ಪ್ರಧಾನ ಮಂತ್ರಿಯವರ ಕಛೇರಿ
ಸಂಸತ್ತಿನ 2026ರ ಮುಂಗಾರು ಅಧಿವೇಶನದ ಆರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
प्रविष्टि तिथि:
20 JUL 2026 11:11AM by PIB Bengaluru
ನಿಮ್ಮೆಲ್ಲರಿಗೂ ಹಾರ್ಧಿಕ ಸುಸ್ವಾಗತ.
ಮುಂಗಾರಿನ ಪ್ರಯೋಜನಗಳು ಗೋಚರಿಸುತ್ತಿವೆ ಮತ್ತು ಮಳೆಗಾಲದ ಅಧಿವೇಶನವೂ ಪ್ರಾರಂಭವಾಗುತ್ತಿದೆ. ಅದು ಮುಂಗಾರು ಮಳೆಯಾಗಿರಲಿ ಅಥವಾ ಮುಂಗಾರು ಅಧಿವೇಶನವಾಗಲಿ - ಎರಡೂ ಸಕ್ರಿಯವಾಗಿದ್ದಾಗ, ಅವು ಹೆಚ್ಚು ಉತ್ಪಾದಕವಾಗುತ್ತವೆ; ಮತ್ತು ಎರಡೂ ಉತ್ಪಾದಕವಾಗಿದ್ದರೆ, ಅದು ರಾಷ್ಟ್ರದ ಕಲ್ಯಾಣ ಮತ್ತು ಎಲ್ಲಾ ಜೀವಿಗಳ ಯೋಗಕ್ಷೇಮಕ್ಕೆ ಕಾರಣವಾಗುತ್ತದೆ. ಆದ್ದರಿಂದ, ಮುಂಗಾರು ಸಕ್ರಿಯವಾಗಿ ಇರಲಿ ಮತ್ತು ಮುಂಗಾರಿನ ಅಧಿವೇಶನವು ಉತ್ಪಾದಕವಾಗಿರಲಿ ಎಂದು ನಾನು ಪ್ರಾರ್ಥಿಸುತ್ತೇನೆ.
ಸ್ನೇಹಿತರೇ,
ಕಳೆದ ಒಂದು ತಿಂಗಳಿನಿಂದ, ದೇಶವು ಹಲವಾರು ಮೈಲಿಗಲ್ಲುಗಳನ್ನು ಸಾಧಿಸಿದೆ - ಪ್ರತಿಯೊಬ್ಬ ನಾಗರಿಕನನ್ನೂ ಹೆಮ್ಮೆಯಿಂದ ತುಂಬುವ ಸಾಧನೆಗಳ ಸರಣಿ. ಇವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಂಗಗಳನ್ನು ಮತ್ತು ಈಗ, ಬಾಹ್ಯಾಕಾಶವನ್ನು ಸಹ ವ್ಯಾಪಿಸಿವೆ. ಒಂದು ರೀತಿಯಲ್ಲಿ, ಇವು ಭಾರತಕ್ಕೆ ಹೆಮ್ಮೆಯ ಕ್ಷಣಗಳಾಗಿವೆ. ಕಳೆದ ವರ್ಷದ ಮುಂಗಾರು ಅಧಿವೇಶನಕ್ಕೆ ಸ್ವಲ್ಪ ಮೊದಲು, ಭಾರತೀಯ ನಾಗರಿಕರೊಬ್ಬರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದರು, ಮತ್ತು