ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಅಸ್ಸಾಂನ ಗುವಾಹಟಿಯಲ್ಲಿ ನಡೆದ ಸಿಆರ್‌ಪಿಎಫ್‌ನ 87ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ


ತನ್ನ 86 ವರ್ಷಗಳ ಇತಿಹಾಸದಲ್ಲಿ, ಸಿಆರ್‌ಪಿಎಫ್‌ ತ್ಯಾಗದ ಮೂಲಕ ಸಮರ್ಪಣೆ ಮತ್ತು ಶೌರ್ಯಕ್ಕೆ ಉದಾಹರಣೆಯಾಗಿದೆ ಮತ್ತು ಅದು ಇಲ್ಲದೆ ಭಾರತದ ಆಂತರಿಕ ಭದ್ರತೆಯನ್ನು ಊಹಿಸಲು ಸಾಧ್ಯವಿಲ್ಲ

ಸಿಆರ್‌ಫಿಎಫ್‌ನ ಶೌರ್ಯದ ಮೂಲಕ, ದೇಶದ ಮೂರು ಆಂತರಿಕ ಭದ್ರತಾ ಕೇಂದ್ರಗಳು ಅಭಿವೃದ್ಧಿಯ ಬೆಳವಣಿಗೆಯ ತಾಣಗಳಾಗಿ ರೂಪಾಂತರಗೊಂಡಿವೆ

ಕೇವಲ ಎರಡು ಬೆಟಾಲಿಯನ್‌ಗಳೊಂದಿಗೆ ಪ್ರಾರಂಭವಾದ ಸಿಆರ್‌ಪಿಎಫ್‌ ಇಂದು 248 ಬೆಟಾಲಿಯನ್‌ಗಳು ಮತ್ತು 325,000 ಸಿಬ್ಬಂದಿಯೊಂದಿಗೆ ವಿಶ್ವದ ಅತಿದೊಡ್ಡ ಸಿಎಪಿಎಫ್‌ ಆಗಿದೆ

ಯುದ್ಧಗಳಲ್ಲಿನ ಗೆಲುವಿಯಾಗಲಿ, ಸಂಸತ್ತು ಮತ್ತು ರಾಮ ಜನ್ಮಭೂಮಿಯ ಮೇಲಿನ ದಾಳಿಯನ್ನು ವಿಫಲಗೊಳಿಸುವುದಾಗಲಿ ಅಥವಾ ಅಮರನಾಥ ಯಾತ್ರೆ ಮತ್ತು ಮಹಾಕುಂಭದ ಸಮಯದಲ್ಲಿ ಭದ್ರತೆಯನ್ನು ಖಾತರಿಪಡಿಸುವುದಾಗಲಿ, ಸಿಆರ್‌ಪಿಎಫ್‌ ಶತ್ರುಗಳ ಸೋಲಿನ ಖಾತರಿಯಾಗಿ ನಿಲ್ಲುತ್ತದೆ

ದೇಶದ ವಿವಿಧ ಭಾಗಗಳಲ್ಲಿ ಸಿಆರ್‌ಪಿಎಫ್‌ ಡೇ ಪರೇಡ್‌ ಆಯೋಜಿಸುವ ನರೇಂದ್ರ ಮೋದಿ ಸರ್ಕಾರದ ನಿರ್ಧಾರವು ಈಶಾನ್ಯದಲ್ಲಿ ಮೊದಲ ಬಾರಿಗೆ ಈ ಮೆರವಣಿಗೆಯನ್ನು ನಡೆಸಲು ಕಾರಣವಾಗಿದೆ, ಇದು ಹೆಮ್ಮೆಯ ವಿಷಯವಾಗಿದೆ

ನಕ್ಸಲಿಸಂ ಅನ್ನು ನಿರ್ಮೂಲನೆಯ ಅಂಚಿಗೆ ತರುವಲ್ಲಿ ಸಿಆರ್‌ಪಿಎಫ್‌ ಪ್ರಮುಖ ಪಾತ್ರ ವಹಿಸಿದೆ ಮತ್ತು ಮಾರ್ಚ್‌ 31 ರೊಳಗೆ ದೇಶವು ನಕ್ಸಲಿಸಂನಿಂದ ಮುಕ್ತವಾಗಲಿದೆ

