ಪ್ರಧಾನ ಮಂತ್ರಿಯವರ ಕಛೇರಿ
ಭಾರತ - ಕ್ರೊಯೇಷಿಯಾ ನಾಯಕರ ಹೇಳಿಕೆ
Posted On:
19 JUN 2025 5:57PM by PIB Bengaluru
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭೇಟಿಯು ದ್ವಿಪಕ್ಷೀಯ ಪಾಲುದಾರಿಕೆಗೆ ಹೊಸ ವೇಗವನ್ನು ನೀಡಿದ್ದು, ವಿಶೇಷವಾಗಿ ಪ್ರವಾಸೋದ್ಯಮ, ವ್ಯಾಪಾರ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಎರಡೂ ಆರ್ಥಿಕತೆಗಳ ಪೂರಕತೆಯನ್ನು ಎತ್ತಿ ತೋರಿಸಿದೆ. (i) ಕೃಷಿ ಸಹಕಾರದ ಕುರಿತಾದ ತಿಳುವಳಿಕಾ ಒಡಂಬಡಿಕೆ; (ii) ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಹಕಾರ ಕಾರ್ಯಕ್ರಮ; (iii) ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ (ಸಿ.ಇ.ಪಿ-CEP); ಮತ್ತು (iv) ಜಾಗ್ರೆಬ್ ವಿಶ್ವವಿದ್ಯಾಲಯದಲ್ಲಿ ಹಿಂದಿ ಪೀಠವನ್ನು ಸ್ಥಾಪಿಸುವ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿರುವುದನ್ನು ಇಬ್ಬರೂ ಪ್ರಧಾನಮಂತ್ರಿಗಳು ಸ್ವಾಗತಿಸಿದರು.
ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (ಐ.ಎಂ.ಇ.ಸಿ.-IMEC) ಉಪಕ್ರಮದ ಮೂಲಕ ಸಂಪರ್ಕವನ್ನು ಸುಧಾರಿಸುವ ಮಹತ್ವವನ್ನು ಇಬ್ಬರು ನಾಯಕರು ಗಮನಿಸಿದರು. ಎರಡೂ ದೇಶಗಳ ದೀರ್ಘ ಸಮುದ್ರ ಸಂಪ್ರದಾಯಗಳನ್ನು ಗಮನದಲ್ಲಿಟ್ಟುಕೊಂಡು ಬಂದರುಗಳು ಮತ್ತು ಹಡಗು ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸಲು ಅವರು ಒಪ್ಪಿಕೊಂಡರು. ಮಧ್ಯ ಯುರೋಪಿಗೆ ಮೆಡಿಟರೇನಿಯನ್ ಗೇಟ್ವೇ ಆಗಿ ಕಾರ್ಯನಿರ್ವಹಿಸುವ ಕ್ರೊಯೇಷಿಯಾದ ಸಾಮರ್ಥ್ಯವನ್ನು ಮತ್ತಷ್ಟು ಅನ್ವೇಷಿಸಲು ಎರಡೂ ಕಡೆಯವರು ಒಪ್ಪಿಕೊಂಡರು.
ಈ ಸಂದರ್ಭದಲ್ಲಿ, ಅವರು ಯು.ಎನ್.ಸಿ.ಎಲ್.ಒ.ಎಸ್.( UNCLOS ) ನಲ್ಲಿ ಪ್ರತಿಬಿಂಬಿತವಾಗಿರುವ ಅಂತರರಾಷ್ಟ್ರೀಯ ಸಮುದ್ರ ಕಾನೂನು ಮತ್ತು ಸಾರ್ವಭೌಮತ್ವ, ಪ್ರಾದೇಶಿಕ/ಭೌಗೋಳಿಕ ಸಮಗ್ರತೆ ಮತ್ತು ನೌಕಾಯಾನ ಸ್ವಾತಂತ್ರ್ಯದ ತತ್ವಗಳಿಗೆ ಸಂಪೂರ್ಣ ಗೌರವವನ್ನು ಪುನರುಚ್ಚರಿಸಿದರು, ಕಡಲ ಭದ್ರತೆ ಮತ್ತು ಅಂತರರಾಷ್ಟ್ರೀಯ ಶಾಂತಿ ಹಾಗು ಸ್ಥಿರತೆಯ ಪ್ರಯೋಜನಗಳಿಗಾಗಿ ಈ ತತ್ವಗಳು ರೂಪಿತವಾಗಿವೆ.
ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ, ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಎರಡೂ ದೇಶಗಳ ವೈಜ್ಞಾನಿಕ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳನ್ನು ಸಂಪರ್ಕಿಸುವ ಮಹತ್ವವನ್ನು ಇಬ್ಬರೂ ಪ್ರಧಾನ ಮಂತ್ರಿಗಳು ಎತ್ತಿ ತೋರಿಸಿದರು. ದೀರ್ಘಾವಧಿಯ ಸಂಶೋಧನಾ ಸಹಯೋಗಕ್ಕಾಗಿ ಯುವ ಸಂಶೋಧಕರ ವಿನಿಮಯವನ್ನು ಸುಗಮಗೊಳಿಸಲು ಎರಡೂ ಕಡೆಯವರು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು ಮತ್ತು ಉತ್ತಮ ಪದ್ಧತಿ/ಅಭ್ಯಾಸಗಳನ್ನು ಹಂಚಿಕೊಳ್ಳಲು ಹಾಗು ಅನ್ವಯಿಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ವೈಜ್ಞಾನಿಕ ಸಮುದಾಯದೊಳಗೆ ನೆಟ್ವರ್ಕಿಂಗ್ ವ್ಯವಸ್ಥೆಯನ್ನೂ ಅವರು ಪ್ರೋತ್ಸಾಹಿಸಿದರು.
ರಕ್ಷಣಾ ಸಹಕಾರದ ಕುರಿತು 2023 ರ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿರುವುದನ್ನು ಇಬ್ಬರೂ ಪ್ರಧಾನ ಮಂತ್ರಿಗಳು ಗಮನಿಸಿದರು ಮತ್ತು ರಕ್ಷಣಾ ಸಂಬಂಧಗಳನ್ನು ಇನ್ನಷ್ಟು ಸುಧಾರಿಸಲು ಒಪ್ಪಿಕೊಂಡರು. ಸಹಯೋಗ ಮತ್ತು ನಿಯಮಿತ ಸಂವಹನಗಳ ಮೂಲಕ ರಾಷ್ಟ್ರೀಯ ರಕ್ಷಣಾ ಕೈಗಾರಿಕೆಗಳ ನಡುವಿನ ಸಹಕಾರಕ್ಕೆ ಅವಕಾಶಗಳನ್ನು ಹುಡುಕುವುದರ ಮೇಲೆ ಹೆಚ್ಚಿನ ಒತ್ತು ನೀಡಲಾಗುವುದು.
ಡಿಜಿಟಲ್ ತಂತ್ರಜ್ಞಾನವನ್ನು ಸಹಕಾರಕ್ಕಾಗಿ ಮತ್ತೊಂದು ಪ್ರಮುಖ ಕ್ಷೇತ್ರವೆಂದು ಗುರುತಿಸಲಾಯಿತು. ಕ್ರೊಯೇಷಿಯಾದ ಮತ್ತು ಭಾರತೀಯ ವೈಜ್ಞಾನಿಕ ಪರಿಸರ ವ್ಯವಸ್ಥೆಗಳು ಆರೋಗ್ಯ ರಕ್ಷಣೆ-ತಂತ್ರಜ್ಞಾನ, ಕೃಷಿ-ತಂತ್ರಜ್ಞಾನ, ಸ್ವಚ್ಛತಾ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಮತ್ತು ಸೈಬರ್ ಭದ್ರತೆಯಂತಹ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಇನ್ಕ್ಯುಬೇಶನ್ ಕೇಂದ್ರಗಳು ಮತ್ತು ನವೋದ್ಯಮಗಳ ನಡುವಿನ ಕಾರ್ಯತಂತ್ರದ ಸಹಯೋಗದಿಂದ ಪ್ರಯೋಜನ ಪಡೆಯಬಹುದು. ನವೋದ್ಯಮಗಳ ನಡುವೆ ನಾವೀನ್ಯತೆ ಮತ್ತು ಸಹಯೋಗವನ್ನು ಬೆಳೆಸಲು ಭಾರತ-ಕ್ರೊಯೇಷಿಯಾ ನವೋದ್ಯಮಗಳ ಸೇತುವೆಯನ್ನು ಬಲಪಡಿಸುವ ಅಗತ್ಯವನ್ನು ಇಬ್ಬರೂ ಪ್ರಧಾನ ಮಂತ್ರಿಗಳು ಒಪ್ಪಿಕೊಂಡರು.
