ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಡಿಸೆಂಬರ್ 2026ರ ವೇಳೆಗೆ 75 ಲಕ್ಷ ಮನೆಗಳಿಗೆ ಮೇಲ್ಛಾವಣಿ ಸೌರಶಕ್ತಿ ಅಳವಡಿಕೆಯ ಗುರಿ: ಕೇಂದ್ರ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ


ಸೌಲಭ್ಯ ವಂಚಿತ ಮನೆಗಳಲ್ಲಿ ಸೌರಶಕ್ತಿ ಅಳವಡಿಕೆಯನ್ನು ವೇಗಗೊಳಿಸಲು 'ಯುಟಿಲಿಟಿ-ಲಿಂಕ್ಡ್ ಅಗ್ರಿಗೇಷನ್' (ಯು ಎಲ್‌ ಎ) ಮಾದರಿ ಪರಿಚಯ: ಶ್ರೀ ಜೋಶಿ

ಕೇಂದ್ರ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವರಿಂದ 'ಪ್ರಧಾನಮಂತ್ರಿ ಸೂರ್ಯ ಘರ್' ಲೋಗೋ ಮತ್ತು ವಾಟ್ಸಾಪ್ ಬಾಟ್ ಬಿಡುಗಡೆ

ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದಿಂದ 'ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆ'ಯ ಎರಡು ವರ್ಷಗಳ ಸಂಭ್ರಮಾಚರಣೆ

प्रविष्टि तिथि: 04 JUN 2026 6:13PM by PIB Bengaluru

'ಪ್ರಧಾನಮಂತ್ರಿ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆ'ಯು ಕೇವಲ 2 ವರ್ಷಗಳಲ್ಲಿ ಈಗಾಗಲೇ 40 ಲಕ್ಷ ಫಲಾನುಭವಿ ಕುಟುಂಬಗಳ ಮೈಲಿಗಲ್ಲನ್ನು ದಾಟಿದೆ. 2026 ರ ಡಿಸೆಂಬರ್ ಅಂತ್ಯದ ವೇಳೆಗೆ ನಾವು 75 ಲಕ್ಷ ಕುಟುಂಬಗಳ ಸಂಖ್ಯೆಯನ್ನು ದಾಟುವ ಭರವಸೆ ಇದೆ ಎಂದು ಕೇಂದ್ರ ನೂತನ ಮತ್ತು ನವೀಕರಿಸಬಹುದಾದ ಇಂಧನ ಹಾಗೂ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಹೇಳಿದರು. ಅವರು ಇಂದು ಇಲ್ಲಿ ಆಯೋಜಿಸಲಾಗಿದ್ದ ‘ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯ ಎರಡು ವರ್ಷಗಳು: 1 ಕೋಟಿ ಮನೆಗಳ ಮೇಲ್ಛಾವಣಿಗೆ ಸೌರಶಕ್ತಿ ವಿಸ್ತರಣೆ’ ಕಾರ್ಯಕ್ರಮದ ಸಂವಾದದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಯೋಜನೆಯ ಅನುಷ್ಠಾನವನ್ನು ವೇಗಗೊಳಿಸಲು, ವಿಶೇಷವಾಗಿ ಸೌಲಭ್ಯ ವಂಚಿತ ಮನೆಗಳಿಗೆ ತಲುಪಿಸಲು 'ಯುಟಿಲಿಟಿ-ಲಿಂಕ್ಡ್ ಅಗ್ರಿಗೇಷನ್' (ಯು ಎಲ್‌ ಎ) ಮಾದರಿಯನ್ನು ರೂಪಿಸಲಾಗಿದೆ ಎಂದು ಶ್ರೀ ಜೋಶಿ ತಿಳಿಸಿದರು. ಈ ಮಾದರಿಯಡಿಯಲ್ಲಿ ವಿವಿಧ ರಾಜ್ಯಗಳಲ್ಲಿ ಈಗಾಗಲೇ ಸುಮಾರು 30 ಲಕ್ಷ ಮೇಲ್ಛಾವಣಿ ಸೌರಶಕ್ತಿ ಅಳವಡಿಕೆಗಳನ್ನು ಯೋಜಿಸಲಾಗಿದ್ದು, ಇವುಗಳ ವೇಗದ ಅಳವಡಿಕೆ ಮತ್ತು ಅನುಷ್ಠಾನಕ್ಕೆ ವಿದ್ಯುತ್ ಕಂಪನಿಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಈ ಉಪಕ್ರಮವು ವಿಶೇಷವಾಗಿ 1 ಕಿಲೋವ್ಯಾಟ್ ನಿಂದ 3 ಕಿಲೋವ್ಯಾಟ್ ವರೆಗೆ ವಿದ್ಯುತ್ ಬಳಸುವ ಕುಟುಂಬಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡಲಿದ್ದು, ಎಲ್ಲರಿಗೂ ಕೈಗೆಟುಕುವ ದರದಲ್ಲಿ ಸ್ವಚ್ಛ ಇಂಧನ ಸಿಗುವಂತೆ ಮಾಡುತ್ತದೆ ಎಂದು ಅವರು ಹೇಳಿದರು. ಈಗಾಗಲೇ 65 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ದೇಶಾದ್ಯಂತ ಸಾರ್ವಜನಿಕರಿಂದ ಅಭೂತಪೂರ್ವ ಭಾಗವಹಿಸುವಿಕೆ ಮತ್ತು ಉತ್ಸಾಹ ಕಂಡುಬರುತ್ತಿದೆ ಎಂದು ಸಚಿವರು ಹೇಳಿದರು.

