ಉಪರಾಷ್ಟ್ರಪತಿಗಳ ಕಾರ್ಯಾಲಯ
ಅರಣ್ಯಗಳು ನಮ್ಮ ಉಸಿರು, ಅವು ಹವಾಮಾನವನ್ನು ನಿಯಂತ್ರಿಸುತ್ತವೆ, ವಿಪತ್ತುಗಳನ್ನು ತಡೆಗಟ್ಟುತ್ತವೆ ಮತ್ತು ಅಂಚಿನಲ್ಲಿರುವವರಿಗೆ ಬೆಂಬಲ ನೀಡುತ್ತವೆ: ಉಪರಾಷ್ಟ್ರಪತಿ
ಹವಾಮಾನ ಬದಲಾವಣೆಯು ಜಾಗತಿಕ ಬೆದರಿಕೆ ಮತ್ತು ಗಂಭಿರವಾದ ಬಿಕ್ಕಟ್ಟು: ಉಪರಾಷ್ಟ್ರಪತಿ ಎಚ್ಚರಿಕೆ
ನಾವು ಪ್ರಕೃತಿಯ ಪಾಲಕರು, ಗ್ರಾಹಕರಲ್ಲ: ಉಪರಾಷ್ಟ್ರಪತಿ
ನಮ್ಮ ವೈದಿಕ ಸಂಸ್ಕೃತಿಯು ಸಾವಿರಾರು ವರ್ಷಗಳಿಂದ ಸುಸ್ಥಿರತೆಯನ್ನು ಬೋಧಿಸಿದೆ: ಉಪರಾಷ್ಟ್ರಪತಿ
ಇಂದು ಯಾವುದೇ ಸಂಸ್ಥೆಯು ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ: ಉಪರಾಷ್ಟ್ರಪತಿ
ಶಿರಸಿಯ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಉಪರಾಷ್ಟ್ರಪತಿಯವರ ಸಂವಾದ
Posted On:
05 MAY 2025 1:47PM by PIB Bengaluru
"ಕಾಡುಗಳು ಅತ್ಯಂತ ಮುಖ್ಯ. ಅವು ನಮ್ಮ ಉಸಿರು. ಒಂದು ದೇಶದ ಕಾಡುಗಳು ಉತ್ತಮ ಸ್ಥಿತಿಯಲ್ಲಿದ್ದರೆ, ಅಲ್ಲಿನ ಜನರು ಆರೋಗ್ಯವಾಗಿರುತ್ತಾರೆ - ಏಕೆಂದರೆ ಕಾಡುಗಳು ನಮ್ಮ ಉಸಿರು. ಕೃಷಿ ನಮ್ಮ ಜೀವನಾಡಿ, ಆದರೆ ಹವಾಮಾನವನ್ನು ನಿಯಂತ್ರಿಸಲು, ವಿಪತ್ತುಗಳನ್ನು ತಡೆಯಲು ಮತ್ತು ವಿಶೇಷವಾಗಿ ಬಡವರು ಮತ್ತು ಅಂಚಿನಲ್ಲಿರುವವರಿಗೆ ಜೀವನೋಪಾಯವನ್ನು ಬೆಂಬಲಿಸಲು ನಮಗೆ ಕಾಡುಗಳು ಬೇಕಾಗುತ್ತವೆ" ಎಂದು ಭಾರತದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಇಂದು ಹೇಳಿದ್ದಾರೆ.
