರದರ್ಶಿಸುವುದರ ಜೊತೆಗೆ, ತುರ್ತು ವೈದ್ಯಕೀಯ ಸಾರಿಗೆ ಮತ್ತು ನಿರ್ಣಾಯಕ ಆರೋಗ್ಯ ಸೇವೆಗಳನ್ನು ಬೆಂಬಲಿಸುವಲ್ಲಿ ಭಾರತೀಯ ರೈಲ್ವೆಯ ಬೆಳೆಯುತ್ತಿರುವ ಪಾತ್ರವನ್ನು ಉಲ್ಲೇಖಿಸಿದೆ.

ಅಂಗಾಂಗ ಕಸಿ ಮಾಡುವಿಕೆ ಅತ್ಯಂತ ಸಮಯ ಸೂಕ್ಷ್ಮ ಸ್ವರೂಪದ್ದಾಗಿರುವುದರಿಂದ, ಈ ಕಾರ್ಯಾಚರಣೆಗೆ ಭಾರತೀಯ ರೈಲ್ವೆ, ರೈಲ್ವೆ ಸುರಕ್ಷತಾ ಪಡೆ (RPF), ಗುಜರಾತ್ ರಾಜ್ಯ ಪೊಲೀಸ್ ಮತ್ತು ವೈದ್ಯಕೀಯ ತಂಡಗಳ ನಡುವೆ ನಿಖರವಾದ ಯೋಜನೆ ಮತ್ತು ತಡೆರಹಿತ ಸಮನ್ವಯದ ಅಗತ್ಯವಿತ್ತು. ದಾನಿ ಹೃದಯವು ನಿಗದಿತ ಜೀವಿತಾವಧಿಯ (viability window) ಒಳಗಾಗಿ ಸ್ವೀಕರಿಸುವವರ ಆಸ್ಪತ್ರೆಯನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು ಸಾರಿಗೆಯ ಪ್ರತಿಯೊಂದು ಹಂತವನ್ನು ಎಚ್ಚರಿಕೆಯಿಂದ ಸಿಂಕ್ರೊನೈಸ್ ಮಾಡಲಾಗಿತ್ತು.

ಅಹಮದಾಬಾದ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 1 ರಿಂದ ಯು.ಎನ್. ಮೆಹ್ತಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಆಂಡ್ ರಿಸರ್ಚ್ ಸೆಂಟರ್‌ವರೆಗೆ ರೈಲ್ವೆ ಸುರಕ್ಷತಾ ಪಡೆ ಮತ್ತು ಗುಜರಾತ್ ರಾಜ್ಯ ಪೊಲೀಸರು ಸುಸಜ್ಜಿತ 'ಗ್ರೀನ್ ಕಾರಿಡಾರ್' ಅನ್ನು ನಿರ್ಮಿಸಿದ್ದರು. ಇದು ದಾನಿ ಹೃದಯದ ತಡೆರಹಿತ ಚಲನೆಗೆ ಅನುವು ಮಾಡಿಕೊಟ್ಟಿತು ಮತ್ತು ಕಸಿ ಪ್ರಕ್ರಿಯೆಯು ವಿಳಂಬವಿಲ್ಲದೆ ಪ್ರಾರಂಭವಾಗುವುದನ್ನು ಖಚಿತಪಡಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಅಹಮದಾಬಾದ್‌ನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ (DRM) ಶ್ರೀ ವೇದ್ ಪ್ರಕಾಶ್ ಅವರು, "ಇದು ಭಾರತೀಯ ರೈಲ್ವೆಗೆ ಅಪಾರ ಹೆಮ್ಮೆ ಮತ್ತು ತೃಪ್ತಿಯ ಕ್ಷಣವಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಮೂಲಕ ಸೂರತ್‌ನಿಂದ ಅಹಮದಾಬಾದ್‌ಗೆ ಸಜೀವ ದಾನಿ ಹೃದಯವನ್ನು ಯಶಸ್ವಿಯಾಗಿ ರವಾನಿಸಿರುವುದು ಸಾಂಪ್ರದಾಯಿಕ ಪ್ರಯಾಣಿಕ ಮತ್ತು ಸರಕು ಸಾರಿಗೆಯನ್ನು ಮೀರಿ ಸಮಾಜಕ್ಕೆ ಸೇವೆ ಸಲ್ಲಿಸುವ ನಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಇಂತಹ ಜೀವ ರಕ್ಷಕ ಮಿಷನ್ ಗಳಲ್ಲಿ ಪ್ರತಿ ನಿಮಿಷವೂ ನಿರ್ಣಾಯಕವಾಗಿರುತ್ತದೆ. ಭಾರತೀಯ ರೈಲ್ವೆ, ಆರ್‌ಪಿಎಫ್, ಗುಜರಾತ್ ರಾಜ್ಯ ಪೊಲೀಸ್ ಮತ್ತು ವೈದ್ಯಕೀಯ ತಂಡಗಳ ನಡುವಿನ ಅತ್ಯುತ್ತಮ ಸಂಯೋಜನೆಯು ಈ ಮಿಷನ್ ಯಶಸ್ಸನ್ನು ಖಚಿತಪಡಿಸಿದೆ. ಮಾನವ ಜೀವವನ್ನು ಉಳಿಸಲು ಕೊಡುಗೆ ನೀಡುವುದು ನಮ್ಮ ಜವಾಬ್ದಾರಿ ಮಾತ್ರವಲ್ಲ, ಸೇವೆ ಮತ್ತು ಮಾನವೀಯತೆಯ ಕಡೆಗೆ ನಮ್ಮ ಅತ್ಯುನ್ನತ ಕರ್ತವ್ಯವೂ ಆಗಿದೆ" ಎಂದು ಹೇಳಿದರು.

