ಪ್ರಧಾನ ಮಂತ್ರಿಯವರ ಕಛೇರಿ
ವಿಯೆಟ್ನಾಂ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ವಿಯೆಟ್ನಾಂ ಅಧ್ಯಕ್ಷರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ
ಪ್ರಕಟಣಾ ದಿನಾಂಕ:
06 MAY 2026 2:30PM by PIB Bengaluru
ಗೌರವಾನ್ವಿತರೇ,
ಪ್ರಧಾನ ಕಾರ್ಯದರ್ಶಿ ಮತ್ತು ಅಧ್ಯಕ್ಷರಾದ ತೋ ಲ್ಯಾಮ್,
ಉಭಯ ದೇಶಗಳ ಗಣ್ಯ ಪ್ರತಿನಿಧಿಗಳೇ,
ಮಾಧ್ಯಮದ ಸ್ನೇಹಿತರೇ,
ನಮಸ್ಕಾರ್!
ಕ್ಸಿನ್ ಚಾವೊ!
ಭಾರತಕ್ಕೆ ಭೇಟಿ ನೀಡಿದ ಅಧ್ಯಕ್ಷ ತೋ ಲ್ಯಾಮ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಲು ನನಗೆ ತುಂಬಾ ಸಂತೋಷವಾಗಿದೆ. ವಿಯೆಟ್ನಾಂ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಒಂದು ತಿಂಗಳೊಳಗೆ ಉನ್ನತ ಮಟ್ಟದ ನಿಯೋಗ ಮತ್ತು ಹಲವು ವಾಣಿಜ್ಯ ನಾಯಕರೊಂದಿಗೆ ಅವರು ಭಾರತಕ್ಕೆ ನೀಡಿದ ಭೇಟಿಯು ಭಾರತ-ವಿಯೆಟ್ನಾಂ ಸಂಬಂಧಗಳಿಗೆ ಅವರು ನೀಡುವ ಆದ್ಯತೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ.
ಅವರು ಬೋಧ್ ಗಯಾದಿಂದ ತಮ್ಮ ಭಾರತ ಭೇಟಿಯನ್ನು ಆರಂಭಿಸಿದ್ದು ಇಲ್ಲಿ ಉಲ್ಲೇಖಾರ್ಹ, ಕಾರಣ ಅದು ನಮ್ಮ ಎರಡೂ ದೇಶಗಳ ಹಂಚಿಕೆಯ ನಾಗರಿಕತೆ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಅವರ ಭೇಟಿ ಮತ್ತು ನಮ್ಮ ಅರ್ಥಪೂರ್ಣ ಚರ್ಚೆಗಳ ಮೂಲಕ, ನಾವು ನಮ್ಮ ಪರಸ್ಪರ ಸದ್ಭಾವನೆಯನ್ನು ಹಲವಾರು ಸಮಗ್ರ ಫಲಿತಾಂಶಗಳಾಗಿ ಪರಿವರ್ತಿಸುತ್ತಿದ್ದೇವೆ.
