ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಛತ್ತೀಸ್‌ಗಢದ ಜಗದಲ್‌ಪುರದಲ್ಲಿ ಹುತಾತ್ಮರ ಕುಟುಂಬಗಳು, ಸಿಎಪಿಎಫ್ (CAPF) ಸಿಬ್ಬಂದಿ ಮತ್ತು ನಕ್ಸಲ್ ಹಿಂಸಾಚಾರದ ಸಂತ್ರಸ್ತರನ್ನು ಭೇಟಿಯಾದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ


ಭಾರತವು ಈಗ ನಕ್ಸಲ್ ಮುಕ್ತವಾಗಿದೆ ಎಂದು ನಾನು ಹೆಮ್ಮೆಯಿಂದ ಘೋಷಿಸಬಲ್ಲೆ

ಕೇವಲ 3-4 ವರ್ಷಗಳಲ್ಲಿ, ಮೋದಿ ಸರ್ಕಾರವು ದೇಶವನ್ನು ನಕ್ಸಲ್ ಮುಕ್ತಗೊಳಿಸುವ ಗುರಿಯನ್ನು ಸಾಧಿಸಿದೆ — ಈ ಸಾಧನೆಯು ಒಂದು ಕಾಲದಲ್ಲಿ ಇಡೀ ಜೀವಿತಾವಧಿಯಲ್ಲೂ ಅಸಾಧ್ಯವೆಂಬಂತೆ ತೋರುತ್ತಿತ್ತು

ನಕ್ಸಲ್ ಮುಕ್ತ ಭಾರತವನ್ನು ನಿರ್ಮಿಸುವ ಪ್ರತಿಜ್ಞೆಯನ್ನು ಆಗಸ್ಟ್ 24, 2024 ರಂದು ಮಾಡಲಾಗಿತ್ತು ಮತ್ತು ಈ ಸಂಕಲ್ಪವನ್ನು ಮಾರ್ಚ್ 31, 2026 ಕ್ಕಿಂತ ಮುಂಚಿತವಾಗಿಯೇ ಈಡೇರಿಸಲಾಗಿದೆ

ಕಾಶ್ಮೀರ, ಈಶಾನ್ಯ ಭಾರತ ಮತ್ತು ನಕ್ಸಲಿಸಂ — ಮೋದಿ ಸರ್ಕಾರವು ದೇಶದ ಮೂರು ಪ್ರಮುಖ ಆಂತರಿಕ ಭದ್ರತಾ ಸವಾಲುಗಳ ಮೇಲೆ ವಿಜಯ ಸಾಧಿಸಿದೆ

ಭಾರತವನ್ನು ನಕ್ಸಲ್ ಮುಕ್ತಗೊಳಿಸುವಲ್ಲಿ ಅತ್ಯಂತ ದೊಡ್ಡ ಕೊಡುಗೆಯು ಡಿಆರ್‌ಜಿ (DRG) ಯಲ್ಲಿರುವ ನಮ್ಮ ಸಹೋದರ ಸಹೋದರಿಯರು ಮತ್ತು ನಮ್ಮ ಶೌರ್ಯಶಾಲಿ ಕೋಬ್ರಾ (COBRA) ಕಮಾಂಡೋಗಳಿಂದ ಬಂದಿದೆ

ಅಭಿವೃದ್ಧಿಯ ಕೊರತೆಯಿಂದಾಗಿ ಮಾವೋವಾದ ಹರಡಲಿಲ್ಲ; ಬದಲಿಗೆ, ಸಶಸ್ತ್ರ ನಕ್ಸಲರೇ ಅಭಿವೃದ್ಧಿಯನ್ನು ತಡೆದಿದ್ದರು

'ಅಭಿವೃದ್ಧಿ ಹೊಂದಿದ ಬಸ್ತಾರ್' ಇಲ್ಲದೆ, '2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ' ದ ಕನಸು ಅಪೂರ್ಣವಾಗಿಯೇ ಉಳಿಯುತ್ತದೆ

ನಕ್ಸಲಿಸಂ ಬಸ್ತಾರ್‌ನ ಕಲೆ, ಸಂಗೀತ ಮತ್ತು ಸಂಪ್ರದಾಯಗಳನ್ನು ಹತ್ತಿಕ್ಕಿತ್ತು; ಈಗ ಅಲ್ಲಿ ಹೊಸ ಉದಯವಾಗುತ್ತಿದೆ

ಮುಂದಿನ ಐದು ವರ್ಷಗಳಲ್ಲಿ, ದೇಶದ ಎಲ್ಲಾ ಬುಡಕಟ್ಟು ಪ್ರದೇಶಗಳಲ್ಲೇ ಅತ್ಯಂತ ಅಭಿವೃದ್ಧಿ ಹೊಂದಿದ ಪ್ರದೇಶವಾಗಿ, ಬಸ್ತಾರ್ ಹೊರಹೊಮ್ಮಲು ಸಿದ್ಧವಾಗಿದೆ