ಆಪರೇಷನ್‌ ಬ್ಲ್ಯಾಕ್‌ ಫಾರೆಸ್ಟ್‌ನಲ್ಲಿ ಸಿಆರ್‌ಪಿಎಫ್‌ ಸಿಬ್ಬಂದಿಯ ಶೌರ್ಯ, ಧೈರ್ಯ ಮತ್ತು ದೃಢನಿಶ್ಚಯವನ್ನು ನಕ್ಸಲಿಸಂ ವಿರುದ್ಧದ ಹೋರಾಟದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲಾಗುವುದು

ಪ್ರಕಟಣಾ ದಿನಾಂಕ: 21 FEB 2026 3:04PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಅವರು ಇಂದು ಅಸ್ಸಾಂನ ಗುವಾಹಟಿಯಲ್ಲಿ ನಡೆದ ಕೇಂದ್ರ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) 87ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿಅಸ್ಸಾಂ ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ, ಸಿಆರ್‌ಪಿಎಫ್‌ ಮಹಾನಿರ್ದೇಶಕರು ಮತ್ತು ಇತರ ಅನೇಕ ಗಣ್ಯರು ಉಪಸ್ಥಿತರಿದ್ದರು.

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಅವರು ತಮ್ಮ ಭಾಷಣದಲ್ಲಿ, 86 ವರ್ಷಗಳಿಂದ ಸಿಆರ್‌ಪಿಎಫ್‌ ತನ್ನ ಅತ್ಯುತ್ತಮ ಕಾರ್ಯಕ್ಷಮತೆ, ಶೌರ್ಯ, ತಾಳ್ಮೆ, ಶೌರ್ಯ ಮತ್ತು ತ್ಯಾಗದಿಂದ ದೇಶದ ಆಂತರಿಕ ಭದ್ರತೆಯನ್ನು ಬಲಪಡಿಸುತ್ತಿದೆ ಎಂದು ಹೇಳಿದರು. ಸಿಆರ್‌ಪಿಎಫ್‌ ಇಲ್ಲದೆ ದೇಶದ ಆಂತರಿಕ ಭದ್ರತೆಯನ್ನು ಊಹಿಸಲು ಸಹ ಸಾಧ್ಯವಿಲ್ಲಎಂದು ಅವರು ಹೇಳಿದರು. ಸಿಆರ್‌ಪಿಎಫ್‌ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ, 86 ವರ್ಷಗಳಿಗಿಂತಲೂ ಹೆಚ್ಚು ಸಮಯದಲ್ಲಿ, ಸಿಆರ್‌ಪಿಎಫ್‌ ತನ್ನ ಕರ್ತವ್ಯದ ಸಮರ್ಪಣೆಯಿಂದಾಗಿ ರಾಷ್ಟ್ರದ ಆಂತರಿಕ ಭದ್ರತೆಯ ಬಲವಾದ ಆಧಾರಸ್ತಂಭವಾಗಿ ನಿಂತಿದೆ ಮತ್ತು ಫಲಿತಾಂಶಗಳನ್ನು ನೀಡುತ್ತಿದೆ ಎಂದು ಅವರು ಹೇಳಿದರು. ದೇಶವನ್ನು ಸುರಕ್ಷಿತವಾಗಿಡಲು ಸಿಆರ್‌ಪಿಎಫ್‌ನ 2,270 ಯೋಧರು ಸರ್ವೋಚ್ಚ ತ್ಯಾಗ ಮಾಡಿದ್ದಾರೆ ಮತ್ತು ಇಡೀ ರಾಷ್ಟ್ರವು ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತದೆ ಮತ್ತು ಗೌರವ ಸಲ್ಲಿಸುತ್ತದೆ ಎಂದು ಶ್ರೀ ಅಮಿತ್‌ ಶಾ ಹೇಳಿದರು. ಕರ್ತವ್ಯದ ಬಗೆಗಿನ ಈ ಸಮರ್ಪಣೆ ಮತ್ತು ತ್ಯಾಗದಿಂದಾಗಿಯೇ ಸಿಆರ್‌ಪಿಎಫ್‌ ಯೋಧರು ಹಲವಾರು ಸಂದರ್ಭಗಳಲ್ಲಿ ರಾಷ್ಟ್ರವನ್ನು ರಕ್ಷಿಸಿದ್ದಾರೆ ಎಂದು ಅವರು ಒತ್ತಿ ಹೇಳಿದರು.