ನಿನ್ನೆ ಹಿಂದಿನ ದಿನವಷ್ಟೇ, ಭಾರತದ ಯುವ ನವೋದ್ಯಮವೊಂದು ಅಭೂತಪೂರ್ವ ಸಾಧನೆ ಮಾಡಿತು. ಖಾಸಗಿ ಉದ್ಯಮಗಳು ಇಂತಹ ಸಾಮರ್ಥ್ಯವನ್ನು ಪ್ರದರ್ಶಿಸಿದ ದೇಶಗಳು ಜಗತ್ತಿನಲ್ಲಿ ಬಹಳ ಕಡಿಮೆ ಇವೆ; ಭಾರತದ ಯುವಕರು ಬಾಹ್ಯಾಕಾಶಕ್ಕೆ ಹೊಸ ಹಾರಾಟ ನಡೆಸಿದ್ದಾರೆ - ಇದು ಒಂದು ಅದ್ಭುತ ಯಶಸ್ಸು. ಈ ನವೋದ್ಯಮ 'ಸ್ಕೈರೂಟ್' ಬಗ್ಗೆ - ಅಲ್ಲಿ ಕೆಲಸ ಮಾಡುವ ಇಡೀ ತಂಡದ ಸರಾಸರಿ ವಯಸ್ಸು ಕೇವಲ 28 ವರ್ಷಗಳು ಎಂದು ನನಗೆ ಹೇಳಲಾಯಿತು. ಈ ರೀತಿಯ ಯುವಕರು ಈ ಸಾಧನೆಯನ್ನು ಸಾಧಿಸಿದ್ದಾರೆ. ನಾನು '56 ವರ್ಷ ವಯಸ್ಸಿನ ಯುವಕ'ರ ಬಗ್ಗೆ ಮಾತನಾಡುತ್ತಿಲ್ಲ; ನಾನು ದೇಶದ ನವೋದ್ಯಮಗಳ ಬಗ್ಗೆ ಉಲ್ಲೇಖಿಸುತ್ತಿದ್ದೇನೆ - ಸರಾಸರಿ 28 ವರ್ಷ ವಯಸ್ಸಿನ ಯುವಕರು - ಅವರು ಬಾಹ್ಯಾಕಾಶದಲ್ಲಿ ಭಾರತದ ಧ್ವಜವನ್ನು ನೆಟ್ಟಿದ್ದಾರೆ. ಅವರು ಖಂಡಿತವಾಗಿಯೂ ಅಭಿನಂದನೆಗಳಿಗೆ ಅರ್ಹರು, ಅಂತಹ ಸಾಧನೆಗಳು ಭಾರತವನ್ನು ಆತ್ಮವಿಶ್ವಾಸದಿಂದ ತುಂಬುತ್ತವೆ. ಜಾಗತಿಕ ವೇದಿಕೆಯಲ್ಲಿ ಭಾರತದ ಪ್ರತಿಷ್ಠೆ ಸಾರ್ವತ್ರಿಕವಾಗಿ ಗುರುತಿಸಲ್ಪಟ್ಟಿದೆ ಮತ್ತು ಸ್ವೀಕಾರಾರ್ಹವಾಗಿಸಿದೆ.
ಸ್ನೇಹಿತರೇ,
ಇದು ಕಾಕತಾಳೀಯವಲ್ಲ; ಇದು ಒಂದು ಸಂದೇಶ - ಬಹಳ ಬಲವಾದ ಸಂದೇಶ - ನಮ್ಮ ದೇಶದ ಯುವಕರ ಸಾಮರ್ಥ್ಯ ಮತ್ತು ಆಕಾಂಕ್ಷೆಗಳು ಬಾಹ್ಯಾಕಾಶದಷ್ಟೇ ಅಪರಿಮಿತವಾಗಿವೆ. ರಾಷ್ಟ್ರಕ್ಕೆ ಇದಕ್ಕಿಂತ ದೊಡ್ಡ ಸಂದೇಶ ಅಥವಾ ಸ್ಫೂರ್ತಿಯ ಮೂಲ ಬೇರೊಂದು ಇರಲು ಸಾಧ್ಯವಿಲ್ಲ.