ಲಕ್ಷಾಂತರ ಜನರ ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡುವುದಕ್ಕಿಂತ, ಬಸ್ತಾರ್‌ನ ನೇತನಾರ್ ಗ್ರಾಮದ 400 ಬುಡಕಟ್ಟು ಜನರೊಂದಿಗೆ ಸಂವಹನ ನಡೆಸಿದ್ದು, ನನಗೆ ಹೆಚ್ಚಿನ ಆಂತರಿಕ ತೃಪ್ತಿ ನೀಡಿದೆ — ಈ ಭಾವನೆಯನ್ನು ಮಾತುಗಳಲ್ಲಿ ವ್ಯಕ್ತಪಡಿಸುವುದು ಕಷ್ಟ

ಶರಣಾದ ಸುಮಾರು 3,000 ನಕ್ಸಲರ ಪುನರ್ವಸತಿಯೊಂದಿಗೆ, ಸರ್ಕಾರವು ಅವರಿಗೆ ಕೌಶಲ್ಯ ತರಬೇತಿ ನೀಡುವ ವ್ಯವಸ್ಥೆಗಳನ್ನು ಸಹ ಮಾಡುತ್ತಿದೆ

ಪ್ರಕಟಣಾ ದಿನಾಂಕ: 18 MAY 2026 8:23PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಛತ್ತೀಸ್‌ಗಢದ ಜಗದಲ್‌ಪುರದಲ್ಲಿ ಹುತಾತ್ಮರ ಕುಟುಂಬಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (CAPFs) ಸಿಬ್ಬಂದಿ ಮತ್ತು ನಕ್ಸಲ್ ಹಿಂಸಾಚಾರದ ಸಂತ್ರಸ್ತರನ್ನು ಭೇಟಿ ಮಾಡಿ ಸಂವಹನ ನಡೆಸಿದರು. ಈ ಸಂದರ್ಭದಲ್ಲಿ ಛತ್ತೀಸ್‌ಗಢ ಮುಖ್ಯಮಂತ್ರಿ ಶ್ರೀ ವಿಷ್ಣು ದೇವ್ ಸಾಯಿ, ಉಪ ಮುಖ್ಯಮಂತ್ರಿ ಶ್ರೀ ವಿಜಯ್ ಶರ್ಮಾ, ಕೇಂದ್ರ ಗೃಹ ಕಾರ್ಯದರ್ಶಿ ಶ್ರೀ ಗೋವಿಂದ್ ಮೋಹನ್, ಇಂಟೆಲಿಜೆನ್ಸ್ ಬ್ಯೂರೋ (IB) ನಿರ್ದೇಶಕ ಶ್ರೀ ತಪನ್ ಡೆಕಾ, ನಕ್ಸಲ್ ಮುಕ್ತ ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರು ಮತ್ತು ಹಲವಾರು ಇತರ ಗಣ್ಯರು ಉಪಸ್ಥಿತರಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಅಮಿತ್ ಶಾ ಅವರು, ಇಂದು ಭಾರತವು ನಕ್ಸಲಿಸಂನಿಂದ ಮುಕ್ತವಾಗಿದೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ ಎಂದರು. ಇದು ಸಾವಿರಾರು ಭದ್ರತಾ ಸಿಬ್ಬಂದಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ ಕನಸಾಗಿತ್ತು ಎಂದು ಅವರು ಹೇಳಿದರು. 6 ದಶಕಗಳ ಕಾಲ ದೇಶವು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ರಕ್ತಪಾತ, ಅಪೂರ್ಣ ಅಭಿವೃದ್ಧಿ ಮತ್ತು ಕತ್ತಲೆ ಭವಿಷ್ಯದಿಂದ ಕೂಡಿದ ಯುವಕರ ದುಸ್ವಪ್ನವನ್ನು ಅನುಭವಿಸಿದೆ. ನಕ್ಸಲ್ ಪೀಡಿತವಲ್ಲದ ರಾಜ್ಯಗಳಲ್ಲಿ ವಾಸಿಸುವ ಜನರೂ ಸಹ ಈ ಪ್ರದೇಶಗಳ ಜನರ ಯಾತನೆಯ ಬಗ್ಗೆ ತೀವ್ರ ಕಳವಳ ಹೊಂದಿದ್ದರು. ಒಂದು ಜೀವಿತಾವಧಿಯಲ್ಲಿ ಅಸಾಧ್ಯವೆಂದು ತೋರುತ್ತಿದ್ದ ಗುರಿಯನ್ನು ಶೌರ್ಯಶಾಲಿ ಭದ್ರತಾ ಪಡೆಗಳು ಕೇವಲ ಮೂರರಿಂದ ನಾಲ್ಕು ವರ್ಷಗಳಲ್ಲಿ ಸಾಧಿಸಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.

