ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಮೇ 10 ರಂದು ಕರ್ನಾಟಕ ಮತ್ತು ತೆಲಂಗಾಣಕ್ಕೆ ಭೇಟಿ

ಬೆಂಗಳೂರಿನಲ್ಲಿ ಆರ್ಟ್ ಆಫ್ ಲಿವಿಂಗ್‌ನ 45 ನೇ ವಾರ್ಷಿಕೋತ್ಸವದಲ್ಲಿ ಪ್ರಧಾನಮಂತ್ರಿ ಭಾಗಿ

ಹೈದರಾಬಾದ್‌ನಲ್ಲಿ ಸುಮಾರು 9,400 ಕೋಟಿ ರೂಪಾಯಿ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಉದ್ಘಾಟನೆ ಮತ್ತು ದೇಶಕ್ಕೆ ಲೋಕಾರ್ಪಣೆ ಮಾಡಲಿರುವ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಅವರಿಂದ ವಾರಂಗಲ್‌ನಲ್ಲಿ ಪಿಎಂಮಿತ್ರ ಪಾರ್ಕ್ ಉದ್ಘಾಟನೆ ಮತ್ತು ಸಂಗಾರೆಡ್ಡಿಯಲ್ಲಿ ಜಹೀರಾಬಾದ್ ಕೈಗಾರಿಕಾ ಪ್ರದೇಶದ ಶಂಕುಸ್ಥಾಪನೆ

ಹೈದರಾಬಾದ್-ಪಣಜಿ ಆರ್ಥಿಕ ಕಾರಿಡಾರ್‌ನಲ್ಲಿ ಗುಡೇಬೆಳ್ಳೂರಿನಿಂದ ಮಹಬೂಬ್‌ನಗರದವರೆಗಿನ ರಾಷ್ಟ್ರೀಯ ಹೆದ್ದಾರಿ-167 ರ ಚತುಷ್ಪಥಕ್ಕೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ

ಹೈದರಾಬಾದ್‌ನ ಮಲ್ಕಾಪುರದಲ್ಲಿ ಇಂಡಿಯನ್ ಆಯಿಲ್‌ನ ಗ್ರೀನ್‌ಫೀಲ್ಡ್ ಟರ್ಮಿನಲ್  ರಾಷ್ಟ್ರಕ್ಕೆ ಲೋಕಾರ್ಪಣೆ ಮಾಡಲಿರುವ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಅವರಿಂದ ಹೈದರಾಬಾದ್‌ನಲ್ಲಿ ಅತ್ಯಾಧುನಿಕ, ಕ್ಯಾನ್ಸರ್-ಕೇಂದ್ರಿತ ಮಲ್ಟಿ-ಸೂಪರ್ ಸ್ಪೆಷಾಲಿಟಿ ಕ್ವಾಟರ್ನರಿ ಕೇರ್ ಸಿಂಧು ಆಸ್ಪತ್ರೆ ರಾಷ್ಟ್ರಕ್ಕೆ ಲೋಕಾರ್ಪಣೆ

ಪ್ರಕಟಣಾ ದಿನಾಂಕ: 09 MAY 2026 11:17AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಮೇ 10 ರಂದು ಕರ್ನಾಟಕ ಮತ್ತು ತೆಲಂಗಾಣಕ್ಕೆ ಭೇಟಿ ನೀಡಲಿದ್ದಾರೆ. ಪ್ರಧಾನ ಮಂತ್ರಿ ಬೆಳಿಗ್ಗೆ ಸುಮಾರು 11 ಗಂಟೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಆರ್ಟ್ ಆಫ್ ಲಿವಿಂಗ್‌ನ 45ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ, ಅಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಪ್ರಧಾನಮಂತ್ರಿ ಹೈದರಾಬಾದ್‌ಗೆ ಪ್ರಯಾಣಿಸಲಿದ್ದಾರೆ ಮತ್ತು ಮಧ್ಯಾಹ್ನ 3 ಗಂಟೆಗೆ ಸುಮಾರು  9,400 ಕೋಟಿ ರೂ. ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಲೋಕಾರ್ಪಣೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮಧ್ಯಾಹ್ನ 3:45 ರ ಸುಮಾರಿಗೆ ಪ್ರಧಾನಮಂತ್ರಿ ಹೈದರಾಬಾದ್‌ನಲ್ಲಿರುವ ಸಿಂಧು ಆಸ್ಪತ್ರೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ಬೆಂಗಳೂರಿನಲ್ಲಿ ಪ್ರಧಾನಮಂತ್ರಿ

