ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜ್ ಗಾರ್ ಯೋಜನೆ ಅಡಿಯಲ್ಲಿ ಸುಮಾರು ₹2,400 ಕೋಟಿ ಮೌಲ್ಯದ ಪ್ರೋತ್ಸಾಹಕ ಧನವನ್ನು ವಿತರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ಪಿಎಂ ವಿಕಸಿತ್ ಭಾರತ್ ರೋಜ್ ಗಾರ್ ಯೋಜನೆಯು ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುತ್ತಿರುವ ಯುವಕರನ್ನು ಸಬಲೀಕರಣಗೊಳಿಸುವ ಮತ್ತು ಯುವಕರು ಹಾಗೂ ಉದ್ಯಮದ ನಡುವೆ ಸೇತುವೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ: ಪ್ರಧಾನಮಂತ್ರಿ
ನಮ್ಮ ಯುವಕರ ಆಕಾಂಕ್ಷೆಗಳು, ಕೌಶಲ್ಯಗಳು ಮತ್ತು ಸಾಮರ್ಥ್ಯಗಳು ವಿಕಸಿತ ಭಾರತದ ಹಾದಿಯನ್ನು ರೂಪಿಸುತ್ತವೆ: ಪ್ರಧಾನಮಂತ್ರಿ
ಮುಂಬರುವ ವರ್ಷಗಳಲ್ಲಿ ಜಾಗತಿಕ ಬೆಳವಣಿಗೆ, ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಮುನ್ನಡೆಸುವಲ್ಲಿ ಭಾರತದ ಯುವಜನರು ಮುಂಚೂಣಿಯಲ್ಲಿರುತ್ತಾರೆ: ಪ್ರಧಾನಮಂತ್ರಿ
ಭಾರತವು ಮುಂಚೂಣಿಯಲ್ಲಿ ನಿಂತು ಮುನ್ನಡೆಸಲು ಸಜ್ಜಾಗಿದೆ: ಪ್ರಧಾನಮಂತ್ರಿ
21ನೇ ಶತಮಾನದಲ್ಲಿ, ನುರಿತ ಪ್ರತಿಭೆಗಳನ್ನು ಪೋಷಿಸುವ, ನಾವೀನ್ಯತೆಯನ್ನು ಉತ್ತೇಜಿಸುವ ಮತ್ತು ಅತ್ಯುನ್ನತ ಗುಣಮಟ್ಟದ ಮಾನದಂಡಗಳನ್ನು ಕಾಯ್ದುಕೊಳ್ಳುವ ರಾಷ್ಟ್ರಗಳಿಗೆ ಮಾತ್ರ ಅವಕಾಶಗಳು ಒಲಿಯಲಿವೆ: ಪ್ರಧಾನಮಂತ್ರಿ
ಜಾಗತಿಕವಾಗಿ ಸ್ಪರ್ಧಿಸಲು, ನಾವು ಅತ್ಯುನ್ನತ ಗುಣಮಟ್ಟದ ಮಾನದಂಡಗಳನ್ನು ಪೂರೈಸಬೇಕು: ಪ್ರಧಾನಮಂತ್ರಿ
प्रविष्टि तिथि:
19 JUN 2026 7:49PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 'ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜ್ ಗಾರ್ ಯೋಜನೆ'ಯ ಫಲಾನುಭವಿಗಳು, ಉದ್ಯಮದ ಪ್ರತಿನಿಧಿಗಳು ಮತ್ತು ಪಾಲುದಾರರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ, ದೇಶದ ಯುವಕರನ್ನು ಸಬಲೀಕರಣಗೊಳಿಸಲು ಮತ್ತು ದೇಶಾದ್ಯಂತ ಉದ್ಯೋಗ ಸೃಷ್ಟಿಯನ್ನು ವೇಗಗೊಳಿಸಲು ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಭಾರತ ಸರ್ಕಾರದ ಪ್ರಮುಖ ಉದ್ಯೋಗ-ಸಂಯೋಜಿತ ಪ್ರೋತ್ಸಾಹಕ ಯೋಜನೆಯಾದ ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜ್ ಗಾರ್ ಯೋಜನೆ (PM-VBRY) ಅನುಷ್ಠಾನದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುವ ಸಲುವಾಗಿ ಮತ್ತು ವಿವಿಧ ವಲಯಗಳಲ್ಲಿ ಸಾಮಾಜಿಕ ಭದ್ರತೆಯ ವ್ಯಾಪ್ತಿಯನ್ನು ವಿಸ್ತರಿಸಲು, ಶ್ರೀ ಮೋದಿ ಅವರು PM-VBRY ಅಡಿಯಲ್ಲಿ ಸುಮಾರು ₹2,400 ಕೋಟಿ ಮೌಲ್ಯದ ಪ್ರೋತ್ಸಾಹಕ ಧನವನ್ನು ವಿತರಿಸಿದರು. ಈ ಪ್ರೋತ್ಸಾಹಕ ಧನವು ದೇಶಾದ್ಯಂತ 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿಗೆ ಬೆಂಬಲ ನೀಡಿದೆ.
