ಸಂಪುಟ
azadi ka amrit mahotsav

ಉತ್ತರ ಪ್ರದೇಶದ ಆಗ್ರಾದ ಸಿಂಗ್ನಾದಲ್ಲಿ ಅಂತಾರಾಷ್ಟ್ರೀಯ ಆಲೂಗಡ್ಡೆ ಕೇಂದ್ರದ (ಸಿಐಪಿ) ದಕ್ಷಿಣ ಏಷ್ಯಾ ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ ಸಂಪುಟದ ಅನುಮೋದನೆ

Posted On: 25 JUN 2025 4:10PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಉತ್ತರ ಪ್ರದೇಶದ ಆಗ್ರಾದಲ್ಲಿ ಅಂತಾರಾಷ್ಟ್ರೀಯ ಆಲೂಗಡ್ಡೆ ಕೇಂದ್ರದ (ಸಿಐಪಿ) ದಕ್ಷಿಣ ಏಷ್ಯಾ ಪ್ರಾದೇಶಿಕ ಕೇಂದ್ರ (ಸಿ.ಎಸ್.ಎ.ಆರ್ ಸಿ.) ಸ್ಥಾಪಿಸುವ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಪ್ರಸ್ತಾವನೆಗೆ ತನ್ನ ಅನುಮೋದನೆ ನೀಡಿದೆ.

ಆಲೂಗಡ್ಡೆ ಮತ್ತು ಗೆಣಸು ಉತ್ಪಾದಕತೆ, ಕಟಾವು ನಂತರದ ನಿರ್ವಹಣೆ ಮತ್ತು ಮೌಲ್ಯವರ್ಧನೆ ಸುಧಾರಿಸುವ ಮೂಲಕ ಆಹಾರ ಮತ್ತು ಪೌಷ್ಠಿಕಾಂಶದ ಭದ್ರತೆ, ರೈತರ ಆದಾಯ ಮತ್ತು ಉದ್ಯೋಗ ಸೃಷ್ಟಿ ಹೆಚ್ಚಿಸುವುದು ಈ ಹೂಡಿಕೆಯ ಪ್ರಮುಖ ಉದ್ದೇಶವಾಗಿದೆ.

ಭಾರತದಲ್ಲಿ ಆಲೂಗಡ್ಡೆ ಕ್ಷೇತ್ರವು ಉತ್ಪಾದನಾ ವಲಯ, ಸಂಸ್ಕರಣಾ ವಲಯ, ಪ್ಯಾಕೇಜಿಂಗ್, ಸಾರಿಗೆ, ಮಾರ್ಕೆಟಿಂಗ್, ಮೌಲ್ಯ ಸರಪಳಿ ಇತ್ಯಾದಿಗಳಲ್ಲಿ ಗಮನಾರ್ಹ ಉದ್ಯೋಗಾವಕಾಶ ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ.  ಆದ್ದರಿಂದ, ಈ ಕ್ಷೇತ್ರದಲ್ಲಿನ ಬೃಹತ್ ಸಾಮರ್ಥ್ಯ ಬಳಸಿಕೊಳ್ಳಲು ಮತ್ತು ಅನ್ವೇಷಿಸಲು, ಅಂತಾರಾಷ್ಟ್ರೀಯ ಆಲೂಗಡ್ಡೆ ಕೇಂದ್ರದ (ಸಿಐಪಿ) ದಕ್ಷಿಣ ಏಷ್ಯಾ ಪ್ರಾದೇಶಿಕ ಕೇಂದ್ರವನ್ನು ಉತ್ತರ ಪ್ರದೇಶದ ಆಗ್ರಾದ ಸಿಂಗ್ನಾದಲ್ಲಿ ಸ್ಥಾಪಿಸಲಾಗುತ್ತಿದೆ.  ಸಿ.ಎಸ್.ಎ.ಆರ್.ಸಿ. ಅಭಿವೃದ್ಧಿಪಡಿಸಿದ ಅಧಿಕ ಇಳುವರಿ, ಹೆಚ್ಚಿನ ಪೋಷಕಾಂಶ ಮತ್ತು ಹವಾಮಾನ ಸ್ಥಿತಿಸ್ಥಾಪಕ ಆಲೂಗಡ್ಡೆ ಮತ್ತು ಗೆಣಸಿನ ಪ್ರಭೇದಗಳು ಭಾರತದಲ್ಲಿ ಮಾತ್ರವಲ್ಲದೆ ದಕ್ಷಿಣ ಏಷ್ಯಾ ಪ್ರದೇಶದಲ್ಲಿಯೂ ವಿಶ್ವ ದರ್ಜೆಯ ವಿಜ್ಞಾನ ಮತ್ತು ಆವಿಷ್ಕಾರಗಳ ಮೂಲಕ ಆಲೂಗಡ್ಡೆ ಮತ್ತು ಗೆಣಸು ಕ್ಷೇತ್ರಗಳ ಸುಸ್ಥಿರ ಅಭಿವೃದ್ಧಿಯನ್ನು ಗಮನಾರ್ಹವಾಗಿ ವೇಗಗೊಳಿಸುತ್ತವೆ.