ಬಲವಾದ ಸಾಂಸ್ಕೃತಿಕ ವಿನಿಮಯವನ್ನು ಗುರುತಿಸಿದರೂ, 2026-2030ರ ಅವಧಿಯಲ್ಲಿ ಸಾಂಸ್ಕೃತಿಕ ವಲಯದಲ್ಲಿ ಆಳವಾದ ಒಳಗೊಳ್ಳುವಿಕೆಯ ಮಹತ್ವವನ್ನು ಎರಡೂ ಕಡೆಯವರು ಒತ್ತಿ ಹೇಳಿದರು. ಎರಡೂ ದೇಶಗಳ ಜನತೆ ಮತ್ತು ಜನತೆಯ ನಡುವಿನ ಸಂಬಂಧಗಳನ್ನು ಬಲಪಡಿಸಲು ಸಂಸ್ಕೃತಿಯು ಒಂದು ಪ್ರಬಲ ಸಾಧನವಾಗಿದೆ ಎಂಬುದನ್ನು ಅವರು ಗುರುತಿಸಿದರು.
ದ್ವಿಪಕ್ಷೀಯ ಸಹಕಾರದ ವಿವಿಧ ಕ್ಷೇತ್ರಗಳಲ್ಲಿ ವಿಸ್ತೃತ ತೊಡಗಿಸಿಕೊಳ್ಳುವಿಕೆಯನ್ನು ಬೆಂಬಲಿಸುವಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಸಿಬ್ಬಂದಿಗಳ ಚಲನಶೀಲತೆಯ ಮಹತ್ವವನ್ನು ಅವರು ಗುರುತಿಸಿದರು ಮತ್ತು ಎರಡೂ ದೇಶಗಳ ನಡುವಿನ ಕಾರ್ಮಿಕ /ಕಾರ್ಯಪಡೆಯ ಚಲನಶೀಲತೆಯ ಕುರಿತು ತಿಳುವಳಿಕಾ ಒಡಂಬಡಿಕೆಯನ್ನು ತ್ವರಿತವಾಗಿ ಅಂತಿಮಗೊಳಿಸಲು ಒಪ್ಪಿಕೊಂಡರು.