ಜಿ-7 ಶೃಂಗಸಭೆಯಲ್ಲಿ ಭಾಗವಹಿಸಿ ಮತ್ತು ಜಾಗತಿಕ ನಾಯಕರೊಂದಿಗೆ ಸಂವಾದ ನಡೆಸಿ, ಫ್ರಾನ್ಸ್ ಮತ್ತು ಸ್ಲೋವಾಕಿಯಾ ಪ್ರವಾಸ ಮುಗಿಸಿ ಮರಳಿದ ಬೆನ್ನಲ್ಲೇ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಭಾರತದ ಯುವಕರ ಪ್ರತಿಭೆ, ಕೌಶಲ್ಯ ಮತ್ತು ಸಾಮರ್ಥ್ಯಕ್ಕಾಗಿ ಜಾಗತಿಕವಾಗಿ ಅಭೂತಪೂರ್ವ ಮನ್ನಣೆ ದೊರೆಯುತ್ತಿದೆ ಎಂದು ಉಲ್ಲೇಖಿಸಿದರು. ವಿಶ್ವವು ಭಾರತೀಯ ಯುವಕರ ಸಾಮರ್ಥ್ಯವನ್ನು ಹೆಚ್ಚು ಹೆಚ್ಚು ಗುರುತಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು ಮತ್ತು ಪ್ರತಿಯೊಬ್ಬ ಯುವಕನಿಗೂ ತನ್ನ ಸಾಮರ್ಥ್ಯವನ್ನು ಯಶಸ್ಸನ್ನಾಗಿ ಪರಿವರ್ತಿಸಲು ಅವಕಾಶ ಸಿಗುವಂತೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಒತ್ತಿ ಹೇಳಿದರು.
"ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜ್ ಗಾರ್ ಯೋಜನೆಯು ಕೇವಲ ಒಂದು ಉದ್ಯೋಗ ಯೋಜನೆಗಿಂತಲೂ ಮಿಗಿಲಾದದ್ದಾಗಿದೆ. ಇದು ತಮ್ಮ ಮೊದಲ ಉದ್ಯೋಗಕ್ಕೆ ಸೇರುತ್ತಿರುವ ಯುವಜನರ ಆಕಾಂಕ್ಷೆಗಳನ್ನು ಬಲಪಡಿಸಲು ಹಾಗೂ ಉದ್ಯಮ ಮತ್ತು ಉದ್ಯೋಗಿಗಳ ನಡುವೆ ದೃಢವಾದ ಸೇತುವೆಯನ್ನು ನಿರ್ಮಿಸಲು ರೂಪಿಸಲಾದ ಒಂದು ಉಪಕ್ರಮವಾಗಿದೆ" ಎಂದು ಶ್ರೀ ಮೋದಿ ಹೇಳಿದರು. ಅನೇಕ ಯೋಜನೆಗಳು ಸಾಮಾನ್ಯವಾಗಿ ಉದ್ಯೋಗಿಗಳು ಅಥವಾ ಉದ್ಯೋಗದಾತರ ಮೇಲೆ ಮಾತ್ರ ಗಮನ ಕೇಂದ್ರೀಕರಿಸುತ್ತವೆ, ಆದರೆ ಈ ಕಾರ್ಯಕ್ರಮವು ಏಕಕಾಲದಲ್ಲಿ ಇಬ್ಬರಿಗೂ ಬೆಂಬಲ ನೀಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ತಮ್ಮ ವೃತ್ತಿಪರ ಪ್ರಯಾಣವನ್ನು ಪ್ರಾರಂಭಿಸುತ್ತಿರುವ ಯುವಜನರೊಂದಿಗೆ ಸರ್ಕಾರ ನಿಲ್ಲುತ್ತದೆ ಮತ್ತು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಂಸ್ಥೆಗಳನ್ನು ಪ್ರೋತ್ಸಾಹಿಸುತ್ತದೆ.
ಯೋಜನೆಯ ಸಾಧನೆಗಳನ್ನು ಹಂಚಿಕೊಂಡ ಶ್ರೀ ಮೋದಿಯವರು, ಇದುವರೆಗೆ ಸುಮಾರು 70 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಮತ್ತು ಅಷ್ಟೇ ಸಂಖ್ಯೆಯ ಮೊದಲ ಬಾರಿಯ ಉದ್ಯೋಗಿಗಳನ್ನು ಸಾಮಾಜಿಕ ಭದ್ರತೆಯ ವ್ಯಾಪ್ತಿಗೆ ತರಲಾಗಿದೆ ಎಂದು ಹೇಳಿದರು. ಸುಮಾರು 20 ಲಕ್ಷ ಯುವಕರು ತಮ್ಮ ಮೊದಲ ಉದ್ಯೋಗದಲ್ಲಿ ಆರು ತಿಂಗಳುಗಳನ್ನು ಪೂರೈಸಿದ್ದಾರೆ, ಹಾಗೆಯೇ ಸುಮಾರು 10 ಲಕ್ಷ ಫಲಾನುಭವಿಗಳು ಈ ಮೈಲಿಗಲ್ಲನ್ನು ಪೂರೈಸಿದ ನಂತರ ಯೋಜನೆಯ ಅಡಿಯಲ್ಲಿ ಈಗಾಗಲೇ ಪ್ರೋತ್ಸಾಹಕಗಳನ್ನು ಪಡೆದಿದ್ದಾರೆ ಎಂದು ಅವರು ಉಲ್ಲೇಖಿಸಿದರು. ₹2,000 ಕೋಟಿಗೂ ಹೆಚ್ಚು