11-12 ವರ್ಷಗಳ ಹಿಂದೆ, ದೇಶವು ಮೂರು ಪ್ರಮುಖ ಹಾಟ್‌ಸ್ಪಾಟ್‌ಗಳನ್ನು ಹೊಂದಿತ್ತು - ಜಮ್ಮು ಮತ್ತು ಕಾಶ್ಮೀರ, ಎಡಪಂಥೀಯ ಉಗ್ರವಾದ ಪೀಡಿತ ಪ್ರದೇಶಗಳು ಮತ್ತು ಈಶಾನ್ಯ-ಇದು ರಾಷ್ಟ್ರದ ಆಂತರಿಕ ಭದ್ರತೆಗೆ ಹುಣ್ಣುಗಳಾಗಿ ಮಾರ್ಪಟ್ಟಿತ್ತು ಎಂದು ಶ್ರೀ ಅಮಿತ್‌ ಶಾ ಹೇಳಿದರು. ಇಂದು ಈ ಮೂರು ಸ್ಥಳಗಳಲ್ಲಿಶಾಂತಿ ಸ್ಥಾಪನೆಯಲ್ಲಿ ಯಶಸ್ಸನ್ನು ಸಾಧಿಸಲಾಗಿದೆ ಎಂದು ಅವರು ಹೇಳಿದರು. ಈ ಮೂರು ಹಾಟ್‌ಸ್ಪಾಟ್‌ಗಳಲ್ಲಿ ಬಾಂಬ್‌ ಸೊಧೀಟಗಳು, ಗುಂಡುಗಳು, ಬಂದ್‌ಗಳು, ದಿಗ್ಬಂಧನಗಳು ಮತ್ತು ವಿನಾಶಗಳು ಒಂದು ಕಾಲದಲ್ಲಿ ಪ್ರಮುಖವಾಗಿದ್ದವು, ಆದರೆ ಈಗ ಈ ಮೂರು ಪ್ರದೇಶಗಳು ಬೆಳವಣಿಗೆಯ ಎಂಜಿನ್‌ಗಳಾಗಿ ಮಾರ್ಪಟ್ಟಿವೆ, ಇಡೀ ದೇಶದ ಅಭಿವೃದ್ಧಿಯನ್ನು ಮುನ್ನಡೆಸುತ್ತಿವೆ ಎಂದು ಅವರು ಹೇಳಿದರು. ಈ ಸಿಆರ್‌ಪಿಎಫ್‌ ಹುತಾತ್ಮರ ತ್ಯಾಗವಿಲ್ಲದೆ, ಈ ಮೂರು ಹಾಟ್‌ಸ್ಪಾಟ್‌ಗಳನ್ನು ಅಭಿವೃದ್ಧಿಯ ಪಥಕ್ಕೆ ತರುವುದು ಅಸಾಧ್ಯವಾಗಿತ್ತು ಎಂದು ಅವರು ಹೇಳಿದರು.

