ಪ್ರಧಾನ ಮಂತ್ರಿಯವರ ಕಛೇರಿ
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ಸಂಘರ್ಷ ಕುರಿತು ರಾಜ್ಯಸಭೆಯಲ್ಲಿ ಪ್ರಧಾನಮಂತ್ರಿ ಅವರ ಭಾಷಣ
ಪ್ರಕಟಣಾ ದಿನಾಂಕ:
24 MAR 2026 2:49PM by PIB Bengaluru
ಗೌರವಾನ್ವಿತ ಸಭಾಪತಿಗಳೆ,
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಅದರಿಂದ ಉಂಟಾಗುವ ಸನ್ನಿವೇಶಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಇಂದು ನಾನು ಈ ಗಂಭೀರ ಪರಿಸ್ಥಿತಿಗಳ ಕುರಿತು ಸರ್ಕಾರದ ನಿಲುವು ಹಂಚಿಕೊಳ್ಳಲು ಸಂಸತ್ತಿನ ಮೇಲ್ಮನೆಯ ಮುಂದೆ ಮತ್ತು ನನ್ನ ಸಹ ನಾಗರಿಕರ ಮುಂದೆ ನಿಂತಿದ್ದೇನೆ. ಈ ಯುದ್ಧವು ಈಗ 3 ವಾರಗಳಿಗೂ ಹೆಚ್ಚು ಕಾಲದಿಂದ ಮುಂದುವರೆದಿದೆ. ಇದು ವಿಶ್ವಾದ್ಯಂತ ತೀವ್ರ ಇಂಧನ ಬಿಕ್ಕಟ್ಟು ಸೃಷ್ಟಿಸಿದೆ. ಭಾರತಕ್ಕೂ ಈ ಪರಿಸ್ಥಿತಿ ಚಿಂತಾಜನಕವಾಗಿದೆ. ನಮ್ಮ ವ್ಯಾಪಾರ ಮಾರ್ಗಗಳ ಮೇಲೆ ಪರಿಣಾಮ ಬೀರುತ್ತಿವೆ. ಪೆಟ್ರೋಲ್, ಡೀಸೆಲ್, ಅನಿಲ ಮತ್ತು ರಸಗೊಬ್ಬರಗಳಂತಹ ಅಗತ್ಯ ವಸ್ತುಗಳ ನಿಯಮಿತ ಪೂರೈಕೆಗಳು ಅಸ್ತವ್ಯಸ್ತಗೊಂಡಿವೆ. ಸುಮಾರು 1 ಕೋಟಿ ಭಾರತೀಯರು ಗಲ್ಫ್ ದೇಶಗಳಲ್ಲಿ ವಾಸಿಸುತ್ತಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಸುರಕ್ಷತೆ ಮತ್ತು ಜೀವನೋಪಾಯ ಖಚಿತಪಡಿಸಿಕೊಳ್ಳುವುದು ಭಾರತಕ್ಕೆ ಒಂದು ಪ್ರಮುಖ ಕಾಳಜಿಯಾಗಿದೆ. ಹಾರ್ಮುಜ್ ಜಲಸಂಧಿಯಲ್ಲಿ ಅನೇಕ ಹಡಗುಗಳು ಸಿಲುಕಿಕೊಂಡಿವೆ, ಅದರಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯ ಸಿಬ್ಬಂದಿ ಇದ್ದಾರೆ. ಇದು ಭಾರತಕ್ಕೂ ಗಂಭೀರ ಕಳವಳದ ವಿಷಯವಾಗಿದೆ. ಇಂತಹ ಭೀಕರ ಸಂದರ್ಭಗಳಲ್ಲಿ ಸಂಸತ್ತಿನ ಈ ಮೇಲ್ಮನೆಯಿಂದ ಶಾಂತಿ ಮತ್ತು ಸಂವಾದಕ್ಕಾಗಿ ಒಗ್ಗಟ್ಟಿನ ಧ್ವನಿ ಇಡೀ ಜಗತ್ತನ್ನು ತಲುಪುವುದು ಅತ್ಯಗತ್ಯವಾಗಿದೆ.
