ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳ ಕುರಿತು ಅಂತರ-ಸಚಿವಾಲಯ ಮಾಧ್ಯಮಗೋಷ್ಠಿ


ಪೆಟ್ರೋಲ್ ಮತ್ತು ಡೀಸೆಲ್‌ ನ ಸಾಕಷ್ಟು ದಾಸ್ತಾನು ಲಭ್ಯವಿರುವುದರಿಂದ ಸಾರ್ವಜನಿಕರು ಗಾಬರಿಯಿಂದ ವಸ್ತುಗಳನ್ನು ಖರೀದಿಸದಂತೆ ಸರ್ಕಾರ ಸಲಹೆ ನೀಡಿದೆ


ಎಲ್‌ ಪಿ ಜಿ ಸಿಲಿಂಡರ್‌ ಗಳ ಸಂಗ್ರಹಣೆ ಮತ್ತು ಕಪ್ಪು ಮಾರುಕಟ್ಟೆಯನ್ನು ತಡೆಯಲು ತಳಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ


ಭಾರತದಾದ್ಯಂತ ಬಂದರು ಕಾರ್ಯಾಚರಣೆಗಳು ಸ್ಥಿರವಾಗಿವೆ


ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯವು ಪರ್ಷಿಯನ್ ಕೊಲ್ಲಿಯ ಕಡಲ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ


ಪಶ್ಚಿಮ ಏಷ್ಯಾದ ದೇಶಗಳೊಂದಿಗೆ ಭಾರತ ಸರ್ಕಾರವು ತನ್ನ ಸಂವಹನ ಮತ್ತು ಮಾತುಕತೆಗಳನ್ನು ಮುಂದುವರಿಸಿದೆ


ಅಧಿಕೃತ ಆನ್‌ಲೈನ್ ವೇದಿಕೆಗಳ ಮೂಲಕ ಎಲ್‌ ಪಿ ಜಿ ಸಿಲಿಂಡರ್‌ ಗಳನ್ನು ಕಾಯ್ದಿರಿಸುವಂತೆ ನಾಗರಿಕರಿಗೆ ಮನವಿ ಮಾಡಲಾಗಿದೆ

ಪ್ರಕಟಣಾ ದಿನಾಂಕ: 13 MAR 2026 6:40PM by PIB Bengaluru

ಪಶ್ಚಿಮ ಏಷ್ಯಾದಲ್ಲಿನ ಬೆಳವಣಿಗೆಗಳ ಕುರಿತು ಭಾರತ ಸರ್ಕಾರವು ಇಂದು ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಮೂರನೇ ಅಂತರ-ಸಚಿವಾಲಯ ಮಾಧ್ಯಮ ಗೋಷ್ಠಿಯನ್ನು ನಡೆಸಿತು. ವಿವಿಧ ಸಚಿವಾಲಯಗಳು ಕೈಗೊಳ್ಳುತ್ತಿರುವ ಸಿದ್ಧತಾ ಕ್ರಮಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಲು ಈ ಹಿಂದೆ ಮಾರ್ಚ್ 11 ಮತ್ತು ಮಾರ್ಚ್ 12, 2026 ರಂದು ಪತ್ರಿಕಾಗೋಷ್ಠಿಗಳನ್ನು ನಡೆಸಲಾಗಿತ್ತು. ಇಂದಿನ ಸಭೆಯಲ್ಲಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಅಧಿಕಾರಿಗಳು ಪ್ರಚಲಿತ ಪರಿಸ್ಥಿತಿ ಮತ್ತು ಸರ್ಕಾರವು ತೆಗೆದುಕೊಳ್ಳುತ್ತಿರುವ ಸಮನ್ವಯ ಕ್ರಮಗಳ ಕುರಿತು ಹೆಚ್ಚಿನ ಮಾಹಿತಿಗಳನ್ನು ಒದಗಿಸಿದರು. ಈ ಮಾಧ್ಯಮ ಗೋಷ್ಠಿಯು ಇಂಧನ ಪೂರೈಕೆಯ ಸಿದ್ಧತೆ, ಕಡಲ ಸುರಕ್ಷತೆ ಮತ್ತು ಹಡಗು ಕಾರ್ಯಾಚರಣೆಗಳು, ಈ ಪ್ರದೇಶದಲ್ಲಿನ ಭಾರತೀಯ ನಾಗರಿಕರ ಕಲ್ಯಾಣ, ಮತ್ತು ಸಾರ್ವಜನಿಕ ಸಂವಹನ ಹಾಗೂ ಅಗತ್ಯ ವಸ್ತುಗಳ ಪೂರೈಕೆಯ ಮೇಲ್ವಿಚಾರಣೆಯ ಅಂಶಗಳನ್ನು ಒಳಗೊಂಡಿತ್ತು.

ಇಂಧನ ಪೂರೈಕೆ ಮತ್ತು ಇಂಧನ ಲಭ್ಯತೆ

ಚಾಲ್ತಿಯಲ್ಲಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿ ಮತ್ತು ಹಾರ್ಮುಜ್ ಜಲಸಂಧಿಯ ಮುಚ್ಚುವಿಕೆಯಿಂದಾಗಿ ಪೂರೈಕೆಯಲ್ಲಿನ ಕಳವಳಗಳ ನಡುವೆಯೂ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್‌ ಪಿ ಜಿ ಸತತ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಳ್ಳಲಾದ ಕ್ರಮಗಳ ಬಗ್ಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಧಿಕಾರಿಯು ಮಾಧ್ಯಮಗಳಿಗೆ ವಿವರಿಸಿದರು. ಸಚಿವಾಲಯದ ಪ್ರಕಾರ:

ಕಚ್ಚಾ ತೈಲ

· ಭಾರತವು ಪ್ರಸ್ತುತ ಸುಮಾರು 258 MMTPA ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿದೆ ಮತ್ತು ವಿಶ್ವದ 4ನೇ ಅತಿ ದೊಡ್ಡ ಸಂಸ್ಕರಣಾ ಕೇಂದ್ರವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಉತ್ಪಾದನೆಯಲ್ಲಿ ದೇಶವು ಸ್ವಾವಲಂಬಿಯಾಗಿದ್ದು, ದೇಶೀಯ ಬೇಡಿಕೆಯನ್ನು ಪೂರೈಸಲು ಪೆಟ್ರೋಲ್ ಮತ್ತು ಡೀಸೆಲ್ ಆಮದು ಮಾಡಿಕೊಳ್ಳುವ ಅಗತ್ಯವಿಲ್ಲ.