2025ರ ಏಪ್ರಿಲ್ 22 ರಂದು ಭಾರತದ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ನೀಡಿದ ಬೆಂಬಲ ಮತ್ತು ಒಗ್ಗಟ್ಟಿಗೆ ಪ್ರಧಾನಿ ಮೋದಿ ಅವರು ಪ್ರಧಾನಿ ಪ್ಲೆನ್ಕೋವಿಕ್ ಅವರಿಗೆ ಮತ್ತು ಕ್ರೊಯೇಷಿಯಾಗೆ ಧನ್ಯವಾದ ಅರ್ಪಿಸಿದರು. ಅಂತರರಾಷ್ಟ್ರೀಯ ಮತ್ತು ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಯಾವುದೇ ರೂಪ ಮತ್ತು ಇತರ ಯಾವುದೇ ರೀತಿಯಲ್ಲಿ ಕಾಣಿಸಿಕೊಳ್ಳುವ ಭಯೋತ್ಪಾದನೆ ಮತ್ತು ಹಿಂಸಾತ್ಮಕ ಉಗ್ರವಾದವನ್ನು ಎರಡೂ ಕಡೆಯವರು ಖಂಡಿಸಿದರು. ಯಾವುದೇ ಸಂದರ್ಭಗಳಲ್ಲಿ ಅಂತಹ ಕೃತ್ಯಗಳಿಗೆ ಯಾವುದೇ ಸಮರ್ಥನೆಯನ್ನು ನೀಡುವುದನ್ನು ತಿರಸ್ಕರಿಸುತ್ತಾ, ಭಯೋತ್ಪಾದನೆಗೆ ತಮ್ಮ ಶೂನ್ಯ ಸಹಿಷ್ಣುತೆಯ ವಿಧಾನವನ್ನು ಅವರು ಪುನರುಚ್ಚರಿಸಿದರು. ದಾಳಿಗಳಿಗೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದ ಅವರು ಭಯೋತ್ಪಾದಕರನ್ನು ಪ್ರಾಕ್ಸಿಗಳಾಗಿ ಬಳಸುವುದನ್ನು ಖಂಡಿಸಿದರು. ವಿಶ್ವಸಂಸ್ಥೆಯ (ಯುಎನ್) ಜಾಗತಿಕ ಭಯೋತ್ಪಾದನಾ ನಿಗ್ರಹ ಕಾರ್ಯತಂತ್ರಕ್ಕೆ ಅವರು ಸಂಪೂರ್ಣ ಬೆಂಬಲವನ್ನು ದೃಢಪಡಿಸಿದರು, ಈ ಕ್ಷೇತ್ರದಲ್ಲಿ ಪ್ರಮುಖ ಅಂತರರಾಷ್ಟ್ರೀಯ ಸಮಾವೇಶಗಳು ಮತ್ತು ಶಿಷ್ಟಾಚಾರಗಳು (ಪ್ರೋಟೋಕಾಲ್ಗಳು) ಹಾಗು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಂಬಂಧಿತ ನಿರ್ಣಯಗಳ ಸಂಪೂರ್ಣ ಅನುಷ್ಠಾನವನ್ನು ಬೆಂಬಲಿಸುವ ತಮ್ಮ ಸ್ಥಿರ ನಿಲುವನ್ನು ಅವರು ವ್ಯಕ್ತಪಡಿಸಿದರು. ಯುಎನ್, ಎಫ್ಎಟಿಎಫ್ ಮತ್ತು ಪ್ರಾದೇಶಿಕ ಕಾರ್ಯವಿಧಾನಗಳ ಮೂಲಕ ಭಯೋತ್ಪಾದನೆಗೆ ಹಣಕಾಸು ಜಾಲಗಳನ್ನು ಹಾಳು/ಧ್ವಂಸ ಮಾಡುವುದು ಭಯೋತ್ಪಾದನೆಯ ಸುರಕ್ಷಿತ ತಾಣಗಳನ್ನು ನಿರ್ಮೂಲನೆ ಮಾಡುವುದು, ಭಯೋತ್ಪಾದಕ ಮೂಲಸೌಕರ್ಯವನ್ನು ಕಿತ್ತುಹಾಕುವುದು ಮತ್ತು ಭಯೋತ್ಪಾದನೆಯ ಅಪರಾಧಿಗಳನ್ನು ತ್ವರಿತವಾಗಿ ನ್ಯಾಯಕ್ಕೆ ತರುವುದು ಸೇರಿದಂತೆ ಭಯೋತ್ಪಾದನೆ ನಿಗ್ರಹಿಸಲು ಸಮಗ್ರ ಕಾರ್ಯವಿಧಾನಕ್ಕೆ ಅವರು ಕರೆ ನೀಡಿದರು. 