ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

G7  ಔಟ್ರೀಚ್ ಅಧಿವೇಶನವನ್ನುದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

Posted On: 18 JUN 2025 11:13AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕಾನನಾಸ್ಕಿಸ್ ನಲ್ಲಿ ನಡೆದ G7 ಶೃಂಗಸಭೆಯ ಹೊರನೋಟದ ಅಧಿವೇಶನದಲ್ಲಿ (Outreach Session) ಭಾಗವಹಿಸಿದರು. 'ಇಂಧನ ಭದ್ರತೆ: ಬದಲಾಗುತ್ತಿರುವ ಜಗತ್ತಿನಲ್ಲಿ ಲಭ್ಯತೆ ಮತ್ತು ಕೈಗೆಟಕುವಿಕೆಯನ್ನು ಖಚಿತಪಡಿಸಿಕೊಳ್ಳಲು ವೈವಿಧ್ಯೀಕರಣ, ತಂತ್ರಜ್ಞಾನ ಮತ್ತು ಮೂಲಸೌಕರ್ಯ' ಕುರಿತ ಅಧಿವೇಶನವನ್ನು ಅವರು ಉದ್ದೇಶಿಸಿ ಮಾತನಾಡಿದರು. ಅವರು ಕೆನಡಾದ ಪ್ರಧಾನಿ, ಘನತೆವೆತ್ತ ಶ್ರೀ ಮಾರ್ಕ್ ಕಾರ್ನಿ ಅವರ ಆಹ್ವಾನಕ್ಕಾಗಿ ಧನ್ಯವಾದ ಅರ್ಪಿಸಿದರು ಮತ್ತು G7 ತನ್ನ 50 ವರ್ಷಗಳ ಪಯಣವನ್ನು ಪೂರ್ಣಗೊಳಿಸಿದ್ದಕ್ಕಾಗಿ ಅಭಿನಂದಿಸಿದರು.

ತಮ್ಮ ಭಾಷಣದಲ್ಲಿ, ಪ್ರಧಾನಮಂತ್ರಿಯವರು, ಇಂಧನ ಭದ್ರತೆಯು ಮುಂದಿನ ಪೀಳಿಗೆಯು ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ ಎಂದು ಒತ್ತಿ ಹೇಳಿದರು. ಸರ್ವರನ್ನೊಳಗೊಂಡ ಬೆಳವಣಿಗೆಗೆ ಭಾರತದ ಬದ್ಧತೆಯ ಬಗ್ಗೆ ವಿವರಿಸಿದ ಅವರು, ಲಭ್ಯತೆ, ಸುಲಭ ಲಭ್ಯತೆ, ಕೈಗೆಟುಕುವ ದರ ಮತ್ತು ಸ್ವೀಕಾರಾರ್ಹತೆ - ಈ ನಾಲ್ಕು ತತ್ವಗಳು ಭಾರತದ ಇಂಧನ ಭದ್ರತಾ ನೀತಿಗೆ ಆಧಾರವಾಗಿವೆ ಎಂದು ತಿಳಿಸಿದರು.

ಭಾರತವು ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದ್ದರೂ, ಪ್ಯಾರಿಸ್ ಒಪ್ಪಂದದ ಬದ್ಧತೆಗಳನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಯಶಸ್ವಿಯಾಗಿ ಪೂರೈಸಿದೆ ಎಂದು ಅವರು ಒತ್ತಿ ಹೇಳಿದರು. ಸುಸ್ಥಿರ ಮತ್ತು ಹಸಿರು ಭವಿಷ್ಯಕ್ಕಾಗಿ ಭಾರತದ ಬದ್ಧತೆಯನ್ನು ಎತ್ತಿ ಹಿಡಿದ ಅವರು, ಭಾರತವು ಅಂತರರಾಷ್ಟ್ರೀಯ ಸೌರ ಒಕ್ಕೂಟ (International Solar Alliance), ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಒಕ್ಕೂಟ (Coalition for Disaster Resilient Infrastructure), ಜಾಗತಿಕ ಜೈವಿಕ ಇಂಧನ ಒಕ್ಕೂಟ (Global Biofuels Alliance), ಮಿಷನ್ ಲೈಫ್ (Mission LiFE) ಮತ್ತು ಒಂದು ಸೂರ್ಯ-ಒಂದು ವಿಶ್ವ-ಒಂದು ಗ್ರಿಡ್ (One Sun- One World- One Grid) ನಂತಹ ಹಲವಾರು ಜಾಗತಿಕ ಉಪಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು. ಈ ಉಪಕ್ರಮಗಳನ್ನು ಇನ್ನಷ್ಟು ಬಲಪಡಿಸಲು ಅಂತರರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದರು.