· ಎಲ್ಲಾ ಸಂಸ್ಕರಣಾಗಾರಗಳು ಪ್ರಸ್ತುತ ಹೆಚ್ಚಿನ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ, ಅವುಗಳಲ್ಲಿ ಕೆಲವು ಶೇ.100 ಕ್ಕಿಂತ ಹೆಚ್ಚಿನ ಸಾಮರ್ಥ್ಯದಲ್ಲಿ ಕೆಲಸ ಮಾಡುತ್ತಿವೆ.

· ಎಲ್ಲಾ ಭಾರತೀಯ ಸಂಸ್ಕರಣಾಗಾರಗಳು ಪ್ರಸ್ತುತ ಸಾಕಷ್ಟು ಕಚ್ಚಾ ತೈಲ ದಾಸ್ತಾನುಗಳನ್ನು ನಿರ್ವಹಿಸುತ್ತಿವೆ ಮತ್ತು ವೈವಿಧ್ಯಮಯ ಆಮದು ಮೂಲಗಳು ಹಾಗೂ ಹಡಗು ಮಾರ್ಗಗಳ ಮೂಲಕ ಪೂರೈಕೆಯನ್ನು ಸತತವಾಗಿ ಪಡೆಯಲಾಗುತ್ತಿದೆ.

ನೈಸರ್ಗಿಕ ಅನಿಲ

· ಸರ್ಕಾರವು ಈಗಾಗಲೇ 9 ಮಾರ್ಚ್ 2026 ರಂದು ಅಗತ್ಯ ವಸ್ತುಗಳ ಕಾಯಿದೆಯಡಿ ನೈಸರ್ಗಿಕ ಅನಿಲ ನಿಯಂತ್ರಣ ಆದೇಶವನ್ನು ಹೊರಡಿಸಿದೆ, ಇದರಲ್ಲಿ ಪಿ ಎನ್‌ ಜಿ ಮತ್ತು ಸಿ ಎನ್‌ ಜಿ ಗೆ ಯಾವುದೇ ಕಡಿತವಿಲ್ಲದೆ ಶೇ.100 ರಷ್ಟು ಪೂರೈಕೆ ಸೇರಿದಂತೆ ಆದ್ಯತೆಯ ವಲಯಗಳಿಗೆ ಪೂರೈಕೆಯನ್ನು ರಕ್ಷಿಸಲಾಗಿದೆ. ಆದ್ದರಿಂದ, ಗಾಬರಿಯಾಗುವ ಅಗತ್ಯವಿಲ್ಲ. ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರಿಗೆ ಪೂರೈಕೆಯನ್ನು ಶೇ.80ಕ್ಕೆ ನಿಯಂತ್ರಿಸಲಾಗುತ್ತಿದೆ.

· ದೇಶೀಯ ಪಿ ಎನ್‌ ಜಿ ವಿಭಾಗದಾದ್ಯಂತ ಪ್ರತಿದಿನ ಸುಮಾರು 3.73 MMSCM ಅನಿಲವನ್ನು ಬಳಕೆ ಮಾಡಲಾಗುತ್ತಿದೆ, ಇದಕ್ಕಾಗಿ ಭೌಗೋಳಿಕ ಪ್ರದೇಶಗಳಾದ್ಯಂತ ಸಾಕಷ್ಟು ಅನಿಲ ಪೂರೈಕೆ ಲಭ್ಯವಿದೆ.

· ಭಾರತದಲ್ಲಿ 1.5 ಕೋಟಿಗೂ ಹೆಚ್ಚು ಪಿ ಎನ್‌ ಜಿ ಮನೆಗಳು ಪ್ರಸ್ತುತ ತಮ್ಮ ಮನೆಗಳಲ್ಲಿ ನೈಸರ್ಗಿಕ ಅನಿಲ ಸೇವೆಯನ್ನು ಪಡೆಯುತ್ತಿವೆ ಮತ್ತು ಯಾವುದೇ ಅಡೆತಡೆಗಳಿಲ್ಲದೆ ಸೇವೆಯನ್ನು ಪಡೆಯುವುದನ್ನು ಮುಂದುವರಿಸುತ್ತವೆ. ಪ್ರಚಲಿತ ಭೌಗೋಳಿಕ ರಾಜಕೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ದೇಶೀಯ ಎಲ್‌ ಪಿ ಜಿ ಸಿಲಿಂಡರ್‌ ಗಳನ್ನು ಉಳಿಸಲು ವಸತಿ ಗ್ರಾಹಕರು ದೇಶೀಯವಾಗಿ ಪೂರೈಕೆಯಾಗುವ ಪಿ ಎನ್‌ ಜಿ ಬಳಕೆಯನ್ನು ಉತ್ತೇಜಿಸುವುದು ಸೂಕ್ತವಾಗಿದೆ. ಉಳಿಸಿದ ಎಲ್‌ ಪಿ ಜಿ ಸಿಲಿಂಡರ್‌ ಗಳನ್ನು ಪಿ ಎನ್‌ ಜಿ ಸಂಪರ್ಕ ಲಭ್ಯವಿಲ್ಲದ ಇತರ ಗ್ರಾಹಕ ಪ್ರದೇಶಗಳಿಗೆ ಬಳಸಲು ತಿರುಗಿಸಬಹುದು.

· ಲಭ್ಯವಿರುವ ದತ್ತಾಂಶದ ಪ್ರಕಾರ, ದೇಶಾದ್ಯಂತ ಸುಮಾರು 60 ಲಕ್ಷ ಕುಟುಂಬಗಳು ತಮ್ಮ ಸಮೀಪದಲ್ಲಿ ಪಿ ಎನ್‌ ಜಿ ಸಂಪರ್ಕದ ಪ್ರವೇಶವನ್ನು ಹೊಂದಿವೆ; ಆದಾಗ್ಯೂ, ಅವರು ಪ್ರಸ್ತುತ ಪಿ ಎನ್‌ ಜಿ ಪೂರೈಕೆಯನ್ನು ಪಡೆಯುತ್ತಿಲ್ಲ.

· ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ, ಅಂತಹ ಎಲ್‌ ಪಿ ಜಿ ಗ್ರಾಹಕರು ತಮ್ಮ ಅಡುಗೆ ಅಗತ್ಯಗಳಿಗಾಗಿ ಎಲ್‌ ಪಿ ಜಿ ಸಿಲಿಂಡರ್‌ ಗಳಿಂದ ದೇಶೀಯ ಪಿ ಎನ್‌ ಜಿಗೆ ಬದಲಾಗಲು ಸಲಹೆ ನೀಡಲಾಗಿದೆ.

