ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ರಾಜ್ಯ ನಾಗರಿಕ ಸೇವೆಗಳಿಂದ ಭಾರತೀಯ ಆಡಳಿತ ಸೇವೆಗೆ ನೇಮಕಗೊಂಡು ಲಾಲ್‌ ಬಹದ್ದೂರ್‌ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿಯಲ್ಲಿ 128ನೇ ಸೇರ್ಪಡೆ - ಪರಿಚಯ ತರಬೇತಿ ಪಡೆಯುತ್ತಿರುವ  ಅಧಿಕಾರಿಗಳಿಂದ ರಾಷ್ಟ್ರಪತಿ ಭೇಟಿ

ಪ್ರಕಟಣಾ ದಿನಾಂಕ: 02 MAR 2026 2:41PM by PIB Bengaluru

ರಾಜ್ಯ ನಾಗರಿಕ ಸೇವೆಗಳಿಂದ ಭಾರತೀಯ ಆಡಳಿತ ಸೇವೆಗೆ ಸೇರ್ಪಡೆಗೊಂಡ ಅಧಿಕಾರಿಗಳು ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿ (LBSNAA) ಯಲ್ಲಿ 128ನೇ ಸೇರ್ಪಡೆ - ಪರಿಚಯ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಇಂದು (ಮಾರ್ಚ್ 2, 2026) ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು.

ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ರಾಷ್ಟ್ರ ನಿರ್ಮಾಣ ಪ್ರಕ್ರಿಯೆಯಲ್ಲಿ ನಾಗರಿಕ ಸೇವಾ ಅಧಿಕಾರಿಗಳ ಪಾತ್ರ ನಿರ್ಣಾಯಕವಾಗಿದ್ದು, ಈಗ ಅವರು ಜಿಲ್ಲೆ ಅಥವಾ ರಾಜ್ಯದ ಆದ್ಯತೆಗಳನ್ನು ಮೀರಿದ ಜವಾಬ್ದಾರಿಗಳನ್ನು ಹೊಂದಿದ್ದಾರೆ ಎಂದರು. ಈ ದೊಡ್ಡ ಜವಾಬ್ದಾರಿಗಳಿಗೆ ಇಲಾಖೆಯ ಗಡಿಗಳನ್ನು ಮೀರಿದ ಮತ್ತು ಆಡಳಿತಾತ್ಮಕ ಪ್ರತ್ಯೇಕತೆಗಳನ್ನು ತೊಡೆದು ಹಾಕುವ ದೃಷ್ಟಿಕೋನದ ಅಗತ್ಯವಿದೆ ಎಂದರು. ಸಹಯೋಗದೊಂದಿಗೆ ಕಾರ್ಯನಿರ್ವಹಿಸುವ ಮೂಲಕ, ಸಾಂಸ್ಥಿಕ ಸುಸಂಬದ್ಧತೆಯನ್ನು ಹೆಚ್ಚಿಸಬಹುದಾಗಿದೆ ಮತ್ತು ಆಡಳಿತ ವ್ಯವಸ್ಥೆಯನ್ನು ಬಲಪಡಿಸಬಹುದಾಗಿದೆ. ಅಭಿವೃದ್ಧಿ ಫಲಿತಾಂಶಗಳನ್ನು ಮುನ್ನಡೆಸಲು ಮತ್ತು ಸಾರ್ವಜನಿಕ ಸೇವೆಯ ಅತ್ಯುನ್ನತ ಗುಣಮಟ್ಟವನ್ನು ಎತ್ತಿಹಿಡಿಯಲು ಅಧಿಕಾರಿಗಳ ಸಾಮೂಹಿಕ ವೃತ್ತಿಪರತೆ, ಸಮನ್ವಯತೆ ಮತ್ತು ಬದ್ಧತೆ ಅತ್ಯಗತ್ಯ. ಈ ಅಧಿಕಾರಿಗಳು ಇನ್ನು ಮುಂದೆ ಒಂದು ನಿರ್ದಿಷ್ಟ ಪ್ರದೇಶದ ಆಡಳಿತಗಾರರಲ್ಲ; ಅವರು ರಾಷ್ಟ್ರದಾದ್ಯಂತ ಎತ್ತಿಹಿಡಿಯಬೇಕಾದ ಆಡಳಿತ ಮಾನದಂಡಗಳ ಪಾಲಕರು ಎಂದು ರಾಷ್ಟ್ರಪತಿ ಒತ್ತಿ ಹೇಳಿದರು. ಈ ಅಧಿಕಾರಿಗಳು ಕೈಗೊಳ್ಳುವ ಪ್ರತಿಯೊಂದು ನಿರ್ಧಾರವು 2047ರ ವೇಳೆಗೆ ವಿಕಸಿತ ಭಾರತ ನಿರ್ಮಿಸುವ ಒಟ್ಟಾರೆ ಮುನ್ನೋಟಕ್ಕೆ ಅನುಗುಣವಾಗಿರಬೇಕು ಎಂದು ಅವರು ಕರೆ ನೀಡಿದರು. 

