ಸಾಕ್ಷ್ಯಚಿತ್ರದ ಪಯಣವು 'ಸಂತೋಷದ ಆಕಸ್ಮಿಕಗಳಿಂದ' ತುಂಬಿರುತ್ತದೆ. ಚಲನಚಿತ್ರದ ಮೂಲಕ ನೆನಪುಗಳನ್ನು ಸಂರಕ್ಷಿಸುವ ಕಲೆಯ ಬಗ್ಗೆ 19ನೇ ಎಂ ಐ ಎಫ್ ಎಫ್ ನಲ್ಲಿ ತಜ್ಞರ ಚರ್ಚೆ
ಸಾಕ್ಷ್ಯಚಿತ್ರಗಳು ಮುಂದಿನ ಪೀಳಿಗೆಗಾಗಿ ಇತಿಹಾಸ, ಸಂಸ್ಕೃತಿ ಮತ್ತು ಜನರ ಅನುಭವಗಳನ್ನು ಸಂರಕ್ಷಿಸುತ್ತವೆ
19ನೇ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಎಂ ಐ ಎಫ್ ಎಫ್) ಸಂದರ್ಭದಲ್ಲಿ ಭಾರತೀಯ ಸಾಕ್ಷ್ಯಚಿತ್ರ ನಿರ್ಮಾಪಕರ ಸಂಘ (ಐಡಿಪಿಎ) "ಮನುಷ್ಯರು, ಕ್ಷಣಗಳು ಮತ್ತು ನೆನಪುಗಳನ್ನು ಸಂಗ್ರಹಿಸುವ ಮಾಧ್ಯಮವಾಗಿ ಸಾಕ್ಷ್ಯಚಿತ್ರ" ಎನ್ನುವ ವಿಷಯದ ಕುರಿತು ಮುಕ್ತ ಸಂವಾದವನ್ನು ಆಯೋಜಿಸಿತ್ತು. ಇತಿಹಾಸ, ಸಂಸ್ಕೃತಿ ಮತ್ತು ಸಾಮೂಹಿಕ ನೆನಪುಗಳನ್ನು ಸಂರಕ್ಷಿಸುವಲ್ಲಿ ಸಾಕ್ಷ್ಯಚಿತ್ರಗಳ ಪಾತ್ರದ ಬಗ್ಗೆ ಚರ್ಚಿಸಲು ಈ ಗೋಷ್ಠಿಯು ಚಲನಚಿತ್ರ ನಿರ್ಮಾಪಕರಾದ ಸುರೇಶ್ ಶರ್ಮಾ, ಸಂಜಿತ್ ನಾರ್ವೇಕರ್, ರೂಪಾ ಬರುವಾ ಮತ್ತು ಅಮ್ರಿಶ್ ರಾಯ್ ಚೌಧರಿ ಅವರೊಂದಿಗೆ ರೇಡಿಯೊ ನಿರೂಪಕ ಯೂನಸ್ ಖಾನ್ ಅವರನ್ನು ಒಟ್ಟುಗೂಡಿಸಿತು.
ವಿಷಯ ತಜ್ಞರು ಸಾಕ್ಷ್ಯಚಿತ್ರ ನಿರ್ಮಾಣ ಪ್ರಕ್ರಿಯೆಯ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡರು ಮತ್ತು ಸಾಕ್ಷ್ಯಚಿತ್ರಗಳು ಕೇವಲ ಘಟನೆಗಳು ಹಾಗೂ ವ್ಯಕ್ತಿಗಳ ದಾಖಲೆಗಳಾಗಿ ಮಾತ್ರವಲ್ಲದೆ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಅನುಭವಗಳ ಪ್ರಮುಖ ಸಂಗ್ರಹಾಗಾರಗಳಂತೆ ಕಾರ್ಯನಿರ್ವಹಿಸುತ್ತವೆ ಎಂದು ಒತ್ತಿಹೇಳಿದರು.