ಸ್ನೇಹಿತರೇ,
ದೇಶವು 'ಸುಧಾರಣಾ ಎಕ್ಸ್ ಪ್ರೆಸ್' ಹತ್ತಿದ್ದರಿಂದ ಭಾರತದ ಯುವಕರು ಅಂತಹ ಮಹಾನ್ ಧೈರ್ಯವನ್ನು ತೋರಿಸಲು ಮತ್ತು ಯಶಸ್ಸನ್ನು ಸಾಧಿಸುತ್ತಿರುವುದು ಸಾಧ್ಯವಾಗಿದೆ.
ಸ್ನೇಹಿತರೇ,
ಇತ್ತೀಚೆಗೆ, ರಾಜಸ್ಥಾನದಲ್ಲಿ ಬೃಹತ್ ತೈಲ ಸಂಸ್ಕರಣಾಗಾರವನ್ನು ರಾಷ್ಟ್ರಕ್ಕೆ ಸಮರ್ಪಿಸಲಾಯಿತು. ಕೆಲವೇ ವಾರಗಳ ಹಿಂದೆ, ದೇಶದ ಮೂರನೇ ಸೆಮಿಕಂಡಕ್ಟರ್ (ಅರೆವಾಹಕ) ಸ್ಥಾವರವನ್ನು ಸಮರ್ಪಿಸಲಾಯಿತು. ಇತ್ತೀಚೆಗೆ, ಹಸಿರು ಜಲಜನಕ ಚಾಲಿತ ರೈಲಿಗೆ ಚಾಲನೆ ನೀಡಲಾಯಿತು; ವಿಶ್ವದ ಕೆಲವೇ ದೇಶಗಳು ಈ ಸೌಲಭ್ಯವನ್ನು ಹೊಂದಿವೆ. ಆದಾಗ್ಯೂ, ಭಾರತವು ತನ್ನ ನಾಗರಿಕರಿಗೆ ಅರ್ಪಿಸಿರುವ ಜಲಜನಕ (ಹೈಡ್ರೋಜನ್) ರೈಲು ಅತ್ಯಂತ ಶಕ್ತಿಶಾಲಿ ಎಂಜಿನ್ ಅನ್ನು ಹೊಂದಿದೆ ಮತ್ತು ಅದು ಈ ಶ್ರೇಣಿಯಲ್ಲಿ ಅತ್ಯಂತ ಉದ್ದವಾದ ರೈಲಾಗಿದೆ. ಈ ಸಾಧನೆಯು ಭಾರತದ ವಿಜ್ಞಾನಿಗಳು, ಎಂಜಿನಿಯರ್ ಗಳು, ನಾವೀನ್ಯಕಾರರು, ಉದ್ಯಮಿಗಳು ಮತ್ತು ಕಾರ್ಮಿಕರ ಸಮರ್ಪಣೆಗೆ ಸಾಕ್ಷಿಯಾಗಿದೆ - ಅವರೆಲ್ಲರೂ ರಾಷ್ಟ್ರಕ್ಕಾಗಿ ಒಂದೇ ಗುರಿಯೊಂದಿಗೆ ಬದುಕುತ್ತಿದ್ದಾರೆ ಮತ್ತು ಕೆಲಸ ಮಾಡುತ್ತಿದ್ದಾರೆ.