ಮಿತ್ರರೇ,
ಭಾರತ-ವಿಯೆಟ್ನಾಂ ಪಾಲುದಾರಿಕೆಯಲ್ಲಿ, ಪರಂಪರೆ ಮತ್ತು ಅಭಿವೃದ್ಧಿ ಎರಡೂ ಪ್ರಾಮುಖ್ಯತೆಯನ್ನು ಹೊಂದಿವೆ. ಕಳೆದ ವರ್ಷ ಭಾರತದಿಂದ ಬೌದ್ಧ ಅವಶೇಷಗಳನ್ನು ವಿಯೆಟ್ನಾಂಗೆ ಕೊಂಡೊಯ್ದಾಗ, ವಿಯೆಟ್ನಾಂನ ಜನಸಂಖ್ಯೆಯ ಶೇ.15ರಷ್ಟು ಜನರು, ಅಂದರೆ ಹದಿನೈದು ದಶಲಕ್ಷಕ್ಕೂ ಅಧಿಕ ಜನರು ತಮ್ಮ ಗೌರವವನ್ನು ಸಲ್ಲಿಸಿದರು. ನಮ್ಮ ಹಂಚಿಕೆಯ ಪರಂಪರೆಯನ್ನು ಸಂರಕ್ಷಿಸಲು, ನಾವು ವಿಯೆಟ್ನಾಂನಲ್ಲಿರುವ ಮೈ ಸನ್ ಮತ್ತು ನ್ಹಾನ್ ಟವರ್ಸ್ನಲ್ಲಿರುವ ಪ್ರಾಚೀನ ಚಾಮ್ ನಾಗರಿಕತೆಯ ದೇವಾಲಯಗಳ ಪುನಃಸ್ಥಾಪನೆಯನ್ನು ಕೈಗೊಳ್ಳುತ್ತಿದ್ದೇವೆ. ನಾವು ಈಗ ಚಾಮ್ ನಾಗರಿಕತೆಯ ಹಸ್ತಪ್ರತಿಗಳನ್ನು ಡಿಜಿಟಲೀಕರಣಗೊಳಿಸುತ್ತೇವೆ, ಇದರಿಂದಾಗಿ ಭವಿಷ್ಯದ ಪೀಳಿಗೆಗೆ ಈ ಅಮೂಲ್ಯ ಪರಂಪರೆಯನ್ನು ಸಂರಕ್ಷಿಸುತ್ತೇವೆ.
ಮಿತ್ರರೇ,
ಒಂದು ದಶಕದ ಹಿಂದೆ, ವಿಯೆಟ್ನಾಂಗೆ ನನ್ನ ಭೇಟಿಯ ಸಮಯದಲ್ಲಿ ವಿಯೆಟ್ನಾಂ ಆಸಿಯಾನ್ನಲ್ಲಿ ಭಾರತದ ಮೊದಲ ಸಮಗ್ರ ಕಾರ್ಯತಂತ್ರದ ಪಾಲುದಾರರಾದರು. ಅಂದಿನಿಂದ ನಮ್ಮ ಸಂಬಂಧಗಳು ತ್ವರಿತ ಮತ್ತು ವ್ಯಾಪಕ ಪ್ರಗತಿಯನ್ನು ಕಂಡಿವೆ. ನಮ್ಮ ನಾಗರಿಕತೆಯ ಸಂಬಂಧಗಳ ಜೊತೆಗೆ ವ್ಯಾಪಾರ, ತಂತ್ರಜ್ಞಾನ ಮತ್ತು ಪ್ರವಾಸೋದ್ಯಮದಲ್ಲಿ ನಮ್ಮ ಸಹಕಾರವೂ ಬಲವರ್ಧನೆಗೊಂಡಿದೆ.
ಆ ಭದ್ರವಾದ ಬುನಾದಿಯ ಮೇಲೆ ನಿರ್ಮಿಸುತ್ತಾ, ಇಂದು ನಾವು ನಮ್ಮ ಸಂಬಂಧವನ್ನು ವರ್ಧಿತ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಮಟ್ಟಕ್ಕೆ ಏರಿಸುತ್ತಿದ್ದೇವೆ. ನಾವು ಈಗ ನಮ್ಮ ಪಾಲುದಾರಿಕೆಯನ್ನು ಇನ್ನೂ ಹೆಚ್ಚಿನ ಗುರಿಗಳತ್ತ ಮುನ್ನಡೆಸುತ್ತೇವೆ. ಸಂಸ್ಕೃತಿ, ಸಂಪರ್ಕ ಮತ್ತು ಸಾಮರ್ಥ್ಯ ವೃದ್ಧಿಯ ಜೊತೆತೆ, ಭದ್ರತೆ, ಸುಸ್ಥಿರತೆ ಮತ್ತು ಪೂರೈಕೆ ಸರಣಿ ಸ್ಥಿತಿಸ್ಥಾಪಕತ್ವ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ನಮ್ಮ ಸಹಕಾರವು ಹೊಸ ಎತ್ತರವನ್ನು ತಲುಪುತ್ತದೆ.
