ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಗವಾನ್ ಬುದ್ಧನಿಗೆ ಸಂಬಂಧಿಸಿದ ಪವಿತ್ರ ಪಿಪ್ರಹ್ವಾ ಅವಶೇಷ(ಕಳೇಬರ)ಗಳ ಭವ್ಯ ಅಂತಾರಾಷ್ಟ್ರೀಯ ಪ್ರದರ್ಶನದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

प्रविष्टि तिथि: 03 JAN 2026 2:59PM by PIB Bengaluru

ನಮೋ ಬುದ್ಧಾಯ.

ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಗಜೇಂದ್ರ ಸಿಂಗ್ ಶೇಖಾವತ್ ಜಿ, ಕಿರಣ್ ರಿಜಿಜು ಜಿ, ರಾಮದಾಸ್ ಅಠಾವಳೆ ಜಿ, ದೆಹಲಿಯ ಮುಖ್ಯಮಂತ್ರಿ ರಾವ್ ಇಂದರ್ಜಿತ್ ಜಿ, ದೆಹಲಿಯ ಎಲ್ಲಾ ಸಚಿವರೆ, ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಶ್ರೀ ಸಕ್ಸೇನಾ ಜಿ, ಗೌರವಾನ್ವಿತ ರಾಜತಾಂತ್ರಿಕ ಸದಸ್ಯರೆ, ಬೌದ್ಧ ವಿದ್ವಾಂಸರು, ಧಮ್ಮ ಅನುಯಾಯಿಗಳು, ಮಹಿಳೆಯರೆ ಮತ್ತು ಮಹನೀಯರೆ.

125 ವರ್ಷಗಳ ಸುದೀರ್ಘ ನಿರೀಕ್ಷೆಯ ನಂತರ ಭಾರತದ ಪರಂಪರೆ ಮರಳಿದೆ, ಭಾರತದ ಪರಂಪರೆ ಮರಳಿ ಬಂದಿದೆ. ಇಂದಿನಿಂದ ಭಾರತೀಯರು ಭಗವಾನ್ ಬುದ್ಧನ ಈ ಪವಿತ್ರ ಅವಶೇಷ(ಕಳೇಬರ)ಗಳನ್ನು ವೀಕ್ಷಿಸಲು ಮತ್ತು ಅವರ ಆಶೀರ್ವಾದ ಪಡೆಯಲು ಸಾಧ್ಯವಾಗುತ್ತಿದೆ. ಈ ಶುಭ ಸಂದರ್ಭದಲ್ಲಿ ಇಲ್ಲಿ ಉಪಸ್ಥಿತರಿರುವ ಎಲ್ಲಾ ಅತಿಥಿಗಳಿಗೆ ನಾನು ಆತ್ಮೀಯ ಸ್ವಾಗತ ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ. ಈ ಪವಿತ್ರ ಸಂದರ್ಭದಲ್ಲಿ, ಬೌದ್ಧ ಸಂಪ್ರದಾಯದೊಂದಿಗೆ ಸಂಬಂಧ ಹೊಂದಿರುವ ಸಾಧು ಸನ್ಯಾಸಿಗಳು ಮತ್ತು ಧರ್ಮ ಬೋಧಕರು ನಮ್ಮನ್ನು ಆಶೀರ್ವದಿಸಲು ಇಲ್ಲಿ ಹಾಜರಿದ್ದಾರೆ. ನಾನು ನಿಮ್ಮೆಲ್ಲರಿಗೂ ನಮಸ್ಕರಿಸುತ್ತೇನೆ. ನಿಮ್ಮ ಉಪಸ್ಥಿತಿಯು ಈ ಕಾರ್ಯಕ್ರಮಕ್ಕೆ ಹೊಸ ಎತ್ತರ ಮತ್ತು ಹೊಸ ಶಕ್ತಿಯನ್ನು ನೀಡುತ್ತಿದೆ. 2026ರ ಆರಂಭದಲ್ಲಿ, ಈ ಶುಭ ಆಚರಣೆ ನಿಜವಾಗಿಯೂ ಸ್ಫೂರ್ತಿದಾಯಕವಾಗಿದೆ. 2026ರ ನನ್ನ ಮೊದಲ ಸಾರ್ವಜನಿಕ ಕಾರ್ಯಕ್ರಮವು ಭಗವಾನ್ ಬುದ್ಧನ ಪಾದಗಳಿಗೆ ನಮಸ್ಕರಿಸುತ್ತಿರುವುದು ನನ್ನ ಅದೃಷ್ಟ. ಭಗವಾನ್ ಬುದ್ಧನ ಆಶೀರ್ವಾದದೊಂದಿಗೆ 2026 ವರ್ಷವು ಜಗತ್ತಿಗೆ ಶಾಂತಿ, ಸಮೃದ್ಧಿ ಮತ್ತು ಸಾಮರಸ್ಯದ ಹೊಸ ಯುಗವನ್ನು ಆರಂಭಿಸುತ್ತದೆ ಎಂಬುದು ನನ್ನ ಆಶಯವಾಗಿದೆ.