ನಕ್ಸಲ್ ನಿರ್ಮೂಲನೆಯ ಇತಿಹಾಸದಲ್ಲಿ, ಜನವರಿ 21, 2024; ಆಗಸ್ಟ್ 24, 2024; ಮತ್ತು ಮಾರ್ಚ್ 31, 2026 — ಈ ಮೂರು ದಿನಾಂಕಗಳನ್ನು ಸುವರ್ಣಾಕ್ಷರಗಳಲ್ಲಿ ಬರೆಯಲಾಗುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಛತ್ತೀಸ್‌ಗಢದಲ್ಲಿ ನಮ್ಮ ಸರ್ಕಾರ ರಚನೆಯಾದ ನಂತರ, ನಕ್ಸಲಿಸಂ ಕುರಿತು ಮೊದಲ ಸಭೆಯು ಜನವರಿ 21, 2024 ರಂದು ನಡೆಯಿತು; ಮಾರ್ಚ್ 31, 2026 ರ ವೇಳೆಗೆ ನಕ್ಸಲಿಸಂ ಅನ್ನು ನಿರ್ಮೂಲನೆ ಮಾಡುವ ಪ್ರತಿಜ್ಞೆಯನ್ನು ಆಗಸ್ಟ್ 24, 2024 ರಂದು ಮಾಡಲಾಯಿತು; ಮತ್ತು ಈ ಪ್ರತಿಜ್ಞೆಯ ಈಡೇರಿಕೆಯು ಮಾರ್ಚ್ 31, 2026 ರಂದು ಸಂಭವಿಸಿತು — ಈ ಮೂರು ದಿನಾಂಕಗಳು 'ನಕ್ಸಲ್ ಮುಕ್ತ ಭಾರತ' ಆಂದೋಲನದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಕೆತ್ತಲ್ಪಡುತ್ತವೆ. ದಂತೇಶ್ವರಿ ದೇವಿಯ ಕೃಪೆಯಿಂದ, ಬಸ್ತಾರ್ ಅನ್ನು ನಕ್ಸಲ್ ಮುಕ್ತಗೊಳಿಸುವ ನಮ್ಮ ಗುರಿಯು ಅಂತಿಮವಾಗಿ ಇಂದು, ಮಾರ್ಚ್ 31, 2026 ರಂದು ಸಾಕಾರಗೊಂಡಿದೆ ಎಂದರು.