ಇಂದಿನ ಸಿಆರ್‌ಪಿಎಫ್‌ ದಿನದ ಪರೇಡ್‌ ಮತ್ತೊಂದು ದೃಷ್ಟಿಕೋನದಿಂದ ಸಾಕಷ್ಟು ಮಹತ್ವದ್ದಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಸಿಆರ್‌ಪಿಎಫ್‌ನ 86 ವರ್ಷಗಳ ಇತಿಹಾಸದಲ್ಲಿ, ಇದೇ ಮೊದಲ ಬಾರಿಗೆ ಸಿಆರ್‌ಪಿಎಫ್‌ ಸಂಸ್ಥಾಪನಾ ದಿನಾಚರಣೆಯನ್ನು ಈಶಾನ್ಯ, ಅಸ್ಸಾಂನಲ್ಲಿ ನಡೆಸಲಾಗುತ್ತಿದೆ. ಇದು ನಮ್ಮೆಲ್ಲರಿಗೂ ಮತ್ತು ಇಡೀ ಈಶಾನ್ಯಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಅವರು ಹೇಳಿದರು. 2019ರಲ್ಲಿ, ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಗಳ (ಸಿಎಪಿಎಫ್‌) ವಾರ್ಷಿಕ ಮೆರವಣಿಗೆಯನ್ನು ದೇಶದ ವಿವಿಧ ಭಾಗಗಳಲ್ಲಿ ನಡೆಸಲು ನಿರ್ಧರಿಸಲಾಯಿತು ಮತ್ತು ಇಂದು ಸಿಆರ್‌ಪಿಎಫ್‌ ಮೆರವಣಿಗೆಯನ್ನು ದೇಶದ ಪ್ರಮುಖ ಭಾಗಗಳಲ್ಲಿ ಒಂದಾದ ಈಶಾನ್ಯದಲ್ಲಿ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಇಂದು 14 ಸಿಆರ್‌ಪಿಎಫ್‌ ಯೋಧರಿಗೆ ಶೌರ್ಯಕ್ಕಾಗಿ ಪೊಲೀಸ್‌ ಪದಕ, 5 ಯೋಧರಿಗೆ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್‌ ಪದಕ ಮತ್ತು 5 ಸಿಆರ್‌ಪಿಎಫ್‌ ಬೆಟಾಲಿಯನ್‌ಗಳಿಗೆ ಅತ್ಯುತ್ತಮ ಸಾಧನೆಗಾಗಿ ಪದಕಗಳನ್ನು ನೀಡಿ ಗೌರವಿಸಲಾಗಿದೆ ಎಂದು ಶ್ರೀ ಅಮಿತ್‌ ಶಾ ಹೇಳಿದರು. ಸಿಆರ್‌ಪಿಎಫ್‌ನ ಪ್ರಯಾಣವು 1939 ರಲ್ಲಿಕೇವಲ 2 ಬೆಟಾಲಿಯನ್‌ಗಳೊಂದಿಗೆ ಪ್ರಾರಂಭವಾಯಿತು ಮತ್ತು ಇಂದು 248 ಬೆಟಾಲಿಯನ್‌ಗಳು ಮತ್ತು 3.25 ಲಕ್ಷ  ಸಿಬ್ಬಂದಿಯೊಂದಿಗೆ ಸಿಆರ್‌ಪಿಎಫ್‌ ವಿಶ್ವದ ಅತಿದೊಡ್ಡ ಸಿಎಪಿಎಫ್‌ ಆಗಿ ಮಾರ್ಪಟ್ಟಿದೆ ಎಂದು ಅವರು ಹೇಳಿದರು. ಇಡೀ ದೇಶದ ಆಂತರಿಕ ಭದ್ರತೆ ಮತ್ತು ಸಾರ್ವಭೌಮತ್ವವನ್ನು ರಕ್ಷಿಸುವಲ್ಲಿ ಸಿಆರ್‌ಪಿಎಫ್‌ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಒತ್ತಿ ಹೇಳಿದರು. 1965ರ ಏಪ್ರಿಲ್‌ 9ರಂದು, ರಾನ್‌ ಆಫ್‌ ಕಚ್‌ನಲ್ಲಿ, ಸರ್ದಾರ್‌ ಪೋಸ್ಟ್‌ನಲ್ಲಿ ಪಾಕಿಸ್ತಾನ ಸೇನೆಯನ್ನು ಎದುರಿಸುವಾಗ ಸಿಆರ್‌ಪಿಎಫ್‌ ಬಹಳ ಶೌರ್ಯವನ್ನು ಪ್ರದರ್ಶಿಸಿತು ಮತ್ತು ಆದ್ದರಿಂದ ಪ್ರತಿ ವರ್ಷ ಏಪ್ರಿಲ್‌ 9 ಅನ್ನು ‘ಶೌರ್ಯ ದಿವಸ್‌’ ಎಂದು ಆಚರಿಸಲಾಗುತ್ತದೆ ಎಂದು ಶ್ರೀ ಅಮಿತ್‌ ಶಾ ಹೇಳಿದರು.