ಸ್ನೇಹಿತರೆ,

ಈ ಪ್ರದರ್ಶನ ಸ್ಥಳವು ತುಂಬಾ ವಿಶೇಷವಾಗಿದೆ. ಕಿಲಾ ರಾಯ್ ಪಿಥೋರಾ ಸ್ಥಳವು ಭಾರತದ ಅದ್ಭುತ ಇತಿಹಾಸದ ಭೂಮಿಯಾಗಿದೆ. ಸುಮಾರು 1 ಸಾವಿರ ವರ್ಷಗಳ ಹಿಂದೆ, ಆ ಕಾಲದ ಆಡಳಿತಗಾರರು ಈ ಐತಿಹಾಸಿಕ ಕೋಟೆಯ ಸುತ್ತಲೂ ಸುಭದ್ರ ಮತ್ತು ಸುರಕ್ಷಿತ ಕೋಟೆಗಳಿಂದ ಸುತ್ತುವರೆದ ನಗರ ಸ್ಥಾಪಿಸಿದರು. ಇಂದು ಅದೇ ಐತಿಹಾಸಿಕ ನಗರ ಸಂಕೀರ್ಣದಲ್ಲಿ, ನಾವು ನಮ್ಮ ಇತಿಹಾಸಕ್ಕೆ ಆಧ್ಯಾತ್ಮಿಕ ಮತ್ತು ಪವಿತ್ರ ಅಧ್ಯಾಯವನ್ನು ಸೇರಿಸುತ್ತಿದ್ದೇವೆ.

ಸ್ನೇಹಿತರೆ,

ಇಲ್ಲಿಗೆ ಬರುವ ಮೊದಲು, ನಾನು ಈ ಐತಿಹಾಸಿಕ ಪ್ರದರ್ಶನವನ್ನು ಸೂಕ್ಷ್ಮವಾಗಿ ಗಮನಿಸಿದೆ. ಭಗವಾನ್ ಬುದ್ಧನ ಪವಿತ್ರ ಅವಶೇಷ(ಕಳೇಬರ)ಗಳು ನಮ್ಮೆಲ್ಲರನ್ನೂ ಧನ್ಯರನ್ನಾಗಿ ಮಾಡುತ್ತವೆ. ಅವರು ಭಾರತದಿಂದ ನಿರ್ಗಮಿಸುವುದು ಮತ್ತು ಅಂತಿಮವಾಗಿ ಹಿಂತಿರುಗುವುದು ಎರಡೂ ಸಹ ಗಮನಾರ್ಹ ಪಾಠಗಳಾಗಿವೆ. ಪಾಠವೆಂದರೆ ಗುಲಾಮಗಿರಿಯು ರಾಜಕೀಯ ಮತ್ತು ಆರ್ಥಿಕತೆಯನ್ನು ಮಾತ್ರವಲ್ಲದೆ, ಅದು ನಮ್ಮ ಪರಂಪರೆಯನ್ನು ಸಹ ನಾಶಪಡಿಸುತ್ತದೆ. ಭಗವಾನ್ ಬುದ್ಧನ ಪವಿತ್ರ ಅವಶೇಷಗಳ ವಿಷಯದಲ್ಲೂ ಅದೇ ಸಂಭವಿಸಿತು. ಗುಲಾಮಗಿರಿಯ ಅವಧಿಯಲ್ಲಿ, ಅವುಗಳನ್ನು ಭಾರತದಿಂದ ಕೊಂಡೊಯ್ಯಲಾಯಿತು. ಸುಮಾರು 125 ವರ್ಷಗಳ ಕಾಲ ದೇಶದ ಹೊರಗೆ ಉಳಿದವು. ಅವುಗಳನ್ನು ಕೊಂಡೊಯ್ದವರಿಗೆ ಮತ್ತು ಅವರ ವಂಶಸ್ಥರಿಗೆ, ಈ ಅವಶೇಷಗಳು ಕೇವಲ ನಿರ್ಜೀವ ಪ್ರಾಚೀನ ತುಣುಕುಗಳಾಗಿದ್ದವು. ಅದಕ್ಕಾಗಿಯೇ ಅವರು ಈ ಪವಿತ್ರ ಅವಶೇಷಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹರಾಜು ಮಾಡಲು ಪ್ರಯತ್ನಿಸಿದರು. ಆದರೆ ಭಾರತಕ್ಕೆ ಈ ಅವಶೇಷಗಳು ನಮ್ಮ ಪೂಜ್ಯ ದೇವತೆಯ ಭಾಗವಾಗಿದೆ, ನಮ್ಮ ನಾಗರಿಕತೆಯ ಅವಿಭಾಜ್ಯ ಅಂಗವಾಗಿದೆ. ಆದ್ದರಿಂದ, ಭಾರತವು ಅವುಗಳ ಸಾರ್ವಜನಿಕ ಹರಾಜಿಗೆ ಅನುಮತಿ ನೀಡಬಾರದು ಎಂದು ನಿರ್ಧರಿಸಿತು. ಇಂದು ಗೋದ್ರೇಜ್ ಗ್ರೂಪ್‌ಗೆ ನಾನು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ, ಅವರ ಸಹಕಾರವು ಭಗವಾನ್ ಬುದ್ಧನೊಂದಿಗೆ ಸಂಪರ್ಕ ಹೊಂದಿದ ಈ ಪವಿತ್ರ ಅವಶೇಷಗಳು ಅವರ ಕರ್ಮ ಭೂಮಿ, ಅವರ ಚಿಂತನ ಭೂಮಿ, ಅವರ ಮಹಾಬೋಧಿ ಭೂಮಿ ಮತ್ತು ಅವರ ಮಹಾಪರಿನಿರ್ವಾಣ ಭೂಮಿಗೆ ಮರಳುವಂತೆ ಖಚಿತಪಡಿಸಿತು.