· ಎಲ್‌ ಪಿ ಜಿ ಪೂರೈಕೆಯ ಕಳವಳಗಳನ್ನು ನಿವಾರಿಸಲು, ದೇಶದ ಪ್ರಮುಖ ನಗರ ಕೇಂದ್ರಗಳಲ್ಲಿ ಅಧಿಕೃತವಾಗಿರುವ ವಿವಿಧ ನಗರ ಅನಿಲ ವಿತರಣಾ (ಸಿಜಿಡಿ) ಘಟಕಗಳೊಂದಿಗೆ ಸರ್ಕಾರವು ಚರ್ಚಿಸುತ್ತಿದ್ದು, ಈ ನಗರ ಕೇಂದ್ರಗಳಲ್ಲಿ ಪೀಡಿತ ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ತಕ್ಷಣವೇ ಹೊಸ ಪಿ ಎನ್‌ ಜಿ ಸಂಪರ್ಕಗಳನ್ನು ನೀಡಲು ಸೂಚಿಸಿದೆ. ಪೈಪ್‌ಲೈನ್ ಅಳವಡಿಕೆಗೆ ಸಂಬಂಧಿಸಿದ ಅನುಮತಿ ವಿನಂತಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಎಲ್ಲಾ ಸಂಬಂಧಿತ ಸ್ಥಳೀಯ ಸಂಸ್ಥೆಗಳು, ಹೆದ್ದಾರಿ ಪ್ರಾಧಿಕಾರಗಳು ಮತ್ತು ರಾಜ್ಯ ಸರ್ಕಾರಗಳಿಗೆ ಸರ್ಕಾರವು ವಿನಂತಿಸಿದೆ. ಇದು ಪ್ರಗತಿಪರ ಹೆಜ್ಜೆಯಾಗಿದ್ದು ಮತ್ತು ವಿಶಾಲ ಗುರಿಗಳನ್ನು ಸಾಧಿಸುವ ದಿಕ್ಕಿನಲ್ಲಿ ಸಹಕಾರಿಯಾಗಲಿದೆ.

· ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರು ಹೊಸ ಸಂಪರ್ಕವನ್ನು ಪಡೆಯಲು ತಮ್ಮ ಸ್ಥಳೀಯ ನಗರ ಅನಿಲ ವಿತರಣಾ ಕಂಪನಿಯನ್ನು ಸಂಪರ್ಕಿಸಬೇಕು.

ಚಿಲ್ಲರೆ ಮಾರಾಟ ಮಳಿಗೆಗಳು

· ತೈಲ ಮಾರುಕಟ್ಟೆ ಕಂಪನಿಗಳ 1 ಲಕ್ಷ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಇಂಧನ ಖಾಲಿಯಾದ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಸಾಕಷ್ಟು ಪ್ರಮಾಣದ ಪೆಟ್ರೋಲ್ ಮತ್ತು ಡೀಸೆಲ್ ದಾಸ್ತಾನು ಲಭ್ಯವಿರುವುದರಿಂದ ಮತ್ತು ಪೂರೈಕೆಯನ್ನು ನಿಯಮಿತವಾಗಿ ನಿರ್ವಹಿಸಲಾಗುತ್ತಿರುವುದರಿಂದ ಸಾರ್ವಜನಿಕರು ಗಾಬರಿಯಿಂದ ವಸ್ತುಗಳನ್ನು ಖರೀದಿಸದಂತೆ ಸರ್ಕಾರ ಸಲಹೆ ನೀಡಿದೆ.

· ಇತ್ತೀಚೆಗೆ, ತಮಿಳುನಾಡಿನಲ್ಲಿ ಒಂದು ಚಿಲ್ಲರೆ ಮಾರಾಟ ಮಳಿಗೆಯಲ್ಲಿ ಬಿಡಿ ಕಂಟೈನರ್‌ ಗಳಲ್ಲಿ ಇಂಧನವನ್ನು ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಪತ್ತೆಯಾದ ತಕ್ಷಣ, ಸಂಬಂಧಿತ ಮಳಿಗೆಯಲ್ಲಿ ಮಾರಾಟವನ್ನು ತಕ್ಷಣವೇ ಸ್ಥಗಿತಗೊಳಿಸಲಾಗಿದೆ. ಕಂಟೈನರ್‌ ಗಳಲ್ಲಿ ಪೆಟ್ರೋಲ್/ಡೀಸೆಲ್ ಕೇಳದಂತೆ ಸಾರ್ವಜನಿಕರಿಗೆ ಸಲಹೆ ನೀಡಲಾಗಿದೆ, ಏಕೆಂದರೆ ಇದು ಅಸುರಕ್ಷಿತವಾಗಿದೆ ಮತ್ತು ನಿಯಮಗಳಿಗೆ ವಿರುದ್ಧವಾಗಿದೆ.

· ಎಲ್ಲಾ ಚಿಲ್ಲರೆ ಮಾರಾಟ ಮಳಿಗೆಯ ವಿತರಕರಿಗೆ ಇಂಧನ ವಿತರಿಸುವಾಗ ಎಲ್ಲಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶಿಸಲಾಗಿದೆ. ಯಾವುದೇ ಉಲ್ಲಂಘನೆಯು ಕಠಿಣ ಕ್ರಮವನ್ನು ಆಹ್ವಾನಿಸುತ್ತದೆ.

ಎಲ್‌ ಪಿ ಜಿ

· ದೇಶೀಯ ಎಲ್‌ ಪಿ ಜಿ ಪೂರೈಕೆಗಾಗಿ ದೇಶದ ಯಾವುದೇ 25,000 ಎಲ್‌ ಪಿ ಜಿ ವಿತರಣಾ ಕೇಂದ್ರಗಳಲ್ಲಿ ದಾಸ್ತಾನು ಖಾಲಿಯಾದ ಪರಿಸ್ಥಿತಿಯ ಬಗ್ಗೆ ವರದಿಯಾಗಿಲ್ಲ.

· ಗಾಬರಿಯ ಖರೀದಿಯಿಂದಾಗಿ ಎಲ್‌ ಪಿ ಜಿ ಬುಕಿಂಗ್‌ ಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ.

· ದೈನಂದಿನ ಬುಕಿಂಗ್ ಸರಾಸರಿ 55.7 ಲಕ್ಷದಿಂದ ನಿನ್ನೆ 76 ಲಕ್ಷಕ್ಕೆ ಏರಿದೆ.

