ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರ ಸೀಶೆಲ್ಸ್ ಅಧಿಕೃತ ಭೇಟಿ

प्रविष्टि तिथि: 28 JUN 2026 8:20PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಜೂನ್ 27 ರಿಂದ 29 ರವರೆಗೆ ಸೀಶೆಲ್ಸ್‌ಗೆ ಕೈಗೊಂಡಿರುವ ಅಧಿಕೃತ ಭೇಟಿಯ ಭಾಗವಾಗಿ, ಪ್ರಧಾನಮಂತ್ರಿ ಮತ್ತು ಸೀಶೆಲ್ಸ್ ಅಧ್ಯಕ್ಷರಾದ ಘನತೆವೆತ್ತ ಡಾ. ಪ್ಯಾಟ್ರಿಕ್ ಹರ್ಮಿನ್ ಅವರು ಇಂದು ಮಾಹೆಯ ವಿಕ್ಟೋರಿಯಾದಲ್ಲಿರುವ ಸ್ಟೇಟ್ ಹೌಸ್‌ನಲ್ಲಿ ಅಧಿಕೃತ ಮಾತುಕತೆ ನಡೆಸಿದರು.

ಈ ಮಾತುಕತೆಯು ದ್ವಿಪಕ್ಷೀಯ ಸಂಬಂಧದ ಸಂಪೂರ್ಣ ವ್ಯಾಪ್ತಿಯನ್ನು ಒಳಗೊಂಡಿತ್ತು. ಆರೋಗ್ಯ, ಶಿಕ್ಷಣ, ಸಾಮರ್ಥ್ಯ ವರ್ಧನೆ, ಡಿಜಿಟಲ್ ಪರಿವರ್ತನೆ, ಸುಸ್ಥಿರ ಅಭಿವೃದ್ಧಿ, ಸಾಮಾಜಿಕ ಮೂಲಸೌಕರ್ಯ, ನವೀಕರಿಸಬಹುದಾದ ಇಂಧನ, ಕಡಲ ಭದ್ರತೆ ಮತ್ತು ರಕ್ಷಣಾ ವಲಯಗಳಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಉಭಯ ನಾಯಕರು ಒಪ್ಪಿಗೆ ಸೂಚಿಸಿದರು. ಅವರು ಅಕ್ರಮ ಮೀನುಗಾರಿಕೆ, ಮಾದಕವಸ್ತು ಕಳ್ಳಸಾಗಣೆ ಮತ್ತು ಕಡಲ್ಗಳ್ಳತನದಂತಹ ಹಿಂದೂ ಮಹಾಸಾಗರ ಪ್ರದೇಶದ ಸವಾಲುಗಳನ್ನು ಒಳಗೊಂಡಂತೆ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಭಾರತ ಘೋಷಿಸಿದ ವಿಶೇಷ ಆರ್ಥಿಕ ಪ್ಯಾಕೇಜ್‌ನಡಿ ಕೈಗೊಂಡಿರುವ ಯೋಜನೆಗಳು ಮತ್ತು ಉಪಕ್ರಮಗಳ ಅನುಷ್ಠಾನದಲ್ಲಿ ಆಗಿರುವ ಪ್ರಗತಿಯ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಸೀಶೆಲ್ಸ್‌ನ ಅಭಿವೃದ್ಧಿ ಆದ್ಯತೆಗಳನ್ನು ಬೆಂಬಲಿಸಲು ಮತ್ತು ಎರಡೂ ದೇಶಗಳ ನಡುವಿನ ನಿಕಟ ಹಾಗೂ ದೀರ್ಘಕಾಲೀನ ಪಾಲುದಾರಿಕೆಯನ್ನು ಮತ್ತಷ್ಟು ಗಾಢವಾಗಿಸಲು ಭಾರತದ ಬದ್ಧತೆಯನ್ನು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು.

ಅಧಿಕೃತ ಮಾತುಕತೆಗಳ ನಂತರ, ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಸ್ಥಾಪನೆಯ 50 ವರ್ಷಗಳನ್ನು ಗುರುತಿಸುವ ಜಂಟಿ ಸ್ಮರಣಾರ್ಥ ಲಾಂಛನವನ್ನು ನಾಯಕರು ಬಿಡುಗಡೆ ಮಾಡಿದರು. ತದನಂತರ, ಸಾಮರ್ಥ್ಯ ವರ್ಧನೆ, ಯುಪಿಐ (UPI), ಆರೋಗ್ಯ, ಕೃಷಿ, ನೌಕಾಯಾನ, ಬಾಹ್ಯಾಕಾಶ, ಹಸ್ತಾಂತರ ಮತ್ತು ಸಾಲ ಸೌಲಭ್ಯ ಕ್ಷೇತ್ರಗಳಲ್ಲಿನ ತಿಳುವಳಿಕಾ ಒಪ್ಪಂದಗಳು/ಒಪ್ಪಂದಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು. ಸಾಲ ಸೌಲಭ್ಯದ ಮೊತ್ತವು 1250 ಕೋಟಿ ರೂಪಾಯಿಗಳಾಗಿದೆ. ತಿಳುವಳಿಕಾ ಒಪ್ಪಂದಗಳು/ಒಪ್ಪಂದಗಳ ಸಂಪೂರ್ಣ ಪಟ್ಟಿಯನ್ನು ಇಲ್ಲಿ ನೋಡಬಹುದು [link]. ಇದರ ಜೊತೆಗೆ, ಸೀಶೆಲ್ಸ್‌ನ ಅಭಿವೃದ್ಧಿ ಅಗತ್ಯಗಳಿಗೆ ಬೆಂಬಲವಾಗಿ ಆಹಾರ ಭದ್ರತೆ, ಮೂಲಸೌಕರ್ಯ, ಆರೋಗ್ಯ, ವೃತ್ತಿಪರ ತರಬೇತಿ, ಕಡಲ ಭದ್ರತೆ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಹಲವು ಘೋಷಣೆಗಳನ್ನು ಮಾಡಲಾಯಿತು. ಈ ಘೋಷಣೆಗಳ ವಿವರಗಳನ್ನು ಇಲ್ಲಿ ನೋಡಬಹುದು [link]. ಸೀಶೆಲ್ಸ್ 'ವಿಪತ್ತು ನಿರೋಧಕ ಮೂಲಸೌಕರ್ಯ ಒಕ್ಕೂಟ'ಕ್ಕೆ (CDRI) ಸೇರ್ಪಡೆಯಾಗುತ್ತಿರುವುದಾಗಿ ಘೋಷಿಸಿತು.