ಸ್ನೇಹಿತರೆ,

ಭಗವಾನ್ ಬುದ್ಧನ ಜ್ಞಾನ ಮತ್ತು ಅವನು ತೋರಿಸಿದ ಮಾರ್ಗವು ಎಲ್ಲವೂ ಮಾನವತೆಗೆ ಸೇರಿದ್ದು, ಕಾಲಾತೀತವಾಗಿದೆ, ಅದು ಕಾಲದಿಂದ ಬದಲಾಗಿಲ್ಲ. ಇತ್ತೀಚಿನ ತಿಂಗಳುಗಳಲ್ಲಿ ನಾವು ಈ ಭಾವನೆಯನ್ನು ಪದೇಪದೆ ಅನುಭವಿಸಿದ್ದೇವೆ. ಇತ್ತೀಚಿನ ತಿಂಗಳುಗಳಲ್ಲಿ ಭಗವಾನ್ ಬುದ್ಧನ ಪವಿತ್ರ ಅವಶೇಷಗಳು ಎಲ್ಲೆಲ್ಲಿ ಪ್ರಯಾಣಿಸಿದವು, ನಂಬಿಕೆ ಮತ್ತು ಭಕ್ತಿಯ ಅಲೆಗಳು ಹುಟ್ಟಿಕೊಂಡವು ಅಂತಹ ಪವಿತ್ರ ಅವಶೇಷಗಳನ್ನು ಥಾಯ್ಲೆಂಡ್‌ನ ವಿವಿಧ ಸ್ಥಳಗಳಲ್ಲಿ ಇರಿಸಲಾಗಿತ್ತು, ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ, 4 ದಶಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನಕ್ಕಾಗಿ ಬಂದರು. ವಿಯೆಟ್ನಾಂನಲ್ಲಿ, ಸಾರ್ವಜನಿಕ ಭಾವನೆ ಎಷ್ಟು ಪ್ರಬಲವಾಗಿತ್ತೆಂದರೆ ಪ್ರದರ್ಶನದ ಅವಧಿಯನ್ನು ವಿಸ್ತರಿಸಬೇಕಾಯಿತು. ಅಲ್ಲಿನ 9  ನಗರಗಳಲ್ಲಿ, ಸುಮಾರು 19 ದಶಲಕ್ಷ ಜನರು ಅವಶೇಷಗಳಿಗೆ ಗೌರವ ಸಲ್ಲಿಸಿದರು. ಮಂಗೋಲಿಯಾದಲ್ಲಿ ಸಾವಿರಾರು ಜನರು ಗಂಡನ್ ಮಠದ ಹೊರಗೆ ಗಂಟೆಗಟ್ಟಲೆ ಕಾಯುತ್ತಿದ್ದರು, ಅನೇಕ ಭಾರತೀಯ ಪ್ರತಿನಿಧಿಗಳು ಬುದ್ಧನ ಭೂಮಿಯಿಂದ ಬಂದಿದ್ದಾರೆ ಎಂಬ ಕಾರಣಕ್ಕಾಗಿ ಅವರನ್ನು ಸ್ಪರ್ಶಿಸಲು ಬಯಸಿದ್ದರು. ರಷ್ಯಾದ ಕಲ್ಮಿಕಿಯಾ ಪ್ರದೇಶದಲ್ಲಿ ಕೇವಲ 1 ವಾರದಲ್ಲಿ 1.50 ಲಕ್ಷಕ್ಕೂ ಹೆಚ್ಚಿನ ಭಕ್ತರು ಪವಿತ್ರ ಅವಶೇಷಗಳನ್ನು ವೀಕ್ಷಿಸಿದರು, ಇದು ಸ್ಥಳೀಯ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು. ವಿವಿಧ ದೇಶಗಳಲ್ಲಿನ ಈ ಘಟನೆಗಳಲ್ಲಿ, ಸಾಮಾನ್ಯ ನಾಗರಿಕರಾಗಲಿ ಅಥವಾ ಸರ್ಕಾರದ ಮುಖ್ಯಸ್ಥರಾಗಲಿ, ಎಲ್ಲರೂ ಸಮಾನ ಗೌರವದಿಂದ ಒಂದಾಗಿದ್ದರು. ಭಗವಾನ್ ಬುದ್ಧ ಎಲ್ಲರಿಗೂ ಸೇರಿದವನು. ಭಗವಾನ್ ಬುದ್ಧ ಎಲ್ಲರನ್ನೂ ಸಂಪರ್ಕಿಸುತ್ತಾನೆ.