· ತೈಲ ಮಾರುಕಟ್ಟೆ ಕಂಪನಿಗಳು ಪ್ರತಿದಿನ ಸುಮಾರು 50 ಲಕ್ಷ ಎಲ್‌ ಪಿ ಜಿ ಸಿಲಿಂಡರ್‌ ಗಳನ್ನು ವಿತರಿಸುತ್ತಿವೆ. ಎಲ್ಲಾ ಗ್ರಾಹಕರು ಗಾಬರಿಯಿಂದ ಬುಕಿಂಗ್ ಮಾಡದಂತೆ ವಿನಂತಿಸಲಾಗಿದೆ.

· ದೂರುಗಳನ್ನು ಸ್ವೀಕರಿಸಲು ಸಾರ್ವಜನಿಕ ವಲಯದ ತೈಲ ಕಂಪನಿಗಳ ಕಾಲ್ ಸೆಂಟರ್‌ ಗಳನ್ನು ಮತ್ತಷ್ಟು ಬಲಪಡಿಸಲಾಗಿದೆ. ಕಾಲ್ ಸೆಂಟರ್‌ ನಲ್ಲಿ ಆಸನಗಳ ಸಂಖ್ಯೆಯನ್ನು 400 ಕ್ಕೆ ಮತ್ತು ಟೆಲಿಫೋನ್ ಲೈನ್‌ ಗಳ ಸಂಖ್ಯೆಯನ್ನು 650 ಕ್ಕೆ ಹೆಚ್ಚಿಸಲಾಗಿದೆ. ಈ ವರ್ಧಿತ ಸೌಲಭ್ಯಗಳೊಂದಿಗೆ ಕರೆ ವಿಫಲತೆಯ ದರವು ಶೂನ್ಯದ ಹತ್ತಿರವಿರುತ್ತದೆ.

· ಎಲ್‌ ಪಿ ಜಿ ಸಿಲಿಂಡರ್‌ ಗಳ ಸಂಗ್ರಹಣೆ ಮತ್ತು ಕಪ್ಪು ಮಾರುಕಟ್ಟೆಯನ್ನು ತಡೆಯಲು ತಳಮಟ್ಟದಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. ಹಲವಾರು ಪ್ರಕರಣಗಳು ವರದಿಯಾಗಿವೆ.

· ಸರಬರಾಜು ಪರಿಸ್ಥಿತಿಯನ್ನು ಪರಿಶೀಲಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಅವರು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಆಹಾರ ಮತ್ತು ನಾಗರಿಕ ಸರಬರಾಜು ಕಾರ್ಯದರ್ಶಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ.

· ಎಲ್‌ ಪಿ ಜಿ ಸೇರಿದಂತೆ ಪೆಟ್ರೋಲಿಯಂ ಉತ್ಪನ್ನಗಳ ಸಂಗ್ರಹಣೆ ಮತ್ತು ಕಪ್ಪು ಮಾರುಕಟ್ಟೆಯನ್ನು ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ/ಕೇಂದ್ರಾಡಳಿತ ಸರ್ಕಾರಗಳು ಮತ್ತು ಜಿಲ್ಲಾಡಳಿತಗಳಿಗೆ ವಿನಂತಿಸಲಾಗಿದೆ. ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಮುಖ್ಯಮಂತ್ರಿಗಳು ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ ಮತ್ತು ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧೀಕ್ಷಕರಿಗೆ ಸೂಚನೆಗಳನ್ನು ನೀಡಿದ್ದಾರೆ.

· ಹಲವು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ನಿಯಂತ್ರಣ ಕೊಠಡಿಗಳನ್ನು ತೆರೆದಿವೆ ಮತ್ತು ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ಕೆಲವು ರಾಜ್ಯಗಳು ಪ್ರತಿದಿನ ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿವೆ.

· ಹಿರಿಯ ಅಧಿಕಾರಿಯೊಬ್ಬರು ಕೆಲವು ಪ್ರಕರಣಗಳ ಉದಾಹರಣೆಗಳನ್ನು ಮತ್ತು ರಾಜ್ಯ ಸರ್ಕಾರಗಳು ಕೈಗೊಂಡ ಕ್ರಮಗಳನ್ನು ಹಂಚಿಕೊಂಡಿದ್ದಾರೆ. ಎಲ್‌ ಪಿ ಜಿ ಸಿಲಿಂಡರ್‌ ಗಳ ದುರುಪಯೋಗ ಮತ್ತು ಅಕ್ರಮ ಬಳಕೆಯನ್ನು ತಡೆಯಲು ರಾಜ್ಯ ಸರ್ಕಾರಗಳು ಜಾರಿ ಕ್ರಮಗಳನ್ನು ಕೈಗೊಂಡಿವೆ, ಇದರಲ್ಲಿ ಝಾನ್ಸಿ (ಉತ್ತರ ಪ್ರದೇಶ) ಯಲ್ಲಿ 524 ಕದ್ದ ಸಿಲಿಂಡರ್‌ ಗಳ ವಶಪಡಿಸಿಕೊಳ್ಳುವಿಕೆ, ಹಾಪುರ್ (ಉತ್ತರ ಪ್ರದೇಶ) ನಲ್ಲಿ 32 ಸಿಲಿಂಡರ್‌ ಗಳು, ಕರ್ನಾಟಕದ ಹೋಟೆಲ್‌ ಗಳಿಂದ 46 ಸಿಲಿಂಡರ್‌ ಗಳು ಮತ್ತು ಛತ್ತರ್‌ಪುರ (ಮಧ್ಯಪ್ರದೇಶ) ದಲ್ಲಿ 38 ಸಿಲಿಂಡರ್‌ ಗಳ ಜಪ್ತಿ ಸೇರಿವೆ.

· ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ಡೀಲರ್‌ ಗಳು ಮತ್ತು ವಿತರಕರ ಅನಿರೀಕ್ಷಿತ ತಪಾಸಣೆ ನಡೆಸಲು ಅಧಿಕಾರಿಗಳನ್ನು ನಿಯೋಜಿಸಿವೆ.

ಸರ್ಕಾರದ ಇತರ ಕ್ರಮಗಳು

· ದೇಶಾದ್ಯಂತ ಮನೆಗಳಿಗೆ ಅಡೆತಡೆಯಿಲ್ಲದೆ ಎಲ್‌ ಪಿ ಜಿ ಪೂರೈಕೆಯನ್ನು ಖಚಿತಪಡಿಸುವುದು ಸರ್ಕಾರದ ಅತ್ಯುನ್ನತ ಆದ್ಯತೆಯಾಗಿದೆ. ಅದೇ ಸಮಯದಲ್ಲಿ, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಇತರ ಅಗತ್ಯ ಸೇವೆಗಳಂತಹ ನಿರ್ಣಾಯಕ ವಲಯಗಳಿಗೆ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ.