ಭಾರತದ ಸೌರಶಕ್ತಿ ಬೆಳವಣಿಗೆಯು ಅತ್ಯಂತ ವೇಗವಾಗಿ ಮುನ್ನುಗ್ಗುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು. ಮೊದಲ 50 ಗಿಗಾವ್ಯಾಟ್ ಸಾಮರ್ಥ್ಯ ಸಾಧಿಸಲು 96 ತಿಂಗಳುಗಳು ಬೇಕಾಗಿದ್ದವು ಎಂಬುದನ್ನು ಅವರು ಎತ್ತಿ ತೋರಿಸಿದರು. ಆದರೆ, ಮುಂದಿನ 50 ಗಿಗಾವ್ಯಾಟ್ ಸಾಧಿಸಲು 36 ತಿಂಗಳುಗಳು ಬೇಕಾದವು ಮತ್ತು 100 ಗಿಗಾವ್ಯಾಟ್‌ ನಿಂದ 150 ಗಿಗಾವ್ಯಾಟ್‌ ಗೆ ತಲುಪಲು ಕೇವಲ 14 ತಿಂಗಳುಗಳು ಹಿಡಿದವು ಎಂದು ಅವರು ಹೇಳಿದರು. 'ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆ' ಪ್ರಾರಂಭವಾದಾಗಿನಿಂದ ಮೇ 2026 ಅತ್ಯಂತ ಯಶಸ್ವಿ ತಿಂಗಳಾಗಿದ್ದು, ಒಂದೇ ತಿಂಗಳಲ್ಲಿ ದಾಖಲೆಯ 3.16 ಲಕ್ಷ ಮೇಲ್ಛಾವಣಿ ಸೌರಶಕ್ತಿ ಅಳವಡಿಕೆಗಳನ್ನು ಮಾಡಲಾಗಿದೆ ಮತ್ತು ಕೇವಲ ಒಂದೇ ದಿನದಲ್ಲಿ 15,000 ಮನೆಗಳು ಸೇರ್ಪಡೆಯಾಗಿವೆ ಎಂದು ಅವರು ಹೇಳಿದರು.

ಒಂದು ಲಕ್ಷ ಮನೆಗಳನ್ನು ಯೋಜನೆಗೆ ಸೇರಿಸಲು ಮೊದಲು ತಗಲುತ್ತಿದ್ದ 118 ದಿನಗಳ ಸಮಯವು, ಇಂದು ಕೇವಲ ಎಂಟು ದಿನಗಳಿಗಿಂತಲೂ ಕಡಿಮೆಯಾಗಿದೆ ಮತ್ತು ವೇಗವು ತಾನಾಗಿಯೇ ಹೆಚ್ಚಾಗಿದೆ ಎಂದು ಸಚಿವರು ಪುನರುಚ್ಚರಿಸಿದರು. ಕೇವಲ ಮೇ 2026 ರಲ್ಲೇ ₹₹2,743 ಕೋಟಿ ಸೇರಿದಂತೆ, ಇದುವರೆಗೆ ಒಟ್ಟು ₹₹22,750 ಕೋಟಿಗೂ ಹೆಚ್ಚು ಸಬ್ಸಿಡಿಯನ್ನು ವಿತರಿಸಲಾಗಿದೆ ಎಂದು ಅವರು ತಿಳಿಸಿದರು. “ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯು ಭಾರತದ ಸ್ವಚ್ಛ ಇಂಧನ ಪರಿವರ್ತನೆ ಮತ್ತು ಇಂಧನ ಸ್ವಾವಲಂಬನೆಯನ್ನು ಉತ್ತೇಜಿಸುವ ಜೊತೆಗೆ, ವಿಶ್ವದ ಅತಿ ದೊಡ್ಡ ವಸತಿ ಸೌರ ಮಾರುಕಟ್ಟೆಗಳಲ್ಲಿ ಒಂದನ್ನು ಸೃಷ್ಟಿಸುತ್ತಿದೆ” ಎಂದು ಅವರು ಹೇಳಿದರು.

ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ ಇಡೀ ವಿಶ್ವವೇ ಇಂಧನ ಅನಿಶ್ಚಿತತೆಯನ್ನು ಎದುರಿಸುತ್ತಿರುವ ಸಮಯದಲ್ಲಿ, ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯಂತಹ ಉಪಕ್ರಮಗಳು ಭಾರತದ ಇಂಧನ ಭದ್ರತೆ ಮತ್ತು ಕಾರ್ಯತಂತ್ರದ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುತ್ತಿವೆ ಎಂದು ಶ್ರೀ ಜೋಶಿ ಹೇಳಿದರು. ಈ ಯೋಜನೆಗೂ ಮುನ್ನ ತಿಂಗಳಿಗೆ ಸುಮಾರು 7,000 ಇದ್ದ ಮೇಲ್ಛಾವಣಿ ಸೌರಶಕ್ತಿ ಅಳವಡಿಕೆಗಳ ಸಂಖ್ಯೆ ಇಂದು ತಿಂಗಳಿಗೆ ಮೂರು ಲಕ್ಷಕ್ಕೂ ಅಧಿಕವಾಗಿದೆ. 17 ಲಕ್ಷಕ್ಕೂ ಹೆಚ್ಚು ಕುಟುಂಬಗಳು 'ಶೂನ್ಯ ವಿದ್ಯುತ್ ಬಿಲ್' ಸಾಧಿಸಿದ್ದು, ಇದು ಕುಟುಂಬಗಳ ನೇರ ಉಳಿತಾಯವನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