ಸ್ನೇಹಿತರೆ,

ಭಗವಾನ್ ಬುದ್ಧ ನನ್ನ ಜೀವನದಲ್ಲಿ ಆಳವಾದ ಸ್ಥಾನ ಹೊಂದಿರುವುದರಿಂದ ನಾನು ತುಂಬಾ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ನನ್ನ ಜನ್ಮಸ್ಥಳ ವಡ್ನಗರ ಬೌದ್ಧ ಕಲಿಕೆಯ ಪ್ರಮುಖ ಕೇಂದ್ರವಾಗಿತ್ತು. ಭಗವಾನ್ ಬುದ್ಧ ತನ್ನ ಮೊದಲ ಧರ್ಮೋಪದೇಶ ನೀಡಿದ ಸಾರನಾಥ ಇಂದು ನನ್ನ ಕರ್ಮಭೂಮಿ. ನಾನು ಸರ್ಕಾರಿ ಜವಾಬ್ದಾರಿಗಳಿಂದ ದೂರವಿದ್ದಾಗಲೂ, ನಾನು ಬೌದ್ಧ ತಾಣಗಳಿಗೆ ಯಾತ್ರಿಕನಾಗಿ ಪ್ರಯಾಣಿಸಿದೆ. ಪ್ರಧಾನ ಮಂತ್ರಿಯಾಗಿ, ಪ್ರಪಂಚದಾದ್ಯಂತ ಬೌದ್ಧ ಯಾತ್ರಾ ಕೇಂದ್ರಗಳಿಗೆ ಭೇಟಿ ನೀಡುವ ಸೌಭಾಗ್ಯ ನನಗೆ ಸಿಕ್ಕಿದೆ. ನೇಪಾಳದ ಲುಂಬಿನಿಯಲ್ಲಿರುವ ಪವಿತ್ರ ಮಾಯಾ ದೇವಿ ದೇವಾಲಯಕ್ಕೆ ನಮಸ್ಕರಿಸುವುದು ಸ್ವತಃ ಒಂದು ಅಸಾಧಾರಣ ಅನುಭವವಾಗಿತ್ತು. ಜಪಾನ್‌ನ ತೋ-ಜಿ ದೇವಾಲಯ ಮತ್ತು ಕಿಂಕಾಕು-ಜಿಯಲ್ಲಿ, ಬುದ್ಧನ ಸಂದೇಶವು ಕಾಲದ ಗಡಿಗಳನ್ನು ಮೀರಿದೆ ಎಂದು ನಾನು ಭಾವಿಸಿದ್ದೇನೆ. ನಾನು ಚೀನಾದ ಕ್ಸಿಯಾನ್‌ನಲ್ಲಿರುವ ಬಿಗ್ ವೈಲ್ಡ್ ಗೂಸ್ ಪಗೋಡಾಗೆ ಭೇಟಿ ನೀಡಿದ್ದೆ, ಅಲ್ಲಿಂದ ಬೌದ್ಧ ಗ್ರಂಥಗಳು ಏಷ್ಯಾದಾದ್ಯಂತ ಹರಡಿವೆ, ಭಾರತದ ಪಾತ್ರವನ್ನು ಇನ್ನೂ ಸ್ಮರಿಸಲಾಗುತ್ತಿದೆ. ಮಂಗೋಲಿಯಾದ ಗಂಡನ್ ಮಠದಲ್ಲಿ, ಬುದ್ಧನ ಪರಂಪರೆಯೊಂದಿಗೆ ಜನರ ಆಳವಾದ ಭಾವನಾತ್ಮಕ ಸಂಪರ್ಕವನ್ನು ನಾನು ಕಣ್ಣಾರೆ ಕಂಡಿದ್ದೇನೆ. ಶ್ರೀಲಂಕಾದ ಅನುರಾಧಪುರದಲ್ಲಿರುವ ಜಯ ಶ್ರೀ ಮಹಾಬೋಧಿ ನೋಡುವುದು ಚಕ್ರವರ್ತಿ ಅಶೋಕ, ಭಿಕ್ಕು ಮಹಿಂದ ಮತ್ತು ಸಂಘಮಿತ್ರರು ಬಿತ್ತಿದ ಸಂಪ್ರದಾಯದೊಂದಿಗೆ ಸಂಪರ್ಕ ಸಾಧಿಸುವ ಅನುಭವವಾಗಿತ್ತು. ಥಾಯ್ಲೆಂಡ್‌ನ ವಾಟ್ ಫೋ ಮತ್ತು ಸಿಂಗಾಪುರದ ಬುದ್ಧ ಟೂತ್ ರೆಲಿಕ್ ದೇವಾಲಯಕ್ಕೆ ನನ್ನ ಭೇಟಿಯು ಭಗವಾನ್ ಬುದ್ಧನ ಬೋಧನೆಗಳ ಪ್ರಭಾವದ ಬಗ್ಗೆ ನನ್ನ ತಿಳಿವಳಿಕೆಯನ್ನು ಮತ್ತಷ್ಟು ಹೆಚ್ಚಿಸಿದವು.

ಸ್ನೇಹಿತರೆ,

ನಾನು ಎಲ್ಲೇ ಪ್ರಯಾಣಿಸಿದರೂ, ಅಲ್ಲಿನ ಜನರಲ್ಲಿ ಬುದ್ಧನ ಪರಂಪರೆಯ ಸಂಕೇತವನ್ನು ತರಲು ನಾನು ನನ್ನ ಪ್ರಯತ್ನ ಮಾಡಿದ್ದೇನೆ. ಅದಕ್ಕಾಗಿಯೇ ಚೀನಾ, ಜಪಾನ್, ಕೊರಿಯಾ ಮತ್ತು ಮಂಗೋಲಿಯಾಕ್ಕೆ ನಾನು ಬೋಧಿ ವೃಕ್ಷದ ಸಸಿಗಳನ್ನು ಹೊತ್ತೊಯ್ದಿದ್ದೇನೆ. ಪರಮಾಣು ಬಾಂಬ್‌ನಿಂದ ಧ್ವಂಸಗೊಂಡ ನಗರವಾದ ಹಿರೋಷಿಮಾದ ಸಸ್ಯೋದ್ಯಾನದಲ್ಲಿ ಬೋಧಿ ವೃಕ್ಷ ನಿಂತಾಗ ಮಾನವತೆಗೆ ಆಳವಾದ ಸಂದೇಶ ದೊರೆಯುತ್ತದೆ ಎಂದು ನೀವು ಊಹಿಸಬಹುದು.