· ಸಂಸ್ಕರಣಾಗಾರಗಳಿಂದ ದೇಶೀಯ ಎಲ್‌ ಪಿ ಜಿ ಉತ್ಪಾದನೆಯನ್ನು ಈ ಪರಿಸ್ಥಿತಿಗಿಂತ ಮೊದಲು ಇದ್ದ ಉತ್ಪಾದನೆಗೆ ಹೋಲಿಸಿದರೆ ಶೇ.30 ಕ್ಕಿಂತ ಹೆಚ್ಚು ಹೆಚ್ಚಿಸಲಾಗಿದೆ.

· ಗ್ರಾಹಕರಿಗೆ ವಾಣಿಜ್ಯ ಸಿಲಿಂಡರ್‌ ಗಳನ್ನು ಆದ್ಯತೆಯ ವಿತರಣೆಗಾಗಿ ರಾಜ್ಯ ಸರ್ಕಾರದ ಸುಪರ್ದಿಗೆ ನೀಡಲಾಗಿದೆ.

· ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ನಿಯಮಿತ ಹಂಚಿಕೆಗಿಂತ ಹೆಚ್ಚುವರಿಯಾಗಿ 48,000 ಕೆಎಲ್ ಸೀಮೆಎಣ್ಣೆಯನ್ನು ಹಂಚಿಕೆ ಮಾಡಲಾಗಿದೆ. ಸೀಮೆಎಣ್ಣೆ ವಿತರಣೆಗಾಗಿ ಜಿಲ್ಲೆಗಳಲ್ಲಿ ಸ್ಥಳಗಳನ್ನು ಗುರುತಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ವಿನಂತಿಸಲಾಗಿದೆ.

· ಎಲ್‌ ಪಿ ಜಿ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಪರ್ಯಾಯ ಇಂಧನ ಆಯ್ಕೆಗಳನ್ನು ಸಕ್ರಿಯಗೊಳಿಸಲಾಗಿದೆ. ಸಣ್ಣ, ಮಧ್ಯಮ ಮತ್ತು ಇತರ ಗ್ರಾಹಕರಿಗೆ ಕಲ್ಲಿದ್ದಲು ವಿತರಿಸಲು ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲು ಹಂಚಿಕೆ ಮಾಡಲು ಕೋಲ್ ಇಂಡಿಯಾ ಮತ್ತು ಸಿಂಗರೇಣಿ ಕಾಲಿಯರೀಸ್‌ ಗೆ ಕಲ್ಲಿದ್ದಲು ಸಚಿವಾಲಯ ಆದೇಶ ಹೊರಡಿಸಿದೆ. ಆತಿಥ್ಯ ಮತ್ತು ರೆಸ್ಟೋರೆಂಟ್‌ ಗಳಿಗೆ ಒಂದು ತಿಂಗಳ ಕಾಲ ಸೀಮೆಎಣ್ಣೆ ಮತ್ತು ಕಲ್ಲಿದ್ದಲನ್ನು ಪರ್ಯಾಯವಾಗಿ ಬಳಸಲು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಈಗಾಗಲೇ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಸಲಹೆ ನೀಡಿದೆ.

ಸಾರ್ವಜನಿಕರಿಗೆ ಸಲಹೆ

· ನಾಗರಿಕರು ಭಯಭೀತರಾಗದಂತೆ ಸೂಚಿಸಲಾಗಿದೆ. ಮನೆಗಳು ಮತ್ತು ಅಗತ್ಯ ವಲಯಗಳಿಗೆ ಎಲ್‌ ಪಿ ಜಿ ಲಭ್ಯತೆಯನ್ನು ಕಾಯ್ದುಕೊಳ್ಳಲು ಸರ್ಕಾರ ಸಂಪೂರ್ಣ ಬದ್ಧವಾಗಿದೆ.

· ಎಲ್‌ ಪಿ ಜಿ ಸಿಲಿಂಡರ್‌ ಗಳನ್ನು ಈ ಕೆಳಗಿನವುಗಳನ್ನು ಒಳಗೊಂಡಂತೆ ಬಹು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಸುಲಭವಾಗಿ ಬುಕ್ ಮಾಡಬಹುದು:

o ಐ ವಿ ಆರ್‌ ಎಸ್‌ ಕರೆಗಳು

o ಎಸ್‌ ಎಂ ಎಸ್ ಬುಕಿಂಗ್

o ವಾಟ್ಸಾಪ್ ಬುಕಿಂಗ್

o ಒಎಂಸಿಗಳ ಮೊಬೈಲ್ ಅಪ್ಲಿಕೇಶನ್‌ ಗಳು

· ಆದ್ದರಿಂದ ಗ್ರಾಹಕರು ತಮ್ಮ ಮನೆಯ ಸೌಕರ್ಯದಿಂದ ಎಂದಿನಂತೆ ಸಿಲಿಂಡರ್‌ ಗಳನ್ನು ಬುಕ್ ಮಾಡಲು ಮತ್ತು ಏಜೆನ್ಸಿಗಳಿಗೆ ಅನಗತ್ಯವಾಗಿ ಭೇಟಿ ನೀಡುವುದನ್ನು ತಪ್ಪಿಸಲು ಸೂಚಿಸಲಾಗಿದೆ, ಇದರಿಂದ ಉಂಟಾಗಬಹುದಾದ ಜನಸಂದಣಿಯನ್ನು ತಪ್ಪಿಸಬಹುದು.

· ನಾವು ಗ್ರಾಹಕರಿಗೆ ಎಲ್‌ ಪಿ ಜಿ ಸಿಲಿಂಡರ್‌ ಗಳನ್ನು ಅವರ ಸಾಮಾನ್ಯ ಮನೆಯ ಅವಶ್ಯಕತೆಗೆ ಅನುಗುಣವಾಗಿ ಮಾತ್ರ ಬುಕ್ ಮಾಡಲು ಮತ್ತು ಗಾಬರಿಯಿಂದ ಬುಕಿಂಗ್ ಮಾಡುವುದನ್ನು ತಪ್ಪಿಸಲು ವಿನಂತಿಸುತ್ತೇವೆ. ವ್ಯವಸ್ಥೆಯಲ್ಲಿ ಸಾಕಷ್ಟು ಎಲ್‌ ಪಿ ಜಿ ಪೂರೈಕೆ ಲಭ್ಯವಿದೆ ಮತ್ತು ಒಎಂಸಿಗಳು ಬಾಟ್ಲಿಂಗ್ ಘಟಕಗಳು ಮತ್ತು ಡಿಪೋಗಳಾದ್ಯಂತ ಸಾಕಷ್ಟು ದಾಸ್ತಾನುಗಳನ್ನು ನಿರ್ವಹಿಸುತ್ತಿವೆ.