ಗೌರವಾನ್ವಿತ ಸಭಾಪತಿಗಳೆ,
ಯುದ್ಧ ಆರಂಭವಾದಾಗಿನಿಂದ, ನಾನು ಪಶ್ಚಿಮ ಏಷ್ಯಾದ ಹೆಚ್ಚಿನ ದೇಶಗಳ ಮುಖ್ಯಸ್ಥರೊಂದಿಗೆ 2 ಬಾರಿ ಫೋನ್ನಲ್ಲಿ ಮಾತನಾಡಿದ್ದೇನೆ. ನಾವು ಎಲ್ಲಾ ಗಲ್ಫ್ ರಾಷ್ಟ್ರಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ನಾವು ಇರಾನ್, ಇಸ್ರೇಲ್ ಮತ್ತು ಅಮೆರಿಕ ಜತೆಯೂ ಸಂಪರ್ಕದಲ್ಲಿದ್ದೇವೆ. ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಈ ಪ್ರದೇಶದಲ್ಲಿ ಶಾಂತಿ ಪುನಃಸ್ಥಾಪಿಸುವುದು ನಮ್ಮ ಗುರಿಯಾಗಿದೆ. ಹಾರ್ಮುಜ್ ಜಲಸಂಧಿಯನ್ನು ಸಡಿಲಿಸುವುದು ಮತ್ತು ಪುನಃ ತೆರೆಯುವ ಬಗ್ಗೆ ನಾವು ಅವರೊಂದಿಗೆ ಮಾತನಾಡಿದ್ದೇವೆ. ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳು ಮತ್ತು ಹಾರ್ಮುಜ್ ಜಲಸಂಧಿಯಂತಹ ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿನ ಅಡಚಣೆಗಳು ಸ್ವೀಕಾರಾರ್ಹವಲ್ಲ. ನಾಗರಿಕರು, ನಾಗರಿಕ ಮೂಲಸೌಕರ್ಯ, ಇಂಧನ ಮತ್ತು ಸಾರಿಗೆ ಸಂಬಂಧಿತ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ಭಾರತ ವಿರೋಧಿಸಿದೆ. ರಾಜತಾಂತ್ರಿಕತೆಯ ಮೂಲಕ ಈ ಯುದ್ಧದಂತಹ ವಾತಾವರಣದಲ್ಲಿಯೂ ಸಹ ಭಾರತೀಯ ಹಡಗುಗಳ ಸುರಕ್ಷಿತ ಹಾದಿಯನ್ನು ಖಚಿತಪಡಿಸಿಕೊಳ್ಳಲು ಭಾರತ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಲು ಮಾತುಕತೆಯೇ ಏಕೈಕ ಮಾರ್ಗ ಎಂದು ಭಾರತ ಸೂಚಿಸಿದೆ. ಈ ಯುದ್ಧದಲ್ಲಿ ಮಾನವ ಜೀವಕ್ಕೆ ಯಾವುದೇ ಬೆದರಿಕೆ ಮಾನವತೆಯ ಹಿತಾಸಕ್ತಿಯಲ್ಲಿಲ್ಲ. ಆದ್ದರಿಂದ, ಸಾಧ್ಯವಾದಷ್ಟು ಬೇಗ ಎಲ್ಲಾ ಪಕ್ಷಗಳು ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳುವುದನ್ನು ಪ್ರೋತ್ಸಾಹಿಸುವುದು ಭಾರತದ ನಿರಂತರ ಪ್ರಯತ್ನವಾಗಿದೆ.
ಗೌರವಾನ್ವಿತ ಸಭಾಪತಿಗಳೆ,
ಬಿಕ್ಕಟ್ಟಿನ ಸಮಯದಲ್ಲಿ, ದೇಶ ಮತ್ತು ವಿದೇಶಗಳಲ್ಲಿ ಭಾರತೀಯರ ಸುರಕ್ಷತೆಯು ನಮ್ಮ ಅತ್ಯಂತ ಪ್ರಮುಖ ಆದ್ಯತೆಯಾಗಿದೆ. ಯುದ್ಧ ಆರಂಭವಾದಾಗಿನಿಂದ, 3,75,000ಕ್ಕೂ ಹೆಚ್ಚು ಭಾರತೀಯರು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. ಇರಾನ್ನಿಂದ ಮಾತ್ರ, 1,000ಕ್ಕೂ ಹೆಚ್ಚು ಭಾರತೀಯರು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ, ಇದರಲ್ಲಿ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ನಮ್ಮ ಸರ್ಕಾರವು ಸಂಪೂರ್ಣ ಸಂವೇದನೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಅಲ್ಲಿರುವ ಭಾರತೀಯರ ಸುರಕ್ಷತೆಯ ಬಗ್ಗೆ ಎಲ್ಲಾ ದೇಶಗಳು ನಮಗೆ ಭರವಸೆ ನೀಡಿವೆ. ಆದಾಗ್ಯೂ, ಕೆಲವು ಭಾರತೀಯರು ದಾಳಿಯಿಂದಾಗಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ, ಕೆಲವರು ಗಾಯಗೊಂಡಿದ್ದಾರೆ ಎಂಬುದು ತೀವ್ರ ದುಃಖಕರವಾಗಿದೆ. ಇಂತಹ ಕಠಿಣ ಸಂದರ್ಭಗಳಲ್ಲಿ, ಅವರ ಕುಟುಂಬಗಳಿಗೆ ಅಗತ್ಯ ಸಹಾಯ ಒದಗಿಸಲಾಗುತ್ತಿದೆ. ಗಾಯಗೊಂಡವರಿಗೆ ಸಾಧ್ಯವಾದಷ್ಟು ಉತ್ತಮ ವೈದ್ಯಕೀಯ ಚಿಕಿತ್ಸೆ ಖಚಿತಪಡಿಸಿಕೊಳ್ಳಲಾಗುತ್ತಿದೆ.