ಸ್ನೇಹಿತರೆ,

ಭಗವಾನ್ ಬುದ್ಧನ ಈ ಹಂಚಿಕೆಯ ಪರಂಪರೆಯು ಭಾರತವು ಕೇವಲ ರಾಜಕೀಯ, ರಾಜತಾಂತ್ರಿಕತೆ ಮತ್ತು ಆರ್ಥಿಕತೆಯ ಮೂಲಕ ಸಂಪರ್ಕ ಹೊಂದಿರದೆ, ಅದು ಆಳವಾದ ಬಂಧಗಳ ಮೂಲಕ ಸಂಪರ್ಕ ಹೊಂದಿದೆ ಎಂಬುದಕ್ಕೆ ಪುರಾವೆಯಾಗಿದೆ. ನಾವು ಮನಸ್ಸು ಮತ್ತು ಭಾವನೆಗಳ ಮೂಲಕ, ನಂಬಿಕೆ ಮತ್ತು ಆಧ್ಯಾತ್ಮಿಕತೆಯ ಮೂಲಕ ಸಂಪರ್ಕ ಹೊಂದಿದ್ದೇವೆ.

ಸ್ನೇಹಿತರೆ,

ಭಾರತವು ಬುದ್ಧನ ಪವಿತ್ರ ಅವಶೇಷಗಳ ರಕ್ಷಕ ಮಾತ್ರವಲ್ಲದೆ, ಅವನ ಸಂಪ್ರದಾಯದ ಜೀವಂತ ವಾಹಕವೂ ಆಗಿದೆ. ಪಿಪ್ರಹ್ವಾ, ವೈಶಾಲಿ, ದೇವ್ನಿ ಮೋರಿ ಮತ್ತು ನಾಗಾರ್ಜುನ ಕೊಂಡದಲ್ಲಿ ಕಂಡುಬರುವ ಬುದ್ಧನ ಅವಶೇಷಗಳು ಬುದ್ಧನ ಸಂದೇಶದ ಜೀವಂತ ಉಪಸ್ಥಿತಿಗಳಾಗಿವೆ. ಭಾರತವು ವಿಜ್ಞಾನ ಮತ್ತು ಆಧ್ಯಾತ್ಮಿಕತೆಯ ಮೂಲಕ ಈ ಅವಶೇಷಗಳನ್ನು ಪ್ರತಿಯೊಂದು ರೂಪದಲ್ಲಿ ಸಂರಕ್ಷಿಸಿದೆ.

ಸ್ನೇಹಿತರೆ,

ವಿಶ್ವಾದ್ಯಂತ ಬೌದ್ಧ ಪರಂಪರೆಯ ತಾಣಗಳ ಅಭಿವೃದ್ಧಿಗೆ ಭಾರತ ನಿರಂತರವಾಗಿ ಕೊಡುಗೆ ನೀಡಲು ಪ್ರಯತ್ನಿಸುತ್ತಿದೆ. ನೇಪಾಳದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪವು ಪ್ರಾಚೀನ ಸ್ತೂಪಗಳನ್ನು ಹಾನಿಗೊಳಿಸಿದಾಗ, ಭಾರತ ಅವುಗಳ ಪುನರ್ನಿರ್ಮಾಣಕ್ಕೆ ಬೆಂಬಲ ನೀಡಿತು. ಮ್ಯಾನ್ಮಾರ್‌ನ ಬಗಾನ್‌ನಲ್ಲಿ ಸಂಭವಿಸಿದ ಭೂಕಂಪದ ನಂತರ, ಭಾರತವು 11ಕ್ಕೂ ಹೆಚ್ಚಿನ ಪಗೋಡಗಳ ಸಂರಕ್ಷಣೆ ಕೈಗೆತ್ತಿಕೊಂಡಿತು. ಅಂತಹ ಹಲವು ಉದಾಹರಣೆಗಳಿವೆ. ಭಾರತದೊಳಗೆ ಸಹ, ಬೌದ್ಧ ಸಂಪ್ರದಾಯಕ್ಕೆ ಸಂಬಂಧಿಸಿದ ತಾಣಗಳು ಮತ್ತು ಅವಶೇಷಗಳ ಹುಡುಕಾಟ ಮತ್ತು ಸಂರಕ್ಷಣೆ ನಿರಂತರವಾಗಿ ಪ್ರಗತಿಯಲ್ಲಿದೆ. ನಾನು ಮೊದಲೇ ಹೇಳಿದಂತೆ, ನನ್ನ ಜನ್ಮಸ್ಥಳ ಗುಜರಾತ್‌ನ ವಡ್ನಾಗರ ಬೌದ್ಧ ಸಂಪ್ರದಾಯದ ಪ್ರಮುಖ ಕೇಂದ್ರವಾಗಿತ್ತು. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ಬೌದ್ಧಧರ್ಮಕ್ಕೆ ಸಂಬಂಧಿಸಿದ ಸಾವಿರಾರು ಅವಶೇಷಗಳನ್ನು ಅಲ್ಲಿ ಪತ್ತೆ ಮಾಡಲಾಯಿತು. ಇಂದು ನಮ್ಮ ಸರ್ಕಾರವು ಅವುಗಳನ್ನು ಸಂರಕ್ಷಿಸುವ ಮತ್ತು ಪ್ರಸ್ತುತ ಪೀಳಿಗೆಯನ್ನು ಅವುಗಳೊಂದಿಗೆ ಸಂಪರ್ಕಿಸುವತ್ತ ಗ ಮನಹರಿಸುತ್ತಿದೆ. ಸುಮಾರು 2,500 ವರ್ಷಗಳ ಇತಿಹಾಸದ ಅನುಭವ ನೀಡುವ ಭವ್ಯವಾದ ವಸ್ತುಸಂಗ್ರಹಾಲಯವನ್ನು ಅಲ್ಲಿ ನಿರ್ಮಿಸಲಾಗಿದೆ. ಕೆಲವೇ ತಿಂಗಳ ಹಿಂದೆ, ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ಬೌದ್ಧ ಯುಗದ ಪ್ರಮುಖ ಬೌದ್ಧ ತಾಣವನ್ನು ಪತ್ತೆ ಹಚ್ಚಲಾಯಿತು ಮತ್ತು ಅದರ ಸಂರಕ್ಷಣಾ ಕಾರ್ಯವು ಈಗ ವೇಗಗೊಳ್ಳುತ್ತಿದೆ.