ಪ್ರಧಾನಮಂತ್ರಿಯವರು, ವಿಶ್ವದ ವಿವಿಧ ಭಾಗಗಳಲ್ಲಿನ ಅನಿಶ್ಚಿತತೆ ಮತ್ತು ಸಂಘರ್ಷಗಳು ಗ್ಲೋಬಲ್ ಸೌತ್ ದೇಶಗಳ ಮೇಲೆ ದುರ್ಬಲಗೊಳಿಸುವ ಪರಿಣಾಮವನ್ನು ಬೀರಿವೆ ಎಂದು ಅಭಿಪ್ರಾಯಪಟ್ಟರು. ಹಾಗಾಗಿ, ಜಾಗತಿಕ ವೇದಿಕೆಯಲ್ಲಿ ಗ್ಲೋಬಲ್ ಸೌತ್ ನ ಧ್ವನಿಯನ್ನು ಕೇಳಿಸುವ ಜವಾಬ್ದಾರಿಯನ್ನು ಭಾರತವು ತೆಗೆದುಕೊಂಡಿದೆ ಎಂದು ಅವರು ಹೇಳಿದರು. ಅಂತಾರಾಷ್ಟ್ರೀಯ ಸಮುದಾಯವು ಸುಸ್ಥಿರ ಭವಿಷ್ಯದ ಬಗ್ಗೆ ಗಂಭೀರವಾಗಿದ್ದರೆ, ಗ್ಲೋಬಲ್ ಸೌತ್ ನ ಆದ್ಯತೆಗಳು ಮತ್ತು ಕಳವಳಗಳನ್ನು ವಿಶ್ವವು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ಅವರು ಒತ್ತಿ ಹೇಳಿದರು. ಭದ್ರತಾ ಸವಾಲುಗಳ ಬಗ್ಗೆ ಒತ್ತು ನೀಡಿದ ಅವರು, ಭಯೋತ್ಪಾದನೆ ವಿರುದ್ಧದ ಜಾಗತಿಕ ಹೋರಾಟವನ್ನು ಬಲಪಡಿಸಲು ದೇಶಗಳಿಗೆ ಕರೆ ನೀಡಿದರು. ಭಾರತದ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಜಾಗತಿಕ ಸಮುದಾಯದ ಬಲವಾದ ಬೆಂಬಲಕ್ಕಾಗಿ ಧನ್ಯವಾದ ಅರ್ಪಿಸಿದ ಅವರು, ಪಹಲ್ಗಾಮ್ ಭಯೋತ್ಪಾದಕ ದಾಳಿಯು ಭಾರತದ ಮೇಲಿನ ದಾಳಿಯಷ್ಟೇ ಅಲ್ಲ, ಇಡೀ ಮಾನವಕುಲದ ಮೇಲಿನ ದಾಳಿಯಾಗಿದೆ ಎಂದು ಹೇಳಿದರು. ಭಯೋತ್ಪಾದನೆಯನ್ನು ಬೆಂಬಲಿಸುವ ಮತ್ತು ಉತ್ತೇಜಿಸುವ ದೇಶಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಕರೆ ನೀಡಿದರು. ಭಯೋತ್ಪಾದನೆಯನ್ನು ಎದುರಿಸುವಲ್ಲಿ ಯಾವುದೇ ದ್ವಂದ್ವ ನೀತಿ ಇರಬಾರದು ಮತ್ತು  ಭಯೋತ್ಪಾದನೆಗೆ ಬೆಂಬಲ ನೀಡುವವರನ್ನು ಎಂದಿಗೂ ಪುರಸ್ಕರಿಸಬಾರದು ಎಂದು ಅವರು ಹೇಳಿದರು. ಭಯೋತ್ಪಾದನೆಯನ್ನು ಮಾನವಕುಲಕ್ಕೆ ಗಂಭೀರ ಬೆದರಿಕೆ ಎಂದು ಕರೆದ ಪ್ರಧಾನಮಂತ್ರಿ ಅವರು ಅಂತಾರಾಷ್ಟ್ರೀಯ ಸಮುದಾಯವು ಚಿಂತಿಸಬೇಕಾದ ತುರ್ತು ಪ್ರಶ್ನೆಗಳನ್ನು ಮುಂದಿಟ್ಟರು:

•  ದೇಶಗಳು ಭಯೋತ್ಪಾದನೆಯ ಗಂಭೀರ ಬೆದರಿಕೆಯನ್ನು, ತಾವು ಗುರಿಯಾದಾಗ ಮಾತ್ರ ಅರ್ಥಮಾಡಿಕೊಳ್ಳುತ್ತವೆಯೇ? 

•  ಭಯೋತ್ಪಾದಕ ಕೃತ್ಯಗಳ ಅಪರಾಧಿಗಳನ್ನು ಮತ್ತು ಬಲಿಪಶುಗಳನ್ನು ಸಮಾನವಾಗಿ ಕಾಣಲು ಸಾಧ್ಯವೇ? 
•  ಜಾಗತಿಕ ಸಂಸ್ಥೆಗಳು ಭಯೋತ್ಪಾದನೆಗೆ ಮೂಕ ಪ್ರೇಕ್ಷಕರಾಗಿರುತ್ತವೆಯೇ?