ಸುರೇಶ್ ಶರ್ಮಾ ಅವರು ಸಾಕ್ಷ್ಯಚಿತ್ರ ಚಲನಚಿತ್ರ ನಿರ್ಮಾಣದಲ್ಲಿ ಸಂಶೋಧನೆ, ಸತ್ಯಾಸತ್ಯತೆಯ ಪರಿಶೀಲನೆ ಮತ್ತು ಬಲವಾದ ನಿರೂಪಣಾ ಶೈಲಿಯ ಪ್ರಾಮುಖ್ಯತೆಯನ್ನು ಉಲ್ಲೇಖಿಸಿದರು. ಸಾಕ್ಷ್ಯಚಿತ್ರಗಳು ತಮ್ಮ ವಿಷಯಗಳ ಹೋರಾಟಗಳು ಮತ್ತು ಸೂಕ್ಷ್ಮತೆಗಳನ್ನು ಸೆರೆಹಿಡಿದಾಗ ಅವು ಸ್ಮರಣೀಯವಾಗುತ್ತವೆ ಎಂದು ಅವರು ಗಮನಿಸಿದರು. ಅಲ್ಲದೆ, ಸಂಶೋಧನೆಯ ಸಮಯದಲ್ಲಿ ಸಿಗುವ ಹೊಸ ಆವಿಷ್ಕಾರಗಳು ಹೆಚ್ಚಾಗಿ ಚಲನಚಿತ್ರದ ನಿರೂಪಣೆಗೆ ಹೊಸ ರೂಪ ನೀಡುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಸಂಜಿತ್ ನಾರ್ವೇಕರ್ ಅವರು ಸಾಕ್ಷ್ಯಚಿತ್ರಗಳನ್ನು "ಸಂತೋಷದ ಆಕಸ್ಮಿಕಗಳ" ಸರಣಿ ಎಂದು ಬಣ್ಣಿಸಿದರು; ಇಲ್ಲಿ ಒಂದು ಕಥೆಯ ಹುಡುಕಾಟವು ಹಲವು ಬಾರಿ ನಿರೀಕ್ಷಿಸದ ಹೊಸ ಆವಿಷ್ಕಾರಗಳಿಗೆ ದಾರಿ ಮಾಡಿಕೊಡುತ್ತದೆ ಎಂದರು. ಹೊಸ ಆವಿಷ್ಕಾರಗಳ ಆಧಾರದ ಮೇಲೆ ಕಥೆಗಳನ್ನು ಅಳವಡಿಸಿಕೊಳ್ಳುವ ಮತ್ತು ಹೊಸ ದೃಷ್ಟಿಕೋನಗಳನ್ನು ಕಂಡುಕೊಳ್ಳುವ ಅಗತ್ಯವನ್ನು ಅವರು ಒತ್ತಿಹೇಳಿದರು.

ರೂಪಾ ಬರುವಾ ಅವರು ಮಾತನಾಡಿ, ಜನರು ಮತ್ತು ಸ್ಥಳಗಳ ಕಥೆಗಳನ್ನು ಹೇಳಲು ನಿರ್ಮಿಸುವ ಚಲನಚಿತ್ರಗಳು ಕಾಲಾನಂತರದಲ್ಲಿ ಅಮೂಲ್ಯವಾದ ಸಂಗ್ರಹಕಾರ ದಾಖಲೆಗಳಾಗುತ್ತವೆ ಎಂದು ಹೇಳಿದರು. ತಮ್ಮ 'ರೈಡರ್ಸ್ ಆಫ್ ದಿ ಮಿಸ್ಟ್' ಮತ್ತು 'ಡಾಟರ್ಸ್ ಆಫ್ ದಿ ಪೋಲೊ ಚಿತ್ರಗಳನ್ನು ಉಲ್ಲೇಖಿಸಿದ ಅವರು, ಕಥೆ ಹೇಳುವಿಕೆ ಮತ್ತು ಚಿತ್ರದ ವೇಗವನ್ನು ಸರಿಯಾಗಿ ಕಾಯ್ದುಕೊಳ್ಳುವ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು.
ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ರೇಡಿಯೊ ಸಾಕ್ಷ್ಯಚಿತ್ರಗಳ ಪಾತ್ರದ ಬಗ್ಗೆ ಯೂನಸ್ ಖಾನ್ ಮಾತನಾಡಿದರು. ಕಲಾಕಾರರ ಪಯಣವನ್ನು ದಾಖಲಿಸುವಲ್ಲಿ ಮತ್ತು ಭಾರತದಾದ್ಯಂತ ಇರುವ ಜಾನಪದ ಸಂಗೀತ, ಸಾಹಿತ್ಯ ಹಾಗೂ ಇತರ ಸಾಂಸ್ಕೃತಿಕ ಸಂಪ್ರದಾಯಗಳನ್ನು ಸಂರಕ್ಷಿಸುವಲ್ಲಿ 'ವಿವಿಧ ಭಾರತಿ' ಮಾಡಿರುವ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.
ಅಮ್ರಿಶ್ ರಾಯ್ ಚೌಧರಿ ಅವರು ಡಾಕ್ಯುಮೆಂಟರಿ ಚಲನಚಿತ್ರ ನಿರ್ಮಾಣದಲ್ಲಿ ಆರ್ಕೈವಲ್ ಸಂಶೋಧನೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು ಮತ್ತು 'ನ್ಯಾಷನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯಾ' ದಂತಹ ಸಂಸ್ಥೆಗಳ ಮೌಲ್ಯವನ್ನು ಎತ್ತಿ ತೋರಿಸಿದರು. ಐತಿಹಾಸಿಕ ವಿಷಯಗಳನ್ನು ದಾಖಲಿಸುವಾಗ ಸತ್ಯದ ನಿಖರತೆ ಮತ್ತು ಎಚ್ಚರಿಕೆಯ ಪರಿಶೀಲನೆಯ ಅಗತ್ಯವನ್ನು ಅವರು ಪ್ರತಿಪಾದಿಸಿದರು.
ಒಂದು ಕಥೆಯ ಹುಡುಕಾಟವಾಗಿ ಪ್ರಾರಂಭವಾಗುವ ಪ್ರಯಾಣವು, ಅಂತಿಮವಾಗಿ ಸಂಸ್ಕೃತಿ, ನೆನಪು ಮತ್ತು ಸಾಮಾಜಿಕ ಬದಲಾವಣೆಯ ಪ್ರಮುಖ ಆರ್ಕೈವ್ (ಸಂಗ್ರಹಕಾರಆಗಿ ಹೇಗೆ ರೂಪಾಂತರಗೊಳ್ಳುತ್ತದೆ ಎಂಬುದನ್ನು ತಜ್ಞರು ಗಮನಿಸಿದರು. ನೆನಪುಗಳು, ಸಂಪ್ರದಾಯಗಳು ಮತ್ತು ಜೀವನದ ನೈಜ ಅನುಭವಗಳನ್ನು ಸೆರೆಹಿಡಿಯುವ ಮೂಲಕ, ಸಾಕ್ಷ್ಯಚಿತ್ರಗಳು ಇತಿಹಾಸವು ಕೇವಲ ಲಿಖಿತ ದಾಖಲೆಗಳಿಗಷ್ಟೇ ಸೀಮಿತವಾಗದೆ ಜೀವಂತವಾಗಿ ಉಳಿಯುವಂತೆ ಮಾಡಲು ಸಹಾಯ ಮಾಡುತ್ತವೆ. ಸಾಕ್ಷ್ಯಚಿತ್ರಗಳ ಸಂಶೋಧನೆ, ಆರ್ಕೈವಲ್ ಪದ್ಧತಿಗಳು ಮತ್ತು ಚಲನಚಿತ್ರದ ಮೂಲಕ ನೆನಪುಗಳನ್ನು ಸಂರಕ್ಷಿಸುವ ಪ್ರಾಮುಖ್ಯತೆಯ ಕುರಿತು ಪ್ರೇಕ್ಷಕರೊಂದಿಗೆ ನಡೆದ ಉತ್ಸಾಹಭರಿತ ಸಂವಾದದೊಂದಿಗೆ ಈ ಗೋಷ್ಠಿಯು ಮುಕ್ತಾಯಗೊಂಡಿತು.
*****
रिलीज़ आईडी:
2274973
| Visitor Counter:
30