ವಾರ್ತಾ ಮತ್ತು ಪ್ರಸಾರ ಸಚಿವಾಲಯ
ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರ ಅಧಿಕಾರಾವಧಿಯ ಎರಡನೇ ವರ್ಷದಲ್ಲಿ ನೀಡಿದ 51 ಭಾಷಣಗಳ ಸಂಗ್ರಹವನ್ನು ರಕ್ಷಣಾ ಸಚಿವರು ಬಿಡುಗಡೆ ಮಾಡಿದರು
‘ವಿಕಸಿತ ಭಾರತ’ ನಿರ್ಮಾಣಕ್ಕೆ ‘ವಿಂಗ್ಸ್ ಟು ಅವರ್ ಹೋಪ್ಸ್ (ಸಂಪುಟ-II)’ ದಾರಿದೀಪವಾಗಲಿದೆ: ಶ್ರೀ ರಾಜನಾಥ್ ಸಿಂಗ್
"ರಾಷ್ಟ್ರಪತಿ ಮುರ್ಮು ಅವರು ಭಾರತದಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಗೆ ಉತ್ತಮ ಉದಾಹರಣೆ"
ಪುಸ್ತಕವು ರಾಷ್ಟ್ರಪತಿಯವರ ಜನಕಲ್ಯಾಣ ಆಶಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲಿದೆ: ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್
Posted On:
23 JUN 2025 5:56PM by PIB Bengaluru
ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅವರು, ಜೂನ್ 23, 2025 ರಂದು, ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರ 51 ಆಯ್ದ ಭಾಷಣಗಳ ಸಂಕಲನವಾದ ‘ವಿಂಗ್ಸ್ ಟು ಅವರ್ ಹೋಪ್ಸ್ (ಸಂಪುಟ-II)’ ಎಂಬ ಹಿಂದಿ ಮತ್ತು ಇಂಗ್ಲಿಷ್ ಪುಸ್ತಕವನ್ನು ಅದರ ಇ-ಆವೃತ್ತಿಯೊಂದಿಗೆ (e-version) ಬಿಡುಗಡೆ ಮಾಡಿದರು. ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿದ್ದ ಈ ಸಮಾರಂಭದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾದ ಶ್ರೀ ಎಲ್. ಮುರುಗನ್ ಅವರು ಸಹ ಉಪಸ್ಥಿತರಿದ್ದರು. ಈ ಪುಸ್ತಕವು, ರಾಷ್ಟ್ರಪತಿಯವರ ಅಧಿಕಾರದ ಎರಡನೇ ವರ್ಷದ (ಆಗಸ್ಟ್ 2023 - ಜುಲೈ 2024) ಅವಧಿಯಲ್ಲಿನ ಅವರ ದೃಷ್ಟಿಕೋನ, ತತ್ವಶಾಸ್ತ್ರ ಮತ್ತು ಆದ್ಯತೆಗಳ ಬಗ್ಗೆ ಒಂದು ಒಳನೋಟವನ್ನು ಒದಗಿಸುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ರಕ್ಷಣಾ ಸಚಿವರು, ಈ ಭಾಷಣಗಳ ಸಂಕಲನವನ್ನು "2047ರ ವೇಳೆಗೆ ಭಾರತವನ್ನು ವಿಕಸಿತ ರಾಷ್ಟ್ರವನ್ನಾಗಿ ಮಾಡುವ ಸರ್ಕಾರದ ದೃಷ್ಟಿಕೋನದ ಸಾರ" ಎಂದು ಬಣ್ಣಿಸಿದರು. ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣ, ವಿಶ್ವವಿದ್ಯಾಲಯಗಳಲ್ಲಿನ ಉಪನ್ಯಾಸಗಳು, ನಾವೀನ್ಯತೆ, ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಕೊಡುಗೆ, ಸಮಾನತೆ ಮತ್ತು ಸಾಂಸ್ಕೃತಿಕ ಪರಂಪರೆ ಮುಂತಾದ ವಿಷಯಗಳನ್ನು ಈ ಪುಸ್ತಕವು ಒಳಗೊಂಡಿದೆ. "ನಮ್ಮ ಭವ್ಯ ಪರಂಪರೆಯನ್ನು ಉಳಿಸಿಕೊಳ್ಳುವುದರ ಜೊತೆಗೆ, ಪ್ರಗತಿಪರ ಚಿಂತನೆಗಳೊಂದಿಗೆ ‘ವಿಕಸಿತ ಭಾರತ’ವನ್ನು ನಿರ್ಮಿಸಲು ಈ ಪುಸ್ತಕವು ದಾರಿದೀಪವಾಗಲಿದೆ. ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ನಮ್ಮ ದೇಶದ ವೈವಿಧ್ಯತೆಯ ಮಹತ್ವವನ್ನು ಬಲ್ಲವರಾಗಿದ್ದಾರೆ ಮತ್ತು ವಂಚಿತರ ನೋವನ್ನು ಅರಿತಿದ್ದಾರೆ. ಈ ಪುಸ್ತಕವು ಸಮಾನತೆಯ ಆಶಯವನ್ನು ಸಾರುತ್ತದೆ," ಎಂದು ಅವರು ಹೇಳಿದರು.