ತುರ್ತು ಪರಿಸ್ಥಿತಿ ಘೋಷಣೆಯಾಗಿ 50 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಸಂಪುಟವು ನಿರ್ಣಯ ಅಂಗೀಕರಿಸಿತು.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ತುರ್ತು ಪರಿಸ್ಥಿತಿ ಮತ್ತು ಭಾರತ ಸಂವಿಧಾನದ ಚೈತನ್ಯವನ್ನು ಬುಡಮೇಲು ಮಾಡುವ ಅದರ ಪ್ರಯತ್ನವನ್ನು ಧೈರ್ಯದಿಂದ ವಿರೋಧಿಸಿದ ಅಸಂಖ್ಯಾತ ವ್ಯಕ್ತಿಗಳ ತ್ಯಾಗಗಳನ್ನು ಸ್ಮರಿಸುವ ಮತ್ತು ಗೌರವಿಸುವ ನಿರ್ಣಯ ಅಂಗೀಕರಿಸಿತು. ನವನಿರ್ಮಾಣ ಆಂದೋಲನ ಮತ್ತು ಸಂಪೂರ್ಣ ಕ್ರಾಂತಿ ಅಭಿಯಾನವನ್ನು ಹತ್ತಿಕ್ಕುವ ಭಾರೀ ಪ್ರಯತ್ನದೊಂದಿಗೆ 1974ರಲ್ಲಿ ಈ ಬುಡಮೇಲು ಕೃತ್ಯ ಆರಂಭವಾಯಿತು.

ಈ ಸಂದರ್ಭವನ್ನು ಗುರುತಿಸಲು, ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಸಂವಿಧಾನಬದ್ಧವಾಗಿ ಖಾತರಿಪಡಿಸಲಾದ ಪ್ರಜಾಪ್ರಭುತ್ವ ಹಕ್ಕುಗಳನ್ನು ಕಸಿದುಕೊಳ್ಳಲ್ಪಟ್ಟ ಮತ್ತು ನಂತರ ಊಹಿಸಲಾಗದ ಭೀಕರತೆ ಅನುಭವಿಸಿದವರಿಗೆ ಗೌರವ ಸಲ್ಲಿಸಲು ಎರಡು ನಿಮಿಷಗಳ ಮೌನ ಆಚರಿಸಲಾಯಿತು. ತುರ್ತು ಪರಿಸ್ಥಿತಿಯ ದೌರ್ಜನ್ಯಗಳ ವಿರುದ್ಧ ಅವರು ತೋರಿದ ಅನುಕರಣೀಯ ಧೈರ್ಯ ಮತ್ತು ಪ್ರತಿರೋಧಕ್ಕೆ ಕೇಂದ್ರ ಸಚಿವ ಸಂಪುಟ ಗೌರವ ಸಲ್ಲಿಸಿತು.

2025ನೇ ವರ್ಷವು ಸಂವಿಧಾನ ಹತ್ಯಾ ದಿವಸದ 50 ವರ್ಷಗಳನ್ನು ಗುರುತಿಸುತ್ತದೆ – ಇದು ಭಾರತದ ಇತಿಹಾಸದಲ್ಲಿ ಸಂವಿಧಾನವನ್ನು ಬುಡಮೇಲು ಮಾಡಿದ, ಭಾರತದ ಗಣರಾಜ್ಯ ಮತ್ತು ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡಿದ, ಒಕ್ಕೂಟ ವ್ಯವಸ್ಥೆ ದುರ್ಬಲಗೊಳಿಸಿದ ಮತ್ತು ಮೂಲಭೂತ ಹಕ್ಕುಗಳು, ಮಾನವ ಸ್ವಾತಂತ್ರ್ಯ ಮತ್ತು ಘನತೆ ಕಿತ್ತುಕೊಂಡ ಒಂದು ಮರೆಯಲಾಗದ ಅಧ್ಯಾಯವಾಗಿದೆ.

ಭಾರತದ ಜನರು ಭಾರತ ಸಂವಿಧಾನದ ದೃಢತೆ ಮತ್ತು ದೇಶದ ಪ್ರಜಾಪ್ರಭುತ್ವ ಮೌಲ್ಯಗಳಲ್ಲಿ ಅಚಲ ನಂಬಿಕೆ ಹೊಂದಿದ್ದಾರೆ ಎಂದು ಕೇಂದ್ರ ಸಚಿವ ಸಂಪುಟ ಪುನರುಚ್ಚರಿಸಿತು. ಸರ್ವಾಧಿಕಾರಿ ಪ್ರವೃತ್ತಿ ವಿರೋಧಿಸಿ ನಮ್ಮ ಸಂವಿಧಾನ ಮತ್ತು ಅದರ ಪ್ರಜಾಪ್ರಭುತ್ವದ ರಚನೆಯನ್ನು ರಕ್ಷಿಸಲು ದೃಢವಾಗಿ ನಿಂತವರಿಂದ ಸ್ಫೂರ್ತಿ ಪಡೆಯುವುದು ಹಿರಿಯರಿಗೆ ಎಷ್ಟು ಮುಖ್ಯವೋ, ಯುವಕರಿಗೂ ಅಷ್ಟೇ ಮುಖ್ಯವಾಗಿದೆ.

ಪ್ರಜಾಪ್ರಭುತ್ವದ ತಾಯಿಯಾಗಿರುವ ಭಾರತವು ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸುವ, ಸಂರಕ್ಷಿಸುವ ಮತ್ತು ಕಾಪಾಡುವಲ್ಲಿ ಒಂದು ಉದಾಹರಣೆಯಾಗಿದೆ.

ಒಂದು ರಾಷ್ಟ್ರವಾಗಿ, ನಮ್ಮ ಸಂವಿಧಾನ ಮತ್ತು ಅದರ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ಮನೋಭಾವ ಎತ್ತಿಹಿಡಿಯುವ ನಮ್ಮ ಸಂಕಲ್ಪವನ್ನು ನವೀಕರಿಸೋಣ.

 

*****


(Release ID: 2139596)