ಗೌರವಾನ್ವಿತ ಸಭಾಪತಿಗಳೆ,
ಹಾರ್ಮುಜ್ ಜಲಸಂಧಿಯು ಜಾಗತಿಕ ವ್ಯಾಪಾರದ ಅತಿದೊಡ್ಡ ಮಾರ್ಗಗಳಲ್ಲಿ ಒಂದಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಕಚ್ಚಾ ತೈಲ, ಅನಿಲ ಮತ್ತು ರಸಗೊಬ್ಬರಗಳ ಸಾಗಣೆಯು ಈ ಪ್ರದೇಶದ ಮೂಲಕ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ. ಯುದ್ಧ ಆರಂಭವಾದಾಗಿನಿಂದ, ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಚಲನೆಯು ಹೆಚ್ಚು ಸವಾಲಿನದ್ದಾಗಿದೆ. ಆದರೂ, ಪ್ರತಿಕೂಲ ಸಂದರ್ಭಗಳ ಹೊರತಾಗಿಯೂ, ನಮ್ಮ ಸರ್ಕಾರವು ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಮಾರ್ಗಗಳನ್ನು ರೂಪಿಸಲು ಪ್ರಯತ್ನಿಸಿದೆ. ಭಾರತಕ್ಕೆ ತೈಲ ಮತ್ತು ಅನಿಲ ಸರಬರಾಜು ಸಾಧ್ಯವಾದಲ್ಲೆಲ್ಲಾ ತಲುಪುವಂತೆ ನೋಡಿಕೊಳ್ಳುವುದು ನಮ್ಮ ಪ್ರಯತ್ನ. ಈ ಪ್ರಯತ್ನಗಳ ಫಲಿತಾಂಶಗಳು ರಾಷ್ಟ್ರಕ್ಕೆ ಗೋಚರಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಅನೇಕ ದೇಶಗಳಿಂದ ಕಚ್ಚಾ ತೈಲ ಮತ್ತು ಎಲ್ಪಿಜಿ ಸಾಗಿಸುವ ಹಡಗುಗಳು ಭಾರತಕ್ಕೆ ಬಂದಿವೆ. ಈ ದಿಕ್ಕಿನಲ್ಲಿ ನಮ್ಮ ಪ್ರಯತ್ನಗಳು ಮುಂಬರುವ ದಿನಗಳಲ್ಲಿಯೂ ಮುಂದುವರಿಯುತ್ತವೆ.
ಸನ್ಮಾನ್ಯ ಸಭಾಪತಿಗಳೆ,
ತೈಲ, ಅನಿಲ ಮತ್ತು ರಸಗೊಬ್ಬರಗಳಂತಹ ಅಗತ್ಯ ವಸ್ತುಗಳನ್ನು ಸಾಗಿಸುವ ಹಡಗುಗಳು ಭಾರತವನ್ನು ಸುರಕ್ಷಿತವಾಗಿ ತಲುಪುವಂತೆ ನೋಡಿಕೊಳ್ಳುವುದು ಭಾರತದ ಪ್ರಯತ್ನವಾಗಿದೆ. ಆದರೆ ಈ ಯುದ್ಧದಿಂದ ಸೃಷ್ಟಿಯಾದ ಜಾಗತಿಕ ಪರಿಸ್ಥಿತಿಗಳು ದೀರ್ಘಕಾಲದವರೆಗೆ ಮುಂದುವರಿದರೆ, ಗಂಭೀರ ಪರಿಣಾಮಗಳು ಅನಿವಾರ್ಯ. ಆದ್ದರಿಂದ, ಭಾರತ ಇತ್ತೀಚಿನ ವರ್ಷಗಳಲ್ಲಿ ಕೈಗೊಂಡ ಚೇತರಿಕೆಯ-ನಿರ್ಮಾಣ ಕ್ರಮಗಳನ್ನು ವೇಗಗೊಳಿಸುತ್ತಿದೆ.