ಮೊತ್ತವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ಈ ಬೆಂಬಲವನ್ನು ಕೇವಲ ಆರ್ಥಿಕ ನೆರವಿಗಿಂತಲೂ ಮಿಗಿಲಾದದ್ದು ಎಂದು ಬಣ್ಣಿಸಿದ ಶ್ರೀ ಮೋದಿ, ಇದು ಯುವಜನರ ಕಠಿಣ ಪರಿಶ್ರಮಕ್ಕೆ ದೇಶ ನೀಡುವ ಮನ್ನಣೆ ಮತ್ತು ಅವರ ಭವಿಷ್ಯದ ಮೇಲಿರುವ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಈ ಯೋಜನೆಯಡಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದ ಸಂಸ್ಥೆಗಳು ಮತ್ತು ಉದ್ಯಮಗಳ ಭಾಗವಹಿಸುವಿಕೆಯ ಬಗ್ಗೆಯೂ ಪ್ರಧಾನಮಂತ್ರಿಯವರು ತೃಪ್ತಿ ವ್ಯಕ್ತಪಡಿಸಿದರು. "ಸರ್ಕಾರ, ಉದ್ಯಮ ಮತ್ತು ಯುವಜನರು ಒಟ್ಟಾಗಿ ಕೆಲಸ ಮಾಡಿದಾಗ ಉದ್ಯೋಗ ಸೃಷ್ಟಿಯು ವೇಗವನ್ನು ಪಡೆಯುತ್ತದೆ. ಯುವಜನರಿಗೆ ಅವಕಾಶಗಳು ದೊರೆಯುವ, ಕೈಗಾರಿಕೆಗಳಿಗೆ ಪ್ರೋತ್ಸಾಹ ಸಿಗುವ ಮತ್ತು ಉದ್ಯೋಗ ಸೃಷ್ಟಿಯೇ ಒಂದು ರಾಷ್ಟ್ರೀಯ ಅಭಿಯಾನವಾಗುವ ನವ ಭಾರತದ ಪ್ರತಿಬಿಂಬವೇ ಈ ಉಪಕ್ರಮವಾಗಿದೆ" ಎಂದು ಶ್ರೀ ಮೋದಿ ಉಲ್ಲೇಖಿಸಿದರು.
ಭಾರತದ ಜನಸಂಖ್ಯಾ ಶಕ್ತಿಯನ್ನು ಎತ್ತಿ ತೋರಿಸಿದ ಶ್ರೀ ಮೋದಿಯವರು, ಭಾರತವು ವಿಶ್ವದ ಅತಿ ಕಿರಿಯ ರಾಷ್ಟ್ರಗಳಲ್ಲಿ ಒಂದಾಗಿದೆ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ನಮ್ಮ ಪಯಣವು ಯುವಜನರ ಆಕಾಂಕ್ಷೆಗಳು, ಕೌಶಲ್ಯಗಳು ಮತ್ತು ಸಾಮರ್ಥ್ಯಗಳೊಂದಿಗೆ ಅಂತರ್ಗತವಾಗಿ ಬೆಸೆದುಕೊಂಡಿದೆ ಎಂದು ಅಭಿಪ್ರಾಯಪಟ್ಟರು. ಪ್ರತಿಯೊಬ್ಬ ಯುವ ಭಾರತೀಯನು ತನ್ನ ಪ್ರತಿಭೆ ಮತ್ತು ಮಹತ್ವಾಕಾಂಕ್ಷೆಗೆ ಅನುಗುಣವಾಗಿ ಮುನ್ನಡೆಯಲು ಸಾಧ್ಯವಾಗುವಂತೆ ಖಚಿತಪಡಿಸಿಕೊಳ್ಳಲು ಸರ್ಕಾರ ಹೊಂದಿರುವ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಕಳೆದ ಹನ್ನೆರಡು ವರ್ಷಗಳಲ್ಲಿ, ಉದ್ಯೋಗದ ಪ್ರತಿಯೊಂದು ಮಾರ್ಗವನ್ನೂ ಬಲಪಡಿಸಲು ಸರ್ಕಾರ ಕೆಲಸ ಮಾಡಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. "ಮೂಲಸೌಕರ್ಯ ಮತ್ತು ನಾವೀನ್ಯತೆಯಿಂದ ಹಿಡಿದು ಉತ್ಪಾದನೆ, ಡಿಜಿಟಲ್ ಆರ್ಥಿಕತೆ, ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಸ್ಟಾರ್ಟ್ ಅಪ್ ಗಳವರೆಗೆ ವಿವಿಧ ವಲಯಗಳಲ್ಲಿ ಮಹತ್ವದ ಪ್ರಯತ್ನಗಳನ್ನು ಮಾಡಲಾಗಿದೆ. 'ಮೇಕ್ ಇನ್ ಇಂಡಿಯಾ', 'ವೋಕಲ್ ಫಾರ್ ಲೋಕಲ್', ಸ್ಥಳೀಯ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗಳಿಗೆ ಕೊಂಡೊಯ್ಯುವ ಪ್ರಯತ್ನಗಳು ಮತ್ತು 'ಮಿಷನ್ ಮ್ಯಾನುಫ್ಯಾಕ್ಚರಿಂಗ್' ನಂತಹ ಉಪಕ್ರಮಗಳು ಉದ್ಯೋಗ ಮತ್ತು ಸ್ವಯಂ-ಉದ್ಯೋಗ ಎರಡರ ಮಾರ್ಗಗಳನ್ನೂ ವಿಸ್ತರಿಸಿವೆ" ಎಂದು ಶ್ರೀ ಮೋದಿ ಹೇಳಿದರು.