1267 ಯು.ಎನ್.ಎಸ್.ಸಿ. (UNSC) ನಿರ್ಬಂಧ ಸಮಿತಿಯ ಅಡಿಯಲ್ಲಿ ಭಯೋತ್ಪಾದಕರು ಸೇರಿದಂತೆ ಯು.ಎನ್.- ಮತ್ತು ಇ.ಯು.- ಗೊತ್ತುಪಡಿಸಿದ ಭಯೋತ್ಪಾದಕರು ಮತ್ತು ಭಯೋತ್ಪಾದಕ ಘಟಕಗಳು, ಸಂಬಂಧಿತ ಪ್ರಾಕ್ಸಿ ಗುಂಪುಗಳು, ಸಹಾಯಕರು ಮತ್ತು ಪ್ರಾಯೋಜಕರ ವಿರುದ್ಧ ಸಂಘಟಿತ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಉಕ್ರೇನ್ನಲ್ಲಿನ ಯುದ್ಧ ಸೇರಿದಂತೆ ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಇಬ್ಬರೂ ಪ್ರಧಾನ ಮಂತ್ರಿಗಳು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಅಂತರರಾಷ್ಟ್ರೀಯ ಕಾನೂನು, ವಿಶ್ವಸಂಸ್ಥೆಯ ಚಾರ್ಟರ್ನ ತತ್ವಗಳು ಮತ್ತು ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಗೌರವಿಸುವ ಆಧಾರದ ಮೇಲೆ ಉಕ್ರೇನ್ನಲ್ಲಿ ನ್ಯಾಯಯುತ ಮತ್ತು ಶಾಶ್ವತ ಶಾಂತಿ ನೆಲೆಸುವಂತೆ ಮಾಡಲು ಅವರು ಬೆಂಬಲ ವ್ಯಕ್ತಪಡಿಸಿದರು. ಮಧ್ಯಪ್ರಾಚ್ಯದಲ್ಲಿನ ಭದ್ರತಾ ಪರಿಸ್ಥಿತಿಯು ಹದಗೆಡುತ್ತಿರುವ ಬಗ್ಗೆ ಇಬ್ಬರೂ ನಾಯಕರು ಕಳವಳ ವ್ಯಕ್ತಪಡಿಸಿದರು ಮತ್ತು ಇಸ್ರೇಲ್ ಹಾಗು ಇರಾನ್ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಕರೆ ನೀಡಿದರು. ಅಂತರರಾಷ್ಟ್ರೀಯ ಕಾನೂನು ಮತ್ತು ಸಾರ್ವಭೌಮತ್ವಕ್ಕೆ ಪರಸ್ಪರ ಗೌರವ ಮತ್ತು ಪರಿಣಾಮಕಾರಿ ಪ್ರಾದೇಶಿಕ ಸಂಸ್ಥೆಗಳ ಮೂಲಕ ವಿವಾದಗಳ ಶಾಂತಿಯುತ ಪರಿಹಾರದ ಮೇಲೆ ನಿರ್ಮಿಸಲಾದ ಮುಕ್ತ, ಶಾಂತಿಯುತ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ಅನ್ನು ಉತ್ತೇಜಿಸುವ ತಮ್ಮ ಬದ್ಧತೆಯನ್ನು ನಾಯಕರು ಪುನರುಚ್ಚರಿಸಿದರು.