ಶಿರಸಿಯ ಅರಣ್ಯ ಕಾಲೇಜಿನಲ್ಲಿ ಇಂದು ಆಯೋಜಿಸಲಾದ "ರಾಷ್ಟ್ರ ನಿರ್ಮಾಣದಲ್ಲಿ ಅರಣ್ಯದ ಪಾತ್ರ" ಎಂಬ ವಿಶೇಷ ಕಾರ್ಯಕ್ರಮದಲ್ಲಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಧನಕರ್, "ಹವಾಮಾನ ಬದಲಾವಣೆಯು ಜಾಗತಿಕ ಸವಾಲು - ಜಾಗತಿಕ ಬೆದರಿಕೆಯಾಗಿರುವುದರಿಂದ ನಾವು ನಮ್ಮ ಕಾಡುಗಳನ್ನು ರಕ್ಷಿಸಲು ಮತ್ತು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಕೊಡುಗೆ ನೀಡಲು ಪ್ರತಿಜ್ಞೆ ಮಾಡಬೇಕು. ಪರಿಸ್ಥಿತಿ ಆತಂಕಕಾರಿಯಾಗಿದ್ದು ಗಂಭೀರವಾಗಿದೆ ಮತ್ತು ನಮಗೆ ಭೂಮಿ ತಾಯಿಯನ್ನು ಹೊರತುಪಡಿಸಿ ಬದುಕಲು ಬೇರೆ ಯಾವುದೇ ಗ್ರಹವಿಲ್ಲ" ಎಂದು ಎಚ್ಚರಿಸಿದರು.
ಭಾರತದ ನಾಗರಿಕತೆಯ ಜ್ಞಾನವನ್ನು ಎತ್ತಿ ತೋರಿಸಿದ ಉಪರಾಷ್ಟ್ರಪತಿಯವರು, "ಈ ನೆಲ ಆಧ್ಯಾತ್ಮಿಕತೆ ಮತ್ತು ಸುಸ್ಥಿರತೆಯ ಸಂಗಮ. ಸುಸ್ಥಿರತೆಯು ಆರ್ಥಿಕತೆಗೆ ಮಾತ್ರ ಮುಖ್ಯವಲ್ಲ - ಇದು ಆರೋಗ್ಯಕರ ಜೀವನಕ್ಕೂ ಮುಖ್ಯವಾಗಿದೆ. ನಮ್ಮ ವೈದಿಕ ಸಂಸ್ಕೃತಿಯು ಸಾವಿರಾರು ವರ್ಷಗಳಿಂದ ಸುಸ್ಥಿರತೆಯನ್ನು ಬೋಧಿಸಿದೆ. ಇಂದು, ಸುಸ್ಥಿರ ಅಭಿವೃದ್ಧಿಗೆ ಪರ್ಯಾಯವಿಲ್ಲ. ನಾವು ನೈಸರ್ಗಿಕ ಸಂಪನ್ಮೂಲಗಳನ್ನು ವಿವೇಚನೆಯಿಲ್ಲದೆ ಬಳಸಿಕೊಳ್ಳಲು ಸಾಧ್ಯವಿಲ್ಲ. ನಾವು ನಮ್ಮನ್ನು ಕನಿಷ್ಠ ಅಗತ್ಯಗಳಿಗೆ ಮಾತ್ರ ಸೀಮಿತಗೊಳಿಸಿಕೊಳ್ಳಬೇಕು. ನಾವೆಲ್ಲರೂ ಇದರ ಬಗ್ಗೆ ಜಾಗೃತರಾಗಿರಬೇಕು." ಎಂದು ಹೇಳಿದರು.
ಆಳವಾದ ಪರಿಸರ ಪ್ರಜ್ಞೆಗೆ ಕರೆ ನೀಡಿದ ಅವರು, "ನಾವು ಆತ್ಮಸಾಕ್ಷಾತ್ಕಾರದ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು - ಭೂಮಿ ತಾಯಿ, ಈ ಪರಿಸರ, ಕಾಡುಗಳು, ಪರಿಸರ ವ್ಯವಸ್ಥೆಗಳು, ಸಸ್ಯ ಸಂಕುಲ ಮತ್ತು ಪ್ರಾಣಿಗಳು - ನಾವು ಇವುಗಳ ಪಾಲಕರು, ಗ್ರಾಹಕರಲ್ಲ. ಇದನ್ನು ಭವಿಷ್ಯದ ಪೀಳಿಗೆಗೆ ರವಾನಿಸುವುದು ನಮ್ಮ ಕರ್ತವ್ಯ" ಎಂದು ಹೇಳಿದರು.