ಸನ್ಮಾನ್ಯ ಸಭಾಪತಿಗಳೆ,
ಪ್ರತಿಯೊಂದು ಬಿಕ್ಕಟ್ಟು ನಮ್ಮ ಧೈರ್ಯ ಮತ್ತು ನಮ್ಮ ಪ್ರಯತ್ನಗಳನ್ನು ಪರೀಕ್ಷಿಸುತ್ತದೆ. ದೇಶವು ಅಂತಹ ಬಿಕ್ಕಟ್ಟುಗಳನ್ನು ಉತ್ತಮವಾಗಿ ಎದುರಿಸಲು ಅನುವು ಮಾಡಿಕೊಡಲು, ಕಳೆದ 11 ವರ್ಷಗಳಲ್ಲಿ ನಿರಂತರ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಇಂಧನ ಆಮದುಗಳ ವೈವಿಧ್ಯೀಕರಣವು ಈ ಪ್ರಯತ್ನಗಳ ಭಾಗವಾಗಿದೆ. ಈ ಹಿಂದೆ ಭಾರತವು 27 ದೇಶಗಳಿಂದ ಕಚ್ಚಾ ತೈಲ, ಎಲ್ಎನ್ಜಿ ಮತ್ತು ಎಲ್ಪಿಜಿ ಆಮದು ಮಾಡಿಕೊಳ್ಳುತ್ತಿತ್ತು. ಇಂದು ಭಾರತವು 41 ದೇಶಗಳಿಂದ ಇಂಧನವನ್ನು ಆಮದು ಮಾಡಿಕೊಳ್ಳುತ್ತಿದೆ. ಕಳೆದ ದಶಕದಲ್ಲಿ ಭಾರತವು ಬಿಕ್ಕಟ್ಟಿನ ಸಮಯಗಳಿಗೆ ಕಚ್ಚಾ ತೈಲ ನಿಕ್ಷೇಪಗಳಿಗೆ ಆದ್ಯತೆ ನೀಡಿದೆ. ನಮ್ಮ ತೈಲ ಕಂಪನಿಗಳು ತುರ್ತು ಪರಿಸ್ಥಿತಿಗಳಿಗಾಗಿ ಪೆಟ್ರೋಲ್ ಮತ್ತು ಡೀಸೆಲ್ನ ಗಮನಾರ್ಹ ನಿಕ್ಷೇಪಗಳನ್ನು ನಿರ್ವಹಿಸುತ್ತವೆ. ಕಳೆದ 11 ವರ್ಷಗಳಲ್ಲಿ, 5.3 ದಶಲಕ್ಷ ಮೆಟ್ರಿಕ್ ಟನ್ಗಳಿಗಿಂತ ಹೆಚ್ಚು ಕಾರ್ಯತಂತ್ರ ಪೆಟ್ರೋಲಿಯಂ ನಿಕ್ಷೇಪಗಳನ್ನು ಅಭಿವೃದ್ಧಿಪಡಿಸಲಾಗಿದೆ, ದೇಶವು 6.5 ದಶಲಕ್ಷ ಮೆಟ್ರಿಕ್ ಟನ್ಗಳಿಗಿಂತ ಹೆಚ್ಚಿನ ನಿಕ್ಷೇಪಗಳ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದೆ. ಇದರ ಜತೆಗೆ, ಕಳೆದ ದಶಕದಲ್ಲಿ ಭಾರತದ ಸಂಸ್ಕರಣಾ ಸಾಮರ್ಥ್ಯವೂ ಗಣನೀಯವಾಗಿ ಹೆಚ್ಚಾಗಿದೆ. ಭಾರತವು ಸಾಕಷ್ಟು ಕಚ್ಚಾ ತೈಲ ಸಂಗ್ರಹ ಮತ್ತು ನಿರಂತರ ಪೂರೈಕೆಗಾಗಿ ವ್ಯವಸ್ಥೆಗಳನ್ನು ಹೊಂದಿದೆ ಎಂದು ನಾನು ನಿಮ್ಮ ಮೂಲಕ ಸದನ ಮತ್ತು ಇಡೀ ರಾಷ್ಟ್ರಕ್ಕೆ ಭರವಸೆ ನೀಡಲು ಬಯಸುತ್ತೇನೆ.
ಗೌರವಾನ್ವಿತ ಸಭಾಪತಿಗಳೆ,
ನಮ್ಮ ಸರ್ಕಾರವು ಯಾವುದೇ ಒಂದು ಇಂಧನ ಮೂಲದ ಮೇಲೆ ಅತಿಯಾದ ಅವಲಂಬನೆ ಇರದಂತೆ ನೋಡಿಕೊಳ್ಳಲು ಶ್ರಮಿಸುತ್ತಿದೆ. ಎಲ್ಪಿಜಿ ಜತೆಗೆ, ದೇಶೀಯ ಅನಿಲ ಪೂರೈಕೆಗಾಗಿ ಪಿಎನ್ ಜಿಗೆ ಒತ್ತು ನೀಡುತ್ತಿದೆ. ಕಳೆದ ದಶಕದಲ್ಲಿ, ಪಿಎನ್ ಜಿ ಸಂಪರ್ಕಗಳನ್ನು ವಿಸ್ತರಿಸಲು ಅಭೂತಪೂರ್ವ ಕೆಲಸ ಮಾಡಲಾಗಿದೆ, ಇತ್ತೀಚಿನ ದಿನಗಳಲ್ಲಿ ಈ ಪ್ರಯತ್ನವನ್ನು ಮತ್ತಷ್ಟು ವೇಗಗೊಳಿಸಲಾಗಿದೆ. ಅದೇ ಸಮಯದಲ್ಲಿ, ಎಲ್ಎನ್ ಜಿಯ ದೇಶೀಯ ಉತ್ಪಾದನೆ ಹೆಚ್ಚಿಸಲು ದೊಡ್ಡ ಪ್ರಪ್ರಯತ್ನಗಳನ್ನು ಮಾಡಲಾಗುತ್ತಿದೆ.