ನಂತರ, ಪ್ರಧಾನಮಂತ್ರಿಯವರು ಸೀಶೆಲ್ಸ್‌ನ ರಾಷ್ಟ್ರೀಯ ಅಸೆಂಬ್ಲಿಯ ವಿಶೇಷ ಅಧಿವೇಶನವನ್ನುದ್ದೇಶಿಸಿ ಮಾತನಾಡಿದರು. ಈ ಗೌರವ ಪಡೆದ ಮೊದಲ ಭಾರತೀಯ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ತಮ್ಮ ಭಾಷಣದಲ್ಲಿ, ಭಾರತ ಮತ್ತು ಸೀಶೆಲ್ಸ್ ನಡುವಿನ ಐತಿಹಾಸಿಕ ಸ್ನೇಹದ ಬಂಧವನ್ನು ಅವರು ಉಲ್ಲೇಖಿಸಿದರು. ಎರಡೂ ದೇಶಗಳಿಗೆ ಮಾರ್ಗದರ್ಶನ ನೀಡುವ ಪ್ರಜಾಪ್ರಭುತ್ವ, ಕಾನೂನಿನ ಆಳ್ವಿಕೆ ಮತ್ತು ಜನಕೇಂದ್ರಿತ ಆಡಳಿತದ ಹಂಚಿಕೆಯ ಮೌಲ್ಯಗಳನ್ನು ಅವರು ಒತ್ತಿ ಹೇಳಿದರು. ಪರಸ್ಪರ ನಂಬಿಕೆ ಮತ್ತು ನಿಕಟ ಸಹಕಾರವು ಅಭಿವೃದ್ಧಿ ಸಹಕಾರ, ಕಡಲ ಭದ್ರತೆ, ತಂತ್ರಜ್ಞಾನ, ನಾವೀನ್ಯತೆ, ಆರೋಗ್ಯ ಮತ್ತು ಸಾಮರ್ಥ್ಯ ವರ್ಧನೆಯನ್ನು ಒಳಗೊಂಡ ಬಲಿಷ್ಠ ಪಾಲುದಾರಿಕೆಯನ್ನು ರೂಪಿಸಿದೆ ಎಂದು ಅವರು ಗಮನಸೆಳೆದರು. ಈ ಎರಡೂ ಪ್ರಜಾಪ್ರಭುತ್ವಗಳ ನಡುವೆ ಸಂಸದೀಯ ವಿನಿಮಯವನ್ನು ಹೆಚ್ಚಿಸಬೇಕೆಂದು ಪ್ರಧಾನಿ ಕರೆ ನೀಡಿದರು. ಪ್ರಧಾನಮಂತ್ರಿಯವರ ಸಂಪೂರ್ಣ ಭಾಷಣವನ್ನು ಇಲ್ಲಿ ನೋಡಬಹುದು [link].

ಸೀಶೆಲ್ಸ್‌ನ ವಿರೋಧ ಪಕ್ಷದ ನಾಯಕರಾದ ಘನತೆವೆತ್ತ ಶ್ರೀ ಬರ್ನಾರ್ಡ್ ಜಾರ್ಜಸ್ ಅವರು ಪ್ರಧಾನಮಂತ್ರಿಯವರನ್ನು ಭೇಟಿಯಾದರು. ಉಭಯ ನಾಯಕರು ಭಾರತ-ಸೀಶೆಲ್ಸ್ ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚಿಸಿದರು ಮತ್ತು ಎರಡೂ ದೇಶಗಳ ನಡುವಿನ ವಿಶೇಷ ಸ್ನೇಹವನ್ನು ಮತ್ತಷ್ಟು ಬೆಳೆಸಲು ತಮ್ಮ ದೃಢ ಬೆಂಬಲವನ್ನು ವ್ಯಕ್ತಪಡಿಸಿದರು.

 

*****


(रिलीज़ आईडी: 2278723) आगंतुक पटल : 3
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Punjabi , Gujarati , Odia , Malayalam