ಬಹುಪಕ್ಷೀಯತೆಗೆ ಮತ್ತು ನಿಯಮ-ಆಧಾರಿತ ಅಂತರರಾಷ್ಟ್ರೀಯ ವ್ಯವಸ್ಥೆಗೆ ಬೆಂಬಲ ನೀಡುವ ತಮ್ಮ ಬಲವಾದ ಬದ್ಧತೆಯನ್ನು ಎರಡೂ ಕಡೆಯವರು ಪುನರುಚ್ಚರಿಸಿದರು. ಯುಎನ್ ವ್ಯವಸ್ಥೆಯಲ್ಲಿ ಸುಧಾರಣೆಗಳ ತುರ್ತು ಅಗತ್ಯವನ್ನು ಅವರು ಒತ್ತಿ ಹೇಳಿದರು, ವಿಶೇಷವಾಗಿ ಯುಎನ್ ಭದ್ರತಾ ಮಂಡಳಿಯಲ್ಲಿ ಶಾಶ್ವತ ಮತ್ತು ಶಾಶ್ವತವಲ್ಲದ ವರ್ಗಗಳಲ್ಲಿ ಅದರ ವಿಸ್ತರಣೆ ಸೇರಿದಂತೆ, ಅದನ್ನು ಹೆಚ್ಚು ಒಳಗೊಳ್ಳುವ, ಪಾರದರ್ಶಕ, ಪರಿಣಾಮಕಾರಿ, ಜವಾಬ್ದಾರಿಯುತ, ದಕ್ಷ ಮತ್ತು ಸಮಕಾಲೀನ ಭೌಗೋಳಿಕ ರಾಜಕೀಯ ವಾಸ್ತವಗಳೊಂದಿಗೆ ಉತ್ತಮವಾಗಿ ಹೊಂದಿಸಲು ಈ ಬದಲಾವಣೆಯ ಅವಶ್ಯಕತೆಯನ್ನು ಅವರು ಪ್ರತಿಪಾದಿಸಿದರು.
ಎರಡು ದೊಡ್ಡ ಪ್ರಜಾಪ್ರಭುತ್ವಗಳು, ಮುಕ್ತ ಮಾರುಕಟ್ಟೆ ಆರ್ಥಿಕತೆಗಳು ಮತ್ತು ಬಹುತ್ವ ಸಮಾಜಗಳಾದ ಭಾರತ ಮತ್ತು ಇ.ಯು.ನಡುವಿನ ವ್ಯೂಹಾತ್ಮಕ ಪಾಲುದಾರಿಕೆಯಲ್ಲಿನ ನವೀಕೃತ ವೇಗವನ್ನು ಇಬ್ಬರೂ ನಾಯಕರು ಸ್ವಾಗತಿಸಿದರು. 2025ರ ಫೆಬ್ರವರಿಯಲ್ಲಿ ಇ.ಯು. ಕಾಲೇಜ್ ಆಫ್ ಕಮಿಶನರ್ಸ್ ಭಾರತಕ್ಕೆ ಭೇಟಿ ನೀಡಿದ ಸಮಯದಲ್ಲಿ ಒಪ್ಪಿಕೊಂಡಂತೆ, ವರ್ಷದ ಅವಧಿಯಲ್ಲಿ ಪರಸ್ಪರ ಪ್ರಯೋಜನಕಾರಿಯಾದ ಭಾರತ - ಇ.ಯು. ಎಫ್.ಟಿ.ಎ. (EU FTA) ಅನ್ನು ಅಂತಿಮಗೊಳಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು.
ಕ್ರೊಯೇಷಿಯಾದ ವತಿಯಿಂದ ನೀಡಲಾದ ಆತ್ಮೀಯ ಆತಿಥ್ಯಕ್ಕಾಗಿ ಭಾರತದ ವತಿಯಿಂದ ಕೃತಜ್ಞತೆಯನ್ನು ವ್ಯಕ್ತಪಡಿಸಲಾಯಿತು. ಭೇಟಿಯ ಫಲಿತಾಂಶಗಳ ಬಗ್ಗೆ ಇಬ್ಬರೂ ಪ್ರಧಾನಮಂತ್ರಿಗಳು ತೃಪ್ತಿ ವ್ಯಕ್ತಪಡಿಸಿದರು ಮತ್ತು ಭಾರತ ಹಾಗು ಕ್ರೊಯೇಷಿಯಾದ ನಡುವಿನ ಪಾಲುದಾರಿಕೆಯನ್ನು ವಿಸ್ತರಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.
*****
(Release ID: 2137930)
Read this release in:
Telugu
,
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Tamil
,
Malayalam