ಗೌರವಾನ್ವಿತ ಸಭಾಪತಿಗಳೆ,
ಇತ್ತೀಚಿನ ವರ್ಷಗಳಲ್ಲಿ ಪ್ರತಿಯೊಂದು ವಲಯದಲ್ಲೂ ಇತರೆ ದೇಶಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ. ಹೆಚ್ಚು ಹೆಚ್ಚು ಸ್ವಾವಲಂಬಿಯಾಗುವುದು ಒಂದೇ ಆಯ್ಕೆಯಾಗಿದೆ. ಉದಾಹರಣೆಗೆ, ಭಾರತದ ತೈಲದ 90%ಗಿಂತ ಹೆಚ್ಚು ವಿದೇಶಿ ಹಡಗುಗಳ ಮೂಲಕ ಬರುತ್ತದೆ, ಇದು ಯಾವುದೇ ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ಭಾರತದ ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸುತ್ತದೆ. ಆದ್ದರಿಂದ, ಸರ್ಕಾರವು ಮೇಡ್ ಇನ್ ಇಂಡಿಯಾ ಹಡಗುಗಳನ್ನು ನಿರ್ಮಿಸಲು ಸುಮಾರು 70,000 ಕೋಟಿ ರೂಪಾಯಿ ಮೊತ್ತದ ಅಭಿಯಾನ ಆರಂಭಿಸಿದೆ. ಭಾರತವು ಈಗ ಹಡಗು ನಿರ್ಮಾಣ, ಹಡಗು ಒಡೆಯುವಿಕೆ, ನಿರ್ವಹಣೆ ಮತ್ತು ಕೂಲಂಕುಷ ಪರೀಕ್ಷೆಗೆ ಸೌಲಭ್ಯಗಳನ್ನು ವೇಗವಾಗಿ ಅಭಿವೃದ್ಧಿಪಡಿಸುತ್ತಿದೆ. ಭಾರತವು ತನ್ನ ರಕ್ಷಣಾ ವಲಯವನ್ನು ಹೆಚ್ಚು ಚೇತರಿಕೆಯಾಗಿಸುತ್ತಿದೆ. ಕಳೆದ ದಶಕದಲ್ಲಿ ಮಾಡಿದ ಪ್ರಯತ್ನಗಳಿಂದಾಗಿ, ಭಾರತವು ಇಂದು ದೇಶೀಯವಾಗಿ ಅಗತ್ಯವಿರುವ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದೆ. ಒಂದು ಕಾಲದಲ್ಲಿ ಭಾರತವು ಜೀವರಕ್ಷಕ ಔಷಧಿಗಳ ಕಚ್ಚಾ ವಸ್ತುಗಳಿಗೆ, ಅಂದರೆ ಎಪಿಐಗಳಿಗೂ ಇತರೆ ದೇಶಗಳ ಮೇಲೆ ಹೆಚ್ಚು ಅವಲಂಬಿತವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲೇ ಸಕ್ರಿಯ ಔಷಧೀಯ ಘಟಕಾಂಶ (ಎಪಿಐ) ಪರಿಸರ ವ್ಯವಸ್ಥೆ ನಿರ್ಮಿಸಲು ದೇಶವು ಅನೇಕ ಪ್ರಯತ್ನಗಳನ್ನು ಮಾಡಿದೆ. ಅದೇ ರೀತಿ, ಅಪರೂಪದ ಭೂಮಿಯ ಖನಿಜಗಳ ಮೇಲಿನ ವಿದೇಶಿ ಅವಲಂಬನೆ ಕಡಿಮೆ ಮಾಡಲು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ಗೌರವಾನ್ವಿತ ಸಭಾಪತಿಗಳೆ,
