ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕ್ರೊಯೇಷಿಯಾ ಗಣರಾಜ್ಯದ ಪ್ರಧಾನಮಂತ್ರಿ ಅವರನ್ನು ಭೇಟಿಯಾದ ಪ್ರಧಾನಮಂತ್ರಿ

Posted On: 18 JUN 2025 11:40PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಾಗ್ರೆಬ್‌ನಲ್ಲಿ ಕ್ರೊಯೇಷಿಯಾ ಗಣರಾಜ್ಯದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಆಂಡ್ರೆಜ್ ಪ್ಲೆಂಕೋವಿಕ್ ಅವರನ್ನು ಭೇಟಿ ಮಾಡಿದರು. ಇದು ಕ್ರೊಯೇಷಿಯಾಕ್ಕೆ ಭಾರತೀಯ ಪ್ರಧಾನ ಮಂತ್ರಿಯೊಬ್ಬರು ನೀಡಿದ ಮೊದಲ ಭೇಟಿಯಾಗಿದ್ದು, ಭಾರತ-ಕ್ರೊಯೇಷಿಯಾ ಸಂಬಂಧಗಳಲ್ಲಿ ಇದು ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ. ಐತಿಹಾಸಿಕ ಬನ್ಸ್ಕಿ ಡ್ವೋರಿ ಅರಮನೆಗೆ ಆಗಮಿಸಿದ ಪ್ರಧಾನ ಮಂತ್ರಿ ಅವರನ್ನು ಕ್ರೊಯೇಷಿಯಾ ಪ್ರಧಾನಿ ಪ್ಲೆಂಕೋವಿಕ್ ಬರಮಾಡಿಕೊಂಡು, ಔಪಚಾರಿಕ ಸ್ವಾಗತ ನೀಡಿದರು. ದಿನದ ಆರಂಭದಲ್ಲಿ, ಪ್ರಧಾನ ಮಂತ್ರಿಯವರು ಜಾಗ್ರೆಬ್‌ನ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ವಿಶೇಷ ಮತ್ತು ಆತ್ಮೀಯ ಗೌರವ ಸೂಚಕವಾಗಿ, ಅವರನ್ನು ಪ್ರಧಾನಿ ಪ್ಲೆಂಕೋವಿಕ್ ಸ್ವಾಗತಿಸಿದರು.

ಇಬ್ಬರೂ ನಾಯಕರು ನಿಯೋಗ ಮಟ್ಟದ ಮಾತುಕತೆ ನಡೆಸಿದರು. ವ್ಯಾಪಾರ ಮತ್ತು ಹೂಡಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ, ರಕ್ಷಣೆ ಮತ್ತು ಭದ್ರತೆ, ಬಾಹ್ಯಾಕಾಶ, ಸಾಂಸ್ಕೃತಿಕ ಸಹಕಾರ ಮತ್ತು ಜನರಿಂದ ಜನರ ನಡುವಿನ ಸಂಬಂಧಗಳು ಸೇರಿದಂತೆ ದ್ವಿಪಕ್ಷೀಯ ಪಾಲುದಾರಿಕೆಯ ವಿವಿಧ ವಿಚಾರಗಳ ಕುರಿತು ಅವರು ವ್ಯಾಪಕ ಚರ್ಚೆಗಳಲ್ಲಿ ತೊಡಗಿದರು. ಮೂಲಸೌಕರ್ಯ, ಬಂದರುಗಳು ಮತ್ತು ಸಾಗಣೆ, ಡಿಜಿಟಲೀಕರಣ, ಕೃತಕ ಬುದ್ಧಿಮತ್ತೆ, ನವೀಕರಿಸಬಹುದಾದ ಇಂಧನ, ಔಷಧ ಮತ್ತು ಪ್ರವಾಸೋದ್ಯಮ ಮತ್ತು ಆತಿಥ್ಯದಂತಹ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸಲು ಗಮನಾರ್ಹ ಅವಕಾಶಗಳಿವೆ ಎಂದು ಇಬ್ಬರೂ ನಾಯಕರು ಒಪ್ಪಿಕೊಂಡರು. ಕ್ರೊಯೇಷಿಯಾದಲ್ಲಿ ಭಾರತೀಯ ಸಂಸ್ಕೃತಿ, ಭಾರತಶಾಸ್ತ್ರ ಮತ್ತು ಯೋಗದ ಜನಪ್ರಿಯತೆಯು ಎರಡೂ ದೇಶಗಳ ಜನರನ್ನು ಹತ್ತಿರಕ್ಕೆ ತಂದಿದೆ ಎಂದು ಅವರು ಗಮನಿಸಿದರು. ಜೂನ್ 21ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಕ್ರೊಯೇಷಿಯಾದ ಎಲ್ಲಾ ಯೋಗ ಉತ್ಸಾಹಿಗಳಿಗೆ ಪ್ರಧಾನ ಮಂತ್ರಿ ಮೋದಿ ಶುಭಾಶಯಗಳನ್ನು ತಿಳಿಸಿದರು.