ಸ್ನೇಹಿತರೇ,
ಜಗತ್ತಿನ ವಿವಿಧ ಭಾಗಗಳಲ್ಲಿ ಯುದ್ಧದ ಸನ್ನಿವೇಶಗಳು ಸಂದರ್ಭಗಳು ನಿರಂತರವಾಗಿ ಉದ್ಭವಿಸುತ್ತಿವೆ ಎಂದು ನಮಗೆ ಚೆನ್ನಾಗಿ ತಿಳಿದಿದೆ - ಮತ್ತು ಇಡೀ ಜಗತ್ತು ಕಳವಳ ವ್ಯಕ್ತಪಡಿಸಿದೆ. ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವು ಇಂಧನಕ್ಕಾಗಿ ಇತರರನ್ನು ಅವಲಂಬಿಸಿರುವ ಭಾರತದಂತಹ ದೇಶಗಳಿಗೆ ದೊಡ್ಡ ಬಿಕ್ಕಟ್ಟನ್ನುಂಟುಮಾಡಿದೆ. ಪೆಟ್ರೋಲ್, ಡೀಸೆಲ್, ಎಲ್ ಪಿ ಜಿ, ರಸಗೊಬ್ಬರಗಳು ಮತ್ತು ರಾಸಾಯನಿಕಗಳಿಗೆ ಸಂಬಂಧಿಸಿದಂತೆ ಹಲವಾರು ಅಡೆತಡೆಗಳು ಮತ್ತು ಬಿಕ್ಕಟ್ಟುಗಳು ಹುಟ್ಟಿಕೊಂಡವು. ಇದರ ಹೊರತಾಗಿಯೂ, ಭಾರತವು ಶೇಕಡಾ 7.7 ರಷ್ಟು ಬೆಳವಣಿಗೆಯ ದರವನ್ನು ಕಾಯ್ದುಕೊಂಡು, ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಹೊರಹೊಮ್ಮುತ್ತಿದೆ. ಇದು ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ ಮತ್ತು ರಾಷ್ಟ್ರವು ಹೊಸ ಎತ್ತರವನ್ನು ತಲುಪಲು ಬಯಸುವ ಚೈತನ್ಯ ಮತ್ತು ಉತ್ಸಾಹವನ್ನು ಪ್ರತಿಬಿಂಬಿಸುತ್ತದೆ. ಈ ಮುಂಗಾರು ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ, ದೇಶವು ವೇಗವನ್ನು ಪಡೆದುಕೊಂಡಿದೆ ಮತ್ತು ಸಂಸತ್ತಿನ ಚೈತನ್ಯವು ಆ ವೇಗಕ್ಕೆ ಹೊಸ ಶಕ್ತಿಯನ್ನು ತುಂಬಬಹುದು. ದೇಶದ ಗುರಿಗಳನ್ನು ಸಾಧಿಸಲು ಸಕಾರಾತ್ಮಕ ಮನೋಭಾವ ಅತ್ಯಗತ್ಯ. ನಮ್ಮ ಸದನವು ಹೆಚ್ಚು ಅನುಭವಿ ಸಂಸತ್ ಸದಸ್ಯರನ್ನು ಒಳಗೊಂಡಿದೆ; ಅವರ ಪಕ್ಷಭೇದವಿಲ್ಲದೆ, ಅವರು ಅನುಭವದ ಸಂಪತ್ತನ್ನು ಹೊಂದಿದ್ದಾರೆ. ಈ ಸಮಯದಲ್ಲಿ, ಸಂಸತ್ತು ಮತ್ತು ರಾಷ್ಟ್ರ ಎರಡಕ್ಕೂ ಅವರ ಅನುಭವ ಮತ್ತು ಜ್ಞಾನದ ಅಗತ್ಯವಿದೆ. ಇದಕ್ಕಾಗಿ, ಸಂಸತ್ತಿನ ಕಾರ್ಯನಿರ್ವಹಣೆ, ಅರ್ಥಪೂರ್ಣ ಚರ್ಚೆಗಳು ಮತ್ತು ರಾಷ್ಟ್ರವನ್ನು ಮುಂದಕ್ಕೆ ಕೊಂಡೊಯ್ಯುವ ಸಾಮೂಹಿಕ ಸಂಕಲ್ಪ - ನನ್ನ ಅಭಿಪ್ರಾಯದಲ್ಲಿ - ಈ ಸಮಯದ ಅಗತ್ಯವಾಗಿದೆ. ಈ ದೇಶದ ಯುವಕರು, ಮಹತ್ವಾಕಾಂಕ್ಷೆಗಳಿಂದ ತುಂಬಿದ್ದಾರೆ, ನಾವು ಮುಂದುವರಿಯಬೇಕೆಂದು ಬಯಸುತ್ತಾರೆ. ಇಂದು, ರಾಷ್ಟ್ರಕ್ಕೆ ಸಮರ್ಪಿತ ಮತ್ತು ರಾಷ್ಟ್ರಭಕ್ತಿಯಿಂದ ತುಂಬಿದ ಧ್ವನಿಗಳು ಸಂಸತ್ತಿನಲ್ಲಿ ಸರಿಯಾದ ವೇದಿಕೆಯನ್ನು ಕಂಡುಕೊಳ್ಳಬೇಕು, ತಮ್ಮ ಧ್ವನಿಯನ್ನು ಎತ್ತಿ ರಾಷ್ಟ್ರಕ್ಕೆ ಮಾರ್ಗದರ್ಶನ ನೀಡಬೇಕು ಎಂಬುದು ಇಂದಿನ ಬೇಡಿಕೆಯಾಗಿದೆ. ಸತ್ಯಗಳು ಮತ್ತು ತರ್ಕಗಳು ಮೇಲುಗೈ ಸಾಧಿಸುವಲ್ಲಿ ಅಡೆತಡೆಗಳಿಗೆ ಜಾಗವಿಲ್ಲ ಎಂದು ನಾನು ಬಲವಾಗಿ ನಂಬುತ್ತೇನೆ. ಬಲವಾದ ವಾದಗಳು ಮತ್ತು ಬಲವಾದ ಸತ್ಯಗಳು ಪ್ರಶಾಂತವಾಗಿಯೂ ಆದರೆ ಪ್ರಬಲವಾಗಿಯೂ ಧ್ವನಿ ಎತ್ತಲು ಅವಕಾಶ ನೀಡುತ್ತವೆ. ಸಂಸತ್ತಿನ ಚರ್ಚೆಗಳು ಸತ್ಯಗಳು ಮತ್ತು ತರ್ಕಗಳಿಂದ ಸಮೃದ್ಧವಾಗಿರುತ್ತವೆ, ಪ್ರತಿಯೊಂದು ಧ್ವನಿಗೆ ಅವಕಾಶ ಸಿಗುತ್ತದೆ ಮತ್ತು ಪ್ರತಿಯೊಂದು ಆಲೋಚನೆಗೆ ಗೌರವ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ. ಸಂಸತ್ತಿನಲ್ಲಿ ಇದು ನಮ್ಮ ಪಾತ್ರ. ಈ ಅಧಿವೇಶನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ನಾನು ಎಲ್ಲಾ ಸಂಸದರನ್ನು ಆಹ್ವಾನಿಸುತ್ತೇನೆ. ಇಂದು ಬೆಳಿಗ್ಗೆ, ಸಭಾಪತಿಯವರು ಕೂಡ ಸಾಮಾಜಿಕ ಮಾಧ್ಯಮಗಳ ಮೂಲಕ ಸಂಸದರನ್ನು ಸ್ವಾಗತಿಸಿದ್ದಾರೆ. ನಾನು ಅವರ ಧ್ವನಿಯೊಂದಿಗೆ ನನ್ನ ಧ್ವನಿಯನ್ನು ಸೇರಿಸುತ್ತೇನೆ.
ಎಲ್ಲರಿಗೂ ಬಹಳ ಧನ್ಯವಾದಗಳು.
ನಮಸ್ಕಾರ.
*****
(रिलीज़ आईडी: 2286517)
आगंतुक पटल : 17
इस विज्ञप्ति को इन भाषाओं में पढ़ें:
Malayalam
,
English
,
Urdu
,
हिन्दी
,
Marathi
,
Manipuri
,
Bengali
,
Bengali-TR
,
Assamese
,
Punjabi
,
Gujarati
,
Odia
,
Telugu