1981ರಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರಿಂದ ಸ್ಥಾಪಿಸಲ್ಪಟ್ಟ ಆರ್ಟ್ ಆಫ್ ಲಿವಿಂಗ್ 182 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜಾಗತಿಕ ಸ್ವಯಂಸೇವಕ- ಮಾನವೀಯತೆ ಆಧರಿಸಿದ ಮತ್ತು ಶೈಕ್ಷಣಿಕ ಸಂಸ್ಥೆಯಾಗಿ ಬೆಳೆವಣಿಗೆ ಹೊಂದಿದೆ. ಪ್ರಧಾನಮಂತ್ರಿಯವರು ಸಂಸ್ಥೆಯ 45ನೇ ವಾರ್ಷಿಕೋತ್ಸವ ಮತ್ತು ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರ 70 ನೇ ಜನ್ಮದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ.

ಪ್ರಧಾನಮಂತ್ರಿಯವರು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಹೊಸದಾಗಿ ನಿರ್ಮಿಸಲಾದ ಧ್ಯಾನ ಮಂದಿರವನ್ನು ಉದ್ಘಾಟಿಸಲಿದ್ದಾರೆ. ಇದು ಆಂತರಿಕ ಶಾಂತಿ ಮತ್ತು ಸಮಗ್ರ ಯೋಗಕ್ಷೇಮಕ್ಕಾಗಿ ಒಂದು ಮೀಸಲಾದ ಧ್ಯಾನ ಮಂದಿರವಾಗಿದೆ. ಮಾನಸಿಕ ಯೋಗಕ್ಷೇಮ, ಗ್ರಾಮೀಣಾಭಿವೃದ್ಧಿ, ಪ್ರಕೃತಿ ಸಂರಕ್ಷಣೆ ಮತ್ತು ಸಾಮಾಜಿಕ ಪರಿವರ್ತನೆಯ ಮೇಲೆ ಕೇಂದ್ರೀಕರಿಸಿದ ವರ್ಷವೀಡಿ ನಡೆಯುವ ಕಾರ್ಯಕ್ರಮಗಳನ್ನು ಒಳಗೊಂಡ ಆರ್ಟ್ ಆಫ್ ಲಿವಿಂಗ್‌ನ ರಾಷ್ಟ್ರವ್ಯಾಪಿ ಸೇವಾ ಉಪಕ್ರಮಗಳಿಗೂ ಸಹ ಅವರು ಚಾಲನೆ ನೀಡಲಿದ್ದಾರೆ.

ಹೈದರಾಬಾದ್ ನಲ್ಲಿ ಪ್ರಧಾನಮಂತ್ರಿ

ಪ್ರಧಾನಮಂತ್ರಿಯವರು ಸುಮಾರು 9,400 ಕೋಟಿ ರೂಪಾಯಿ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಲೋಕಾರ್ಪಣೆ ನೆರವೇರಿಸಲಿದ್ದಾರೆ. ಈ ಯೋಜನೆಗಳು ಒಟ್ಟಾರೆ ಸಂಪರ್ಕ ಬಲವರ್ಧನೆ, ಸರಕು ಸಾಗಾಣೆ ದಕ್ಷತೆಯ ಸುಧಾರಣೆ, ಸುರಕ್ಷತೆಯನ್ನು ಹೆಚ್ಚಿಸುವುದು ಮತ್ತು ಪ್ರಯಾಣಿಕರಿಗೆ ಉತ್ತಮ ಪ್ರಯಾಣ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿವೆ.