ಬಸ್ತಾರ್‌ನಲ್ಲಿ ಇಂದು ‘ಶಹೀದ್ ವೀರ್ ಗುಂಡಾ ಧುರ್ ಸೇವಾ ಡೇರಾ ಯೋಜನೆ’ಗೆ ಚಾಲನೆ ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಛತ್ತೀಸ್‌ಗಢದಲ್ಲಿ ಸುಮಾರು 200 ಸಿಎಪಿಎಫ್ (CAPF) ಕ್ಯಾಂಪ್‌ಗಳಿದ್ದು, ಇವು ಇದುವರೆಗೆ ಬುಡಕಟ್ಟು ಸಮುದಾಯಗಳು, ರೈತರು, ಮಹಿಳೆಯರು ಮತ್ತು ಮಕ್ಕಳನ್ನು ನಕ್ಸಲ್ ಹಿಂಸಾಚಾರದಿಂದ ರಕ್ಷಿಸಿವೆ. ಇವುಗಳಲ್ಲಿ 70 ಕ್ಯಾಂಪ್‌ಗಳನ್ನು ಈಗ 'ಶಹೀದ್ ವೀರ್ ಗುಂಡಾ ಧುರ್ ಸೇವಾ ಡೇರಾ' ಕ್ಯಾಂಪ್‌ಗಳಾಗಿ ಪರಿವರ್ತಿಸಲಾಗುವುದು ಮತ್ತು ಪ್ರಾದೇಶಿಕ ಅಭಿವೃದ್ಧಿಯ ಮಾದರಿಗಳಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದರು. ಈ ಕೇಂದ್ರಗಳು 370 ಸರ್ಕಾರಿ ಯೋಜನೆಗಳಿಗೆ ಆನ್‌ಲೈನ್ ಪ್ರವೇಶವನ್ನು ಸುಗಮಗೊಳಿಸಲಿವೆ. ಜನಸೇವಾ ಕೇಂದ್ರದಲ್ಲಿ ಪಡಿತರ ಚೀಟಿಗಳು ಮತ್ತು ಆಧಾರ್ ಕಾರ್ಡ್‌ಗಳನ್ನು ಮಾಡಿಕೊಡಲಾಗುವುದು ಹಾಗೂ ಸಬ್ಸಿಡಿ ಧಾನ್ಯಗಳು ಸಿಗದಿರುವ ಬಗ್ಗೆ ದೂರುಗಳನ್ನು ಸಹ ಅಲ್ಲಿ ದಾಖಲಿಸಬಹುದಾಗಿದೆ. ಬ್ಯಾಂಕ್ ಖಾತೆಗಳನ್ನೂ ಈ ಕೇಂದ್ರದಿಂದ ನಿರ್ವಹಿಸಬಹುದಾಗಿದೆ. ಆರೋಗ್ಯ ಸಂಬಂಧಿತ ಸೇವೆಗಳು ಲಭ್ಯವಾಗಲಿವೆ. ಇದು ಡೈರಿ ಹಾಲು ಸಂಗ್ರಹಣಾ ಕೇಂದ್ರವಾಗಿಯೂ ಕಾರ್ಯನಿರ್ವಹಿಸಲಿದೆ. ಉತ್ತಮ ಕೃಷಿ ಪದ್ಧತಿಗಳಿಗಾಗಿ ಕೃಷಿ ಇಲಾಖೆಯಿಂದ ಮಾರ್ಗದರ್ಶನ ನೀಡಲಾಗುವುದು. ಇಲ್ಲಿ, ಕೌಶಲ್ಯ ಅಭಿವೃದ್ಧಿ ಕೇಂದ್ರವು ಗ್ರಾಮೀಣ ಯುವಕರಿಗೆ ಉದ್ಯೋಗದ ಮೂಲವಾಗಲಿದೆ ಮತ್ತು ವಯಸ್ಕರ ಶಿಕ್ಷಣ ಕಾರ್ಯಕ್ರಮಗಳನ್ನೂ ಪ್ರಾರಂಭಿಸಲಾಗುವುದು. ಮೂರು ತಿಂಗಳೊಳಗೆ, ಎನ್‌ಐಡಿ (NID) ನೆರವಿನೊಂದಿಗೆ ಈ ಉಪಕ್ರಮದ ಸಂಪೂರ್ಣ ನೀಲನಕಾಶೆಯನ್ನು ಸಿದ್ಧಪಡಿಸಿ, 'ಶಹೀದ್ ವೀರ್ ಗುಂಡಾ ಧುರ್ ಸೇವಾ ಡೇರಾ' ಹೆಸರಿನ ಸಮಗ್ರ ಅಭಿವೃದ್ಧಿ ಯೋಜನೆಯಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಅವರು ಹೇಳಿದರು. ಇದು ಮಾವೋವಾದಿಗಳನ್ನು ಬೆಂಬಲಿಸುವ ಬುದ್ಧಿಜೀವಿಗಳಿಗೂ ಒಂದು ಸಂದೇಶವನ್ನು ರವಾನಿಸಲಿದೆ ಎಂದು ತಿಳಿಸಿದರು. ಅಭಿವೃದ್ಧಿ ಇಲ್ಲದ ಕಾರಣ ಮಾವೋವಾದ ಹರಡಲಿಲ್ಲ, ಬದಲಿಗೆ ಸಶಸ್ತ್ರ ನಕ್ಸಲ್ ಚಟುವಟಿಕೆಗಳು ಅಭಿವೃದ್ಧಿಯನ್ನು ತಡೆದಿದ್ದವು ಎಂದು ಶ್ರೀ ಶಾ ಹೇಳಿದರು. ಈಗ ಸಶಸ್ತ್ರ ಚಳವಳಿ ಕೊನೆಗೊಂಡಿರುವುದರಿಂದ, ಅಭಿವೃದ್ಧಿಯು ಅಂತಿಮವಾಗಿ ಮುನ್ನಡೆಯಬಹುದು ಎಂದು ಅವರು ತಿಳಿಸಿದರು.