ಸ್ನೇಹಿತರೆ,

ಕಳೆದ 10-11 ವರ್ಷಗಳಲ್ಲಿ ಭಾರತವು ಬೌದ್ಧ ತಾಣಗಳನ್ನು ಆಧುನಿಕತೆಯೊಂದಿಗೆ ಸಂಪರ್ಕಿಸಲು ಪ್ರಯತ್ನಿಸಿದೆ. ಬೋಧಗಯಾದಲ್ಲಿ ಒಂದು ಸಮಾವೇಶ ಕೇಂದ್ರ ಮತ್ತು ಧ್ಯಾನ ಮತ್ತು ಅನುಭವ ಕೇಂದ್ರವನ್ನು ಸ್ಥಾಪಿಸಲಾಗಿದೆ. ಸಾರನಾಥದಲ್ಲಿ ಧಮೇಕ್ ಸ್ತೂಪದಲ್ಲಿ ಬೆಳಕು ಮತ್ತು ಧ್ವನಿ ಪ್ರದರ್ಶನ ಮತ್ತು ಬುದ್ಧ ಥೀಮ್ ಪಾರ್ಕ್ ನಿರ್ಮಿಸಲಾಗಿದೆ. ಶ್ರಾವಸ್ತಿ, ಕಪಿಲವಾಸ್ತು ಮತ್ತು ಕುಶಿನಗರದಲ್ಲಿ ಆಧುನಿಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ತೆಲಂಗಾಣದ ನಲ್ಗೊಂಡದಲ್ಲಿ, ಡಿಜಿಟಲ್ ಅನುಭವ ಕೇಂದ್ರ ಸ್ಥಾಪಿಸಲಾಗಿದೆ. ಸಾಂಚಿ, ನಾಗಾರ್ಜುನ ಸಾಗರ್ ಮತ್ತು ಅಮರಾವತಿಯಲ್ಲಿ ಯಾತ್ರಾರ್ಥಿಗಳಿಗೆ ಹೊಸ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇಂದು ಭಾರತದ ಎಲ್ಲಾ ಬೌದ್ಧ ಯಾತ್ರಾ ಸ್ಥಳಗಳ ನಡುವೆ ಉತ್ತಮ ಸಂಪರ್ಕ ಖಚಿತಪಡಿಸಿಕೊಳ್ಳಲು ದೇಶದಲ್ಲಿ ಬೌದ್ಧ ಸರ್ಕ್ಯೂಟ್ ನಿರ್ಮಿಸಲಾಗುತ್ತಿದೆ, ಇದರಿಂದಾಗಿ ಪ್ರಪಂಚದಾದ್ಯಂತದ ಭಕ್ತರು ಮತ್ತು ಯಾತ್ರಿಕರಿಗೆ ನಂಬಿಕೆ ಮತ್ತು ಆಧ್ಯಾತ್ಮಿಕತೆಯ ಆಳವಾದ ಅನುಭವವನ್ನು ನೀಡುತ್ತಿದೆ.