ಪ್ರಸ್ತುತ ಬಿಕ್ಕಟ್ಟು ಜಾಗತಿಕ ಆರ್ಥಿಕತೆಯನ್ನು ಅಲುಗಾಡಿಸಿದೆ. ಪಶ್ಚಿಮ ಏಷ್ಯಾದಲ್ಲಿ ಈಗಾಗಲೇ ಉಂಟಾಗಿರುವ ಹಾನಿಯಿಂದ ಜಗತ್ತು ಚೇತರಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಭಾರತವು ಸಾಧ್ಯವಾದಷ್ಟು ಕಡಿಮೆ ಪರಿಣಾಮ ಅನುಭವಿಸುವಂತೆ ನೋಡಿಕೊಳ್ಳಲು ನಿರಂತರ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ನಮ್ಮ ಆರ್ಥಿಕತೆಯ ಮೂಲಭೂತ ಅಂಶಗಳು ಪ್ರಬಲವಾಗಿವೆ, ಸರ್ಕಾರವು ವೇಗವಾಗಿ ಬದಲಾಗುತ್ತಿರುವ ಪರಿಸ್ಥಿತಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿಯ ಪರಿಣಾಮಗಳನ್ನು ಪರಿಹರಿಸಲು ಸರ್ಕಾರವು ಒಂದು ಕಾರ್ಯತಂತ್ರದೊಂದಿಗೆ ಕೆಲಸ ಮಾಡುತ್ತಿದೆ. ನಮ್ಮ ಆಮದು ಮತ್ತು ರಫ್ತುಗಳಲ್ಲಿ ಉದ್ಭವಿಸುವ ಪ್ರತಿಯೊಂದು ತೊಂದರೆ ನಿರ್ಣಯಿಸಲು ನಿಯಮಿತವಾಗಿ ಸಭೆ ಸೇರುವ ಮತ್ತು ಅಗತ್ಯ ಪರಿಹಾರಗಳ ಮೇಲೆ ನಿರಂತರವಾಗಿ ಕೆಲಸ ಮಾಡುವ ಅಂತರ-ಸಚಿವಾಲಯ ಗುಂಪನ್ನು ಸಹ ರಚಿಸಲಾಗಿದೆ. ಸಾಂಕ್ರಾಮಿಕ ರೋಗದ ಸಮಯದಲ್ಲಿ ವಿವಿಧ ವಲಯಗಳಲ್ಲಿನ ಸವಾಲುಗಳನ್ನು ನಿಭಾಯಿಸಲು ತಜ್ಞರು ಮತ್ತು ಅಧಿಕಾರಿಗಳ ಸಬಲೀಕೃತ ಗುಂಪುಗಳನ್ನು ರಚಿಸಿದಂತೆಯೇ, ನಿನ್ನೆ 7 ಹೊಸ ಸಬಲೀಕೃತ ಗುಂಪುಗಳನ್ನು ಸಹ ರಚಿಸಲಾಗಿದೆ. ಈ ಗುಂಪುಗಳು ಪೂರೈಕೆ ಸರಪಳಿಗಳು, ಪೆಟ್ರೋಲ್ ಮತ್ತು ಡೀಸೆಲ್, ರಸಗೊಬ್ಬರಗಳು, ಅನಿಲ ಮತ್ತು ಹಣದುಬ್ಬರದಂತಹ ವಿಷಯಗಳ ಮೇಲೆ ತ್ವರಿತವಾಗಿ ಮತ್ತು ಕಾರ್ಯತಂತ್ರವಾಗಿ ಕಾರ್ಯ ನಿರ್ವಹಿಸುತ್ತವೆ. ಈ ಸಾಮೂಹಿಕ ಪ್ರಯತ್ನಗಳ ಮೂಲಕ, ನಾವು ಸಂದರ್ಭಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸ ನನಗಿದೆ.
ಸನ್ಮಾನ್ಯ ಸಭಾಪತಿಗಳೆ,
ಮುಂಬರುವ ಬಿತ್ತನೆ ಹಂಗಾಮಿನಲ್ಲಿ ರೈತರಿಗೆ ಸಾಕಷ್ಟು ರಸಗೊಬ್ಬರ ದೊರೆಯುವಂತೆ ನೋಡಿಕೊಳ್ಳಲು ಸರ್ಕಾರವು ಕೆಲಸ ಮಾಡುತ್ತಿದೆ. ರಸಗೊಬ್ಬರಗಳ ಸಾಕಷ್ಟು ಪೂರೈಕೆಗೆ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ. ರೈತರು ಯಾವುದೇ ಬಿಕ್ಕಟ್ಟಿನ ಹೊರೆ ಹೊರಬಾರದು ಎಂಬುದು ಸರ್ಕಾರದ ನಿರಂತರ ಪ್ರಯತ್ನವಾಗಿದೆ. ಪ್ರತಿಯೊಂದು ಸವಾಲಿಗೂ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಸರ್ಕಾರವು ಅವರೊಂದಿಗೆ ನಿಲ್ಲುತ್ತದೆ ಎಂದು ನಾನು ಮತ್ತೊಮ್ಮೆ ದೇಶದ ರೈತರಿಗೆ ಭರವಸೆ ನೀಡುತ್ತೇನೆ.