ಮುಂದಿನ ದಿನಗಳಲ್ಲಿ ಬಸ್ತಾರ್, ದೇಶದಲ್ಲೇ ಅತ್ಯಂತ ಅಭಿವೃದ್ಧಿ ಹೊಂದಿದ ಬುಡಕಟ್ಟು ಪ್ರಾಂತ್ಯವಾಗಿ ಹೊರಹೊಮ್ಮಲಿದೆ ಎಂದು ಕೇಂದ್ರ ಗೃಹ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಬಡವರು, ಹಿಂದುಳಿದ ವರ್ಗಗಳು, ದಲಿತರು ಮತ್ತು ಬುಡಕಟ್ಟು ಸಮುದಾಯಗಳಿಗಾಗಿ ಹಲವಾರು ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಅವರು ಹೇಳಿದರು. ಪ್ರತಿ ಕ್ವಿಂಟಾಲ್‌ಗೆ ₹3,100 ರಂತೆ ಭತ್ತ ಖರೀದಿ, ತಲಾ ಒಬ್ಬರಿಗೆ ತಿಂಗಳಿಗೆ 7 ಕೆಜಿ ಅಕ್ಕಿ ವಿತರಣೆಯಂತಹ ಯೋಜನೆಗಳಿದ್ದರೂ, ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಈ ಪ್ರಯೋಜನಗಳು ಜನರನ್ನು ತಲುಪಲು ಸಾಧ್ಯವಾಗಿರಲಿಲ್ಲ ಎಂದು ಅವರು ತಿಳಿಸಿದರು. ಬಸ್ತಾರ್‌ನ ಆಹಾರ ಪದ್ಧತಿ, ಕಲೆ, ಸಂಗೀತ, ನೃತ್ಯ, ಕ್ರೀಡೆ ಮತ್ತು ಸಂಪ್ರದಾಯಗಳನ್ನು ಶ್ಲಾಘಿಸಿದ ಅವರು, ನಕ್ಸಲ್ ಹಿಂಸಾಚಾರದಿಂದಾಗಿ ಈ ಶ್ರೀಮಂತ ಸಾಂಸ್ಕೃತಿಕ ಅಂಶಗಳು ತೀವ್ರವಾಗಿ ನಲುಗಿದ್ದವು ಎಂದರು. ಆದರೆ, ಬಸ್ತಾರ್ ಈಗ ಹೊಸ ಮುಂಜಾವಿಗೆ ಸಾಕ್ಷಿಯಾಗುತ್ತಿದ್ದು, ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ. ಭದ್ರತಾ ಸಿಬ್ಬಂದಿ ಮತ್ತು ಅಮಾಯಕ ಬುಡಕಟ್ಟು ನಾಗರಿಕರು ಸೇರಿದಂತೆ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳ ತ್ಯಾಗವನ್ನು ಶ್ರೀ ಶಾ ಅವರು ಸ್ಮರಿಸಿದರು. ಜಿಲ್ಲಾ ರಿಸರ್ವ್ ಗಾರ್ಡ್ (DRG) ಸೇರಿ ನಕ್ಸಲ್ ವಿರೋಧಿ ಅಭಿಯಾನದ ಯಶಸ್ಸಿಗೆ ಕೊಡುಗೆ ನೀಡಿದ ಮಾಜಿ ನಕ್ಸಲರನ್ನು ಸಹ ಅವರು ಶ್ಲಾಘಿಸಿದರು.