ಸ್ನೇಹಿತರೆ,

ಬೌದ್ಧ ಪರಂಪರೆಯು ಭವಿಷ್ಯದ ಪೀಳಿಗೆಗೆ ಸ್ವಾಭಾವಿಕವಾಗಿ ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಪ್ರಯತ್ನವಾಗಿದೆ. ಜಾಗತಿಕ ಬೌದ್ಧ ಶೃಂಗಸಭೆ ಮತ್ತು ವೈಶಾಖ ಮತ್ತು ಆಷಾಢ ಪೂರ್ಣಿಮೆಯಂತಹ ಅಂತಾರಾಷ್ಟ್ರೀಯ ಕಾರ್ಯಕ್ರಮಗಳು ಈ ಚಿಂತನೆಯಿಂದ ಮುನ್ನಡೆಯುತ್ತವೆ. ಭಗವಾನ್ ಬುದ್ಧನ ಅಭಿಧಮ್ಮ, ಅವನ ಸಂದೇಶಗಳು ಮತ್ತು ಅವನ ಬೋಧನೆಗಳು ಮೂಲತಃ ಪಾಲಿ ಭಾಷೆಯಲ್ಲಿದ್ದವು ಎಂದು ನಿಮಗೆಲ್ಲರಿಗೂ ತಿಳಿದಿದೆ. ಪಾಲಿಯನ್ನು ಸಾಮಾನ್ಯ ಜನರಿಗೆ ಪ್ರವೇಶಿಸುವಂತೆ ಮಾಡಲು ನಾವು ಶ್ರಮಿಸುತ್ತಿದ್ದೇವೆ. ಈ ಕಾರಣಕ್ಕಾಗಿ, ಪಾಲಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಲಾಗಿದೆ, ಇದು ಧಮ್ಮವನ್ನು ಅದರ ಮೂಲ ಸಾರದಲ್ಲಿ ಅರ್ಥ ಮಾಡಿಕೊಳ್ಳಲು ಮತ್ತು ವಿವರಿಸಲು ಸುಲಭವಾಗುತ್ತದೆ, ಬೌದ್ಧ ಸಂಪ್ರದಾಯಕ್ಕೆ ಸಂಬಂಧಿಸಿದ ಸಂಶೋಧನೆಯನ್ನು ಬಲಪಡಿಸುತ್ತದೆ.

ಸ್ನೇಹಿತರೆ,

ಭಗವಾನ್ ಬುದ್ಧನ ಜೀವನ ತತ್ವಶಾಸ್ತ್ರವು ಗಡಿಗಳು ಮತ್ತು ಭೌಗೋಳಿಕ ಪ್ರದೇಶಗಳನ್ನು ಮೀರಿ, ಜಗತ್ತಿಗೆ ಹೊಸ ಮಾರ್ಗ ತೋರಿಸಿತು. “ಭವತು ಸಬ್ಬಾ ಮಂಗಲಂ, ರಕ್ಖಾಂಟು ಸಬ್ಬಾ ದೇವತಾ, ಸಬ್ಬಾ ಬುದ್ಧನುಭಾವೇನ ಸದಾ ಸುತ್ತಿ ಭವಂತು ತೇ”—ಇದು ಇಡೀ ಪ್ರಪಂಚದ ಕಲ್ಯಾಣಕ್ಕಾಗಿ ನಡೆದ ಪ್ರಾರ್ಥನೆಯಾಗಿದೆ. ಭಗವಾನ್ ಬುದ್ಧನು ಮನುಕುಲವನ್ನು ಉಗ್ರವಾದದಿಂದ ರಕ್ಷಿಸಲು ಪ್ರಯತ್ನಿಸಿದ. ಅವನು ತನ್ನ ಅನುಯಾಯಿಗಳಿಗೆ ಹೇಳಿದ: “ಅತ್ತ ದೀಪೋ ಭವ ಭಿಕ್ಷವೇ! ಪರೀಕ್ಷಾ ಭಿಕ್ಷವೋ ಗ್ರಾಹ್ಯಂ, ಮದ್ವಚೋ ನ ತು ಗೌರವಾತ್.” ಇದರ ಅರ್ಥ, “ಭಿಕ್ಷುಗಳೇ, ನಿಮ್ಮ ಸ್ವಂತ ದೀಪವಾಗಿರಿ. ನನ್ನ ಮಾತುಗಳನ್ನು ಸಹ ಪರೀಕ್ಷಿಸಬೇಕು ಮತ್ತು ಸ್ವೀಕರಿಸಬೇಕು, ಕೇವಲ ನನ್ನ ಮೇಲಿನ ಗೌರವದಿಂದಲ್ಲ.”

ಸ್ನೇಹಿತರೆ,

ಬುದ್ಧನ ಈ ಸಂದೇಶವು ಪ್ರತಿ ಯುಗಕ್ಕೂ ಪ್ರಸ್ತುತವಾಗಿದೆ. ನಮ್ಮ ಸ್ವಂತ ದೀಪವಾಗುವುದು ಸ್ವಾಭಿಮಾನದ ಅಡಿಪಾಯ ಮತ್ತು ಸ್ವಾವಲಂಬನೆಯ ಸಾರ - “ಅತ್ತ ದೀಪೋ ಭವ.”