ಸನ್ಮಾನ್ಯ ಸಭಾಪತಿಗಳೆ,
ಇದು ರಾಜ್ಯಗಳಿಗೆ ಸೇರಿದ ಸದನ. ಮುಂಬರುವ ದಿನಗಳಲ್ಲಿ ಈ ಬಿಕ್ಕಟ್ಟು ನಮ್ಮ ದೇಶಕ್ಕೆ ಒಂದು ಪ್ರಮುಖ ಪರೀಕ್ಷೆಯಾಗಲಿದ, ಈ ನಿಟ್ಟಿನಲ್ಲಿ ರಾಜ್ಯಗಳ ಸಹಕಾರವು ಯಶಸ್ಸಿಗೆ ನಿರ್ಣಾಯಕವಾಗಿರುತ್ತದೆ. ಆದ್ದರಿಂದ, ಈ ಸದನದ ಮೂಲಕ ಎಲ್ಲಾ ರಾಜ್ಯ ಸರ್ಕಾರಗಳಿಗೆ ನಾನು ಕೆಲವು ಮನವಿಗಳನ್ನು ಮಾಡಲು ಬಯಸುತ್ತೇನೆ. ಬಿಕ್ಕಟ್ಟಿನ ಸಮಯದಲ್ಲಿ ಬಡವರು, ಕಾರ್ಮಿಕರು ಮತ್ತು ವಲಸಿಗರಿಗೆ ಹೆಚ್ಚಿನ ಪರಿಣಾಮ ಬೀರುತ್ತದೆ. ಆದ್ದರಿಂದ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಪ್ರಯೋಜನಗಳು ಅವರಿಗೆ ಸಮಯಕ್ಕೆ ಸರಿಯಾಗಿ ತಲುಪುವಂತೆ ನೋಡಿಕೊಳ್ಳಬೇಕು. ವಲಸೆ ಕಾರ್ಮಿಕರು ಕೆಲಸ ಮಾಡುತ್ತಿರುವಲ್ಲೆಲ್ಲಾ ಅವರ ತೊಂದರೆಗಳನ್ನು ನಿವಾರಿಸಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಂತಹ ಸಂದರ್ಭಗಳನ್ನು ಮೇಲ್ವಿಚಾರಣೆ ಮಾಡಲು ರಾಜ್ಯ ಸರ್ಕಾರಗಳು ವಿಶೇಷ ವ್ಯವಸ್ಥೆಗಳನ್ನು ಮಾಡಿದರೆ, ಅದು ಗಮನಾರ್ಹ ಪರಿಹಾರವನ್ನು ನೀಡುತ್ತದೆ. ರಾಜ್ಯ ಸರ್ಕಾರಗಳು ಮತ್ತೊಂದು ಸವಾಲಿನ ಬಗ್ಗೆಯೂ ಹೆಚ್ಚು ಗಮನ ಹರಿಸಬೇಕು: ಅಂತಹ ಸಮಯದಲ್ಲಿ, ಕಾಳಸಂತೆಕೋರರು ಮತ್ತು ದಾಸ್ತಾನುದಾರರು ತುಂಬಾ ಸಕ್ರಿಯರಾಗುತ್ತಾರೆ. ಅಂತಹ ದೂರುಗಳು ಬಂದಲ್ಲೆಲ್ಲಾ ತಕ್ಷಣ ಕ್ರಮ ಕೈಗೊಳ್ಳಬೇಕು. ಅಗತ್ಯ ವಸ್ತುಗಳ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವುದು ಪ್ರತಿಯೊಂದು ರಾಜ್ಯದ ಪ್ರಮುಖ ಆದ್ಯತೆಯಾಗಿರಬೇಕು.