"ಪರಿಸರವು ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಮೇಲೆ ಪರಿಣಾಮ ಬೀರುವ ಒಂದು ಅಂಶವಾಗಿದೆ. ಪರಿಸರಕ್ಕೆ ಸವಾಲು ಎದುರಾದಾಗ, ಸವಾಲು ಮಾನವೀಯತೆಗೆ ಮಾತ್ರವಲ್ಲ - ಅದು ಭೂಮಿಯ ಮೇಲಿನ ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ. ಇಂದು, ನಾವು ಒಂದು ನಿರ್ಣಾಯಕ ಪರೀಕ್ಷೆಯನ್ನು ಎದುರಿಸುತ್ತಿದ್ದೇವೆ: ಪರಿಸರವನ್ನು ರಕ್ಷಿಸುವುದು ಮತ್ತು ಸಂರಕ್ಷಿಸುವುದು ಮತ್ತು ಎದುರಿಸುತ್ತಿರುವ ಗಂಭೀರ ಬಿಕ್ಕಟ್ಟನ್ನು ನಿವಾರಿಸುವ ಮಾರ್ಗಗಳನ್ನು ಕಂಡುಕೊಳ್ಳುವುದು." ಎಂದು ಅವರು ಹೇಳಿದರು.
ಸುಸ್ಥಿರ ಭವಿಷ್ಯವನ್ನು ನಿರ್ಮಿಸುವಲ್ಲಿ ಶಿಕ್ಷಣದ ಪಾತ್ರವನ್ನು ಒತ್ತಿ ಹೇಳಿದ ಉಪರಾಷ್ಟ್ರಪತಿಯವರು, "ಇಂದು ಯಾವುದೇ ಸಂಸ್ಥೆಯು ಸ್ವತಂತ್ರ ಘಟಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ವೈದ್ಯಕೀಯ ಶಿಕ್ಷಣ, ಎಂಜಿನಿಯರಿಂಗ್ ಶಿಕ್ಷಣ, ನಿರ್ವಹಣಾ ಶಿಕ್ಷಣ, ಪರಿಸರ ಶಿಕ್ಷಣ ಮತ್ತು ಅರಣ್ಯ ಶಿಕ್ಷಣ ಎಲ್ಲವೂ ಪ್ರತ್ಯೇಕವಾಗಿದ್ದ ಕಾಲವಿತ್ತು. ಆದರೆ ಈಗ ಎಲ್ಲವೂ ಅಂತರಶಿಸ್ತೀಯವಾಗಿವೆ. ಆದ್ದರಿಂದ, ನಾವು ಕಲಿಕೆಗೆ ಅಂತರ್ಗತ ವಿಧಾನವನ್ನು ಅಳವಡಿಸಿಕೊಳ್ಳಬೇಕು" ಎಂದು ಹೇಳಿದರು.