ನಕ್ಸಲ್ ವಿರೋಧಿ ಕಾರ್ಯಾಚರಣೆಗಳ ಯಶಸ್ಸು ಬಹುತೇಕ ಡಿಆರ್‌ಜಿ (DRG) ಸಿಬ್ಬಂದಿ ಮತ್ತು ಕೋಬ್ರಾ (CoBRA) ಕಮಾಂಡೋಗಳ ಧೈರ್ಯ ಮತ್ತು ಸಮರ್ಪಣಾ ಮನೋಭಾವದಿಂದ ಸಾಧ್ಯವಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಸಿಆರ್‌ಪಿಎಫ್, ಬಿಎಸ್‌ಎಫ್, ಐಟಿಬಿಪಿ, ಎಸ್‌ಎಸ್‌ಬಿ, ಛತ್ತೀಸ್‌ಗಢ ಪೊಲೀಸ್, ಡಿಆರ್‌ಜಿ, ಎಸ್‌ಟಿಎಫ್, ಬಸ್ತಾರ್ ಫೈಟರ್ಸ್ ಮತ್ತು ವಿವಿಧ ರಾಜ್ಯಗಳ ಪೊಲೀಸ್ ಪಡೆಗಳ ಜಂಟಿ ಪ್ರಯತ್ನಗಳು ನಕ್ಸಲಿಸಂ ವಿರುದ್ಧ ಜಯ ಸಾಧಿಸಲು ಕಾರಣ ಎಂದು ಅವರು ಕೃತಜ್ಞತೆ ಸಲ್ಲಿಸಿದರು. ನಕ್ಸಲರ ಶರಣಾಗತಿ ಮತ್ತು ಪುನರ್ವಸತಿಯನ್ನು ಪ್ರೋತ್ಸಾಹಿಸುವಲ್ಲಿ ನಾಗರಿಕ ಸಮಾಜದ ಸದಸ್ಯರು, ಪತ್ರಕರ್ತರು ಮತ್ತು ಸಾರ್ವಜನಿಕ ಪ್ರತಿನಿಧಿಗಳ ಕೊಡುಗೆಗಳನ್ನು ಸಹ ಅವರು ಶ್ಲಾಘಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2014 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ, ಆಂತರಿಕ ಮತ್ತು ಬಾಹ್ಯ ಭದ್ರತೆ ಎರಡನ್ನೂ ಬಲಪಡಿಸಲು ಸಮಗ್ರ ನೀಲನಕಾಶೆಯನ್ನು ಸಿದ್ಧಪಡಿಸಿದ್ದರು ಎಂದು ಗೃಹ ಸಚಿವರು ಹೇಳಿದರು. ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಭಾರತ ಮತ್ತು ನಕ್ಸಲಿಸಂ ದೇಶದ ಅತಿ ದೊಡ್ಡ ಸವಾಲುಗಳಾಗಿದ್ದವು, ಮತ್ತು ಇಂದು ಭಾರತವು ಈ ಮೂರನ್ನೂ ಬಹುಮಟ್ಟಿಗೆ ಮೆಟ್ಟಿ ನಿಂತು ಅಭಿವೃದ್ಧಿಯ ಹಾದಿಯಲ್ಲಿ ದೃಢವಾಗಿ ಮುನ್ನಡೆದಿದೆ. ನೇತನಾರ್ ಗ್ರಾಮದಲ್ಲಿ 'ಗುಂಡಾ ಧುರ್ ಸೇವಾ ಡೇರಾ' ಉದ್ಘಾಟನೆಯನ್ನು ಉಲ್ಲೇಖಿಸಿದ ಶ್ರೀ ಶಾ ಅವರು, ಬುಡಕಟ್ಟು ನಿವಾಸಿಗಳ ಮುಖದಲ್ಲಿ ಭರವಸೆ ಮತ್ತು ಆಶಾವಾದವನ್ನು ನಾನು ಕಾಣಬಲ್ಲೆ ಎಂದರು. ಶರಣಾದ ನಕ್ಸಲೈಟ್‌ಗಳು ಮತ್ತು ಅವರ ಕುಟುಂಬಗಳಿಗೆ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯೊಂದಿಗೆ ಪುನರ್ವಸತಿ ಕಲ್ಪಿಸಲಾಗುವುದು, ಇದರಿಂದ ಅವರು ಘನತೆಯಿಂದ ಸಮಾಜದ ಮುಖ್ಯವಾಹಿನಿಗೆ ಮರಳಲು ಸಾಧ್ಯವಾಗುತ್ತದೆ ಎಂದು ಅವರು ಭರವಸೆ ನೀಡಿದರು. ಶರಣಾದ ಸುಮಾರು 3,000 ಕೆಡರ್‌ಗಳಿಗಾಗಿ ವಿವರವಾದ ಪುನರ್ವಸತಿ ಯೋಜನೆಯನ್ನು ಸಿದ್ಧಪಡಿಸಲಾಗಿದ್ದು, ಅವರ ಕೌಶಲ್ಯ ಮತ್ತು ಶಿಕ್ಷಣಕ್ಕಾಗಿ ಆರಂಭಿಕವಾಗಿ ₹20 ಕೋಟಿಯನ್ನು ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದರು. ಅವರು ಘನತೆ ಮತ್ತು ಗೌರವದಿಂದ ಬದುಕುವುದನ್ನು ಮೋದಿ ಸರ್ಕಾರ ಖಚಿತಪಡಿಸಲಿದೆ ಎಂದು ಅವರು ತಿಳಿಸಿದರು.