ನವೋದ್ಯಮ ಮತ್ತು ನಾವೀನ್ಯತೆ ಪಾಲುದಾರಿಕೆಗಳನ್ನು ನಿರ್ಮಿಸುವಲ್ಲಿನ ಇತ್ತೀಚಿನ ಉಪಕ್ರಮಗಳು ಮತ್ತು ಬೆಳವಣಿಗೆಗಳನ್ನು ನಾಯಕರು ಗಮನಿಸಿದರು. ಎರಡೂ ದೇಶಗಳಲ್ಲಿ ಸಮಗ್ರ ಮತ್ತು ಸುಸ್ಥಿರ ಬೆಳವಣಿಗೆ ಹೆಚ್ಚಿಸಲು ಹೆಚ್ಚಿನ ವ್ಯಾಪಾರ-ವ್ಯವಹಾರ ಸಹಭಾಗಿತ್ವವನ್ನು ಪ್ರೋತ್ಸಾಹಿಸುವ, ಹೂಡಿಕೆ ಪಾಲುದಾರಿಕೆಗಳು ಮತ್ತು ಜಂಟಿ ಉದ್ಯಮಗಳನ್ನು ಸುಗಮಗೊಳಿಸುವ ಅಗತ್ಯವನ್ನು ಅವರು ಗುರುತಿಸಿದರು. ಈ ಉದ್ದೇಶಕ್ಕಾಗಿ, ಕ್ರೊಯೇಷಿಯಾ ಭಾರತದ ಕೌಶಲ್ಯಪೂರ್ಣ ಪ್ರತಿಭೆಯನ್ನು ಬಳಸಿಕೊಳ್ಳಬಹುದು ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು. ಚಲನಶೀಲತೆಯ ಕ್ಷೇತ್ರದಲ್ಲಿ ಸಾಂಸ್ಥಿಕ ಸಹಭಾಗಿತ್ವ ಸ್ಥಾಪಿಸಲು ಅವರು ಕರೆ ನೀಡಿದರು. ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್(ಐಎಂಇಸಿ) ಸೇರಿದಂತೆ ಸಂಪರ್ಕ  ಸುಧಾರಿಸುವ ಮಹತ್ವವಿದೆ ಎಂದು ಅವರು ಒಪ್ಪಿಕೊಂಡರು. ಕ್ರೊಯೇಷಿಯಾವು ಮಧ್ಯ ಮತ್ತು ಆಗ್ನೇಯ ಯುರೋಪಿಗೆ ಭಾರತದ ಪ್ರವೇಶ ದ್ವಾರವಾಗಿ ಕಾರ್ಯ ನಿರ್ವಹಿಸಬಹುದು ಎಂದರು.

ಉಭಯ ನಾಯಕರು ಪರಸ್ಪರ ಆಸಕ್ತಿಯ ಪ್ರಮುಖ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆಯೂ ಚರ್ಚಿಸಿದರು. ವಿಶ್ವಸಂಸ್ಥೆ ಮತ್ತು ಇತರೆ ಅಂತಾರಾಷ್ಟ್ರೀಯ ಸಂಸ್ಥೆಗಳ ಸುಧಾರಣೆ, ಹವಾಮಾನ ಬದಲಾವಣೆಯ ಕ್ರಮ ಮತ್ತು ಭಯೋತ್ಪಾದನೆಯಿಂದ ಉಂಟಾಗುವ ಬೆದರಿಕೆಗಳ ಕುರಿತು ಅವರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಕ್ರೊಯೇಷಿಯಾ ನೀಡಿದ ಬಲವಾದ ಬೆಂಬಲ ಮತ್ತು ಒಗ್ಗಟ್ಟಿಗೆ ಪ್ರಧಾನಿ ಮೋದಿ ಅವರು ಪ್ಲೆಂಕೋವಿಕ್‌ ಪ್ರಧಾನಿಗೆ ಧನ್ಯವಾದ ಅರ್ಪಿಸಿದರು. ಭಾರತ-ಐರೋಪ್ಯ ಒಕ್ಕೂಟದ ಕಾರ್ಯತಂತ್ರ ಸಂಬಂಧಗಳು ಗಾಢವಾಗುತ್ತಿರುವುದಕ್ಕೆ ಇಬ್ಬರೂ ನಾಯಕರು ತೃಪ್ತಿ ವ್ಯಕ್ತಪಡಿಸಿದರು, ಭಾರತ-ಐರೋಪ್ಯ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದವು ತ್ವರಿತವಾಗಿ ಅಂತಿಮವಾಗುವುದಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದರು.

ಮಾತುಕತೆಯ ನಂತರ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ, ಸಂಸ್ಕೃತಿ ಕ್ಷೇತ್ರಗಳಲ್ಲಿ 4 ತಿಳಿವಳಿಕೆ ಪತ್ರ(ಎಂಒಯು)ಗಳಿಗೆ ಸಹಿ ಹಾಕಲಾಯಿತು, ಹಿಂದಿ ಪೀಠದ ನವೀಕರಣ ಕುರಿತು ಸಹಿ ಹಾಕಲಾಯಿತು. ಈ ಸಂದರ್ಭದಲ್ಲಿ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಯಿತು [ಲಿಂಕ್].

ಪ್ರಧಾನಿ ಪ್ಲೆಂಕೋವಿಕ್ ಅವರು ಪ್ರಧಾನ ಮಂತ್ರಿ ಮೋದಿ ಗೌರವಾರ್ಥ ಭೋಜನ ಕೂಟ ಆಯೋಜಿಸಿದ್ದರು. ಪ್ರಧಾನ ಮಂತ್ರಿ ಮೋದಿ ಅವರು ಪ್ರಧಾನ ಮಂತ್ರಿ ಪ್ಲೆಂಕೋವಿಕ್ ಅವರನ್ನು ಪರಸ್ಪರ ಅನುಕೂಲಕರ ಸಮಯದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದರು.

 

*****


(Release ID: 2137932)