ಯುವ ಮನಸ್ಸುಗಳನ್ನು ಪ್ರೋತ್ಸಾಹಿಸುತ್ತಾ ಮಾತನಾಡಿದ ಶ್ರೀ ಧನಕರ್, "ಕುತೂಹಲದಿಂದಿರಿ - ಹೊಸ ಜ್ಞಾನಕ್ಕಾಗಿ ಹಂಬಲ ಮತ್ತು ಬಯಕೆಯನ್ನು ಹೊಂದಿರಿ. ನೀವು ತೊಡಗಿಸಿಕೊಂಡಿರುವ ಶೈಕ್ಷಣಿಕ ಮಾರ್ಗವು ಕಲ್ಪನೆಗೂ ಮೀರಿದ ಅಪಾರ ಸಾಮರ್ಥ್ಯವನ್ನು ಹೊಂದಿದೆ. ನಮ್ಮ ಸಾಂಸ್ಕೃತಿಕ ಪರಂಪರೆಯಲ್ಲಿ, ನೀವು ಎಲ್ಲಿ ನೋಡಿದರೂ, ನೀವು ನಿಧಿಯನ್ನು ಕಾಣುತ್ತೀರಿ. ನೀವು ಹೆಚ್ಚು ಅಧ್ಯಯನ ಮಾಡಿದಷ್ಟೂ, ಸೃಷ್ಟಿಗೆ ಹೆಚ್ಚು ಸೇವೆ ಸಲ್ಲಿಸಲು ನಿಮಗೆ ಸಾಧ್ಯವಾಗುತ್ತದೆ. ನೀವು ಇಂದು ಅಧ್ಯಯನ ಮಾಡುತ್ತಿರುವ ವಿಷಯವು ಪರಿಹಾರ ಮತ್ತು ಉತ್ಪಾದನೆಗೆ ಪ್ರಮುಖವಾಗಿದೆ. ವಿಶೇಷವಾಗಿ ಅರಣ್ಯ ಉತ್ಪನ್ನಗಳ ವಿಷಯಕ್ಕೆ ಬಂದಾಗ ನೀವು ನಿಜವಾಗಿಯೂ ಸಂಶೋಧನೆಗೆ ಪರಿಣಾಮಕಾರಿಯಾಗಬಹುದು" ಎಂದು ಹೇಳಿದರು.
ಸಂಸ್ಥೆಯ ಪ್ರಾಕೃತಿಕ ವಾತಾವರಣವನ್ನು ಶ್ಲಾಘಿಸಿದ ಉಪರಾಷ್ಟ್ರಪತಿಯವರು, "ಪಶ್ಚಿಮ ಘಟ್ಟಗಳ ಮಡಿಲಲ್ಲಿರುವ ಶಿರಸಿ, ಭಾರತದಲ್ಲಿ ಮಾತ್ರವಲ್ಲದೆ ಇಡೀ ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತ ಜೀವವೈವಿಧ್ಯ ಪ್ರದೇಶಗಳಲ್ಲಿ ಒಂದಾಗಿದೆ. ಇಂತಹ ಪರಿಸರವು ತರಗತಿಯ ಪರಿಕಲ್ಪನೆಯನ್ನೇ ಬದಲಾಯಿಸುತ್ತದೆ. ಇಲ್ಲಿ, ತರಗತಿಯು ನಾಲ್ಕು ಗೋಡೆಗಳಿಗೆ ಸೀಮಿತವಾಗಿಲ್ಲ; ಅದು ಅವುಗಳನ್ನು ಮೀರಿ ವಿಸ್ತರಿಸುತ್ತದೆ. ಇದು ಮುಕ್ತ ತರಗತಿಯಾಗಿದ್ದು, ಜೀವ ಚೈತನ್ಯದಿಂದ ತುಂಬಿದೆ. ಅದೃಷ್ಟವಶಾತ್ ಮತ್ತು ವಿಶಿಷ್ಟವಾಗಿ, ಅರಣ್ಯ ಕಾಲೇಜು ಪ್ರಕೃತಿಯಿಂದ ಸುತ್ತುವರೆದಿದೆ. ಇಲ್ಲಿನ ನೋಟವು ನಿಜವಾಗಿಯೂ ಅಸಾಧಾರಣವಾಗಿದೆ; ವಾತಾವರಣವು ನಿಮ್ಮನ್ನು ಸಂತೋಷ ಮತ್ತು ಸಂಭ್ರಮದಿಂದ ತುಂಬುತ್ತದೆ." ಎಂದು ಹೇಳಿದರು.
ಕರ್ನಾಟಕ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್, ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಶ್ರೀ ಬಸವರಾಜ ಎಸ್. ಹೊರಟ್ಟಿ, ಉತ್ತರಕನ್ನಡ ಜಿಲ್ಲೆ ಉಸ್ತುವಾರಿ ಸಚಿವರಾದ ಶ್ರೀ ಮಂಕಾಳ ಎಸ್. ವೈದ್ಯ, ಸಂಸದರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ, ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಪಿ.ಎಲ್.ಪಾಟೀಲ್ ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
*****
(Release ID: 2127072)