ಕೋಲ್ಕತ್ತಾದಲ್ಲಿ ಎಡಪಂಥೀಯ ಉಗ್ರಗಾಮಿಗಳ ದಾಳಿಯಲ್ಲಿ78 ಪೊಲೀಸ್‌ ಸಿಬ್ಬಂದಿ ಹುತಾತ್ಮರಾದಾಗಲೂ, ಸಿಆರ್‌ಪಿಎಫ್‌ ಧೈರ್ಯದಿಂದ ಮುಂಚೂಣಿಯನ್ನು ಹಿಡಿದಿಟ್ಟುಕೊಂಡಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಸಿಆರ್‌ಪಿಎಫ್‌ ಸಂಸತ್ತಿನ ಮೇಲಿನ ಭಯೋತ್ಪಾದಕ ದಾಳಿಯನ್ನು ವಿಫಲಗೊಳಿಸಿತು ಮತ್ತು 2005 ರಲ್ಲಿ ಶ್ರೀ ರಾಮ ಜನ್ಮಭೂಮಿಯ ಮೇಲಿನ ದಾಳಿಯನ್ನು ವಿಫಲಗೊಳಿಸಿತು ಎಂದು ಅವರು ಹೇಳಿದರು. ಸಿ.ಆರ್‌.ಪಿ.ಎಫ್‌. ಸಿಬ್ಬಂದಿ ತಮ್ಮ ಕರ್ತವ್ಯದಲ್ಲಿ ಎಂದಿಗೂ ವಿಫಲರಾಗುವುದಿಲ್ಲ ಎಂದು ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದು ಪಡಿಸಿದ ನಂತರ, ಒಂದೇ ಒಂದು ಗುಂಡು ಹಾರಿಸಬೇಕಾಗಿಲ್ಲ ಮತ್ತು ಇದನ್ನು ಖಚಿತಪಡಿಸಿಕೊಳ್ಳುವಲ್ಲಿ ಸಿಆರ್‌ಪಿಎಫ್‌ ಬಹಳ ಮಹತ್ವದ ಪಾತ್ರ ವಹಿಸಿದೆ ಎಂದು ಶ್ರೀ ಅಮಿತ್‌ ಶಾ ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಕಲ್ಲು ತೂರಾಟದ ಘಟನೆಗಳು ಶೂನ್ಯಕ್ಕೆ ಇಳಿದಿವೆ, ಕೈಗಾರಿಕೆಗಳು ಬರುತ್ತಿವೆ ಮತ್ತು ಸಿಆರ್‌ಪಿಎಫ್‌, ಬಿಎಸ್‌ಎಫ್‌ ಮತ್ತು ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಪ್ರಮುಖ ಕೊಡುಗೆಗಳೊಂದಿಗೆ ಅಭಿವೃದ್ಧಿ ನಡೆಯುತ್ತಿದೆ ಎಂದು ಅವರು ಹೇಳಿದರು. ಈಶಾನ್ಯ ರಾಜ್ಯಗಳಲ್ಲಿ ಶಾಂತಿ ಸ್ಥಾಪಿಸುವಲ್ಲಿ ಸಿಆರ್‌ಪಿಎಫ್‌ ದೊಡ್ಡ ಪಾತ್ರ ವಹಿಸಿದೆ ಎಂದು ಅವರು ಹೇಳಿದರು.