ಮಿತ್ರರೇ,
ಕಳೆದ ದಶಕದಲ್ಲಿ ಭಾರತ ಮತ್ತು ವಿಯೆಟ್ನಾಂ ನಡುವಿನ ದ್ವಿಪಕ್ಷೀಯ ವ್ಯಾಪಾರವು ದ್ವಿಗುಣಗೊಂಡಿದ್ದು, 16 ಬಿಲಿಯನ್ ಅಮೆರಿಕನ್ ಡಾಲರ್ಗಳನ್ನು ತಲುಪಿದೆ. ಇಂದು ಅದನ್ನು 2030ರ ವೇಳೆಗೆ 25 ಬಿಲಿಯನ್ ಅಮೆರಿಕನ್ ಡಾಲರ್ಗಳಿಗೆ ಹೆಚ್ಚಿಸಲು ನಾವು ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ನಮ್ಮ ಔಷಧ ಅಧಿಕಾರಿಗಳ ನಡುವಿನ ಒಪ್ಪಂದವು ವಿಯೆಟ್ನಾಂನಲ್ಲಿ ಭಾರತೀಯ ಔಷಧಗಳ ಲಭ್ಯತೆಯನ್ನು ಹೆಚ್ಚಿಸುತ್ತದೆ. ವಿಯೆಟ್ನಾಂಗೆ ಭಾರತದ ಕೃಷಿ, ಮೀನುಗಾರಿಕೆ ಮತ್ತು ಪ್ರಾಣಿ ಉತ್ಪನ್ನಗಳ ರಫ್ತುಗಳು ಸಹ ಹೆಚ್ಚು ಸುವ್ಯವಸ್ಥಿತವಾಗುತ್ತವೆ. ಶೀಘ್ರದಲ್ಲೇ ವಿಯೆಟ್ನಾಂ ಭಾರತೀಯ ದ್ರಾಕ್ಷಿ ಮತ್ತು ದಾಳಿಂಬೆಗಳನ್ನು ಆನಂದಿಸುತ್ತದೆ ಮತ್ತು ನಾವು ಪ್ರತಿಯಾಗಿ ವಿಯೆಟ್ನಾಂನ ದುರಿಯನ್ ಮತ್ತು ಪೊಮೆಲೊವನ್ನು ಸವಿಯುತ್ತೇವೆ.
ಅಲ್ಲದೆ. ಈ ವರ್ಷದ ಅಂತ್ಯದ ವೇಳೆಗೆ ಭಾರತ-ಆಸಿಯಾನ್ ವ್ಯಾಪಾರ ಒಪ್ಪಂದ-"AITIGA" ಅನ್ನು ನವೀಕರಿಸಲು ನಾವು ಒಪ್ಪಂದಕ್ಕೆ ಬಂದಿದ್ದೇವೆ. ಇದು ಭಾರತ ಮತ್ತು ಎಲ್ಲಾ ಆಸಿಯಾನ್ ರಾಷ್ಟ್ರಗಳ ನಡುವಿನ ವ್ಯಾಪಾರ ಮತ್ತು ಹೂಡಿಕೆಗೆ ಹೊಸ ಶಕ್ತಿಯನ್ನು ತುಂಬುತ್ತದೆ. ನಿರ್ಣಾಯಕ ಮತ್ತು ಅಪರೂಪದ ಖನಿಜಗಳು ಮತ್ತು ಇಂಧನ ಸಹಕಾರದಲ್ಲಿ ಹೊಸ ಉಪಕ್ರಮಗಳ ಮೂಲಕ ನಾವು ಎರಡೂ ಕಡೆಯ ಆರ್ಥಿಕ ಭದ್ರತೆ ಮತ್ತು ಪೂರೈಕೆ ಸರಣಿ ಸ್ಥಿತಿಸ್ಥಾಪಕತ್ವವನ್ನು ಖಚಿತಪಡಿಸಿಕೊಳ್ಳುತ್ತೇವೆ.
