ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026 ರಲ್ಲಿ 24 ಗಂಟೆಗಳಲ್ಲಿ 2.5 ಲಕ್ಷಕ್ಕೂ ಹೆಚ್ಚು ಎಐ ಜವಾಬ್ದಾರಿ ಪ್ರತಿಜ್ಞೆಗಳೊಂದಿಗೆ ಭಾರತವು ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದೆ: ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಘೋಷಣೆ
ಪ್ರಕಟಣಾ ದಿನಾಂಕ:
18 FEB 2026 4:09PM by PIB Bengaluru
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು, ಫೆಬ್ರವರಿ 16-17 ರ 24 ಗಂಟೆಗಳ ಅವಧಿಯಲ್ಲಿ ಒಟ್ಟು 2,50,946 ಮಾನ್ಯ ಪ್ರತಿಜ್ಞೆಗಳನ್ನು ಸ್ವೀಕರಿಸುವ ಮೂಲಕ, “24 ಗಂಟೆಗಳಲ್ಲಿ ಎಐ ಜವಾಬ್ದಾರಿ ಅಭಿಯಾನಕ್ಕಾಗಿ ಅತಿ ಹೆಚ್ಚು ಪ್ರತಿಜ್ಞೆಗಳನ್ನು ಸ್ವೀಕರಿಸಿದ” ಗಿನ್ನೆಸ್ ವಿಶ್ವ ದಾಖಲೆಯನ್ನು ಭಾರತ ಯಶಸ್ವಿಯಾಗಿ ಸಾಧಿಸಿದೆ ಎಂದು ಘೋಷಿಸಿದರು.
ನವದೆಹಲಿಯ ಭಾರತ ಮಂಟಪದಲ್ಲಿ ನಡೆಯುತ್ತಿರುವ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026 ರ ಸಂದರ್ಭದಲ್ಲಿ ಈ ಘೋಷಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಶ್ರೀ ಎಸ್. ಕೃಷ್ಣನ್; ಹೆಚ್ಚುವರಿ ಕಾರ್ಯದರ್ಶಿ, ಇಂಡಿಯಾ ಎಐ ಮಿಷನ್ ಸಿಇಒ ಮತ್ತು ಎನ್ ಐ ಸಿ ಮಹಾನಿರ್ದೇಶಕ ಶ್ರೀ ಅಭಿಷೇಕ್ ಸಿಂಗ್; ಇಂಡಿಯಾ ಎಐ ನ ಸಿಒಒ ಶ್ರೀಮತಿ ಕವಿತಾ ಭಾಟಿಯಾ; ಇಂಟೆಲ್ ನ ಸೆಂಟ್ರಲ್ ಇಂಜಿನಿಯರಿಂಗ್ ಗ್ರೂಪ್ ನ ಎಸ್ ವಿ ಪಿ ಮತ್ತು ಜಿಎಂ ಶ್ರೀ ಶ್ರೀನಿವಾಸನ್ ಅಯ್ಯಂಗಾರ್ ಮತ್ತು ಈ ಸಾಧನೆಯನ್ನು ಅಧಿಕೃತವಾಗಿ ಪರಿಶೀಲಿಸಿದ ಗಿನ್ನೆಸ್ ವಿಶ್ವ ದಾಖಲೆಯ ತೀರ್ಪುಗಾರರಾದ ಶ್ರೀ ಪ್ರವೀಣ್ ಪಟೇಲ್ ಉಪಸ್ಥಿತರಿದ್ದರು.

ಫೆಬ್ರವರಿ 16 ರಂದು ಇಂಟೆಲ್ ಇಂಡಿಯಾ ಸಹಯೋಗದೊಂದಿಗೆ ಇಂಡಿಯಾ ಎಐ ಮಿಷನ್ ಅಡಿಯಲ್ಲಿ ಪ್ರಾರಂಭಿಸಲಾದ ಈ ರಾಷ್ಟ್ರವ್ಯಾಪಿ ಎಐ ಜವಾಬ್ದಾರಿ ಪ್ರತಿಜ್ಞಾ ಅಭಿಯಾನವು, ಮೀಸಲಾದ ಪೋರ್ಟಲ್ aipledge.indiaai.gov.in ಮೂಲಕ ಕೃತಕ ಬುದ್ಧಿಮತ್ತೆಯ (ಎಐ) ನೈತಿಕ, ಸಮಗ್ರ ಮತ್ತು ಜವಾಬ್ದಾರಿಯುತ ಬಳಕೆಗೆ ಬದ್ಧರಾಗಲು ದೇಶಾದ್ಯಂತ ನಾಗರಿಕರನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿತ್ತು. ಈ ಉಪಕ್ರಮವು ದತ್ತಾಂಶ ಗೌಪ್ಯತೆ, ಹೊಣೆಗಾರಿಕೆ, ಪಾರದರ್ಶಕತೆ ಮತ್ತು ತಪ್ಪು ಮಾಹಿತಿಯನ್ನು ಎದುರಿಸುವಂತಹ ಪ್ರಮುಖ ತತ್ವಗಳ ಬಗ್ಗೆ ಸನ್ನಿವೇಶ-ಆಧಾರಿತ ಪ್ರಶ್ನೆಗಳ ಮೂಲಕ ಭಾಗವಹಿಸುವವರನ್ನು ಉತ್ತೇಜಿಸಿತು. ಆ ಮೂಲಕ ವಿಶ್ವಾಸಾರ್ಹ ಮತ್ತು ಮಾನವ ಕೇಂದ್ರಿತ ಎಐ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಭಾರತದ ದೃಷ್ಟಿಕೋನವನ್ನು ಬಲಪಡಿಸಿತು. ಪ್ರತಿಜ್ಞೆಯನ್ನು ಪೂರ್ಣಗೊಳಿಸಿದ ಭಾಗವಹಿಸುವವರು ಡಿಜಿಟಲ್ ಬ್ಯಾಡ್ಜ್ ಮತ್ತು ಎಐ ಕಲಿಕೆಯ ಮಾರ್ಗಗಳಿಗೆ ಪ್ರವೇಶವನ್ನು ಪಡೆದರು.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀ ವೈಷ್ಣವ್ ಅವರು, ಎಐನ ಜವಾಬ್ದಾರಿಯುತ ಮತ್ತು ನೈತಿಕ ಬಳಕೆಯಲ್ಲಿ ಯುವಕರನ್ನು ತೊಡಗಿಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನವನ್ನು ಶ್ಲಾಘಿಸಿದರು. “ಅವರ ದೃಷ್ಟಿಕೋನವೇ ನಮಗೆ ಕಾಲೇಜುಗಳನ್ನು ತಲುಪಲು, ಬೋಧಕ ಸಿಬ್ಬಂದಿಯೊಂದಿಗೆ ಸಂವಹನ ನಡೆಸಲು ಮತ್ತು ವಿದ್ಯಾರ್ಥಿಗಳು ಎಐ ಅನ್ನು ಸಮಾಜದ ಒಳಿತಿಗಾಗಿ - ನಮ್ಮ ಜೀವನವನ್ನು ಸುಧಾರಿಸುವ ತಂತ್ರಜ್ಞಾನವಾಗಿ - ಬಳಸಲು ಮತ್ತು ಅದನ್ನು ಜವಾಬ್ದಾರಿಯುತವಾಗಿ ಬಳಸುವುದನ್ನು ಖಚಿತಪಡಿಸಿಕೊಳ್ಳಲು ಈ ಪ್ರತಿಜ್ಞೆ ತೆಗೆದುಕೊಳ್ಳಲು ಪ್ರೇರೇಪಿಸಿತು. ಈ ಪ್ರತಿಜ್ಞೆ ಸ್ವೀಕರಿಸಿದ 2,50,000 ವಿದ್ಯಾರ್ಥಿಗಳಿಗೆ ವಿಶೇಷ ಚಪ್ಪಾಳೆಗಳು. ಇದು ನಿಜಕ್ಕೂ ದೇಶಕ್ಕೆ ಹೆಮ್ಮೆಯ ದಿನ. ಜವಾಬ್ದಾರಿಯೊಂದಿಗೆ ಎಐ ಅನ್ನು ಅಳವಡಿಸಿಕೊಳ್ಳುವ ಭವಿಷ್ಯದತ್ತ ರಾಷ್ಟ್ರವು ಸಾಗಬೇಕಾದ ದಿಕ್ಕು ಇದಾಗಿದೆ” ಎಂದು ಅವರು ಹೇಳಿದರು.
ಆರಂಭಿಕ ಗುರಿಯಾಗಿದ್ದ 5,000 ಪ್ರತಿಜ್ಞೆಗಳನ್ನು ಮೀರಿ ದಾಖಲೆಯ ಮಟ್ಟದಲ್ಲಿ ಜನರು ಭಾಗವಹಿಸಿರುವುದು, ಜವಾಬ್ದಾರಿಯುತ ಎಐ ಅಳವಡಿಕೆಯ ಬಗ್ಗೆ ಸಾರ್ವಜನಿಕರಲ್ಲಿ ಇರುವ ಬಲವಾದ ಆಸಕ್ತಿ ಮತ್ತು ಬೆಳೆಯುತ್ತಿರುವ ಜಾಗೃತಿಯನ್ನು ಪ್ರತಿಫಲಿಸುತ್ತದೆ ಎಂದು ಸಚಿವರು ಹೇಳಿದರು. ಈ ಅಭಿಯಾನವು ನಾಗರಿಕ ನೇತೃತ್ವದ ಡಿಜಿಟಲ್ ಜವಾಬ್ದಾರಿಯಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ಪ್ರತಿನಿಧಿಸುತ್ತದೆ ಮತ್ತು ಒಳಗೊಳ್ಳುವಿಕೆ, ನೈತಿಕತೆ ಮತ್ತು ಸಾರ್ವಜನಿಕ ವಿಶ್ವಾಸದ ಮೇಲೆ ಕೇಂದ್ರೀಕರಿಸುವ ಮೂಲಕ ಜಾಗತಿಕ ಎಐ ಚರ್ಚೆಯನ್ನು ರೂಪಿಸುವಲ್ಲಿ ಭಾರತದ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದು ಹೇಳಿದರು.
*****
(ಪ್ರಕಟಣೆ ಐ.ಡಿ.: 2229688)
ವಿಸಿಟರ್ ಕೌಂಟರ್ : 22