· ಸರಿಯಾದ ಮಾಹಿತಿಯನ್ನು ಪ್ರಸಾರ ಮಾಡಲು ಸಹಾಯ ಮಾಡುವಂತೆ ಮತ್ತು ಅಧಿಕೃತ ಮೂಲಗಳನ್ನು ಅವಲಂಬಿಸುವಂತೆ ನಾವು ಮಾಧ್ಯಮಗಳಿಗೆ ವಿನಂತಿಸುತ್ತೇವೆ, ಇದರಿಂದ ಅನಗತ್ಯ ಗಾಬರಿಯನ್ನು ತಪ್ಪಿಸಬಹುದು.

ಕಡಲ ಸುರಕ್ಷತೆ ಮತ್ತು ಹಡಗು ಕಾರ್ಯಾಚರಣೆಗಳು

ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ಪರ್ಷಿಯನ್ ಕೊಲ್ಲಿ ಪ್ರದೇಶದ ಕಡಲ ಪರಿಸ್ಥಿತಿ ಮತ್ತು ಭಾರತೀಯ ನಾವಿಕರು ಮತ್ತು ಹಡಗುಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಂಡ ಕ್ರಮಗಳ ಬಗ್ಗೆ ನವೀಕರಣವನ್ನು ನೀಡಿತು. ಸಚಿವಾಲಯದ ಪ್ರಕಾರ:

· 668 ಭಾರತೀಯ ನಾವಿಕರೊಂದಿಗೆ 24 ಭಾರತೀಯ ಧ್ವಜದ ಹಡಗುಗಳು ಪ್ರಸ್ತುತ ಪರ್ಷಿಯನ್ ಕೊಲ್ಲಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. 76 ಭಾರತೀಯ ನಾವಿಕರು ಹಾರ್ಮುಜ್ ಜಲಸಂಧಿಯ ಪೂರ್ವಕ್ಕೆ ಮೂರು ಹಡಗುಗಳಲ್ಲಿದ್ದಾರೆ.

· ಸುಮಾರು 23,000 ಭಾರತೀಯ ನಾವಿಕರು ವಿಶಾಲ ಕೊಲ್ಲಿ ಪ್ರದೇಶದಲ್ಲಿ ವ್ಯಾಪಾರಿ, ಬಂದರು ಮತ್ತು ಕಡಲಾಚೆಯ ಹಡಗುಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಶಿಪ್ಪಿಂಗ್ ಮಹಾನಿರ್ದೇಶಕರು  ಹಡಗು ಮಾಲೀಕರು, RPSL ಏಜೆನ್ಸಿಗಳು ಮತ್ತು ಭಾರತೀಯ ಮಿಷನ್‌ ಗಳೊಂದಿಗೆ ಸಮನ್ವಯವನ್ನು ಮುಂದುವರಿಸಿದ್ದಾರೆ ಮತ್ತು ಎಲ್ಲಾ ಭಾರತೀಯ ಹಡಗುಗಳು ಮತ್ತು ಸಿಬ್ಬಂದಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.

· 24 ಗಂಟೆಗಳ ನಿಯಂತ್ರಣ ಕೊಠಡಿಯ ಸಕ್ರಿಯಗೊಳಿಸುವಿಕೆಯಿಂದ, ಡಿಜಿ ಶಿಪ್ಪಿಂಗ್ 2,425 ಕ್ಕೂ ಹೆಚ್ಚು ಕರೆಗಳನ್ನು ಮತ್ತು 4,441 ಇಮೇಲ್‌ ಗಳನ್ನು ನಿರ್ವಹಿಸಿದೆ ಮತ್ತು 223 ಕ್ಕೂ ಹೆಚ್ಚು ಸಿಲುಕಿರುವ ಭಾರತೀಯ ನಾವಿಕರ ಸುರಕ್ಷಿತ ವಾಪಸಾತಿಯನ್ನು ಸುಗಮಗೊಳಿಸಿದೆ.

· ಡಿಜಿ ಶಿಪ್ಪಿಂಗ್ ನಿಯಮಿತವಾಗಿ ಸಲಹೆಗಳನ್ನು ನೀಡುತ್ತಿದೆ.

· ಭಾರತೀಯ ನಾವಿಕರು ಮತ್ತು ಹಡಗುಗಳಿಗೆ ಡಿಜಿ ಶಿಪ್ಪಿಂಗ್ 24×7 ಸಹಾಯವಾಣಿಯನ್ನು ಬಳಸಲು, ಅಧಿಕಾರಿಗಳು ಮತ್ತು ಭಾರತೀಯ ಮಿಷನ್‌ ಗಳು ನೀಡುವ ಸುರಕ್ಷತಾ ಸಲಹೆಗಳನ್ನು ಅನುಸರಿಸಲು, ಘಟನೆಗಳನ್ನು ತಕ್ಷಣ ವರದಿ ಮಾಡಲು ಮತ್ತು ವರ್ಧಿತ ಹಡಗು-ತೀರ ಸುರಕ್ಷತಾ ತಾಲೀಮುಗಳನ್ನು ನಡೆಸಲು ಸಲಹೆ ನೀಡಲಾಗಿದೆ.

· ಭಾರತದಾದ್ಯಂತ ಬಂದರು ಕಾರ್ಯಾಚರಣೆಗಳು ಸ್ಥಿರವಾಗಿವೆ. ಪ್ರಮುಖ ಬಂದರುಗಳು ಮತ್ತು ರಾಜ್ಯ ಕಡಲ ಮಂಡಳಿಗಳಿಗೆ ಎಸ್‌ ಪಿ ಗಳನ್ನು ನೀಡಲಾಗಿದೆ, ನೋಡಲ್ ಅಧಿಕಾರಿಗಳನ್ನು ಸಂಪರ್ಕದ ಏಕೈಕ ಕೇಂದ್ರವಾಗಿ ನೇಮಿಸಲಾಗಿದೆ ಮತ್ತು ಎಲ್‌ ಪಿ ಜಿ ಹೊತ್ತ ಹಡಗುಗಳಿಗೆ ಆದ್ಯತೆಯ ಮೇರೆಗೆ ನಿಲುಗಡೆಗೆ (ಬೆರ್ತಿಂಗ್) ಅವಕಾಶ ನೀಡಲಾಗುತ್ತಿದೆ.