ಬಸ್ತಾರ್‌ನ ಜನರು ಶರಣಾದ 3000 ನಕ್ಸಲರನ್ನು ಸಹಾನುಭೂತಿಯಿಂದ ಬರಮಾಡಿಕೊಳ್ಳುತ್ತಾರೆ ಮತ್ತು ಅವರು ಗೌರವದಿಂದ ಬದುಕಲು ಸಹಾಯ ಮಾಡುತ್ತಾರೆ ಎಂಬ ವಿಶ್ವಾಸವನ್ನು ಶ್ರೀ ಅಮಿತ್ ಶಾ ವ್ಯಕ್ತಪಡಿಸಿದರು. 2047ರ ವೇಳೆಗೆ ಸಂಪೂರ್ಣ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಪ್ರಧಾನಮಂತ್ರಿ ಮೋದಿ ಅವರ ಕನಸು, ಅಭಿವೃದ್ಧಿ ಹೊಂದಿದ ಬಸ್ತಾರ್ ಇಲ್ಲದೆ ಅಪೂರ್ಣವಾಗಿಯೇ ಉಳಿಯುತ್ತದೆ ಎಂದು ಅವರು ಹೇಳಿದರು. ನಕ್ಸಲಿಸಂ ಕೊನೆಗೊಂಡಿದ್ದರೂ, ಕಳೆದ 50 ವರ್ಷಗಳ ನಷ್ಟವನ್ನು ಮುಂದಿನ ಐದು ವರ್ಷಗಳಲ್ಲಿ ಸರಿದೂಗಿಸಿ ಬಸ್ತಾರ್ ಅನ್ನು ದೇಶದ ಇತರ ಭಾಗಗಳಿಗೆ ಸರಿಸಮಾನವಾಗಿ ತರುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು. ರಸ್ತೆಗಳು, ಗ್ರಾಮೀಣ ಅಭಿವೃದ್ಧಿ, ಬ್ಯಾಂಕಿಂಗ್, ಅಂಚೆ ಸೇವೆಗಳು, ಗ್ಯಾಸ್ ಪೂರೈಕೆ, ಶುದ್ಧ ನೀರು, ವಿದ್ಯುತ್ ಮತ್ತು ಆಹಾರ ಭದ್ರತೆ ಸೇರಿದಂತೆ ಎಲ್ಲಾ ಅಗತ್ಯ ಮೂಲಸೌಕರ್ಯ ಮತ್ತು ಸೇವೆಗಳನ್ನು ಗೃಹ ಸಚಿವಾಲಯವು ಖಚಿತಪಡಿಸಲಿದೆ ಎಂದು ಅವರು ಹೇಳಿದರು.