2047 ರ ವೇಳೆಗೆ ಪ್ರತಿಯೊಂದು ಮನೆಯೂ ಮೇಲ್ಛಾವಣಿ ಸೌರಶಕ್ತಿಯನ್ನು ಹೊಂದಿರುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಸಚಿವರು, “ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯು ಒಂದು ಜನಾಂದೋಲನವಾಗಲಿದೆ” ಎಂದರು. ಅಲ್ಲದೆ, ಮುಂದಿನ ದಿನಗಳಲ್ಲಿ ಬ್ಯಾಟರಿ ಇಂಧನ ಶೇಖರಣಾ ವ್ಯವಸ್ಥೆಗಳ ವೆಚ್ಚ ಕಡಿಮೆಯಾದಂತೆ ಅವುಗಳನ್ನು ಸಹ ಇದರೊಂದಿಗೆ ಸಂಯೋಜಿಸಲಾಗುವುದು ಮತ್ತು 'ಮಾದರಿ ಸೌರ ಗ್ರಾಮ' ಉಪಕ್ರಮದ ಮೂಲಕ ಇದರ ಅಳವಡಿಕೆಯನ್ನು ಮತ್ತಷ್ಟು ವಿಸ್ತರಿಸಲಾಗುವುದು ಎಂದು ಹೇಳಿದರು.

ಸಂದರ್ಭದಲ್ಲಿ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂತೋಷ್ ಕುಮಾರ್ ಸಾರಂಗಿ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

13 ಫೆಬ್ರವರಿ 2024 ರಂದು ₹₹75,021 ಕೋಟಿ ವೆಚ್ಚದೊಂದಿಗೆ ಪ್ರಾರಂಭಿಸಲಾದ 'ಪ್ರಧಾನಮಂತ್ರಿ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆ'ಯು ವಿಶ್ವದ ಅತಿ ದೊಡ್ಡ ವಸತಿ ಮೇಲ್ಛಾವಣಿ ಸೌರ ಕಾರ್ಯಕ್ರಮವಾಗಿ ಹೊರಹೊಮ್ಮಿದೆ. ರಾಷ್ಟ್ರೀಯ ಪೋರ್ಟಲ್‌ ನಲ್ಲಿ 1 ಕೋಟಿಗೂ ಹೆಚ್ಚು ಕುಟುಂಬಗಳು ನೋಂದಾಯಿಸಿಕೊಂಡಿದ್ದು, ಮೇ 2026 ರ ವೇಳೆಗೆ 33 ಲಕ್ಷಕ್ಕೂ ಹೆಚ್ಚು ಮೇಲ್ಛಾವಣಿ ವ್ಯವಸ್ಥೆಗಳನ್ನು ಸ್ಥಾಪಿಸಲಾಗಿದೆ, ಇದು 12 ಗಿಗಾವ್ಯಾಟ್‌ ಗಿಂತಲೂ ಹೆಚ್ಚು ಸಾಮರ್ಥ್ಯವನ್ನು ಸೇರ್ಪಡೆಗೊಳಿಸಿದೆ. ಮೇಲ್ಛಾವಣಿ ಸೌರಶಕ್ತಿಯು ಈಗ ವಸತಿ ಸೌರ ಸಾಮರ್ಥ್ಯದ ಸುಮಾರು ಶೇ.45 ರಷ್ಟನ್ನು ಹೊಂದಿದೆ ಮತ್ತು 2024-2026 ರ ಅವಧಿಯಲ್ಲಿ ಇದರ ನಿಯೋಜನೆಯ ಬೆಳವಣಿಗೆಯು ಶೇ.85 ಕ್ಕೆ ಏರಿದೆ. ಈ ಯೋಜನೆಯು 2030 ರ ವೇಳೆಗೆ ಭಾರತದ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯದ ಗುರಿಯತ್ತ ಪ್ರಗತಿ ಸಾಧಿಸಲು ಕೊಡುಗೆ ನೀಡುತ್ತಿದ್ದು, ಮಾರ್ಚ್ 2026 ರ ವೇಳೆಗೆ ದೇಶದ ಒಟ್ಟು ಸೌರ ಸಾಮರ್ಥ್ಯವು 150 ಗಿಗಾವ್ಯಾಟ್ ದಾಟಿದೆ. ಜೊತೆಗೆ ಇದು ಇಂಧನ ಲಭ್ಯತೆಯನ್ನು ಹೆಚ್ಚಿಸುತ್ತಿದೆ ಮತ್ತು ವಿದ್ಯುತ್ ವಿತರಣಾ ಕಂಪನಿಗಳ (ಡಿಸ್ಕಾಮ್ಸ್) ಮೇಲಿನ ಸಬ್ಸಿಡಿ ಹೊರೆಯನ್ನು ಕಡಿಮೆ ಮಾಡುತ್ತಿದೆ.