ಮಿತ್ರರೇ,
ಸಂಪರ್ಕ ಮತ್ತು ಸಾಮರ್ಥ್ಯ ವೃದ್ಧಿ ನಮ್ಮ ಪಾಲುದಾರಿಕೆಯ ಪ್ರಮುಖ ಸ್ತಂಭಗಳಾಗಿವೆ. ನಮ್ಮ ಎರಡೂ ದೇಶಗಳ ನಡುವಿನ ವಾಯು ಸಂಪರ್ಕವು ನಿರಂತರವಾಗಿ ವಿಸ್ತರಿಸುತ್ತಿದೆ ಎಂದು ನಮಗೆ ಸಂತೋಷವಾಗಿದೆ.
ಆರ್ಥಿಕ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲು, ನಮ್ಮ ಕೇಂದ್ರ ಬ್ಯಾಂಕುಗಳ ನಡುವಿನ ಸಹಕಾರವನ್ನು ಹೆಚ್ಚಿಸಲು ನಾವು ನಿರ್ಧರಿಸಿದ್ದೇವೆ. ಭಾರತದ ಯುಪಿಐ ಮತ್ತು ವಿಯೆಟ್ನಾಂನ ವೇಗದ ಪಾವತಿ ವ್ಯವಸ್ಥೆಯನ್ನು ಶೀಘ್ರದಲ್ಲೇ ಸಂಪರ್ಕಿಸಲಾಗುವುದು. ಹೆಚ್ಚುವರಿಯಾಗಿ, ನಮ್ಮ ಎರಡು ದೇಶಗಳ ನಡುವೆ ರಾಜ್ಯದಿಂದ ರಾಜ್ಯಕ್ಕೆ ಮತ್ತು ನಗರದಿಂದ ನಗರಕ್ಕೆ ಸಹಕಾರವನ್ನು ನಾವು ವೃದ್ಧಿಸುತ್ತೇವೆ.
ಮಿತ್ರರೇ,
ವಿಯೆಟ್ನಾಂ ಭಾರತದ ಪೂರ್ವ ಕ್ರಿಯಾ (ಆಕ್ಟ್ ಈಸ್ಟ್ )ನೀತಿ ಮತ್ತು ವಿಷನ್ ಮಹಾಸಾಗರದ ಪ್ರಮುಖ ಸ್ತಂಭವಾಗಿದೆ ಮತ್ತು ನಾವು ಇಂಡೋ-ಪೆಸಿಫಿಕ್ ಪ್ರದೇಶದ ಬಗ್ಗೆ ಸಾಮಾನ್ಯ ದೂರದೃಷ್ಟಿಯನ್ನು ಹಂಚಿಕೊಳ್ಳುತ್ತೇವೆ. ನಾವು ನಮ್ಮ ರಕ್ಷಣಾ ಮತ್ತು ಭದ್ರತಾ ಸಹಕಾರವನ್ನು ಬಲಪಡಿಸುತ್ತಿದ್ದಂತೆಯೇ ಕಾನೂನಿನ ನಿಯಮ, ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ನಾವು ಕೊಡುಗೆ ನೀಡುವುದನ್ನು ಮುಂದುವರಿಸುತ್ತೇವೆ. ವಿಯೆಟ್ನಾಂನ ಪಾಲುದಾರಿಕೆಯೊಂದಿಗೆ ಭಾರತವು ಆಸಿಯಾನ್ ಜೊತೆಗಿನ ತನ್ನ ಒಳಗೊಳ್ಳುವಿಕೆಯನ್ನು ಮತ್ತಷ್ಟು ವಿಸ್ತರಿಸುತ್ತದೆ.