ಈ ಪುಸ್ತಕವು ನಾಗರಿಕತೆ, ಸಂಸ್ಕೃತಿ, ಧರ್ಮ, ವಿಜ್ಞಾನ, ಕಲೆ, ಸಾಹಿತ್ಯ, ಶಿಕ್ಷಣ, ಆರೋಗ್ಯ ಹಾಗೂ ಭೂತಕಾಲದಿಂದ ಭವಿಷ್ಯದವರೆಗಿನ ವಿವಿಧ ಕ್ಷೇತ್ರಗಳ ಕುರಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರ ಜ್ಞಾನ ಮತ್ತು ವಿಚಾರಗಳ ಸಮ್ಮಿಲನವಾಗಿದೆ ಎಂದು ಶ್ರೀ ರಾಜನಾಥ್ ಸಿಂಗ್ ಅವರು ಹೇಳಿದರು. ಈ ಸರ್ವವ್ಯಾಪಕತೆಯೇ ಭಾರತದ ಗುಣಲಕ್ಷಣದ ಪ್ರತಿಬಿಂಬವಾಗಿದ್ದು, ಇದು ಮುಂದಿನ ಪೀಳಿಗೆಗೆ ಪ್ರಯೋಜನಕಾರಿಯಾಗಬಲ್ಲದು ಎಂದು ಅವರು ಬಣ್ಣಿಸಿದರು.

ರಕ್ಷಣಾ ಸಚಿವರು, ರಾಷ್ಟ್ರಪತಿಯವರ ಕೆಲವು ಚಿಂತನೆಗಳನ್ನು ವಿಶೇಷವಾಗಿ ಉಲ್ಲೇಖಿಸಿ, ಅವುಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದ ರಾಷ್ಟ್ರೀಯ ಆದ್ಯತೆಗಳೆಂದು ಬಣ್ಣಿಸಿದರು. ಅವುಗಳೆಂದರೆ:
- ಪರಂಪರೆಯೊಂದಿಗಿನ ಅಭಿವೃದ್ಧಿಯೇ ನಮ್ಮ ಸಂಸ್ಕೃತಿ ಮತ್ತು ನಾಗರಿಕತೆಯ ಗುರುತಾಗಿದೆ.
- ನೈತಿಕತೆಯು ನಮ್ಮ ವೈಯಕ್ತಿಕ ಮತ್ತು ಸಾರ್ವಜನಿಕ ಜೀವನದ ಆಧಾರ ಸ್ತಂಭವಾಗಿದೆ.
- ಪ್ರತಿಯೊಬ್ಬರೂ, ವಿಶೇಷವಾಗಿ ಸಾರ್ವಜನಿಕ ಸೇವಕರು ಮತ್ತು ಅಧಿಕಾರಿಗಳು, ನಿಸ್ವಾರ್ಥ ಸೇವೆ ಮತ್ತು ಪರೋಪಕಾರದ ಮನೋಭಾವವನ್ನು ಹೊಂದಿರಬೇಕು.