ಸ್ನೇಹಿತರೆ,

ಭಗವಾನ್ ಬುದ್ಧ ಜಗತ್ತಿಗೆ ಸಂಘರ್ಷ ಮತ್ತು ಪ್ರಾಬಲ್ಯದ ಬದಲು ಒಟ್ಟಿಗೆ ನಡೆಯುವ ಮಾರ್ಗ ತೋರಿಸಿದ, ಇದು ಯಾವಾಗಲೂ ಭಾರತದ ಮೂಲ ತತ್ವಶಾಸ್ತ್ರವಾಗಿದೆ. ಯಾವಾಗಲೂ ಮಾನವತೆಯ ಹಿತಾಸಕ್ತಿಗಾಗಿ ನಾವು ಕಲ್ಪನೆಗಳ ಬಲ ಮತ್ತು ಭಾವನೆಗಳ ಆಳದ ಮೂಲಕ ಜಾಗತಿಕ ಕಲ್ಯಾಣದ ಮಾರ್ಗವನ್ನು ಅಳವಡಿಸಿಕೊಂಡಿದ್ದೇವೆ. ಈ ವಿಧಾನದಿಂದಲೇ ಭಾರತವು 21ನೇ ಶತಮಾನದಲ್ಲೂ ಜಗತ್ತಿಗೆ ಕೊಡುಗೆ ನೀಡುತ್ತಿದೆ. ಅದಕ್ಕಾಗಿಯೇ ನಾವು ಈ ಯುಗವು ಯುದ್ಧದ ಯುಗವಲ್ಲ, ಆದರೆ ಬುದ್ಧನದು ಎಂದು ಹೇಳಿದಾಗ, ಭಾರತದ ಪಾತ್ರ ಸ್ಪಷ್ಟವಾಗಿದೆ. ಮಾನವತೆಯ ಶತ್ರುಗಳ ವಿರುದ್ಧ ಶಕ್ತಿ ಅಗತ್ಯ, ಆದರೆ ವಿವಾದಗಳು ಮಾತ್ರ ಇರುವಲ್ಲಿ ಸಂಭಾಷಣೆ ಮತ್ತು ಶಾಂತಿ ಅತ್ಯಗತ್ಯ.

ಸ್ನೇಹಿತರೆ,

ಭಾರತವು ಸರ್ವಜನ ಹಿತಾಯ, ಸರ್ವಜನ ಸುಖಾಯಕ್ಕೆ ಬದ್ಧವಾಗಿದೆ. ಭಗವಾನ್ ಬುದ್ಧ ನಮಗೆ ಕಲಿಸಿದ್ದು ಇದನ್ನೇ. ಈ ಪ್ರದರ್ಶನಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಸಂದರ್ಶಕರೂ ಈ ಸ್ಫೂರ್ತಿಯೊಂದಿಗೆ ಸಂಪರ್ಕ ಸಾಧಿಸುತ್ತಾರೆ ಎಂದು ನಾನು ಭಾವಿಸುತ್ತೇನೆ.

ಸ್ನೇಹಿತರೆ,

ಭಗವಾನ್ ಬುದ್ಧನ ಈ ಪವಿತ್ರ ಅವಶೇಷಗಳು ಭಾರತದ ಪರಂಪರೆಯಾಗಿವೆ. ಒಂದು ಶತಮಾನದ ನಿರೀಕ್ಷೆಯ ನಂತರ, ಅವು ದೇಶಕ್ಕೆ ಮರಳಿವೆ. ಆದ್ದರಿಂದ, ದೇಶಾದ್ಯಂತ ಜನರು ಈ ಪವಿತ್ರ ಅವಶೇಷಗಳನ್ನು ವೀಕ್ಷಿಸಲು, ಭಗವಾನ್ ಬುದ್ಧನ ಆಲೋಚನೆಗಳೊಂದಿಗೆ ಸಂಪರ್ಕ ಸಾಧಿಸಲು ಮತ್ತು ಒಮ್ಮೆಯಾದರೂ ಭೇಟಿ ನೀಡುವಂತೆ ನಾನು ಒತ್ತಾಯಿಸುತ್ತೇನೆ. ವಿಶೇಷವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಯುವ ಜನರು, ಪುತ್ರರು ಮತ್ತು ಪುತ್ರಿಯರು ಈ ಪ್ರದರ್ಶನವನ್ನು ಖಂಡಿತವಾಗಿಯೂ ನೋಡಬೇಕೆಂದು ನಾನು ಒತ್ತಾಯಿಸುತ್ತೇನೆ. ಈ ಪ್ರದರ್ಶನವು ನಮ್ಮ ಭೂತಕಾಲದ ವೈಭವವನ್ನು ನಮ್ಮ ಭವಿಷ್ಯದ ಕನಸುಗಳೊಂದಿಗೆ ಸಂಪರ್ಕಿಸಲು ಉತ್ತಮ ಮಾಧ್ಯಮವಾಗಿದೆ. ಈ ಪ್ರದರ್ಶನದಲ್ಲಿ ಭಾಗವಹಿಸುವಂತೆ ನಾನು ದೇಶಾದ್ಯಂತ ಜನರಿಗೆ ಮನವಿ ಮಾಡುತ್ತೇನೆ. ಈ ಮನವಿಯೊಂದಿಗೆ ಮತ್ತೊಮ್ಮೆ, ಈ ಕಾರ್ಯಕ್ರಮದ ಯಶಸ್ಸಿಗೆ ನಾನು ಎಲ್ಲರಿಗೂ ನನ್ನ ಶುಭಾಶಯಗಳನ್ನು ಕೋರುತ್ತೇನೆ. ತುಂಬು ಧನ್ಯವಾದಗಳು!

ನಮೋ ಬುದ್ಧಾಯ!

 

*****


(रिलीज़ आईडी: 2211302) आगंतुक पटल : 7
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Bengali-TR , Manipuri , Assamese , Punjabi , Gujarati , Odia , Telugu , Malayalam