ಗೌರವಾನ್ವಿತರೇ,
ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಕ್ಕಾಗಿ ಮತ್ತು ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟದಲ್ಲಿ ನಮ್ಮೊಂದಿಗೆ ನಿಂತಿದ್ದಕ್ಕಾಗಿ ನಾವು ವಿಯೆಟ್ನಾಂಗೆ ಕೃತಜ್ಞರಾಗಿರುತ್ತೇವೆ.
ಜಾಗತಿಕ ಪ್ರಕ್ಷುಬ್ಧತೆ ಮತ್ತು ಆರ್ಥಿಕ ಸವಾಲುಗಳ ಈ ಯುಗದಲ್ಲಿ ಪ್ರತಿಭೆ, ಉತ್ತಮ ಆಡಳಿತ ಮತ್ತು ಆರ್ಥಿಕ ಸುಧಾರಣೆಗಳಿಂದ ನಡೆಸಲ್ಪಡುವ ಭಾರತ ಮತ್ತು ವಿಯೆಟ್ನಾಂ ವಿಶ್ವದ ಎರಡು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಾಗಿ ಹೊರಹೊಮ್ಮುತ್ತಿವೆ. ನಮ್ಮ ವರ್ಧಿತ ಕಾರ್ಯತಂತ್ರದ ಪಾಲುದಾರಿಕೆಯ ಮೂಲಕ ನಾವು ಪರಸ್ಪರರ ವೇಗವರ್ಧಿತ ಬೆಳವಣಿಗೆಗೆ ವೇಗವರ್ಧಕಗಳಾಗಿ ಕಾರ್ಯನಿರ್ವಹಿಸುತ್ತೇವೆ.
ಬುದ್ಧನ ಬೋಧನೆಯ ಉತ್ಸಾಹದಲ್ಲಿ ಪ್ರತಿಬಿಂಬಿಸಿದಂತೆ, ”ನೀವು ಬೇರೆಯವರಿಗೆ ದೀಪ ಹಚ್ಚಿದರೆ, ಅದು ನಿಮ್ಮ ಸ್ವಂತ ಮಾರ್ಗವನ್ನು ಸಹ ಬೆಳಗಿಸುತ್ತದೆ’’.
ಈ ತತ್ವಗಳ ಮಾರ್ಗದರ್ಶದಿಂದ ಪರಸ್ಪರರ ದೂರದೃಷ್ಟಿಗಳು ಮತ್ತು ಗುರಿಗಳನ್ನು ಬೆಂಬಲಿಸುವ ಮೂಲಕ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾಗುವ ನಮ್ಮ ಆಕಾಂಕ್ಷೆಗಳನ್ನು ನಾವು ಸಾಮೂಹಿಕವಾಗಿ ಸಾಕಾರಗೊಳಿಸುತ್ತೇವೆ.
ನಾವು ಒಟ್ಟಿಗೆ ನಡೆಯುತ್ತೇವೆ, ಒಟ್ಟಿಗೆ ಬೆಳೆಯುತ್ತೇವೆ ಮತ್ತು ಒಟ್ಟಿಗೆ ಗೆಲ್ಲುತ್ತೇವೆ.
ತುಂಬಾ ಧನ್ಯವಾದಗಳು.
ಘೋಷಣೆ: ಇದು ಪ್ರಧಾನಮಂತ್ರಿ ಅವರ ಹೇಳಿಕೆಯ ಅಂದಾಜು ಅನುವಾದವಾಗಿದೆ. ಮೂಲ ಹೇಳಿಕೆಗಳನ್ನು ಹಿಂದಿಯಲ್ಲಿ ನೀಡಲಾಗಿದೆ.
*****
(ಪ್ರಕಟಣೆ ಐ.ಡಿ.: 2258772)
ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Assamese
,
Bengali
,
Manipuri
,
Punjabi
,
Gujarati
,
Telugu
,
Malayalam