ಜನರ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ಈಡೇರಿಸಲು ಐಎಎಸ್ ಅಧಿಕಾರಿಗಳಾಗಿ, ನೀತಿಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕಿದೆ ಎಂದು ಹೇಳಿದ ರಾಷ್ಟ್ರಪತಿಗಳು, ಹೆಚ್ಚು ಸಂಕೀರ್ಣ ಸವಾಲುಗಳನ್ನು ಎದುರಿಸುವಾಗ ಅಮೂಲ್ಯ ಅನುಭವ ಮತ್ತು 'ರಾಷ್ಟ್ರ ಮೊದಲು' ಎಂಬ ಮನೋಭಾವವು ಮಾರ್ಗದರ್ಶಿ ದಿಕ್ಸೂಚಿಯಾಗಿರಬೇಕು ಎಂದರು. 

ಅಧಿಕಾರಿಗಳು ಒಳಗೊಂಡ ಅಭಿವೃದ್ಧಿಗೆ ಕೊಡುಗೆ ನೀಡುವರು ಎಂಬ ನಿರೀಕ್ಷೆ ಇದ್ದು, ಅಭಿವೃದ್ಧಿ ಹೊಂದಿದ ರಾಷ್ಟ್ರದ ಪ್ರಯೋಜನಗಳು ಅತ್ಯಂತ ದುರ್ಬಲ ಮತ್ತು ವಂಚಿತ ವರ್ಗಗಳನ್ನು ತಲುಪಿದಾಗ ಮಾತ್ರ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಭಾರತದ ರೂಪಾಂತರ ಅರ್ಥಪೂರ್ಣವಾಗಲಿದೆ ಎಂದು ರಾಷ್ಟ್ರಪತಿ ಒತ್ತಿ ಹೇಳಿದರು.  ಭೌಗೋಳಿಕ, ಸಾಮಾಜಿಕ ಅಥವಾ ಆರ್ಥಿಕ ಕಾರಣಗಳಿಂದಾಗಿ ಯಾವುದೇ ಸಮುದಾಯವು ಹಿಂದೆ ಉಳಿಯದಂತೆ ನೋಡಿಕೊಳ್ಳಲು ಅವಿರತವಾಗಿ ಶ್ರಮಿಸುವಂತೆ ಮನವಿ ಮಾಡಿದ ರಾಷ್ಟ್ರಪತಿಗಳು, ಸುಸ್ಥಿರತೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳಿಂದ ಶೀಘ್ರವಾಗಿ ಚೇತರಿಸಿಕೊಂಡು ಸ್ಥಿರವಾಗುವಂತೆ ಮಾಡಲು ಅಧಿಕಾರಿಗಳ ಬದ್ಧ ಪ್ರಯತ್ನ ಅಗತ್ಯ ಎಂದು ಕರೆ ನೀಡಿದರು. ಹಿರಿಯ ಆಡಳಿತಗಾರರಾಗಿ, ಪರಿಸರ ಸ್ನೇಹಿ ಅಭ್ಯಾಸಗಳನ್ನು ಪ್ರತಿಪಾದಿಸಬೇಕು, ಹವಾಮಾನ-ಹೊಂದಾಣಿಕೆಯ ಆಡಳಿತವನ್ನು ಉತ್ತೇಜಿಸಬೇಕು ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಖಾತರಿಪಡಿಸಿಕೊಳ್ಳಬೇಕು. ಇಂದಿನ ನಮ್ಮ ಸಾಮೂಹಿಕ ಕ್ರಮಗಳು ಭವಿಷ್ಯದ ಪೀಳಿಗೆಯ ಜೀವನದ ಗುಣಮಟ್ಟವನ್ನು ನಿರ್ಧರಿಸಲಿವೆ ಎಂದು ರಾಷ್ಟ್ರಪತಿ ಮುರ್ಮು ಅವರು ಒತ್ತಿ ಹೇಳಿದರು.

ರಾಷ್ಟ್ರಪತಿಗಳ ಭಾಷಣವನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ-

 

*****


(ಪ್ರಕಟಣೆ ಐ.ಡಿ.: 2234798) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: Telugu , English , Urdu , Marathi , हिन्दी , Gujarati , Tamil , Malayalam