· ಸೌಲಭ್ಯ ಒದಗಿಸುವ ಕ್ರಮಗಳಲ್ಲಿ ಹೆಚ್ಚುವರಿ ಸರಕು ಸಂಗ್ರಹಣೆ, ಅಡ್-ಹಾಕ್ ಬೆರ್ತಿಂಗ್, ಹಾಳಾಗುವ ಸರಕುಗಳ ಆದ್ಯತೆಯ ನಿರ್ವಹಣೆ, ಕಸ್ಟಮ್ಸ್‌ ನೊಂದಿಗೆ ವೇಗವಾಗಿ "ಬ್ಯಾಕ್ ಟು ಟೌನ್" ಚಲನೆ ಮತ್ತು ವರ್ಧಿತ ಬಂಕರಿಂಗ್ ಬೆಂಬಲ ಸೇರಿವೆ.

· ನಡೆಯುತ್ತಿರುವ ಬಿಕ್ಕಟ್ಟಿನ ಸಮಯದಲ್ಲಿ, ಮೂವರು ಭಾರತೀಯ ನಾವಿಕರು ಮೃತಪಟ್ಟಿದ್ದಾರೆ ಮತ್ತು ಒಬ್ಬ ನಾವಿಕ ನಾಪತ್ತೆಯಾಗಿದ್ದಾರೆ. ನಾಲ್ವರು ಗಾಯಗೊಂಡ ನಾವಿಕರಿಗೆ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದ್ದು, ಮೃತದೇಹಗಳ ವಾಪಸಾತಿಗೆ ಸಮನ್ವಯ ನಡೆಯುತ್ತಿದೆ.

· ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ಪರ್ಷಿಯನ್ ಕೊಲ್ಲಿಯ ಕಡಲ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.

ಪ್ರದೇಶದಲ್ಲಿನ ಭಾರತೀಯ ನಾಗರಿಕರ ಸುರಕ್ಷತೆ

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಶ್ಚಿಮ ಏಷ್ಯಾದಲ್ಲಿನ ಭಾರತೀಯ ನಾಗರಿಕರ ಸ್ಥಿತಿಗತಿ ಮತ್ತು ಭಾರತೀಯ ಸಮುದಾಯದೊಂದಿಗೆ ನಿಕಟ ಸಂಪರ್ಕದಲ್ಲಿರಲು ಆ ಪ್ರದೇಶದಲ್ಲಿನ ಭಾರತೀಯ ಮಿಷನ್‌ಗಳು ನಡೆಸುತ್ತಿರುವ ಪ್ರಯತ್ನಗಳ ಇತ್ತೀಚಿನ ನವೀಕರಣವನ್ನು ಹಂಚಿಕೊಂಡಿದೆ:

· ಭಾರತವು ಪಶ್ಚಿಮ ಏಷ್ಯಾದ ದೇಶಗಳೊಂದಿಗೆ ತನ್ನ ಸಂವಹನ ಮತ್ತು ಮಾತುಕತೆಗಳನ್ನು ಮುಂದುವರಿಸಿದೆ.

· ನಿನ್ನೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷರಾದ ಗೌರವಾನ್ವಿತ ಡಾ. ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು.

· ಸಂಭಾಷಣೆಯ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು ಇರಾನ್ ಸೇರಿದಂತೆ ಈ ಪ್ರದೇಶದಲ್ಲಿನ ಭಾರತೀಯ ನಾಗರಿಕರ ಸುರಕ್ಷತೆ ಮತ್ತು ಕ್ಷೇಮಕ್ಕೆ ಭಾರತದ ಆದ್ಯತೆಯನ್ನು ಎತ್ತಿ ತೋರಿಸಿದರು ಮತ್ತು ಇಂಧನ ಮತ್ತು ಸರಕುಗಳ ಅಡೆತಡೆಯಿಲ್ಲದ ಸಾಗಣೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು.

· ಪ್ರಧಾನಮಂತ್ರಿಯವರು ಈ ಪ್ರದೇಶದಲ್ಲಿನ ಭದ್ರತಾ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು ಮತ್ತು ಎಲ್ಲಾ ವಿಷಯಗಳನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಪರಿಹರಿಸಬೇಕು ಎಂಬ ಭಾರತದ ಸ್ಥಿರ ನಿಲುವನ್ನು ಪುನರುಚ್ಚರಿಸಿದರು.

· ವಿದೇಶಾಂಗ ವ್ಯವಹಾರಗಳ ಸಚಿವರು ನಿನ್ನೆ ಇರಾನ್ ವಿದೇಶಾಂಗ ಸಚಿವ ಗೌರವಾನ್ವಿತ ಸೈಯದ್ ಅಬ್ಬಾಸ್ ಅರಾಗ್ಚಿ ಅವರೊಂದಿಗೆ ಮಾತನಾಡಿದರು, ಈ ಸಂದರ್ಭದಲ್ಲಿ ದ್ವಿಪಕ್ಷೀಯ ಮತ್ತು ಬ್ರಿಕ್ಸ್ ಸಂಬಂಧಿತ ವಿಷಯಗಳನ್ನು ಚರ್ಚಿಸಲಾಯಿತು.

· ವಿದೇಶಾಂಗ ವ್ಯವಹಾರಗಳ ಸಚಿವಾಲಯವು ನಿಯಂತ್ರಣ ಕೊಠಡಿಯನ್ನು ಮಾರ್ಚ್ 4 ರಂದು ಸ್ಥಾಪಿಸಿದ್ದು, ಇದುವರೆಗೆ 900 ಕ್ಕೂ ಹೆಚ್ಚು ಕರೆಗಳನ್ನು ಮತ್ತು 200 ಇಮೇಲ್‌ಗಳನ್ನು ಸ್ವೀಕರಿಸಿದೆ. ದೈನಂದಿನ ಕರೆಗಳ ಸಂಖ್ಯೆಯು ಕ್ರಮೇಣ ಕಡಿಮೆಯಾಗುತ್ತಿದೆ.