ಮೂಲಸೌಕರ್ಯದಲ್ಲಿನ ₹12 ಲಕ್ಷ ಕೋಟಿಗೂ ಅಧಿಕ ಮೌಲ್ಯದ ಸರ್ಕಾರದ ಹೂಡಿಕೆಯು ಉದ್ಯೋಗ ಸೃಷ್ಟಿಗೆ ಭದ್ರ ಬುನಾದಿಯನ್ನು ನಿರ್ಮಿಸುತ್ತಿದೆ ಎಂದು ಶ್ರೀ ಮೋದಿ ಉಲ್ಲೇಖಿಸಿದರು. ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಒದಗಿಸಲಾದ ₹33 ಲಕ್ಷ ಕೋಟಿಗೂ ಮೀರಿದ ನೆರವು, ಲಕ್ಷಾಂತರ ಯುವಜನರು ತಮ್ಮ ಸ್ವಂತ ಉದ್ದಿಮೆಗಳನ್ನು ಸ್ಥಾಪಿಸಲು ಅನುವು ಮಾಡಿಕೊಟ್ಟಿದೆ ಎಂದೂ ಅವರು ಉಲ್ಲೇಖಿಸಿದರು. ಮಹಿಳಾ ಸಬಲೀಕರಣವನ್ನು ಪ್ರಸ್ತಾಪಿಸಿದ ಅವರು, 10 ಕೋಟಿಗೂ ಹೆಚ್ಚು ಮಹಿಳೆಯರು ಸ್ವಸಹಾಯ ಸಂಘಗಳೊಂದಿಗೆ ಗುರುತಿಸಿಕೊಂಡಿದ್ದಾರೆ, ಹಾಗೆಯೇ 3 ಕೋಟಿಗೂ ಹೆಚ್ಚು ಮಹಿಳೆಯರು 'ಲಕ್ಷಪತಿ ದೀದಿ'ಯರಾಗಿ ಹೊರಹೊಮ್ಮಿದ್ದಾರೆ ಎಂದು ತಿಳಿಸಿದರು. ಪಿಎಂ ಸ್ವಾನಿಧಿ (PM SVANidhi) ಮತ್ತು ಪಿಎಂ ವಿಶ್ವಕರ್ಮ (PM Vishwakarma) ದಂತಹ ಉಪಕ್ರಮಗಳು ಸಣ್ಣ ಉದ್ಯಮಿಗಳು, ಬೀದಿಬದಿ ವ್ಯಾಪಾರಿಗಳು ಮತ್ತು ಸಾಂಪ್ರದಾಯಿಕ ಕುಶಲಕರ್ಮಿಗಳ ಜೀವನೋಪಾಯವನ್ನು ಬಲಪಡಿಸಿವೆ ಎಂದು ಅವರು ಹೇಳಿದರು.
ಉದಯೋನ್ಮುಖ ತಂತ್ರಜ್ಞಾನಗಳು ಹೇಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ ಎಂಬುದಕ್ಕೆ ಉದಾಹರಣೆಯಾಗಿ ವೇಗವಾಗಿ ವಿಸ್ತರಿಸುತ್ತಿರುವ ಡ್ರೋನ್ ವಲಯವನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ಔಷಧಿಗಳ ವಿತರಣೆ ಮತ್ತು ಕೃಷಿ ಅನ್ವಯಿಕೆಗಳಿಂದ ಹಿಡಿದು 'ಸ್ವಾಮಿತ್ವ' (SVAMITVA) ಯೋಜನೆಯಡಿ ಭೂಮಿಯ ಮ್ಯಾಪಿಂಗ್ ಮತ್ತು ರಕ್ಷಣಾ ಕಾರ್ಯಾಚರಣೆಗಳವರೆಗೆ, ಡ್ರೋನ್ ತಂತ್ರಜ್ಞಾನದ ಹೆಚ್ಚುತ್ತಿರುವ ಅಳವಡಿಕೆಯು ಯುವ ಭಾರತೀಯರಿಗೆ ಉದ್ಯೋಗದ ಹೊಸ ಮಾರ್ಗಗಳನ್ನು ತೆರೆಯುತ್ತಿದೆ. ಡಿಜಿಟಲ್ ಆರ್ಥಿಕತೆಯ ಪರಿವರ್ತಕ ಪ್ರಭಾವದ ಬಗ್ಗೆ ಮಾತನಾಡಿದ ಶ್ರೀ ಮೋದಿ, ಉದ್ಯೋಗ ಮತ್ತು ಆದಾಯದ ಪ್ರಮುಖ ಮೂಲಗಳಾಗಿ ಗಿಗ್ (gig) ಆರ್ಥಿಕತೆ, ವೇದಿಕೆ ಆಧಾರಿತ ಸೇವೆಗಳು, ಕಂಟೆಂಟ್ ಸೃಷ್ಟಿ ಮತ್ತು ತಂತ್ರಜ್ಞಾನ-ಚಾಲಿತ ಉದ್ಯಮಗಳ ಹೊರಹೊಮ್ಮುವಿಕೆಯನ್ನು ಎತ್ತಿ ತೋರಿಸಿದರು. "ಒಂದೊಮ್ಮೆ ಊಹಿಸಲೂ ಅಸಾಧ್ಯವಾದ ಅವಕಾಶಗಳು ಈಗ ಲಕ್ಷಾಂತರ ಯುವ ಭಾರತೀಯರಿಗೆ ಕಾರ್ಯಸಾಧ್ಯವಾದ ಜೀವನೋಪಾಯಗಳಾಗಿ ಮಾರ್ಪಟ್ಟಿವೆ. ಇದೇ ರೀತಿಯ ಪರಿವರ್ತನೆಯು ಭಾರತದ ಉತ್ಸಾಹಭರಿತ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ, ಇದು ನಾವೀನ್ಯತೆಯನ್ನು ಉತ್ತೇಜಿಸುವುದನ್ನು, ಉದ್ಯೋಗಗಳನ್ನು ಸೃಷ್ಟಿಸುವುದನ್ನು ಮತ್ತು ದೇಶದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುವುದನ್ನು ಮುಂದುವರಿಸಿದೆ,” ಎಂದು ಶ್ರೀ ಮೋದಿ ಅವರು ಒತ್ತಿ ಹೇಳಿದರು.
