ವಾರ್ತಾ ಮತ್ತು ಪ್ರಸಾರ ಸಚಿವಾಲಯ
ತಮಿಳು ವಿದ್ವಾಂಸರು, ಪರಂಪರೆ ಮತ್ತು ಸಂಸ್ಕೃತಿಯನ್ನು ಆಚರಿಸುವ 16 ಪ್ರಕಟಣೆಗಳನ್ನು ಬಿಡುಗಡೆ ಮಾಡಿದ ಉಪರಾಷ್ಟ್ರಪತಿ
ಭಾರತವು ಹಲವು ಭಾಷೆಗಳ ನಾಡು, ಆದರೆ ಅದರ ಆತ್ಮ ಮಾತ್ರ ಒಂದೇ": ಉಪರಾಷ್ಟ್ರಪತಿ
ತಮಿಳಿನ ಶ್ರೀಮಂತ ಮತ್ತು ಕಾಲಾತೀತ ನಾಗರಿಕತೆಯನ್ನು ಉಲ್ಲೇಖಿಸಿದ ಅಶ್ವಿನಿ ವೈಷ್ಣವ್
ಪ್ರಕಟಣಾ ದಿನಾಂಕ:
02 MAR 2026 8:48PM by PIB Bengaluru
ಭಾರತದ ಉಪರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು ಇಂದು ಉಪರಾಷ್ಟ್ರಪತಿ ಭವನದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರಕಟಣಾ ವಿಭಾಗವು ಹೊರತಂದಿರುವ 16 ಪ್ರಮುಖ ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಈ ಪ್ರಕಟಣೆಗಳು ಪ್ರಖ್ಯಾತ ತಮಿಳು ವಿದ್ವಾಂಸರು, ಪರಂಪರೆ, ವಾಸ್ತುಶಿಲ್ಪ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಬಿಡುಗಡೆಯಾದ ಒಟ್ಟು ಪುಸ್ತಕಗಳಲ್ಲಿ 13 ಪುಸ್ತಕಗಳು ತಮಿಳು ಭಾಷೆಗೆ ಸಂಬಂಧಿಸಿವೆ.

ಬಿಡುಗಡೆಯಾದ ತಮಿಳು ಪುಸ್ತಕಗಳಲ್ಲಿ ರಾಮೇಶ್ವರಂ, ರಾಮಾನುಜರ್, ನಡುಕಲ್, ಅರಿಕೈಮೇಡು, ಭಕ್ತಿ ಇಲಕ್ಕಿಯಂ, ಇಯರ್ಕೈ ವೇಳಣ್ಮೈ, ಪಳಂತಮಿಜನ್ ಇಸೈ ಕರುವಿಗಲ್, ತಮಿಳಗ ನಾಟ್ಟಾರ್ ದೈವಂಗಳ್, ಪುದಿಯ ಅರಿವಿಯಲ್ ತೊಳಿಲ್ ನುಟ್ಪಂಗಳ್, ಬಂಕಿಮ ಚಂದ್ರ ಚಟರ್ಜಿ, ಮಧುರೈ ಮೀನಾಕ್ಷಿ ಅಮ್ಮನ್ ದೇವಾಲಯ, ತಂಜಾವೂರು ಪೆರುವುದೈಯಾರ್ ಕೋವಿಲ್, ಮಣಿಮೇಗಲೈ ಮತ್ತು ಮಹಾವಿದ್ವಾನ್ ಮೀನಾಕ್ಷಿ ಸುಂದರಂ ಪಿಳ್ಳೈ ಕುರಿತಾದ ಕೃತಿಗಳು ಸೇರಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಉಪರಾಷ್ಟ್ರಪತಿ ಸಿ. ಪಿ. ರಾಧಾಕೃಷ್ಣನ್ ಅವರು, ಬಿಡುಗಡೆಯಾದ ಈ ಪುಸ್ತಕಗಳು ದೇವಾಲಯದ ಸಂಪ್ರದಾಯಗಳು, ತತ್ವಶಾಸ್ತ್ರ, ಸಾಹಿತ್ಯ, ಸಂಗೀತ ಮತ್ತು ವಿಜ್ಞಾನವನ್ನು ಒಳಗೊಂಡಿರುವ ತಮಿಳು ಪರಂಪರೆಯ ಆಳ, ವೈವಿಧ್ಯತೆ ಮತ್ತು ನಾಗರಿಕತೆಯ ಮುಂದುವರಿಕೆಯನ್ನು ಪ್ರತಿಬಿಂಬಿಸುತ್ತವೆ ಎಂದರು. ತಮಿಳು ಭಾಷೆಯನ್ನು ವಿಶ್ವದ ಅತ್ಯಂತ ಪ್ರಾಚೀನ ಶಾಸ್ತ್ರೀಯ ಭಾಷೆಗಳಲ್ಲಿ ಒಂದೆಂದು ಬಣ್ಣಿಸಿದ ಅವರು, ಭಾರತವು ಹಲವು ಭಾಷೆಗಳ ತವರೂರಾಗಿದ್ದರೂ ಅದರ ಆತ್ಮ ಮಾತ್ರ ಒಂದೇ ಎಂದು ಪ್ರತಿಪಾದಿಸಿದರು. ಜಾಗತಿಕ ಮಟ್ಟದಲ್ಲಿ ತಮಿಳು ಭಾಷೆಯನ್ನು ನಿರಂತರವಾಗಿ ಗೌರವಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ ಅವರು, ಆರ್ಥಿಕ ಪ್ರಗತಿಯ ಜೊತೆಗೆ ಸಾಂಸ್ಕೃತಿಕ ಬಲಕ್ಕೂ ಒತ್ತು ನೀಡುತ್ತಾ, ಯುವಜನರು ಪ್ರತಿದಿನ ಕನಿಷ್ಠ ಒಂದು ಗಂಟೆಯನ್ನಾದರೂ ಓದಿಗಾಗಿ ಮೀಸಲಿಡಬೇಕು ಎಂದು ಕರೆ ನೀಡಿದರು.

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅಶ್ವಿನಿ ವೈಷ್ಣವ್ ಅವರು, ಈ ಸಂದರ್ಭವನ್ನು ಐತಿಹಾಸಿಕ ಎಂದು ಬಣ್ಣಿಸಿದರು. ತಮಿಳು ಭಾಷೆಯು ವಿಶ್ವದಾದ್ಯಂತ ಗುರುತಿಸಲ್ಪಟ್ಟ ಶ್ರೀಮಂತ ಮತ್ತು ಪ್ರಾಚೀನ ಸಂಸ್ಕೃತಿಯನ್ನು ಹೊಂದಿರುವ ಶಾಸ್ತ್ರೀಯ ಭಾಷೆಯಾಗಿದೆ ಎಂದು ಅವರು ಶ್ಲಾಘಿಸಿದರು. ಪ್ರಕಟಣಾ ವಿಭಾಗದ ಈ ಪುಸ್ತಕಗಳು ಈ ಹೆಮ್ಮೆಯ ಪರಂಪರೆಯನ್ನು ಸಂಭ್ರಮಿಸುತ್ತವೆ ಎಂದು ಅವರು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಡಾ. ಎಲ್. ಮುರುಗನ್ ಅವರು ಸಹ ಉಪಸ್ಥಿತರಿದ್ದರು. ಅವರು ತಮಿಳು ಸಂಗಮ ಸಾಹಿತ್ಯದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು ಮತ್ತು 'ಏಕ ಭಾರತ ಶ್ರೇಷ್ಠ ಭಾರತ'ದ ಆಶಯವನ್ನು ಉಲ್ಲೇಖಿಸಿದರು.