ಈ ಯಶಸ್ವಿ ಮಿಷನ್, ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಉನ್ನತ-ವೇಗದ ಸಂಪರ್ಕ, ಕಾರ್ಯಾಚರಣೆಯ ವಿಶ್ವಾಸಾರ್ಹತೆ ಮತ್ತು ಸಮಯಪಾಲನೆಯ ಮೂಲಕ ಸಮಯ-ನಿರ್ಣಾಯಕ ಕಾರ್ಯಾಚರಣೆಗಳನ್ನು ಬೆಂಬಲಿಸುವ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುತ್ತದೆ. ದೇಶದ ತುರ್ತು ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಆಧುನಿಕ ರೈಲ್ವೆ ಮೂಲಸೌಕರ್ಯವು ಹೇಗೆ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಇದು ತೋರಿಸುತ್ತದೆ.

ರೈಲ್ವೆ ಸುರಕ್ಷತಾ ಪಡೆ, ಗುಜರಾತ್ ರಾಜ್ಯ ಪೊಲೀಸ್, ವೈದ್ಯರು, ಅಂಗಾಂಗ ಕಸಿ ಸಂಯೋಜಕರು ಮತ್ತು ರೈಲ್ವೆ ಅಧಿಕಾರಿಗಳು ಸೇರಿದಂತೆ ಈ ಸವಾಲಿನ ಮಿಷನ್ ವನ್ನು ಯಶಸ್ವಿಗೊಳಿಸಿದ ಎಲ್ಲಾ ಪಾಲುದಾರರಿಗೆ ಭಾರತೀಯ ರೈಲ್ವೆ ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಿದೆ.

ಈ ಐತಿಹಾಸಿಕ ಸಾಧನೆಯು ಸುರಕ್ಷಿತ, ವಿಶ್ವಾಸಾರ್ಹ ಮತ್ತು ದಕ್ಷ ಸಾರಿಗೆ ಸೇವೆಗಳನ್ನು ಒದಗಿಸುವ ಜೊತೆಗೆ ಜೀವ ರಕ್ಷಕ ಮಾನವೀಯ ಉಪಕ್ರಮಗಳಿಗೆ ಬೆಂಬಲವನ್ನು ವಿಸ್ತರಿಸುವ ಮತ್ತು ರಾಷ್ಟ್ರದ ಆರೋಗ್ಯ ವ್ಯವಸ್ಥೆಗೆ ಕೊಡುಗೆ ನೀಡುವ ಭಾರತೀಯ ರೈಲ್ವೆಯ ಬದ್ಧತೆಯನ್ನು ಮರುಸ್ಥಾಪಿಸುತ್ತದೆ.

 

*****


(रिलीज़ आईडी: 2292578) आगंतुक पटल : 10
इस विज्ञप्ति को इन भाषाओं में पढ़ें: English , हिन्दी , Malayalam