ಪ್ರಧಾನಮಂತ್ರಿ ಅವರು ತಂತ್ರಜ್ಞಾನ, AI ಮತ್ತು ಇಂಧನದ ನಡುವಿನ ಸಂಬಂಧದ ಬಗ್ಗೆಯೂ ಮಾತನಾಡಿದರು. AI ದಕ್ಷತೆ ಮತ್ತು ನಾವಿನ್ಯತೆಯನ್ನು ಉತ್ತೇಜಿಸಲು ಒಂದು ನಿರ್ಣಾಯಕ ಸಾಧನವಾಗಿ ಮಾರ್ಪಟ್ಟಿದ್ದರೂ, ಈ ತಂತ್ರಜ್ಞಾನವು ಶಕ್ತಿಯನ್ನು ಹೆಚ್ಚು ಬಳಸುತ್ತದೆ. ಆದ್ದರಿಂದ, ಸ್ವಚ್ಛ ಮತ್ತು ಹಸಿರು ಉಪಕ್ರಮಗಳ ಮೂಲಕ ಅದನ್ನು ಹೇಗೆ ಸುಸ್ಥಿರವಾಗಿಸುವುದು ಎಂಬುದರ ಬಗ್ಗೆ ಕಾರ್ಯತಂತ್ರ ರೂಪಿಸುವುದು ಮುಖ್ಯ ಎಂದು ಅವರು ಗಮನಸೆಳೆದರು. ತಂತ್ರಜ್ಞಾನವನ್ನು ಉತ್ತೇಜಿಸುವಲ್ಲಿ ಭಾರತದ ಮಾನವ-ಕೇಂದ್ರಿತ ವಿಧಾನವನ್ನು ವಿವರಿಸಿದ ಅವರು, ಯಾವುದೇ ತಂತ್ರಜ್ಞಾನವು ಪರಿಣಾಮಕಾರಿಯಾಗಲು ಅದು ಸಾಮಾನ್ಯ ಜನರ ಜೀವನಕ್ಕೆ ಮೌಲ್ಯವನ್ನು ತರಬೇಕು ಎಂದು ಹೇಳಿದರು. AI-ಸಂಬಂಧಿತ ಜಾಗತಿಕ ಆಡಳಿತದ ಸಮಸ್ಯೆಗಳನ್ನು ಪರಿಹರಿಸುವುದು AI ಯ ಕಳವಳಗಳನ್ನು ನಿಭಾಯಿಸಲು ಮತ್ತು ಈ ಕ್ಷೇತ್ರದಲ್ಲಿ ನಾವೀನ್ಯತೆಯನ್ನು ಉತ್ತೇಜಿಸಲು ಪ್ರಮುಖವಾಗಿದೆ ಎಂದು ಅವರು ಸಲಹೆ ನೀಡಿದರು. AI ಯುಗದಲ್ಲಿ, ನಿರ್ಣಾಯಕ ಖನಿಜಗಳ ಸುರಕ್ಷಿತ ಮತ್ತು ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳನ್ನು ಹೊಂದಿರುವುದು ಮುಖ್ಯ ಎಂದು ಅವರು ಒತ್ತಿ ಹೇಳಿದರು. ಗುಣಮಟ್ಟದ ಮತ್ತು ವೈವಿಧ್ಯಮಯ ಡೇಟಾ, ಭಾರತದಲ್ಲಿ ಹೇರಳವಾಗಿ ಲಭ್ಯವಿದೆ, ಇದು ಜವಾಬ್ದಾರಿಯುತ AI ಗೆ ನಿರ್ಣಾಯಕವಾಗಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು.

ತಂತ್ರಜ್ಞಾನದಿಂದ ತುಂಬಿದ ಈ ಜಗತ್ತಿನಲ್ಲಿ, ನಾವು ಸುಸ್ಥಿರ ಭವಿಷ್ಯವನ್ನು ಕಟ್ಟಲು ದೇಶಗಳು ಪರಸ್ಪರ ಹೆಚ್ಚು ಸಹಕರಿಸಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ಪ್ರಗತಿಯಲ್ಲಿ ಯಾವಾಗಲೂ ಜನರು ಮತ್ತು ಭೂಮಿಯನ್ನು ಮುಖ್ಯವಾಗಿ ಪರಿಗಣಿಸಬೇಕು ಎಂದು ಅವರು ಒತ್ತಿ ಹೇಳಿದರು. ಅಧಿವೇಶನದಲ್ಲಿ ಪ್ರಧಾನಮಂತ್ರಿಯವರ ಭಾಷಣವನ್ನು ಇಲ್ಲಿ ಓದಬಹುದು.[ಲಿಂಕ್]

 

*****


(Release ID: 2137171)