ನಕ್ಸಲಿಸಂ ದೇಶದ 12 ರಾಜ್ಯಗಳು ಮತ್ತು ಅಸಂಖ್ಯಾತ ಜಿಲ್ಲೆಗಳಲ್ಲಿ ಹರಡಿತ್ತು ಮತ್ತು ಭಾರತ ಸರ್ಕಾರವು ಈ ಪಿಡುಗನ್ನು ಬೇರುಸಹಿತ ಕಿತ್ತೊಗೆಯಲು ನಿರ್ಧರಿಸಿದಾಗ, ಸಿಆರ್‌ಪಿಎಫ್‌ ಮತ್ತು ಕೋಬ್ರಾ ಪಡೆಯ ಸಿಬ್ಬಂದಿ ಈ ಪ್ರಯತ್ನದಲ್ಲಿಅತ್ಯಂತ ನಿರ್ಣಾಯಕ ಪಾತ್ರ ವಹಿಸಿದರು ಎಂದು ಶ್ರೀ ಅಮಿತ್‌ ಶಾ ಹೇಳಿದರು. ಅಂತಹ ಬೃಹತ್‌, ಸಂಕೀರ್ಣ ಮತ್ತು ಕಷ್ಟಕರವಾದ ಕೆಲಸವನ್ನು ಕೇವಲ ಮೂರು ವರ್ಷಗಳಲ್ಲಿ ಪೂರ್ಣಗೊಳಿಸಲಾಗಿದೆ ಮತ್ತು ಸಿಆರ್‌ಪಿಎಫ್‌ ಸಿಬ್ಬಂದಿಯಿಂದಾಗಿಯೇ 2026ರ ಮಾರ್ಚ್‌ 31ರ ವೇಳೆಗೆ ದೇಶವು ನಕ್ಸಲಿಸಂನಿಂದ ಸಂಪೂರ್ಣವಾಗಿ ಮುಕ್ತವಾಗಲಿದೆ ಎಂದು ನಾವು ವಿಶ್ವಾಸದಿಂದ ಹೇಳಬಹುದು ಎಂದು ಅವರು ಹೇಳಿದರು. ನಕ್ಸಲೀಯರ ವಿರುದ್ಧ ಆಪರೇಷನ್‌ ಬ್ಲ್ಯಾಕ್‌ ಫಾರೆಸ್ಟ್‌ ಅಡಿಯಲ್ಲಿ, ಸಿಆರ್‌ಪಿಎಫ್‌ ಸಿಬ್ಬಂದಿ ಅತ್ಯಂತ ಸವಾಲಿನ ಭೌಗೋಳಿಕ ಪರಿಸ್ಥಿತಿಗಳಲ್ಲಿ 21 ದಿನಗಳ ಕಾಲ ಕಾರ್ಯಾಚರಣೆ ನಡೆಸಿದರು. ಸುಡುವ ಬಿಸಿಲಿನಲ್ಲಿ 45 ಡಿಗ್ರಿ ಸೆಲ್ಸಿಯಸ್‌ ತಾಪಮಾನವನ್ನು ಸಹಿಸಿಕೊಂಡರು ಮತ್ತು ನಕ್ಸಲೀಯರ ಭದ್ರಕೋಟೆಯನ್ನು ನಿರ್ಮೂಲನೆ ಮಾಡಿದರು ಎಂದು ಶ್ರೀ ಅಮಿತ್‌ ಶಾ ಹೇಳಿದರು. ಅಸಾಧಾರಣ ಧೈರ್ಯವನ್ನು ಪ್ರದರ್ಶಿಸಿದ ಸಿಆರ್‌ಪಿಎಫ್‌ ಯೋಧರು 45 ಡಿಗ್ರಿ ತಾಪಮಾನದಿಂದ ಬಿಸಿಯಾದ ಕಲ್ಲಿನ ಬೆಟ್ಟಗಳ ಮೇಲೆ 21 ದಿನಗಳ ಕಾಲ ಕಾರ್ಯನಿರ್ವಹಿಸುವಾಗ ಒಂದು ಇಂಚು ಸಹ ಹಿಂದೆ ಸರಿಯಲಿಲ್ಲ, ಅಂತಿಮವಾಗಿ ನಕ್ಸಲೀಯರ ಆಯಕಟ್ಟಿನ ನೆಲೆಯನ್ನು ಕೆಡವಿದರು ಎಂದು ಅವರು ಹೇಳಿದರು. ದೇಶವನ್ನು ಕೆಂಪು ಭಯೋತ್ಪಾದನೆಯಿಂದ ಮುಕ್ತಗೊಳಿಸುವಲ್ಲಿ ಸಿಆರ್‌ಪಿಎಫ್‌ ಮತ್ತು ಕೋಬ್ರಾ ಪಡೆ ಬಹಳ ಮಹತ್ವದ ಕೊಡುಗೆ ನೀಡಿದೆ ಎಂದು ಅವರು ಹೇಳಿದರು.

ಹಲವಾರು ಧಾರ್ಮಿಕ ಉತ್ಸವಗಳಾದ ಮಹಾಕುಂಭ ಮತ್ತು ಅಮರನಾಥ ಯಾತ್ರೆಯನ್ನು ಯಶಸ್ವಿಯಾಗಿ ನಡೆಸಲು ಸಿಆರ್‌ಪಿಎಫ್‌ ಯೋಧರು ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಸಿಆರ್‌ಪಿಎಫ್‌ ಸತತವಾಗಿ ದೇಶದ ಆಂತರಿಕ ಭದ್ರತೆಯನ್ನು ಬಲಪಡಿಸಿದೆ ಮತ್ತು ರಕ್ಷಿಸಿದೆ ಎಂದು ಅವರು ಹೇಳಿದರು.

 

*****


(ಪ್ರಕಟಣೆ ಐ.ಡಿ.: 2231337) ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , Assamese , Bengali , Gujarati , Odia , Tamil , Malayalam