ಅಲ್ಲದೆ, ಪ್ರಧಾನಮಂತ್ರಿ ಅವರು ಹೈದರಾಬಾದ್-ಪಣಜಿ ಆರ್ಥಿಕ ಕಾರಿಡಾರ್‌ನಲ್ಲಿ ಗುಡೇಬೆಳ್ಳೂರಿನಿಂದ ಮೆಹಬೂಬ್‌ನಗರವರೆಗಿನ ರಾಷ್ಟ್ರೀಯ ಹೆದ್ದಾರಿ-167 ರ ಚತುಷ್ಪಥ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದರ ಒಟ್ಟು ಯೋಜನಾ ವೆಚ್ಚ 3,175 ಕೋಟಿ ರೂಪಾಯಿಗೂ ಅಧಿಕ. ಈ ಯೋಜನೆಯು ಸುಗನ, ಸುರಕ್ಷಿತ ಮತ್ತು ಅಡೆತಡೆಯಿಲ್ಲದ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ. ಪ್ರಯಾಣದ ಸಮಯವನ್ನು ಸುಮಾರು 1 ಗಂಟೆ 30 ನಿಮಿಷಗಳಷ್ಟು ತಗ್ಗಿಸುತ್ತದೆ ಮತ್ತು ಇಂಧನ ಬಳಕೆ ಮತ್ತು ವಾಹನ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ. ಈ ಹೆದ್ದಾರಿಯು ತೆಲಂಗಾಣ ಮತ್ತು ಕರ್ನಾಟಕ ನಡುವಿನ ಸಂಪರ್ಕವನ್ನು ಬಲಪಡಿಸುತ್ತದೆ ಮತ್ತು ಎರಡೂ ರಾಜ್ಯಗಳಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಅನುಕೂಲವಾಗುತ್ತದೆ.

ಪ್ರಧಾನಮಂತ್ರಿ ಅವರು ಇದೇ ವೇಳೆ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮದ ಭಾಗವಾಗಿ ಹೈದರಾಬಾದ್-ನಾಗ್ಪುರ ಕೈಗಾರಿಕಾ ಕಾರಿಡಾರ್ (ಎಚ್ ಎನ್ ಐಸಿ) ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಸಂಗಾರೆಡ್ಡಿ ಜಿಲ್ಲೆಯ ಜಹೀರಾಬಾದ್ ಕೈಗಾರಿಕಾ ಪ್ರದೇಶದ ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ. 3,245 ಎಕರೆ ಪ್ರದೇಶದಲ್ಲಿ ಒಟ್ಟು 2,350 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಈ ಯೋಜನೆಯು ಎನ್ ಎಚ್-65 ರ ಉದ್ದಕ್ಕೂ ಕಾರ್ಯತಂತ್ರದ ರೀತಿಯಲ್ಲಿ ನೆಲೆಗೊಂಡಿದ್ದು, ಪ್ರಮುಖ ನಗರಗಳು, ಬಂದರುಗಳು, ರೈಲು ಜಾಲಗಳು ಮತ್ತು ವಿಮಾನ ನಿಲ್ದಾಣಗಳಿಗೆ ತಡೆರಹಿತ ಬಹುಮಾದರಿ ಸಂಪರ್ಕವನ್ನು ಒದಗಿಸುತ್ತದೆ.

ಸ್ಮಾರ್ಟ್ ಇಂಟಿಗ್ರೇಟೆಡ್ ಇಂಡಸ್ಟ್ರಿಯಲ್ ಟೌನ್‌ಶಿಪ್ ಕಲ್ಪನೆಯಲ್ಲಿ ರೂಪಿಸಿರುವ ಜಹೀರಾಬಾದ್ ಕೈಗಾರಿಕಾ ಪ್ರದೇಶವು ಮುಂದುವರಿದ ಮತ್ತು ಸುಸ್ಥಿರ ಮೂಲಸೌಕರ್ಯವನ್ನು ಒಳಗೊಂಡಿದ್ದು, ಮುಂದಿನ ಪೀಳಿಗೆಯ ಕೈಗಾರಿಕೆಗಳನ್ನು ಬೆಂಬಲಿಸುತ್ತದೆ.  ಗುರುತಿಸಲಾದ ಪ್ರಮುಖ ಕ್ಷೇತ್ರಗಳಲ್ಲಿ ಆಟೋಮೊಬೈಲ್, ಆಹಾರ ಸಂಸ್ಕರಣೆ, ಯಂತ್ರೋಪಕರಣಗಳು, ಲೋಹಗಳು ಮತ್ತು ವಿದ್ಯುತ್ ಉಪಕರಣಗಳು ಸೇರಿವೆ. ಈ ಯೋಜನೆಯು ಸುಮಾರು 10,000 ಕೋಟಿ ರೂಪಾಯಿ ಹೂಡಿಕೆಗಳನ್ನು ಆಕರ್ಷಿಸುವ ಮತ್ತು ದೊಡ್ಡ ಪ್ರಮಾಣದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಇದು ಪ್ರಾದೇಶಿಕ ಆರ್ಥಿಕ ಬೆಳವಣಿಗೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ.