- ನ್ಯಾಯ ವ್ಯವಸ್ಥೆ ಮತ್ತು ಆಡಳಿತವು ಸಾಮಾನ್ಯ ಜನರ ಬಗ್ಗೆ ಸಂವೇದನಾಶೀಲವಾಗಿರಬೇಕು.
- ಅಭಿವೃದ್ಧಿಯ ಎಲ್ಲಾ ಆಯಾಮಗಳಲ್ಲಿ ನಾವೀನ್ಯತೆಗೆ ಪ್ರೋತ್ಸಾಹ ನೀಡಬೇಕು.
- ವಸುಧೈವ ಕುಟುಂಬಕಂ ಮನೋಭಾವದೊಂದಿಗೆ ಆಧುನಿಕ ವಿಶ್ವ-ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಭಾರತವು ಪ್ರಮುಖ ಪಾತ್ರ ವಹಿಸುತ್ತಿದೆ.
ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅವರು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭಾರತದಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಗೆ ಅತ್ಯುತ್ತಮ ಉದಾಹರಣೆ ಎಂದು ಬಣ್ಣಿಸಿದರು. ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಆದ ಅವರ ನಾಯಕತ್ವದಲ್ಲಿ ಭಾರತೀಯ ಸೈನಿಕರು ಐತಿಹಾಸಿಕ 'ಆಪರೇಷನ್ ಸಿಂಧೂರ್' ಅನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಇದು ಎಲ್ಲಾ ಉದ್ದೇಶಗಳನ್ನು ಸಾಧಿಸುವುದರ ಜೊತೆಗೆ ಭಯೋತ್ಪಾದಕರ ಮನಸ್ಸಿನಲ್ಲಿ ಭಯ ಹುಟ್ಟಿಸಿತು ಎಂದು ಅವರು ಹೇಳಿದರು. ಸಶಸ್ತ್ರ ಪಡೆಗಳ ಸಿಬ್ಬಂದಿಯನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಾ, ಸಮಾಜದ ವಂಚಿತ ವರ್ಗಗಳ ಸಬಲೀಕರಣಕ್ಕಾಗಿ ಅವಿರತವಾಗಿ ಶ್ರಮಿಸುತ್ತಿರುವ ರಾಷ್ಟ್ರಪತಿಯವರ ಕಾರ್ಯವನ್ನು ರಾಜನಾಥ್ ಸಿಂಗ್ ಶ್ಲಾಘಿಸಿದರು. "ತಮ್ಮ ಸ್ವಂತ ಜೀವನದ ಮೂಲಕ, ರಾಷ್ಟ್ರಪತಿ ಮುರ್ಮು ಅವರು ಎಲ್ಲರಿಗೂ ಶಿಕ್ಷಣ, ಸಮಾನ ಹಕ್ಕುಗಳು ಮತ್ತು ಅವಕಾಶಗಳು ಲಭ್ಯವಾಗಬೇಕು ಎಂಬುದಕ್ಕೆ ಸ್ಪೂರ್ತಿದಾಯಕ ಉದಾಹರಣೆಯನ್ನು ನೀಡಿದ್ದಾರೆ. ಧೈರ್ಯ, ಕಠಿಣ ಪರಿಶ್ರಮ, ಸಾರ್ವಜನಿಕ ಸೇವೆ ಮತ್ತು ಆಧ್ಯಾತ್ಮಿಕತೆಯ ಆದರ್ಶಗಳು ಅವರ ಜೀವನದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ ಮತ್ತು ಅವರ ಭಾಷಣಗಳಲ್ಲಿಯೂ ಇವುಗಳನ್ನು