ಕಳೆದ ದಶಕದಲ್ಲಿ ಭಾರತದ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯು ಸಾಧಿಸಿದ ಗಮನಾರ್ಹ ಬೆಳವಣಿಗೆಯನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ಒಂದೊಮ್ಮೆ ದೇಶದಲ್ಲಿ ಕೇವಲ 500 ರಷ್ಟು ಸ್ಟಾರ್ಟ್ ಅಪ್ ಗಳಿದ್ದವು, ಆದರೆ ಇಂದು ರಾಷ್ಟ್ರದ ಬಹುತೇಕ ಪ್ರತಿಯೊಂದು ಜಿಲ್ಲೆಯಲ್ಲೂ 2,00,000ಕ್ಕೂ ಹೆಚ್ಚು ನೋಂದಾಯಿತ ಸ್ಟಾರ್ಟ್ ಅಪ್ ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಉಲ್ಲೇಖಿಸಿದರು. "ಜಾಗತಿಕ ಸಮುದಾಯವು ಭಾರತದ ಭವಿಷ್ಯದ ಬಗ್ಗೆ ಹೆಚ್ಚು ಆಶಾವಾದಿಯಾಗಿದೆ ಮತ್ತು ಅದರ ಯುವ ಜನತೆಯ ಸಾಮರ್ಥ್ಯಗಳ ಮೇಲೆ ಅಪಾರ ವಿಶ್ವಾಸವನ್ನು ಹೊಂದಿದೆ" ಎಂದು ಶ್ರೀ ಮೋದಿ ಹೇಳಿದರು. ತಮ್ಮ ಇತ್ತೀಚಿನ ಫ್ರಾನ್ಸ್ ಪ್ರವಾಸವನ್ನು ಉಲ್ಲೇಖಿಸಿದ ಅವರು, ಕೃತಕ ಬುದ್ಧಿಮತ್ತೆ (AI), ಬಾಹ್ಯಾಕಾಶ ತಂತ್ರಜ್ಞಾನ, ಹಸಿರು ಇಂಧನ ಮತ್ತು ಜೈವಿಕ ತಂತ್ರಜ್ಞಾನದಂತಹ ಉದಯೋನ್ಮುಖ ವಲಯಗಳಲ್ಲಿ ಭಾರತೀಯ ಸ್ಟಾರ್ಟ್ ಅಪ್ ಗಳು ಮತ್ತು ಜಾಗತಿಕ ಹೂಡಿಕೆದಾರರನ್ನು ಒಟ್ಟುಗೂಡಿಸಿದ "ಇಂಡಿಯಾ ಇನ್ನೋವೇಟ್ಸ್" (India Innovates) ಕಾರ್ಯಕ್ರಮದ ಯಶಸ್ವಿ ಆಯೋಜನೆಯನ್ನು ಸ್ಮರಿಸಿದರು. ಇಂತಹ ಕಾರ್ಯಕ್ರಮಗಳು ಭಾರತದ ನಾವೀನ್ಯತಾ ಪರಿಸರ ವ್ಯವಸ್ಥೆಯಲ್ಲಿ ಹೆಚ್ಚುತ್ತಿರುವ ಅಂತರರಾಷ್ಟ್ರೀಯ ಆಸಕ್ತಿಯನ್ನು ಮತ್ತು ಭವಿಷ್ಯದ ತಂತ್ರಜ್ಞಾನಗಳನ್ನು ರೂಪಿಸುವಲ್ಲಿ ಅದರ ವಿಸ್ತರಿಸುತ್ತಿರುವ ಪಾತ್ರವನ್ನು ಪ್ರದರ್ಶಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಭಾರತವು ಪ್ರಪಂಚದಾದ್ಯಂತದ ದೇಶಗಳೊಂದಿಗೆ ಹೊಸ ವ್ಯಾಪಾರ ಒಪ್ಪಂದಗಳನ್ನು ಸಕ್ರಿಯವಾಗಿ ಮಾಡಿಕೊಳ್ಳುತ್ತಿದೆ ಎಂದು ಶ್ರೀ ಮೋದಿ ಮತ್ತಷ್ಟು