ಪ್ರಧಾನಮಂತ್ರಿ ವಾರಂಗಲ್‌ನಲ್ಲಿ ಪಿಎಂ ಮಿತ್ರ ಪಾರ್ಕ್ ಅನ್ನು ಉದ್ಘಾಟಿಸಲಿದ್ದಾರೆ. ಅದನ್ನು ಕಾಕತೀಯ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಎಂದೂ ಕರೆಯುತ್ತಾರೆ, ಅದನ್ನು ಪಿಎಂ ಮಿತ್ರ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದೆ. ಸುಮಾರು 1,700 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಇದು ಭಾರತದ ಮೊದಲ ಸಂಪೂರ್ಣ ಕ್ರಿಯಾತ್ಮಕ ಪಿಎಂ ಮಿತ್ರ ಪಾರ್ಕ್ ಆಗಿದೆ ಮತ್ತು ಭಾರತ ಸರ್ಕಾರದ 5ಎಫ್ ದೂರದೃಷ್ಟಿ - ​​ಫಾರ್ಮ್ ಟು ಫೈಬರ್ ಟು ಫ್ಯಾಕ್ಟರಿ ಟು ಫ್ಯಾಶನ್ ಟು ಫಾರಿನ್ ಅನ್ನು ಕಾರ್ಯರೂಪಗೊಳಿಸುತ್ತದೆ. ಉದ್ದೇಶಿತ ನಾಗ್ಪುರ-ವಿಜಯವಾಡ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ (ಎನ್ ಎಚ್-163G) ಬಳಿ ಕಾರ್ಯತಂತ್ರವಾಗಿ ನೆಲೆಗೊಂಡಿರುವ ಈ ಉದ್ಯಾನವನವು ಪ್ರಮುಖ ರೈಲ್ವೆ ಜಾಲಗಳು ಮತ್ತು ಬಂದರುಗಳಿಗೆ ಅತ್ಯುತ್ತಮ ಬಹುಮಾದರಿ ಸಂಪರ್ಕವನ್ನು ಒದಗಿಸುತ್ತದೆ, ಜಾಗತಿಕ ವ್ಯಾಪಾರಕ್ಕಾಗಿ ತಡೆರಹಿತ ಲಾಜಿಸ್ಟಿಕ್ಸ್ ಅನ್ನು ಖಾತ್ರಿಪಡಿಸುತ್ತದೆ. ವಿಶ್ವ ದರ್ಜೆಯ ಕೈಗಾರಿಕಾ ಪೂರಕ ವ್ಯವಸ್ಥೆಯಾಗಿ ವಿನ್ಯಾಸಗೊಳಿಸಲಾದ ಈ ಪಾರ್ಕ್, ವ್ಯಾಪಕವಾದ ಆಂತರಿಕ ರಸ್ತೆ ಜಾಲ, ನಿರ್ದಿಷ್ಟ ವಿದ್ಯುತ್ ಉಪಕೇಂದ್ರ ಮತ್ತು ಖಚಿತವಾದ ನೀರು ಸರಬರಾಜು ಸೇರಿ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಹೊಂದಿದೆ. ಇದು ಶೂನ್ಯ ದ್ರವ ವಿಸರ್ಜನೆ ತಂತ್ರಜ್ಞಾನದೊಂದಿಗೆ ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕದ ಮೂಲಕ ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡುತ್ತದೆ.