ಕಾಣಬಹುದು" ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು, ‘ವಿಂಗ್ಸ್ ಟು ಅವರ್ ಹೋಪ್ಸ್ (ಸಂಪುಟ-II)’ ಪುಸ್ತಕವನ್ನು ದೇಶದ ‘ಪ್ರಥಮ ಪ್ರಜೆ’ಯ ದೃಷ್ಟಿಕೋನದಿಂದ ಸಮಕಾಲೀನ ವಿಷಯಗಳನ್ನು ಅರ್ಥಮಾಡಿಕೊಳ್ಳುವ ಒಂದು ಮಾಧ್ಯಮವೆಂದು ಬಣ್ಣಿಸಿದರು. ಹಾಗೂ, ಈ ಕೃತಿಯು ರಾಷ್ಟ್ರಪತಿಯವರ ಜನಕಲ್ಯಾಣದ ಚಿಂತನೆಗಳನ್ನು ಭವಿಷ್ಯದ ಪೀಳಿಗೆಗೆ ಪರಿಚಯಿಸಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ರಾಷ್ಟ್ರಪತಿಯವರ ಜೀವನದಿಂದ ಸ್ಫೂರ್ತಿದಾಯಕ ಕ್ಷಣಗಳನ್ನು ಉಲ್ಲೇಖಿಸಿದ ಶ್ರೀ ವೈಷ್ಣವ್, ಜೂನ್ 20ರಂದು ತಮ್ಮ ಹುಟ್ಟುಹಬ್ಬದಂದು ಶ್ರೀಮತಿ ದ್ರೌಪದಿ ಮುರ್ಮು ಅವರು ಡೆಹ್ರಾಡೂನ್ ನಲ್ಲಿರುವ ದೃಷ್ಟಿ ವಿಶೇಷಚೇತನರ ಸಬಲೀಕರಣಕ್ಕಾಗಿ ರಾಷ್ಟ್ರೀಯ ಸಂಸ್ಥೆಗೆ ಭೇಟಿ ನೀಡಿದ ಘಟನೆಯನ್ನು ನೆನಪಿಸಿಕೊಂಡರು. ಅಲ್ಲಿ ದೃಷ್ಟಿ ವಿಕಲಚೇತನ ಮಕ್ಕಳ ಪ್ರದರ್ಶನವನ್ನು ಕಂಡು ಅವರು ಬಹಳ ಭಾವುಕರಾಗಿದ್ದರು. "ಅವರ ಸರಳತೆ, ಸಂವೇದನಾಶೀಲತೆ ಮತ್ತು ಜನರ ಕಡೆಗೆ ಇರುವ ಸೇವಾ ಮನೋಭಾವ ಎಲ್ಲರಿಗೂ ನಿಜವಾದ ಸ್ಫೂರ್ತಿಯಾಗಿದೆ," ಎಂದು ಅವರು ಹೇಳಿದರು.
ರಾಷ್ಟ್ರಪತಿ ಭವನದಿಂದ ಸಂಗ್ರಹಿಸಲ್ಪಟ್ಟು, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪ್ರಕಾಶನ ವಿಭಾಗದಿಂದ ಹೊರತಂದಿರುವ ಈ ಎರಡನೇ ಸಂಪುಟವು, ಆಡಳಿತ, ಎಲ್ಲರನ್ನು ಒಳಗೊಳ್ಳುವ ಸಮಾಜ ನಿರ್ಮಾಣ ಮತ್ತು ರಾಷ್ಟ್ರೀಯ ಆಕಾಂಕ್ಷೆಗಳ ಕುರಿತಾದ ನಿರಂತರ ಪ್ರಗತಿಯನ್ನು ದಾಖಲಿಸುವ ಹಿಂದಿನ ಸಂಪುಟದ ಮುಂದುವರಿದ ಭಾಗವಾಗಿದೆ.
ಈ ಸಂದರ್ಭದಲ್ಲಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಪ್ರಭಾತ್ ಮತ್ತು ಪ್ರಕಾಶನ ವಿಭಾಗದ ಪ್ರಧಾನ ನಿರ್ದೇಶಕ ಶ್ರೀ ಭೂಪೇಂದ್ರ ಕೈಂಥೋಲಾ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
*****
(Release ID: 2139112)