ತಿಳಿಸಿದರು. ಈ ಒಪ್ಪಂದಗಳು ಭಾರತೀಯ ಕೈಗಾರಿಕೆಗಳಿಗೆ ಹೊಸ ಮಾರುಕಟ್ಟೆಗಳನ್ನು ತೆರೆಯುತ್ತಿವೆ ಮತ್ತು ಭಾರತೀಯ ವೃತ್ತಿಪರರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ ಎಂದು ಅವರು ಉಲ್ಲೇಖಿಸಿದರು. "ಜಗತ್ತು ಭವಿಷ್ಯದ ಆರ್ಥಿಕತೆಗೆ ತಯಾರಿ ನಡೆಸುತ್ತಿದ್ದರೆ, ಭಾರತವು ಅದನ್ನು ಮುನ್ನಡೆಸಲು ಸಜ್ಜಾಗುತ್ತಿದೆ. ರಾಷ್ಟ್ರಗಳು ಭವಿಷ್ಯದ ತಂತ್ರಜ್ಞಾನಗಳತ್ತ ಹೆಚ್ಚು ಹೆಚ್ಚು ಸಾಗುತ್ತಿರುವಾಗ, ವೇಗವಾಗಿ ವಿಕಸನಗೊಳ್ಳುತ್ತಿರುವ ಜಗತ್ತಿನಲ್ಲಿ ಅಭಿವೃದ್ಧಿ ಹೊಂದಲು ಅಗತ್ಯವಾದ ಕೌಶಲ್ಯ ಮತ್ತು ಸಾಮರ್ಥ್ಯಗಳೊಂದಿಗೆ ತನ್ನ ಯುವಜನರನ್ನು ಸಜ್ಜುಗೊಳಿಸುವತ್ತ ಭಾರತವು ಗಮನಹರಿಸಿದೆ" ಎಂದು ಅವರು ಒತ್ತಿ ಹೇಳಿದರು.
ಕಳೆದ ಹನ್ನೆರಡು ವರ್ಷಗಳಲ್ಲಿ ಭಾರತದ ಉದ್ಯೋಗ ಪರಿಸರ ವ್ಯವಸ್ಥೆಯಲ್ಲಿ ಆಗಿರುವ ಮಹತ್ವದ ಪರಿವರ್ತನೆಯ ಕಡೆಗೂ ಪ್ರಧಾನಮಂತ್ರಿಯವರು ಗಮನ ಸೆಳೆದರು, ಇದು ಬಹುತೇಕ ಕಡಿಮೆ ಗಮನವನ್ನು ಪಡೆಯುತ್ತದೆ, ಆದರೆ ಅಭಿವೃದ್ಧಿ ಹೊಂದಿದ ಭಾರತದತ್ತ ಸಾಗುವ ಪಯಣದಲ್ಲಿ ಅತ್ಯಂತ ನಿರ್ಣಾಯಕವಾಗಿದೆ. "ಉದ್ಯೋಗವನ್ನು ಭದ್ರತೆ, ಘನತೆ ಮತ್ತು ಸಾಮಾಜಿಕ ರಕ್ಷಣೆಯೊಂದಿಗೆ ಬೆಸೆಯುವತ್ತ ಸರ್ಕಾರವು ಗಮನ ಹರಿಸಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆಯನ್ನು (EPFO) ಆಧುನೀಕರಿಸಲು, ಪಿಂಚಣಿ ವ್ಯವಸ್ಥೆಗಳನ್ನು ಸರಳಗೊಳಿಸಲು ಮತ್ತು ಲಕ್ಷಾಂತರ ಕಾರ್ಮಿಕರಿಗೆ ಆರೋಗ್ಯ ವಿಮೆ ಹಾಗೂ ಕೈಗೆಟುಕುವ ಆರೋಗ್ಯ ಸೇವೆಗಳ ಲಭ್ಯತೆಯನ್ನು ವಿಸ್ತರಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಸರ್ಕಾರವು ಕೈಗೊಂಡಿರುವ ಕಾರ್ಮಿಕ ಸುಧಾರಣೆಗಳಿಗೂ ಇದೇ ತತ್ವವು ಮಾರ್ಗದರ್ಶನ ನೀಡುತ್ತದೆ" ಎಂದು ಶ್ರೀ ಮೋದಿ ಉಲ್ಲೇಖಿಸಿದರು.
ಭಾರತದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಮಹಿಳೆಯರ ಹೆಚ್ಚುತ್ತಿರುವ ಕೊಡುಗೆಯನ್ನೂ ಪ್ರಧಾನಮಂತ್ರಿಯವರು ಎತ್ತಿ ತೋರಿಸಿದರು. "ರಾತ್ರಿ ಪಾಳಿಯ ಉದ್ಯೋಗಕ್ಕೆ ಸಂಬಂಧಿಸಿದ ಸುಧಾರಣೆಗಳು, ಮನೆಯಿಂದಲೇ ಕೆಲಸ ಮಾಡುವ (ವರ್ಕ್-ಫ್ರಮ್-ಹೋಮ್) ಅವಕಾಶಗಳ ಉತ್ತೇಜನ ಮತ್ತು ಕೆಲಸದ ಸ್ಥಳದಲ್ಲಿ ಸುರಕ್ಷತಾ ವ್ಯವಸ್ಥೆಗಳನ್ನು ಬಲಪಡಿಸುವ ಕ್ರಮಗಳು, ಕಾರ್ಯಪಡೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಮತ್ತಷ್ಟು ಹೆಚ್ಚಿಸುವ ಗುರಿಯನ್ನು ಹೊಂದಿವೆ" ಎಂದು ಶ್ರೀ ಮೋದಿ ಒತ್ತಿ ಹೇಳಿದರು.
ಉದ್ಯಮದ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮೋದಿ, ಇಪ್ಪತ್ತೊಂದನೇ ಶತಮಾನದಲ್ಲಿ ಆರ್ಥಿಕ ಯಶಸ್ಸನ್ನು ನಿರ್ಧರಿಸುವಲ್ಲಿ ನುರಿತ ಪ್ರತಿಭೆ, ನಾವೀನ್ಯತೆ ಮತ್ತು ಗುಣಮಟ್ಟದ ಮಹತ್ವವನ್ನು ಒತ್ತಿ ಹೇಳಿದರು. ಈ ಸಾಮರ್ಥ್ಯಗಳನ್ನು ಹೊಂದಿರುವ ದೇಶಗಳು ಅತ್ಯುತ್ತಮ ಅವಕಾಶಗಳನ್ನು ಆಕರ್ಷಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು, ಹಾಗೂ ಈ ಮೂರೂ ಕ್ಷೇತ್ರಗಳಲ್ಲಿ ಭಾರತವು ಅಭೂತಪೂರ್ವ ಸಾಮರ್ಥ್ಯವನ್ನು ಹೊಂದಿದೆ ಎಂದು ಪ್ರತಿಪಾದಿಸಿದರು. "ಜಗತ್ತು ಭಾರತಕ್ಕೆ ತನ್ನ ಬಾಗಿಲುಗಳನ್ನು ಹೆಚ್ಚಾಗಿ ತೆರೆಯುತ್ತಿದೆ ಮತ್ತು ಸುಮಾರು ನಲವತ್ತು ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಈ ಒಪ್ಪಂದಗಳು ಹೊಸ ಮಾರುಕಟ್ಟೆಗಳನ್ನು ಸೃಷ್ಟಿಸುತ್ತಿವೆ, ಜಾಗತಿಕ ಗ್ರಾಹಕರನ್ನು ತಲುಪಲು ಲಭ್ಯತೆಯನ್ನು ವಿಸ್ತರಿಸುತ್ತಿವೆ ಮತ್ತು 'ಮೇಕ್ ಇನ್ ಇಂಡಿಯಾ' ಉಪಕ್ರಮದ ಅಡಿಯಲ್ಲಿ ನಿರ್ಮಿಸಲಾದ ಬ್ರ್ಯಾಂಡ್ ಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ" ಎಂದು ಶ್ರೀ ಮೋದಿ ಉಲ್ಲೇಖಿಸಿದರು.
ಒಂದು ರಾಷ್ಟ್ರವು ಜಾಗತಿಕ ದೃಷ್ಟಿಕೋನವನ್ನು ಅಳವಡಿಸಿಕೊಂಡಾಗ, ಯಶಸ್ಸಿನ ಗಡಿಗಳು ಸ್ವಾಭಾವಿಕವಾಗಿ ವಿಸ್ತರಿಸುತ್ತವೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಇಪ್ಪತ್ತೊಂದನೇ ಶತಮಾನದಲ್ಲಿ ತರಬೇತಿ, ಮಾರ್ಗದರ್ಶನ ಮತ್ತು ಇಂಟರ್ನ್ ಶಿಪ್ ಗಳು ಇನ್ನು ಮುಂದೆ ಐಚ್ಛಿಕವಲ್ಲ, ಬದಲಿಗೆ ಭವಿಷ್ಯಕ್ಕೆ ಸಿದ್ಧವಾಗಿರುವ ಕಾರ್ಯಪಡೆಯ ಅತ್ಯಗತ್ಯ ಘಟಕಗಳಾಗಿವೆ ಎಂದು ಅವರು ತಿಳಿಸಿದರು. "ಅಭಿವೃದ್ಧಿ ಹೊಂದಿದ ಭಾರತದತ್ತ ಸಾಗುವ ಪಯಣವು ಕೇವಲ ಹೂಡಿಕೆಯಿಂದ ಮಾತ್ರವೇ ಮುನ್ನಡೆಯುವುದಿಲ್ಲ. ಬದಲಾಗಿ, ಇದು ಪ್ರತಿಭೆ, ಕೌಶಲ್ಯ ಮತ್ತು ನಾವೀನ್ಯತೆಯ ಶಕ್ತಿಯಿಂದ ಉತ್ತೇಜಿಸಲ್ಪಡುತ್ತದೆ. ರಾಷ್ಟ್ರೀಯ ಅಭಿವೃದ್ಧಿಯ ಪ್ರತಿಯೊಂದು ಕ್ಷೇತ್ರದಲ್ಲೂ ಗುಣಮಟ್ಟವೇ ನಿರ್ಣಾಯಕ ಮಾನದಂಡವಾಗಿ ಉಳಿಯಬೇಕು. ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಮತ್ತು ಯಶಸ್ವಿಯಾಗಲು, ಭಾರತವು ಅತ್ಯುನ್ನತ ಅಂತಾರಾಷ್ಟ್ರೀಯ ಮಾನದಂಡಗಳನ್ನು ಸ್ಥಿರವಾಗಿ ಪೂರೈಸಬೇಕು ಮತ್ತು ಅವುಗಳನ್ನು ಮೀರಿ ಬೆಳೆಯಬೇಕು" ಎಂದು ಶ್ರೀ ಮೋದಿ ಉಲ್ಲೇಖಿಸಿದರು.