ಈ ಕಾರ್ಯಕ್ರಮದ ಒಂದು ವಿಶೇಷ ಆಕರ್ಷಣೆಯೆಂದರೆ, ಎಸ್. ಕೆ. ಬೋಸ್ ಅವರು ರಚಿಸಿದ ಬಂಕಿಮ್ ಚಂದ್ರ ಚಟರ್ಜಿ ಅವರ ಕುರಿತಾದ ಪುಸ್ತಕವು ಇಂಗ್ಲಿಷ್, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಯಿತು. 'ವಂದೇ ಮಾತರಂ' ಗೀತೆಯ 150ನೇ ವರ್ಷಾಚರಣೆಯ ಸಂದರ್ಭದಲ್ಲಿ ಹೊರತರಲಾದ ಈ ಪರಿಷ್ಕೃತ ಆವೃತ್ತಿಯು, ಖ್ಯಾತ ಸಾಹಿತಿ ಬಂಕಿಮ್ ಚಂದ್ರರ ಜೀವನ, ಅವರ ಕಾಲಘಟ್ಟ ಮತ್ತು ಭಾರತೀಯ ಸಾಹಿತ್ಯ ಚಳವಳಿಗೆ ಅವರು ನೀಡಿದ ಕೊಡುಗೆಯನ್ನು ವಿವರಿಸುತ್ತದೆ. ಇದರ ಇಂಗ್ಲಿಷ್ ಮರುಮುದ್ರಣವು ಹೊಸದಾಗಿ ವಿನ್ಯಾಸಗೊಳಿಸಿದ ಮುಖಪುಟದೊಂದಿಗೆ ಹೆಚ್ಚುವರಿ ಐತಿಹಾಸಿಕ ಛಾಯಾಚಿತ್ರಗಳು ಮತ್ತು ಚಿತ್ರಣಗಳನ್ನು ಒಳಗೊಂಡಿದೆ. ಐಐಟಿ ದೆಹಲಿ ಬೆಂಬಲಿತ ಸ್ಟಾರ್ಟ್ಅಪ್ ಸಂಸ್ಥೆಯು ಸಮಕಾಲೀನ ಸೌಂದರ್ಯ ಮತ್ತು ಶಾಸ್ತ್ರೀಯ ಮನೋಭಾವವನ್ನು ಸಮ್ಮಿಶ್ರಗೊಳಿಸಿ ಈ ಮುಖಪುಟವನ್ನು ವಿಶೇಷವಾಗಿ ವಿನ್ಯಾಸಗೊಳಿಸಿದೆ. ಹಿಂದಿ ಮತ್ತು ತಮಿಳು ಅನುವಾದಗಳ ಏಕಕಾಲದ ಬಿಡುಗಡೆಯು 'ವಂದೇ ಮಾತರಂ'ನ ಪೂಜ್ಯ ಸೃಷ್ಟಿಕರ್ತರ ಪರಂಪರೆಯನ್ನು ವಿಶಾಲ ವರ್ಗದ ಓದುಗರಿಗೆ ತಲುಪುವಂತೆ ಮಾಡಿದೆ.
ರಾಮೇಶ್ವರಂ ಕುರಿತಾದ ಪುಸ್ತಕವು ಪುರಾಣಗಳು ಮತ್ತು ಸಾಹಿತ್ಯಿಕ ಮೂಲಗಳಿಂದ ದಾಖಲಿತ ಉಲ್ಲೇಖಗಳನ್ನು ಪ್ರಸ್ತುತಪಡಿಸುತ್ತದೆ. ಇದು ರಾಮೇಶ್ವರಂ ದೇವಾಲಯದ ಸಂಕೀರ್ಣದ ಪವಿತ್ರ ಸ್ಥಳಗಳು, ವಾಸ್ತುಶಿಲ್ಪದ ಭವ್ಯತೆ, ಶಿಲ್ಪಕಲೆಗಳು ಮತ್ತು ದೇವತೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುತ್ತದೆ. ಈ ಪುಸ್ತಕವು ಓದುಗರಿಗೆ ದೇವಾಲಯದ ಇತಿಹಾಸ ಮತ್ತು ಆಧ್ಯಾತ್ಮಿಕ ಮಹತ್ವದ ಬಗ್ಗೆ ಸಮಗ್ರ ತಿಳುವಳಿಕೆಯನ್ನು ನೀಡುವ ಗುರಿಯನ್ನು ಹೊಂದಿದೆ.

For detailed information about book please click here
*****
(ಪ್ರಕಟಣೆ ಐ.ಡಿ.: 2234797)
ವಿಸಿಟರ್ ಕೌಂಟರ್ : 59