· ನಿಯಂತ್ರಣ ಕೊಠಡಿಯಲ್ಲಿ ಸ್ವೀಕರಿಸಿದ ಪ್ರಶ್ನೆಗಳನ್ನು ಪರಿಹಾರಕ್ಕಾಗಿ ಸಂಬಂಧಿತ ಮಿಷನ್‌ ಗಳಿಗೆ ರವಾನಿಸಲಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ, ನಿಯಂತ್ರಣ ಕೊಠಡಿಯು ಮಿಷನ್‌ ಗಳೊಂದಿಗೆ ನೈಜ ಸಮಯದಲ್ಲಿ ಸಮನ್ವಯ ಸಾಧಿಸುತ್ತದೆ ಮತ್ತು ಮಿಷನ್ ಸಂಬಂಧಪಟ್ಟ ವ್ಯಕ್ತಿಯನ್ನು ಸಂಪರ್ಕಿಸುವವರೆಗೆ ಕರೆ ಮಾಡಿದವರೊಂದಿಗೆ ಸಂಪರ್ಕದಲ್ಲಿರುತ್ತದೆ.

· ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸುತ್ತಿರುವ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ಪ್ರದೇಶದಲ್ಲಿನ ಮಿಷನ್‌ ಗಳು ಮತ್ತು ಪೋಸ್ಟ್‌ ಗಳು 24×7 ಸಹಾಯವಾಣಿಗಳು ಮತ್ತು ಆತಿಥೇಯ ಸರ್ಕಾರಗಳೊಂದಿಗೆ ಸಮನ್ವಯದ ಮೂಲಕ ಭಾರತೀಯ ಸಮುದಾಯಕ್ಕೆ ಸಹಾಯ ಮಾಡುತ್ತಿವೆ.

· ಯುಎಇ, ಕತಾರ್, ಓಮನ್ ಮತ್ತು ಸೌದಿ ಅರೇಬಿಯಾದಿಂದ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಬಹ್ರೇನ್, ಕುವೈತ್ ಮತ್ತು ಇರಾಕ್‌ ನಿಂದ ಭಾರತೀಯರ ಪ್ರಯಾಣವನ್ನು ವೈಮಾನಿಕ ನಿರ್ಬಂಧಗಳಿಂದಾಗಿ ಸೌದಿ ಅರೇಬಿಯಾ ಮೂಲಕ ಸುಗಮಗೊಳಿಸಲಾಗುತ್ತಿದೆ.

· ಇಂದು ಮುಂಜಾನೆ ಓಮನ್‌ ನ ಸೋಹರ್ ನಗರದಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಭಾರತೀಯ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಗಾಯಗೊಂಡ 11 ಜನರಲ್ಲಿ 10 ಮಂದಿ ಭಾರತೀಯರಾಗಿದ್ದಾರೆ; ಐವರನ್ನು ಬಿಡುಗಡೆ ಮಾಡಲಾಗಿದ್ದು, ಐವರು ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಯಾವುದೇ ಗಂಭೀರ ಗಾಯಗಳು ವರದಿಯಾಗಿಲ್ಲ.

· ಇದುವರೆಗೆ ಸಂಘರ್ಷದಲ್ಲಿ ಐವರು ಭಾರತೀಯ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಒಬ್ಬ ಭಾರತೀಯರು ನಾಪತ್ತೆಯಾಗಿದ್ದಾರೆ.

· ಮಾರ್ಚ್ 11 ರ ರಾತ್ರಿ ಇರಾಕಿ ನೀರಿನಲ್ಲಿ 'ಸೇಫ್‌ಸೀ ವಿಷ್ಣು' ಹಡಗಿನ ಮೇಲೆ ನಡೆದ ದಾಳಿಯ ನಂತರ, 15 ಭಾರತೀಯ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಪ್ರಸ್ತುತ ಬಸ್ರಾದಲ್ಲಿದ್ದಾರೆ. ಮೃತಪಟ್ಟ ಭಾರತೀಯ ನಾಗರಿಕರ ಮೃತದೇಹಗಳ ಸಾಗಣೆ ಮತ್ತು ಅವರ ವಾಪಸಾತಿಗೆ ಪ್ರಯತ್ನಗಳು ನಡೆಯುತ್ತಿವೆ.

ಸಾರ್ವಜನಿಕ ಸಂವಹನ

ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಈ ಕೆಳಗಿನ ಅಂಶಗಳನ್ನು ಒತ್ತಿ ಹೇಳಿತು:

· ಮಾಧ್ಯಮ ವರದಿಗಳ ಪ್ರಕಾರ, ದಾಸ್ತಾನು ಸಂಗ್ರಹಣೆ ಮತ್ತು ಕಪ್ಪು ಮಾರುಕಟ್ಟೆಯಲ್ಲಿ ತೊಡಗಿರುವವರ ವಿರುದ್ಧ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಲು ಪ್ರಾರಂಭಿಸಿವೆ.

· ಅಧಿಕೃತ ಆನ್‌ಲೈನ್ ವೇದಿಕೆಗಳ ಮೂಲಕ ಎಲ್‌ ಪಿ ಜಿ ಸಿಲಿಂಡರ್‌ ಗಳನ್ನು ಕಾಯ್ದಿರಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.

· ಗ್ರಾಹಕರು ಡಿಜಿಟಲ್ ಹಗರಣಗಳ ಬಗ್ಗೆ ಜಾಗರೂಕರಾಗಿರಬೇಕು ಮತ್ತು ಸಿಲಿಂಡರ್‌ ಗಳನ್ನು ಕಾಯ್ದಿರಿಸಲು ಅಧಿಕೃತ ವೆಬ್‌ಸೈಟ್‌ ಗಳು ಅಥವಾ ಅಧಿಕೃತ ಅಪ್ಲಿಕೇಶನ್‌ ಗಳನ್ನು ಮಾತ್ರ ಬಳಸಬೇಕು.

ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದಂತೆ, ಭಾರತ ಸರ್ಕಾರವು ಪಶ್ಚಿಮ ಏಷ್ಯಾದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಸಂಬಂಧಿತ ಸಚಿವಾಲಯಗಳು ಮತ್ತು ಏಜೆನ್ಸಿಗಳ ನಡುವೆ ಸಮನ್ವಯವನ್ನು ಕಾಯ್ದುಕೊಳ್ಳುತ್ತಿದೆ. ಇಂಧನ ಪೂರೈಕೆಯನ್ನು ರಕ್ಷಿಸಲು, ಭಾರತೀಯ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಕಡಲ ಕಾರ್ಯಾಚರಣೆಗಳನ್ನು ನಿರ್ವಹಿಸಲು ಮತ್ತು ಅಗತ್ಯ ವಸ್ತುಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

******

 


(ಪ್ರಕಟಣೆ ಐ.ಡಿ.: 2240024) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Bengali , Gujarati , Odia , Telugu , Malayalam