ಪ್ರಧಾನಮಂತ್ರಿ ಅವರು ಸುಮಾರು 1,535 ಕೋಟಿ ರೂಪಾಯಿ ಮೌಲ್ಯದ ಪ್ರಮುಖ ರೈಲ್ವೆ ಮೂಲಸೌಕರ್ಯ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಅವುಗಳಲ್ಲಿ 118 ಕಿ.ಮೀ. ವ್ಯಾಪ್ತಿಯ ಕಾಜಿಪೇಟೆ-ವಿಜಯವಾಡ ಮಲ್ಟಿ-ಟ್ರ್ಯಾಕಿಂಗ್ ಯೋಜನೆಯ ಬಹು ವಿಭಾಗಗಳು ಸೇರಿವೆ. ಈ ಯೋಜನೆಯು ಕಾರ್ಯನಿರತ ಗ್ರ್ಯಾಂಡ್ ಟ್ರಂಕ್ ಕಾರಿಡಾರ್‌ನಲ್ಲಿ ಲೈನ್ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ವೇಗದ ರೈಲು ಕಾರ್ಯಾಚರಣೆಗಳನ್ನು ಸಕ್ರಿಯಗೊಳಿಸುತ್ತದೆ, ದಟ್ಟಣೆಯನ್ನು ತಗ್ಗಿಸುತ್ತದೆ, ಸಮಯಪಾಲನೆಯನ್ನು ಸುಧಾರಿಸುತ್ತದೆ ಮತ್ತು ಪ್ರದೇಶದಾದ್ಯಂತ ಸರಕು ಸಾಗಣೆಯನ್ನು ಹೆಚ್ಚಿಸುತ್ತದೆ.

ಅಲ್ಲದೆ, ಕಾಜಿಪೇಟೆ ರೈಲು ಅಂಡರ್ ರೈಲ್ ಬೈಪಾಸ್ ಅನ್ನು ಸಹ ರಾಷ್ಟ್ರಕ್ಕೆ ಸಮರ್ಪಿಸಲಾಗುವುದು. ಈ ಆಯಕಟ್ಟಿನ ಯೋಜನೆಯು ಹೈದರಾಬಾದ್, ಬಲ್ಹರ್ಷ ಮತ್ತು ವಿಜಯವಾಡ ಕಡೆಗೆ ಏಕಕಾಲದಲ್ಲಿ ರೈಲು ಸಂಚಾರವನ್ನು ಸಕ್ರಿಯಗೊಳಿಸುವ ಮೂಲಕ ಕಾಜಿಪೇಟೆ ಜಂಕ್ಷನ್‌ನಲ್ಲಿನ ಜನದಟ್ಟಣೆಯನ್ನು ತಗ್ಗಿಸುತ್ತದೆ, ಇದರಿಂದಾಗಿ ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸುತ್ತದೆ ಮತ್ತು ವಿಳಂಬವನ್ನು ಕಡಿಮೆ ಮಾಡುತ್ತದೆ.

ಹೈದರಾಬಾದ್‌ನಲ್ಲಿ 600 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಇಂಡಿಯನ್ ಆಯಿಲ್‌ನ ಮಲ್ಕಾಪುರ್ ಟರ್ಮಿನಲ್ ಯೋಜನೆಯನ್ನು ಪ್ರಧಾನಮಂತ್ರಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಪೆಟ್ರೋಲಿಯಂ ಉತ್ಪನ್ನ ನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಈ ಪ್ರದೇಶದ ಹೆಚ್ಚುತ್ತಿರುವ ಇಂಧನ ಬೇಡಿಕೆಯನ್ನು ಪೂರೈಸಲು ಮಲ್ಕಾಪುರ್ ಟರ್ಮಿನಲ್ ಅನ್ನು ಸ್ಥಾಪಿಸಲಾಗಿದೆ. ಟರ್ಮಿನಲ್ ಒಟ್ಟು 1,65,000 ಕಿಲೋಲೀಟರ್ (ಕೆಎಲ್) ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ.