ಶ್ರೀ ಜೋಶಿ ಅವರು ಪ್ರಧಾನಮಂತ್ರಿ ಸೂರ್ಯ ಘರ್ ಲೋಗೋ ಮತ್ತು ವಾಟ್ಸಾಪ್ ಬಾಟ್ ಅನ್ನು ಬಿಡುಗಡೆ ಮಾಡಿದರು. ಅವರು ಅತ್ಯುತ್ತಮ ಪ್ರದರ್ಶನ ನೀಡಿದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು, ಡಿಸ್ಕಾಮ್‌‌ ಗಳು, ಬ್ಯಾಂಕುಗಳು, ಮಾರಾಟಗಾರರು ಮತ್ತು ಮೇ 2026 ರಲ್ಲಿ ನಡೆದ “ಸೌರ ಮಾಸ” ಅಭಿಯಾನದ ಸಂದರ್ಭದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಸಾಧಕರು ಸೇರಿದಂತೆ ಇತರ ಪಾಲುದಾರರಿಗೆ 'ಪ್ರಧಾನಮಂತ್ರಿ ಸೂರ್ಯ ಘರ್ ಪ್ರಶಸ್ತಿ'ಗಳನ್ನು ನೀಡಿ ಗೌರವಿಸಿದರು.

ಕೇಂದ್ರ ಸಚಿವರು ಸಿಇಇಡಬ್ಲ್ಯೂ (ಕೌನ್ಸಿಲ್ ಆನ್ ಎನರ್ಜಿ, ಎನ್ವಿರಾನ್‌ಮೆಂಟ್ ಅಂಡ್ ವಾಟರ್) ಸಿದ್ಧಪಡಿಸಿದ “ಭಾರತೀಯ ಮನೆಗಳಲ್ಲಿ ಮೇಲ್ಛಾವಣಿ ಸೌರ ಅಳವಡಿಕೆ ನಿರ್ಧಾರಗಳನ್ನು ಪ್ರೇರೇಪಿಸುವುದು ಯಾವುದು? ಪ್ಯಾನ್-ಇಂಡಿಯಾ ಸಮೀಕ್ಷೆಯ ಮೂಲಕ ಮನೆಗಳ ನಿರ್ಧಾರ ಕೈಗೊಳ್ಳುವಿಕೆಯನ್ನು ಅರ್ಥಮಾಡಿಕೊಳ್ಳುವುದು” ಮತ್ತು “ದೃಢವಾದ ಕಾರ್ಯಾಚರಣೆ ಮತ್ತು ನಿರ್ವಹಣೆ ಪರಿಸರ ವ್ಯವಸ್ಥೆಯನ್ನು ಸಕ್ರಿಯಗೊಳಿಸುವ ಮೂಲಕ ಮೇಲ್ಛಾವಣಿ ಸೌರ ಕಾರ್ಯಕ್ಷಮತೆಯನ್ನು ಗರಿಷ್ಠಗೊಳಿಸುವುದು - ಭಾರತದ ವಸತಿ ಆರ್‌ ಟಿ ಎಸ್‌ ವಲಯದಲ್ಲಿ ಬಹು-ಶತಕೋಟಿ ಮಾರುಕಟ್ಟೆ ಅವಕಾಶ” ಎಂಬ ಎರಡು ವರದಿಗಳನ್ನು ಸಹ ಬಿಡುಗಡೆ ಮಾಡಿದರು.