ಸನ್ಮಾನ್ಯ ಸಭಾಪತಿಗಳೆ,
ನಾನು ಎಲ್ಲಾ ರಾಜ್ಯ ಸರ್ಕಾರಗಳಿಗೆ ಮತ್ತೊಂದು ಮನವಿ ಮಾಡಲು ಬಯಸುತ್ತೇನೆ. ಬಿಕ್ಕಟ್ಟು ಎಷ್ಟೇ ತೀವ್ರವಾಗಿದ್ದರೂ, ಭಾರತದ ತ್ವರಿತ ಬೆಳವಣಿಗೆಯನ್ನು ಕಾಯ್ದುಕೊಳ್ಳುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ. ಇದಕ್ಕಾಗಿ ಪ್ರತಿಯೊಂದು ಅಗತ್ಯ ಹೆಜ್ಜೆ ಮತ್ತು ಪ್ರತಿಯೊಂದು ಅಗತ್ಯ ಸುಧಾರಣೆಯನ್ನು ತ್ವರಿತವಾಗಿ ಕೈಗೊಳ್ಳಬೇಕು. ಇದು ರಾಜ್ಯ ಸರ್ಕಾರಗಳಿಗೂ ಒಂದು ಉತ್ತಮ ಅವಕಾಶವಾಗಿದೆ. ಇದು ಟೀಮ್ ಇಂಡಿಯಾಗೆ ಒಂದು ಪ್ರಮುಖ ಪರೀಕ್ಷೆಯಾಗಿದೆ. ಸಾಂಕ್ರಾಮಿಕ ರೋಗದ ಮಹಾ ಬಿಕ್ಕಟ್ಟಿನ ಸಮಯದಲ್ಲಿ, ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಕೋವಿಡ್ ನಿರ್ವಹಣೆಯ ಅತ್ಯುತ್ತಮ ಮಾದರಿಯನ್ನು ಪ್ರಸ್ತುತಪಡಿಸಿದವು. ವಿವಿಧ ರಾಜಕೀಯ ಪಕ್ಷಗಳ ಸರ್ಕಾರಗಳ ಹೊರತಾಗಿಯೂ ಪರೀಕ್ಷೆ, ಲಸಿಕೆ ನೀಡಿಕೆ ಮತ್ತು ಅಗತ್ಯ ವಸ್ತುಗಳ ಪೂರೈಕೆಯನ್ನು ಟೀಮ್ ಇಂಡಿಯಾದ ಪ್ರಯತ್ನಗಳ ಮೂಲಕ ಖಚಿತಪಡಿಸಿಕೊಳ್ಳಲಾಯಿತು. ನಾವು ಅದೇ ಉತ್ಸಾಹದಲ್ಲಿ ಕೆಲಸ ಮಾಡುವುದನ್ನು ಮುಂದುವರಿಸಬೇಕು. ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರದ ಸಂಯೋಜಿತ ಪ್ರಯತ್ನಗಳೊಂದಿಗೆ, ದೇಶವು ಈ ಗಂಭೀರ ಜಾಗತಿಕ ಬಿಕ್ಕಟ್ಟನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯವಾಗುತ್ತದೆ.
ಸನ್ಮಾನ್ಯ ಸಭಾಪತಿಗಳೆ,
ಈ ಬಿಕ್ಕಟ್ಟು ವಿಭಿನ್ನ ಸ್ವರೂಪದ್ದಾಗಿದೆ, ಅದರ ಪರಿಹಾರಗಳನ್ನು ಸಹ ವಿಭಿನ್ನ ರೀತಿಯಲ್ಲಿ ನಿರ್ಧರಿಸಲಾಗುತ್ತಿದೆ. ನಾವು ಪ್ರತಿಯೊಂದು ಸವಾಲನ್ನು ತಾಳ್ಮೆ, ಸಂಯಮ ಮತ್ತು ಶಾಂತ ಮನಸ್ಸಿನಿಂದ ಎದುರಿಸಬೇಕು.
ಸನ್ಮಾನ್ಯ ಸಭಾಪತಿಗಳೆ,
ನಾವು ನೋಡುವಂತೆ, ಈ ಯುದ್ಧದ ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಬದಲಾಗುತ್ತಿದೆ. ಆದ್ದರಿಂದ, ನಾನು ನನ್ನ ಒಡನಾಡಿ ನಾಗರಿಕರಿಗೆ ಹೇಳುವುದೇನೆಂದರೆ, ನಾವು ಪ್ರತಿಯೊಂದು ಸವಾಲಿಗೂ ಸಿದ್ಧರಾಗಿರಬೇಕು. ಈ ಯುದ್ಧದ ಪ್ರತಿಕೂಲ ಪರಿಣಾಮಗಳು ದೀರ್ಘಕಾಲ ಉಳಿಯುವ ಸಾಧ್ಯತೆಯಿದೆ. ಆದರೆ ಸರ್ಕಾರವು ಜಾಗರೂಕವಾಗಿದೆ, ಸಿದ್ಧವಾಗಿದೆ ಮತ್ತು ಕಾರ್ಯತಂತ್ರದ ಬಗ್ಗೆ ಸಂಪೂರ್ಣ ಗಂಭೀರತೆಯಿಂದ ಕೆಲಸ ಮಾಡುತ್ತದೆ, ಪ್ರತಿಯೊಂದು ಅಗತ್ಯ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ನಾನು ದೇಶದ ಜನರಿಗೆ ಭರವಸೆ ನೀಡುತ್ತೇನೆ. ಜನರ ಕಲ್ಯಾಣವು ನಮಗೆ ಅತ್ಯುನ್ನತವಾಗಿದೆ. ಇದು ನಮ್ಮ ಗುರುತು, ಇದು ನಮ್ಮ ಶಕ್ತಿಯೂ ಆಗಿದೆ. ಈ ಮನೋಭಾವದಿಂದ, ನಾನು ನನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತೇನೆ.
ತುಂಬು ಧನ್ಯವಾದಗಳು!
*****
(ಪ್ರಕಟಣೆ ಐ.ಡಿ.: 2244790)
ವಿಸಿಟರ್ ಕೌಂಟರ್ : 9