ಹೈದರಾಬಾದ್‌ನಲ್ಲಿರುವ ಅತ್ಯಾಧುನಿಕ, ಕ್ಯಾನ್ಸರ್‌ ಗೆ ಮೀಸಲಾದ ಮಲ್ಟಿ-ಸೂಪರ್ ಸ್ಪೆಷಾಲಿಟಿ ಕ್ವಾಟರ್ನರಿ ಕೇರ್ ಲಾಭರಹಿತ ಸಂಸ್ಥೆಯಾದ ಸಿಂಧು ಆಸ್ಪತ್ರೆಯನ್ನು ಪ್ರಧಾನಮಂತ್ರಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದು, ಇದು ಭಾರತದ ಆರೋಗ್ಯ ಮೂಲಸೌಕರ್ಯಕ್ಕೆ ಪ್ರಮುಖ ಮೈಲಿಗಲ್ಲಾಗಲಿದೆ.18 ಮಹಡಿಗಳನ್ನು ಹೊಂದಿರುವ 2.1 ಮಿಲಿಯನ್ ಚದರ ಅಡಿ ವಿಸ್ತೀರ್ಣದಲ್ಲಿರುವ ಈ ಆಸ್ಪತ್ರೆಯು 1,500 ಹಾಸಿಗೆಗಳು, 150 ಕ್ಕೂ ಅಧಿಕ ವೈದ್ಯರ ಸಮಾಲೋಚನಾ ಕೊಠಡಿಗಳು ಮತ್ತು 29 ಸುಧಾರಿತ ಆಪರೇಷನ್ ಥಿಯೇಟರ್‌ಗಳನ್ನು ಹೊಂದಿದೆ. ಆಸ್ಪತ್ರೆಯಲ್ಲಿ ಸಮಗ್ರ ಆರೈಕೆಯು ಕಿಮೊಥೆರಪಿ, ವಿಕಿರಣ ಚಿಕಿತ್ಸೆ, ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಳು, ಮೂಳೆ ಮಜ್ಜೆಯ ಕಸಿ, ಸುಧಾರಿತ ಕ್ರಿಟಿಕಲ್ ಕೇರ್ ಮತ್ತು ಅತ್ಯಾಧುನಿಕ ರೋಗಪತ್ತೆ, ಆಧುನಿಕ ಪ್ರಯೋಗಾಲಯ ಮತ್ತು ರಕ್ತ ಕೇಂದ್ರ ಸೌಲಭ್ಯಗಳಿಂದ ಬೆಂಬಲಿತವಾದ 33 ಕ್ಕೂ ಅಧಿಕ ಸೂಪರ್ ಸ್ಪೆಷಾಲಿಟಿಗಳನ್ನು ಒಳಗೊಂಡಿದೆ.

ಈ ಯೋಜನೆಗಳು ಪ್ರಧಾನಮಂತ್ರಿಯವರ ವಿಕಸಿತ ಭಾರತಕ್ಕಾಗಿ ವಿಕಸಿತ ತೆಲಂಗಾಣದ ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತವೆ, ಆರ್ಥಿಕ ಬೆಳವಣಿಗೆಯನ್ನು ವೃದ್ಧಿಸಲು, ಜೀವನದ ಗುಣಮಟ್ಟವನ್ನು ಸುಧಾರಿಸಲು ಮತ್ತು ವೇಗವಾದ, ಹೆಚ್ಚು ಸಂಪರ್ಕಿತ ರಾಷ್ಟ್ರವನ್ನು ನಿರ್ಮಿಸಲು ಸಮಗ್ರ ಮೂಲಸೌಕರ್ಯ ಅಭಿವೃದ್ಧಿಯ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲಾಗುತ್ತಿದೆ.

 

*****


(ಪ್ರಕಟಣೆ ಐ.ಡಿ.: 2259293) ವಿಸಿಟರ್ ಕೌಂಟರ್ : 29
ಪ್ರಕಟಣೆಯನ್ನು ಇದರಲ್ಲಿ ಓದಿ: Assamese , English , Urdu , Marathi , हिन्दी , Bengali , Gujarati , Tamil , Telugu , Malayalam