ಇಂದು ಜಗತ್ತು ಭಾರತದ ಮೇಲೆ ದೊಡ್ಡ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ ಎಂದು ಶ್ರೀ ಮೋದಿ ಅಭಿಪ್ರಾಯಪಟ್ಟರು. ದೇಶದ ಯುವಜನತೆಯ ಮೇಲೆ ವಿಶ್ವಾಸ ವ್ಯಕ್ತಪಡಿಸಿದ ಅವರು, ಯುವ ಭಾರತೀಯರು ತಮ್ಮ ದೃಢನಿಶ್ಚಯ, ಸೃಜನಶೀಲತೆ ಮತ್ತು ಸಾಮರ್ಥ್ಯಗಳ ಮೂಲಕ ಈ ನಿರೀಕ್ಷೆಗಳನ್ನು ಪೂರೈಸುವುದಷ್ಟೇ ಅಲ್ಲದೆ ಅವುಗಳನ್ನು ಮೀರಿ ಬೆಳೆಯಲಿದ್ದಾರೆ ಎಂದು ಹೇಳಿದರು. ಈ ವಿಶ್ವಾಸವೇ 'ವಿಕಸಿತ್ ಭಾರತ್'ನ ನಿಜವಾದ ಶಕ್ತಿ ಮತ್ತು ಭಾರತದ ಯುವಶಕ್ತಿಯ ಅಪಾರ ಸಾಮರ್ಥ್ಯದ ಪ್ರತಿಬಿಂಬವಾಗಿದೆ ಎಂದು ಅವರು ಬಣ್ಣಿಸಿದರು. ಹಿನ್ನಡೆ ಅಥವಾ ವೈಫಲ್ಯಗಳಿಂದ ನಿರಾಶೆಗೊಳ್ಳದಂತೆಯೂ ಪ್ರಧಾನಮಂತ್ರಿಯವರು ಯುವಜನರನ್ನು ಪ್ರೋತ್ಸಾಹಿಸಿದರು. "ಪ್ರತಿಯೊಂದು ವೈಫಲ್ಯವು ಮೌಲ್ಯಯುತವಾದ ಪಾಠಗಳನ್ನು ಒಳಗೊಂಡಿರುತ್ತದೆ ಮತ್ತು ವೈಯಕ್ತಿಕ ಬೆಳವಣಿಗೆ ಹಾಗೂ ಭವಿಷ್ಯದ ಯಶಸ್ಸಿಗೆ ಕೊಡುಗೆ ನೀಡುತ್ತದೆ. ಸವಾಲುಗಳಿಂದ ನಿರಂತರವಾಗಿ ಕಲಿಯುವ, ಕನಸುಗಳನ್ನು ಸಾಧನೆಗಳಾಗಿ ಪರಿವರ್ತಿಸುವ ಮತ್ತು ಪ್ರತಿಯೊಂದು ಸಾಧನೆಯ ನಂತರ ಹೊಸ ಆಕಾಂಕ್ಷೆಗಳನ್ನು ಸೃಷ್ಟಿಸುವ ಸಾಮರ್ಥ್ಯದಲ್ಲಿಯೇ ಯುವ ಮನಸ್ಸಿನ ನಿಜವಾದ ಅಳತೆ ಅಡಗಿದೆ" ಎಂದು ಶ್ರೀ ಮೋದಿ ಒತ್ತಿ ಹೇಳಿದರು.
ಭಾರತದ ಯುವಜನತೆ ಮತ್ತು ಉದ್ಯಮಶೀಲತೆಯ ಮನೋಭಾವದ ಮೇಲೆ ಅಚಲ ವಿಶ್ವಾಸವನ್ನು ವ್ಯಕ್ತಪಡಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಎಲ್ಲಾ ಭಾಗವಹಿಸುವವರಿಗೂ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ಕೋರುವ ಮೂಲಕ ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು. ಅಲ್ಲದೆ, ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯತ್ತ ಮುನ್ನಡೆಯುತ್ತಿರುವಾಗ, ದೇಶದ ಯುವ ನಾಗರಿಕರ ಆಕಾಂಕ್ಷೆಗಳು, ನಾವೀನ್ಯತೆ ಮತ್ತು ಮಹತ್ವಾಕಾಂಕ್ಷೆಗಳನ್ನು ಬೆಂಬಲಿಸುವ ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.
*****
(रिलीज़ आईडी: 2275465)
आगंतुक पटल : 19