ವರದಿಗಳು ಸುಧಾರಿತ ನಿರ್ವಹಣೆಯ ಅಗತ್ಯತೆಯನ್ನು ಮತ್ತು ಸೌರಶಕ್ತಿ ಅಳವಡಿಕೆ ವಿಸ್ತರಣೆಯಾದಂತೆ ವಾರ್ಷಿಕವಾಗಿ 3.3 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಉಲ್ಲೇಖಿಸಿವೆ.

ಕಾರ್ಯಕ್ರಮವು ಭಾರತದಲ್ಲಿ ಮೇಲ್ಛಾವಣಿ ಸೌರಶಕ್ತಿಯ ಭವಿಷ್ಯದ ಹಾದಿಯನ್ನು ಕುರಿತು ಎರಡು ಉನ್ನತ ಮಟ್ಟದ ಸಮಗ್ರ ಗೋಷ್ಠಿಗಳನ್ನು ಒಳಗೊಂಡಿತ್ತು. ಮೊದಲ ಗೋಷ್ಠಿಯಾದ “40 ಲಕ್ಷದಿಂದ 1 ಕೋಟಿ: ಪ್ರಧಾನಮಂತ್ರಿ ಸೂರ್ಯ ಘರ್ ಪ್ರಯಾಣ” ದಲ್ಲಿ ನೂತನ ಮತ್ತು ನವೀಕರಿಸಬಹುದಾದ ಇಂಧನ, ವಿದ್ಯುತ್ ಮತ್ತು ಹಣಕಾಸು ಸಚಿವಾಲಯಗಳ ಹಿರಿಯ ಪ್ರತಿನಿಧಿಗಳು ಹಾಗೂ ಪ್ರಮುಖ ಹಣಕಾಸು ಸಂಸ್ಥೆಗಳು ಒಟ್ಟಾಗಿ ಸೇರಿ, 1 ಕೋಟಿ ಮನೆಗಳಿಗೆ ಸೌರಶಕ್ತಿ ಅಳವಡಿಕೆಯನ್ನು ವಿಸ್ತರಿಸಲು ನೀತಿ, ಹಣಕಾಸು ಮತ್ತು ಅನುಷ್ಠಾನದ ಆದ್ಯತೆಗಳ ಬಗ್ಗೆ ಚರ್ಚಿಸಿದರು. ಎರಡನೇ ಗೋಷ್ಠಿಯಾದ “ಉಪ-ರಾಷ್ಟ್ರೀಯ ಗಡಿಗಳು: ರಾಜ್ಯಗಳ ನೇತೃತ್ವದ ಸೌರ ಮುನ್ನಡೆಯನ್ನು ಬಲಪಡಿಸುವುದು” ಇದರಲ್ಲಿ ಹಿರಿಯ ರಾಜ್ಯ ಇಂಧನ ನಾಯಕರು ಭಾಗವಹಿಸಿ, ರಾಜ್ಯಗಳ ನಡುವಿನ ಕಲಿಕೆಗಳು, ನವೀನ ಪ್ರೋತ್ಸಾಹಕ ಮಾದರಿಗಳು ಮತ್ತು ಡಿಸ್ಕಾಮ್‌ ಗಳ ಸುಸ್ಥಿರತೆ ಹಾಗೂ ರಾಜ್ಯ ಮಟ್ಟದ ಇಂಧನ ಆದ್ಯತೆಗಳೊಂದಿಗೆ ಮೇಲ್ಛಾವಣಿ ಸೌರ ವಿಸ್ತರಣೆಯನ್ನು ಸಮತೋಲನಗೊಳಿಸುವ ತಂತ್ರಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು.

 

*****


(रिलीज़ आईडी: 2269073) आगंतुक पटल : 13
इस विज्ञप्ति को इन भाषाओं में पढ़ें: Tamil , English , Urdu , Marathi , हिन्दी , Gujarati