ಎಲ್ಲಾ ಸಿಎಪಿಎಫ್ (CAPF) ಸಿಬ್ಬಂದಿಗೆ ಶ್ರದ್ಧಾಂಜಲಿ ಸಲ್ಲಿಸಿದ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು, 'ಆಪರೇಷನ್ ಬ್ಲ್ಯಾಕ್ ಫಾರೆಸ್ಟ್' ಸಮಯದಲ್ಲಿ, 45 ಡಿಗ್ರಿ ತಾಪಮಾನದ ನಡುವೆಯೂ ಜವಾನರು ಪೂರೈಕೆಗಳ ಬಗ್ಗೆ ಚಿಂತಿಸದೆ ಬೆಟ್ಟಗಳ ಕಡೆಗೆ ಮುನ್ನಡೆದರು ಎಂದರು. ಅಲ್ಲಿ ಸಾವಿರಾರು ಮೈನ್‌ಗಳನ್ನು (mines) ನೆಡಲಾಗಿತ್ತು, ಆದರೂ ಪಡೆಗಳು ಈ ಕಠಿಣ ಭೂಪ್ರದೇಶಗಳಿಂದ ಮಾವೋವಾದಿ ಶಿಬಿರಗಳನ್ನು ಯಶಸ್ವಿಯಾಗಿ ತೆರವುಗೊಳಿಸಿದವು. 'ಆಪರೇಷನ್ ಬ್ಲ್ಯಾಕ್ ಫಾರೆಸ್ಟ್' ಮತ್ತು ಆ ಬೆಟ್ಟದ ಮೇಲಿನ ಕೋಟೆಯನ್ನು ವಶಪಡಿಸಿಕೊಳ್ಳದಿದ್ದರೆ, ನಕ್ಸಲ್ ಮುಕ್ತ ಬಸ್ತಾರ್ ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಹೇಳಿದರು. ಮಾವೋವಾದಿಗಳು ಬೆಟ್ಟಗಳಿಂದ ಕೆಳಗಿಳಿಯಲು ಅನಿವಾರ್ಯವಾದ ತಕ್ಷಣ, ಅವರು ಶರಣಾಗಲು ಪ್ರಾರಂಭಿಸಿದರು, ಎನ್‌ಕೌಂಟರ್‌ಗಳು ತೀವ್ರಗೊಂಡವು ಮತ್ತು ಅನೇಕ ಮಾವೋವಾದಿಗಳನ್ನು ಹತ್ತಿಕ್ಕಲಾಯಿತು. ಈ ಅಭಿಯಾನದ ಸಮಯದಲ್ಲಿ, ಅನೇಕ ಸಿಬ್ಬಂದಿ ತಮ್ಮ ಅಂಗಾಂಗಗಳನ್ನು ಕಳೆದುಕೊಂಡರು, ನಿರ್ಜಲೀಕರಣಕ್ಕೆ ಒಳಗಾದರು ಮತ್ತು ಅಪಾರ ಕಷ್ಟಗಳನ್ನು ಅನುಭವಿಸಿದರು. ಆಪರೇಷನ್ ಬ್ಲ್ಯಾಕ್ ಫಾರೆಸ್ಟ್, ಆಪರೇಷನ್ ಪ್ರಹಾರ್, ಆಪರೇಷನ್ ಆಕ್ಟೋಪಸ್ ಅಥವಾ ಆಪರೇಷನ್ ಡಬಲ್ ಬುಲ್ ಆಗಿರಲಿ, ಈ ಕಾರ್ಯಾಚರಣೆಗಳು ಜಾರ್ಖಂಡ್ ಮತ್ತು ಬಿಹಾರದಿಂದ ಹಿಡಿದು ಬಸ್ತಾರ್ ಮತ್ತು ತೆಲಂಗಾಣದವರೆಗಿನ ವಿಶಾಲ ಪ್ರದೇಶಗಳನ್ನು ಮುಕ್ತಗೊಳಿಸಿದವು, ಜೊತೆಗೆ ಈ ಪ್ರದೇಶದಲ್ಲಿ ಅಭಿವೃದ್ಧಿಗೆ ದಾರಿ ಮಾಡಿಕೊಟ್ಟವು. ಶಾಂತಿಯುತ ಮತ್ತು ಪ್ರಗತಿಪರ ಬಸ್ತಾರ್‌ನ ಹೊಸ ಉದಯಕ್ಕೆ ಸಿಎಪಿಎಫ್ ಸಿಬ್ಬಂದಿಯೇ ಸಂಪೂರ್ಣ ಕಾರಣ ಎಂದು ಶ್ರೀ ಶಾ ಅವರು ಕೃತಜ್ಞತೆ ಸಲ್ಲಿಸಿದರು. ಹಲವಾರು ಸಂದರ್ಭಗಳಲ್ಲಿ ನಕ್ಸಲರು, ಬುಡಕಟ್ಟು ಜನರ ನೂರಾರು ಮನೆಗಳನ್ನು ಸುಟ್ಟುಹಾಕಿದ್ದರು. ಇಂತಹ ದೊಡ್ಡ ಪ್ರಮಾಣದ ಹಿಂಸಾಚಾರ ಮತ್ತು ಹತ್ಯಾಕಾಂಡಗಳ ನಡುವೆಯೂ, ಭದ್ರತಾ ಪಡೆಗಳು ಧೈರ್ಯದಿಂದ ಹೋರಾಡಿದವು ಮತ್ತು ಅಸಂಖ್ಯಾತ ಅಮಾಯಕ ಜನರನ್ನು ಉಳಿಸಲು ತಮ್ಮ ಪ್ರಾಣದ ಹಂಗು ತೊರೆದು ಎಲ್ಲವನ್ನೂ ತ್ಯಾಗ ಮಾಡಿದವು. ಬಸ್ತಾರ್ ಅನ್ನು ರಕ್ಷಿಸುವಲ್ಲಿ ಮತ್ತು ಕಷ್ಟದ ಸಮಯದಲ್ಲಿ ಸಮಾಜಕ್ಕೆ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ನೀಡುವಲ್ಲಿ ವಿವಿಧ ಬುಡಕಟ್ಟು ಸಮುದಾಯಗಳ ನಾಯಕರ ಕೊಡುಗೆಯನ್ನು ಅವರು ಶ್ಲಾಘಿಸಿದರು ಮತ್ತು ಅವರಿಗೆ ಮನ್ನಣೆ ಸಿಗಬೇಕು ಎಂದು ಅವರು ಹೇಳಿದರು.

ಇನ್ನು ಮುಂದೆ ಯಾವುದೇ ಅಮಾಯಕ ಬುಡಕಟ್ಟು ಜನರಿಗೆ ಹಾನಿಯಾಗುವುದಿಲ್ಲ, ಶಾಲೆಗಳು ತೆರೆದಿರುತ್ತವೆ, ವಿದ್ಯುತ್ ಪೂರೈಕೆಗೆ ಧಕ್ಕೆಯಾಗುವುದಿಲ್ಲ ಮತ್ತು ರೈತರು ಸಂಪೂರ್ಣ ಪ್ರಯೋಜನಗಳನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಲ್ಲಿ ಪಡೆಯುತ್ತಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. 'ಬಸ್ತಾರ್ ಒಲಿಂಪಿಕ್ಸ್' ಮತ್ತು 'ಬಸ್ತಾರ್ ಪಾಂಡುಮ್' ನಂತಹ ಉಪಕ್ರಮಗಳು ಈ ಪ್ರದೇಶದ ಸಾಂಸ್ಕೃತಿಕ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿವೆ ಎಂದು ಅವರು ತಿಳಿಸಿದರು.

 

*****


(ಪ್ರಕಟಣೆ ಐ.ಡಿ.: 2262560) ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ: English , Marathi , हिन्दी , Gujarati , Tamil